ಕತ್ತೆ ಕಲಿಸಿದ ಪಾಠ

ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್ ಬೆನ್ನಿಗೆ ಒಂದು ಏಟು ಹಾಕುತ್ತಾ ಹೇಳಿದ್ದು ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು” ಅಂತ. ಇಷ್ಟಕ್ಕೇ ಸೀಮಿತ ಕತ್ತೆಯ ಬಗೆಗಿನ ನಮ್ಮ ಜ್ಞಾನ. ಕೆಳಗಿದೆ ನೋಡಿ ಕತ್ತೆ ನಮಗೆ ಕಲಿಸುವ ಬದುಕಿನ ಪಾಠ. ಯಶಸ್ವೀ ಬದುಕಿಗೆ ಬೇಕಾದ ಸೂತ್ರ ಕಲಿಸಲು ಸ್ಟೀಫನ್ ಕವೇ, ದೀಪಕ್ ಚೋಪ್ರ ಅಥವಾ “ಎಕ್ಹಾರ್ಟ್ ತೂಲೇ” ಯಂಥ ಮಾಡರ್ನ್ “ಗುರು” ಗಳೇ ಆಗಬೇಕೆಂದಿಲ್ಲ. ಕತ್ತೆಯೂ ಸಹ ಆಗಬಹುದು ಗುರುವರ್ಯ.

ಒಂದು ದಿನ ಓರ್ವ ರೈತನ ಕತ್ತೆ ಹಾಳು ಬಾವಿಯೊಳಕ್ಕೆ ಬಿದ್ದು ಬಿಡುತ್ತದೆ. ಕತ್ತೆಯ ಆಕ್ರಂದನ ಕೇಳಿ ರೈತ ಅಲ್ಲಿಗೆ ಧಾವಿಸಿ ಬಂದು ನೋಡುತ್ತಾನೆ. ಸ್ವಲ್ಪ ಹೊತ್ತು ಯೋಚಿಸಿ, ಏನು ಮಾಡಬೇಕೆಂದು ಹೊಳೆಯದೆ ಹೇಗೂ ಈ ಕತ್ತೆಗೆ ವಯಸ್ಸಾಗಿ ಬಿಟ್ಟಿದೆ, ಅಲ್ಲಿಗೇ ಮಣ್ಣು ಹಾಕಿ ಸಮಾಧಿ ಮಾಡಿದರಾಯಿತು ಎಂದು ತನ್ನ ಪರಿಚಿತರನ್ನು ಕರೆಯುತ್ತಾನೆ ಸಹಾಯಕ್ಕೆಂದು. ಎಲ್ಲರೂ ಸೇರಿ ಕತ್ತೆಯ ಮೇಲೆ ಮಣ್ಣನ್ನು ಅಗೆದು ಹಾಕಲು ಆರಂಭಿಸುತ್ತಾರೆ. ಮೊದಮೊದಲಿಗೆ ಸುಮ್ಮನಿದ್ದ ಕತ್ತೆಗೆ ಕೊನೆಗೆ ಹೊಳೆಯುತ್ತದೆ ಇವರು ನನ್ನನ್ನು ಉಳಿಸಲು ಅಲ್ಲ ಬಂದಿದ್ದು, ಬದಲಿಗೆ ಜೀವಂತ ಸಮಾಧಿ ಮಾಡಲು ಎಂದು ದೈನ್ಯತೆಯಿಂದ ಅಳಲು ಆರಂಭಿಸುತ್ತದೆ. ಕತ್ತೆಯ ಅಳು ಯಾರಿಗೂ ಕೇಳಿಸುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ಕತ್ತೆ ತನ್ನ ಆಕ್ರಂದನ ನಿಲ್ಲಿಸಿ ತನ್ನ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೊಡವಿ ಒಂದು ಹೆಜ್ಜೆ ಮೇಲೆ ಇಡುತ್ತದೆ. ಹೀಗೆ ಒಂದೇ ಸಮನೆ ತನ್ನ ಮೇಲೆ ಮಣ್ಣು ಬೀಳುತ್ತಿದ್ದರೂ ಕತ್ತೆ ಮಾತ್ರ ಸಾವಧಾನದಿಂದ ಮೈ ಕೊಡವುತ್ತಾ ಒಂದೊಂದೇ ಹೆಜ್ಜೆ ಗಳನ್ನು ಮೇಲಕ್ಕೆ ಇಡುತ್ತಾ ಹೋಗುತ್ತದೆ. ಇದನ್ನು ಗಮನಿಸಿದ ಜನರಿಗೆ ಆಶ್ಚರ್ಯ ಮತ್ತು ಸ್ವಲ್ಪ ಹೊತ್ತಿನಲ್ಲಿ ಕತ್ತೆ ಬಾವಿಯಿಂದ ಹೊರಕ್ಕೆ ಬಂದಿರುತ್ತದೆ. ಈ ವಿಸ್ಮಯದ ಬಗ್ಗೆ, ಕತ್ತೆಯ ಜಾಣ್ಮೆಯ ಬಗ್ಗ್ಗೆ ಜನ ತಮ್ಮ ತಮ್ಮಲ್ಲೇ ಮಾತನಾಡುತ್ತಿದ್ದರೆ ಕತ್ತೆ ಮಾತ್ರ ಅಳಿದುಳಿದ ಧೂಳನ್ನು ತನ್ನ ಮೈ ಮೇಲಿಂದ ಕೊಡವಿ ಗಾಂಭೀರ್ಯದಿಂದ ತನ್ನ ದಾರಿ ಹಿಡಿಯುತ್ತದೆ.

ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ರಾಶಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟಾಗ ಗುರಿಯ ಸಾಫಲ್ಯ.

ಈ ಕತೆ ಕಲಿಸುವ ನೀತಿ ಏನೆಂದರೆ, ಬದುಕು ನಿಮ್ಮ ಮೇಲೆ ಮಣ್ಣನ್ನು ಎರಚುತ್ತಿರುತ್ತದೆ. ಎಲ್ಲಾ ರೀತಿಯ ಮಣ್ಣನ್ನು.

ಉಪಾಯವೇನೆಂದರೆ ಮೇಲೆ ಬಿದ್ದ ಮಣ್ಣನ್ನು ಕೊಡವಿ ಮೆಲಕ್ಕೆಳಲು ಶ್ರಮಿಸುವುದು.

ನಮ್ಮ ಪ್ರತೀ ಹೆಜ್ಜೆಯೂ ಉನ್ನತಿ ಕಡೆಗಿನ ಯಾತ್ರೆ. ಎಷ್ಟೇ ಆಳವಾದ ಬಾವಿಯಿಂದಲಾದರೂ ಸರಿ ನಾವು ಹೊರಕ್ಕೆ ಬರಬಹುದು ತಾಳ್ಮೆ, ಛಲವೊಂದಿದ್ದರೆ.

ಕೊಡವಿ ಮತ್ತು ಎದ್ದೇಳಿ.

ಮೇಲಿನ ನೀತಿ ಪಾಠಕ್ಕೆ ಮತ್ತೈದು ಸೂತ್ರಗಳನ್ನು ಸೇರಿಸಿಕೊಳ್ಳಿ.

ಹಗೆಯಿಂದ ದೂರವಿರಿ. ಕ್ಷಮಾಶೀಲರಾಗಿ. ಯಾರದೋ ತಾತ ಮುತ್ತಾತ ಮಾಡಿದ ಪಾಪಕ್ಕೆ ಅವರ ಮಕ್ಕಳ ಬದುಕು ಅಸಹನೀಯವಾಗಿಸಬೇಡಿ.

ಚಿಂತೆಯಿಂದ ದೂರವಿರಿ. ನಾವು ಊಹಿಸಿಕೊಳ್ಳುವ ಬಹುತೇಕ ಚಿಂತೆಗಳು ಬಹುಮಟ್ಟಿಗೆ ಎದುರಾಗಲಾರವು.

ಸರಳವಾಗಿ ಬದುಕಿ. ಇರುವುದರಲ್ಲೇ ತೃಪ್ತಿಯನ್ನು ಕಾಣಿರಿ.

ನಿಮ್ಮಲ್ಲಿ ಇರುವುದರಲ್ಲಿ ಸ್ವಲ್ಪ ಇಲ್ಲದವರಿಗೂ ಕೊಡಿ. ನಿಮ್ಮಿಂದ ಪಡೆದುಕೊಂಡವನ ಮುಖದ ಮೇಲೆ ನೀವು ಕಾಣುವ ಧನ್ಯತಾ ಭಾವ ಯಾವ ಸ್ವರ್ಗಕ್ಕೂ ಕಡಿಮೆಯಲ್ಲ. ಕೊನೆಯದಾಗಿ, ಜನರಿಂದ ಅತಿ ಕಡಿಮೆಯನ್ನೇ ಬಯಸಿರಿ. ಆದರೆ ನಮ್ಮೆಲ್ಲರನ್ನೂ ಸೃಷ್ಟಿಸಿದ ಭಗವಂತನಿಂದ ಮಾತ್ರ ಅತಿ ಹೆಚ್ಚಿನದನ್ನು ನಿರೀಕ್ಷಿಸಿ. ಏಕೆಂದರೆ ಎಂದಿಗೂ ಬರಿದಾಗದ ಖಜಾನೆ ಅವನಲ್ಲಿದೆ.

ಬಿಹಾರದ “ನೀತಿ” ಪಾಠ

ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು. ಅತ್ಯಂತ ಸಂಕುಚಿತ, ‘ಹೇಟ್’ ಅಜೆಂಡಾದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಪಕ್ಷಗಳಿಗೆ ಮಂದಿರವೊಂದೇ ಮಂತ್ರವಲ್ಲ, “ಸರ್ವೇ ಜನಃ ಸುಖಿನೋಭವಂತು” ವೇ ನನ್ನ ತಂತ್ರ ಎಂದು ಸ್ಪಷ್ಟವಾಗಿಸಿದ ನೀತೀಶ್ ಕುಮಾರ್, ಕೇವಲ ಅಭಿವೃದ್ದಿ, ಹಿಂದುಳಿದವರ, ಬಡ ಜನರ ಏಳಿಗೆಯ ಮಂತ್ರದೊಂದಿಗೆ ಚುನಾವಣೆ ಗೆಲ್ಲಲು ಸಾಧ್ಯ ಎನ್ನುವ ಸಾಮಾನ್ಯ ಸತ್ಯದ ಪರಿಚಯ ಮಾಡಿಸಿದರು. ಹೀಗೆ ಅಭಿವೃದ್ದಿಯ ಏಕ ಮಾತ್ರ ಅಜೆಂಡಾ ಇಟ್ಟುಕೊಂಡು ಬಿಹಾರದ ಚುನಾವಣೆಯಲ್ಲಿ ಸೆಣಸಿದ ನೀತೀಶ್ ಕುಮಾರ್ ಅಭೂತಪೂರ್ವವಾದ ವಿಜಯವನ್ನೂ ಸಾಧಿಸಿದರು. ಚುನಾವಣೆಯ ಪ್ರಚಾರದ ವೇಳೆ ದಿಗ್ಗಜರನ್ನು ಪ್ರಚಾರಕ್ಕೆ ಇಳಿಸುವುದು ವಾಡಿಕೆ. ಹಿಂದುತ್ವದ ಪೋಸ್ಟರ್ ಬಾಯ್ ಗಳೆಂದೇ ಗುರುತಿಸಿಕೊಳ್ಳುವ ನರೇಂದ್ರ ಮೋದಿ ಮತ್ತು ವರುಣ್ ಗಾಂಧೀ ಯನ್ನ ಪ್ರಚಾರಕ್ಕೆ ಇಳಿಸಲು ಭಾಜಪ ಶ್ರಮ ಪಟ್ಟರೂ ನೀತೀಶ್ ಮಾತ್ರ ಪಟ್ಟು ಬಿಡದೆ ಯಾವುದೇ ಕಾರಣಕ್ಕೂ ಈ ಈರ್ವರು ವ್ಯಕ್ತಿಗಳು ಬಿಹಾರದಲ್ಲಿ ಕಾಲಿಡಕೂಡದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಈ ತಾಕೀತಿನ ತಾಕತ್ತಿನಿಂದ ಮತ್ತು ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳುವ ತಮ್ಮ ಇರಾದೆಯಿಂದ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆದು ದೇಶದಲ್ಲಿ ಒಂದು ಹೊಸ ಸಾಮಾಜಿಕ ರಾಜಕೀಯ ಸಮೀಕರಣದ ನಿರ್ಮಾಣಕ್ಕೆ ನೀತೀಶ್ ಕಾರಣಕರ್ತರಾದರು. ಸ್ವಜನ ಪಕ್ಷಪಾತ, ಹಗರಣ, ಮತೀಯವಾದ, ಜಾತೀವಾದ ಮುಂತಾದ ಹಲವು ರೋಗಗಳಿಂದ ಬಳಲುತ್ತಿರುವ ಭಾರತೀಯ ರಾಜಕಾರಣಕ್ಕೆ ನೀತೀಶರಂಥ ರಾಜಕಾರಣಿಗಳು ತುಂಬಾ ಅವಶ್ಯಕ. ತೀರಾ ಹಿಂದುಳಿದ ರಾಜ್ಯವೆಂದು ಗೇಲಿಗೆ ಒಳಗಾಗಿದ್ದ ಬಿಹಾರಕ್ಕೆ ಒಂದು ಸುಂದರವಾದ ಆಡಳಿತವನ್ನು ನೀತೀಶರು ಕೊಡುವಂತಾಗಲಿ ಎಂದು ಹಾರೈಸೋಣ.

