ಎಲ್ಲರನ್ನೂ ಆದರಿಸೋಣ, ಎಲ್ಲವನ್ನೂ ಗೌರವಿಸೋಣ

ಹಿಂದೂ ದೇವರುಗಳ ಬಗ್ಗೆ ಅಸಹ್ಯವಾಗಿ, ಚಿತ್ರಿಸುವ ಚಾಳಿ ಕುರಿತು ಕನ್ನಡದ ಖ್ಯಾತ ಆನ್ ಲೈನ್ ತಾಣದಲ್ಲಿ ಒಬ್ಬರು ಖೇದ, ಆಕ್ರೋಶ ವ್ಯಕ್ತಪಡಿಸಿದ್ದರು. ಕಲೆಯ ಹೆಸರಿನಲ್ಲಿ, ಸೃಜನಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳನ್ನ ಕೆರಳಿಸುವುದು, ನಮ್ಬಿಕೆಗಳನ್ನು ಘಾಸಿಗೊಳಿಸುವುದು ತರವಲ್ಲ. ಸೃಜನಶೀಲತೆ ಅಥವಾ ಬೇರಾವುದಾದರೂ ಪ್ರತಿಭೆಯನ್ನು ಸಾಕಾರಗೊಳಿಸಲು ಹತ್ತು ಹಲವು ಮಾರ್ಗಗಳಿವೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಕಲೆ ಕುಚೋದ್ಯದಿಂದ ಕೂಡಿದ್ದು. ಈ ಕುಚೋದ್ಯ ಇಸ್ಲಾಮ್ ಧರ್ಮದ ಮೇಲೆ ಪ್ರಯೋಗವಾದಷ್ಟು ಬೇರಾವ ಧರ್ಮದ ಮೇಲೂ ಆಗಿರಲಾರದು. ಅಂಥ ಕಲೆಯನ್ನು ಮುಸ್ಲಿಮರು ಖಂಡಿಸಿದಾಗ ಅವರನ್ನು ಬೆಂಬಲಿಸಲು ಯಾರೂ ಇರಲಿಲ್ಲ. ಬದಲಿಗೆ ಮುಸ್ಲಿಮರಿಗೆ ಸಿಕ್ಕಿದ್ದು ಕಲೆಯ ಬಗ್ಗೆ, ಸೃಜನಶೀಲತೆಯ ಬಗ್ಗೆ, ಆಧುನಿಕ ಬದುಕಿನ ಬಗ್ಗೆ ಪಾಠ. ಚಿಕ್ಕತನವನ್ನು ಬಿಟ್ಟು ನೀವು ಬೆಳೆಯಬೇಕು ಎನ್ನುವ ಕಿವಿಮಾತು. ಈಗ ಅದೇ ಪಿಶಾಚಿ ತಮ್ಮ ಹೊಸ್ತಿಲಿಗೆ ಬಂದು ನಿಂತಾಗ ಜನ ಹೌಹಾರುತ್ತಿದ್ದಾರೆ. reactions strangely different.

೨೦೦೩ ರಲ್ಲಿ ಡ್ಯಾನಿಶ್ ವ್ಯಂಗ್ಯಚಿತ್ರಕಾರ “ಕ್ರಿಸ್ಟಫರ್ ಜೈಲರ್” ಯೇಸು ಕ್ರಿಸ್ತರ ಬಗೆಗಿನ ಕೆಲವು ಚಿತ್ರಗಳನ್ನ ಅಲ್ಲಿನ ಖ್ಯಾತ ಪತ್ರಿಕೆ Jyllands-Posten ಗೆ ಕಳಿಸಿದ. ಸಂಪಾದಕ ಈತನಿಗೆ ‘ಈ ಮೇಲ್’ ಕಳಿಸಿ ಈ ಚಿತ್ರಗಳನ್ನು ಕ್ರೈಸ್ತರು ನೋಡಿ ಆನಂದಿಸಲಿಕ್ಕಿಲ್ಲ ಮತ್ತು ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ವಿವರಿಸಿದ. ಇದೇ ಪತ್ರಿಕೆ ೨೦೦೫ ರಲ್ಲಿ ಪ್ರವಾದಿ ಮುಹಮ್ಮದರ ಕಾರ್ಟೂನ್ ಗಳನ್ನು ಪ್ರದರ್ಶಿಸಿ ತನ್ನ ಕೊಳಕು ‘ಡಬಲ್ ಸ್ಟ್ಯಾಂಡರ್ಡ್’ ಅನ್ನು ಸೊಗಸಾಗಿ ಪ್ರದರ್ಶಿಸಿತು.

