ಸಂದರ್ಶನದಲ್ಲಿ ಕೇಳಿದ ಪ್ರಶ್ನೆ, ನಿನ್ನ ಸ್ತನಗಳು ಎಷ್ಟು ದಪ್ಪ?

ಮನೆಗೆಲಸಕ್ಕೆಂದು ಕೆಲಸಕ್ಕಿಟ್ಟರೆ ಆ ಮನೆಯ ರಹಸ್ಯವನ್ನು ಟಾಮ್ ಟಾಮ್ ಹೊಡೆದು ಹೇಳಬಾರದು. ಆದರೆ ಮನಸ್ಸು ಕೆಟ್ಟಾಗ, ಯಜಮಾನರು ತನ್ನನ್ನು ಮನುಷ್ಯರಂತೆ ಕಾಣಲು ವಿಫಲರಾದಾಗ ಅಂಥ ಜನರ ಮೇಲೆ ಹೇಸಿಗೆ ಹುಟ್ಟಿ ತಮ್ಮ ಅನುಭವವನ್ನು ಹೇಳಿ ಎದೆ ಹಗುರ ಮಾಡಿಕೊಳ್ಳುತ್ತಾರೆ ಕೆಲವರು. ಜರ್ಮನಿಯಲ್ಲಿ ಪೋಲಂಡ್ ದೇಶದ ಆಯಾಗಳು ಹೆಚ್ಚು. ಬರ್ಲಿನ್ ಗೋಡೆ ಬಿದ್ದ ನಂತರ ಪೋಲಂಡಿ ನಿಂದ ೫ ಲಕ್ಷಕ್ಕೂ ಹೆಚ್ಚು ಆಯಾಗಳು ಕೆಲಸಕ್ಕಾಗಿ ಜರ್ಮನಿಗೆ ಬಂದರು. ಜರ್ಮನಿ ಯೂರೋಪಿನ ಮಾತ್ರವಲ್ಲ ಜಗತ್ತಿನ ಶ್ರೀಮಂತ ದೇಶಗಳಲ್ಲೊಂದು. ಜರ್ಮನಿ ಸುಶಿಕ್ಷಿತ ದೇಶವಾದ್ದರಿಂದ ಎಲ್ಲರೂ ತಿಳಿದದ್ದು ಬಹಳ ಸಂಭಾವಿತರು, ಅತ್ಯಂತ ಶುಚಿತ್ವವಿರುವುವರು, ಶಿಸ್ತಿನ ಜನ ಎಂದು. ಆದರೆ ಈ ಆಯಾ ಅದೆಲ್ಲಾ ಸುಳ್ಳಿನ ಸರಮಾಲೆ, ಸತ್ಯ ನೋಡಿ ಇಲ್ಲಿದೆ ಎಂದು ಸುರುಳಿ ಬಿಚ್ಚಿಟ್ಟಳು ತಾನು ಬರೆದ ಪುಸ್ತಕ Under German Beds ರಲ್ಲಿ.

ಕೆಲಸಕ್ಕೆ ಸೇರುವ ಮುಂಚಿನ ಫೋನ್ ಸಂದರ್ಶನದಲ್ಲಿ ಮನೆ ಯಜಮಾನ ಕೇಳುವ ಪ್ರಶ್ನೆ “ ನಿನ್ನ ಮೊಲೆಗಳು ದಪ್ಪ ಇವೆಯೇ?” ಕೆಮ್ಪ್ಪು ಬಣ್ಣದ ಚಡ್ಡಿ ಧರಿಸುತ್ತೀಯಾ…. ಹೇಗಿದೆ ಪ್ರಶ್ನಾವಳಿ. ನೀನು ಬೆಳಿಗ್ಗೆ ಎಷ್ಟು ಘಂಟೆಗೆ ಏಳುತ್ತೀಯಾ, ಎದ್ದ ಕೂಡಲೇ ಏನು ಮಾಡುತ್ತೀಯ ಎಂದು ಕೇಳೋ ಬದಲು ಸ್ತನಗಳ ಗಾತ್ರದ ಬಗ್ಗೆ ಚಿಂತೆ.

ಒಬ್ಬ ಯಜಮಾನನಂತೂ ಅವಳ ಮುಂದೆ ಸಂಪೂರ್ಣ ವಿವಸ್ತ್ರನಾಗಿ ನಿಂತು ಬಿಡುತ್ತಿದ್ದನಂತೆ. ಇದ್ಯಾವ ಪರೀಕ್ಷೆಯೋ?

ಜರ್ಮನ್ನರು ಕೊಳಕು ಅಂತ ಈಕೆಯ ಅಭಿಪ್ರಾಯ. ಅವರ ಬೆಡ್ ಕೆಳಗೆ ಆಗ ತಾನೇ ಕೀಳಿಸಿಕೊಂಡ ಹಲ್ಲು, ಕೋಳಿ ಮಾಂಸದ ತುಂಡು ಹೀಗೇ ಬೇಡದ ವಸ್ತುಗಳು ಬಿದ್ದಿರುತ್ತವಂತೆ. ಕೆಲವೊಮ್ಮೆ ಹಣವನ್ನೂ ಸಹ ಬೇಕಾ ಬಿಟ್ಟಿ ಎಸೆದಿರುತ್ತಾರಂತೆ ಈಕೆಯ ಪ್ರಾಮಾಣಿಕತೆಯನ್ನು ಪರೀಕ್ಷಿಸಲೆಂದು. ಇದನ್ನು ಓದಿದ ನಂತರ ತಲೆ ಹರಟೆ ಪ್ರಶ್ನೆ ಕೇಳದೆ ಕೆಲಸಕ್ಕೆ ಬೇಕಾದ ಪ್ರಶ್ನೆ ಮಾತ್ರ ಕೇಳಿ, ಇಲ್ಲದಿದ್ದರೆ ನಿಮ್ಮನ್ನು ಉದಾಹರಣೆಯಾಗಿಸಿ ಪುಸ್ತಕವೊಂದು ಬಂದೀತು ಮಾರುಕಟ್ಟೆಗೆ.

ಅಪರೂಪದ ದೇವಾಲಯ

ಕೇಂದ್ರದ ಮಾಜಿ ಸಚಿವ ಶಶಿ ತರೂರ್ ತಮ್ಮ ‘ಟ್ವಿಟ್ಟರ್’ ಪುಟದಲ್ಲಿ ಕೇರಳದ ದೇವಾಲಯವೊಂದರ ಸ್ವಾರಸ್ಯದ ಬಗ್ಗೆ ಬರೆದಿದ್ದರು. ಅವರು ನೋಡಿದ ದೇವಾಲಯದಲ್ಲಿ ಗಣೇಶ ಮತ್ತು ಶ್ರೀ ಕೃಷ್ಣರ ವಿಗ್ರಹಗಳು ಒಟ್ಟಿಗೆ ಇದ್ದು, ಹೀಗೆ ಈ ಎರಡು ದೇವರುಗಳು ಜೊತೆಯಾಗಿ ಇರುವ ದೇವಾಲಯ ಬೇರೆಯೂ ಇದೆಯೇ ಎಂದು ಕೇಳಿದ್ದರು.

ಕೇರಳದ ಕೋಟ್ಟಯಂ ಜಿಲ್ಲೆಯ ಕುರುಪ್ಪಂತರ ಸ್ಥಳದಲ್ಲಿ ಇರುವ ಈ ಅಪರೂಪದ  ದೇವಾಲಯದ ಬಗ್ಗೆ ನನಗೂ ಆಸಕ್ತಿ ಹುಟ್ಟಿತು ಮಧ್ಯ ರಾತ್ರಿ ಯಲ್ಲಿ. ನೆಟ್ ಬಂಟ ಗೂಗ್ಲ್ ನಮಗಾಗಿ ಮತ್ತು ಇಂಥ ಕುತೂಹಲ ತಣಿಸಲು ತಾನೇ ಇರುವುದು? ಕೆಲವೇ ಸೆಕೆಂಡುಗಳಲ್ಲಿ ದೇವಾಲಯ ತೆರೆದು ಕೊಂಡಿತು. “ಮಳ್ಳಿಯೂರ್ ಶ್ರೀ ಗಣೇಶಾಯ ನಮಃ, ಅವಿಘನಮಸ್ತು ಶ್ರೀ ಕೃಷ್ಣಾಯ ನಮಃ” ಎನ್ನುವ ಬ್ಯಾನರ್ ಹೊತ್ತ ಈ ವೆಬ್ ತಾಣದಲ್ಲಿ ಸುಂದರ ಮಂದಿರದ ಚಿತ್ರವಿದೆ. ಈ ಮಂದಿರದಲ್ಲಿ ಶ್ರೀ ಗಣೇಶನ ತೊಡೆಯ ಮೇಲೆ ಶ್ರೀ ಕೃಷ್ಣ ಆಸೀನನಾಗಿದ್ದಾನೆ. ಈ ದೇವಾಲಯದ ವೆಬ್ ತಾಣ ದ ವಿಳಾಸ,

http://www.malliyoortemple.com/docs/Main.asp   

ಮತ್ತೊಂದು ವಿಶೇಷ. ಕೇರಳದ ಶಬರಿ ಮಲೆ ಮೇಲೆ ಇರುವ ಅಯ್ಯಪ್ಪ ಸ್ವಾಮೀ ದೇವಸ್ಥಾನಕ್ಕೆ ಹೋಗೋ ಮೊದಲು ಬೆಟ್ಟದ ಅಡಿಯಲ್ಲಿರುವ ವಾವರ್ ಎನ್ನುವ ಸೂಫಿ ಸಂತರ ಸಮಾಧಿಗೆ ಪೂಜೆ ಸಲ್ಲಿಸಿಯೇ ಅಯ್ಯಪ್ಪನಲ್ಲಿಗೆ ಹೋಗಬೇಕಂತೆ. ವಾವರ್ ಎನ್ನುವ ಮುಸ್ಲಿಂ ಯೋಧ ಅಸುರ ಮಹಿಷಿ ಯನ್ನು ಕೊಲ್ಲಲು ಸ್ವಾಮೀ ಅಯ್ಯಪ್ಪನಿಗೆ ಸಹಾಯ ಮಾಡಿದ ಕಾರಣಕ್ಕೆ ಅಯ್ಯಪ್ಪನ ಭಕ್ತರು ವಾವರ ರ ಮಸೀದಿಗೆ ಭೇಟಿ ನೀಡುತ್ತಾರೆ. ವಿವಿಧ ಮತಗಳ ಅನುಯಾಯಿಗಳೊಂದಿಗೆ ಸಾಮರಸ್ಯ ಸಾರುವ, ಹಳೆಕಾಲದ ಈ ತೆರನಾದ ನಂಬಿಕೆಗಳು ನಮ್ಮ ದೇಶದಲ್ಲಿ  ಹೇರಳ. ಅದಕ್ಕೊಂದು ಉದಾಹರಣೆಯಾಗಿ ನಮಗೆ ಕಾಣಲು ಸಿಗುತ್ತದೆ ಅಯ್ಯಪ್ಪ ಸ್ವಾಮಿಯ ಜಾತ್ರೆ.

