ಈಗ ಲಿಬ್ಯಾದ ಸರತಿ

೭೦ ರ ದಶಕದ ಭಯಾನಕ ವೆಸ್ಟ್ ಇಂಡೀಸ್ ಬೌಲರುಗಳ ಮಾರಕ ಬೌಲಿಂಗ್ ಗೆ ತರಗೆಲೆಗಳಂತೆ ಉದುರುತ್ತಿದ್ದ ಅತಿರಥ ಮಹಾರಥ ದಾಂಡಿಗರಂತೆ ಜನಕ್ರಾಂತಿಯ ಬಿರುಗಾಳಿಗೆ ತತ್ತರಿಸುತ್ತಿದ್ದಾರೆ ಮಧ್ಯಪ್ರಾಚ್ಯದ ನಿರಂಕುಶಾಧಿಕಾರಿಗಳು. ಕ್ರಾಂತಿ ಆರಂಭವಾದ ಪುಟ್ಟ ಅರಬ್ ರಾಷ್ಟ್ರ ಟುನೀಸಿಯಾದ ಅಧ್ಯಕ್ಷ ೨೧ ವರ್ಷಗಳ ಅಧಿಕಾರದ ನಂತರ ತನ್ನ ವಿಕೆಟ್ ಒಪ್ಪಿಸಿದರೆ ಅಲ್ಲೇ ಹತ್ತಿರದ ಈಜಿಪ್ಟ್ ನ ಅಧ್ಯಕ್ಷ ೨೯ ವರ್ಷಗಳ ದೀರ್ಘ ಬ್ಯಾಟಿಂಗ್ ನಂತರ ತನ್ನ ಇನ್ನಿಂಗ್ಸ್ ಬಲವಂತವಾಗಿ ಡಿಕ್ಲೇರ್ ಮಾಡಿಸಿಕೊಂಡ. ಈಗ ಲಿಬ್ಯಾದ ಸರತಿ. ಕ್ಯೂಬಾದ ಕ್ಯಾಸ್ಟ್ರೋ ನಂತರದ ಬಹುಶಃ ವಿಶ್ವದ ದೀರ್ಘಾವಧಿಯ ಅಧ್ಯಕ್ಷನಿರಬೇಕು ಮುಅಮ್ಮರ್  ಗದ್ದಾಫಿ. ಟುನೀಸಿಯಾ, ಈಜಿಪ್ಟ್ ನ ಕ್ರಾಂತಿಗಳನ್ನು ಕಂಡ ಲಿಬ್ಯನ್ನರಿಗೆ ತಮ್ಮ ದೇಶದ ಆಗುಹೋಗುಗಳ ಬಗ್ಗೆ ಹೇಸಿಗೆ ಹುಟ್ಟಲು ಶುರುವಾಯಿತು. ಎಷ್ಟಿದ್ದರೂ ಲಿಬ್ಯಾದ ಸ್ವಾತಂತ್ರ್ಯ ಹೋರಾಟಗಾರ, ಮರಳುಗಾಡಿನ ಸಿಂಹ “ಒಮರ್ ಮುಖ್ತಾರ್” ನ ನಾಡಿನ ಜನರಲ್ಲವೇ? ಆ ಕೆಚ್ಚು ಶರೀರದ ಯಾವುದೋ ಮೂಲೆಯಲ್ಲಾದರೂ ಅಡಗಿ ಕೂತಿರಲೇಬೇಕು. ಜನ ಬೀದಿಗೆ ಇಳಿದರು. ಸಾವು ನೋವುಗಳಾದವು. ಸಾವಿರಾರು ಜನ ಸತ್ತರು ಎನ್ನುವ ಪುಕಾರೂ ಹಬ್ಬಿತು.      

ಈ ಆಧುನಿಕ “ಇ” ಯುಗದ ಕ್ರಾಂತಿಗಳ ವಿಶೇಷ ಏನೆಂದರೆ  ವೆಬ್ ತಾಣಗಳ ಸಾರಾಸಗಟು ಬಳಕೆ. ದೀರ್ಘಾವಧಿ ತಮ್ಮ ಕುರ್ಚಿಗಳಲ್ಲಿ ಕೂತು ಕುಂಭಕರ್ಣ ನ ನಿದ್ದೆಗೆ ಪರವಶರಾದವರ ಪತನಕ್ಕೆ ನಾಂದಿ ಹಾಡಿದ್ದು ಟ್ವಿಟ್ಟರ್, ಫೇಸ್ ಬುಕ್. ಇವು ತಮ್ಮ ಹೆಸರುಗಳನ್ನು ಚರಿತ್ರೆಯ ಪುಟಗಳಿಗೆ ಅಮೋಘವಾಗಿ ಸೇರಿಸಿ ಕೊಂಡವು. ಬರೀ ಕ್ರಾಂತಿ ಗೊಳಗಾದ ದೇಶಗಳ ಜನ ಮಾತ್ರವಲ್ಲ ವಿಶ್ವ ಸಮುದಾಯವೇ ಈ ಜನರ ತುಡಿತಕ್ಕೆ ಸಹಾನುಭೂತಿ ತೋರಿಸಿ ತಮ್ಮ ಟ್ವೀಟು ಗಳನ್ನು ದೇಣಿಗೆಯಾಗಿ ನೀಡಿದರು. ಮುಬಾರಕ್ ದೇಶಕ್ಕೆ ಮಾತ್ರ ಕೆಟ್ಟವನು, ಆದರೆ ಗದ್ದಾಫಿ ಮನುಕುಲಕ್ಕೆ ಕೆಟ್ಟವನು ಎಂದು ಒಬ್ಬ ಟ್ವೀಟಿಸಿದ. ಮುಬಾರಕ್ ತುಂಬಾ ಜನರನ್ನೇನೂ ಕೊಲ್ಲಲಿಲ್ಲ ಆದರೆ ಗದ್ದಾಫಿಗೆ ಮಾತ್ರ ಕೊಳ್ಳುವ ಕೆಲಸ ಸ್ವಲ್ಪ ಸಲೀಸಾಗೇ ಕಂಡಿತು. ಇದ್ದಕ್ಕಿದ್ದ ಹಾಗೆ ಲಿಬ್ಯಾದ ಮಹಿಳೆಯ ಬ್ಲಾಗೊಂದನ್ನು ಓದಿದ ನೆನಪು ಬಂತು. ಬ್ಲಾಗ್ ನ ಹೆಸರು ಸರಿಯಾಗಿ ನೆನಪಿರಲಿಲ್ಲ ಎಂದಿನಂತೆ ಗೂಗ್ಲ್ ಸಹಾಯಕ್ಕೆ ಬಂದ. “ಖದೀಜಾ ತೆರಿ” ಯ ಬ್ಲಾಗ್ ತೆರೆದು ಕೊಂಡಿತು. ಆಕೆ ಸುರಕ್ಷಿತ ಎಂದು ಓದಿ ಮನಸ್ಸು ನಿರಾಳವಾಯಿತು. “ ನಾನಿರುವ ಸ್ಥಳದಿಂದ ನಮಗೇನೂ ತಿಳಿಯುತ್ತಿಲ್ಲ, ನಿಮ್ಮಂತೆಯೇ ನಾನೂ ಕೂಡಾ ನೆಟ್ ಅವಲಂಬಿಸಿದ್ದೇನೆ ಸುದ್ದಿಗಾಗಿ” ಎಂದು ಬರೆದಿದ್ದಳು.

I made a small terrarium. And then I thought how similar Libya is to a terrarium… everything happening inside with no intervention from outside… the whole world is looking in.

ಒಂದು ವೃತ್ತಾಕಾರದ ಗಾಜಿನ ಬುರುಡೆ (terrarium) ಯಲ್ಲಿ ಒಂದಿಷ್ಟು ಮಣ್ಣು, ಎಲೆಗಳನ್ನು ಹಾಕಿ, ಅದರ ಚಿತ್ರ ತನ್ನ ಬ್ಲಾಗ್ ನಲ್ಲಿ ಹಾಕಿ ಮೇಲಿನ ಮಾತುಗಳನ್ನು ಬರೆದಿದ್ದಳು ಖದೀಜಾ. ಆಕೆಯ ಅರ್ಥಗರ್ಭಿತ ಮಾತುಗಳು ತುಂಬಾ ಇಷ್ಟವಾದವು. ತಮಗೂ ಆಗಿರಬಹುದು ಅಲ್ಲವೇ? ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ನಾವು ನೆಲೆಸಿರ ಬಹುದು ಆದರೆ ಮಾನವ ಭಾವನೆಗಳು ಎಷ್ಟೊಂದು identical ನೋಡಿ. ಲಿಬ್ಯಾ ದೇಶವನ್ನು ನಾನು ಕಂಡಿಲ್ಲ, ಆ ಮಹಿಳೆಯನ್ನು ನಾನು ನೋಡಿಲ್ಲ, ಆದರೂ ಜೇಡ ತನ್ನ ಬಲೆಯನ್ನು ಹೆಣೆದ ಎಲ್ಲರ ಸುತ್ತ ಯಾವುದೇ ಬೇಧ ಭಾವವಿಲ್ಲದೆ. ನಿಜ ಹೇಳಬೇಕೆಂದರೆ ಈ ಸರೀ ರಾತ್ರಿಯಲ್ಲಿ (ಮೂರೂವರೆ ಘಂಟೆ) ಬ್ಲಾಗ್ ಪುಟ ಬರೆಯುವ ಯೋಚನೆ ಇರಲಿಲ್ಲ. ಲಿಬ್ಯಾದ ಬಗ್ಗೆ ಒಂದು ವಾಕ್ಯದ ಅಥವಾ ೧೪೦ ಅಕ್ಷರಗಳ ವಟವಟಗುಟ್ಟೋಣ ಎಂದು ಕೂತಾಗ ಹೊರ ಹೊಮ್ಮಿತು ಈ ಲೇಖನ.      

ಲಿಬ್ಯಾದ ಜನರ ಬಗ್ಗೆ, ಅಲ್ಲಿನ ಜನಜೀವನದ ಬಗ್ಗೆ ಅರಿಯಬೇಕಿದ್ದರೆ ಖದೀಜ ತೆರಿ ಯ ಬ್ಲಾಗ್ ಸಂದರ್ಶಿಸಿ. http://khadijateri.blogspot.com/

“ತಾಯ್ ಚೀ” ಇರಲಿ…“ಎರ್ ನಾಯ್” ಬೇಡ

“ತಾಯ್ ಚೀ” ಬಗ್ಗೆ ಹೇಳುವುದೇನೂ ಬೇಡವಲ್ಲ? ಚೀನಾದ ಅಥವಾ ಇಂಪೋರ್ಟೆಡ್ ವ್ಯಾಮೋಹಕ್ಕೆ ಬಿದ್ದ ಭಾರತೀಯರು ನಮ್ಮದೇ ಆದ ಯೋಗಾಸನವನ್ನು ನಿರ್ಲಕ್ಷಿಸಿ ತಾಯ್ ಚೀ ಕಲಿಯುತ್ತಿದ್ದಾರಂತೆ. ಚೀನಾದ ಅಲಾರಂ ಗಡಿಯಾರ, ಮಕ್ಕಳ ಆಟಿಕೆ ಮಾತ್ರ ಏಕೆ ಅವರ ಸಾಮಾಜಿಕ ಅಭ್ಯಾಸಗಳೂ ಇರಲಿ ಎನ್ನುವ ಧೋರಣೆ ಇರಬಹುದು ಚೀನಾದ ಈ ವ್ಯಾಯಮದ ಕುರಿತ ಆಸಕ್ತಿಯ ಹಿಂದೆ. ಇರಲಿ ಬಿಡಿ, ‘ತಾಯ್ ಚಿ’ ಶರೀರದ ಆರೋಗ್ಯಕ್ಕೆ ಒಳ್ಳೆಯದೇ, ಆದರೆ, ಎರ್ ನಾಯ್ ಮಾತ್ರ ಶರೀರಕ್ಕೆ ಒಳ್ಳೆಯದಾದರೂ, ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ ಎನ್ನುವುದಂತೂ ನಿಜವೇ.

ಅಲ್ರೀ, ಏನೀ ‘ಎರ್ ನಾಯ್’?

‘ಎರ್ ನಾಯ್’ ಎಂದರೆ ಚೀನೀ ಭಾಷೆಯಲ್ಲಿ “ಎರಡನೇ ಹೆಂಡತಿ” ಅಂತ. ಚೀನೀ ಸಮಾಜ ಇದನ್ನು ಒಪ್ಪದಿದ್ದರೂ ಬಹುತೇಕ, ಮೊದಲ ಪತ್ನಿಯರೂ ಸೇರಿ, ಚೀನೀಯರು ಇದರ ವಿರುದ್ಧ ದೊಡ್ಡ ಸ್ವರ ಎತ್ತದೆ ಕಂಡೂ ಕಾಣದಂತೆ ತಮ್ಮ ದೃಷ್ಟಿಯನ್ನು ಬೇರೆಡೆ ನೆಡುತ್ತಾರೆ. “ಎರ್ ನಾಯ್” ಯನ್ನು ಸಾಕುವುದು ಒಂದು ರೀತಿಯ ಪ್ರತಿಷ್ಠೆ ಚೀನಾದಲ್ಲಿ. ಮೇಲ್ಮಧ್ಯಮ ವರ್ಗದ ಗಂಡಸರು ಕಾಸು ಹೆಚ್ಚಿದ್ದರೆ ಈ ಸೌಲಭ್ಯ ಹೊಂದಿರುತ್ತಾರೆ. “ಎರ್ ನಾಯ್” ಗಳು ಅವಸರದಿಂದ ಹೆಕ್ಕಲ್ಪಟ್ಟ ಅಂತಿಂಥ ಸ್ತ್ರೀಯರಲ್ಲ. ಇವರು ಸುಶಿಕ್ಷಿತರೂ, ಆಧುನಿಕ ಮನೋಭಾವದವರೂ ಆದ ಚೆಂದುಳ್ಳಿ ಹೆಣ್ಣುಗಳು. ಇವರ ಉಪಯೋಗ ಬರೀ “ವೀಕೆಂಡ್” ಗಾಗಿಯೋ ಅಥವಾ boredom ಕಳೆಯಲಿಕ್ಕೋ ಅಲ್ಲ. ಇವರು ತಮ್ಮ ಪುರುಷರೊಂದಿಗೆ business meeting ಗಳಲ್ಲಿ ಪಾಲುಗೊಳ್ಳುತ್ತಾರೆ. ಇವರನ್ನು ನೋಡಿ business partner ಗಳು ಪ್ರಭಾವಿತರಾಗುತ್ತಾರೆ. ಗಟ್ಟಿ ಕುಳ ಎಂದುಕೊಳ್ಳುತ್ತಾರೆ. ಒಂದು ರೀತಿಯ ಷೋ ಪೀಸು. ಕೆಲವರು louis vuitton ಬ್ರೀಫ್ ಕೇಸು, “ಗುಚ್ಚಿ” ಪರ್ಫ್ಯೂಮು, “ಫ್ಲೋರ್ ಶೈಮ್” ಶೂ ಹಾಕಿಕೊಂಡು ಕ್ಲಯಂಟ್ ಗಳನ್ನು ಇಂಪ್ರೆಸ್ಸ್ ಮಾಡಲು ಹೊರಟರೆ ಇವರದು ಬೇರೆಯದೇ ಆದ ವಿಧಾನ. ತಮ್ಮ ಮಡದಿಯರ ಉದರಕ್ಕೆ ಬೆಂಕಿ ಹಾಕಿ ಇಂಪ್ರೆಸ್ ಮಾಡೋ ವಿಧಾನ.

ವಿವಾಹದ ಬಗ್ಗೆ ಚೀನಿಯರದು ಟೇಕ್ ಇಟ್ ಈಜಿ attitude. ರೋಷದಿಂದ ಸಂಪತ್ತಿನ ಹಿಂದೆ ಬಿದ್ದ ಪರಿಣಾಮವಿರಬೇಕು. ಒಬ್ಬ ಪಾಶ್ಯಾತ್ಯ ವ್ಯಕ್ತಿಯ ಪ್ರಕಾರ ಇಲ್ಲಿ ಚೀನಾದಲ್ಲಿ ವಿವಾಹ ಎನ್ನುವುದು ಎರಡು ಹೃದಯಗಳ ಬೆಸುಗೆ ಅಲ್ಲ. ಒಂದು ರೀತಿಯ ಎರಡು ಕುಟುಂಬಗಳ ಮಧ್ಯೆಯ ಒಪ್ಪಂದ. ಅದರ ಮೇಲೆ ಬೇರೆ ದೇಶಗಳ ರೀತಿ ಚೀನಾದಲ್ಲಿ ಮಾನವೀಯ ಕ್ರಾಂತಿ (humanist revolution) ಆಗಿಲ್ಲವಂತೆ. ಹಾಗಾಗಿ ವಿವಾಹ ತಲೆ ಕೆಡಿಸಿ ಕೊಳ್ಳುವಂಥ ವ್ಯವಸ್ಥೆಯಲ್ಲ. ವ್ಯವಸ್ಥೆ ಹೀಗಿರುವಾಗ ಜಾಣ, ಚೆಂದುಳ್ಳಿ ಹೆಣ್ಣುಗಳು “ಎರ್ ನಾಯ್” ಪಟ್ಟಕ್ಕೆ ಮೋಹಿತರಾಗುತ್ತಾರೆ. ಇರುವವನು ತಾನೇ ಈ ರೀತಿಯ ಎರಡನೇ ಹೆಣ್ಣನ್ನು ಇಟ್ಟು ಕೊಳ್ಳಲು ಸಾಧ್ಯ? ಮುಂದುವರಿದ ನಗರ ಗಳಲ್ಲಂತೂ ಶೇಕಡ ೮೦ ಶ್ರೀಮಂತ ಪುರುಷರಿಗೆ ಈ ತೆರನಾದ ಸಂಗಾತಿಗಳಿರುತ್ತಾರಂತೆ. ಮಹಿಳೆಯರೂ ಸಹ ಧನದ ಹಿಂದೆ ಓಡುವುದರಿಂದ ಯಾವುದೇ arrangement (ವಿವಾಹ ಅಥವಾ ಎರ್ ನಾಯ್) ನಲ್ಲಿ ಧನವಂತನನ್ನೇ ಇಷ್ಟ ಪಡುತ್ತಾಳೆ. ಈ ಧೋರಣೆಯ ಹಿಂದೆ economic interest ಸಹ ಇದೆ. ಒಬ್ಬ ಮಹಿಳೆಯ ಈ ಮಾತನ್ನು ಕೇಳಿ; “ ನಾನು ನನ್ನವನಿಂದ ತ್ಯಜಿಸಲ್ಪಟ್ಟಾಗ ಸೈಕಲ್ಲಿನ ಮೇಲೆ ಕೂತು ಕಣ್ಣೀರು ಹಾಕುವುದಕ್ಕಿಂತ BMW ಕಾರಿನಲ್ಲಿ ಕೂತು ಕಣ್ಣೀರು ಹಾಕಲು ಇಷ್ಟಪಡುತ್ತೇನೆ”. ಅಂದರೆ ಅವನು ನನ್ನನ್ನು ಬಿಟ್ಟರೂ BMW ನನ್ನ ಪಾಲಾದರೆ ಸಾಕು ಎಂದು. ‘crass materialism’ ತರುವ ಧೋರಣೆ ಇದು.