star war

೧೯೮೧ ರಿಂದ ೧೯೮೯ ರವರೆಗೆ ಅಮೆರಿಕೆಯ ೪೦ ನೇ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅಮೆರಿಕೆಯ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲೊಬ್ಬರು. ಇವರ ಕಾಲದಲ್ಲಿಯೇ ಅಮೇರಿಕ SDI (Strategic Defence Initiative) ಕಾರ್ಯಕ್ರಮದ ಅಡಿಯಲ್ಲಿ star war ತಂತ್ರಜ್ಞಾನಕ್ಕೆ ಮುನ್ನುಡಿ ಬರೆದಿದ್ದು. ವಿಕಿಲೀಕ್ ಹಗರಣ ಈಗ ಒಂದು ರೀತಿಯ star war ರೀತಿಯ ಕದನಕ್ಕೆ ದಾರಿ ಮಾಡಿ ಕೊಡುತ್ತಿದೆ. ಅಸಾಂಜ್ ನನ್ನು ಬಂಧಿಸಿದ್ದರಿಂದ ಅವನ ಬೆಂಬಲಿಗರು ತಮ್ಮ ಸಮರವನ್ನು ನಭೋ ಮಂಡಲಕ್ಕೆ ಒಯ್ದಿದ್ದಾರೆ. ಅಂದರೆ ಪೂರ್ಣ ಪ್ರಮಾಣದ assault through web sphere. ಅಮೆರಿಕೆಯನ್ನೂ ಒಳಗೊಂಡು ವಿಶ್ವದ ಬಹುತೇಕ ರಾಷ್ಟ್ರಗಳ ರಾಜತಾಂತ್ರಿಕರ, ಆಳುವವರ ಮಧ್ಯೆ ನಡೆದ ಮಾತುಕತೆ, ರಹಸ್ಯಗಳನ್ನು ಕ್ಷಣ  ಮಾತ್ರದಲ್ಲಿ ವಿಶ್ವದೆಲ್ಲೆಡೆ ವೆಬ್ ತಂತ್ರಜ್ಞಾನದ ಮೂಲಕ ಹರಡಿದ ಕಾರಣ ಭುಗಿಲೆದ್ದ ವಿವಾದ ಮತ್ತು ಸಮರಕ್ಕೆ ನಭೋ ಮಂಡಲವೇ ಯುದ್ಧ ಭೂಮಿ. ಅದೇ ಸಮಯ ಅಸಾಂಜ್ ನಿಗೂ ಬೆಂಬಲದ ಮಹಾಪೂರ ವೆಬ್ ಟೆಕ್ಕಿಗಳಿಂದ ಮತ್ತು ಪಾರದರ್ಶಕತೆ ಯಲ್ಲಿ ವಿಶ್ವಾಸ ಇರಿಸಿದ ಆಸಕ್ತರಿಂದ. ಈಗ ಆರಂಭ mother of all battles.

mother of all battles. ಈ ನುಡಿಮುತ್ತುಗಳನ್ನು ಚಲಾವಣೆಗೆ ತಂದಿದ್ದು ಇರಾಕಿನ ಮಾಜಿ ಅಧ್ಯಕ್ಷ ಸದ್ದಾಮ್ ಹುಸೇನ್. ೧೯೯೦ ರ ಲ್ಲಿ ಕುವೈತ್ ದೇಶವನ್ನು ಆಕ್ರಮಿಸಿಕೊಂಡಾಗ ಅಮೆರಿಕೆಯೂ ಸೇರಿ ಬಲಿಷ್ಠ ರಾಷ್ಟ್ರಗಳು ಎಚ್ಚರಿಕೆ ನೀಡಿದ್ದಕ್ಕೆ ಸದ್ದಾಮ್ ಗುಡುಗಿದ್ದು ನನ್ನ ತಂಟೆಗೆ ಬಂದರೆ ಕೊಲ್ಲಿ ಯುದ್ಧ mother of all battles ಗೆ ಕಾರಣವಾಗುತ್ತದೆ ಎಂದು.   

ವಿಕಿ ಲೀಕ್ ವಿರುದ್ಧದ ಕಾರ್ಯಾಚರಣೆ ಈ ರೀತಿ ಆರಂಭ. ಅಸಾಂಜ್ ತನ್ನ ವಿಕಿಲೀಕ್ ಎನ್ನುವ ಟಾಮ್ ಟಾಮ್ ಅಂಗಡಿಯನ್ನು ನಡೆಸುತ್ತಿದ್ದದ್ದು ದೇಣಿಗೆಯ ಸಹಾಯದಿಂದ. ಅದಕ್ಕೆ ಬಿತ್ತು ಮೊದಲ ಕತ್ತರಿ. ಹಣ paypal, visa, master card ನಂಥ ವ್ಯವಸ್ಥೆಗಳ ಮೂಲಕ ಬರುತ್ತಿದ್ದರಿಂದ ಅಮೆರಿಕೆಗೆ ಹೆದರಿ ಅವೂ ಸಹ ತಮ್ಮ ಗಿರಾಕಿ ಅಸಾಂಜ್ ನನ್ನು ಹೊರಗಟ್ಟಿದವು. ಹಾಗೆಯೇ ಅವನ ‘ಅಂಗಡಿ’ ಗೆ ಸ್ಥಳ ದಯಪಾಲಿಸಿದ್ದ ವೆಬ್ ಸರ್ವರ ಗಳ ಮೇಲೂ ಸರಕಾರಗಳ ಕೆಂಗಣ್ಣು. ಸರ್ವರುಗಳೂ ಅಸಾಂಜ ನ ಮುಖಕ್ಕೆ ಬಡಿದವು ಕದಗಳನ್ನು. ಅಸಾಂಜ್ ನನ್ನು ಅತ್ಯಾಚಾರದ ಆರೋಪ ಹೊರಿಸಿ ಸರಳುಗಳ ಹಿಂದಕ್ಕೆ ನೂಕಿದ ಕ್ರಮ ಪ್ರತಿಭಟಿಸಿ, ಕುಪಿತರಾದ ಆತನ ಬೆಂಬಲಿಗರು ಎಲ್ಲಾ ರೀತಿಯ ವೆಬ್ ಧಾಳಿಗಳನ್ನು ಹರಿ ಬಿಟ್ಟಿದ್ದಾರೆ ವಿರೋಧಿ ಪಾಳೆಯದ ಮೇಲೆ. ಬೆಂಬಲಿಗರು facebook , twitter ಮೂಲಕ ಸಭೆ ನಡೆಸಿದರು, ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದರು. ಇಲ್ಲಿಗೂ ಬಂತು ಕುತ್ತು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಹ ಅಸಾಂಜ್ ಗೆ ವಿರೋಧ ವ್ಯಕ್ತಪಡಿಸಿದವು. ಇಷ್ಟೆಲ್ಲಾ ರಾದ್ಧಾಂತವನ್ನು ನೋಡಿದ ನಮಗೆ ಅನ್ನಿಸದೆ ಇರುತ್ತದೆಯೇ ನಮ್ಮ ಪುರಾಣದ ಸತ್ಯ ಹರೀಶ್ ಚಂದ್ರನೂ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿರಲಿಕ್ಕಿಲ್ಲವೇನೋ ಎಂದು?

ಈ “ಹೈ ಟೆಕ್” ಸಮರ ಒಂದು ರೀತಿಯ ಸೈ ಫೈ (sci fi )  ಸಿನೆಮಾ ನೋಡಿದಂತೆ. ಮೂರನೇ ಮಹಾಯುದ್ಧಕ್ಕೆ ನಾಂದಿ ಸಹ ಹಾಡಬಹುದೇನೋ ಇದು. ಈ ಸಮರದಲ್ಲಿ apache helicopter ಗಳಿಗಾಗಲಿ, F 16, JAGUAR ಯುದ್ಧ ವಿಮಾನಗಳಿಗಾಗಲಿ, HEAT SEEKING MISSILE ಗಳಿಗಾಗಲಿ ಕೆಲಸವಿಲ್ಲ. ಇಲ್ಲಿ “ಕೀಲಿ ಮಣೆ” ಗಳದೇ ದರ್ಬಾರು. ಈ ಕೀಲಿ ಮನೆಗಳ ವಟ ಗುಟ್ಟುವಿಕೆಗೆ ಎಲ್ಲರೂ ತತ್ತರ. ಎಲ್ಲರೂ ಎಂದರೆ ಅಸಾಂಜ್ ನ ಮೇಲೆ ನಂಜು ಕಾರುವವರು. ಅಸಾಂಜ್ ನ ಬೆಂಬಲಿಗರು ಮೇಲೆ ಸರಕಾರಗಳ ಕಿರುಕುಳಗಳಿಗೆ ಉತ್ತರ ನೀಡಲು ತೀರ್ಮಾನಿಸಿದರು. ಆಪರೇಶನ್ ಪೇ ಬ್ಯಾಕ್. ಅಂದರೆ ಮರು ಪಾವತಿ ಕಾರ್ಯಾಚರಣೆ.  PAY PAL, VISA, MASTER CARD, SERVER ಇವುಗಳ ಮೇಲೆ ಮಿಂಚಿನ ಧಾಳಿ. ವೆಬ್ಸೈಟ್ ಗಳು ಒಂದೊಂದಾಗಿ ತರಗೆಲೆಗಳಂತೆ ಉದುರ ತೊಡಗಿದವು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಗೆ ಗಂಭೀರ ಎಚ್ಚರಿಕೆ. ಅತ್ಯಾಚಾರ ನಡೆದಿದ್ದು ಸ್ವಿಸ್ ನಲ್ಲಿ ಎಂದು ಅಲ್ಲಿನ ಸರಕಾರ ಅಸಾಂಜ್ ನ ಕಸ್ಟಡಿ ಕೇಳಿದ್ದಕ್ಕೆ ಅಲ್ಲಿನ ಸರ್ಕಾರದ ವೆಬ್ ತಾಣದ ಮೇಲೂ ಧಾಳಿ. ಸರಕಾರದ ವೆಬ್ ತಾಣದ ಮೇಲೆಯೇ ಧಾಳಿ ಮಾಡಿದ ಬೇಕೆಂದರೆ ಅಸಾಂಜ್ ನಿಗೆ ಯಾವ ರೀತಿಯ ಆರಾಧಕರಿದ್ದಾರೆ ಮತ್ತು ಅವರ ಸಾಮರ್ಥ್ಯ ಎಂಥದ್ದು ಎಂದು ಊಹಿಸಿ. ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ಅಸಾಂಜ್ ಮಾತ್ರ ವಿಚಲಿತನಾಗಲಿಲ್ಲ. ಛಲ ಬಿಡದ ತ್ರಿವಿಕ್ರಮ. ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವೊಂದನ್ನು ಎದುರು ಹಾಕಿಕೊಂಡಾಗ ಸಹಜವಾಗಿಯೇ ಬಂದೆರಗುವ ಆಪತ್ತುಗಳನ್ನು ಊಹಿಸಿ ಅದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ ಎಂದು ತನ್ನ ಸಂದರ್ಶಕರಿಗೆ ಕೂಲ್ ಆಗಿ  ಹೇಳಿದ.  