ಗೂದೆ ಹಣ್ಣು ಮತ್ತು ನೆರಳಚ್ಚು

ಗೂದೆ ಹಣ್ಣು ಮತ್ತು ನೆರಳಚ್ಚು…ಇವೆರಡೂ ಪದಗಳಿಗೆ ಇರುವ ಸಂಬಂಧವೇನು ಎಂದು ತಲೆ ಕೆರೆದು ಕೊಳ್ಳಬೇಡಿ. ಪ್ರೊ. ಜಿ. ವೆಂಕಟಸುಬ್ಬಯ್ಯ ನವರ (ವೆಂಕಟ ಸುಬ್ಬಯ್ಯ ಒಂದು ಪದವೋ, ಎರಡು ಪದವೋ?) ಸಾಮಾಜಿಕ ನಿಘಂಟು “ಇಗೋ ಕನ್ನಡ” ತಿರುವಿ ಹಾಕುತ್ತಿದ್ದಾಗ ಇವೆರಡು ಪದಗಳು ಸಿಕ್ಕಿದವು. ನಗಲು ಮತ್ತು ಅರಿತು ಕೊಳ್ಳಲು ಸಹಾಯ ಮಾಡಿದ ಈ ಎರಡು ಪದಗಳ ಬಗ್ಗೆ ನಿಮಗೂ ಬರೆದು ತಿಳಿಸೋಣ ಎಂದು ಬರೆಯುತ್ತಿದ್ದೇನೆ.

ಹೇ, ಹೋಗಿ ಇದರ “ಜೆರಾಕ್ಸ್” ಕಾಪಿ ತಗೊಂಡ್ಬಾರೋ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಜೆರಾಕ್ಸ್ ಎಂದರೆ ನೆರಳಚ್ಚು ಎಂದು ನಿಘಂಟಿನಲ್ಲಿ ಅರ್ಥ ನೀಡಲಾಗಿದೆ. ಜೆರಾಕ್ಸ್ ಪದಕ್ಕೆ ಪರ್ಯಾಯವಾಗಿ ನೆರಳಚ್ಚು ಎನ್ನೋದು ನನಗಂತೂ ಸರಿ ತೋರಲಿಲ್ಲ. ನೆರಳು + ಅಚ್ಚು = ನೆರಳಚ್ಚು ತಾನೇ? ನೆರಳಿಗೆ ಆಕಾರ ಮತ್ತು ರೂಪ ಸ್ಪಷ್ಟವಾಗಿ  ಇರುವುದಿಲ್ಲ. ಆದರೆ ಜೆರಾಕ್ಸ್ ಕಾಪಿಗೆ ಇದೆರಡೂ ಇದೆ. ಅಸಲಿ ಪ್ರತಿ (copy) ಯ ರೀತಿಯಲ್ಲೇ ಇರುತ್ತದೆ ಜೆರಾಕ್ಸ್ ಕಾಪಿ. ಹಾಗಾಗಿ ಅದು ನೆರಳಚ್ಚು ಆಗಬಾರದು. ಅದು ನನ್ನ ಮಟ್ಟಿಗೆ ಪಡಿಯಚ್ಚು ಆಗಬೇಕು. ನೋಡ್ರೀ…ನಿಮ್ಮ ಮಗ ನಿಮ್ಮ ಪಡಿಯಚ್ಚು, ಆಲ್ವಾ? ಎಂದು ಯಾರಾದರೂ ಅಂದಾಗ ತಂದೆ ಎದೆ ಉಬ್ಬಿಸುತ್ತಾನೆ, authenticity ಪ್ರೂವ್ ಆದ ಸಂಭ್ರಮದಲ್ಲಿ. ಇಲ್ಲಿ ಪಡಿಯಚ್ಚು ಎಂದರೆ ಥೇಟ್ ತಂದೆ ರೀತಿ ಎಂದು. ಹಾಗಾಗಿ ಜೆರಾಕ್ಸ್ ಕಾಪಿ ಗೆ ಪಡಿಯಚ್ಚು ಎಂದರೆ ತಪ್ಪಾಗಬಹುದೋ?

ಜೆರಾಕ್ಸ್ ಒಂದು ಕಂಪೆನಿ. ಅಮೇರಿಕಾ ಮೂಲದ್ದು. ಯಾವುದಾದರೂ ಒಂದು ಕಂಪೆನಿ ಪ್ರಪ್ರಥಮ ಬಾರಿಗೆ ಒಂದು ಉತ್ಪನ್ನ ತಂದಾಗಲೋ, ಅಥವಾ ಉತ್ಪನ್ನವೊಂದು ತುಂಬಾ ಜನಪ್ರಿಯ ಆದಾಗಲೋ ಉತ್ಪಾದಕ ರ ಹೆಸರು ಅದಕ್ಕೆ ತಗುಲಿ ಕೊಳ್ಳುತ್ತದೆ. ಯಾವುದೇ ಕಬ್ಬಿಣದ ಬೀರುವಿಗೆ ಗೋದ್ರೆಜ್ ಬೀರು ಎನ್ನುತ್ತಾರೆ. ಅದು ಗೋದ್ರೆಜ್ ನಿರ್ಮಿತವಲ್ಲದಿದ್ದರೂ. ಇದೇ ಗತಿ ಜೆರಾಕ್ಸ್ ಗೂ ಬಂದಿದ್ದು. 

ಟೊಮೆಟೋ ಹಣ್ಣಿಗೆ ಕನ್ನಡದಲ್ಲಿ ಪರ್ಯಾಯ ಪದವಿದೆಯೇ? ಇಲ್ಲದೆ ಏನು, ಅದೇ “ಗೂದೆ ಹಣ್ಣು” ಎಂದು ಹೇಳುತ್ತದೆ ಈ ಸಾಮಾಜಿಕ ನಿಘಂಟು. ಗೂದೆ? “ಆರ್ ಯೂ ಶುಅರ್” ಎಂದು ಬಾಯಗಲಿಸಬೇಡಿ. ಹೌದು ಗೂದೆ ಹಣ್ಣಿಗೆ ಆಂಗ್ಲ ಭಾಷೆಯಲ್ಲಿ ಟೊಮೇಟೋ ಎನ್ನುತ್ತಾರೆ. ಬಹುಶಃ “ಗೂದೆ” (ಓಯ್, ಗೂದೆ ಎಲ್ಲೋಗಿದ್ದೆ?) ಎನ್ನುವ ಪದ ಕಸಿವಿಸಿಗೆ ಎಡೆ ಮಾಡಿ ಕೊಡೋದ್ರಿಂದಲೂ, ಮತ್ತು ಅದರ ಮೂಲ ಪದ ಸಂಸ್ಕೃತದ “ಗುದ” ದ ಮೂಲಕ ಬಂದಿದ್ದರೊಂದಲೋ ಏನೋ, ಅದರ ಸಹವಾಸವೇ ಬೇಡ, ಪರಂಗಿ ಭಾಷೆಯೇ ಚೆಂದ ಎಂದು ಟೊಮೇಟೋ ಬಳಕೆಯನ್ನು ಆರಂಭಿಸಿರಬಹುದು ನಮ್ಮ ಹಿರಿಯರು, ಅಲ್ಲವೇ?

ಆಂಗ್ಲದ ಎಲ್ಲಾ ಪದಗಳಿಗೆ ಪರ್ಯಾಯ ಕನ್ನಡ ಪದ ಉಪಯೋಗಿಸೋದು ಕನ್ನಡಮ್ಮನ ಸೇವೆ ಎಂದು ಕೆಲವರು ತಿಳಿದರೆ ಇನ್ನೂ ಕೆಲವರು ‘fad’ ಗೆ ಕಟ್ಟು ಬಿದ್ದು “ಅಭಿಯಂತರರು” ಎಂದು ಹೇಳಲಾಗದೆ ಹೆಣಗಾಡುತ್ತಾರೆ.  ಮೊಬೈಲ್ ಉಪಕರಣಕ್ಕೆ “ನಡೆಯುಲಿ” ಎಂದೂ ಹೇಳುತ್ತಾರೆ.

ಕೊನೆಯದಾಗಿ ಪ್ರೊ. ಜಿ. ವೆಂ ಅವರು ಆಂಗ್ಲ ಭಾಷೆಯ fundamentalist ಪದಕ್ಕೆ ಕನ್ನಡದಲ್ಲಿ “ಮತಾಂಧ” ಎಂದು ಹೇಳಿದ್ದಾರೆ. ಇದು ತಪ್ಪು ಎಂದು ನನ್ನ ಅಭಿಪ್ರಾಯ. ನೀವೇನಂತೀರಾ?        

ಹಾಗೆಯೇ, ಪದ ಮತ್ತು ಶಬ್ದದ ವ್ಯತ್ಯಾಸವೇನು? ನನಗೆ ಗೊತ್ತಿಲ್ಲ. ಇಗೋ ಕನ್ನಡಲ್ಲೂ ಇದು ಸಿಕಿಲ್ಲ.

“ಇಗೋ ಕನ್ನಡ” ಪುಸ್ತಕದ ಬಗ್ಗೆ ಒಂದು ಮಾತು. ಇಗೋ ಕನ್ನಡ ಒಂದು ಸೊಗಸಾದ ಪುಸ್ತಕ. ಭಾಷೆಗಳ ಬೆಳವಣಿಗೆ ಬಗ್ಗೆ ಬಹಳ passionate ಆಗಿ ಬರೆದಿದ್ದಾರೆ ಪ್ರೊ. ಜಿ.ವೆಂ ಅವರು. ಕೊಳ್ಳಲೇ ಬೇಕಾದ ಪುಸ್ತಕ, ನವಕರ್ನಾಟಕ ದವರು ಸುಂದರವಾಗಿ ಪ್ರಕಾಶಿಸಿದ್ದಾರೆ. ಕೇವಲ ೨೭೫ ರೂಪಾಯಿ. fad ಗೆ ಕಟ್ಟು ಬಿದ್ದು ನಕಲಿ ಪೋಲೋ ಟೀ ಷರ್ಟ್ ಖರೀದಿಸಿ  ಸೋಲುವ ಬೆಲೆ.

ನಗ್ನ ಪ್ರದರ್ಶನ

ಓರ್ವ ಮಹಿಳೆಯನ್ನು ನಗ್ನಳನ್ನಾಗಿಸಿ ಮರಕ್ಕೆ ಕಟ್ಟಿ ಹಾಕಿದ ದೃಶ್ಯ ನೋಡಿ ದಂಗಾದ ವ್ಯಕ್ತಿಯೊಬ್ಬ ಕೂಡಲೇ 911 ಕ್ಕೆ ಫೋನಾಯಿಸಿ ಪೊಲೀಸರನ್ನು ಕರೆಸುತ್ತಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲೇ ಅಡ್ಡಾಡುತ್ತಿದ್ದ ಒಬ್ಬ ವ್ಯಕ್ತಿ ಕಾಣಲು ಸಿಗುತ್ತಾನೆ. ಅವನನ್ನೂ, ಮರಕ್ಕೆ ಕಟ್ಟಿ ಹಾಕಲ್ಪಟ್ಟ ನಿಸ್ಸಹಾಯಕ ನೀರೆಯನ್ನೂ ಪ್ರಶ್ನಿಸಿದಾಗ ಕೃತ್ಯ ಬಯಲಿಗೆ ಬರುತ್ತದೆ. ಇಬ್ಬರೂ ಹೇಳಿದ್ದು ಪರಸ್ಪರರ ಅನುಮತಿಯೊಂದಿಗೆ (consensual rendezvous) ನಗ್ನತೆಯ ಸರ್ಕಸ್ ಏರ್ಪಟ್ಟಿದ್ದು ಎಂದು. ಯಾರನ್ನೂ ಬಂಧಿಸದೆ ಪೊಲೀಸರು ಮರಳಿದರು ನಗ್ನ ಮಹಿಳೆಯ ಅಂಗಸೌಷ್ಟವನ್ನು ಕಣ್ಣಿನಲ್ಲಿ ತುಂಬಿಸಿಕೊಂಡು. ಇದು ನಡೆದಿದ್ದು ಅಮೆರಿಕೆಯ ವಾಷಿಂಗ್ಟನ್ ರಾಜ್ಯದ ಟಕೋಮ ನಗರದ ಒವೆನ್ ಬೀಚ್ ಏರಿಯಾದಲ್ಲಿ. ಅಮೇರಿಕಾ land of opportunities ಮಾತ್ರವಲ್ಲ land of whimsical ideas ಕೂಡಾ ಎಂದು ಮೇಲಿನ ಘಟನೆ ನಮಗೆ ತಿಳಿಸುತ್ತದೆ. ನಮ್ಮಲ್ಲಿ ಈ ತೆರನಾದ ಘಟನೆ ನಡೆದಿದ್ದರೆ ? ಈ ದೃಶ್ಯವನ್ನು ಕಂಡವ ಪೊಲೀಸರಿಗೆ ಫೋನಾಯಿಸುವ ಬದಲು ಅಲ್ಲೇ ಅಡ್ಡಾಡುತ್ತಿದ್ದ ಆಕೆಯ ಪ್ರಿಯಕರನನ್ನು ಮತ್ತೊಂದು ಕಂಬಕ್ಕೆ ಕಟ್ಟಿ ಹಾಕಿ “ಕನ್ಸೆನ್ಸುವಲ್ ರಾನ್ಡೇವೂ” ಸಾಹಸದ ನೈಜ ಪಾಠ ಹೇಳುತ್ತಿದ್ದನೋ ಏನೋ?