ಧಾರ್ಮಿಕ ಕುರುಹುಗಳನ್ನು ನಮಗೆ ಬೇಕಾದ ಸ್ಥಳಗಳಲ್ಲಿ, ಬೇಕಾದ ರೀತಿಯಲ್ಲಿ ಬಳಸಿ ಕೊಂಡಾಗ ಅದರ ಬಗ್ಗೆ ಗೌರವ, ಭಕ್ತಿ ತಂತಾನೇ ಕಡಿಮೆಯಾಗುತ್ತದೆ. ಧರ್ಮ ವೈಯಕ್ತಿಕವಾಗಿರಬೇಕು. ಧಾರ್ಮಿಕ ಭಾವನೆ ಮನಸ್ಸಿನಲ್ಲಿ ನೆಲೆಯೂರಿರಬೇಕು. we should not wear our faiths on our sleeves. ಗಣೇಶನ ಮೂರ್ತಿಗಳನ್ನು ತೋಚಿದ ರೀತಿಯಲ್ಲಿ, ಬ್ಯಾಟ್ ಹಿಡಿದು ಕೊಂಡೂ ಮತ್ಯಾವುದಾದರೂ ರೀತಿಯಲ್ಲಿ ರೂಪಿಸಿದಾಗ ನಾವು ನೀಡುತ್ತಿರುವ ಸಂದೇಶವಾದರೂ ಏನು? ಈ ರೀತಿ ದೇವರ ಚಿತ್ರಗಳನ್ನು, ಇನ್ನಿತರ ಧಾರ್ಮಿಕ ಸಂಕೇತಗಳನ್ನು ಸಾರಾಸಗಟಾಗಿ ಕಲೆಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಂಡಾಗ ಯಾವುದು ಸರಿ ಯಾವುದು ತಪ್ಪು ಎನ್ನುವ ವಿಂಗಡಿಸುವ ರೇಖೆ ಮಸುಕಾಗಿ ಬಿಡುತ್ತದೆ. ಆಗ ಸಮಸ್ಯೆಗಳು ಎದುರಾಗಲು ತೊಡಗುತ್ತವೆ.

ಮುಸ್ಲಿಮರಲ್ಲಿ ಯಾವುದೇ ಕೆಲಸ ಆರಂಭಿಸುವಾಗಲೂ ಕರುಣಾಮಯನೂ, ದಯಾಮಯನೂ ಆದ ಅಲ್ಲಾಹನ ನಾಮದಿಂದ (ಬಿಸ್ಮಿಲ್ಲಾ ಅರ್ರಹ್ಮಾನ್, ಅರ್ರಹೀಂ) ಎನ್ನುವ ಕುರಾನ್ ಸೂಕ್ತ ಉಪಯೋಗಿಸುತ್ತಾರೆ. ಈ ಸೂಕ್ತವನ್ನು ಕೆಲವರು ಪತ್ರ ಬರೆಯುವಾಗಲೂ ಇನ್ನಿತರ ಸ್ಥಳಗಳಲ್ಲೂ ಬಳಸುವುದನ್ನು ನೋಡಿದ ಧರ್ಮ ಗುರುಗಳು ಆಕ್ಷೇಪ ಮಾಡಿ ನಾವು ಬರೆದ ಕಾಗದ ಅದರ ಉಪಯೋಗ ಮುಗಿದ ನಂತರ ತಿಪ್ಪೆ ಸೇರುವುದರಿಂದ ಅಂಥ ಸ್ಥಳಗಳಲ್ಲಿ ಈ ಸೂಕ್ತ ಉಪಯೋಗಿಸಕೂಡದು ಎಂದು ನಿರ್ದೇಶಿಸಿದ್ದರು. ಹಾಗೆಯೇ ಕೊರಳಿಗೆ ಹಾಕಿ ಕೊಳ್ಳುವ ಸರದ ಲಾಕೆಟ್ ಗಳ ಮೇಲೆ ‘ಅಲ್ಲಾಹ್’ ಎಂದು ಬರೆಯುವುದನ್ನು ಬಹಳ ಜನ ಒಪ್ಪುವುದಿಲ್ಲ. ಏಕೆಂದರೆ ನಮ್ಮೊಂದಿಗೆ ಸರವೂ ಶೌಚ ಗೃಹ ಪ್ರವೇಶ ಮಾಡುವುದರಿಂದ ಅಲ್ಲಾಹನ ಹೆಸರಿನ ಪಾವಿತ್ರ್ಯಕ್ಕೆ ಧಕ್ಕೆ ಆಗಬಹುದು ಎಂದು ಬಗೆದು. ಇದು ಧಾರ್ಮಿಕ ಕುರುಹುಗಳನ್ನು ಕಾಪಾಡುವ ರೀತಿ.