ಅಸಾಂಜ್ ನ ಮೇಲೆ ಅತ್ಯಾಚಾರದ ಆರೋಪ. ಈಗ ಈ ಸಮಸ್ಯೆಗೆ ಒಂದು ರೋಮಾಂಟಿಕ್ angle ಸಹ ಇದೆ. ಘಟನೆ ನಡೆದಿದ್ದು ಸ್ವಿಸ್ ನಲ್ಲಿ. ಅದಕ್ಕೆ ಸ್ವಿಸ್ ಸರಕಾರಕ್ಕೆ ಅಸಾಂಜ್ ನ ಕಸ್ಟಡಿ ಬೇಕಿರುವುದು.  ತಮ್ಮ ಇಷ್ಟಕ್ಕೆ ವಿರುದ್ಧವಾಗಿ ನಮ್ಮೊಂದಿಗೆ ಲೈಂಗಿಕವಾಗಿ ನಡೆದು ಕೊಂಡ ಎಂದು ಇಬ್ಬರು ತರುಣಿಯರ ದೂರು. ಅಸಾಂಜ್ ನ ವಿರುದ್ಧದ ಅತ್ಯಾಚಾರದ ಆರೋಪ ದ ಬಗ್ಗೆ ಸ್ವಲ್ಪ ನೋಡೋಣ. ಇಬ್ಬರ ಸಮ್ಮತಿಯೊಂದಿಗೆ ನಡೆದ ಲೈಂಗಿಕ ಚಟುವಟಿಕೆ ವೇಳೆ ಗರ್ಭ ನಿರೋಧಕ ಕಾಂಡೋಂ ಅಸಾಂಜ್ ಧರಿಸಿರಲಿಲ್ಲ, ಹಾಗಾಗಿ ಇದರಿಂದ ತಮಗೆ AIDS ರೋಗ ಅಥವಾ STD ಅಂಟಿ ಕೊಂಡಿತೆ ಎಂದು ಒಬ್ಬ  ಹುಡುಗಿಯ ಗಾಭರಿ. AIDS ಅಥವಾ STD (Sexually transmitted disease) ಇದೆಯೋ ಎನ್ನುವ ಗಾಭರಿ ಕೋಣೆ ಸೇರುವಾಗ ಇರಲಿಲ್ಲವೇ ಎಂದು ಬಹುಶಃ ಅಸಾಂಜ್ ನ ವಕೀಲರು ಕೇಳಬಹುದು ನ್ಯಾಯಾಲಯದಲ್ಲಿ. ಮತ್ತೊಬ್ಬಾಕೆಯ ದೂರು ಹೀಗೆ. ಲೈಂಗಿಕ ಚಟುವಟಿಕೆ ಸಮಯ ಅಸಾಂಜ್ ಧರಿಸಿದ್ದ ಗರ್ಭ ನಿರೋಧಕ ಚೀಲ ‘ದಾರಿ’ ಮಧ್ಯೆ ಹರಿದು ಹೋಯಿತು, ಉದ್ದೇಶ ಪೂರ್ವಕವಾಗಿ ಅಸಾಂಜ್ ಈ ರೀತಿ ಮಾಡಿದ ಎಂದು. ಹೇಗಿದೆ ನೋಡಿ ಸಂಸ್ಕಾರ. ಒಬ್ಬ ವ್ಯಕ್ತಿಯನ್ನು ಇಷ್ಟ ಪಟ್ಟು ಆತ ಸಂಭಾವಿತ ಎಂದು ಖಾತರಿಯಾದ ಮೇಲೆ ಅವನೊಂದಿಗೇ ಇರುಳನ್ನು ಕಳೆಯೋದು, ಬೆಳಗಾದ ಕೂಡಲೇ, ಅಮಲಿಳಿದ ನಂತರ, ಕಲ್ಪನಾ ಲಹರಿಯನ್ನು ಹರಿ ಬಿಟ್ಟು ನಲ್ಲನ ಚಾರಿತ್ರ್ಯ ವಧೆ ಮಾಡುವುದು. ವಿವಾಹದ ಹೊರಗೆ, ಕಾನೂನು ಬಾಹಿರವಾಗಿ ಈ ಕೆಲಸ ಮಾಡುವವರಿಗೆ ಚಾರಿತ್ರ್ಯ ಎಲ್ಲಿಂದ ಬಂತು ಎಂದು ಮಾತ್ರ ಕೇಳಬೇಡಿ. ಏಕೆಂದರೆ they do things differently. 

ಈ ವಿವಾದದಲ್ಲಿ ಏನೆಲ್ಲಾ ಸಂಗತಿಗಳು ಹೊರಬಂದವು ನೋಡಿ. ಸರಕಾರಗಳು ವ್ಯವಹರಿಸುವ ರೀತಿ, ರಾಷ್ಟ್ರ ರಾಷ್ಟ್ರ ಗಳ ಮಧ್ಯೆ ಮಾತುಕತೆಗಳ ಧಾಟಿ, ಮೋಸ, ವಂಚನೆ, ಇಬ್ಬಂದಿತನ.   

ಅಸಾಂಜ್ ಮತ್ತು ಸರಕಾರಗಳ ನಡುವಿನ ಜಟಾಪಟಿ ವಿಶ್ವದ ವಿಶ್ವವಿದ್ಯಾಲಯಗಳಲ್ಲಿ ಹೊಸ ಅಧ್ಯಯನ ಕೇಂದ್ರಗಳ ಸ್ಥಾಪನೆಗೂ ನಾಂದಿ ಹಾಡಬಹುದೇನೋ?  

ಮತ್ತಷ್ಟು: ವಿಕಿ ಲೀಕ್ ಮೇಲೆ ಆಗಂತುಕರು ಹಲ್ಲೆ ನಡೆಸಿದ್ದು distributed denial of service attack ಮೂಲಕ. ಅಂದರೆ ನಮಗಿಷ್ಟವಾಗದ ವೆಬ್ ಸೈಟ್ ಮೇಲೆ ನಿರಂತರವಾಗಿ, ಅವ್ಯಾಹತವಾಗಿ ಲಾಗ್ ಇನ್ ಆಗಿ ಅದನ್ನು ಅಸ್ತವ್ಯಸ್ತಗೊಳಿಸೋದು. ಒಂದು ರೀತಿಯ carpet bombing. ಉದಾಹರಣೆಗೆ ಒಂದು ಚಿಕ್ಕ ಚಾದಂಗಡಿಗೆ ಒಮ್ಮೆಲೆ ನೂರಾರು ಜನ ಗಿರಾಕಿಗಳು ಬಂದಾಗ ಆಗುವ ಅವ್ಯವಸ್ಥೆ. ಓಡಿ ಹೋಗುತ್ತಾನೆ ಅಡುಗೆ ಭಟ್ಟ. ಮಾಹಿತಿಗಾಗಿ ಎಲ್ಲರೂ ವೆಬ್ಸೈಟ್ ಮೇಲೆ ಧಾಳಿ ಮಾಡಿದಾಗ ಒತ್ತಡ ತಾಳಲಾರದೆ ಕ್ಷಣ ಕಾಲ ಮುಚ್ಚಿ ಹೋಗುತ್ತದೆ. ಕೆಲವೊಮ್ಮೆ ಟ್ವಿಟ್ಟರ್ ಗೆ ಸಹ ಈ ಪರಿಸ್ಥಿತಿ ಎದುರಾಗುವುದುಂಟು. 

pic courtesy: http://editorialcartoonists.com/cartoon/display.cfm/93568/

‘ವಿಕಿಲೀಕ್’ ಅವಾಂತರ

ವಿಕಿಲೀಕ್ ಈಗ ವಿಶ್ವ ಸುದ್ದಿಯಲ್ಲಿ. ವಿಶ್ವದ ಸರಕಾರಗಳ ಮಧ್ಯೆ, ಧುರೀಣರ ಮಧ್ಯೆ ನಡೆದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಕೇಬಲ್ ಗಳನ್ನು ತನ್ನ ವೆಬ್ ತಾಣದಲ್ಲಿ ಪ್ರಕಟಿಸಿ ಅಂತಾರಾಷ್ಟ್ರೀಯ ರಾಜಕಾರಣ ಎಂದರೆ ಗರಿ ಗರಿ ಕಪ್ಪು ಸೂಟು, ಮುಗುಳ್ನಗುವಿನೊಂದಿಗೆ ಹಸ್ತಲಾಘವ, ನಂತರ ಮೃಷ್ಟಾನ್ನ ಭೋಜನ ಎಂದು ತಿಳಿದಿದ್ದ ನಮಗೆ ಹೊಸತೊಂದು ವಿಶ್ವದ ಪರಿಚಯ ಮಾಡಿಕೊಟ್ಟಿತು ವಿಕಿಲೀಕ್. ‘ವಿಕಿಪೀಡಿಯ’ ಗೊತ್ತು, ಇದೇನೀ ‘ವಿಕಿಲೀಕ್’ ಎಂದಿರಾ? ವಿಕಿಪೀಡಿಯ ನಮಗೆ ತಿಳಿಯಬೇಕಾದ ವಿಷಯಗಳನ್ನು ಸರಾಗವಾಗಿ, ಕ್ಷಣ ಮಾತ್ರದಲ್ಲಿ ತಿಳಿಸಿಕೊಡುವ ತಾಣವಾದರೆ, ವಿಕಿಲೀಕ್ ಮಾತ್ರ ಸ್ವಲ್ಪ ಸರಿದು ನಿಂತು ನಾವೆಂದಿಗೂ ‘ಕೇಳಬಾರದ, ಆಡಬಾರದ, ನೋಡಬಾರದ’, ವಿಷಯಗಳನ್ನು ನಮಗೆ ತಲುಪಿಸಿ ಮಗುಮ್ಮಾಗಿ ಇದ್ದುಬಿಡುವ whistle blower. ಸ್ವಲ್ಪ ಮಟ್ಟಿಗೆ ನಮ್ಮ ಅಚ್ಚು ಮೆಚ್ಚಿನ ‘ತೆಹೆಲ್ಕಾ’ ರೀತಿಯದು. ಈ ವೆಬ್ ತಾಣದ ಸಾರಥಿ ಆಸ್ಟ್ರೇಲಿಯಾದ 39 ರ ಪ್ರಾಯದ ಜೂಲಿಯಾನ್ ಅಸಾಂಜ್. ಈಗ ಈತ ಕಂಬಿ ಎಣಿಸಲು ಅಥವಾ ತನ್ನ ತಲೆ ಕಳೆದುಕೊಳ್ಳುವ ನಿರೀಕ್ಷೆಯಲ್ಲಿ ಲಂಡನ್ನಿನ ಮೂಲೆಯೊಂದರಲ್ಲಿ ದಿನ ಕಳೆಯುತ್ತಿದ್ದಾನೆ.