ಹೀಗೊಂದು ಸ್ವಾರಸ್ಯಕರ “ಪಂಪು”

ಕನ್ನಡದ ಪ್ರಸಿದ್ಧ ವೆಬ್ ತಾಣವೊಂದರಲ್ಲಿ “ಹೆಸರಲ್ಲಿ ಏನಿದೆ” ಶೀರ್ಷಿಕೆಯಡಿ ಒಂದು ಲೇಖನ ಬಂದಿತ್ತು. ಅದರಲ್ಲಿ ಕೆಲವೊಂದು ರಾಜ್ಯಗಳ ಜನರ ಹೆಸರುಗಳು ಬೇರೊಂದು ರಾಜ್ಯಗಳಲ್ಲಿ ಯಾವ ರೀತಿ ಆಭಾಸವಾಗಿ ಕಾಣುತ್ತದೆ ಎಂದು ಲೇಖಕಿ ಬರೆದಿದ್ದರು. ಚಟ್ಟೋಪಾಧ್ಯಾಯ ಎನ್ನುವ ಉತ್ತರಭಾರತದ ಹೆಸರು ನಮಗೆ “ಚಟ್ಟ’ ಕಟ್ಟೋದ ರಲ್ಲಿ ಫೇಮಸ್ ಎಂದು ತೋರುತ್ತದೆ. ಅದೇ ಲೇಖನದಲ್ಲಿ “ ಇಂಟರ್ವ್ಯೂವ್ ಗೆ ಬಂದಿದ್ದ ’Vivek Tulluri’ ಎಂಬ ಆಂಧ್ರ ಯುವಕನ ಹೆಸರನ್ನು ಯಾವ ರೀತಿ ಕೆಡಸಿಟ್ಟಳು ಎಂದು ನಾನು ಬಾಯ್ಬಿಟ್ಟು ಹೇಳೋಲ್ಲಪ್ಪ…ಕನ್ನಡ ಬಂದ್ರೆ ನೀವೆ ಅರ್ಥ ಮಾಡ್ಕಳಿ!” ಎಂದು ನಿರ್ಭಿಡೆಯಾಗಿ ಬರೆದು ನನ್ನನ್ನು ಚಕಿತ ಗೊಳಿಸಿದರು. ಕೆಲವೊಮ್ಮೆ ಮಡಿವಂತರು ಅಧಿಕ ಇರುವ ವೆಬ್ ತಾಣದಲ್ಲಿ ಆ ರೀತಿಯ ಬಳಕೆ ಸ್ವಲ್ಪ ಕಷ್ಟವೇ. ಆದರೆ ಸುದೈವವಶಾತ್ ಯಾರೂ ಅದಕ್ಕೆ ದೊಡ್ಡ ರೀತಿಯ ತಕರಾರು ಮಾಡದೆ ಆನಂದಿಸಿದ್ದು ಲೇಖನಕ್ಕೆ ಬಂದ ಪ್ರತಿಕ್ರಿಯಗಳಿಂದ ತಿಳಿಯಿತು. “ಸನ್ನೆ” (sign) ಭಾಷೆಯ ಬಗ್ಗೆ ನಾನು ಒಂದು ಲೇಖನವನ್ನು ಇದೇ ವೆಬ್ ತಾಣಕ್ಕೆ ಕಳಿಸಿದ್ದೆ. ಪ್ರಕಟವಾದ ೨೪ ಘಂಟೆಗಳ ಒಳಗೆ ಅದನ್ನು ತಿಪ್ಪೆ ಸೇರಿಸಿದರು ನಿರ್ವಾಹಕರು. ಏಕೆಂದರೆ ಆ ಲೇಖನದಲ್ಲಿ ಜನ ಕೋಪಗೊಂಡಾಗ ಯಾವ ಯಾವ ರೀತಿಯ ಲ್ಲಿ ಹಾವಭಾವ ಪ್ರದರ್ಶಿಸಿ ತಮ್ಮ ಕೋಪ ತೋರಿಸುತ್ತಾರೆ ಎಂದು ಬರೆದು, f**k off ಎಂದು ಅರ್ಥ ಬರಲು “ಮಧ್ಯದ ಬೆರಳನ್ನು ಹೊರಕ್ಕೆ ತೂರಿಸಿ” ಪ್ರದರ್ಶಿಸುವ ಬಗ್ಗೆ ಬರೆದಿದ್ದೆ. ಅದು ಶಿಷ್ಟಾಚಾರಕ್ಕೆ ವಿರುದ್ಧವಾಗಿ ತೋರಿತು. ನಂತರ ನನಗೂ ಒಂದು ರೀತಿಯ ಅಪರಾಧೀ ಮನೋಭಾವ ಕಾಡಿತು, ಬರೆಯುವಾಗ ಒಂದಿಷ್ಟು discretion ಪ್ರದರ್ಶಿಸಬೇಕಿತ್ತು ಎಂದು. ನಾನು ಮೇಲೆ ಪ್ರಸ್ತಾಪ ಮಾಡಿದ “ಹೆಸರಲ್ಲಿ ಏನಿದೆ’ ಬರಹಕ್ಕೆ ಪ್ರತಿಕ್ರಿಯೆ ಬರೆಯಲು ಯತ್ನಿಸಿದೆ. ಪ್ರತಿಕ್ರಿಯೆ ಪೋಲಿ ಆಗಬಹುದೋ ಏನೋ ಎಂದು ಭಯ ಬಿದ್ದು ಅಲ್ಲಿ ಬರೆಯದೆ ನನ್ನ ಬ್ಲಾಗ್ ಗೆ ಅದನ್ನು ಬರೆದು ಹಾಕಲು ತೀರ್ಮಾನಿಸಿದೆ. ಏಕೆಂದರೆ “ಹಳೆ ಸೇತುವೆ” (ನನ್ನ ಬ್ಲಾಗ್) ಬಹಳಷ್ಟು ಪೋಲಿ ಕೆಲಸಗಳನ್ನ ಕಂಡ ಸೇತುವೆ. ಇಲ್ಲಿ ಏನೇ ಬರೆದರೂ “ಇವನು ತನ್ನ ಹಳೆ ಬುದ್ಧಿ ಬಿಡುವವನಲ್ಲ“ ಎಂದು ಕೈ ಚೆಲ್ಲಿ ಕೂರಬಹುದೇ ಅಷ್ಟೇ ನನ್ನ ಸೇತುವೆ. ಈಗ ಈ ಲೇಖನಕ್ಕೆ ಪ್ರೇರೇಪಣೆ ಆದ ವಿಷಯಕ್ಕೆ ನೇರವಾಗಿ ಬರೋಣ.

ನೀವೂ ಸಹ ನೋಡಿರಬಹುದು ಅಲ್ಲಲ್ಲಿ ಗೋಡೆ ಮೇಲೆ ನೀರಿನ ಪಂಪ್ ಒಂದರ ಜಾಹೀರಾತು. “TULLU” PUMP” ಅಂತ. ಅದು “ಟುಲ್ಲು” ಪಂಪೋ ಅಥವಾ ಉಚ್ಛಾರ ತಪ್ಪಿದಾಗ ಬೇರಾವುದಾದರೂ ಪಂಪೋ ನನಗೆ ಗೊತ್ತಿಲ್ಲ. ಆದರೆ ಅದನ್ನು ನೋಡಿದಾಗ ಮಾತ್ರ ಮನಸ್ಸು ಕಿಲ ಕಿಲ ಎಂದು ನಕ್ಕಿದ್ದಿದೆ. ಅದೇ ರೀತಿ “tulika’ ಎನ್ನುವ ಹೆಸರೂ ಅಷ್ಟೇ. ಈ ಹೆಸರನ್ನು ಇಟ್ಟುಕೊಂಡಾಕೆಯನ್ನು ಜೋರಾಗಿ, ಪೂರ್ತಿಯಾಗಿ ಕರೆಯಲೂ ಕಷ್ಟ, ಪ್ರೀತಿಯಿಂದ ಅರ್ಧ ಮಾಡಿ ಕರೆಯುವುದು ಇನ್ನೂ ಕಷ್ಟ. ಇದೆ ರೀತಿಯ ಇನ್ನೂ ತುಂಬಾ ಹೆಸರುಗಳಿವೆ. ಈ ಹೊತ್ತಿನಲ್ಲಿ ತೋಚಿದ್ದು ಇಷ್ಟು. ಇದನ್ನು ಓದುವವರು ತಮಗೆ ಕಿರಿಕ್ ಆಗಿ ತೋಚಿದ ಹೆಸರುಗಳನ್ನು ಪ್ರತಿಕ್ರಿಯೆ ಮೂಲಕ ಬರೆಯಬಹುದು…

ನನ್ನ ಸೇತುವೆ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುತ್ತದೆ, ಭಯ ಬೇಡ.

ಪುಟ್ಟ ದೇಶ, ದಿಟ್ಟ ಹೆಜ್ಜೆ

ಟುನೀಸಿಯಾ, ಆಫ್ರಿಕಾ ಖಂಡದ ತುತ್ತ ತುದಿಯಲ್ಲಿ, ಮೆಡಿಟೆರ್ರೆನಿಯನ್ ಸಮುದ್ರದ ತೀರದಲ್ಲಿ ಪ್ರಶಾಂತವಾಗಿ ನಿದ್ರಿಸುವ ಒಂದು ಪುಟ್ಟ ಅರಬ್ ದೇಶ. ಎರಡನೇ ಭಾಷೆ ಫ್ರೆಂಚ್. ಜನಸಂಖ್ಯೆ ಸುಮಾರು ಒಂದು ಕೋಟಿ. ಟುನೀಸಿಯಾದ ಬಗ್ಗೆ ನಾವೇನಾದರೂ ಕೇಳಿದ್ದಿದ್ದರೆ ಅದು ಒಂದು ಪ್ರವಾಸಿ ತಾಣ ಎಂದು ಮಾತ್ರ. ನಮ್ಮ ಗೋವಾ ರೀತಿಯದು.