ಚೀನಾದ ಮಾಜಿ ಅಧ್ಯಕ್ಷ Jiang Zemin ಗೂ ಒಬ್ಬ ‘ಎರ್ ನಾಯ್’ ಇತ್ತಂತೆ. ಆಕೆ ಹಾಡುಗಾರ್ತಿ ಕೂಡಾ.

ನಮ್ಮ ದೇಶದ ಧೋರಣೆ ಏನು?

ನಮ್ಮ ದೇಶದಲ್ಲಿ ಈ ರೀತಿಯಾಗಿ ಪತ್ನಿಯಿದ್ದೂ ಮತ್ತೊಬ್ಬ ಸ್ತ್ರೀಯನ್ನು ಸಂಗಾತಿಯಾಗಿ ಇಟ್ಟುಕೊಳ್ಳುವುದಕ್ಕೆ ಇಟ್ಟು ಕೊಂಡವಳು, ಎಂದೂ ಸ್ವಲ್ಪ ತುಂಟ ತಮಾಷೆಯಾಗಿ “ಕೀಪ್” ಮತ್ತು “ಸ್ಟೆಪ್ನಿ” ಎಂದೂ ಕರೆಯುತ್ತಾರೆ. ಈ ರೀತಿಯಾಗಿ ವಿವಾಹದ ಹೊರಗೆ ಸಂಬಂಧ ಇಟ್ಟುಕೊಂಡ ಪುರುಷನನ್ನು ಸಮಾಜ ಅಸೂಯೆ ಮಿಶ್ರಿತ ಮೆಚ್ಚುಗೆಯಿಂದ ನೋಡಿದರೆ ಆ ಸೌಲಭ್ಯ ಮಹಿಳೆಗೆ ಇಲ್ಲ. ಇಟ್ಟು ಕೊಂಡವಳು, ಕೀಪ್ ಅಥವಾ ಸ್ಟೆಪ್ನಿ ಎಂದು ಕರೆಯುವುದರ ಬಗ್ಗೆಯೂ ಜನರಲ್ಲಿ ವಿಶೇಷವಾಗಿ ಫೆಮಿನಿಸ್ಟ್ ಪೈಕಿಯವರಿಗೆ ಭಾರೀ ವಿರೋಧವಿದೆ. ಈ ರೀತಿಯಾಗಿ ಕರೆಯುವುದು ಹೆಣ್ಣನ್ನು ನಿಕೃಷ್ಟವಾಗಿ ಕಂಡಂತೆ ಎನ್ನುವುದು ಇವರ ಅಭಿಪ್ರಾಯ. ದಾರಿ ಹೋಕರು ಸ್ಟೆಪ್ನಿ ಎಂತಲೋ, ಇಟ್ಟುಕೊಂಡವಳು ಎಂತಲೋ ಕರೆದುಕೊಳ್ಳಲಿ, ಆದರೆ ನಮ್ಮ ಸರ್ವೋಚ್ಚ ನ್ಯಾಯಾಲಯವೇ ಹಾಗೆ ಸಂಬೋಧಿಸಿದರೆ ಹೇಗಿರಬಹುದು?

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಒಂದು ತಗಾದೆ ಸರ್ವೋಚ್ಚ ನ್ಯಾಯಾಲಯದ ಕಟ್ಟೆ ಹತ್ತಿತು. ಇಟ್ಟು ಕೊಂಡ ವಳು ಖರ್ಚು ವೆಚ್ಚಕ್ಕೆ ಅರ್ಹಳೋ ಎಂದು. ಆ ಸಂದರ್ಭದಲ್ಲಿ ನ್ಯಾಯಾಲಯ “ಕೀಪ್” ಜೀವನಾಂಶಕ್ಕೆ ಅರ್ಹಳಲ್ಲ ಎನ್ನುವ ತೀರ್ಪು ನೀಡಿತು. ಕೀಪ್ ಪದವನ್ನು ಸಾಕ್ಷಾತ್ ನ್ಯಾಯ ಮೂರ್ತಿಗಳ ಬಾಯಲ್ಲಿ ಕೇಳಿದ ‘ಸೋಲಿಸಿಟರ್ ಜನರಲ್’ ಇಂದಿರಾ ಜೈಸಿಂಗ್ ತಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ. ಈ ೨೧ ನೆ ಶತಮಾನದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಗೆ ತಾನೇ ಓರ್ವ ಮಹಿಳೆಗೆ ಈ ಪದವನ್ನ ಉಪಯೋಗಿಸಬಲ್ಲುದು ಎಂದು ಗುಡುಗಿದರು. ಈ ಪದವನ್ನು ಕಡತದಿಂದ ತೆಗೆದು ಹಾಕಲು ನಾನು ಅರ್ಜಿ ಸಲ್ಲಿಸುತ್ತೇನೆ, ಅಲ್ಲಿಯವರೆಗೆ ಈ ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರತಿಭಟಿಸಿದರು. ಕೊನೆಗೆ keep ಬದಲಿಗೆ concubine ಪದ ಆಗಬಹುದೋ ಎಂದು ಕೇಳಿ ಜೈಸಿಂಗ್ ರನ್ನು ಸಮಾಧಾನ ಪಡಿಸಿತು ನ್ಯಾಯಾಲಯ. ಸುಪ್ರೀಂ ಕೋರ್ಟೇ ಈ ರೀತಿ ಪದ ಪ್ರಯೋಗ ಮಾಡಿರುವಾಗ ನಾವು ಯಾವ ಲೆಕ್ಕ ಎನ್ನುತ್ತೀರೋ? ಸಂಬಂಧ ಇಟ್ಟು ಕೊಂಡ ಹೆಣ್ಣಿಗೆ ಜೀವನಾಂಶ ಇಲ್ಲ, ಅದರಲ್ಲೂ “ಒಂದು ರಾತ್ರಿಯ ನಿಲುಗಡೆ” (one night stand) ಯವರಿಗಂತೂ ಈ ಸೌಲಭ್ಯ ಇಲ್ಲವೇ ಇಲ್ಲ ಎಂದು ತೀರ್ಪ ಹೊರಬಿದ್ದಿತು ಸರ್ವೋಚ್ಚ ನ್ಯಾಯಾಲಯದಿಂದ.

ಜಿಜ್ಞಾಸೆ: ಎರಡನೆಯ, ಅನಧಿಕೃತ ಹೆಣ್ಣು “ಕೀಪ್” ಆಗುವುದಾದರೆ, ಮೊದಲನೆಯವಳು ಗಂಡಿನ ಮೇಲೆ “ಹೇರಲ್ಪಟವಳು” ಎಂದೋ?

ನಾವು “ಅಕಶೇರುಕ” ರಾಗಿದ್ದು ಎಂದಿನಿಂದ?

ಪಾಕಿಸ್ತಾನ ಅಮೆರಿಕೆಯ ಒಂದು ಪಪ್ಪೆಟ್. ಇದು ಪಾಕಿಸ್ತಾನದ ಸರಕಾರಕ್ಕಿಂತ ಅಲ್ಲಿನ ಜನಕ್ಕೆ ಚೆನ್ನಾಗಿ ಗೊತ್ತು. ತಮ್ಮ ಸರಕಾರಗಳು ಪ್ರತೀ ನಿರ್ಧಾರಕ್ಕೂ ವಾಷಿಂಗ್ಟನ್ ಮೇಲೆ ಪರಾವಲಂಬಿ ರೀತಿ ಅವಲಂಬಿತ ಎಂದು.  ಪಾಕಿಸ್ತಾನ ಒಂದು miserably failed state, ಪಾಕಿಸ್ತಾನದ ಈ degenaration ನೋಡಿ ಕನಿಕರ ಪಡುತ್ತಿದ್ದ ನಮಗೆ ಒಂದು ವಿಚಿತ್ರ ಆದರೆ  ಆಘಾತಕಾರಿಯಾದ ಬೆಳವಣಿಗೆ ಕಾಣಲು ಸಿಕ್ಕಿದೆ. ಒಂದು ಬೆಳಿಗ್ಗೆ ಅಮೆರಿಕೆಯ ದೂತಾವಾಸದ ಸಿಬ್ಬಂದಿಯೊಬ್ಬ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್ ಬಂದು ನಿಲ್ಲುತ್ತದೆ, ಗುಂಡಿನ ಚಕಮಕಿ ನಡೆಯುತ್ತದೆ, ಬೈಕ್ ಸವಾರರಲ್ಲಿ ಇಬ್ಬರು ಸಾಯುತ್ತಾರೆ ಅಮೆರಿಕೆಯವನನ್ನು ಪೊಲೀಸರು ಬಂಧಿಸುತ್ತಾರೆ. ಪಾಕ್ ಬೀದಿಗಳಲ್ಲಿ  ಬೈಕ್ ನಲ್ಲಿ ಬರುವುದೂ, ಬಂದ ಕೂಡಲೇ ಗುಂಡಿನ ಕಾಳಗ ನಡೆಯುವುದೂ ಸಾಮಾನ್ಯವೇ. ನಾವು ನಮ್ಮ ಚಿತ್ರಗಳಲ್ಲಿ ಕಾಣುವುದನ್ನು ಅಲ್ಲಿ ನಿಜ ಜೀವನದಲ್ಲಿ ಆಡಿ ತೋರಿಸುತ್ತಾರೆ. ಆದರೆ ವಿಷಯದ ಗಾಂಭೀರ್ಯ ಇರುವುದು ಅಮೆರಿಕೆಯವ ಈ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದು. ಅದೂ ಸಾಧಾರಣ ಅಮೆರಿಕೆಯ ನಾಗರೀಕನಲ್ಲ. ದೂತಾವಾಸದ ಸಿಬ್ಬಂದಿ. ಅವನಿಗೆ ಇದ್ದೇ ಇರುತ್ತದೆ diplomatic immunity. ತನ್ನ ದೇಶದವರು ಸಿಕ್ಕಿಬಿದ್ದಾಗ ಸಹಜವಾಗಿಯೇ ಅಮೆರಿಕನ್ನರು ಕಿಡಿ ಕಿಡಿ ಯಾಗುತ್ತಾರೆ. ಈ ವಿಷಯದಲ್ಲೂ ಸಹ ಅಸಮಾಧಾನ ಗೊಂಡರು. ಮಾಮೂಲಿ ಪ್ರತಿಭಟನೆ ಕೆಲಸ ಮಾಡದಾದಾಗ ಅಮೆರಿಕೆಯಲ್ಲಿನ ಪಾಕ ರಾಜತಾಂತ್ರಿಕ ನನ್ನು ಕರೆಸಿ ನಮ್ಮ ಪ್ರಜೆಯನ್ನು ವಿಮುಕ್ತಿಗೊಳಿಸದಿದ್ದರೆ ನಿನ್ನನ್ನು ಒದ್ದೋಡಿಸುತ್ತೇವೆ ಎಂದು ಧಮಕಿ ಹಾಕಿದರು. ಧಮಕಿ ಕೇಳಿ ಮರಳಿದ ಆತ ನನಗೆ ಅಂಥ ಎಚ್ಹರಿಕೆಯನ್ನೇನೂ ಅಮೇರಿಕಾ ನೀಡಿಲ್ಲ ಎಂದು ಟ್ವೀಟಿಸಿ ಸುಮ್ಮನಾದ. ಆದರೆ ಅಮೇರಿಕ ನೇರವಾಗಿ ಅಲ್ಲಿನ ಸರಕಾರದ ಮೇಲೆ ಪ್ರಭಾವ ತೋರಿಸಲು ತೊಡಗಿತು. ಅಲ್ಲಿನ ಪೊಲೀಸರು ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಇವನು ದೂತಾವಾಸದ ಅಧಿಕಾರಿ ಅಲ್ಲ, ಬದಲಿಗೆ ಒಬ್ಬ ಗೂಢಚಾರ ಎಂದು ಕರೆದು ಅವನ ಬಳಿಯಿದ್ದ ಆಧುನಿಕ ಉಪಕರಣಗಳ ಹೆಸರುಗಳನ್ನೂ ಪಟ್ಟಿ ಮಾಡಿ ಬಹಿರಂಗಗೊಳಿಸಿದರು, charge sheet ಹಾಕಿ ಅತ್ತೆ ಮನೆಗೂ ಸಹ ಅಟ್ಟಿದರು. ಈ ಘಟನೆ ನಮ್ಮ ದೇಶದಲ್ಲಿ ನಡೆದಿದ್ದರೆ? ಪಾಕಿಸ್ತಾನದ ಗಾಯಕ ಕೋಟ್ಯಂತರ ರೂಪಾಯಿ ಅನಧಿಕೃತವಾಗಿ  ತಂದ ಎಂದು ಬಂಧಿಸಿದ ಕೂಡಲೇ ಅವನನ್ನು ಬಿಡುಗಡೆ ಗೊಳಿಸಲು ಆದೇಶ.   

ಪ್ರಥಮ ಕೊಲ್ಲಿ ಯುದ್ಧದ ವೇಳೆ ಅಮೆರಿಕೆಯ ಯುದ್ಧ ವಿಮಾನಗಳಿಗೆ ಇಂಧನ ಹಾಕಬಾರದು ಎಂದು ನಿರ್ಣಯಿಸಿದ್ದ ನಮ್ಮ  ಸರಕಾರ ಕೊನೆಗೆ ಸದ್ದಿಲ್ಲದೇ ಇಂಧನ ತುಂಬಿಸಿ ಕೊಟ್ಟಿತು. ಬಿಳಿ ನಗು ನಮ್ಮ ಮೇಲೆ ಚೆನ್ನಾಗಿ ಪ್ರಭಾವ ಬೀರುತ್ತದೆ. ಈ ಪಾಠವನ್ನು ಅಮೆರಿಕನ್ನರಿಗೆ ನೀಡಿದ್ದು ನಮ್ಮನ್ನು ೨೦೦ ವರ್ಷ ಗಳ ಕಾಲ ಆಳಿದ ಬ್ರಿಟಿಷರು. ಇರಾನ್ ನಮ್ಮ ದೇಶದ ಆಪ್ತ ಮಿತ್ರ. ಆದರೆ ಇರಾನ ವಿರುದ್ಧದ ಭದ್ರತಾ ಮಂಡಳಿಯ ನಿರ್ಣಯಕ್ಕೆ ಪರವಾಗಿ ನಾವು ಮತ ಚಲಾಯಿಸಿ ಮಧ್ಯ ಪ್ರಾಚ್ಯದಲ್ಲಿನ ಒಂದು ದೇಶದ ಬೆಂಬಲವನ್ನು ಕಳೆದು ಕೊಂಡೆವು.