ಅಭಿವ್ಯಕ್ತಿ ಸ್ವಾತಂತ್ರ್ಯ. ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬಂದಾಗ ತಮ್ಮದೇ ಆದ ಧೋರಣೆ. ಆ ಧೋರಣೆ ಹಿಂಸಾರೂಪ ತಾಳಿದರೂ ಯಾರಿಗೂ ಅದರ ಪರಿವೆ ಇಲ್ಲ. ಸೂಟು ಬೂಟು, ಬಿಳಿಚರ್ಮ ಹೊತ್ತವರು ಏನೇ ಹೇಳಿದರೂ ಎಲ್ಲಾ ಓಕೆ. ಗಡ್ಡ ಮಾತ್ರ ಇರಬಾರದು ಈ ರೀತಿಯ ಮಾತನ್ನಾಡಲು. ಆಗ ಪದಪ್ರಯೋಗದ ಸಮೀಕರಣ ಬದಲಾಗಿ ಬಿಡುತ್ತದೆ. ಕೆನಡಾದ ಪ್ರಧಾನಿಯ ಮಾಜಿ ಸಲಹೆಗಾರ stephen ‘Harper’ ನ ಪ್ರಕಾರ ವಿಕಿ ಲೀಕ ನ ಅಸಾಂಜ್ ನನ್ನು ಕೊಲ್ಲಬೇಕು. ನೋಡಿ ಎಂಥ ಅಸಂಬದ್ಧ, harping ಈತನದು. ಹೆಸರಿಗೆ ತಕ್ಕಂತೆ ನಡತೆ. ಅಭಿವ್ಯಕ್ತಿ ಸ್ವಾತಂತ್ರ್ಯ ತಂದು ಕೊಡುವ ಕಚಗುಳಿ ಎಂಥದ್ದು ಎಂದು ತಡವಾಗಿ ತಿಳಿಯಿತು ಅಮೆರಿಕೆಗೆ ಮತ್ತು ಅದರ ಹಿಂಬಾಲಕರಿಗೆ.

ರಾಜನಿಂದ ಹಿಡಿದು ರಾಜತಾಂತ್ರಿಕನವರೆಗೆ ಯಾರು ಏನು ಹೇಳಿದರು ಎಂದು ಸವಿಸ್ತಾರವಾಗಿ ಪ್ರಕಟಿಸಿದ ವಿಕಿಲೀಕ್ ಅಂತಾರಾಷ್ಟ್ರೀಯ ರಾಜಕಾರಣ ಯಾವ ರೀತಿಯ ‘ಡಬಲ್ ಗೇಂ’ ಎಂದು ನಮಗೆ ಮನವರಿಕೆ ಮಾಡಿಕೊಡುತ್ತಿದೆ. ನಮ್ಮ ದೇಶಕ್ಕೆ ಬಂದು ನಮ್ಮೆಲ್ಲರನ್ನೂ ಮರುಳು ಮಾಡಿ, ನಮಗೆ ಬಾಲಿವುಡ್ ಮೇಲೆ ಇರುವ ವ್ಯಾಮೋಹಕ್ಕೆ ತಕ್ಕಂತೆ ಒಂದಿಷ್ಟು ಡ್ಯಾನ್ಸ್ ಮಾಡಿ ಕೊನೆಗೆ ತಮ್ಮ ಊರು ತಲುಪಿದ ನಂತರ ಬೇರೆಯದೇ ಆದ ಸನ್ನೆ ಕಳಿಸುವುದು. ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕಾಗಿರುವ ನಮ್ಮ ಆಸೆಯನ್ನೂ, ಅದಕ್ಕಾಗಿ ನಾವು ಹೆಣಗುತ್ತಿರುವುದನ್ನು ಅರಿತ ಅಮೇರಿಕಾದ ಅಧ್ಯಕ್ಷ ನಮ್ಮಲ್ಲಿಗೆ ಬಂದು ಭಾರತ ಈ ಸ್ಥಾನಕ್ಕೆ ಅತ್ಯಂತ ಅರ್ಹ ರಾಷ್ಟ್ರ, ನಮ್ಮ ಬೆಂಬಲ ಅದಕ್ಕಿದೆ ಎಂದು ನಮ್ಮನ್ನು ಪುಳಕಿತರಾಗಿಸಿ ಹೋದರು. ಈ ಮಾತು ಕೇಳಿ ನಮಗೆ ಆನಂದದ ಮಂಪರು. ಅತ್ತ ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಅಭಿಪ್ರಾಯ ಬೇರೆಯೇ. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತ “ಸ್ವಯಂ ನೇಮಿತ” ಆಕಾಂಕ್ಷಿ ಎಂದು ಬಿರುದು ನೀಡಿದರು. “self appointed frontrunners” ಅಂತೆ. ಬೇಸರಿಸಬೇಡಿ, ಈ ಸ್ವಯಂ ನೇಮಿತ ಕ್ಲಬ್ಬಿನಲ್ಲಿ ಜಪಾನ್, ಬ್ರೆಜಿಲ್ ಮತ್ತು ಜರ್ಮನಿ ಸಹ ಸೇರಿವೆ. ಆಹ್, ಈಗ ಸ್ವಲ್ಪ ಸಮಾಧಾನ ನೋಡಿ. ನಮ್ಮೊಂದಿಗೆ ಇತರರನ್ನೂ ಸೇರಿಸಿ ಅಪಹಾಸ್ಯ ಮಾಡಿದರೆ ಭಾರ ಸಹಜವಾಗಿಯೇ ಸ್ವಲ್ಪ ಕಡಿಮೆ ಆಗುತ್ತದೆ. ಈ ಭಾವನೆಯೇ ಇರಬೇಕು ನಮ್ಮ ಮಾಧ್ಯಮಗಳು ಇದನ್ನು ಒಂದು ‘slight’ ಎಂದು ಪರಿಗಣಿಸಲು ಸೋತಿದ್ದು. ನೀವು ಅನುಮತಿಸಿದರೆ ನನ್ನದೊಂದು ಸಂಶಯ. ಅಮೇರಿಕಾ ನಮ್ಮನ್ನು ಇನ್ಯಾವ ರೀತಿಯಲ್ಲಿ ನಡೆಸಿ ಕೊಂಡಾಗ ನಾವು ಎಚ್ಚೆತ್ತು ಕೊಂಡು ‘ thanks for everything, yank. bye bye’ ಎಂದು ವಿನಯದಿಂದ ಹೇಳೋದು? ಅಮೆರಿಕೆಯ ಸಹವಾಸ ಮಾಡಿದವರು ಉದ್ಧಾರವಾದ ಕುರಿತು ಕೈಲಾಸದಲ್ಲಿ ಮನೆ ಮಾಡಿರುವವನಿಗೆ ಬಹುಶಃ ಗೊತ್ತಿರಬಹುದು. ಬೇರಾರಿಗೂ ಗೊತ್ತಿರುವ ಬಗ್ಗೆ ವರದಿಯಿಲ್ಲ. ಸದ್ದಾಮ್ ಕಾಲಾವಧಿ ನಂತರದ ಇರಾಕಿನ ತೈಲ ಸಚಿವನಾಗಿದ್ದ ‘ಅಹಮದ್ ಶಲಾಬಿ’ ಹೇಳಿದ್ದು america betrays its friends. it sets them up and betrays them. I’d rather be america’s enemy. ನಿನ್ನ ಮೈತ್ರಿಗಿಂತ ನಿನ್ನ ಶತ್ರುತ್ವವೇ ಬಲು ಚೆಂದ ಎಂದು. ವಿಷಕನ್ಯೆಗೆ ಹೇಳಬಹುದಾದ ಸವಿ ಮಾತುಗಳು ಇವು, ಅಲ್ಲವೇ? ಅಮೆರಿಕೆಯ ಸಹಾಯದಿಂದ ಅಧಿಕಾರದ ಗದ್ದುಗೆಗೆ ಏರಿದ ವ್ಯಕ್ತಿಯೊಬ್ಬ ಈ ಮಾತನ್ನು ಹೇಳಬೇಕೆಂದರೆ ಅವನಿಗೆ ಎಂಥ ರಾಜೋಪಚಾರ ಸಿಕ್ಕಿರಬೇಕು?

ಈಗ ಈ ಬರಹದಲ್ಲಿ anti americanism ಧೋರಣೆಯನ್ನು ದಯಮಾಡಿ ಕಾಣಬೇಡಿ. ಅಮೆರಿಕೆಯವೇ ಆದ “Levis” ಜೀನ್ಸ್, ‘papa johns’ pizza, ಮತ್ತು ಕಡಿಮೆ ಸ್ಪೆಲ್ಲಿಂಗ್ ಇರುವ ‘ಅಮೇರಿಕನ್ ಇಂಗ್ಲಿಶ್’ ನನಗೆ ತುಂಬಾ ಇಷ್ಟ. ನನ್ನ ನಿಲುವು ಇಷ್ಟೇ. ನಮ್ಮ ರಾಜಕಾರಣ ಮತ್ತು ಅವರ ರಾಜಕಾರಣ ಸ್ವಲ್ಪ ‘ಡಿಫ್ಫ್ರೆಂಟು’. ಆದರೆ ನಮಗೆ ಈ ‘ಡಿಫ್ಫ್ರೆನ್ಸು’ ಅರಗಿಸಿಕೊಳ್ಳಲಾಗದಂಥ ‘depression’ ತಂದೊಡ್ಡುತ್ತದೆ. ಹಾಗಾಗಿ ಸಂಚಾರಿ ನಿಯಮದ ಥರ ‘ನಡುವೆ ಅಂತರವಿರಲಿ’ ರೀತಿಯ ಅಂತರ ಕಾಯ್ದು ಕೊಳ್ಳಲು ನನ್ನ ಹಂಬಲ. ಗುಮಾನಿ ಪಡಬೇಕಾದ ulterior motive ಇಲ್ಲ.