ದಿನನಿತ್ಯ ದ ಸಾಮಗ್ರಿಗಳ ಬೆಲೆ ವಿಪರೀತ ಏರಿದ್ದು ಮಾತ್ರವಲ್ಲದೆ ನಿರುದ್ಯೋಗ ಸಮಸ್ಯೆಯೂ ಕಿತ್ತು ತಿನ್ನಲು ಆರಂಭಿಸಿದಾಗ ಜನ ಸಿಡಿದೆದ್ದರು ಟುನೀಸಿಯಾದಲ್ಲಿ. ಓರ್ವ ಯುವಕ ಆತ್ಮಹತ್ಯೆ ಮಾಡಿ ಕೊಳ್ಳುವುದರೊಂದಿಗೆ ಪರಿಸ್ಥಿತಿ ಹದಗೆಟ್ಟಿತು. ಅಧ್ಯಕ್ಷ ಜೈನುಲ್ ಆಬಿದೀನ್ ಬಿನ್ ಅಲಿ ತಾನು ಆಳುವ ಜನರ ನಾಡಿಮಿಡಿತ ಅರಿಯಲು ವಿಫಲನಾದ. ಪ್ರತಿಭಟಿಸುತ್ತಿದ್ದ ಜನರನ್ನು ಬಲಪ್ರಯೋಗದ ಮೂಲಕ ಅಡಗಿಸಲು ಯತ್ನಿಸಿದ. ಹತ್ತಾರು ಜನರು ಸತ್ತರು. ಜನ ಜಗ್ಗಲಿಲ್ಲ. ಬೀದಿಗಳಿಂದ ಮನೆಗೆ ಹೋಗಲು ನಿರಾಕರಿಸಿ ಉಗ್ರವಾಗಿ ಪ್ರತಿಭಟಿಸಿದರು. ಭ್ರಷ್ಟ ಲಂಚಗುಳಿ ಅಧ್ಯಕ್ಷನ ಸಂಬಂಧಿಯೊಬ್ಬನನ್ನು ಹಾಡು ಹಗಲೇ ಕೊಲೆ ಮಾಡಿದರು. ಇದನ್ನು ಕಂಡು ಕಂಗಾಲಾದ ಬಿನ್ ಅಲಿ ಕಾಲಿಗೆ ಬುದ್ಧಿ ಹೇಳಿದ. ಫ್ರಾನ್ಸ್ ದೇಶ ಅಭಯ ನೀಡಲು ನಿರಾಕರಿಸಿದಾಗ ಸೌದಿ ಅರೇಬಿಯಾ ಆಶ್ರಯ ನೀಡಿತು. ನೇರವಾಗಿ ಜೆದ್ದಾ ನಗರಕ್ಕೆ ಬಂದ ಬಿನ್ ಅಲಿ. ಉಗಾಂಡಾ ದೇಶದ ಸರ್ವಾಧಿಕಾರಿ ದಿವಂಗತ ಇದಿ ಅಮೀನ್ ಮತ್ತು ಪಾಕಿನ ನವಾಜ್ ಶರೀಫ್ ರಂಥ ಭ್ರಷ್ಟ ಅತಿಥಿ ಗಳಿಗೆ ಆಶ್ರಯ ನೀಡಿದ ಕೆಂಪು ಸಮುದ್ರದ ವಧು, ಜೆಡ್ಡಾ ನಗರ ಬಿನ್ ಅಲಿಯನ್ನೂ ಸ್ವಾಗತಿಸಿತು ತನ್ನ ತೀರಕ್ಕೆ.

ಪ್ರತಿಭಟಿಸುವ ಅಸ್ತ್ರವಾಗಿ ಜೀವವನ್ನು ಕಳೆದು ಕೊಳ್ಳುವುದು ತೀರಾ ಅಪರೂಪ ಮುಸ್ಲಿಂ ಜಗತ್ತಿನಲ್ಲಿ. ಹುಟ್ಟಿಗೆ ಕಾರಣನಾದ ದೇವರೇ ಕಳಿಸಬೇಕು ದೇವದೂತನನ್ನು ಜೀವ ತೆಗೆಯಲು. ಆತ್ಮಹತ್ಯೆ ಮಹಾ ಪಾಪ. ಯಾವುದೇ ಸಮಜಾಯಿಷಿ ಇಲ್ಲ ಜೀವ ಕಳೆದುಕೊಳ್ಳುವ ಕೃತ್ಯಕ್ಕೆ. ಆದರೆ ಮನುಷ್ಯ ಹಸಿದಾಗ, ನಿಸ್ಸಹಾಯಕನಾಗಿ ಗೋಡೆಗೆ ದೂಡಲ್ಪಟ್ಟಾಗ ಧರ್ಮ back seat ತೆಗೆದು ಕೊಳ್ಳುತ್ತದೆ. ಟುನೀಸಿಯಾದಲ್ಲಿ ಆದದ್ದು ಇದೇ. ಬರೀ ಅಧ್ಯಕ್ಷ ಮಾತ್ರ ಭ್ರಷ್ಠನಲ್ಲ. ಈತನ ಮಡದಿ ಸಹ ಮುಂದು ಖಜಾನೆಯ ಲೂಟಿಯಲ್ಲಿ. ಒಂದೂವರೆ ಟನ್ನುಗಳಷ್ಟು ಚಿನ್ನವನ್ನು ತೆಗೆದುಕೊಂಡು ದೇಶ ಬಿಟ್ಟಳು. ಎಲ್ಲಿ ಆಶ್ರಯ ಸಿಕ್ಕಿತು ಎಂದು ಇನ್ನೂ ಗೊತ್ತಿಲ್ಲ. ಜನರ ಹತ್ತಿರ ಕವಡೆಗೆ ಬರ ಬಂದಾಗ ಅಧ್ಯಕ್ಷ, ಅವನ ಪತ್ನಿ, ಅವರಿಬ್ಬರ ಸಂಬಂಧಿಕರು ಐಶಾರಾಮದಿಂದ ಬದುಕುವಾಗ ಸಹಜವಾಗಿಯೇ ಓರ್ವ ನಿಸ್ಸಹಾಯಕ ಯುವಕ ಆತ್ಮಹತ್ಯೆಗೆ ಶರಣಾದ ದಾರಿ ಕಾಣದೆ. ತನ್ನ ಜೀವ ಕಳೆದುಕೊಳ್ಳುವ ಮೂಲಕ ಅರಬ್ ಜಗತ್ತಿನ ಒಂದು ಅಪರೊಪದ ಕ್ರಾಂತಿಗೆ ನಾಂದಿ ಹಾಡಿದ.

೨೩ ವರುಷಗಳ ಕಾಲ ಒಂದೇ ಸಮನೆ ತನ್ನ ದೇಶವವ್ವು ಕೊಳ್ಳೆ ಹೊಡೆದ ಬಿನ್ ಅಲಿ ಪಾಶ್ಚಾತ್ಯ ದೇಶಗಳಿಗೆ ಮಿತ್ರ. ಏಕೆಂದರೆ ಅಲ್ಕೈದಾ ಬಂಟರು ತನ್ನ ದೇಶದಲ್ಲಿ ನೆರೆಯೂರಲು ಈತ ಬಿಡಲಿಲ್ಲ. ಈತ ಬಿಡಲಿಲ್ಲ ಎನ್ನುವುದಕ್ಕಿಂತ ಇಲ್ಲಿನ ಜನ ಶಾಂತಿ ಪ್ರಿಯರು ಎಂದೇ ಹೇಳಬಹುದು. ಬಹುತೇಕ ಅರಬ್ ರಾಷ್ಟ್ರಗಳಲ್ಲಿ ಅಲ್ ಕೈದಾ ದ ಪ್ರಭಾವ ಅಷ್ಟಿಲ್ಲ. ತಮ್ಮ ಆಶಯಗಳಿಗೆ ಅನುಸಾರ ಯಾರಾದರೂ ನಡೆಯುವುದಿದ್ದರೆ ಅಲ್ಲಿ ಪ್ರಜಾಪ್ರಭುತ್ವ, ಸ್ವೇಚ್ಛಾಚಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಎನ್ನುವ ಮಾರುದ್ದದ ಶಾಪ್ಪಿಂಗ್ ಲಿಸ್ಟ್ ಹಿಡಿದು ಕೊಂಡು ಬರುವುದಿಲ್ಲ ಅಮೇರಿಕಾ ಮತ್ತು ಅದರ ಬಾಲಂಗೋಚಿಗಳು. ಪಶ್ಚಿಮದ ಸಮಯಸಾಧಕತನಕ್ಕೆ ಟುನೀಸಿಯಾ ಸಹ ಹೊರತಾಗಲಿಲ್ಲ. ಈ ತೆರನಾದ ಇಬ್ಬಂದಿಯ ನೀತಿಯ ಪರಿಣಾಮವೇ ೨೩ ವರ್ಷಗಳ ಅವ್ಯಾಹತ ದಬ್ಬಾಳಿಕೆ ಬಿನ್ ಅಲಿಯದು.

ಅರಬ್ ರಾಷ್ಟ್ರಗಳಲ್ಲಿ ಟುನೀಸಿಯಾ ರೀತಿಯ ಕ್ರಾಂತಿಗಳು ಅಪರೂಪ. ಉಣ್ಣಲು, ಉಡಲು, ಸಾಕಷ್ಟಿದ್ದು ಸಾಕಷ್ಟು ಸಂಬಳ ಸಿಗುವ ನೌಕರಿ ಇದ್ದರೆ ಬೇರೇನೂ ಕೇಳದವರು ಅರಬರು. ಅರಬ್ಬರ ಈ ನಡವಳಿಕೆ ನೋಡಿಯೇ ಇಲ್ಲಿ ಸರ್ವಾಧಿಕಾರಿಗಳದು ದರ್ಬಾರು. ಊಳಿಗಮಾನ್ಯ ಪದ್ಧತಿಗೆ ಉದಾಹರಣೆಗಾಗಿ ವಿಶ್ವ ಎಲ್ಲೂ ಪರದಾಡ ಬೇಕಿಲ್ಲ. ಕೊಲ್ಲಿ ಕಡೆ ಒಂದು ಪಿಕ್ ನಿಕ್ ಇಟ್ಟುಕೊಂಡರೆ ಸಾಕು. ಈ ಪ್ರಾಂತ್ಯದಲ್ಲಿ ಪ್ರಜಾಪ್ರಭುತ್ವ ಮೊಳಕೆ ಒಡೆಯುವುದು ಕಷ್ಟದ ಕೆಲಸವೇ.

ಮರಳುಗಾಡಿನಲ್ಲಿ ಹಸಿರು ಮೊಳಕೆಯೊಡೆಯಲು ಸಾಧ್ಯವೇ? ಇಲ್ಲಿನ ನಿಸರ್ಗ, ವಾತಾವರಣ, ಜನರ ನಡಾವಳಿ ಎಲ್ಲವೂ ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತ. ಹಾಗಾಗಿ ನಿರಂಕುಶಾಧಿಕಾರಿಗಳ ದೊಡ್ಡ ದಂಡನ್ನೇ ಕಾಣಬಹುದು ಇಲ್ಲಿ. ಆಫ್ರಿಕಾದಲ್ಲೂ, ಏಷ್ಯಾದಲ್ಲೂ ಇರುವ ಸರ್ವಾಧಿಕಾರಿಗಳಿಗೆ ಹೋಲಿಸಿದರೆ ಇಲ್ಲಿನವರು ನಿರ್ದಯಿಗಳಲ್ಲ. ತಾವು ಹೊಡೆದ ಲೂಟಿಯಲ್ಲಿ ಜನರಿಗೂ ಒಂದಿಷ್ಟನ್ನು ಕೊಡುತ್ತಾರೆ. ಕಾರು ಕೊಳ್ಳಲು ಸಾಲ, ಉನ್ನತ ವ್ಯಾಸಂಗಕ್ಕಾಗಿ ಸಾಲ, ಮನೆ ಕಟ್ಟಲು ಸಾಲ, ಕೊನೆಗೆ ಮದುವೆಯಾಗಲೂ ಕೂಡ ಸಾಲ. ಆಹಾ, ಇಷ್ಟೆಲ್ಲಾ ಸವಲತ್ತಿರುವಾಗ ಗೋಡೆ ತುಂಬಾ ಧಿಕ್ಕಾರ ಗೀಚಿ, ಬೀದಿ ಅಲೆಯುತ್ತಾ ಮೈಕ್ ಹಿಡಿದು ಜಯಕಾರ ಕೂಗಿ ಪ್ರಜಾಪ್ರಭುತ್ವವನ್ನು ಮೆರೆಯುವುದಾದರೂ ಏತಕ್ಕೆ ಹೇಳಿ?