ಕೇಂದ್ರ ಸರಕಾರದಲ್ಲಿ ಕೆಲಸ ಮಾಡದ ಅಥವಾ ಮಾಡಲು ಬಾರದ ಒಂದು ಇಲಾಖೆ ಇದ್ದರೆ ಅದೇ ವಿದೇಶಾಂಗ ಇಲಾಖೆ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಎಂದರೆ ಗರಿ ಗರಿಯಾದ ಸೂಟು, ಅಥವಾ ರೇಶಿಮೆ ಸೀರೆ ಉಟ್ಟು ದೇಶ ಸುತ್ತುವುದು ಎನ್ನುವ ತಪ್ಪು ಕಲ್ಪನೆ ಮನೆ ಮಾಡಿದೆ. ನೆಹರೂ ಕಾಲಾದ outdated ರಾಜನೀತಿಯ ನಿಯಮಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎನ್ನುವ ಭಾವನೆ ಬೇರೆ. ನಾವು ಯಾರ ಪರವೂ ಅಲ್ಲ, ಎಲ್ಲರ ಸವಾರಿ ನಮ್ಮ ಮೇಲೆ ನಡೆಯಲಿ ಎನ್ನುವ ನಿರ್ಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ. ಆ ನೀತಿಗೆ ಒಂದೇ ಒಂದು ಬದಲಾವಣೆಯಂತೂ ಕಾಣಲು ಸಿಕ್ಕಿದೆ. ಅದೇ ಅಮೇರಿಕಾ ಪರ ನೀತಿ. ಹಿಂದೆ ರಷ್ಯಾ ಪರ, ಈಗ ಅಮೇರಿಕಾ ಪರ. ನಮಗೇಕೆ ಸ್ವಂತಿಕೆ ಇಲ್ಲ ಅಥವಾ ಇರಕೂಡದು? ವಿನಾಕಾರಣ ಕಾರ್ಗಿಲ್ ಅನ್ನು ಆಕ್ರಮಿಸಿ ನಮ್ಮ ಸಾವಿರಾರು ಸೈನಿಕರ ಸಾವಿಗೆ ಕಾರಣವಾದ ಪಾಕಿಸ್ತಾನವನ್ನು ಸದೆ ಬಡಿಯುವ ಸುಂದರ, ಬಹುಶಃ ಇನ್ನೆಂದೂ ಬರದ ಅವಕಾಶವನ್ನು ನಾವು ಕಳೆದು ಕೊಂಡೆವು. ಇದಕ್ಕೆ ಕಾರಣ ನಮಗೆ ಅಮೇರಿಕೆಯಿಂದ ಬಂದ ಮನವಿ. ಅವರಿಗೆ ಬೇಕಾದಾಗ ಮನವಿ, ಅಥವಾ ಬೆದರಿಕೆ. ಈ ಎರಡರಲ್ಲಿ ಒಂದನ್ನು ಕೊಟ್ಟು ಅಮೇರಿಕಾ ತನ್ನ ಕೆಲಸವನ್ನೂ ಸಾಧಿಸಿ ಕೊಳ್ಳುತ್ತದೆ.

೨೦೦೧ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕೆಯ ಮೇಲೆ ನಡೆದ ಧಾಳಿಗೆ ತತ್ತರಿಸಿ ಪ್ರಪಂಚದ ಎಲ್ಲ ದೇಶಗಳಿಂದ ಮುಚ್ಚಳಿಕೆ ಬರೆಸಿ ಕೊಂಡಿತು ಅಮೇರಿಕಾ. ಭಯೋತ್ಪಾದಕರು, ಅದಕ್ಕೆ ಧನ ಸಹಾಯ ನೀಡುವವರು ಯಾರದೇ ನೆಲದ ಮೇಲೆ ಇದ್ದರೋ ಅಮೆರಿಕೆಯ ಸುಪರ್ದಿಗೆ ಒಪ್ಪಿಸತಕ್ಕದ್ದು ಎನ್ನುವುದು ಮುಚ್ಚಳಿಕೆ. ವಿಧೇಯರಾಗಿ ಎಲ್ಲಾ ದೇಶಗಳೂ ತಲೆ ಬಾಗಿದವು. ನಮ್ಮ ದೇಶದ ಗಡಿ ನುಗ್ಗಿ ಒಂದು ನಗರವನ್ನು ತನ್ನ ಹಿಂಸೆಯಿಂದ ತತ್ತರಿಸುವಂತೆ ಮಾಡಿದ ಪಾಕ ಬಗ್ಗೆ ಮಾತ್ರ ಬೇರೆಯೇ ತೆರನಾದ ನಿಲುವು. ಉಗ್ರವಾಗಿ ಪ್ರತಿಭಟಿಸಿದಾಗ ಅಲ್ಲಿಂದ ಧಾವಿಸಿ ಬಂದ ವಿದೇಶಾಂಗ ಕಾರ್ಯದರ್ಶಿ ಕ್ಲಿಂಟನ್ ಒಂದ್ರೆಅದು ಮೊಂಬತ್ತಿ ಗಳನ್ನು ಹಚ್ಚಿ, ಎರಡು ನಿಮಿಷ ಮೌನ ಆಚರಿಸಿ ಸಮಾಧಾನ ಮಾಡಿ ಹೋದರು. ಮುಂಬೈ ಮೇಲಿನ ಆಕ್ರಮಣದ ವೇಳೆಯೂ ಭಾರತಕ್ಕೆ ಒಂದು ಸುವರ್ಣಾವಕಾಶ ಇತ್ತು ಪಾಕಿಗೆ ಒಂದು “ಝಟ್ಕಾ” ನೀಡಲು. ಅಲ್ಲೂ ಬಿಳಿ ನಗೆ ನಮ್ಮ priority ಮರೆಯುವಂತೆ ಮಾಡಿತು. ಬಿಳಿ ನಗುವಿನ ಮಾಯೆ ಅಂಥದ್ದು.     

ನಮ್ಮ ರಕ್ಷಣಾ ಸಚಿವ (ಜಾರ್ಜ್ ಫೆರ್ನಾಂಡಿಸ್) ರನ್ನು ಬೆತ್ತಲೆ ಮಾಡಿ ಅಮೆರಿಕೆಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅದು ದೊಡ್ಡ ವಿಷಯವಲ್ಲ ನಂಗೆ. ಮೆಚ್ಚುಗೆ, ಅಬ್ಬಾ, ಎಂಥ ಭದ್ರತಾ ವ್ಯವಸ್ಥೆ ಅವರದು. ನಮ್ಮ ರಾಷ್ಟ್ರಪತಿ ಕಲಾಂ ರನ್ನು ವಿಮಾನ ನಿಲ್ದಾಣ ದಲ್ಲಿ ಅನುಚಿತವಾಗಿ ವರ್ತಿಸಿದಾಗಲೂ ನಿರ್ಲಿಪ್ತತೆ. ನಮ್ಮ ವಿದ್ಯಾರ್ಥಿಗಳನ್ನು ಅಲ್ಲಿನ ವಿದ್ಯಾಲಯವೊಂದು ಮೋಸ ಮಾಡಿ ನಂತರ ವಿದ್ಯಾರ್ಥಿಗಳು ಓಡಿ ಹೋಗದಂತೆ electronic tag ಅವರ ಕಾಲಿಗೆ ಕಟ್ಟಿ ಅವರ ಮೇಲೆ ನಿರಂತರ ನಿಗಾ ಇಟ್ಟಾಗಲೂ ನಮಗೆ ಅಮೆರಿಕೆಯ ನಡವಳಿಕೆ ಅಸಹನೀಯವಾಗಿ ತೋರುವುದಿಲ್ಲ. ಇನ್ನು ನಮಗೆ ತಿಳಿಯದ ಇನ್ಯಾವ್ಯಾವ ರೀತಿಯಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿದೆಯೋ ದೇವರೇ ಬಲ್ಲ. ನಮ್ಮ ಸರಕಾರ ಗಳನ್ನು ನಡೆಸಲು ಮಂತ್ರಿಗಳು, ಕಾರ್ಯದರ್ಶಿಗಳು ಎಲ್ಲಾ ಅರವತ್ತು, ಎಪ್ಪತ್ತು ವಯಸ್ಸು ದಾಟಲೇ ಬೇಕು. ಒಂದೆರಡು ಅಪವಾದಗಳನ್ನು ಬಿಟ್ಟರೆ ವಯೋವೃದ್ಧರ ಕಾರುಬಾರು. ಅವರಿಗೆ ರೋಷ ಎಲ್ಲಿಂದ ತಾನೇ ಬರಬೇಕು.   

ಈಗಿನ ವಿಶ್ವ bi-polar ಆಗಬೇಕಿಲ್ಲ. ಪ್ರಪಂಚದ ತುಂಬಾ ದೊಡ್ಡದು. ಹಳೇ ಕಾಲದ ರೀತಿಯ ರಾಜಕಾರಣವನ್ನು ಅಲ್ಲ ನಾವು ಕಾಣುತ್ತಿರುವುದು. ಪಕ್ಕದ ಚೀನಾ ಅತ್ಯಾಧುನಿಕ ಆಯುಧಗಳನ್ನು ಶೇಖರಿಸುತ್ತಿದೆ ಎಂದು ನಮ್ಮ ಗೃಹ ಮಂತ್ರಿ ಕಳವಳ ವ್ಯಕ್ತ ಪಡಿಸಿದರು. ಅವರ ಮನೆಯೊಳಗೇ ಕೂತು ಅವರೇನಾದರೂ ಮಾಡಿಕೊಳ್ಳಲಿ. ನಮಗೇಕೆ ಅವರ ಉಸಾಬರಿ? 3G ಸ್ಕ್ಯಾಮು ಮತ್ತು ಸ್ವಿಸ್ ಮತ್ತು ಇತರೆ ಬ್ಯಾಂಕುಗಳಲ್ಲಿ ನಮ್ಮ ಜನ ಹುಗಿದಿಟ್ಟಿರುವ ಸಂಪತ್ತನ್ನು ಉಪಯೋಗಿಸಿ ನಮ್ಮ ಸೈನ್ಯವನ್ನೂ ಬಲ ಗೊಳಿಸಲಿ. ಭಾರತದ ನೇತೃತ್ವದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಧ್ರುವೀಕರಣ ನಡೆಯಲಿ. ನಮ್ಮೊಂದಿಗೆ ಹೆಜ್ಜೆ ಹಾಕಲು ಲ್ಯಾಟಿನ್ ಅಮೆರಿಕೆಯಲ್ಲೂ, ಮಧ್ಯ ಪ್ರಾಚ್ಯದೇಶ ಗಳಲ್ಲೂ, ಆಫ್ಫ್ರಿಕಾ ಖಂಡದಲ್ಲೂ ದೇಶಗಳಿವೆ.

ಅಧ್ಯಕ್ಷರ ವಿಧವೆಯ ಪತ್ರ

ನಮ್ಮ ದೇಶದಲ್ಲಿ ಈಗ ಇರುವುದು ಅಧ್ಯಕ್ಷರಲ್ಲ, ಅಧ್ಯಕ್ಷೆ. ಹಾಗಾಗಿ ಇದು ನಮ್ಮ ದೇಶಕ್ಕೆ ಸಂಬಂಧಿಸಿದ್ದಲ್ಲ. ಇಂದಿನ ಇ- ಟಪ್ಪಾಲಿನಲ್ಲಿ ನನಗೊಂದು ಪತ್ರ ಬಂತು. ಶ್ರೀಮತಿ ಸುಹಾ ಅರಫಾತ್ ರಿಂದ. ಇವರು ಪಲೆಸ್ತಿನ್ ದೇಶದ ಮಾಜಿ ಅಧ್ಯಕ್ಷ ದಿವಂಗತ ಯಾಸಿರ್ ಅರಫಾತ್ ರ ಪತ್ನಿ. ಅರಫಾತ್ ನನಗೆ ಅಚ್ಚು ಮೆಚ್ಚು. ಇಸ್ರೇಲಿಗಳು ಆಕ್ರಮಿಸಿ ಕೊಂಡ ತನ್ನ ದೇಶದ ಬಿಡುಗಡೆಗೆ ಹೋರಾಡಿದ ಜೀವ. ಭಾರತದ ಆಪ್ತ ಮಿತ್ರನೂ ಹೌದು. ಇಂದಿರಾ ಗಾಂಧಿಯವರ ನಿಧನದ ಸುದ್ದಿ ಕೇಳುತ್ತಲೇ ಮೊದಲಿಗೆ ಭಾರತಕ್ಕೆ ಧಾವಿಸಿ ಬಂದ ಮೊದಲ ನಾಯಕರಲ್ಲಿ ಅರಫಾತ್ ಒಬ್ಬರು. ತನ್ನ ಜನರ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಮತ್ತು ಇಂದಿರಾ ನೀಡಿದ ಬೆಂಬಲವನ್ನೂ ಮೆಲುಕು ಹಾಕಿ ನಾನು ನನ್ನ ಸೋದರಿಯನ್ನು ಕಳೆದು ಕೊಂಡೆ ಎಂದು ಕಣ್ಣೀರು ಹಾಕಿದ್ದರು. ಯಾವಾಗಲೂ ಮಿಲಿಟರಿ ಉಡುಗೆ ಮತ್ತು ತಲೆಗೆ ಅರಬ್ಬರು ಕಟ್ಟುವ “ಕಿಫಾಯೇ’ ಎಂದು ಕರೆಯಲ್ಪಡುವ ಬಟ್ಟೆ ಧರಿಸುತ್ತಿದ್ದ ಅರಫಾತ್ ವಿಶ್ವದ ಅತಿ ಪರಿಚಿತ ನಾಯಕರು. ಅಂಥ ನಾಯಕರ ವಿಧವೆ ಪತ್ರ ನನಗ್ಗೆ ಬಂದಿದ್ದು ನೋಡಿ ಸಂತಸ. ನಡುಗುತ್ತಲೇ ಕ್ಲಿಕ್ಕಿಸಿದೆ. ತೆರೆದು ಕೊಂಡಿತು ಪತ್ರ…

ನಾನು ಸುಹಾ. ಸುಹಾ ಅರಫಾತ್. ಪಲೆಸ್ತಿನ್ ದೇಶದ ದಿವಂಗತ ಅಧ್ಯಕ್ಷರ ಪತ್ನಿ. ಪತಿಯ ಮರಣಾ ನಂತರ ನಾನೀಗ ಲಂಡನ್ನಿನಲ್ಲಿ ನೆಲೆಸಿದ್ದೇನೆ. ನನ್ನ ಹತ್ತಿರ ಐದು ಮಿಲ್ಲಿಯನ್ ಡಾಲರ್ ಇದೆ. ನಿಮ್ಮ ದೇಶದಲ್ಲಿ ವಿನಿಯೋಗಿಸುವ ಆಸೆ ಇದೆ. ಈ ಸಹಾಯಕ್ಕಾಗಿ ನಿಮಗೆ ಶೇಕಡಾ ೨೦ ಭಾಗವನ್ನು ಕೊಡಲು ನಾನು ತಯಾರು. ಹಾಗೆಯೇ ತಮ್ಮ ಮೊಬೈಲ್ ನಂಬರ್, ತಮ್ಮ ಉದ್ಯೋಗದ ಕುರಿತೂ ನನಗೆ ಬರೆಯಿರಿ…. ಹೀಗೆ ಶುರುವಾಯಿತು ವೃತ್ತಾಂತ. ಇದನ್ನು ಓದುತ್ತಿದ್ದಂತೆ ನನಗೆ ವಿಷಯ ತಿಳಿಯಾಗಲು ತೊಡಗಿತು. ಈ ಪತ್ರ ಸಾಮಾನ್ಯವಾಗಿ ಆಫ್ರಿಕಾದ ಅದರಲ್ಲೂ ನೈಜೀರಿಯಾದಿಂದ ಬರುವಂಥವು. ನನ್ನ ಅಪ್ಪ ಕೂಡಿಸಿಟ್ಟ ಐವತ್ತೋ ನೂರೋ ಮಿಲಿಯನ್ ಡಾಲರ್ ಇದೆ, ಅಪ್ಪ ಅಪಘಾತದಲ್ಲಿ ತೀರಿಕೊಂಡ. ಆ ಹಣವನ್ನು ನಿಮ್ಮ ಖಾತೆಗೆ ರವಾನಿಸುತ್ತೇನೆ ಎಂದು ಹೇಳಿ ನಯವಾಗಿ ಬಲೆಯನ್ನು ಹೆಣೆಯುತ್ತಾರೆ ಕಪಟವರಿಯದ ಜನರ ಸುತ್ತ. ನೀವು ತಿಳಿಯಬಹುದು ಇಂಥ ಮೋಸದ ವ್ಯಾಪಾರಕ್ಕೆ ಯಾರಾದರೂ ಬೀಳುತ್ತಾರೆಯೇ ಎಂದು. ಖಂಡಿತ ಬೀಳುತ್ತಾರೆ. ಖೊಟ್ಟಿ ಜನರ ಸಹವಾಸ ಎಂದರೆ ನಮ್ಮ ಜನರಿಗೆ ಬಹಳ ಇಷ್ಟ. ಮಕ್ಕಳಾಗದವರಿಗೆ ಭಸ್ಮ ನೀಡುವ ಸನ್ಯಾಸಿಯಿಂದ ಹಿಡಿದು, ನಪುಂಸಕತೆ ಹೋಗಲಾಡಿಸಿ ಹೊಸ ಪುರುಷತ್ವ ತಂದು ಕೊಡುವ ಖೊಟ್ಟಿ ವೈದ್ಯ ನವರೆಗೆ, ಹಲವು ರೀತಿಯಲ್ಲಿ ಜನರು ಮಾಡುವ ಮೋಸದ ಅರಿವಿದ್ದೂ ಪದೇ ಪದೇ ಅವರುಗಳು ತೋಡಿಟ್ಟ ಹೊಂಡಕ್ಕೆ ಬೀಳಲೇ ಬೇಕು ಅಮಾಯಕರು.