ನಮ್ಮ ಧರ್ಮ ವೈಯಕ್ತಿಕ. ನಮ್ಮ ವೈಯಕ್ತಿಕ ವಿಷಯಗಳಲ್ಲಿ ಕೈ ಹಾಕಲು ಯಾರಿಗೂ ನಾವು ಅನುಮತಿಸುವುದಿಲ್ಲ. ಧರ್ಮಕ್ಕೂ ಅದೇ ನಿಲುವು ಅನ್ವಯವಾಗಲಿ. ಯಾರೂ ಯಾರ ಭಾವನೆಗಳನ್ನೂ ಘಾಸಿಗೊಳಿಸಲು ಹೋಗಬಾರದು. ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ, ಆದರಿಸುತ್ತಾ ನಡೆದರೆ ಯಾವ ರೀತಿಯ ಸಮಸ್ಯೆಗಳೂ ಎದುರಾಗವು.

ಜಗವ ನಿಯಂತ್ರಿಸುವ ಕೋಣೆ

ಮೇ ತಿಂಗಳ ಮೊದಲ ವಾರದಲ್ಲಿ ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದು ಕರೆಯಲ್ಪಡುವ ಬಿನ್ ಲಾದೆನ್ ನನ್ನು ಅಮೇರಿಕಾ ಪಾಕಿಸ್ತಾನದ ಸೇನಾ ನಗರ ( garrison town ) ಅಬೊಟ್ಟಬಾದ್ ನಲ್ಲಿ ವಧಿಸಿ ಆತನ ಶವವನ್ನು ಅರಬ್ಬೀ ಸಮುದ್ರಕ್ಕೆ ಎಸೆದು ತನ್ನ ತಂಟೆಗೆ ಬಂದವರು ಪ್ರಪಂಚದ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಬಲಿ ಹಾಕುವೆವು ಎನ್ನುವ ಸ್ಪಷ್ಟ ಸಂದೇಶವನ್ನು ವಿಶ್ವಕ್ಕೆ ರವಾನಿಸಿತು. ಈ ವಧೆಯೊಂದಿಗೆ ಅಮೆರಿಕನ್ನರು ನಿರಾಳ ಭಾವ (sense of closure) ಅನುಭವಿಸಿ ಖುಷಿ ಪಟ್ಟರು. ಬಿನ್ ಲಾದೆನ್ ನನ್ನು ಬಲಿ ಹಾಕುವ ಕಾರ್ಯಾಚರಣೆಯ ಉಸ್ತುವಾರಿಯನ್ನು ಅಲ್ಲಿನ ಅಧ್ಯಕ್ಷ ಬ್ಯಾರಕ್ ಒಬಾಮಾ ಖುದ್ದು ವಹಿಸಿದ್ದರು ಅವರೇ ಖುದ್ದಾಗಿ ಹೇಳಿದ್ದರು. ಅವರ ವೈಯಕ್ತಿಕ ನಿರ್ದೇಶನದ ಮೇಲೆ ನಾವಿಕ ಸೇನೆಯ ವಿಶೇಷ ಪಡೆಯ ‘ಸೀಲ್-೬’ ಕಮಾಂಡೋಗಳು ಈ ಸಾಹಸೀ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ತಿ ಗೊಳಿಸಿದರು. ನೀರವ ರಾತ್ರಿಯಲ್ಲಿ ಸುಮಾರು ನಾಲ್ಕು ಘಂಟೆಗಳ ಕಾಲ ನಡೆದ ಕಾರ್ಯಾಚರಣೆ ಯನ್ನು ಅಮೆರಿಕೆಯ ಅಧ್ಯಕ್ಷ, ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ಮೂರ್ನಾಲ್ಕು ಇತರೆ ಹಿರಿಯ ಅಧಿಕಾರಿಗಳು ಶ್ವೇತ ಭವನದ situation room ( ಪರಿಸ್ಥಿತಿ ಕೋಣೆ? ) ನಿಂದ ವೀಕ್ಷಿಸಿದರು. ಈ ಕೋಣೆಯನ್ನು ಅತ್ಯಂತ ಗಂಭೀರ, ದೇಶದ ಭದ್ರತಾ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ. ೧೯೬೧ ರಲ್ಲಿ ಜಾನ್ ಎಫ್ ಕೆನಡಿ ಕಾಲದಲ್ಲಿ ಈ ಕೋಣೆಯನ್ನು ನಿರ್ಮಿಸಲಾಯಿತು.        