ತಮ್ಮ ಪಾಡಿಗೆ ತಾವು ಲೂಟಿ ಮಾಡುತ್ತಾ, ಒಂದಿಷ್ಟು ಜನಕಲ್ಯಾಣ ಮಾಡಿ ಪಾಪದ ಹೊರೆ ಹಗುರ ಮಾಡಿಕೊಳ್ಳುತ್ತಿದ್ದ ಅರಬ್ ಆಡಳಿತಗಾರರಿಗೆ ಟುನೀಸಿಯಾದ ಬೆಳವಣಿಗೆ ಬೆವರೊಡೆಸಿತು. ಭಯ ಆವರಿಸಿತು. ಅಮ್ಮಾನ್, ಕೈರೋ, ಡಮಾಸ್ಕಸ್, ರಿಯಾದ್ ನಗರಗಳ ಬೀದಿಗಳೂ ಟುನೀಸಿಯಾದ ಬೀದಿಗಳ ಹಾದಿ ಹಿಡಿದರೆ? ಕೂಡಲೇ ಅಗತ್ಯ ವಸ್ತುಗಳ ಬೆಲೆ ತಮಗೆ ತಾವೇ ಇಳಿದವು ಸಿರಿಯಾ ಮತ್ತು ಜೋರ್ಡನ್ ದೇಶಗಳಲ್ಲಿ. ಈ ಎರಡೂ ರಾಷ್ಟ್ರಗಳು ನಿದ್ದೆಯಿಂದ ಎಚ್ಚೆತ್ತು ಕೊಳ್ಳುವ ಪ್ರಯತ್ನ ಮಾಡಿದರೆ ಇವಕ್ಕೆಲ್ಲಾ ಸೊಪ್ಪು ಹಾಕಲಾರೆ ಎನ್ನುವ ಮತ್ತೊಬ್ಬ ಸರ್ವಾಧಿಕಾರಿ ಹೋಸ್ನಿ ಮುಬಾರಕ್. ಈಜಿಪ್ಟ್ ನ ಹೋಸ್ನಿ ಮುಬಾರಕ್ ೩೦ ವರುಷಗಳ ಸುದೀರ್ಘ ಅನುಭವವಿರುವ ಠಕ್ಕ. ಬೇರೆಲ್ಲಾ ಠಕ್ಕರು ಚಾಪೆ ಕೆಳಗೆ ತೂರಿಕೊಂಡರೆ ಈತ ರಂಗೋಲಿ ಕೆಳಗೆ ತೂರಿ ಕೊಳ್ಳುತ್ತಾನೆ. ಆತನಿಗೆ ಅದಕ್ಕೆ ಬೇಕಾದ ಪರಿಣತಿ ಒದಗಿಸಲು ಶ್ವೇತ ಭವನ ಸಿದ್ಧವಾಗಿದೆ ಕರಾಳ ಟ್ರಿಕ್ಕುಗಳೊಂದಿಗೆ.

ಈಗ ಈ ಕ್ರಾಂತಿಯ ಪರಿಣಾಮ ನಾನಿರುವ ಸೌದಿಯಲ್ಲಿ ಹೇಗೆ ಎಂದು ಊಹಿಸುತ್ತಿದ್ದೀರೋ? ಇಲ್ಲಿನ ದೊರೆ ಅಬ್ದುಲ್ಲಾ ಜನರಿಗೆ ಅಚ್ಚು ಮೆಚ್ಚು. ಜನರಿಗೆ ಬೇಕಾದ ಎಲ್ಲಾ ಸೌಕರ್ಯವನ್ನೂ ಮಾಡಿ ಕೊಡುತ್ತಾ, ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಡಾಲರುಗಳನ್ನು ಅನುದಾನ ನೀಡುತ್ತಾ ಇರುವ ಈ ದೊರೆ ಜನರ ಕ್ಷೇಮ ವನ್ನು ವೈಯಕ್ತಿಕ ಭೇಟಿ ಮೂಲಕ ನೋಡಿ ಕೊಳ್ಳುತ್ತಾರೆ. ಜನರಿಗೆ ಅನ್ಯಾಯವಾದರೆ ಎಂಥ ಪ್ರಭಾವಶಾಲಿಗಳಾದರೂ ಈ ದೊರೆಯ ನಿಷ್ಟುರ ನ್ಯಾಯದಿಂದ ತಪ್ಪಿಸಿ ಕೊಳ್ಳಲಾರರು. ಕಳೆದ ವರ್ಷ ಜೆಡ್ಡಾ ನಗರದಲ್ಲಿ ಮಳೆಯಿಂದ ಆದ ಅಪಾರ ಅನಾಹುತ ೧೫೯ ಜನರ ಪ್ರಾಣ ತೆಗೆದು ಕೊಂಡಿತ್ತು. ಜನರ ಒತ್ತಾಯದ ಮೇರೆಗೆ ಈ ಅನಾಹುತಕ್ಕೆ ನಗರಸಭೆಯ ಅಧಿಕಾರಿಗಳನ್ನು ನೇರವಾಗಿ ಹೊಣೆಯಾಗಿರಿಸಿ ಅವರುಗಳ ಮೇಲೆ criminal ದಾವೆ ಹೂಡಿ ಜೈಲಿಗೆ ಅಟ್ಟಿದರು ಇಲ್ಲಿನ ದೊರೆ. ಟುನೀಸಿಯಾದ ಕ್ರಾಂತಿ ಸೌದಿ ಬ್ಲಾಗಿಗರೂ ಕುತೂಹಲದಿಂದ ವರದಿ ಮಾಡಿದ್ದಾರೆ ಎಂದು ಅಮೆರಿಕೆಯ npr ರೇಡಿಯೋ ದ ಬಾತ್ಮೀದಾರರು ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿದ್ದರೂ ಫೇಸ್ ಬುಕ್, ಟ್ವಿಟ್ಟರ್, ಗಳನ್ನು ಬಹಿಷ್ಕರಿಸಿಲ್ಲ. ಈ ಸಾಮಾಜಿಕ ತಾಣಗಳ ಮೂಲಕ ಜನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಕಳೆದ ದಶಕದಿಂದೀಚೆಗೆ ಇಲ್ಲಿನ ವಾರ್ತಾ ಪತ್ರಿಕೆಗಳೂ ಸಹ ಸಾಕಷ್ಟು ಮುಕ್ತವಾಗಿ ವರದಿ ಮಾಡುತ್ತಿವೆ. ಅಮೆರಿಕೆಯ ಕೆಂಗಣ್ಣಿಗೆ ಗುರಿಯಾದ al-jazeera ಟೀವೀ ಮಾಧ್ಯಮ ಕೂಡಾ ಇಲ್ಲಿ ನೋಡಲು ಲಭ್ಯ. ಅದೇ ರೀತಿ ಸೌದಿ ರಾಜ ಮನೆತನಕ್ಕೆ ವಿರುದ್ಧವಾಗಿ ಬರೆಯುವ ಗಾರ್ಡಿಯನ್, independent ಪತ್ರಿಕೆಗಳು ಇಲ್ಲಿ ಲಭ್ಯ. ವಾಣಿಜ್ಯ, ವ್ಯಾಪಾರ ಸಂಬಂಧಕ್ಕೆ ಅವಶ್ಯವಿರುವ ಪ್ರಕ್ರಿಯೆಯಲ್ಲಿ ವಿಶ್ವದಲ್ಲಿ ೧೩ ನೆ ಸ್ಥಾನ ಸೌದ್ ಅರೇಬಿಯಾಕ್ಕೆ. ಮುಕ್ತತೆಗೆ ಆಹ್ವಾನ ನೀಡಿ ಸಾಮಾಜಿಕ ಅನಿಷ್ಟಗಳನ್ನು ತನ್ನ ಮಡಿಲಿಗಿರಿಸಿ ಕೊಂಡಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE) ಮತ್ತು ಬಹರೇನ್ ದೇಶಗಳು ಸೌದಿಗಿಂತ ತುಂಬಾ ಹಿಂದಿವೆ ವಾಣಿಜ್ಯ ನೀತಿಯಲ್ಲಿ.

ಟುನೀಸಿಯಾ ದೇಶಕ್ಕೆ ಭೇಟಿ ಕೊಟ್ಟ ಯಾರೇ ಆದರೂ ಹೇಳುವುದು ಎರಡೇ ಮಾತುಗಳನ್ನು ಸುಂದರ ದೇಶ. ಸ್ನೇಹಜೀವಿ ಜನ. ಪ್ರವಾಸೋಧ್ಯಮದ ಮೂಲಕ ದೊಡ್ಡ ರೀತಿಯಲ್ಲಿ ವಿದೇಶೀ ವಿನಿಮಯ ಗಳಿಸುತ್ತಾ, ತನ್ನ ರಮಣೀಯ ಆಲಿವ್ (olive) ಬಯಲುಗಳನ್ನೂ, ಸುಂದರ ತೀರ ಪ್ರದೇಶವನ್ನೂ ಜನರಿಗೆ ತೋರಿಸಿ ತನ್ನ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಪುಟ್ಟ ಟುನೀಸಿಯಾ ದೇಶ ಇಟ್ಟಿರುವ ದಿಟ್ಟ ಹೆಜ್ಜೆ ಅದಕ್ಕೆ ಮುಳುವಾಗದೆ ಇರಲಿ ಎಂದು ಹಾರೈಸೋಣ.

ಹೀಗೇ ಸುಮ್ಮನೆ: ಇಸ್ಲಾಮಿನ flexibility ಯ ದ್ಯೋತಕವಾಗಿ ಟುನೀಸಿಯಾ ದಲ್ಲಿ ಬಹುಪತ್ನಿತ್ವ ನಿಷಿದ್ಧ. ಇದು ಶರಿಯತ್ ಗೆ ವಿರುದ್ಧ ಎಂದು ಇಲ್ಲಿನ ಮುಲಾಗಳು ಇದುವರೆಗೂ ಅರಚಿಲ್ಲ.