ಬನ್ನಿ ನಾನಿರುವ ಕೊಲ್ಲಿ ಪ್ರದೇಶಕ್ಕೆ. ಇಲ್ಲೊಂದು ಸ್ವಾರಸ್ಯ. ನೋಡಿ, ನಾನು ಕೊಲ್ಲಿ ಎಂದು ಟೈಪ್ ಮಾಡಿದಾಗ “ಕೊಳ್ಳಿ” ಅಂತ ತೋರಿಸಿತು ಗೂಗಲ್. ಒಂದು ರೀತಿಯ “ಕೊಳ್ಳಿ” ಎಂದೇ ಕರೆಯಬಹುದು ಈ ಪ್ರಾಂತ್ಯವನ್ನು. ಸೌದಿ ಅರೇಬಿಯಾದ ದೊರೆ ‘ಅಬ್ದುಲ್ಲಾ ಇಬ್ನ್ ಅಬ್ದುಲ್ ಅಜೀಜ್ ಅಲ್-ಸೌದ್’ ವಿಶ್ವದ ಮುಸ್ಲಿಮರು ಗೌರವಿಸುವ ವ್ಯಕ್ತಿತ್ವ. ಏಕೆಂದರೆ ಇಸ್ಲಾಮಿನ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನ ಇರುವುದು ಸೌದಿ ಅರೇಬಿಯಾದಲ್ಲಿ. ಇಲ್ಲಿನ ದೊರೆ ಹೆಮ್ಮೆಯಿಂದ ತನ್ನನ್ನು ತಾನು ಕರೆದುಕೊಳ್ಳುವುದು ಎರಡು ಪವಿತ್ರ ಕ್ಷೇತ್ರಗಳ ಸಂರಕ್ಷಕ ಎಂದು. ಸಾವಿರಾರು ಕೋಟಿ ಖರ್ಚು ಮಾಡಿ ಎರಡು ಪವಿತ್ರ ಕ್ಷೆತ್ರಗಳನ್ನು ಇನ್ನಷ್ಟು ವಿಸ್ತರಿಸಿದ ಖ್ಯಾತಿ ಈ ದೊರೆಗೆ. ಹಾಗಾಗಿ ವಿಶ್ವದ ಮುಸ್ಲಿಮರಿಗೆ ಇವರ ಮೇಲೆ ಆದರ, ಗೌರವ. ಹಾವಿನ ತಲೆ ಕಡಿಯುವಂತೆ ಕಡಿಯಬೇಕು ಎಂದು ಇರಾನಿನ ಕುರಿತು ಅಮೆರಿಕೆಗೆ ಶಿಫಾರಸು ಮಾಡಿದರು ದೊರೆ ಅಬ್ದುಲ್ಲಾ ಎಂದು ವಿಕಿಲೀಕ್ ಎಲ್ಲರನ್ನೂ ತಲ್ಲಣಗೊಳಿಸಿತು. ಒಬ್ಬ ಮುಸ್ಲಿಮ್ ರಾಷ್ಟ್ರದ ದೊರೆ ಮತ್ತೊಂದು ಸೋದರ ದೇಶದ ವಿರುದ್ಧ ಈ ರೀತಿ ಮಾತನಾಡಿದ್ದು ಅಚ್ಚರಿ ತರಿಸಿತು ಪಾಶ್ಚಾತ್ಯ ದೇಶಗಳಿಗೆ. ಇವರಿಬ್ಬರ ನಡುವಿನ ಸ್ನೇಹದ “ಆಳ” ಎಲ್ಲರಿಗೂ ಗೊತ್ತಿದ್ದರೂ ತಲೆ ಕಡಿಯಲು ಶಿಫಾರಸ್ಸು ಮಾಡುವ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಇರಾನ್ ಶಿಯಾ ಬಾಹುಳ್ಯದ ರಾಷ್ಟ್ರ ಮತ್ತು ಸೌದಿ, ಸುನ್ನಿ ರಾಷ್ಟ್ರ. ಚಾರಿತ್ರಿಕವಾಗಿ ಶಿಯಾ – ಸುನ್ನಿ ಪಂಗಡಗಳ ನಡುವಿನ ಜಟಾಪಟಿ ತುಂಬಾ ಹಳತು. ideological difference ಅಲ್ಲದಿದ್ದರೂ ವ್ಯಕ್ತಿ (ಪ್ರವಾದಿ ಮುಹಮ್ಮದ್ ಮತ್ತು ‘ಹಜರತ್ ಅಲಿ’ ವಿಷಯದಲ್ಲಿ) ನಿಷ್ಠೆಯಲ್ಲಿ ಸುನ್ನಿ ಮತ್ತು ಶಿಯಾ ಜನರಲ್ಲಿ ಒಡಕಿದೆ. ಸೌದಿ ದೊರೆಯ ಈ ಬೆಚ್ಚಿ ಬೀಳಿಸುವಂಥ ಮಾತನ್ನು ಕೇಳಿದ ಇರಾನ್ ಸೌದಿಯನ್ನು ಇನ್ನು ಯಾವ ರೀತಿ ನಡೆಸಿಕೊಳ್ಳಬಹುದು ಎಂದು ಕಾದು ನೋಡಬೇಕು.

ಈ ತೆರನಾದ ಸುದ್ದಿಗಳನ್ನು ಚಿಕ್ಕಾಸಿನ ಅಪೇಕ್ಷೆಯೂ ಇಲ್ಲದೆ ಬಟಾಬಯಲು ಮಾಡುತ್ತಿರುವ ವಿಕಿಲೀಕ್ ಮೇಲೆ ಅಮೇರಿಕ ಮುಂತಾದ ರಾಷ್ಟ್ರಗಳ ಕೆಂಗಣ್ಣು. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದೆಯೋದು ಲೋಕ ರೂಢಿಯೇ ತಾನೇ? ಅಮೇರಿಕಾ ಏಕೆ ಅದಕ್ಕೆ ಹೊರತಾಗಬೇಕು? ವಿಕಿಲೀಕ್ ವೆಬ್ ತಾಣ ಬೇರಾವುದಾದರೂ ಒಂದು ದೇಶ ಅಮೆರಿಕೆಯ ವಿರುದ್ಧ ಹೇಳಿದ್ದನ್ನು ಲೀಕ್ ಮಾಡಿದ್ದಿದ್ದರೆ ಅಮೇರಿಕ ಕುಣಿದು ಕುಪ್ಪಳಿಸುತ್ತಿತ್ತು. ಆದರೆ ‘ವಿಕಿಲೀಕ್’ ನ ಕೊಡಲಿ ತನ್ನ ಬುಡದ ಕಡೆಗೆ ಪ್ರಯಾಣ ಬೆಳೆಸಿದಾಗ ಮಾತ್ರ ಅಮೇರಿಕಾ ಹೌಹಾರಿತು. ಹೌಹಾರದೆ ಏನು? ಬೇಲಿಯೂ ತಾನೇ, ಮೇಯುವವನೂ ತಾನೇ. ಇದು ಅಮೆರಿಕೆಯ ವಿದೇಶಾಂಗ ನೀತಿ. ಹಾಗಾಗಿ ವಿಕಿಲೀಕ್ ಸ್ಥಾಪಕ ‘ಅಸಾಂಜ್’ ನನ್ನು ದೇಶದ್ರೋಹಿ ಎಂದು ಹಣೆ ಪಟ್ಟಿ ಲಗತ್ತಿಸಿದ್ದಲ್ಲದೆ ಅವನನ್ನು ವಧಿಸುವ ತನಕ ಅಮೆರಿಕೆಯ ಆಕ್ರೋಶ ಆವರಿಸಿತು. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದೆ ಅಸಾಂಜ್ ತನ್ನ ಕೆಲಸ ಇನ್ನೂ ಮುಂದುವರಿಸುವುದಾಗಿ ಅವನ ಬೆಂಬಲಿಗರಿಗೆ ಭರವಸೆ ನೀಡಿದ. ಈಗ ಆತನ ಕಣ್ಣು ಅಮೆರಿಕೆಯ ಅತಿ ದೊಡ್ಡ ಬ್ಯಾಂಕುಗಳ ಅವ್ಯವಹಾರ ಮತ್ತು ಕಾರ್ಯವೈಖರಿಯ ಕಡೆ. ಅಸಾಂಜ್ ನ ಮಾತು ಸಿಡಿಲಿನಂತೆ ಎರಗಿತು ಬ್ಯಾಂಕಿಂಗ್ ವಲಯಗಳ ಮೇಲೆ. ಇವನ್ನೆಲ್ಲಾ ಕೇಳುತ್ತಿರುವ, ನೋಡುತ್ತಿರುವ ನಮಗೆ ಅಮೇರಿಕಾ ಪ್ರಪಂಚದ ಎಲ್ಲಾ ಪಾಪಗಳ, ಕೃತ್ರಿಮಗಳ ಉಗಮಸ್ಥಾನವೋ ಎಂದು ತೋರುವುದು ಅಸಹಜವೇನಲ್ಲ. ಹಾಲಿವುಡ್ ಅಂದ್ರೆ ಒಂದಿಷ್ಟು ಸೆಕ್ಸ್ ಇರಲೇಬೇಕು, ಏನಂತೀರಾ? ಹಾಗೆಯೇ ಅಂತಾರಾಷ್ಟ್ರೀಯ ರಾಜಕಾರಣದಲ್ಲೂ ಒಂದಿಷ್ಟು ಶೃಂಗಾರ ನುಸುಳುವುದಿದೆ ಎಂದು ವಿಕಿಲೀಕ್ ಬಯಲು ಮಾಡಿತು. ಲಿಬ್ಯಾ ದೇಶದ charismatic ಅಧ್ಯಕ್ಷ ‘ಮುಅಮ್ಮರ್ ಗದ್ದಾಫಿ’ ಜೊತೆ ಯಾವಾಗಲೂ ಮೋಹಕ ಅಂಗಸೌಷ್ಟವ ಹೊಂದಿದ ಯುಕ್ರೇನ್ ದೇಶದ ನರ್ಸ್ ಇರುತ್ತಾಳೆ ಎಂದು ಒಬ್ಬ ರಾಜತಾಂತ್ರಿಕ ಅಸೂಯೆಯಿಂದ ಜೊಳ್ಳು ಸುರಿಸಿದ. ಅಂದ್ರೆ ಬರೀ ಬೋರ್ ಹೊಡೆಸುವ global warming ರಾಜಕಾರಣ ಮಾತ್ರ ಅಲ್ಲ ಮಹೋದಯರ ಆಸಕ್ತಿ ಎಂದು ಇದರಿಂದ ಸ್ಪಷ್ಟವಾಯಿತು. ಕಂಪ್ಯೂಟರ್ ಬದಿಗೆ ಸರಿಸಿ ಹೀಗೇ ಮೋಜಿಗಾಗಿ ಸ್ವಲ್ಪ ಊಹಿಸಿ. ವಿಕಿಲೀಕ್ ತೆರನಾದ ಒಂದು ವ್ಯವಸ್ಥೆ ನಮ್ಮ ದೇಶದಲ್ಲಿಯೂ ಇದ್ದಿದ್ದರೆ 2G, 3G ಕಾಂಡಗಳು, ಆದರ್ಶ್ ಸೊಸೈಟಿ, ಸೈನಿಕರ ಶವ ಪೆಟ್ಟಿಗೆ ಗಳಂಥ ಹಗರಣ ಗಳು, ನಾವು ಕಂಡ ಬಗೆ ಬಗೆಯ ವರ್ಣರಂಜಿತ ಧಂಧೆಗಳು, ಇವೆಲ್ಲಾ ಪಿಕ್ನಿಕ್ ಥರ ಕಾಣುತ್ತಿದ್ದವು. ಈ ಮೇಲೆ ಹೇಳಿದ ಹಗರಣಗಳನ್ನೂ ಮೀರಿಸುವ ದೈತ್ಯಾಕಾರದ ತಿಮಿಂಗಿಲಗಳು ವಿಕಿಲೀಕ್ ಬಲೆಗೆ ಸಿಕ್ಕು ವಿಲವಿಲ ಎನ್ನುತ್ತಿದ್ದವೋ ಏನೋ.