ಈ ಲೇಖನದ ಉದ್ದೇಶ ಏನೆಂದರೆ, ಮೇಲಿನ ಚಿತ್ರದಲ್ಲಿ ಮಹನೀಯರುಗಳು ಗುಂಪುಗೂಡಿ ಅತಿ ಆಸಕ್ತಿ, ಗಾಭರಿ ಕಾತುರತೆಯಿಂದ ವೀಕ್ಷಿಸುತ್ತಿದ್ದಾರೆ ಬಿನ್ ಲಾದೆನ್ ವಧಾ ಪ್ರಹಸನವನ್ನು. ನಮಗೆ ಅಮೆರಿಕೆಯ ಅಧ್ಯಕ್ಷರ ಮುಖ ಪರಿಚಯ ಇಲ್ಲ ಎಂದು ಊಹಿಸಿಕೊಳ್ಳಿ. ನಾವು ಈ ಚಿತ್ರದಲ್ಲಿ ಇರುವ ವ್ಯಕ್ತಿಗಳಲ್ಲಿ ಯಾರಿರಬಹುದು ಅಮೆರಿಕೆಯ ಅಧ್ಯಕ್ಷ ಎಂದು ಊಹಿಸಲು ಸಾಧ್ಯವೇ? ನಾನು ಅಮೆರಿಕೆಯ ಅಧ್ಯಕ್ಷ, ಅಮೆರಿಕೆಯ ಸುಪ್ರೀಂ ಕಮಾಂಡರ್ ಎಂದು ಈ ಕುಳಿತವರಲ್ಲಿ, ನಿಂತವರಲ್ಲಿ ಯಾರಾದರೂ ಫೋಸು ಕೊಡುತ್ತಿರುವವರೇ, ಹಮ್ಮುಬಿಮ್ಮು ಪ್ರದರ್ಶಿಸುತ್ತಿರುವವರೇ? ಊಹಿಸಲು ಸಾಧ್ಯವಿಲ್ಲ, ಅಲ್ಲವೇ? ಮೂಲೆಯಲ್ಲಿ ಕಪ್ಪು ಜಾಕೆಟ್ ತೊಟ್ಟು, ಮುದುಡಿ ಕೂತು,  ಕಾತುರ, ಗಾಭರಿಯಿಂದ ವೀಕ್ಷಿಸುತ್ತಿರುವ ವ್ಯಕ್ತಿಯೇ ಒಬಾಮಾ.

ದೇಶದ ಭದ್ರತೆಯ ವಿಷಯ ಬಂದಾಗ ತಿರುಕನಿಂದ ಹಿಡಿದು ಆಳುವವನ ವರೆಗೂ ಎಲ್ಲರದೂ ಒಂದೇ ಧೋರಣೆ, ಒಂದೇ ಗುರಿ. ಇಲ್ಲಿ ಅಂತಸ್ತಿನ, ವರ್ಚಸ್ಸಿನ, ಬೇರಾವುದೇ ಕೃತಕ ಪ್ರದರ್ಶನವಾಗಲೀ ಇರುವುದಿಲ್ಲ. ಇಡೀ ದೇಶ ಒಂದಾಗಿ ಬಿಡುತ್ತದೆ. ಓರ್ವ ವ್ಯಕ್ತಿಯಾಗಿ, ಹೋರಾಡುತ್ತದೆ. ಈ ಚಿತ್ರದಲ್ಲಿ ಭಾರತೀಯರಾದ ನಮಗೆ ಪಾಠ ವಿದೆಯೇ?

ಒಂದು ವಿಷ ವೃಕ್ಷ

ಒಂದು ವಿಷ ವೃಕ್ಷ

ನನ್ನ ಮಿತ್ರನೊಂದಿಗೆ ಮುನಿಸಿಕೊಂಡಿದ್ದೆ

ನನ್ನ ಮುನಿಸಿನ ಕಾರಣ ಅವನಿಗೆ ತಿಳಿಸಿದೆ

ನನ್ನ ಕೋಪ ತಣಿಯಿತು ಕೂಡಲೇ.