ಶುಭಾಶಯಗಳು

“ಬೆಟರ್ ಲೇಟ್ ದ್ಯಾನ್ ನೆವರ್” ಅಂತಾರೆ. ಜನವರಿ ಎರಡಾದರೇನಂತೆ ತಡವಾಗಿಯಾದರೂ ತಮಗೆಲ್ಲರೋಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದಲ್ಲಿ ಸಲ್ಪವಾಗಿ ಕಡಿಮೆ ಬರೆಯುತ್ತಿರುವವರು ಹೆಚ್ಚು ಬರೆಯಲಿ, ಹೆಚ್ಚು ಬರೆಯುತ್ತಿರುವವರು ಇನ್ನಷ್ಟು ಬರೆಯಲಿ ಎನ್ನುವ ಹಾರೈಕೆಗಳೊಂದಿಗೆ…

ಹೊಸ ವರುಷ ಎಂದಕೂಡಲೇ ನಮ್ಮ ಗಮನ ತಿರುಗುವುದು ಹೊಸ ಸಂಕಲ್ಪದೆಡೆಗೆ. ತೂಕ ಕಡಿಮೆ ಮಾಡ್ಬೇಕು, ವ್ಯಾಯಾಮ ಮಾಡ್ಬೇಕು, ಸಿಗರೆಟ್ ಬಿಡಬೇಕು, ಸೇಂದಿ ನಿಲ್ಲಿಸಿ ನೀರು ಹೆಚ್ಚು ಕುಡಿಯಬೇಕು, ಒಳ್ಳೆಯ ಹೆಂಡತಿಯಾಗಬೇಕು, ಆದರ್ಶ ತಂದೆಯಾಗಬೇಕು, ಉತ್ತಮ ಮಿತ್ರನಾಗಬೇಕು….ಹೀಗೆ ಸಾಗುತ್ತದೆ ಬಯಕೆಗಳ ಮೆರವಣಿಗೆ. ಆದರೆ ಶಾರೀರಿಕ ಮತ್ತು ಇತರೆ ಕುಂದು ಕೊರತೆಗಳ ಬಗ್ಗೆ ಗಮನ ಹರಿಸುವ ನಾವು ನಮ್ಮ ಬುದ್ಧಿ ಮತ್ತೆಯನ್ನು ಇನ್ನಷ್ಟು ವೃದ್ಧಿಸುವ ಕಡೆ ಯೋಚಿಸಿದರೆ ಎಷ್ಟು ಚೆಂದ ಅಲ್ಲವೇ? ವರುಷಗಳುರುಳಿದಂತೆ, ಸಂಕಲ್ಪಗಳು ಸೊರಗಿದಂತೆ, ನಮ್ಮ ಬುದ್ಧಿ ಶಕ್ತಿಯೂ ಕ್ಷೀಣಿಸುತ್ತದೆ ಎಂದು ನಮ್ಮ ನಂಬಿಕೆಯಾದರೆ ಇಲ್ಲಿದೆ ಶುಭ ವಾರ್ತೆ.

ಮೆದುಳಿನ ಶಕ್ತಿ ಎಳೆಯರಲ್ಲಿ ಮಾತ್ರವಲ್ಲ ಇಳಿ ವಯಸ್ಸಿನವರಲ್ಲೂ ತೀಕ್ಷ್ಣ ವಾಗಿರಲು ಸಾಧ್ಯ ಎಂದು ಒಬ್ಬ neurologist ತಮ್ಮ ಲೇಖನದಲ್ಲಿ ಬರೆಯುತ್ತಾರೆ. ಬದಕಿನ ಸಂಜೆಯಲ್ಲೂ ಹೊಸತನ್ನು ಹೇಗೆ ಕಲಿಯಬಹುದು ಎಂದು ಸವಿಸ್ತಾರವಾಗಿ ವರ್ಣಿಸಿದ್ದಾರೆ ಈ ಲೇಖಕ, ಲೇಖನವನ್ನು ಓದಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

ಮತ್ತೊಮ್ಮೆ ಹೊಸ ವರುಷ, ಹೊಸ ಹರುಷ ದ ಹಾರೈಕೆಗಳು.

ಓರ್ವ ವಿಜ್ಞಾನಿ ಮತ್ತು ಉಸಿರಾಡುವ ಭೂಮಿ

ಭೂತಾಪದಲ್ಲಿ ಏರಿಕೆ ವಿಷಯ ಹಲವು ದೇಶಗಳ ರಾಜಕಾರಣಿಗಳ ತಾಪಮಾನವನ್ನು ಏರಿಸುವುದನ್ನು ಕಂಡಿದ್ದೇವೆ. ಪ್ರಗತಿಗಾಗಿ ಮಾನವ ತನ್ನೆಲ್ಲಾ ಬುದ್ಧಿ ಶಕ್ತಿಯನ್ನೂ ಹರಿಬಿಟ್ಟಂತೆಯೇ ವಾತಾವರಣ ಕೂಡ ತನ್ನ ಕೋಪ ತಾಪವನ್ನು ಮನುಜನ ಮೇಲೆ ಹರಿ ಬಿಡಲು ಆರಂಭಿಸಿತು. ಪರಿಣಾಮ? ಅಕಾಲಿಕ ಮಳೆ, ಪ್ರವಾಹ, ಸುನಾಮಿ, ಚಂಡಮಾರುತಗಳು ಭೂತಾಯಿಯ ಶಾಪಗಳಾಗಿ ನಮ್ಮನ್ನು ಕಾಡಲು ತೊಡಗಿದವು. ಆದರೆ ಈ ಗ್ಲೋಬಲ್ ವಾರ್ಮಿಂಗ್ ಎಂದು ಚಿರಪರಿಚಿತವಾಗಿರುವ ಭೂತಾಪದಲ್ಲಿನ ಏರಿಕೆಯ ಈ ವಿದ್ಯಮಾನ ಎಷ್ಟು ಜನರಿಗೆ ತಿಳಿದಿದೆ. ನಮ್ಮ ಮಾಧ್ಯಮಗಳು ಈ ಕುರಿತು ಜನರ ಗಮನ ಹರಿಸುವಲ್ಲಿ ಮತ್ತು ಅವರನ್ನು ಜಾಗೃತ ರಾಗಿಸುವಲ್ಲಿ ಎಷ್ಟುಮಟ್ಟಿಗೆ ಯಶಸ್ವಿಗಳಾಗಿದ್ದಾರೆ ಎಂದು ನೋಡಿದಾಗ ನಮಗೆ ಸಿಗುವುದು ನಿರಾಶದಾಯಕ ಬೆಳವಣಿಗೆ. ಪತ್ರಿಕೋದ್ಯಮ ಅಂತ ದೊಡ್ಡ ಗ್ಲಾಮರಸ್ ಕೆಲಸ ಅಲ್ಲ ಮಾತ್ರವಲ್ಲ ಅದರಲ್ಲಿ ಸುಗುವ ಕಾಸು ಸಹ ಅಷ್ಟಕ್ಕಷ್ಟೇ ಎನ್ನುವ ಅಭಿಪ್ರಾಯದ ಕಾರಣ ಎಲ್ಲರೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಗಳತ್ತ ಕಣ್ಣು ಹಾಕಿದರೆ ಪತ್ರಿಕೋದ್ಯಮ ಪ್ರತಿಭೆಯ ಕೊರತೆಯಿಂದ ಸೊರಗಿತು ನಮ್ಮ ದೇಶದಲ್ಲಿ. ವಿದೇಶೀ ಪತ್ರಿಕೆಗಳೊಂದಿಗೆ ನಮ್ಮ ಪತ್ರಿಕೆಗಳನ್ನು ಹೋಲಿಸಿ ನೋಡಿದಾಗ ಮನವರಿಕೆ ಆದೀತು ನಮ್ಮ ಪತ್ರಿಕೆಗಳ ಗುಣಮಟ್ಟ ಎಂಥದ್ದು ಎಂದು. ಅವಕ್ಕೆ ಕ್ಷುಲ್ಲಕ ವಿಷಯಗಳತ್ತ ಹೆಚ್ಚು ಗಮನ. liz hurley ಎಂಬ ಮಧ್ಯವಯಸ್ಕ ಬೆಡಗಿ ಭಾರತೀಯ ಸಂಜಾತ ಅರುಣ್ ನಾಯರ್ ನಿಗೆ ಕೊಕ್ ಕೊಟ್ಟು ಶೇನ್ ವಾರ್ನ್ ಜೊತೆಗಿನ ಆಕೆಯ ಚಕ್ಕಂದ ನಮ್ಮ ಮಾಧ್ಯಮಗಳಿಗೆ  ದೊಡ್ಡ ಸುದ್ದಿ.  

ನಿನ್ನೆ ಅಮೆರಿಕೆಯ newyork times ಪತ್ರಿಕೆಯಲ್ಲಿ “A Scientist, His Work and a Climate Reckoning”  ಎನ್ನುವ ತಲೆಬರಹವಿರುವ ಲೇಖನ ಪ್ರಕಟವಾಯಿತು. ಭೂತಾಪದ ಬಗ್ಗೆ ಅಮೆರಿಕೆಯ ವಿಜ್ಞಾನಿಯೋರ್ವನ ಸಂಶೋಧನೆ ಮತ್ತು ವಾತಾವರಣದ ಬಗ್ಗೆ ಐದು ಪುಟಗಳ ಲೇಖನವಿದೆ. ಕೆಳಗಿನ ಕೊಂಡಿ ಕ್ಲಿಕ್ಕಿಸಿ ಲೇಖನ ಓದಿ. http://www.nytimes.com/2010/12/22/science/earth/22carbon.html?pagewanted=1&_r=1

ನನ್ ಟೈಮ್ ಸರಿಯಿಲ್ಲ ಅಷ್ಟೇ !