ಬೆಂಗಳೂರಿನ, ಇಂಟರ್ನೆಟ್ ಕೇಂದ್ರ ನಡೆಸುವ ಕೇರಳ ಮೂಲದ ದಂಪತಿಗಳಿಗೆ ಇದೇ ರೀತಿಯ ಟೋಪಿಯೊಂದು ಇಂಗ್ಲೆಂಡಿ ನಿಂದ ಹಾರಿ ಬಂದಿತ್ತು. ಸಾಲ ಸೋಲ ಮಾಡಿ, ಒಡವೆ, ಪಾತ್ರೆ ಪಗಡಿ ಎಲ್ಲಾ ಅಡವಿಟ್ಟು ಹಣ ಕಳಿಸಿದರು ಡಾಲರ್ ಸಿಗುವ ನಿರೀಕ್ಷೆಯಲ್ಲಿ. ಆದರೆ ತಮ್ಮ ಹೆಗಲು ಏರಿದ್ದು ಡಾಲರ್ ತುಂಬಿದ ಚೀಲವಲ್ಲ, ಶುದ್ಧ ಮೋಸ ಎಂದು ಅವರಿಗೆ ತಡವಾಗಿ ವೇದ್ಯವಾಯಿತು. ಬದುಕಿಡೀ ದುಡಿದರೂ ತೀರಿಸಲಾಗದ ಸಾಲದ ಹೊರೆ ಆ ನತದೃಷ್ಟ ದಂಪತಿಗಳ ಸಂಗಾತಿಯಾಯಿತು. ಮೇಲ್ ಮೂಲಕ ಹಣ ಹೇಗಾದರೂ, ಏಕಾದರೂ ಬರಬೇಕು, ಹೇಳಿ? ಯಾರಿಗಾದರೂ ಪುಕ್ಕಟೆಯಾಗಿ, ಯಾವುದೇ ಶ್ರಮವಿಲ್ಲದೆ ಹಣ ಬಂದಿದ್ದಿದೆಯೇ? ಲಾಟರಿ ಒಂದನ್ನು ಹೊರತು ಪಡಿಸಿ ಹಣ ಪುಕ್ಕಟೆಯಾಗಿ ಬರಲಿಕ್ಕಿಲ್ಲ. ಹೀಗಿರುವಾಗ ಮೇಲ್ ಮೂಲಕ ಮಿಲಿಯನ್ ಗಟ್ಟಲೆ ಡಾಲರ್ ಹೇಗೆ ಬರಬಹುದು?

ನೆನಪಿಡಿ, ಮೇಲ್ ಮೂಲಕ ಬರುವುದು bugs ಗಳು. bucks ಅಲ್ಲ.

ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.

ಇಂದು ಬೆಳಿಗ್ಗೆ ನನ್ನ ಮಿತ್ರ ನಾಗರಾಜನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಾಗ ಏನಪ್ಪಾ, ನಾಳೆ ಹಬ್ಬಾ ಜೋರಾ, ಎಂದು ಕೇಳಿದ. ಇದ್ಯಾವ ಹಬ್ಬಾ ನಾಳೆ, ಎಂದು ಯೋಚಿಸುತ್ತಿರುವಾಗ ಅವನು ಹೇಳಿದ ಅದೇ, ನಿಮ್ ಹಬ್ಬ ಈದ್ ಮಿಲಾದ್ ನಾಳೆ, ಇಲ್ಲಿ ಸರಕಾರೀ ರಜೆ ಎಂದ. ಓಹೋ, ಹೌದಾ ಎಂದು ಉದ್ಗಾರ ತೆಗೆದಾಗ ಅವನಿಗೆ ಆಶ್ಚರ್ಯ. ಏನು ಅಲ್ಲಿ ಇಲ್ವಾ ರಜೆ ಎಂದ. ನಾನಂದೆ ಇಲ್ಲಿ ಸೌದಿ ಅರೇಬಿಯಾದಲ್ಲಿ ಪ್ರವಾದಿಗಳ ಜಯಂತಿಗೆ ರಜೆ ಇಲ್ಲ. ಅಂಥ ಒಂದು ದಿನ ಇದೆ ಎಂದೂ ಇಲ್ಲಿನ ಜನಕ್ಕೆ ಗೊತ್ತಿಲ್ಲ. ಪ್ರವಾದಿ ಜಯಂತಿ ಇರಲಿ, ಇಲ್ಲಿನ ರಾಜ ಸತ್ತಾಗಲೂ ರಜೆ ಕೊಡದ ದುರುಳರು ಇವರು ಎಂದು ನನ್ನ ದುಃಖವನ್ನು ವ್ಯಕ್ತಪಪಡಿಸಿದಾಗ ಅವನೂ ಸಂತಾಪ ಸೂಚಿಸಿದ ನನ್ನ ದೌರ್ಭಾಗ್ಯಕ್ಕೆ. ದೌರ್ಭಾಗ್ಯವಲ್ಲದೆ ಮತ್ತೇನು? ಭಾರತದಲ್ಲಿ ಪ್ರತೀ ಮೂರು ದಿನಗಳಿಗೊಮ್ಮೆ ಒಂದಲ್ಲ ಒಂದು ರಜೆ ವಕ್ಕರಿಸಿಕೊಳ್ಳುತ್ತಲೇ ಇರುತ್ತದೆ. ಹಾಗೇನಾದರೂ ರಜೆ ಸಿಗದೇ ಒಂದೆರಡು ವಾರಗಳಾದವು ಅನ್ನಿ, ಆಗ ಯಾವುದಾದರೂ ಒಂದು ನೆಪದಲ್ಲಿ, ನಮ್ಮ ರಾಜಕೀಯ ಪಕ್ಷಗಳ ಕೃಪಾ ಕಟಾಕ್ಷ ದಲ್ಲಿ ಬಂದೋ, ದೊಂಬಿಯೋ ನಡೆದು ರಜೆ ಸಲೀಸಾಗಿ ಸಿಗುತ್ತದೆ. ಯಡ್ಡಿ ಹತ್ತಿರ ಬಹುಮತ ಸಾಬೀತು ಪಡಿಸಿ ಎಂದರೂ ರಜೆ, ಅಯೋಧ್ಯೆಯ ವಿವಾದ ಕ್ಕೆ ನ್ಯಾಯಾಲಯ ಕೊಡುವ ತೀರ್ಪಿನಂದೂ ರಜೆ.  

ಸೌದಿ ಅರೇಬಿಯಾದ ಹಿಂದಿನ ರಾಜ ಫಹದ್ ರವರು ತೀರಿ ಕೊಂಡ ಸುದ್ದಿ ಬಂದಾಗ ನಾನು ಬ್ಯಾಂಕಿನಲ್ಲಿ ಇದ್ದೆ. ನನ್ನ ಕೆಲಸ ಬೇಗ ಬೇಗನೆ ಪೂರೈಸಿ ಹಾಗೆಯೆ ಅಲ್ಲಿನ ಕ್ಲರ್ಕ್ ಹತ್ತಿರ ಕೇಳಿದೆ, ಎಷ್ಟು ದಿನ ರಜೆ ಕೊಡ್ತಾರೆ ಅಂತ? ಅವನು ಕೇಳಿದ, ರಜೆ? ಯಾವುದಕ್ಕೆ? ನಾನು ದೊರೆಯ ಮರಣದ ವಾರ್ತೆ ಆತನಿಗೆ ಹೇಳಿದಾಗ, ಅವನು ಫಹದ್ ನ ಸಮಯ ಮುಗಿಯಿತು ಅವನು ಸೇರಿಕೊಂಡ ಭಗವಂತನ ಪಾದಚರಣಗಳಿಗೆ, ಅದಕ್ಕೇಕೆ ರಜೆ, ನಿಮ್ ದೇಶದಲ್ಲಿ ಇದಕ್ಕೂ ಕೊಡ್ತಾರ ರಜೆ ಎಂದು ಅವನು ಮರು ಪ್ರಶ್ನೆ ಹಾಕಿದಾಗ ಉತ್ತರಿಸಲಾಗದೆ ಮುಗುಳ್ನಕ್ಕು ಹೊರ ನಡೆದೆ. ಸಾವು ನೈಸರ್ಗಿಕ, ಅದನ್ನು ತಡೆಯಲಾಗಲೀ, ವಿಳಂಬಿಸಲಾಗಲೀ ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಯಾರಾದರೂ ಸತ್ತರೂ ಅತಿಯಾಗಿ ಶೋಕ ವ್ಯಕ್ತ ಪಡಿಸಲೂ ಬಾರದು. ಹಾಗೆ ಮಾಡಿದ್ದೇ ಆದರೆ ಅವನಿಗೆ ದೇವನ ನಿರ್ಣಯ ಇಷ್ಟವಾಗಿಲ್ಲ ಎಂದು ಅರ್ಥ. ಇದು ಬಹುತೇಕ ಮುಸ್ಲಿಮರ ಅಭಿಪ್ರಾಯ. ಈಗ ಹೇಳಿ ಬಂದ್ ಕೊಡೋದಾದರೂ ಹೇಗೆ ಸಾಧ್ಯ? ಅಲ್ಲೂ ಬಾರದಂತೆ, ಬಂದ್ ಮಾತು ದೂರ ಉಳಿಯಿತು ಅಲ್ಲವೇ? ಅಲ್ಲಾ, ನಾನು ಮಾತಾಡ್ತಾ ಇದ್ದಿದ್ದು ಜಯಂತಿ ಬಗ್ಗೆ, ಇಲ್ಯಾಕೆ ಮುಖಹಾಕಿದ ಯಮ ಧರ್ಮರಾಯ? ಸಾವೆಂದರೆ ಹೀಗೆಯೇ. ಅಚಾನಕ್ ಆಗಿ ಹೊಂಚು ಹಾಕಿ ಬಿಡುತ್ತದೆ.  

ನಾನು ಹೋದ ವರ್ಷ, ಜುಲೈ ತಿಂಗಳಿನಲ್ಲಿ ಭಾರತಕ್ಕೆ ಬಂದಿದ್ದಾಗ ವಾಲ್ಮೀಕಿ ಜಯಂತಿ. ನಾನು ನನ್ನ ಮಿತ್ರನಿಗೆ ಕೇಳಿದೆ ಇದ್ಯಾವಗಿಂದ ಆರಂಭವಾಯ್ತು ಹೊಸ ಜಯಂತಿ ಎಂದು. ಭಾಜಪ ಸರಕಾರ ಆಲ್ವಾ ಇರೋದು, ಬೇರೆಯವರಿಗಿಂತ ತಾನು ಭಿನ್ನ ಎಂದು ತೋರಿಸಲು ಈ ರಜೆ ಅಂದ. ಇಂದು ಬೆಳಿಗ್ಗೆ ಅವನೊಂದಿಗೆ ಮಾತನಾಡಿದಾಗ ಅವನು ಹೇಳಿದ ರಜೆಯ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರಿಕೊಂಡಿವೆ, ಬಸವ ಜಯಂತಿ, ಕನಕ ಜಯಂತಿ. ವಚನಗಳ ಮಹಾತ್ಮ, ವೀರಶೈವ ಪಂಗಡ ಗುರುಗಳಾದ ಬಸವಣ್ಣರಿಗೆ ಅವರು ಹುಟ್ಟಿದ ದಿನ ಜನ ರಜೆಯಲ್ಲಿ ದಿನ ಕಳೆಯೋದು ಎಷ್ಟು ಪ್ರಿಯವಾದ ವಿಷಯವೋ ನಾ ಕಾಣೆ. ಬಸವ ಜಯಂತಿ ಇವತ್ತು ಎಂದು ಸಂಭ್ರಮ ಪಡುತ್ತಿರುವವರಿಗೆ ಅವರ ಒಂದೇ ಒಂದು ವಚನವನ್ನಾದರೂ ಒದರಲು ಹೇಳಿದರೆ ಅನಾಹುತವಾಗಬಹುದೋ, politically incorrect ಆಗಬಹುದೋ?

ಕನಕ ಜಯಂತಿ ಯಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಗವಾನ್ ಶ್ರೀ ಕೃಷ್ಣನ ಮಂದಹಾಸವನ್ನು ನೋಡಲು ದಲಿತನಿಗೆ ದಾರಿ ಮುಕ್ತವಾಗಿ ತೆರೆದಿರಬಹುದೇ? ಇಂಥ ಪ್ರಶ್ನೆಗಳು ರಜೆಯ ದಿನ ಏಳಲೇ ಬೇಕು, ನಾವದಕ್ಕೆ ಉತ್ತರ ಕಂಡು ಕೊಳ್ಳಲೇ ಬೇಕು. ನನಗೆ ಅದಕ್ಕೆ ಸಮಯವಿಲ್ಲ, ಏಕೆಂದರೆ ನನಗೆ ಇಂಥಾ ರಜೆಗಳ ಸೌಕರ್ಯ ಇಲ್ಲ  ಅಥವಾ ಸೌಭಾಗ್ಯ ಇಲ್ಲ.

ವಯಸ್ಕರಿಗೆ ಮಾತ್ರ: ಸರ್ದಾರ್ಜಿ ಯ ತಿರುಗೇಟು

ಖುಷ್ವಂತ್ ಸಿಂಗ್ ರನ್ನು ಅರಿಯದವರು ವಿರಳ. ಅವರ ತಲೆಮಾರಿನ ತುಂಬಾ ಜನ ಉರುಳಿಕೊಂಡರೂ ಅವರು ಮಾತ್ರ ಇನ್ನೂ ನಾಟ್ ಔಟ್. the sunset club ಇವರ ಇತ್ತೀಚಿನ ಪುಸ್ತಕ. ಕಥೆಯ ಪಾತ್ರ ಬದುಕಿನ ಸಂಜೆಯಲ್ಲಿರುವ ಮೂವರು ಪುರುಷರ ಅನುಭವದ ಮೆಲುಕು. ಹಿಂದೂ ಮುಸ್ಲಿಂ, ಹಿಂದೂ ಸಿಖ್ ರಾಜಕೀಯ ಸೇರಿದಂತೆ ಎಲ್ಲವೂ ಇದೆ. ಎಲ್ಲವೂ ಇದೆ ಎಂದಾಗ ಸೆಕ್ಸ್ ಸಹ ಇದೆ ಎಂದು ಕೊಳ್ಳಿ. ಖುಷ್ವಂತ್ ಒಬ್ಬ ಪೋಲಿ ಲೇಖಕ. ಪೋಲಿ ಪದವನ್ನು abusive ಆಗಿ ಉಪಯೋಗಿಸಿಲ್ಲ. ಆ ಪುಸ್ತಕದ ಲ್ಲಿನ ಒಂದು ಜೋಕ್ ಬಗ್ಗೆ ಓದಿ, ಚೆನ್ನಾಗಿ ನಕ್ಕುಬಿಡಿ.

ಸರ್ದಾರ್ಜಿ ಬಗೆಗಿನ ಜೋಕುಗಳು ಭಾರತೀಯರ ಮೊಬೈಲುಗಳಲ್ಲಿ ರಾರಾಜಿತ. ಅವರ ಬಗ್ಗೆ ಇರುವುದನ್ನೂ, ಇಲ್ಲದ್ದನ್ನೂ ಹುಟ್ಟಿಸಿ ಸೃಷ್ಟಿಸಿದ ಜೋಕುಗಳು ಸರ್ದಾರ್ಜಿಗಳನ್ನು ತಿಕ್ಕಲು ಸ್ವಭಾದವರು ಎನ್ನುವ ರೀತಿ ಬಿಂಬಿಸುವುದನ್ನು ನಾವು ಕಂಡಿದ್ದೇವೆ. ಎಲ್ಲರ ಬಾಯಲ್ಲಿ ತನ್ನ ಬಗೆಗಿನ ಜೋಕುಗಳನ್ನು ಕೇಳಿ ಕೇಳಿ ಸರ್ದಾರ್ಜಿ ತಿರುಗೇಟು ನೀಡುತ್ತಾನೆ ಕೆಲಸಕ್ಕಾಗಿ ನಡೆದ ಸಂದರ್ಶನವೊಂದರಲ್ಲಿ.

ಸಂದರ್ಶನಕ್ಕೆಂದು ಕೋಣೆಯೊಳಗೆ ಹೋಗುವ ಸರ್ದಾರ್ಜಿ ಗೆ ಮೂವರು ಅಧಿಕಾರಿಗಳು ಕಾದಿರುತ್ತಾರೆ. ಅಧಿಕಾರಿಯೊಬ್ಬನ ಕೆಣಕುವ ಬುದ್ಧಿ ಜಾಗೃತವಾಗಿ ಅವನನ್ನು ಕೆಣಕಲು ನಿರ್ಧರಿಸಿ ಪ್ರಶ್ನೆ ಕೇಳಲು ಆರಂಭಿಸುತ್ತಾನೆ.

ಅಧಿಕಾರಿ: ಸರ್ದಾರ್, kooooooooo, ಛುಕ್ ಭುಕ್, ಛುಕ್, ಭುಕ್, kooooooooooo ಇದು ಯಾವುದರ ಶಬ್ದ? ಸರ್ದಾರ್ಜಿ: ಗೆಲುವಿನಿಂದ, ಅದು “ರೈಲು”, ರೈಲಿನ ಶಬ್ದ.

ಅಧಿಕಾರಿ: ಸರಿಯಾಗೇ ಹೇಳಿದಿರಿ, ಆದರೆ ಈ ರೈಲು ನಿಜಾಮುದ್ದೀನ್ ಎಕ್ಸ್ ಪ್ರೆಸ್ಸೋ, ರಾಜಧಾನಿ ಎಕ್ಸ್ ಪ್ರೆಸ್ಸೋ?

ಸರ್ದಾರ್ಜಿ: ರಾಜಧಾನಿ ಎಕ್ಸ್ ಪ್ರೆಸ್.

ಅಧಿಕಾರಿ: ನೋ, ತಪ್ಪು. ಇದು ನಿಜಾಮುದ್ದೀನ್ ಎಕ್ಸ್ ಪ್ರೆಸ್.

ಅಧಿಕಾರಿ: ಮತ್ತೊಂದು ಪ್ರಶ್ನೆ. ವೌ, ವೌ, ಬೌ, ಬೌ, ಬೌ, ಇದು ಯಾವುದರ ಶಬ್ದ?