ಜೂಲಿಯನ್ ಅಸಾಂಜ್ ನ ವಿಕಿಲೀಕ್ ಜ್ವಾಲಾಮುಖಿಯಂತೆ ಸ್ಫೋಟಿಸಿದೆ. ಅದರ ಸುಡುವ ಲಾವಾರಸ ಜಗತ್ತಿನ ನಾಲ್ಕೂ ಕಡೆ ಹರಿಯುತ್ತಿದೆ. ಹರಿಯುವ ನಾಲಗೆಗಳಿಗೆ ಇನ್ನಷ್ಟು ಫಲವತ್ತನ್ನು ಒದಗಿಸುತ್ತಿದೆ. ಇದಕ್ಕೆಲ್ಲಾ ಕಾರಣೀಭೂತನಾದ ಜೂಲಿಯಾನ್ ಅಸಾಂಜ್ ನನ್ನು ಹೇಗೆ ಗತಿ ಕಾಣಿಸಬೇಕೆಂದು ಬಲಿಷ್ಠ ರಾಷ್ಟ್ರಗಳು ಲೆಕ್ಕ ಹಾಕುತ್ತಿವೆ. ಅಮೇರಿಕಾ ವಿರೋಧಿಯಾದ ಅಸಾಂಜ್ ಒಬ್ಬ ಸಾಮಾನ್ಯ ಆಸ್ಟ್ರೇಲಿಯನ್ ಪ್ರಜೆ. ಆತನದು ಠಿಕಾಣಿ ಯಿಲ್ಲದ ವಾಸ. ಒಂದೇ ಸ್ಥಳದಲ್ಲಿ ಎರಡು ರಾತ್ರಿಗಳನ್ನು ಕಳೆಯದ ಅಲೆಮಾರಿ. ವಿಶ್ವದ ಮೇಲಿನ ಅಮೆರಿಕೆಯ ಕಪಿ ಮುಷ್ಠಿ ಅವನಿಗೆ ಇಷ್ಟವಿಲ್ಲ. ಪ್ರಪಂಚದಲ್ಲಿ ನಡೆಯುವ ಅನ್ಯಾಯಗಳು ಜನರಿಗೆ ತಲುಪಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಂಬಿರುವ ಈತ, ಮಾಡುತ್ತಿರುವುದು ಒಳ್ಳೆಯ ಕೆಲಸವೋ ಅಥವಾ ಕೆಲಸವಿಲ್ಲದ ಬಡಗಿಯ ಬೇಡದ ಉಸಾಬರಿಯೋ ಎಂದು ವಿಶ್ವವೇ ಹೇಳಬೇಕು. ಆದರೆ ಆತನ ತಾಯಿ ಮಾತ್ರ ಹೇಳುತ್ತಿರುವುದು “ನನಗೆ ನನ್ನ ಮಗನ ಪರಿಸ್ಥಿತಿಯ ಬಗ್ಗೆ ಆತಂಕವಾಗುತ್ತಿದೆ, ನಾನು ಅವನನ್ನು ಪ್ರೀತಿಸುತ್ತೇನೆ, ಅವನು ಎಷ್ಟಿದ್ದರೂ ನನ್ನ ಮಗನೇ. ನನ್ನ ಮತ್ತು ನನ್ನ ಮಗನ ಬಗ್ಗೆ ಅವರು ಹೇಳುತ್ತಿರುವುದೆಲ್ಲಾ ನಿಜವಲ್ಲ’ ಎಂದು ಆಕೆ ತನ್ನ ಮಗನ ಸುರಕ್ಷೆಗಾಗಿ ಹಂಬಲಿಸುತ್ತಾಳೆ, ಎಲ್ಲಾ ಹೆತ್ತಬ್ಬೆಯರು ಚಡಪಡಿಸುವ ರೀತಿಯಲ್ಲಿ.

ಗೊತ್ತಿಲ್ಲದವರಿಗೆ: ‘ವಿಕಿ’ ಎಂದರೆ, ‘ಹವಾಯಿ’ ಭಾಷೆಯಲ್ಲಿ ವೇಗ, ಕ್ಷಿಪ್ರ ‘fast’ ಅಂತ. ಮತ್ತು ಲೀಕ್ ಎಂದರೆ ಅದೇ ಆರ್ಡಿನರಿ ಲೀಕು, ನಮ್ಮಗಳ ಅಡುಗೆ ಮನೆಯಲ್ಲಿನ ‘ನಲ್ಲಿ’ ತೊಟ ತೊಟ ಎಂದು ಹನಿಯುದುರಿಸುತ್ತಾ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸೋರಿಕೆ. ಈ ಕ್ಷಿಪ್ರ ಮತ್ತು ಸೋರಿಕೆ ಇವೆರಡೂ ಸೇರಿಕೊಂಡಾಗ ಆಗುವುದು ants in the pant ಪರಿಸ್ಥಿತಿ. ಮೇಲೆ ವಿವರಿಸಿದ ಪರಿಸ್ಥಿತಿ.

pic courtesy: independent, UK

TBA ಅಂದ್ರೆ ಏನು?

ಹೀಗೇ ಬ್ರೌಸ್ ಮಾಡ್ತಾ ಇದ್ದಾಗ ಒಂದು ವೆಬ್ ತಾಣದಲ್ಲಿ release date TBA ಅಂತ ಕಣ್ಣಿಗೆ ಬಿತ್ತು. ಹಾಗೇ ಗೆಸ್ ಮಾಡ್ದೆ. ಏರ್ಲೈನ್ಸ್ ನ parlance ನಲ್ಲಿ ETA ಅಂದ್ರೆ EXPECTED TIME OF ARRIVAL. ಇದೇನಿರಬಹುದು TBA? ಸರಿ TBA ಅಂದ್ರೆ ಬಹುಶಃ TO BE ANNONCED ಅಂತ ಇರಬೇಕು ಎಂದು ಆ ವೆಬ್ ತಾಣದಲ್ಲಿ ಇದ್ದ ವಿಷಯವನ್ನ ಗ್ರಹಿಸಿ contextual ಆಗಿ ಊಹಿಸಿದೆ. ಊಹೆಗೆ ಒಂದು ಸಮರ್ಥನೆ ಬೇಕಲ್ಲ, ಅದಕ್ಕೆ ತಾನೇ ಗೂಗ್ಲ್  ಇರೋದು. ಬಾಕುಲ್ ತೆಗಿ ಸೇಸಮ್ಮ ಎಂದ ಕೂಡಲೇ ಗುಹೆಯ ಬಾಗಿಲು ತೆರೆದುಕೊಂಡ ಹಾಗೆ ಗೂಗ್ಲ್ ಮೊರೆ ಹೋದೆ. ಅರರೆ, ಸರಿಯಾಯಿತಲ್ಲ ನನ್ನ ಊಹೆ. ಹೌದ್ರೀ, TBA ಅಂದ್ರೆ to be announced. ಯಾವುದಾದರೂ ಚಿತ್ರ ಬಿಡುಗಡೆ ಯಾಗುವಾಗ, CD ಬಿಡುಗಡೆ ಆಗುವಾಗ TBA ಅಂತ ಕಣ್ಣಿಗೆ ಬಿದ್ರೆ ಅದರರ್ಥ ಬಿಡುಗಡೆ ದಿನಾಂಕ TO BE ANNOUNCED ಅಂತ. IAS ಪರೀಕ್ಷೆಯಲ್ಲಿ ಈ ಪ್ರಶ್ನೆ ಬಂದರೆ ಉತ್ತರಿಸುವಿರಿ ತಾನೇ?

ವಯಸ್ಸೇ, ರಿಲಾಕ್ಸ್ ಪ್ಲೀಸ್

ಕಲಿಕೆಗೆ ವಯಸ್ಸೆನ್ನುವ ಕಾಲಮಾಪನ ಬೇಡ. ನಮಗೆ ಬೇಕಿರುವುದು ಕಲಿಯಲು ಬೇಕಾದ ಉತ್ಕರ್ಷೆ ಮಾತ್ರ. ಕೆಲವರಿಗೆ ಅದೇನೋ ಒಂದು ರೀತಿಯ ಸಂಶಯ, ನಾನಗೆ ಮೂವತ್ತಯ್ದಾಯ್ತು, ಐವತ್ತಾಯ್ತು, ನನ್ನಿಂದ ಇದು ಮಾಡಲು ಸಾಧ್ಯವೇ, ಜನ ಏನೆಂದು ಕೊಂಡಾರು…ಹೀಗೆ ಹತ್ತು ಹಲವು ನಮ್ಮನ್ನು ಹಿಂದಕ್ಕಟ್ಟುವ ವಿಚಾರಗಳು ಹಿಂಬಾಲಿಸುತ್ತವೆ ನಮ್ಮ ಮನಸ್ಸಿನ ಆಸೆಗಳಿಗೆ ತಣ್ಣೀರೆರೆಚಲು. ಜನ ಏನನ್ನಾದರೂ ಅಂದು ಕೊಳ್ಳಲಿ, ನೀವು ಮಾಡೋದು ನಿಮ್ಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಾನೇ? ಮತ್ತೇಕೆ ಜಗದ ಹಂಗು? ಕೆಳಗಿನ ಕೊಂಡಿಗಳನ್ನು ನೋಡಿ ಮತ್ತು ಸಿದ್ಧರಾಗಿ ಕಲಿಯಬೇಕಾದ್ದನ್ನು ಕಲಿಯಲೂ, ಹಿಮಾಲಯವನ್ನು ಮಣಿಸಲೂ.

http://www.dailymail.co.uk/news/article-1036526/91-year-old-war-veteran-oldest-person-collect-PhD-Cambridge-University.html

http://ibnlive.in.com/news/100yearold-indian-freedom-fighter-pursues-phd/133246-3.html

Holding a grudge….

ಎಷ್ಟು ಸತ್ಯ ನೋಡಿ, ಮೇಲಿನ ಮಾತುಗಳು. ದೇವರು ಮನುಷ್ಯರನ್ನು ಕ್ಷಮಿಸುತ್ತಾನಂತೆ, ಆದರೆ ಮನುಷ್ಯ ಮಾತ್ರ ಕ್ಷಮಿಸಲಾರ. ಹಳೆಯಕಾಲದ, ಓಬೀರಾಯನ ಕಾಲದಲ್ಲಿ ನಡೆದ, ನಡೆಯದ ಘಟನೆಗಳ ಬಗ್ಗೆ ಸೇಡಿನ ಮನೋಭಾವದಿಂದ ತಿರುಗುವ ಮನುಷ್ಯನಿಗೆ ಧ್ವೇಷ, ಹಗೆ, ಸೇಡು ಇವು ತನ್ನ ವ್ಯಕ್ತಿತ್ವವನ್ನೇ ಸುಟ್ಟು ಹಾಕುವ ಬೆಂಕಿ ಎಂದು ತಿಳಿಯುವ ದಿನ ಯಾವಾಗ ಬರಬಹುದು?

ಮೊಬೈಲ್ ಕಂಪೆನಿಗಳ ಮೋಸದ ವ್ಯಾಪಾರ

ನಮ್ಮ ದೇಶ ಮೊಸಗಾರಿಕೆಗೆ ಹೆಸರುವಾಸಿ. ಇದನ್ನು ಹೇಳುವುದಕ್ಕೋ, ಒಪ್ಪಿಕೊಳ್ಳುವುದಕ್ಕೋ ಯಾವ ಡೋಂಗಿ  ಅಭಿಮಾನವೂ ಅಡ್ಡ ಬರಬೇಕಿಲ್ಲ. ಭಾರತದಿಂದ ಹೊರಗಿರುವ, ವಿದೇಶದಲ್ಲಿ ದುಡಿಯುವ ಜನಕ್ಕೆ ಇಲ್ಲಿನ ಮೋಸ ಬಹಳ ಬೇಗನೆ ತಿಳಿಯುತ್ತದೆ. mobile ಬಗ್ಗೆ ಹೇಳಿದರೆ roaming, std, incoming charge, outgoing, charge, pulse rate, minute rate ತರಾವರಿ ಟೋಪಿಗಳು. ಕೆಲವೊಮ್ಮೆ ನಿಮಗೆ ತಿಳಿಯದಂತೆ ನಿಮ್ಮ ಖಾತೆಯಿಂದ ಹಣ ಮಾಯ. ನಮ್ಮ ಭೂ ಸಂಪತ್ತು, ಖನಿಜ ಸಂಪತ್ತು, ವನ ಸಂಪತ್ತು ಹೀಗೇ ಕಣ್ಣಿಗೆ ಕಂಡ ಸಂಪತ್ತೆನ್ನೆಲ್ಲಾ ರಾಜಕಾರಣಿಗಳ ಜೊತೆ ಸೇರಿ ಹಗಲು ದರೋಡೆ ಮಾಡಿದ ಮಹನೀಯರುಗಳು ನಮ್ಮ ಜೇಬಿನಲ್ಲೋ, ಮೊಬೈಲ್ ನಲ್ಲೋ ಅಳಿದುಳಿದ ಚಿಕಾಸುಗಳಿಗೂ ಕೈ ಹಾಕುತ್ತಿದ್ದಾರೆ ಎಂದರೆ ನಾಚಿಕೆ ಆಗುತ್ತದೆ.