ಟೈಮ್ ಸರಿಯಿಲ್ಲ, ಇದು ನಾವು ಕೇಳುವ ದೂರು . ನಮ್ಮ ಅರಿವುಗೇಡಿತನದಿಂದ ಅಥವಾ ಬೇರಾವುದಾರೂ ಕಾರಣದಿಂದ  ಬರುವ ಸಂಕಷ್ಟಗಳಿಗೆ ಸುಲಭ ಮತ್ತು ಪುಕ್ಕಟೆಯಾಗಿ ಸಮಯವನ್ನೂ ಜರೆಯುವುದು, ದೂರುವುದು ನಮ್ಮ ತಾತ ಮುತ್ತಾತಂದಿರು ನಮಗೆ ಬಳುವಳಿಯಾಗಿ ನೀಡಿದ ಜಾಯಮಾನ.  ಇಂದು ಬೆಳಿಗ್ಗೆ ನಮ್ಮ ಕಂಪೆನಿಯಲ್ಲಿ ಸೇಲ್ಸ್ ವಿಭಾಗದಲ್ಲಿ  ಕೆಲಸ ಮಾಡುವ ಒಬ್ಬರು ಬಂದು ಹೇಳಿದರು, ನಿನ್ನೆ ರಾತ್ರಿ ನನ್ನ ಲ್ಯಾಪ್ ಟಾಪ್ ಕಳುವಾಯಿತು. ಫ್ಲಾಟ್ ಹೊರಗೆ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದು ಕಳ್ಳತನ ಮಾಡಿದರು ಎಂದು ಹೇಳಿ ಏನು ಮಾಡೋದು, ನನ್ನ ಟೈಮ್ ಸರಿಯಿಲ್ಲ ಅಷ್ಟೇ ಎಂದು ಮರುಗಿದರು. ಈ ರೀತಿಯ ಕಹಿ ಅನುಭವ ಈ ವ್ಯಕ್ತಿಗೆ ಮೊದಲನೆಯದಲ್ಲ. ಕಳೆದ ವರ್ಷ ಅವರ ಫ್ಲಾಟ್ ಒಳಕ್ಕೆ ನುಗ್ಗಿ ಪತ್ನಿಯ ಒಡವೆಗಳನ್ನು ಕದ್ದೊಯ್ದಿದ್ದರು ಕಳ್ಳರು.  ಆದರೆ ಈ ಕಳ್ಳತನದ ಬಗ್ಗೆ ಮಾತ್ರ ಅವರಿಗೆ ನಿಖರವಾದ ಮಾಹಿತಿ ಇತ್ತು. ಅವರಿಗೆ ಹೊಸತಾಗಿ ಪರಿಚಯವಾಗಿದ್ದ ವ್ಯಕ್ತಿ ಮಾಡಿದ್ದೆಂದು ಅವರಿಗೆ ಚೆನ್ನಾಗಿ ತಿಳಿದಿದ್ದರೂ ಪೊಲೀಸರಿಗೆ ದೂರು ಕೊಡಲು ಹೆದರಿದರು. ಏಕೆಂದರೆ ಇಲ್ಲಿನ ಪೊಲೀಸರು ಲಂಚ, ವಶೀಲಿ ಬಾಜಿಗೆ ಬೀಳದೆ ಮುಲಾಜಿಲ್ಲದೆ ಬಾಯಿ ಬಿಡಿಸಿ ಬಿಡುತ್ತಾರೆ. ಆ ವ್ಯಕ್ತಿಯ ವಿರುದ್ಧ ದೂರು ನೀಡಿದರೆ ನಾಳೆ ಭಾರತದಲ್ಲಿ ತನಗೆ ತೊಂದರೆ ಆಗಬಹುದು ಎಂದು ಹೆದರಿ ಪೊಲೀಸ್ ದೂರು ಕೊಡಲು ಒಪ್ಪಲಿಲ್ಲ. ಎಲ್ಲಾ ನನ್ ಟೈಮ್ ಅಷ್ಟೇ ಎಂದು ಕೈ ಚೆಲ್ಲಿ ಕೂತ ಅವರಿಗೆ ನಾನು ಹೇಳಿದೆ, ನಾವು ಟೈಮ್ ಅನ್ನು ದೂರುವುದು ಸರಿಯಲ್ಲ. ಜೀವನದಲ್ಲಿ ಅದೇನು ಸಂಭವಿಸಬೇಕೋ ಅದು ಆಗಿಯೇ ತೀರುತ್ತದೆ. ನಮ್ಮಿಂದ ಅದನ್ನು  ತಡೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ದೇವರ ಮೊರೆ ಹೋಗಬೇಕೆ ಹೊರತು ಸಮಯವನ್ನೂ ದೂರುವುದು ಸರಿಯಲ್ಲ ಎಂದು ನಯವಾಗಿ ಹೇಳಿದೆ. ಆದರೆ ಬೆಲೆ ಬಾಳುವ ವಸ್ತುಗಳನ್ನು ಕಳೆದು ಕೊಂಡ ಆತ ಮಾತ್ರ ‘ಸಮಯ’ ದ ಪರವಾಗಿ ನಿಂತ ನನ್ನ ನಿಲುವನ್ನು ಒಪ್ಪಿದಂತೆ ಕಾಣಲಿಲ್ಲ.

ಮೇಲೆ ಹೇಳಿದ ರೀತಿಯ ಘಟನೆಗಳನ್ನು ನಾವು ದಿನವೂ ನೋಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಒಂದರ ಹಿಂದೆ ಒಂದು ಅವಘಡಗಳು ಸಂಭವಿಸಿದರಂತೂ ಕೇಳಬೇಡಿ’ ಟೈಮ್’ ನ ಗೋಳು. ಸಮಯದ ಜನ್ಮ ಜಾಲಾಡುತ್ತಾರೆ. ಪರಿಹಾರ ಕಾಣಲೆಂದು ಜ್ಯೋತಿಷ್ಯರ,  ಮಂತ್ರವಾದಿಗಳ  ಮೊರೆಯೂ ಹೋಗುತ್ತಾರೆ. ತಂತ್ರ ಯಂತ್ರ ಕಟ್ಟಿಸಿ ಕೊಳ್ಳಲು ಎಂದು  ಮತ್ತಷ್ಟು ಕಳೆದುಕೊಳ್ಳುತ್ತಾರೆ. ಆದರೆ ನಮಗೆದುರಾಗುವ ಎಲ್ಲಾ ಪ್ರಾರಬ್ದ ಗಳಿಗೂ ನಿಜವಾಗಿಯೂ ‘ಟೈಮ್’’ ಅಥವಾ ಕೆಟ್ಟ ಘಳಿಗೆ ಕಾರಣವೇ?  

ಕಾಲವನ್ನು  ಸಂವತ್ಸರ ಎಂದು ಕರೆಯುತ್ತಾರೆ. ವತ್ಸರ ಎಂದರೆ ದೇವರು. ಅಂದರೆ ಕಾಲವೇ ದೇವರು. ಸಂವತ್ಸರ ಎಂದರೆ ವರ್ಷ ಎಂದಲ್ಲ. ಪ್ರತೀ ಕ್ಷಣ, ನಿಮಿಷ, ಘಂಟೆಗಳು ಸಂವತ್ಸರವೇ. ಏಕೆಂದರೆ ಈ ಕ್ಷಣ, ನಿಮಿಷ, ಘಂಟೆಗಳಿಂದ ದಿನಗಳು, ತಿಂಗಳುಗಳಾಗಿ ವರ್ಷ ಎಂದೆನ್ನಿಸಿ ಕೊಳ್ಳುತ್ತದೆ. ಅಂದರೆ ನಾವು ನಮಗೆ ಎದುರಾಗುವ ಕಷ್ಟ, ದುಃಖ ದುಮ್ಮಾನಗಳಿಗೆ  ಸಮಯವನ್ನು ಹಳಿದರೆ ದೇವರನ್ನು ತೆಗಳಿದಂತಾಗುತ್ತದೆ, ಅಲ್ಲವೇ?    

ತೃಣಮಪಿ ನಃ ಚಲತಿ. ದೇವನ ಅಪ್ಪಣೆಯಿಲ್ಲದೆ ಹುಲ್ಲೂ ಕೂಡ ಚಲಿಸದು ಎನ್ನುವ ಅರ್ಥದ ಈ ಮಾತು ಇಸ್ಲಾಂ ಧರ್ಮೀಯರ “ಪವಿತ್ರ ಕುರ್’ಆನ್” ನಲ್ಲಿಯೂ ಇದೆ. ಪ್ರತೀ ಕಾರ್ಯವೂ, ಪ್ರತೀ ಘಟನೆಯೂ, ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಘಟನೆಗಳು ದೇವನ ಅಪ್ಪಣೆಯಿಲ್ಲದೆ ನಡೆಯುವುದಿಲ್ಲ ಎಂದು ಆಸ್ತಿಕರು ಬಲವಾಗಿ ನಂಬುವರು. ಅದರಲ್ಲೂ ಮುಸ್ಲಿಮರಲ್ಲಿ ಈ ನಂಬಿಕೆ ಹೆಚ್ಚು. ಯಾವುದೇ ತೆರನಾದ ಅವಘಡಕ್ಕೂ ಕಾಲವನ್ನಾಗಲಿ, ದುರದೃಷ್ಟ ವನ್ನಾಗಲೀ ಟೀಕಿಸಲು, ಶಪಿಸಲು ಹೋಗದೆ ಎಲ್ಲಾ ದೈವೇಚ್ಛೆ ಎಂದು ಇರುವುದರಲ್ಲೇ ತೃಪ್ತಿ ಕಾಣುತ್ತಾರೆ. ಒಮ್ಮೆ ಪಾಶ್ಚಾತ್ಯ ದೇಶವೊಂದರ ಯಾತ್ರಿಯೊಬ್ಬ (ನೆದರ್ ಲ್ಯಾಂಡ್ಸ್ ನ van der post ಎಂದು ನನ್ನ ನೆನಪು) ಸಹರಾ ಮರುಭೂಮಿಯ ಮುಖಾಂತರ ಪ್ರಯಾಣ ಬೆಳೆಸಿದಾಗ ಮೊರಾಕ್ಕೋ ದೇಶಕ್ಕೆ ಸೇರಿದ ಮರುಭೂಮಿಯಲ್ಲಿ ಒಂದು ದೃಶ್ಯ ಕಾಣಲು ಸಿಗುತ್ತದೆ.  ಮರುಭೂಮಿಯಲ್ಲಿ ವಾಸಿಸುವ ಬೆದೂಯಿನ್ (bedouin) ಬುಡಕಟ್ಟಿನವರು ಒಂದು ಕಡೆ ತಾತ್ಕಾಲಿಕ ಡೇರೆ ಹಾಕಿದ್ದನ್ನು ಈತ ಕಾಣುತ್ತಾನೆ. ಅವರೊಂದಿಗೆ ಹರಟುತ್ತಾ ಇದ್ದಾಗ ಒಮ್ಮೆಗೆ ಈ ಬಿರುಗಾಳಿ ಅಪ್ಪಳಿಸಿ ಕುರಿ, ಕೋಳಿ, ಒಂಟೆ, ಡೇರೆ, ಸಾಮಾನು ಪಾತ್ರೆ ಪಗಡಿ ಎಲ್ಲವನ್ನೂ ಬಾಚಿಕೊಂಡು ಹೋಗಿ ಬಿಡುತ್ತದೆ. ಮರುಭೂಮಿಯ ಬಿರುಗಾಳಿ (sand storm) ಗೊತ್ತೇ ಇದೆಯಲ್ಲಾ. ತನ್ನ ಹಾದಿಗೆ ಅಡ್ಡ ಬರುವ ಯಾವುದನ್ನೂ ಬಿಡದೆ ಬಾಚಿಕೊಂಡು ಹೋಗುವ ಬಿರುಗಾಳಿ. ನಮಗೆ ಪರಿಚಯವಿರುವ ಸುಂಟರ ಗಾಳಿಯಂತೆ. ಸಾವಿರ ಸುಂಟರ ಗಾಳಿ ಕೂಡಿಕೊಂಡು ಧಾಳಿ ಮಾಡಿದರೆ ಹೇಗಿರುತ್ತೋ ಹಾಗಿರುತ್ತದೆ ಮರುಭೂಮಿಯ ಬಿರುಗಾಳಿ. ಸುಮಾರು ಹೊತ್ತಿನ ನಂತರ ಬಿರುಗಾಳಿಯ ಅಬ್ಬರ ನಿಂತ ಮೇಲೆ ಒಂದೇ ಒಂದು ಶಬ್ದವನ್ನೂ ಆಡದೆ, ತುಟಿ ಪಿಟಿಕ್ಕನ್ನದೆ ತಮ್ಮ ಕೆಟ್ಟ ಘಳಿಗೆಯನ್ನು ತೆಗಳದೆ, ಇದೊಂದು ಸಾಮಾನ್ಯ ಘಟನೆ ಎನ್ನುವ ಭಾವದಿಂದ  ಸಿಕ್ಕಿದ್ದೇ ಶಿವ ಎಂದು ಬೀಸಿದ ಬಿರುಗಾಳಿ ಅಳಿದುಳಿಸಿದ ಸಾಮಾನುಗಳನ್ನು ಅತ್ಯಂತ ಶ್ರದ್ಧೆಯಿಂದ, ಜೋಪಾನದಿಂದ, ಸಂಯಮದಿಂದ ಹೆಕ್ಕುತ್ತಿದ್ದನ್ನು ನೋಡಿದ ಈ ಪಾಶ್ಚಾತ್ಯ ದಂಗಾಗಿ ನಿಲ್ಲುತ್ತಾನೆ. ಕೆಲವೇ ಕ್ಷಣಗಳಲ್ಲಿ ತಮ್ಮ ಬದುಕನ್ನೇ ಮೂಲೋತ್ಪಾಟನೆ ಮಾಡಿದ ಬಿರುಗಾಳಿಯನ್ನು ಶಪಿಸದೇ, ಅತ್ಯಂತ ಸಮಯದಿಂದ ಸಹಿಸಿ, ಶಾಂತ ಚಿತ್ತತೆಯಿಂದ ಅಳಿದುಳಿದುದದನ್ನು ಆರಿಸಿ ಕೊಳ್ಳುತ್ತಿದ್ದ ಬೆದೂಯಿನ್ ರನ್ನು ಕಂಡು ಆತನಿಗೆ ತನ್ನ ಕಣ್ಣುಗಳ ನ್ನು ನಂಬಲಾಗಲಿಲ್ಲ. ಅಲ್ಲಿದ್ದ ಒಬ್ಬನಿಗೆ ಈ ಕುರಿತು ಕೇಳಿದಾಗ ಅವನು ಹೇಳಿದ್ದು, ನಮಗೆ ಈ ಸ್ಥಿತಿ ತಂದ ಬಿರುಗಾಳಿಯನ್ನು ನಾನು ಶಪಿಸಿ ಪಡೆಯುವುದಾದರೂ ಏನನ್ನು? ಹೋದ ಸಾಮಾನುಗಳು, ಆದ ನಷ್ಟ, ತಿರುಗಿ ಬರುತ್ತದೆಯೇ? ಹೆಚ್ಚು ವಿಳಂಬ ಮಾಡದೇ “ಅಲ್ಹಂದು ಲಿಲ್ಲಾಹ್’” (ದೇವರಿಗೆ ಸರ್ವಸ್ತುತಿ) ಎಂದು ಇರುವುದನ್ನು ಆರಿಸಿ ಕೊಂಡು ಮುಂದಿನ ದಾರಿ ನೋಡುವುದು ತಾನೇ ಜಾಣತನ ಎಂದು ಆತನಿಗೆ ಮರು ಪ್ರಶ್ನೆ ಹಾಕಿದಾಗ ಬಿಳಿಯ ಆ ಪ್ರಶ್ನೆಗೆ ಉತ್ತರ ಕಾಣದೆ ತನ್ನ ದೇಶದಲ್ಲಾಗಿದ್ದರೆ ಏನು ಮಾಡುತ್ತಿದ್ದರು ಎಂದು ಯೋಚಿಸುತ್ತಾ ತನ್ನ ದಾರಿ ಹಿಡಿಯುತ್ತಾನೆ.  