ಸರ್ದಾರ್ಜೀ: ಆಹ್, ಇದು ನಾಯಿಯದು.

ಅಧಿಕಾರಿ: ವೆರಿ ಗುಡ್. ಇದು ಯಾವ ನಾಯಿಯ ಶಬ್ದ? doberman ಜಾತಿಯದೋ ಅಥವಾ spaniel ಜಾತಿಯದೋ?

 ಸರ್ದಾರ್ಜೀ: ತಲೆ ಕೆರೆದು ಕೊಳ್ಳುತ್ತಾ, ಇದು ಡಾಬರ್ಮನ್ ಜಾತಿಯದು.

ಅಧಿಕಾರಿ: ನೋ, ತಪ್ಪು. ಇದು spaniel.

ಈಗ ಸರ್ದಾರ್ಜೀಗೆ ಸ್ಪಷ್ಟವಾಗುತ್ತದೆ. ನನ್ನನ್ನು ಕೆಲಸಕ್ಕಾಗಿ ಸಂದರ್ಶಿಸಲು ಕರೆದಿದ್ದಲ್ಲ, ಬದಲಿಗೆ ಹೀಯಾಳಿಸಲು, ಹೇಗೂ ಬಂದಾಗಿದೆ, ಹೋಗುವ ಮೊದಲು ಇವರಿಗೂ ಒಂದು ಪಾಠ ಕಲಿಸೋಣ ಎಂದು, ನಾನೊಂದು ಪ್ರಶ್ನೆ ಕೇಳಲೇ ಎನ್ನುತ್ತಾನೆ. ಅಧಿಕಾರಿಗಳು ಓಹೋ, ಧಾರಾಳವಾಗಿ ಎಂದು ಸಮ್ಮತಿಸುತ್ತಾರೆ.

ಒಂದು ಕಾಗದದ ಹಾಳೆ ತೆಗೆದ ಸರ್ದಾರ್ ಹೆಣ್ಣಿನ ಯೋನಿಯ ಚಿತ್ರವನ್ನು ಬಿಡಿಸಿ, ಇದು ಏನು ಎಂದು ಹೇಳುವಿರಾ? ಎಂದು ಕೇಳುತ್ತಾನೆ. ಮೂರೂ ಅಧಿಕಾರಿಗಳು ಪುಳಕಿತರಾಗಿ ಒಕ್ಕೊರಲಿನಿಂದ “ಯೋನೀ” ಎನ್ನುತ್ತಾರೆ. ಸರ್ದಾರ್ಜೀ ಹೇಳುತ್ತಾನೆ, ಫೆಂಟಾಸ್ಟಿಕ್. ನೀವುಗಳು ಸರಿಯಾಗೇ ಹೇಳಿದಿರಿ. ಈಗ ಹೇಳಿ, ಈ ಯೋನಿ ನಿಮ್ಮ ತಾಯಿಯದೋ ಅಥವಾ ಸೋದರಿಯದೋ? ಅವಾಕ್ಕಾದ ಅಧಿಕಾರಿಗಳು ತಾವು ತೆರೆದ ಬಾಯಿಯನ್ನು ಮುಚ್ಚುವ ಮೊದಲೇ ಸರ್ದಾರ್ಜೀ ಗೆಲುವಿನ ನಗೆಯೊಂದಿಗೆ ಕಚೇರಿಯ ಮೆಟ್ಟಿಲು ಇಳಿದು ರಸ್ತೆ ಕಡೆ ಹೆಜ್ಜೆ ಹಾಕುತ್ತಾನೆ.

ನಾಳೆಯ valentines ದಿನದಂದು ನಿಮ್ಮ ತಾಯಿಯನ್ನು ಪ್ರೀತಿಸಿ.

ಫೆಬ್ರವರಿ ೧೪ ಬಂತೆಂದರೆ ಕೆಲವರಲ್ಲಿ ಅದೇನೋ ಒಂದು ರೀತಿಯ ರೋಮಾಂಚನ ಮಿಶ್ರಿತ ನಡುಕವಾದರೆ ಮತ್ತೆ ಕೆಲವರಿಗೆ ಭೀತಿಯ ನಡುಕ. ಪ್ರೇಮಿಗಳಿಗೆ ತನ್ನನ್ನು ಪ್ರೀತಿಸುವ ವ್ಯಕ್ತಿ ಏನು ತರಬಹುದು, ಯಾವ ರೆಸ್ಟುರಾಂಟ್ ಗೆ ಕರೆದುಕೊಂಡು ಹೋಗಬಹುದು ಎನ್ನುವ ನವಿರೇಳುವ ನಡುಕವಾದರೆ, ಜೋಡಿಗಳನ್ನು ಆಮಂತ್ರಿಸಿದ್ದಕ್ಕೆ, ಹುರಿದುಂಬಿಸಿದ್ದಕ್ಕೆ  ತನ್ನ ಅಂಗಡಿ ಅಥವಾ ರೆಸ್ಟುರಾಂಟ್ ನ ಗಾಜುಗಳು ಎಲ್ಲಿ ವಿರೋಧಿಸುವವರ ಕಲ್ಲಿಗೆ ಚಲ್ಲಾಪಿಲ್ಲಿ ಆಗಬಹುದೋ ಎನ್ನುವ ಭೀತಿಯ ನಡುಕ ಇನ್ನು ಕೆಲವರಿಗೆ.   

ಮಕ್ಕಳ ದಿನಾಚರಣೆಯಿಂದ ಹಿಡಿದು ಊರುಗೋಲು ಹಿಡಿದು ನಡೆಯುವವರ ದಿನದವರೆಗೂ ವೈವಿಧ್ಯಗಳಿವೆ ದಿನಾಚರಣೆಗಳಿಗೆ. ಪ್ರೇಮಿಗಳಿಗೂ ಒಂದು ದಿನ. ಅದೇ valentine’s day. ಆದರೆ ಪ್ರೀತಿ ಎನ್ನುವುದು  ಬರೀ ಗಂಡು ಹೆಣ್ಣಿನ ನಡುವಿನ ಸಾಂಗತ್ಯ ಅಥವಾ ಸರಸವೇ ಆಗಬೇಕಿಲ್ಲ. ಪ್ರೀತಿಯನ್ನು platonic love ಆಗಿ ಪರಿವರ್ತಿಸಿದಾಗ ನಮ್ಮ ಸಹೋದ್ಯೋಗಿ, ನೆರೆಯವರು, ಸ್ನೇಹಿತರು, ಉದ್ರಿ ಕೊಡುವ ದಿನಸಿ ಅಂಗಡಿಯವ, ದಿನಪತ್ರಿಕೆ ಹಾಕುವ ವ್ಯಕ್ತಿ ಹೀಗೆ ಎಲ್ಲರೂ ಅರ್ಹರಾಗಬಹುದು ನಮ್ಮ ಪ್ರೀತಿಗೆ. ಈ ಕೆಳಗೆ ಕಾಣಿಸಿದ ಸಲಹೆಗಳು valentines ದಿನಕ್ಕೆ ಒಂದು ಹೊಸ ರೀತಿಯ ಹುರುಪು, ಭರವಸೆ ಮೂಡಿಸಬಹುದು.

ಬೆಳ್ಳಂಬೆಳಗ್ಗೆ ನಮ್ಮ ಗೇಟಿಗೆ ನ್ಯೂಸ್ ಪೇಪರ್ ಸಿಕ್ಕಿಸುವ ಹುಡುಗನನ್ನು ಹುಬ್ಬು ಗಂಟಿಕ್ಕಿ ಸ್ವಾಗತಿಸುವುದಕ್ಕಿಂತ ಅವನು ನಮ್ಮ ಹಾಗೆಯೇ ಒಬ್ಬ ಮನುಷ್ಯ ಎಂದು ಬಗೆದು ಮುಗುಳ್ನಕ್ಕು, ಒಂದು ಲಕೋಟೆಯಲ್ಲಿ ೧೦ ರೂಪಾಯಿ ಇಟ್ಟು ಕೊಟ್ಟರೆ ಹೇಗಿರಬಹುದು? ಅವನು ಆಸೆ ಪಡುತ್ತಿದ್ದ ಯಾವುದಾದರೂ ವಸ್ತು ಕೊಳ್ಳಲು ನಿಮ್ಮ ಆ ಕಾಣಿಕೆ ಅವನಿಗೆ ನೆರವಾಗಬಹುದು.

ಮನೆಯ ಮುಂದೆ ನಿಂತು ಈರುಳ್ಳಿ, ಟೊಮೇಟೋ ಎಂದು ಕೂಗುತ್ತಾ ತರಕಾರಿ ಮಾರುವವನಿಗೆ ಒಂದು ದಿನವಾದರೂ ಚೌಕಾಶಿಯಿಂದ ಮುಕ್ತಿ ಕೊಡಿಸಿ. ಈ ಒಂದು ದಿನವಾದರೂ ಅವನು ಹೇಳಿದ ಬೆಲೆ ಕೊಟ್ಟು ಬೆಳ್ಳುಳ್ಳಿ ಕೊಂಡು ಕೊಳ್ಳಿ. ಅಯ್ಯೋ ಇನ್ನೊಂದು ಬೆಳ್ಳುಳ್ಳಿ ಹಾಕು, ನಿನ್ ಗಂಟು ಹೋಗಲ್ಲ ಎಂದು ಗದರಿಸಿ greedy ಆಗಬೇಡಿ.

ನಿಮ್ಮ ತಾಯಿಯನ್ನು ಪ್ರೀತಿಸಿ. ಹಾಂ, ನಾವು ಯಾವಾಗಲೂ ಪ್ರೀತಿಸುತ್ತೇವೆ, ಅಷ್ಟು ಮಾತ್ರವಲ್ಲ mother’s day ಇದ್ದೇ ಇದೆಯಲ್ಲ ಎಂದು ಹೇಳಬೇಡಿ. ತಾಯಿ ಅಂದರೆ ನಮ್ಮ ಹೆತ್ತಬ್ಬೆ ಅಲ್ಲ, ಕೋಟ್ಯಂತರ ಹೆತ್ತಬ್ಬೆಯರನ್ನೂ, ನಮ್ಮನ್ನೂ ಹೊತ್ತೂ ಹೊತ್ತೂ ಬಳಲಿದ “ಭೂತಾಯಿ” ಯನ್ನು ಪ್ರೀತಿಸಿ. ಈ ಒಂದು ದಿನವಾದರೂ disposable ಗಳ ಸಹವಾಸ ಬಿಡಿ. ಅವು ಕಳಿಸುವ CFC (chloro fluoro carbon)  ನಮ್ಮ ತಾಯಿಯನ್ನು ಇನ್ನಷ್ಟು ಕ್ಷೀಣಗೊಳಿಸುತ್ತಿದೆ. ಸಾಧ್ಯವಾದರೆ ಕಳೆದ ಆರು ತಿಂಗಳಿನಿಂದ ಸೋರುತ್ತಿರುವ ನಲ್ಲಿಗೆ ಏನಾದರೂ ರಿಪೇರಿ ಮಾಡಿ, ಅಮೂಲ್ಯವಾದ ನೀರಿನ ಹನಿಗಳನ್ನು ಉಳಿಸಿ.

ಬೆಳಿಗ್ಗೆ ಸ್ನಾನ ಮಾಡಿ ಬಟ್ಟೆ ತೊಡುವಾಗ ಡಿಸ್ಕೌಂಟ್ ಆಸೆಗೆ ಬಿದ್ದು ಖರೀಸಿದ ಆದರೆ ಎಂದೂ ತೊಡದ ಆ ಟೀ ಶರ್ಟ್ ಅಥವಾ “ಮ್ಯಾಕ್ಸಿ” ಯನ್ನು ಯಾರಿಗಾದರೂ ದಾನ ಮಾಡಿ. ಹಾಗೆಯೆ ಯಾವುದಾದರೂ ಉಪಯೋಗಿಸದ ವಸ್ತು ಅಟ್ಟದ ಮೇಲಿದ್ದರೆ ಅದಕ್ಕೂ ಮೋಕ್ಷ ಕಾಣಿಸಿ. ದಾನ ನೀಡುವವನು “ದಾನವ” ನಾಗೋಲ್ಲ ಬದಲಿಗೆ ನಿಜವಾದ ಮನುಷ್ಯನಾಗುತ್ತಾನೆ, ದೇವರ ಮುಖದ ಮೇಲೆ ಮಂದಹಾಸ ತರುತ್ತಾನೆ. ಹಿಂಸೆ ಕಂಡೂ ಕಂಡೂ ರೋಸಿದ ಪರಮಾತ್ಮನಿಗೂ ಒಂದು smile ದಾನ ಮಾಡಿದಂತೆ ಈ ಸುದಿನದಂದು.

ದೊಡ್ಡ ಮನಸ್ಸು ಮಾಡಿ ಒಂದು ಪುಸ್ತಕ ಖರೀದಿಸಿ. ರಕ್ತದೊತ್ತಡ ಹೆಚ್ಚು ಮಾಡುವ ಪುಸ್ತಕವೋ, ಪತ್ರಿಕೆಯೋ ಅಲ್ಲ. ಏಗ್ದಾಗೆಲ್ಲಾ ಐತೆ ತೆರನಾದ, ಅಥವಾ ಅಕ್ಕ ಮಹಾದೇವಿ, ಶಿಶುನಾಳ ಶರೀಫರ ಬದುಕಿನ ನಿಜವಾದ ಅರ್ಥ ಹೇಳುವ ಪುಸ್ತಕವನ್ನು ಕೊಳ್ಳಿ.

ರಸ್ತೆಯಲ್ಲಿ ಹಾದುಹೋಗುವಾಗ ಯಾವುದಾದರೂ ಆಸ್ಪತ್ರೆ ಕಂಡರೆ ಜಗುಲಿಯ ಮೇಲೆ ಅಸಹಾಯಕನಾಗಿ ಕೂತ ವನಿಗೆ ಹಣ್ಣು ಹಂಪಲು ಕೊಡಿಸಿ ಅಥವಾ ಏನಾದರೂ ಧನ ಸಹಾಯ ಮಾಡಿ. ಅವನ ಮುಖದ ಮೇಲೆ ನೀವು ಕಾಣುವ ಹರ್ಷ ನಿಮ್ಮ valentine ದಿನಕ್ಕೆ ಒಂದು ಹೊಸ, ಅವರ್ಣನೀಯ ಅರ್ಥವನ್ನು ತಂದು ಕೊಡುತ್ತದೆ.

ಮೊಬೈಲ್ ಉಪಕರಣದ ರಿಂಗ್ ಟೋನ್ ವಾಲ್ಯೂಮ್ ಇನ್ನಷ್ಟು ಕಡಿಮೆ ಮಾಡಿ. ನೀವು ಹಾಕಿರುವ ಆ ಕರ್ಕಶ ಹಾಡನ್ನು ಇಡೀ ವಿಶ್ವ ಈಗಾಗಲೇ ಕೇಳಿಯಾಗಿದೆ. ಮೊಬೈಲ್ ರಿಂಗ್ ಆದ ಕೂಡಲೇ ಅಲ್ಲೇ ಪಕ್ಕದಲ್ಲೇ ಇರುವ “silence” ಗುಂಡಿಯನ್ನು ಒತ್ತಿ ಶಬ್ದ ಮಾಲಿನ್ಯ ಕಡಿಮೆ ಮಾಡಿ.           

ಸೂಟು ಬೂಟು ತೊಟ್ಟು ಅಥವಾ ಆಕರ್ಷಕವಾಗಿ ಬಟ್ಟೆ ಧರಿಸಿಯೂ ಕನ್ನಡ ಮಾತನಾಡಬಹುದು ಎಂದು ಸುತ್ತಲಿನವರಿಗೆ ತೋರಿಸಿ. ಆಂಗ್ಲ ಭಾಷೆಯೂ ಇರಲಿ, ಆದರೆ ಕನ್ನಡ ಹೆಚ್ಚು ಆಕರ್ಷಕ ಎಂದು ಮನವರಿಕೆ ಮಾಡಿಸಿ.    

ಟ್ರಾಫಿಕ್ ಸಿಗ್ನಲ್ ಬಳಿಯೋ, ಪಾರ್ಕಿಂಗ್ ಲಾಟ್ ಹತ್ತಿರವೋ ಸಿಗುವ ಸಪ್ಪೆ ಮುಖದ ಅಪರಿಚಿತನ ಕಡೆ ಮುಗುಳ್ನಗೆ ಬೀರಿ. ಪ್ರಪಂಚ ನಾವೆಣಿಸಿದಷ್ಟು ಕೆಟ್ಟಿಲ್ಲ ಎನ್ನುವ ಭಾವನೆ ಅವನಲ್ಲಿ ಮೂಡಿಸಿ.   

ಬೆಳಗ್ಗಿನಿಂದ ರಾತ್ರಿವರೆಗೂ ಕರಿದಿದ್ದು, ಹುರಿದಿದ್ದು ತಿಂದೂ ತಿಂದೂ ಏರಿಸಿಕೊಂಡ BP ಎನ್ನುವ “ಮೌನ ಹಂತಕ” (SILENT KILLER) ನ ಕಡೆ ಕಣ್ಣು ಹಾಯಿಸಿ. ಉದಾಸೀನ ಮಾಡದೆ bp ಪರೀಕ್ಷಿಸಿ. ಉಪ್ಪಿಗಿಂತ ರುಚಿಯಿಲ್ಲ ಎನ್ನೋ ಮಾತು ಗಾದೆಗೆ ಸೀಮಿತವಾಗಲಿ, ಟೇಬಲ್ ಸಾಲ್ಟ್ ಅನ್ನು ಸಂಪೂರ್ಣ ಉಪೇಕ್ಷಿಸಿ. ಒಂದರ್ಧ ಘಂಟೆ ನಡೆಯಿರಿ. ಇಂದೂ, ದಿನವೂ.  ನಿಮ್ಮ ದೀರ್ಘಾಯಸ್ಸು ನಿಮಗಲ್ಲದಿದ್ದರೂ ನಿಮ್ಮನ್ನು ಪ್ರೀತಿಸುವವರಿಗಾಗಿರಲಿ.     