ಯೋಚಿಸಿ, ಸುಮಾರು ೬೦ -೭೦ ಕೋಟಿ ಮೊಬೈಲ್ ಕನೆಕ್ಷನ್ ಗಳಿಂದ ದಿನಕ್ಕೆ ಐದೋ ಹತ್ತು ಪೈಸೆಯೂ ಕದ್ದರೂ ಸಾಕಲ್ಲವೇ? ರಿಂಗ್ ಟೋನ್ ವ್ಯಾಪಾರದ ಜೊತೆಗೇ ಹಾದರ ಬೇರೆ. ಹುಡಗಿಯರ ಮಾತನ್ನಾಡಿಸುವ ಸೌಕರ್ಯ ಕೂಡಾ.

ಈಗ ದೇಶವನ್ನು ೨೨ ವೃತ್ತಗಳನ್ನಾಗಿ ವಿಂಗಡಿಸಿ ರೋಮಿಂಗ್ ಅನ್ವಯ ಮಾಡಿದ್ದರು. ಅದನ್ನು ತೆಗೆದು ಹಾಕಿ ಇಡೀ ದೇಶವೇ ಒಂದು ವಲಯವನ್ನಾಗಿ ಘೋಷಿಸುತ್ತಾರಂತೆ. ಅಥವಾ ಧನಪಿಶಾಚಿ ಕಂಪೆನಿಗಳ ಧನ ದಾಹ ತಣಿಸಲು ಕನಿಷ್ಠ ದೇಶವನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸುತ್ತಾರಂತೆ.  ಇನ್ನು ಇದರ ವಿರುದ್ಧ ಮೊಬೈಲ್ ಕಂಪೆನಿಗಳು, ಅವರ ಚೇಲಾಗಳು ನ್ಯಾಯಾಲಯದ ಕಟ್ಟೆ ಹತ್ತಿ ಈ ನಿಯಮ ನೆನೆಗುದಿಗೆ ಬೀಳುವಂತೆ  ಮಾಡುತ್ತಾರೋ ಏನೋ.

ಯೇಗ್ದಾಗೆಲ್ಲಾ ಐತೆ..ಓದಲೇಬೇಕಾದ ಪುಸ್ತಕ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐವತ್ತು ರೂಪಾಯಿ ತಾನೇ ಎನ್ನವ nonchalant ಧೋರಣೆಯಿಂದ ಪುಸ್ತಕವನ್ನ ಖರೀದಿಸಿದೆ. ಹಳ್ಳಿಯ ಮಾಸ್ತರರೊಬ್ಬರ ಅನುಭವ ಕಥನ ಈ ಪುಟ್ಟ ಪುಸ್ತಕ. ಗ್ರಾಮವೊಂದರಲ್ಲಿ ಯೋಗಿಯೊಬ್ಬನೊಂದಿಗಿನ ತಮ್ಮ ಸ್ನೇಹದ ಬಗ್ಗೆ, ತಮಗಾದ ಅನುಭವದ ಬಗ್ಗೆ ಸರಳವಾಗಿ ಬರೆದಿದ್ದಾರೆ.  

ಮುಕುಂದನ ಹಳ್ಳಿಯ ಈ ಸ್ವಾಮೀ ಒಬ್ಬ ಸರಳ ಸನ್ಯಾಸಿ. ಕಳ್ಳ ಸನ್ಯಾಸಿ, ಭಂಗಿ, ಗಾಂಜಾ ಸೇದುವವನು, “ಭಕ್ತರ ಮನೆಯ ಮುದ್ದೆ, ಬಸವಿ ಮನೆಯ ನಿದ್ದೆ”….   ಹೀಗೇ ವಿನಾಕಾರಣ ಪುರಾವೆಗಳಿಲ್ಲದೆ ಅವರನ್ನು ಜನ ತೆಗಳಿದರೂ (ಯಾರೋ ಹೇಳಿದ್ದನ್ನು, ಹೇಳಿ ಕೊಟ್ಟಿದ್ದನ್ನು ನಂಬಿ prejudiced ಆಗೋ ವಿದ್ಯಾ?ವಂತ ಸಮೂಹ ನಮ್ಮ ನಡುವೆ ಇರುವಾಗ ಗ್ರಾಮಸ್ಥರ ವರ್ತನೆ ಬಗ್ಗೆ ಅಚ್ಚರಿ ಪಡಬೇಕಿಲ್ಲ ) ಅದ್ಯಾವುದನ್ನೂ ಕಿವಿಗೆ ಹಾಕಿ ಕೊಳ್ಳದೆ ಮೇಷ್ಟ್ರು ತಮ್ಮ ಸ್ನೇಹವನ್ನು ಅವರೊಂದಿಗೆ ಮುಂದುವರೆಸುತ್ತಾ ಬದುಕು ಒಂದು ಒಂದು ಭ್ರಮೆ ಎಂದು ಕಂಡು ಕೊಳ್ಳುತ್ತಾರೆ. 

ಮುಕುಂದನ ಹಳ್ಳಿಯ ಸ್ವಾಮಿಗಳಿಗೆ ಬದುಕಿನ ಬಗ್ಗೆ ಸರಳವಾಗಿ, ಜನರ ದೈನಂದಿನ ಬದುಕಿನೊಂದಿಗೆ ತಳುಕು ಹಾಕಿ ವಿನೋದವಾಗಿ, ಮನದಟ್ಟಾಗುವಂತೆ ಹೇಳುವ ಸಾಮರ್ಥ್ಯ ತಮ್ಮ ಅಲೆದಾಟದಷ್ಟೇ ಸುಲಭ. ಒಮ್ಮೆ  ವ್ಯಕ್ತಿಯೊಬ್ಬ ಬಂದು ಯಾರೋ ಸತ್ತು ಹೋದರು ಎನ್ನುವ ಸುದ್ದಿಯನ್ನ ಇವರಿಗೆ ತಲುಪಿಸುತ್ತಾನೆ. ಸತ್ತು ಹೋದ ಎನ್ನುವ ಪದ ಕೇಳಿದ ಕೂಡಲೇ ಹೌಹಾರಿದಂತೆ ನಟಿಸಿದ ಸ್ವಾಮಿಗಳು, ಅದ್ಹೇಗಯ್ಯಾ, ಅವನೆಲ್ಲಾದರೂ ಸತ್ತು ಹೋಗಲು ಸಾಧ್ಯವೇ ಎಂದು ಕೇಳುತ್ತಾರೆ. ಸ್ವಾಮಿಗಳ ಈ ಪ್ರಶ್ನೆಯ ಮರ್ಮ ಅರಿಯದ ಹಳ್ಳಿಗ ಮತ್ತಷ್ಟು ವಿವರಿಸುತ್ತಾನೆ. ಆದರೂ ಸ್ವಾಮಿ ಜಪ್ಪಯ್ಯ ಅನ್ನುವುದಿಲ್ಲ. ಎಲ್ಲಾದರೂ, ಯಾರಾದರೂ ಸತ್ತು ಹೋಗೋದಿದೆಯೇ? ಇಷ್ಟೆಲ್ಲಾ ವರ್ಷ ಬಾಳಿ  ಬದುಕಿದವನು ಅಷ್ಟು ಸಲೀಸಾಗಿ “ಸತ್ತು ಹೋಗು” ವನೆ? ಎಂದು ಕೇಳಿ ಅವನನ್ನು ಮತ್ತಷ್ಟು ಗಲಿಬಿಲಿಗೊಳಿಸುತ್ತಾರೆ.  “ಸತ್ತು ಹೋಗು’ ಎನ್ನುವ ಪದದ ಹಿಂದಿನ ಗೂಢಾರ್ಥವನ್ನು ಸ್ವಾಮಿಗಳಂಥ ವರಿಗೆ ಅರಿಯುವುದು ಸುಲಭ. ಉಸಿರಾಟ ನಿಂತು ಬಿಟ್ಟರೆ ಅವನು ಸತ್ತ ಎಂದು ಬಗೆಯುವ ಹಳ್ಳಿಯ ನಿರಕ್ಷರ ಕುಕ್ಷಿಗೆ ಹೇಗೆ ತಾನೇ ತಿಳಿಯಬೇಕು ಸಾವು ಮತ್ತೊಂದು ಬದುಕಿನೆಡೆಗಿನ ಪಯಣ ಎಂದು ? ಹೌದಲ್ಲವೇ? ದೀರ್ಘಾವಧಿ ಬಾಳಿ ಬದುಕಿದ  ಮಾಡಬೇಕಾದ್ದನ್ನೂ, ಮಾಡಬಾರದ್ದನ್ನೂ ಎಲ್ಲಾ ಮಾಡಿದ ಮನುಷ್ಯ ಸದ್ದಿಲ್ಲದೇ “ಸತ್ತು ಹೋಗಲು” ಹೇಗೆ  ಸಾಧ್ಯ? ಬದುಕಿನ ಮತ್ತು ಸಾವಿನ ನಿಜರೂಪವನ್ನು ಸ್ವಾಮಿಗಳು ಲೀಲಾಜಾಲವಾಗಿ ನಗುತ್ತಾ ಹಾಸ್ಯದಿಂದ ವಿವರಿಸುತ್ತಾರೆ ಸಾವಿನ ಸುದ್ದಿ ತಂದಾತನಿಗೆ.

ನದಿಯಲ್ಲಿ ನೀರಿನ ಹರಿವನ್ನು ನೋಡುತ್ತಾ, ಅದರೊಂದಿಗೆ ಹೊರಡುವ ನೀರ ಗುಳ್ಳೆಗಳೂ ಸ್ವಾಮಿಗಳ ಆಸಕ್ತಿ,  ಕಲ್ಪನೆಯನ್ನು ಹಿಡಿದಿಡುತ್ತವೆ. ಕ್ಷಣ ಮಾತ್ರ ಬದುಕುವ ಆ ಗುಳ್ಳೆಗಳ ಹಿಂದಿನ ಮರ್ಮವನ್ನೂ, ನಮ್ಮ ಬದುಕಿನ ಟೊಳ್ಳುತನ ದೊಂದಿಗೆ ಹೋಲಿಸಿ ಗಾಂಭೀರ್ಯ ಮಿಳಿತ ನಗುವಿನೊಂದಿಗೆ ಬಿಡಿಸಿ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಚೆಂದದ ಪುಟ್ಟ ಪುಸ್ತಕ.  ಒಂದು ರೀತಿಯಲ್ಲಿ reader’s digest ಓದಿದ ಹಾಗುತ್ತದೆ ಸ್ವಾಮಿಗಳ ಮಾತು, ಅನುಭವ ನೋಡಿದಾಗ. ಇಂಥ ನಿಸ್ವಾರ್ಥಿ ಸಾಧಕರಿಂದಲೇ ಇರಬೇಕು ನಮ್ಮ ಸಮಾಜ ಒಳ್ಳೆಯತನವನ್ನು ತನ್ನಲ್ಲಿ ಇನ್ನೂ ಉಳಿಸಿಕೊಂಡು ಬರುತ್ತಿದೆ. ಆದರೆ ಇವರುಗಳ ಸಂಖ್ಯೆ ಕ್ಷೀಣಿಸುತ್ತಿರುವುದೂ ಸಹ ತುಂಬು ಬದುಕು ಸಾಗಿಸಿದ ಸ್ವಾಮಿಗಳ ಮಾತುಗಳಷ್ಟೇ ಸತ್ಯ.