ಎಂಥದ್ದೇ ಗಂಭೀರವಾದ, ಕ್ಲಿಷ್ಟಕರವಾದ, ದಬ್ಬಾಳಿಕೆಗೆ ಒಳಗಾದಾಗ, ಮಾನಸಿಕ ಕ್ಲೇಶ, ದೈಹಿಕ ನೋವು, ಅಗಲಿಕೆ ಬಂದಾಗಲೂ ಅರಬರು ಹೇಳುವುದು “ಅಲ್ಹಂದು ಲಿಲ್ಲಾಹ್”, ಅಥವಾ “ನಿನ್ನಿಂದಲೇ ಬಂದೆವು, ನಿನ್ನಲ್ಲಿಗೇ ನಾವು ಮರಳುವೆವು, (ಇನಾ ಲಿಲ್ಲಾಹಿ ವಯಿನ್ನಾ ಇಲೈಹಿ ರಾಜಿಊನ್) ಎನ್ನುವ ಮಾತನ್ನು ಹೇಳುತ್ತಾರೆ. ವಿಶೇಷವಾಗಿ ನಿಧನದ ವಾರ್ತೆ ಕೇಳಿದಾಗ ಈ ಮಾತನ್ನು ಹೇಳಲೇ ಬೇಕು. ಅಯ್ಯೋ ಪಾಪ, ಯಾವಾಗ ಸತ್ರು, ಪಾಪ, ಎಷ್ಟು ಚೆನ್ನಾಗಿದ್ರು, ಚಿಕ್ಕ ವಯಸ್ಸು, ಸ್ವಲ್ಪ ಮೊದಲು ತಾನೇ  ಮಾತನಾಡಿಸಿದ್ದೆ…. ಎಂದೆಲ್ಲಾ ಬಡಬಡಿಸುವ ಗೋಜಿಗೆ ಅರಬರು ಹೋಗುವುದಿಲ್ಲ. ಏಕೆಂದರೆ ಎಲ್ಲವೂ ವಿಧಿಯ ಕೈಯ್ಯಲ್ಲಿ, ಆ ವಿಧಿಯನ್ನು ಕಾರ್ಯಗತ ಗೊಳಿಸುವವನೇ ಮೇಲೆ ಕೂತಿರುವ ಆ ಪರಮಾತ್ಮ. ಮತ್ತೊಂದು ಹದೀಸ್ ಸೂಕ್ತದಲ್ಲಿ “ಆದಮನ (ಆದಿ ಮಾನವ) ಮಗ ತಪ್ಪು ತಿಳಿದಿದ್ದಾನೆ. ಘಳಿಗೆಯನ್ನು ಅವನು ಶಪಿಸುತ್ತಾನೆ ಆದರೆ ನಾನೇ ಆಗಿದ್ದೇನೆ ಆ ಘಳಿಗೆ. ಒಳಿತು ಮತ್ತು ಎಲ್ಲವೂ ನನ್ನ ಕೈಗಳಿಂದಲೇ ಬರುತ್ತವೆ. ಮತ್ತು ಹಗಲನ್ನು ಹಿಂಬಾಲಿಸುವ ಇರುಳು ಸಹ ನನ್ನಿಂದಲೇ” ಎಂದು ದೇವರು ಹೇಳುತ್ತಾನೆ.       

ನಮ್ಮ ಅಜಾಕರೂಕತೆಯಿಂದ ಉಂಟಾಗುವ ಅನಾಹುತಗಳಿಗೆ ಸುಖಾ ಸುಮ್ಮನೆ ಸಮಯವನ್ನು ಶಿಲುಬೆಗೆ ಏರಿಸದೆ ಹೆಚ್ಚು ಜಾಗರೂಕರಾಗೋದೇ ಲೇಸು ಅಲ್ಲವೇ?

ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ

ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ? where?

ಶಾಪ್ಪಿಂಗ್ ಗೆಂದು ಮೊನ್ನೆ ಹೈಪರ್ ಮಾರ್ಕೆಟ್ ಗೆ ಹೋದೆವು. ಬೇಕಾದ ಸಾಮಾನುಗಳನ್ನು ತೆಗೆದುಕೊಂಡ ನಂತರ ನನ್ನ ಮಗಳು ಚಾಕಲೇಟ್ ಸೆಕ್ಷನ್ ಕಡೆ ಓಡಿದಳು. ಅವಳನ್ನು ಹಿಂಬಾಲಿಸಿದ ನಾನು ಸುಮಾರು ೨೦೦ ಮೀಟರ್ ಉದ್ದದ ಚಾಕಲೇಟ್ ಶೆಲ್ಫ್ ಗಳಲ್ಲಿ ಇಟ್ಟಿದ್ದ ತರಾವರಿ ಚಾಕಲೇಟ್ ಗಳನ್ನು ನೋಡುತ್ತಾ ಇದ್ದಾಗ ಒಂದು ಆಫರ್ ಕಣ್ಣಿಗೆ ಬಿತ್ತು. ಆಫರ್ ಇದ್ದದ್ದು ‘ಸ್ನಿಕ್ಕರ್ಸ್’ ಚಾಕಲೇಟ್ ಮೇಲೆ. ಒಂದು ಚಾಕಲೇಟ್ ಬಾರ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ. ಹತ್ತಿರ ನಿಂತಿದ್ದ ನನ್ನ ಪತ್ನಿ ಹೇಳಿದಳು ಪಾಪ, ಅಲ್ಲಿ ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಸಿದ್ದಾರೆ ಎಂದು ಜನ ಸಂಕಟ ಪಡುತ್ತಿದ್ದರೆ ಇಲ್ಲಿ ಅಗ್ಗದ ಪೆಟ್ರೋಲ್ ಸಾಲದು ಎಂದು ಫ್ರೀ ಬೇರೆ ಕೊಡುತ್ತಿದ್ದಾರೆ ಎಂದು ಕನಿಕರ ಪಟ್ಟಳು. ಆದರೆ ಈ ಕೊಡುಗೆಯನ್ನ ಜನ ಉಪಯೋಗಿಸಿ ಕೊಳ್ಳಲಾರರು. ಏಕೆಂದರೆ ಇಲ್ಲಿ ಪೆಟ್ರೋಲ್ ಗೆ ಲೀಟರ್ ಒಂದಕ್ಕೆ ಇಲ್ಲಿನ ೫೦ ಪೈಸ. ಅಂದರೆ ಹೆಚ್ಚು ಕಡಿಮೆ ಆರು ರೂಪಾಯಿಗಳು. ಚಾಕಲೇಟ್ ತಿಂದ ನಂತರ ಅದರ ಕವಚವನ್ನು ಜೋಪಾನವಾಗಿ ಇಟ್ಟುಕೊಂಡು ಪೆಟ್ರೋಲ್ ಹಾಕಿಸಿ ಕೊಳ್ಳುವ ಜಾಯಮಾನದವರಲ್ಲ ಅರಬರು. ಕವಚ ಹಿಡಿದು ಕೊಂಡು ಪೆಟ್ರೋಲ್ ಹಾಕಿಸಿ ಕೊಳ್ಳುವ ಅವಶ್ಯಕತೆ ನನಗಂತೂ ಇಲ್ಲ. ಕಂಪೆನಿಯ ಕಾರು, ಕಂಪೆನಿಯದೆ ಪೆಟ್ರೋಲು. ಯಾರದೋ ದುಡ್ಡು, ಎಲ್ಲಮನ್ ಜಾತ್ರೆ ಥರ. ಹಾಗಾಗಿ ಕವಚ ಸಲೀಸಾಗಿ ತಿಪ್ಪೆ ಸೇರುತ್ತದೆ.  

ಪೆಟ್ರೋಲ್ ಗೆ ಮೊದಲು ಒಂದು ಲೀಟರಿಗೆ ಇಲ್ಲಿನ ಒಂದು ರಿಯಾಲ್ ಇತ್ತು. ಅಂದರೆ ೧೨ ರೂಪಾಯಿ. ಕಳೆದ ವರ್ಷಗಳ ಹಿಂದೆ ದರ ಕಡಿತ ಮಾಡಿ ಆರು ರೂಪಾಯಿಗೆ ಇಳಿಸಿದರು. ಭಾರತದಲ್ಲಿ ‘ದರ ಕಡಿತ’ ಖಾದಿ ಭಂಡಾರ ಬಿಟ್ಟು ಬೇರೆಲ್ಲಾದರೂ ಕಂಡಿದ್ದೀರಾ?  

ಈಗ ಕರುಬದಿರಿ ನನ್ನ ಅದೃಷ್ಟಕ್ಕೆ. ನನ್ನ ‘ಟ್ರಾಲಿ’ ಯಲ್ಲಿರುವ ಒಂದು ಕೆಜಿ ಟೊಮೆಟೋ ಹಣ್ಣಿಗೆ ಭಾರತದ ಎಪ್ಪತ್ತು ರೂಪಾಯಿ ಪೀಕ್ತಾ ಇದ್ದೀನಿ. ಅಕ್ಕಿ ಕೆಜಿಗೆ ನಲವತ್ತಾರು ರೂಪಾಯಿ. ಸಮಾಧಾನ ಆಯಿತೆ? ಟೊಮೆಟೋ ಇಲ್ಲದೆ ಟೊಮೆಟೋ ಗೊಜ್ಜು  ಆಗುವಂತಿದ್ದರೆ? ಅಕ್ಕಿ ಇಲ್ಲದೆ ಅನ್ನ ಆಗುವಂತಿದ್ದರೆ?