ಕೊನೆಯದಾಗಿ, ತನಗಿರುವ ಎರಡು ಕೈ, ಎರಡು ಕಾಲುಗಳನ್ನು ದ್ವಿಗುಣ, ತ್ರಿಗುಣಗೊಳಿಸಿ ಹೆಣಗುತ್ತಾ ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಆಫೀಸಿಗೆ ಮತ್ತು ಶಾಲೆಗೆ ಹೊರಡಿಸುವ ತಂಗಾಳಿ ರೀತಿಯ thankless ಜೀವಕ್ಕೊಂದು ಕೆಂಪು ಗುಲಾಬಿ ಕೊಟ್ಟು ನೀನಿಲ್ಲದ ದಿನ ದಿನವೇ ಅಲ್ಲ ಎನ್ನುವ ಭಾವನೆ ವ್ಯಕ್ತಪಡಿಸಿ.  

ನಲ್ಮೆಯ ಸಂಪದದ ಬಂಧು ಭಗಿನಿಯರಿಗೆ ಪ್ರೀತಿಯ ದಿನದ ಅತ್ಯಂತ ಪ್ರೀತಿಯ ಹಾರೈಕೆಗಳು. 

ಮೇಲಿನ ಲೇಖನಕ್ಕೆ ಸ್ಫೂರ್ತಿ ಈ ವೆಬ್ ತಾಣ: http://philanthropywriting.com/2011/02/09/16-charitable-ways-to-celebrate-valentines-day/

ಈಜಿಪ್ಟ್ ಕ್ರಾಂತಿ

ಕಳೆದ ತಿಂಗಳ ಟುನೀಸಿಯಾ ಕ್ರಾಂತಿ ಅಲ್ಲಿನ ಅಧ್ಯಕ್ಷ ಪದವಿ ತೊರೆದು ಸೌದಿ ಸೇರುವುದರೊಂದಿಗೆ ಮುಕ್ತಾಯಗೊಂಡು ಅದರ ಪರಿಣಾಮ ಮಧ್ಯ ಪ್ರಾಚ್ಯ ದೇಶಗಳ ಇತರೆ ಸರ್ವಾಧಿಕಾರಿಗಳ ಮೇಲೂ ಬೀಳಲು ಆರಂಭಿಸಿತು. ಹೊಸ್ನಿ ಮುಬಾರಕ್ ಈಜಿಪ್ಟ್ ನ ಮಾಜಿ ಅಧ್ಯಕ್ಷ ಅನ್ವರ್ ಸಾದಾತ್ ರ ವಧೆಯ ನಂತರ ಗದ್ದುಗೆಗೆ ಏರಿದ ಕೂಡಲೇ ಇಳಿದು ಹೋಗುವ ದಾರಿ ಮರೆತು ಬಿಟ್ಟ. ತನ್ನ ದೀರ್ಘಾವಧಿ ಆಡಳಿತದ ಅವಧಿಯಲ್ಲಿ ತನ್ನ ದೇಶದ ವಿದ್ಯಾವಂತ ಸಮುದಾಯವನ್ನು ಒಂದು ಒಳ್ಳೆಯ ಗುಣಮಟ್ಟದ ಬದುಕಿನ ಕಡೆಗೆ ನಡೆಸುವ ಪ್ರಯತ್ನ ಮಾಡಲಿಲ್ಲ ಮುಬಾರಕ್. ಅವನ ದೂರದೃಷ್ಟಿತ್ವ ಕೇವಲ ತನ್ನ ಮಗ “ಗಮಾಲ್” ನನ್ನು ಪಟ್ಟಕ್ಕೆ ಏರಿಸುವುದೇ ಆಗಿತ್ತು. ಇದನ್ನು ಕಂಡು ರೋಸಿದ ಜನ ಒಳಗೊಳಗೇ ಕುದಿಯುತ್ತಿದ್ದರು. ಸಹನೆಯ ಕಟ್ಟೆ ಕೊನೆಗೂ ಒಡೆದು ಮುಬಾರಕ್ ನನ್ನು ಪದಚ್ಯುತಿಗೊಳಿಸಲು ತೀರ್ಮಾನಿಸಿದರು. ಮೊದ ಮೊದಲು “ಟ್ವಿಟ್ಟರ್” ಮತ್ತು “ಫೇಸ್ ಬುಕ್” ಸಹಾಯದಿಂದ ಜನರನ್ನು ಕಲೆ ಹಾಕಿ ನಂತರ ಬೀದಿಗೆ ಇಳಿದ ಜನ ಪೊಲೀಸರ ದಬ್ಬಾಳಿಕೆಗೆ ಜಪ್ಪಯ್ಯ ಅನ್ನದೆ ಬೀದಿ ಹೋರಾಟಕ್ಕೆ ನಿಂತರು. ಈ ಹೋರಾಟದಲ್ಲಿ ಜನರ ಕೈ ಮೇಲಾಗಿ ಪೊಲೀಸರು ಕಾಲು ಕಿತ್ತರು. ಈಗ ಸೈನ್ಯದ ಸರತಿ. ಆದರೆ ಸೈನ್ಯ ಜನರ ವಿರುದ್ಧ ಗುಂಡು ಹಾರಿಸಲಿಲ್ಲ. ಚೀನಾದ ತಿಯಾನನ್ಮೆನ್ ಚೌಕದಲ್ಲಿ ನಡೆದ ರಕ್ತದೋಕುಳಿ ಇಲ್ಲ ಮರುಕಳಿಸಲಿಲ್ಲ. ೩೦ ವರ್ಷಗಳ ಕಾಲ ಅಧಿಕಾರದಲ್ಲಿರುವ ಮುಬಾರಕ್ ಗೆ ಈ ಜನ ವಿರೋಧವನ್ನೂ ಯಾವ ರೀತಿಯಲ್ಲಿ ಹತ್ತಿಕ್ಕಬೇಕು ಎಂದು ಯಾರೂ ಪಾಠ ಹೇಳಬೇಕಿರಲಿಲ್ಲ. ರಾತ್ರಿ ಹೊತ್ತು ಜೈಲಿನಲ್ಲಿದ್ದ ಕೈದಿಗಳನ್ನು ಬಿಡುಗಡೆ ಮಾಡಿ ಜನರನ್ನು ಲೂಟಿ ಮಾಡಲು ಪರೋಕ್ಷವಾಗಿ ಪ್ರೇರೇಪಿಸಿದ. ಇದನ್ನು ನೋಡಿದವರು ತಿಳಿಯಬೇಕು ಲೂಟಿಕೋರರ, ದಂಗೆಕೋರರ ಗಲಭೆ ಎಂದು. ಹೇಗಿದೆ ಟ್ರಿಕ್ಕು? ಸೌದಿ ಅರೇಬಿಯಾದ ದೊರೆ ಸಹ ಈ ಕ್ರಾಂತಿಯನ್ನು ಟೀಕಿಸಿ ಇದು ಅಲ್ಲಿನ ಪುಂಡರ ಕೃತ್ಯ ಎಂದು ತನ್ನ ಆಪ್ತ ಮಿತ್ರ ಮುಬಾರಕ್ ನ ಪರವಾಗಿ ಹೇಳಿಕೆ ನೀಡಿದರು. ಅದಕ್ಕೆ ಅಲ್ಲಿನ ಜನ ಕೊಟ್ಟ ಉತ್ತರ, ದೊರೆಗಳೇ, ತಾವು ಒಂದು ದಿನಕ್ಕೆ ೨ ಡಾಲರ್ ದುಡಿಮೆಯಲ್ಲಿ ದಿನ ಕಳೆಯಿರಿ ಆಗ ತಿಳಿಯುತ್ತದೆ ನಮ್ಮ ಕಷ್ಟ ಎಂದು. ಈಜಿಪ್ಟ್ ನ ಶೇಕಡಾ ೪೦ ರಶ್ಟು ಜನ ೨ ಡಾಲರ್ ಗಿಂತ ಕಡಿಮೆ ದುಡಿಯುತ್ತಾರಂತೆ. ನಿರೋದ್ಯೋಗ ಮುಗಿಲು ಮುಟ್ಟಿದ್ದು ಜನ ಹೇಗೂ ಬೀದಿ ಪಾಲಾಗಿದ್ದರು, ಅದರೊಂದಿಗೆ ಒಂದಿಷ್ಟು ಘೋಷಣೆಗಳನ್ನು ಕೂಗಿ, ಇಟ್ಟಿಗೆ ತುಂಡುಗಳನ್ನು ಪೊಲೀಸರ ಕಡೆ ಬೀಸಿ ಒಗೆದಾಗ ಹುಟ್ಟಿಕೊಂಡಿತು ಜನ ಕ್ರಾಂತಿ. ದಿನವೂ ಜನರು ಈಜಿಪ್ಟ್ ನ ರಾಜಧಾನಿ ಕೈರೋ ನಗರದ “ತೆಹ್ರೀರ್” ಚೌಕದಲ್ಲಿ ಸೇರಲು ತೊಅಗಿದರು. ಕೆಲವರಂತೂ ಟೆಂಟು ಗಳನ್ನು ಹಾಕಿ ಕೊಂಡು ಅಲ್ಲೇ ವಾಸಿಸುತ್ತಿದ್ದರು. ತಾತ್ಕಾಲಿಕ ಆಸ್ಪತ್ರೆಗಳೂ, ಔಷಧದಂಗಡಿ ಗಳೂ ತೆರೆದು ಕೊಂಡವು ಪ್ರತಿಭಟನಾಕಾರರ ಅವಶ್ಯಕತೆ ಪೂರೈಸಲು. ಇದನ್ನೆಲ್ಲಾ ನೋಡುತ್ತಿದ್ದ ಮುಬಾರಕ್ ಸಮಯ ತನ್ನ ಸಹಾಯಕ್ಕೆ ಬರಬಹುದು ಎಂದು ಲೆಕ್ಕ ಹಾಕುತ್ತಿದ್ದ. ಮುಬಾರಕ್ ಠಕ್ಕ ಮಾತ್ರವಲ್ಲ ಜಾಣ ನರಿಯೂ ಕೂಡಾ. ಎಷ್ಟಿದ್ದರೂ ರಾಜಕಾರಣಿಯಲ್ಲವೇ. ರಾಜಕಾರಣದ ಜೊತೆಗೇ ತಾನು ಸೇವೆ ಸಲ್ಲಿಸುತ್ತಿದ್ದ ಸೈನ್ಯದ ಕಾಠಿಣ್ಯ ಸಹ ಅವನಿಗೆ ಬಳುವಳಿಯಾಗಿ ಬಂದಿತ್ತು. ವಾಯುಸೇನೆಯ ನಿವೃತ್ತ ಫೈಟರ್ ಪೈಲಟ್ ಮುಬಾರಕ್. ವಿವಿಧ ಕ್ಷೇತ್ರಗಳಲ್ಲಿ ತಾನು ಕಲಿತ ವಿದ್ಯೆಯನ್ನು ದುಡಿಸಿ ಕೊಳ್ಳಲು ನೋಡಿದ. ಊಹೂಂ. ಜನ ಮೊಂಡು. ಕ್ರಾಂತಿಯ ಮೊದಲ ದಿನಗಳಲ್ಲಿ ಅವರ ಬೇಡಿಕೆ ಸರಳವಾಗಿತ್ತು. ನೀನು ತೊಲಗಿದರೆ ಸಾಕು, ಬೇರೇನೂ ಬೇಡ ಎಂದು. ದಿನ ಗಳೆದಂತೆ, ಹೊಸ ಹೊಸ ಸೂರ್ಯನ ಕಿರಣಗಳು ಚೌಕದ ಮೇಲೆ ಬೀಳುತ್ತಿದ್ದಂತೆ ತಲೆಯಲ್ಲಿ ಹೊಸ ಹೊಸ ವಿಚಾರಗಳು ಹುಟ್ಟಿಕೊಂಡವು. ಸಂವಿಧಾನ ಬದಲಿಸಬೇಕು, ನಿನ್ನ ಸಂಗಾತಿಗಳು ಉತ್ತರಾಧಿಕಾರಿ ಆಗಬಾರದು, ನೀನು ತೊಲಗಿದರೆ ಮಾತ್ರ ಸಾಲದು, ಕಟಕಟೆಯ ಹಿಂದೆ ನಿಂತು ಆಡಳಿತ ದುರುಪಯೋಗದ ಮತ್ತು ಖಜಾನೆ ಲೂಟಿಯ ಬಗ್ಗೆ ಉತ್ತರ ಕೊಡಬೇಕು ಎಂದು ದೊಡ್ಡ ಪಟ್ಟಿ ಮಾಡಿದರು. ಯಾವುದೇ ಪರಿಣಾಮ ಕಾಣದಾದಾಗ ಆಡಳಿತಾರೂಢ ಪಕ್ಷದ ಕೇಂದ್ರ ಕಛೇರಿಯನ್ನು ಜನ ಅಗ್ನಿಗೆ ಅರ್ಪಿಸಿದಾಗ ಭಯಬಿದ್ದ ಮುಬಾರಕ್ ಜನರನ್ನುದ್ದೇಶಿಸಿ ಮಾತನಾಡಿ ಎಲ್ಲ ರೀತಿಯ ಆಶ್ವಾಸನೆಗಳನ್ನು ಜನರಿಗೆ ನೀಡಲು ತೊಡಗಿದ. ಅವನ ಬತ್ತಳಿಕೆಯಲ್ಲಿನ ಬಾಣಗಳು ಖಾಲಿಯಾದವೇ ಹೊರತು ಜನರ ಬೇಡಿಕೆ ಮಾತ್ರ ಸ್ಪಷ್ಟವಾಗಿತ್ತು. Mubarak, we hate you.

೧೧.೨.೨೦೧೧ ಶುಕ್ರವಾರ. ಶುಭ ಶುಕ್ರವಾರ ಈಜಿಪ್ಷ್ಯನ್ನರಿಗೆ. ಗುರುವಾರ ರಾತ್ರಿಯಷ್ಟೇ ನಾನು ರಾಜೀನಾಮೆ ನೀಡಲಾರೆ ಎಂದು ಹಠ ಹಿಡಿದಿದ್ದ ಮುಬಾರಕ್ ಕೊನೆಗೂ ಶರಣಾದ ಜನರ ಬೇಡಿಕೆಗಳಿಗೆ, ಭಾವನೆಗಳಿಗೆ.

೨೫.೧.೨೦೧೧ ಕ್ಕೆ ಆರಂಭವಾದ ಈಜಿಪ್ಟ್ ಕ್ರಾಂತಿ ಪರ್ವಯವಸಾನ ಕಂಡಿದ್ದು ಹೀಗೆ. ಜನರ ಆಸೆಗಳಿಗೆ, ಆಕಾಂಕ್ಷೆಗಳಿಗೆ ಸ್ಪಂದಿಸದ ಎಂಥದ್ದೇ ದೊಡ್ಡ ಸರ್ವಾಧಿಕಾರಿಯೂ ಹೆಚ್ಚು ದಿನ ಆಳಲಾರ. ದೀರ್ಘಾವಧಿ ಅಧಿಕಾರದ ಗದ್ದುಗೆ ಮೇಲೆ ಕೂತ ವ್ಯಕ್ತಿ ಶುದ್ಧ ಸೋಮಾರಿಯಾಗಿ ಬಿಡುತ್ತಾನೆ. ಕಿವುಡೂ ತನ್ನನ್ನು ಸುತ್ತುವರೆದುಕೊಳ್ಳುತ್ತದೆ. ಮಧ್ಯ ಪ್ರಾಚ್ಯದಲ್ಲಿ ಇಂಥ ಸೋಮಾರಿಗಳ ದೊಡ್ಡ ದಂಡೇ ಇದೆ. ಬಹುಶಃ ತುನೀಸಿಯಾದ ಮತ್ತು ಈಜಿಪ್ಟ್ ನ ಬೀದಿಗಳು ಅವರಿಗೆ ಪಾಠಗಳಾಗ ಬಹುದು. ಈ ಕ್ರಾಂತಿಗಳಿಂದ ಮೈಮುರಿಯುತ್ತಾ ಏಳುತ್ತಿರುವ ಸಿರಿಯಾ, ಜೋರ್ಡನ್, ಯೆಮನ್ ದೇಶಗಳು ಈಗಾಗಲೇ ಜನರಿಗೆ ರಿಯಾಯಿತಿ ನೀಡಲು ಆರಂಭಿಸಿವೆ. ಈ ಕ್ರಾಂತಿಯ ವೇಳೆ ಸೌದಿ ದೊರೆ ಬೆನ್ನು ನೋವಿನಿಂದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದು ಮೊರೋಕ್ಕೋ ದೇಶದ ತನ್ನ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆತಂಕದಿಂದ ದೊರೆ ಮರಳಿ ತನ್ನ ದೇಶಕ್ಕೆ ಧಾವಿಸಿ ಬರಬಹುದು ಎಂದು ಇಲ್ಲಿ ಜನ ತಿಳಿದಿದ್ದರು. ಆದರೆ ಇಲ್ಲಿನ ದೊರೆಯ ಕಾರ್ಯಶೈಲಿ ಸ್ವಲ್ಪ ಭಿನ್ನ, ಮುಬಾರಕ್ ನಂಥವರಿಗಿಂತ. ದೇಶದ ಸಂಪತ್ತನ್ನು ದೋಚಿಕೊಂಡು ಜನರಿಗೆ ಏನನ್ನೂ ಮಾಡದೆ ಕೂತು ಬಿಡುವುದಿಲ್ಲ. ತನ್ನ ಜನರಿಗೂ ಒಂದಿಷ್ಟು ಒಳಿತನ್ನೇ ಮಾಡುತ್ತಾರೆ. ಈ ಕ್ರಾಂತಿಗಳ ನಂತರ ಸೌದಿಯಲ್ಲಿಯೂ ಸಹ ಜನರ ಮನೆ ಸಾಲವನ್ನು ಸರಕಾರ ಮನ್ನಾ ಮಾಡಿದೆ. ಇನ್ನೂ ಕೆಲವು sop ಗಳು ಬರಲಿವೆ ಎಂದು ಜನ ಜೊಳ್ಳು ಸುರಿಸುತ್ತಾ ಕಾಯುತ್ತಿದ್ದಾರೆ. ಇದ್ಯಾವುದೂ ಸಾಲದು ಎಂದೇನಾದರೂ ಜನ ಗೊಣಗುವ ಯತ್ನ ನಡೆಸಿದರೆ ಸದೆ ಬಡಿಯಲು ಧಾರ್ಮಿಕ ಗುರುಗಳನ್ನು ಬಳಸಿಕೊಳ್ಳುತ್ತಾರೆ. ಶ್ರದ್ಧಾವಂತ ಸೌದಿ ಜನತೆ ಇಲ್ಲಿನ ಪುರೋಹಿತ ಶಾಹಿಗಳಿಗೆ ಹೆದರುತ್ತಾರೆ, ಪುರೋಹಿತಶಾಹಿಗಳು ಸರಕಾರೀ ಆಶ್ರಯದಲ್ಲಿ ತಮಗೆ ಬೇಕಾದನ್ನು ಪಡೆದು ನಿಷ್ಠೆಯ ಬಾಡಿಗೆ ವಸೂಲು ಮಾಡುತ್ತಾರೆ. demand and supply policy.

ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಶೀತವಾದರೆ ಮೊದಲು ಸೀನುವುದು ಅಮೆರಿಕ ಎನ್ನುವ ವಿಚಾರ ಎಲ್ಲರಿಗೂ ತಿಳಿದದ್ದೇ. ಕ್ರಾಂತಿಯ ಮೊದ ಮೊದಲ ದಿನಗಳಲ್ಲಿ ದೊಡ್ಡ ರೀತಿಯ ಸುದ್ದಿ ಮಾಡದೆ ಮೌನವಾಗಿ ನೋಡಿದ ಅಮೇರಿಕಾ ಕೆಮ್ಮಲು ಆರಂಭಿಸಿತು. ಕೆಮ್ಮು ಜನರ ಪರವಾಗಿರಲಿಲ್ಲ. ಮುಬಾರಾಕ್ ಪರವಾಗಿತ್ತು. ಪ್ರತಿಭಟನೆ ಜೋರಾದಾಗ ವಿಚಲಿತವಾದ ಅಮೇರಿಕಾ ಹೇಳಿದ್ದು ನಮಗೆ ಈಜಿಪ್ಟ್ ಶಾಂತವಾಗಿರುವುದು ಬಹು ಮುಖ್ಯ, ಅಲ್ಲಿನ ಸರಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು. ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ನೀಡಿದ ಅರ್ಧ ಡಜನ್ ಗೂ ಹೆಚ್ಚು ಪತ್ರಿಕಾ ಹೇಳಿಕೆಗಳಲ್ಲಿ ಎಲ್ಲಿಯೂ ಮುಬಾರಕ್ ನ ರಾಜೀನಾಮೆ ಕೇಳಲಿಲ್ಲ. ಅಮೆರಿಕೆಗೆ ಮುಬಾರಕ್ ಬೇಕು. ಇಲ್ಲದಿದ್ದರೆ ಅಮೇರಿಕಾ ಮತ್ತು ಇತರೆ ದೇಶಗಳು ಹೆದರುವ muslim brotherhood ಎನ್ನುವ ಸಂಘಟನೆ ಅಧಿಕಾರಕ್ಕೆ ಬರುವ ಅಪಾಯ ವಿದ್ದು ಈ ಸಂಘಟನೆಯನ್ನು ಮುಬಾರಕ್ ಹದ್ದುಬಸ್ತಿನಲ್ಲಿ ಇಟ್ಟಿದ್ದ. ಪ್ರತಿಭಟನಾಕಾರರಲ್ಲಿ ಗಡ್ಡ ಬಿಟ್ಟವರ ಸಂಖ್ಯೆ ಹೆಚ್ಚಿತ್ತೋ ಎಂದು ಅಮೆರಿಕೆಯ ಮಾಧ್ಯಮಗಳು ದುರ್ಬೀನಿಟ್ಟು ನೋಡಿದವು ತಹ್ರೀರ್ ಚೌಕದ ಸುತ್ತ. ಶಕ್ತಿಶಾಲಿ ಅಮೇರಿಕಾ ಶತ್ರುವಿನ ಅತ್ಯಾಧುನಿಕ ಕ್ಷಿಪಣಿಗಳನ್ನೂ, ಯುದ್ಧ ನೌಕೆಗಳನ್ನೂ, ಸಮರ ಟ್ಯಾಂಕುಗಳನ್ನೂ ಬಹು ಸಲೀಸಾಗಿ ನಿಭಾಯಿಸಬಲ್ಲುದು. ಆದರೆ ಗಡ್ಡವನ್ನು ಕಂಡರೆ ಮಾತ್ರ ಕರುಳಿಗೆ ಚಳಿ ಹಿಡಿಯುತ್ತದೆ. muslim brotherhood ತನಗೆ ರಾಜಕೀಯದಲ್ಲಿ ವಿಶೇಷವಾದ ಆಸಕ್ತಿಯಿಲ್ಲ ಎನ್ನುವ ಹೇಳಿಕೆ ನೀಡಿದರೂ “hidden agenda” ಇಟ್ಟುಕೊಂಡು ಕೆಲಸ ಮಾಡುವ ಸಂಘಟನೆಗಳನ್ನು ನಂಬುವುದು ಕಷ್ಟದ ಮಾತೇ.

ಈಜಿಪ್ಟ್ ಶನಿವಾರದಿಂದ ಒಂದು ಹೊಸ ಸೂರ್ಯನನ್ನು ಸ್ವಾಗತಿಸಲಿದೆ. ಹೊಸ ಸ್ವಾತಂತ್ರ್ಯ, ಹೊಸ ಸಂಭ್ರಮ. ಎರಡು ವಾರಗಳ ಬೀದಿ ಹೋರಾಟ ಒಂದು ಹೊಸ ಅಧಾಯವನ್ನು ಆರಂಭಿಸಲು ಸಹಾಯ ಮಾಡಿದೆ. ಸಾಮಾಜಿಕ ವೆಬ್ ತಾಣಗಳ (twitter, facebook) ಮೂಲಕ ಯುವಜನ ಆರಂಭಿಸಿದ ನವಯುಗದ ಹೋರಾಟ ಫಲ ನೀಡಿದೆ. ಈ ಹೋರಾಟದಲ್ಲಿ ಯಾರ್ಯಾರು ಪಾಠ ಕಲಿಯಲಿದ್ದಾರೆ ಎಂದು ಕಾಲವೇ ಉತ್ತರ ಹೇಳಲಿದೆ.

ಚಿತ್ರ: ಅಲ್-ಜಜೀರ

ಈ ವೆಬ್ ತಾಣ ನಿಷಿದ್ಧ

عزيزي المستخدم، 

Dear User,

عفواً، الموقع المطلوب غير متاح.

Sorry, the requested page is unavailable.



إن كنت ترى أن هذه الصفحة ينبغي أن لا تُحجب تفضل بالضغط هنا. 

If you believe the requested page should not be blocked please click here.

ಬೇಡದ ವೆಬ್ ತಾಣಕ್ಕೆ ಭೆಟ್ಟಿ ನೀಡುವ ದಾರ್ಷ್ಟ್ಯತನ ತೋರಿದರೆ ಸೌದಿ ಯಲ್ಲಿರುವ ಇಂಟರ್ನೆಟ್ ಇಲಾಖೆ ಈ ಸಂದೇಶವನ್ನು ರವಾನಿಸುತ್ತದೆ. ಧರ್ಮಬಾಹಿರ, ಲೈಂಗಿಕ, ಹಿಂಸಾತ್ಮಕ contents ಇರುವ ತಾಣಗಳನ್ನು ತಡೆ ಹಿಡಿಯುತ್ತಾರೆ. ಹಾಗೇನಾದರೂ ನಿಮಗೆ ಅವರ ತೀರ್ಪಿನ ಬಗ್ಗೆ ತಕರಾರಿದ್ದರೆ ಈ ಮೇಲ್ ಮೂಲಕ  ಸಂಪರ್ಕಿಸ ಬಹುದು. world sex ತಾನವನ್ನು ನನಗಾಗಿ ಬಿಚ್ಚಿ ಕೊಡಪ್ಪ ಎಂದು ಯಾರಾದರೂ “ಮೇಲ್” ಮನವಿ ಸಲ್ಲಿಸಿಯಾರೆ? 
ಒಮ್ಮೆ times of india ತಾಣವನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಿದ್ದರು. ಆದರೆ ಅಚ್ಚರಿದಾಯಕವಾಗಿ ಸೌದಿಯ ಇಂಟರ್ನೆಟ್ ನಿರ್ಬಂಧ  ನಮ್ಮ ನೆರೆಯ ಚೀನಾದಷ್ಟು ಇಲ್ಲ. ಹಾಗೆಯೇ ಈಗ ನಡೆಯುತ್ತಿರುವ ಈಜಿಪ್ಟ್ ಸರ್ವಾಧಿಕಾರದ ವಿರುದ್ಧದ ಸಮಯ ಅಲ್ಲಿನ ಸರಕಾರ ಅಂತರ್ಜಾಲವನ್ನು ನಿಷೆಧಿಸಿದರೂ ಸೌದಿ ಆ ನಿಲುವನ್ನು ತಾಳಲಿಲ್ಲ. ಅಷ್ಟೊಂದು supremely confident ಇಲ್ಲಿನ ರೂಲರ್ ಗಳು.    

Switzerland. ಭೂಮಿಯ ಮೇಲಿನ ಸ್ವರ್ಗ

Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿ, swiss army knife, ವಿಶ್ವ ಪ್ರಸಿದ್ಧ Lindt chocolate, ಬೆಲೆಬಾಳುವ ವಾಚುಗಳ ಉತ್ಪಾದನೆ, ಮತ್ತು ವಿಶ್ವ ರಾಜಕಾರಣದಲ್ಲಿ ಯಾರ ಗೊಡವೆಗೂ ಹೋಗದೆ ತಟಸ್ಥ ನೀತಿ ಅನುಸರಿಸುವ ಒಂದು ಪುಟ್ಟ, ಅತಿ ಶ್ರೀಮಂತ ದೇಶ ಸ್ವಿಟ್ಜರ್ ಲ್ಯಾಂಡ್. ಇದು ನಮ್ಮ ಮುಗ್ಧ  ತಿಳಿವಳಿಕೆ ಈ ಪುಟ್ಟ ದೇಶದ ಬಗ್ಗೆ. 

ಆದರೆ ತನ್ನ ಸುತ್ತಲೂ ಶುಭ್ರ, ಮಂಜಿನ ಪರ್ವತವನ್ನೇ ಇಟ್ಟುಕೊಂಡ ಈ ಪುಟ್ಟ ದೇಶ ತನ್ನ ಒಡಲೊಳಗೆ ಇಟ್ಟುಕೊಂಡಿರುವುದು, ಶ್ರೀಮಂತವಾಗಿರುವುದು ಪಾಪದ ಹಣದ ಸಹಾಯದಿಂದ ಎಂದು ಹೇಳಿದರೆ ಹೌಹಾರುವಿರಾ?  

ವಿಶ್ವದ ಎಲ್ಲಾ ಭ್ರಷ್ಟ ರಾಜಕಾರಣಿ, ಅಧಿಕಾರಿ, ಕೈಗಾರಿಕೋದ್ಯಮಿ, ಕಳ್ಳ ಸಾಗಣೆದಾರ, ಮಾದಕ ದ್ರವ್ಯದ ವ್ಯಾಪಾರಿ ಹೀಗೆ ಹತ್ತು ಹಲವು ವರ್ಣರಂಜಿತ ವ್ಯಕ್ತಿತ್ವಗಳು ಲೂಟಿಗೈದ ಹಣವನ್ನು ಬಚ್ಚಿಡಲು ಆರಿಸಿಕೊಂಡ ತಾಣವೇ ಸ್ವಿಟ್ಜರ್ ಲ್ಯಾಂಡ್. ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ಇಟಲಿ ದೇಶಗಳಿಂದ ಸುತ್ತುವರೆದ ಸ್ವಿಸ್ಸ್, ಒಳ್ಳೆ ಬೆಚ್ಚಿಗಿನ ದೇಶ ಲೂಟಿ ಕೋರರಿಗೆ, ಪುಂಡರಿಗೆ. ಇದಕ್ಕಿಂತ ಬೆಚ್ಚಗಿನ, ರಹಸ್ಯ ಸ್ಥಳ ಬೇರೆಲ್ಲಿ ಸಿಗಲು ಸಾಧ್ಯ ಕಳ್ಳ ಧನವನ್ನು ಬಚ್ಚಿಡಲು, ಅಲ್ಲವೇ?   

ಭಾರತೀಯರು ಕೋಟಿಗಟ್ಟಲೆ ತೆರಿಗೆ ವಂಚಿಸಿದ, ನಮ್ಮ ಸಂಪನ್ಮೂಲ ಕದ್ದ, ಲಂಚದ ಮೂಲಕ ಗಳಿಸಿದ ಪಾಪದ ಹಣವನ್ನೂ ಸ್ವಿಸ್ ರೀತಿಯದೇ ಆದ Liechtenstein (ಲೀಚ್ಟೆನ್ ಸ್ಟೈನ್, ಯೂರೋಪ್ ನ ಮತ್ತೊಂದು ಮೈಕ್ರೋ ಸ್ಕೋಪಿಕ್ ದೇಶ )  ಬ್ಯಾಂಕ್ ನಲ್ಲಿ ಹೂತು ಹಾಕಿರುವುದನ್ನು ತೆಹೆಲ್ಕಾ ಬಯಲಿಗೆ ಹಾಕಿದೆ. ಸುಮಾರು ಹದಿನೈದು ಜನರ ಹೆಸರನ್ನು ಬಹಿರಂಗ ಗೊಳಿಸಿರುವ ತೆಹೆಲ್ಕಾ ಬರುವ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಹೊರಗೆಡವಲಿದೆ.  

ಸ್ವಿಸ್ ದೇಶದಲ್ಲಿ ಅಕ್ರಮವಾಗಿ ಧನ ಗುಡ್ಡೆ ಹಾಕಿರುವ ಜನರ ಹೆಸರುಗಳನ್ನು ಅಲ್ಲಿನ ಬ್ಯಾಂಕುಗಳು ಬಹಿರಂಗ ಪಡಿಸಬೇಕು. ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದೂ ಅಲ್ಲದೆ ಲೂಟಿಗೈದ ಸಂಪತ್ತಿಗೆ ತೆರಿಗೆಯನ್ನೂ ಕಟ್ಟದೆ ದುರಹಂಕಾರದಿಂದ ಮೆರೆಯುವ, ಶ್ರೀಮಂತರು ತಾವು ತಿಂದಿದ್ದನ್ನು ಕಕ್ಕಬೇಕು. ದೇಶದಲ್ಲಿ ಆಗಾಗ ಹೊರಬೀಳುತ್ತಿರುವ ಪ್ರತೀ ಹಗರಣದ ಹಿಂದೆಯೂ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿಯ ಮಾಹಿತಿ ಇದ್ದೂ ನಾವು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.  ಅದರ ಮೇಲೆ ಭಾರತ ಬಡ ದೇಶ ಎನ್ನುವ ಪಟ್ಟ ಬೇರೆ.  ಹೆಚ್ಚು ಎಂದರೆ ಅವನು ರಾಜಕಾರಣಿಯಾದರೆ ರಾಜೀನಾಮೆ ನೀಡಬಹುದು ಅಷ್ಟೇ. ರಾಜೀನಾಮೆ ನಂತರ ತಾನು ಕಬಳಿಸಿದ ಸಂಪತ್ತನ್ನು ಜೀವನ ಪೂರ್ತಿ ತಾನು ತನ್ನ ಮಕ್ಕಳು ತಿನ್ನಬಹುದು. ಜನರ ಮನ್ನಣೆಯನ್ನೂ ಗಳಿಸಿಕೊಳ್ಳಬಹುದು. ಇಂಥ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಒಳಗೊಂಡ ಹಗರಣಗಳನ್ನು ನೋಡಿದಾಗ ನಮಗನ್ನಿಸದೆ ಇರುತ್ತದೆಯೇ ನಮ್ಮ ದೇಶ ನಾವೆಣಿಸಿದಂತೆ ಬಡ ದೇಶವಲ್ಲ ಎಂದು?  