ಮನುಷ್ಯರೆಲ್ಲರೂ ಸಮಾನರು ಎಂದು ಸ್ವಾಮಿಗಳು ಹೇಳುವ ರೀತಿ ಇಲ್ಲಿದೆ ನೋಡಿ;

“ಊರು ಕೇರಿ, ಕುಲ ಗೋತ್ರ ಹೆಣ್ಣು ಗಂಡು ಎಲ್ಲಾ ಇಂಗಡಿಸ್ತಾರೆ. ನಾವು ಶಿವಾಚಾರ್ದೋರು, ನಾವು ದೇವಾಂಗ ದೋರು, ನಾವ್ ಬ್ರಾಮಣರು, ಅದರಾಗ್ ಮತ್ತೆ ನಾಮ್ದೋರು, ಅಡ್ಡ ಗಂಧದೋರು, ಮುದ್ರೆರು, ಅವ್ರು ಇವ್ರು ಒಬ್ಬರನ್ನ ಕಂಡ್ರೆ ಒಬ್ರು ಮಾರು ದೂರ ಹೋಗ್ತಾರೆ. ಮಾಡಿ ಮೈಲಿಗೆ ಅಂತಾರೆ, ನಗು ಬರ್ತೈತೆ……..ಈ ಮುದ್ರೆ, ವಿಭೂತಿ ಎಲ್ಲಾ ಅಷ್ಟೇ. ಬಾರೆ ಹೊರಗಳ ಯಾಪಾರ ಹಿಡಿದು ಬಡಿದಾಡ್ತಾರೆ” ಈ ಮಾತನ್ನು ಆಧುನಿಕ ಸ್ವಾಮಿಗಳಿಗೆ ಕೇಳಿಸಿದರೆ ಯಾವ ಉತ್ತರ ಸಿಗಬಹುದೋ?    

ಸ್ವಾಮಿಗಳ  ಕೆಲವೊಂದು ಸಂಗತಿಗಳು ಉತ್ಪ್ರೇಕ್ಷೆ ಎಂದು ತೋರಿದರೂ ಈ ಭಾವನೆ ಮತ್ತು ದಂತ ಕಥೆಗಳು ದೇವ ಮಾನವರಿಗೆ ಜನ ಅಂಟಿಸಿಯೇ ತೀರುತ್ತಾರೆ. ಅವನು ಕುಡುಕ, ಭಂಗಿ, ಗಾಂಜಾ ಹಾಕುವವನು ಎಂದೆಲ್ಲಾ ಜರೆಯುವ ಅದೇ ಬಾಯಿ ಅವರ ಪವಾಡಗಳ ಬಗ್ಗೆಯೂ ಭಯ ಭಕ್ತಿಯಿಂದ ಮಾತನಾಡುತ್ತಾರೆ, ಅದೇ ಸೋಜಿಗ.

ಹಳ್ಳಿಗಳಲ್ಲಿ ಈಗ ಅಪರೂಪವಾಗುತ್ತಿರುವ ಸಾಮರಸ್ಯದ ಜೀವನ ಸಹ ಈ ಮೇಷ್ಟರ ನೆನಪಿನಂಗಳದಿಂದ ಮರೆಯಾಗುವುದಿಲ್ಲ. ಮುಸ್ಲಿಮರಾದರೂ ಹಯಾತ್ ಸಾಹೇಬರು ಹಳ್ಳಿಯಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡುತ್ತಿದ್ದ ಸಹಾಯ, ಗ್ರಾಮಸ್ಥರ ಮೂಢ ನಂಬಿಕೆಗಳು ಹೀಗೇ ಹತ್ತು ಹಲವು ವಿಚಾರಗಳನ್ನು ಜೋಪಾನದಿಂದ ಓದುಗರಿಗಾಗಿ ಕಾಯ್ದುಕೊಂಡು ನಮ್ಮ ಕೈಗಳಿಗರ್ಪಿಸಿದ ಕೃಷ್ಣ ಶಾಸ್ತ್ರಿಗಳು ಮಹದುಪಕಾರವನ್ನೇ ಮಾಡಿದ್ದಾರೆ ಈ ಪುಸ್ತಕ ಬರೆಯುವ ಮೂಲಕ. ಈ ಪುಸ್ತಕ ಆಂಗ್ಲ ಭಾಷೆಗೆ ತರ್ಜುಮೆಗೊಂಡಿದೆಯೋ ಗೊತ್ತಿಲ್ಲ. ತರ್ಜುಮೆ ಆಗದ ಪಕ್ಷದಲ್ಲಿ ಯಾರಾದರೂ ಈ ಮಹತ್ಕಾರ್ಯಕ್ಕೆ ಕೈ ಹಾಕಿದರೆ ಈ ಪುಸ್ತಕ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.   

ಒಬ್ಬ ನಿರಕ್ಷರಕುಕ್ಷಿ ಆದರೆ ಬದುಕಿನ ನಿಜವಾದ ಪಾಠದಲ್ಲಿ ಅದ್ವಿತೀಯ professor ಆದ ಸ್ವಾಮಿಯೊಬ್ಬರ ಪರಿಚಯ ನನ್ನಲ್ಲಿ ಒಂದು ಅವರ್ಣನೀಯವಾದ ಭಾವವನ್ನೇ ಸೃಷ್ಟಿಸಿತು. ರಾಜಕಾರಣಿಗಳ ಒಡನಾಟದಿಂದ ನಾಡಿನ ಸಂಪನ್ಮೂಲ ಲೂಟಿ ಮಾಡುವ ಕೆಲವು ಸ್ವಾಮಿಗಳಿಗೂ ಈ ಮುಕುಂದೂರಿನ ಸ್ವಾಮಿಗೂ ಎತ್ತಣ ಸಂಬಂಧ ಎಂದು ತೋರಿದರೂ ಆಶ್ಚರ್ಯವಿಲ್ಲ. ಒಬ್ಬ ಅಹಂಕಾರಿ, ಸ್ವಾಮಿಯೊಬ್ಬ ತನ್ನ ಮಠಕ್ಕೆ ಬಂದು ಪೊಗರು ತೋರಿಸಿದರೂ ತನ್ನ ಸಂಸ್ಕೃತಿ ಕಲಿಸಿದ ವಿನಯ ವಿಧೇಯತೆ ಯನ್ನ ಮೋಹಕವಾಗಿ ಪ್ರದರ್ಶಿಸಿ ಮನಃಪೂರ್ವಕ ಆ ಸ್ವಾಮಿಯ ಸೇವೆ ಮಾಡುವ ಇವರ ಉದಾತ್ತ ಸಂಸ್ಕಾರ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಅಹಂಕಾರಿಗೆ ಅಹಂಕಾರವೇ ಉತ್ತರ ಎನ್ನುವ ನಮಗೂ ಆ ಸ್ವಾಮಿಗೂ ಇರುವ ವ್ಯತ್ಯಾಸ ನೋಡಿ.

ನನ್ನ ಆಸಕ್ತಿಯನ್ನು ಈ ಪುಟ್ಟ ಪುಸ್ತಿಕೆ ಈ ರೀತಿ ಹಿಡಿದಿಡುತ್ತದೆ ಎಂದು ಪುಸ್ತಕ ಕೊಂಡಾಗ ನನಗನ್ನಿಸಿರಲಿಲ್ಲ. ಸಾಧು ಸಂತರ ಬಗ್ಗೆ ದೊಡ್ಡ ಒಲವು ಆಸಕ್ತಿ ಇಲ್ಲದ ನನಗೆ ಒಬ್ಬ ಸಾಧಾರಣ, ಪ್ರಚಾರ ಫಲಾಪೇಕ್ಷೆ ಬೇಡದ ಸ್ವಾಮಿಯೊಬ್ಬರ ಪರಿಚಯ ಆದದ್ದು ಒಂದು ಅಪರೂಪದ ಅನುಭವವೇ ಸರಿ. ಕೊನೆಯದಾಗಿ ಇಲ್ಲಿದೆ ಮತ್ತೊಂದು ಬದುಕನ್ನು ಸಕರಾತ್ಮಕವಾಗಿ ಕಾಣಬೇಕೆಂದು ಹೇಳುವ ಮಾತು.

ಒಮ್ಮೆ ತನ್ನ ಮೂರು ವರ್ಷದ ಮಗು ಗುಲಾಬಿ ಕೀಳಲು ಗಿಡದ ಕಡೆ ಹೋಗುತ್ತಿದ್ದನ್ನು ಕಂಡ ಮಗುವಿನ ತಾಯಿ “ಅಯ್ಯೋ, ಅಯ್ಯೋ, ಮುಳ್ಳು, ಮುಳ್ಳು, ಮುಟ್ಟಬೇಡ ಎಂದು ಮಗುವನ್ನು ತಡೆದುದನ್ನು ಕಂಡ ಸ್ವಾಮಿಗಳು ಹೇಳಿದ್ದು, ಅಮ್ಮಯ್ಯಾ, ಆ ಮಗುವಿಗೆ ಹೂವಿನ ಗಿಡದಾಗೆ ಮುಳ್ಳು ಐತೆ ಅಂತ ಹೇಳ್ಕೊಡಬ್ಯಾಡ, ಮುಳ್ಳಿನ ಗಿಡ್ಯಾಗೆ ಹೂ ಐತೆ ಅಂತ ಹೇಳ್ಕೊಡಬೇಕು ಎಂದು ನಗುತ್ತಾ ಹೇಳುತ್ತಾರೆ. ಈ ಮಾತು ನಾವು ಕಲಿತ “half glass full” ಗಿಂತ ಮನೋಹರವಾಗಿಲ್ಲವೇ?

ದಿವಾಳಿ ಮತ್ತು ದಿವಾಲಿ

ಕನ್ನಡಿಗರು ಕರೆಯುವ ದೀಪಾವಳಿ ಗೆ ಹಿಂದಿ ಹೆಸರು ದಿವಾಲಿ. ಈ ಹಬ್ಬ ದಲ್ಲಿ ಧನ ದೇವತೆ ಲಕ್ಷ್ಮಿ ಯನ್ನ ಒಲಿಸಿಕೊಂಡು ತಮ್ಮ ತಮ್ಮ ಧಂಧೆ ಗಳಲ್ಲಿ ಲಾಭ ಬಯಸುತ್ತಾರೆ. ಅದೇ ಸಮಯ ಹಿಂದಿಯಲ್ಲಿ ಅರಿಯಲ್ಪಡುವ ದಿವಾಲಿ ಪದದ “ಲ” ಕಾರ ಮತ್ತು “ಳ” ಕಾರದಲ್ಲಿ ಸ್ವಲ್ಪ ಏರುಪೇರಾಗಿ ದಿವಾಳಿ ಆಗಿಬಿಟ್ಟರೆ, ಹಬ್ಬದ ಒಟ್ಟು ಉದ್ದೇಶವೇ “ದಿವಾಳಿ” ಎದ್ದಂತೆ ಅಲ್ಲವೇ? ತಿಳಿದೂ ತಿಳಿದೂ ದಾರಿದ್ರ್ಯವನ್ನು ಮನೆಯೋಲಕ್ಕೂ, ಧಂಧೆ ಯೊಳಕ್ಕೂ ಬಿಟ್ಟುಕೊಂಡಂತೆ. ದೀಪಾವಳಿ ಹಬ್ಬವನ್ನು ನಾಡಿನ ಎಲ್ಲ ಸಮುದಾಯದವರೂ ಉತ್ಸಾಹದಿಂದ ಆಚರಿಸಿದರು. ಬೆಳಕಿನ ಹಬ್ಬ ಸಾಮರಸ್ಯದ ಹಬ್ಬವಾಗಲಿ ಎಂದು ಹಾರೈಸುತ್ತಾ….

extra:  ಹಿಂದೂ ದೇವ ದೇವತೆಗಳಿಗೆ ವಾಹನಗಳು ಇರುತ್ತವೆ. ಗಣೇಶನಿಗೆ “ಮೂಷಕ” ವಾಹನ, ಇಂದ್ರನಿಗೆ, ಐರಾವತ, ಇಂದ್ರನಿಗೆ ಸಪ್ತ ಹಂಸಗಳು, ಶಿವನಿಗೆ ನಂದಿ, ಹೀಗೆ….ಈಗ ಧನ ದೇವತೆ ಲಕ್ಷ್ಮಿಯ ವಾಹನ ಊಹಿಸಿ? ಕಮಲ ಮತ್ತು ಗೂಬೆ.