ತನ್ನ ಸ್ವ- ರಕ್ಷಣೆಗಾಗಿ ಅಥವಾ ಇಂಧನದ ಅವಶ್ಯಕತೆಗಾಗಿ ಅಣು ಸ್ಥಾವರಗಳನ್ನು ನಿರ್ಮಿಸಿದ್ದಕ್ಕೆ ಇರಾನಿನ ಮೇಲೆ ಹರಿ ಹಾಯುವ ಪಾಶ್ಚಾತ್ಯ ದೇಶಗಳು ಸ್ವಿಸ್ ತೆರನಾದ ಮೋಸದ ಜಾಲದ ಬಗ್ಗೆ ಮಾತ್ರ ಮೌನ ತಾಳಿರುವುದು  ಆಷಾಢ ಭೂತಿತನದ ಪರಮಾವಧಿ. ಕೊಳಕು ಹಣವನ್ನು ಒಡಲಲ್ಲಿಟ್ಟುಕೊಂಡು ವಿಶ್ವಕ್ಕೆ ತಾನು ಸಭ್ಯಸ್ಥ ಎಂದು ತೋರಿಸುವ ಸ್ವಿಸ್ ಪರಿಪಾಠ ಹೇಸಿಗೆ ಹುಟ್ಟಿಸುವಂಥದ್ದು. ಮೋಸದ, ಲಂಚದ ಹಣವನ್ನು ರಹಸ್ಯವಾಗಿ,  ಜೋಪಾನವಾಗಿರಿಸಿ ಬಡ ದೇಶಗಳಲ್ಲಿರುವ ಲಂಚಗುಳಿತನದ ಬಗ್ಗೆ ಮರುಕ ತೋರುತ್ತಾ ತಾನು ವಿಶ್ವದಲ್ಲಿ ಲಂಚ ರಹಿತ ದೇಶ ಎಂದು ತೋರಿಸಿಕೊಳ್ಳುವ ದೇಶದ ಬಗ್ಗೆ ಏನೆನ್ನಬೇಕೋ ತಿಳಿಯದು. ಬ್ಯಾಂಕಿಂಗ್ ಗೌಪ್ಯವನ್ನು ಕಾಪಾಡಲು ಸ್ವಿಟ್ಜರ್ ಲ್ಯಾಂಡ್ ನ ೭೩ % ಜನ ರ ಬೆಂಬಲವಿದೆಯಂತೆ. ಇಲ್ಲದೆ ಏನು, ಈ ಕಳ್ಳ ಹಣದ ನೆರವಿನಿಂದಲೇ ಅಲ್ಲವೇ ಅವರ ಬಾಳು ಬೆಳಗುತ್ತಿರುವುದು.

ಭಯೋತ್ಪಾದಕರು ಯಾವುದಾದರೂ ದೇಶದಲ್ಲಿ ಅಡಗಿ ಕೂತರೆ ಅವರನ್ನು ಹೊಗೆ ಹಾಕಿ ಹೊರಕ್ಕೆಳೆಯುವ ಅಮೆರಿಕೆಯಾಗಲಿ, ಅಥವಾ ಇನ್ಯಾವುದೇ ದೇಶವಾಗಲೀ ಸ್ವಿಸ್ ಬ್ಯಾಂಕುಗಳಲ್ಲಿ ಬಡ ದೇಶಗಳ ಧನ ಲೂಟಿ ಮಾಡಿ ಕಲೆಹಾಕಿದ್ದಕ್ಕೆ ಸ್ವಿಸ್ ದೇಶವನ್ನು ದಂಡಿಸಲು ಸಾಧ್ಯವೇ? ಭಯೋತ್ಪಾದಕ ಕೃತ್ಯದಲ್ಲಿ ಒಬ್ಬ ಭಾಗಿಯಾಗಿಲ್ಲದಿದ್ದರೂ ಓರ್ವ  ಭಯೋತ್ಪಾದಕನಿಗೆ ಆಶ್ರಯ ನೀಡುವುದೂ ಭಯೋತ್ಪಾದನೆಗೆ ಸಹಕರಿಸಿದ್ದಂತೆ. ಈ ಮಾನದಂಡವನ್ನು ಸ್ವಿಸ್ ನಂಥ ದೇಶಗಳ ಮೇಲೆ ಏಕೆ ಉಪಯೋಗಿಸಬಾರದು?  ಲೂಟಿ ಮಾಡಿದವ ಮಾತ್ರ ಕಳ್ಳನಲ್ಲ, ಅವನ ಲೂಟಿಯನ್ನು ಜಾಗರೂಕತೆಯಿಂದ ಕಾಯುವುದೂ ಠಕ್ಕತನವೇ.  

ಸ್ವಿಸ್ ದೇಶದ ಗಿರಾಕಿಗಳಲ್ಲಿ ಬರೀ ಲಂಚ ತಿನ್ನುವ ರಾಜಕಾರಣಿಗಳು ಮಾತ್ರವಲ್ಲ. ಮೆಕ್ಸಿಕೋ ದೇಶದ ಮಾದಕ ದ್ರವ್ಯ ಮಾರುವ ದೊರೆಗಳು ಸಹ ಇಲ್ಲಿ ಹಣ ಅಡಗಿಸಿಡುತ್ತಾರೆ. ಅಂದರೆ ಪ್ರಪಂಚವನ್ನು ಕಾಡುತ್ತಿರುವ ಎಲ್ಲ ರೀತಿಯ ಪೀಡೆಗಳಿಗೆ ಸ್ವಿಸ್ ನೇರ ಹೊಣೆ ಎಂದರೆ ತಪ್ಪಾಗಬಹುದೇ?

ನೈಜೀರಿಯಾದ ಸಾನಿ ಅಬಾಚ, ಕೀನ್ಯಾದ ಡೇನಿಯಲ್ ಅರಪ್ ಮೊಯ್, ಫಿಲಿಪ್ಪಿನ್ಸ್ ದೇಶದ ಮಾರ್ಕೋಸ್, ನೆರೆಯ ಪಾಕಿಸ್ತಾನದ ಭುಟ್ಟೋ ಪರಿವಾರ, ಇಂಥ ಸರ್ವಾಧಿಕಾರಿಗಳು ಮತ್ತು ಭ್ರಷ್ಟರು ಸ್ವಿಸ್ ದೇಶದ ಮಿತ್ರರುಗಳು. ಆಂಗ್ಲ ಭಾಷೆಯಲ್ಲಿನ ಗಾದೆ; A person is known by the company he keeps.   

ವಿಶ್ವ ಸಮುದಾಯದಲ್ಲಿ ಸ್ವಿಸ್ ತಟಸ್ಥ ದೇಶವಾದರೆ ಮಾತ್ರ ಸಾಲದು, ಒಂದು ಜವಾಬ್ದಾರಿಯುತ ದೇಶವಾಗಿ ವಿಶ್ವದ ಬಡಜನರ, ಹತಾಶೆಗೂ ಸಹ ಸ್ಪಂದಿಸಬೇಕಾದ್ದು ಅತ್ಯಗತ್ಯ. ಬಡದೇಶಗಳ ಸಂಪತ್ತನ್ನು ಲೂಟಿ ಮಾಡಿದ ನಾಯಕರುಗಳ ಬ್ಯಾಂಕ್ ಖಾತೆಯನ್ನು ರಹಸ್ಯವಾಗಿರಿಸಿ ತನ್ಮೂಲಕ ಹಗಲು ದರೋಡೆಗೆ ಪರೋಕ್ಷ ಸಹಾಯ ನೀಡುತ್ತಿರುವ ಸ್ವಿಸ್ ಒಂದು ಪರಾವಲಂಬಿ ದೇಶ ಎನ್ನುವ ಬಿರುದು ಕಟ್ಟಿಕೊಂಡು ಬದುಕುವುದು ಬೇಡ. ಶೀತಲ ವಾತಾವರಣದ ಜನರ ಭಾವನೆಗಳು ಶೀತಲವಾಗಿಬಿಟ್ಟರೆ ಆಗುವ ಅನಾಹುತಕ್ಕೆ ಸ್ವಿಸ್ಸ್ ದೇಶವೇ ಸಾಕ್ಷಿಯೇನೋ? ಹಸಿವು, ರೋಗ, ಕುಡಿಯುವ ಸ್ವಚ್ಚ ನೀರಿನ ಅಭಾವ, ರಸ್ತೆ, ಆಸ್ಪತ್ರೆ, ಶಾಲೆಗಳ ತೀವ್ರ ಕೊರತೆ ಮುಂತಾದ ನೂರೊಂದು ಸಾಮಾಜಿಕ ಸಮಸ್ಯೆಗಳಿಂದ ಬಡ ದೇಶಗಳ ಜನ ಬಳಲುತ್ತಿದ್ದರೆ ತನ್ನ ತಿಜೋರಿಯನ್ನು ಪಾಪದ ಹಣದಿಂದ ಅಲಂಕರಿಸುವುದು ಬೇಡ. 

 ಬಡ ರಾಷ್ಟ್ರಗಳು ತಮ್ಮ ದೇಶದಿಂದ ಹೊರ ಹೋದ ಹಣಕ್ಕಾಗಿ ಸ್ವಿಸ್ ದೇಶವನ್ನು ಸಂಪರ್ಕಿಸಿದಾಗ ಕಾನೂನು ತೊಡಕುಗಳನ್ನು ಕಾರಣವಾಗಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ಕೊಡದೆ ವರ್ಷಗಟ್ಟಲೆ ಕಾಯಿಸಿದರು. ಈ ಅವಧಿಯಲ್ಲಿ ಈ ಬಡ ರಾಷ್ಟ್ರಗಳಲ್ಲಿ ಹೊಟ್ಟೆಗಿಲ್ಲದೆ, ಔಷಧಿ ಇಲ್ಲದೆ ಸತ್ತ ಜನರ ಸಂಖ್ಯೆ ಅದೆಷ್ಟೋ ದೇವರೇ ಬಲ್ಲ. ತನ್ನ ಪ್ರಜೆಗಳು ಕೊಬ್ಬು ತುಂಬಿದ ಸ್ಟೇಕ್ ತಿನ್ನುತ್ತಾ ವೈನು, ಬೀರು ಸವಿಯುತ್ತಿದ್ದರೆ ಬಡ ದೇಶಗಳ ಬಹುಸಂಖ್ಯಾತ ಜನ ಒಪ್ಪೊತ್ತಿನ ಅನ್ನವಿಲ್ಲದೆ ನರಳುವ ದೃಶ್ಯ ವಿಶ್ವದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ನಮ್ಮ ದೇಶದಿಂದ ಸ್ವಿಸ್ ದೇಶಕ್ಕೆ ವಲಸೆ ಹೋದ ಅಗಾಧ ಸಂಪತ್ತು ಮರಳಿ ಬಂದರೆ ಕೆಳಗೆ ತೋರಿಸಿದ ಮಕ್ಕಳ ಅಸಹಾಯಕ ಪರಿಸ್ಥಿತಿ ಸುಧಾರಿಸಲು ನೆರವಾಗಬಹುದು.

ಆರು ವರ್ಷ ಪ್ರಾಯದ ವಿಶಾಲ್ ಒಂದು ಕಪ್ ಚಹಾ ಮತ್ತು ಎರಡು ತುಂಡು ಬಿಸ್ಕಿಟ್ ಒಂದಿಗೆ ತನ್ನ ದಿನವನ್ನು ಆರಂಭಿಸುತ್ತಾನೆ. ಬಡ ಮಕ್ಕಳಿಗೆ ಪುಕ್ಕಟೆಯಾಗಿ ಹಂಚುವ ಚಿತ್ರಾನ್ನ ಅವನ ಮಧ್ಯಾಹ್ನದ ಊಟ. ಅದರಲ್ಲಿ ಅರ್ಧ ತಿಂದು ಮತ್ತೊಂದಿಷ್ಟನ್ನು ತೆಗೆದಿಡುತ್ತಾನೆ ಹಸಿದಾಗ ತಿನ್ನಲು. ರಾತ್ರಿ ಹಸಿದಾಗ ಐದು ರೂಪಾಯಿಯ ಕುರ್ಕುರೆ ಕೊಡಿಸುತ್ತಾಳೆ ಅವನ ತಾಯಿ. ಈ ತಿನಿಸುಗಳೇ ಅವನ ಒಂದು ದಿನದ ಆಹಾರ. ಇಷ್ಟು ತಿಂದಾಗ ವಿಶಾಲನಿಗೆ ಸಿಗುವ ಕ್ಯಾಲೋರಿಗಳು ೮೫೬.

ಎರಡು ವರ್ಷದ ಸುರ್ಜ ಕೊಲ್ಕತ್ತಾದ ಕಲ್ಯಾಣಿ ರೈಲ್ವೆ ಸ್ಟೇಶನ್ ನ ಪ್ಲಾಟ್ಫಾರ್ಮ್ ನಾಲ್ಕರಲ್ಲಿ ಮನೆ ಮಾಡಿ ಕೊಂಡಿದ್ದಾನೆ. ಬೆಳಗ್ಗಿನ ತಿಂಡಿಗೆ ಅರ್ಧ ಪೂರಿ. ಮಧ್ಯಾಹ್ನ, ಎರಡು ಹಿಡಿ ಅನ್ನ ಮತ್ತು ಬೇಳೆ ಸಾರು. ರಾತ್ರಿ ಮತ್ತೆರಡು ಹಿಡಿ ಅನ್ನ, ಸಾರು ಅಥವಾ ಒಂದು ರೊಟ್ಟಿ. ಸುರ್ಜ, ಐದು ವರ್ಷಗಳ ತನ್ನ ಅಕ್ಕ, ಮತ್ತು ಕುಷ್ಠ ರೋಗಿ ತಂದೆಯೊಂದಿಗೆ ವಾಸಿಸುತ್ತಾನೆ. ಬೇಡಿ ತಿನ್ನುವುದು ಅವರ ಬದುಕು. ದಿನಕ್ಕೆ ೨೦ – ೨೫ ರೂಪಾಯಿ ದುಡಿಯುತ್ತಾರೆ. ರೈಲು ಪ್ರಯಾಣಿಕರು ತಿಂದು ಉಳಿದುದನ್ನು ಇವರು ತಿಂದು ಬದುಕುತ್ತಾರೆ. ಇವರಿಗೆ ದೊರಕುವ ಕ್ಯಾಲೋರಿ ಹೆಚ್ಚು ಕಡಿಮೆ ವಿಶಾಲನಷ್ಟೇ. ನಮ್ಮ ಹೊಟ್ಟೆ ಬಡಿದ ಪಾಶ್ಚಾತ್ಯ ದೇಶಗಳ ಮಕ್ಕಳು ತಿನ್ನುವ ತಿನಿಸು ಮತ್ತು ಅವರಿಗೆ ಲಭ್ಯವಾಗುವ ಕ್ಯಾಲೋರಿ ಬಗ್ಗೆ ಬರೆಯಬೇಕೆ? ಬೇಡ ಬಿಡಿ, ಅವರಾದರೂ ತಿಂದುಂಡು ಚೆನ್ನಾಗಿರಲಿ.

child, Relief and You (CRY) ನಡೆಸಿದ ಸಮೀಕ್ಷೆಯ ವೇಳೆ ಸಿಕ್ಕಿದ ಚಿತ್ರಣ ಮೇಲಿನದು. CRY ಸಂಸ್ಥೆಗೆ ಸ್ವಿಸ್ ಸೇರಿ ಬಿಳಿಯ ದೇಶಗಳು ಧಾರಾಳವಾಗಿ ದಾನ ಕೊಡುತ್ತಿರಬಹುದು. ನಮ್ಮ ನಾಯಕರುಗಳು ಪೇರಿಸಿಟ್ಟ ಧನದ ಮೇಲೆ ಅವರಿಗೆ ಸಿಗುವ ಬಡ್ಡಿಯ ಒಂದಿಷ್ಟು ಅಂಶ. LET POOR KIDS FROM THIRD WORLD COUNTRIES SURVIVE ಅಂತ ಕನಿಕರದಿಂದ ದಾನ ಮಾಡುತ್ತಾರೆ ಬಿಳಿಯರು.   

“ವಿಶ್ವ ಹಸಿವಿನ ಸೂಚಿ” (world hunger index)  ಪ್ರಕಾರ ವಿಶ್ವದ ಪೌಷ್ಟಿಕಾಂಶ ಕೊರತೆಯಿರುವ ಶೇಕಡಾ ೪೨ ರಷ್ಟಿರುವ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳು ಭಾರತದಲ್ಲಿ ಇದ್ದಾರಂತೆ. India shining? ಕ್ಷಮಿಸಿ india starving ಎಂದಿರಬೇಕಿತ್ತು. india shining ಎಂದು ಹೇಳಿ ನಮಗೆ ಗರಿ ಗರಿಯಾದ ಟೋಪಿ ತೊಡಿಸಲು ಬಂದ ನಮ್ಮ ನಾಯಕರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದು ಹೇಳಿದವರಾರು?

ನನ್ನ ಮನವಿ ಇಷ್ಟೇ. ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯಲು ಹಾಕಿರುವ ಹಣ ನಮ್ಮ ದೇಶಕ್ಕೆ ಹಿಂತಿರುಗಲಿ. ಲೂಟಿ ಮಾಡಿದವರ ಮೇಲೆ ಸೇಡು ಬೇಡ. ಅವು ಆಗುವ ಹೋಗುವ ಕೆಲಸಗಳಲ್ಲ. ಅವರನ್ನು ಕ್ಷಮಿಸೋಣ ಆದರೆ ನಮ್ಮ ಸಂಪತ್ತು ಮಾತ್ರ ರವಾನೆಯಾಗಲಿ ಭಾರತಕ್ಕೆ.