ನನ್ನ ಶತ್ರುವಿನೊಂದಿಗೆ ಕೋಪಗೊಂಡೆ

ಆದರೆ ಕೋಪದ ಕಾರಣ ನಾನವನಿಗೆ ಹೇಳಲಿಲ್ಲ,

ನನ್ನ ಕೋಪ ಹೆಚ್ಚುತ್ತಾ ಹೋಯಿತು.

ನಾನದನ್ನು ಭಯದೊಂದಿಗೆ ಪೋಷಿಸಿದೆ

ಹಗಲೂ ರಾತ್ರಿ

ನನ್ನ ಕಣ್ಣೀರೂಡಿಸಿ  

ಸೂರ್ಯನ ರಷ್ಮಿಯಂಥ ಮುಗುಳ್ನಗುವಿನೊಂದಿಗೆ  soft decetful vile

ಸೌಮ್ಯವಾದ ಕಪಟ ತಂತ್ರದೊಂದಿಗೆ.

ಅದು ದಿನ-ರಾತ್ರಿ ಬೆಳೆಯುತ್ತಾ ಹೋಯಿತು

ಬೆಳಗುವ ಸೇಬಿನ ಹಣ್ಣಾಗಿ ಫಲಿಸುವ ತನಕ  

ನನ್ನ ಶತ್ರು ಅದರ ಕಾಂತಿಗೆ ಮರುಳಾದ

ಹಣ್ಣು ನನ್ನದೆಂದು ಅವನಿಗೆ ತಿಳಿದಿತ್ತು.

ನನ್ನ ತೋಟದೊಳಕ್ಕೆ ಬಂದು

ಕದ್ದನು ಹಣ್ಣನ್ನು ಕಗ್ಗತ್ತಲ ಮರೆಯಲ್ಲಿ,  

ಉಲ್ಲಾಸದ ಮುಂಜಾನೆಯಲ್ಲಿ ನಾನು ನೋಡಿದಾಗ

ಅಂಗಾತ ಬಿದ್ದಿದ್ದ ಅವನು ಮರದ ಕೆಳಗೆ.

ಕವಿ ವಿಲ್ಲಿಯಂ ಬ್ಲೇಕ್ ಅವರ “a poison tree” ಕವನದ ಭಾವಾನುವಾದ

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ಭಾರತ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೆಟ್ಟ ಅಂಪೈರಿಂಗ್ ಕಾರಣ ತಡವಾಗಿ ಮುಗಿಯಿತು. ಇಲ್ಲದಿದ್ದರೆ ಸ್ವಲ್ಪ ಬೇಗನೆ ಪಂದ್ಯ  ಗೆದ್ದು ವಿಶ್ರಾಂತಿ ಪಡೆಯ ಬಹುದಿತ್ತು ಎಂದು ವಿಜಯದ ನಂತರ  ನಮ್ಮ ತಂಡದ ನಾಯಕ ಧೋನಿ ದೂರಿದರು. ಕಾಲ ಹೇಗೆ ಬದಲಾಯಿತು ನೋಡಿ.  

೧೯೮೩ ರಲ್ಲಿ ವೆಸ್ಟ್ ವಿಂಡೀಸ ನ್ನು ಸೋಲಿಸಿ ವಿಶ್ವ ಕಪ್ ಗೆದ್ದ ಭಾರತ ವಿಶ್ವವನ್ನೇ ಬೆರಗು ಗೊಳಿಸಿತ್ತು. ಆಗಿನ ಕಾಲದ ಪಂಡಿತರ ಪ್ರಕಾರ ಬಲಿಷ್ಠ ವಿಂಡೀಸ್ ವಿರುದ್ಧದ ಭಾರತದ ಗೆಲುವು ಒಂದು fluke ಆಗಿತ್ತು. ಆದರೆ ಭಾರತ ಬರೀ ಫೈನಲ್ ನಲ್ಲಿ ಅಲ್ಲ, prelim ರೌಂಡ್ಸ್ ನಲ್ಲೂ ವಿಂಡೀಸನ್ನು ಮಣಿಸಿತ್ತು. ಆದರೂ ಟೀಕಾಕಾರರಿಗೆ ಭಾರತದ ಶಕ್ತಿಯ ಬಗ್ಗೆ ಅನುಮಾನವೇ ಇತ್ತು. ಈ ಅನುಮಾನ ನಿಜವಾಗಿಸಲೆಂಬಂತೆ ವೆಸ್ಟ್ ಇಂಡೀಸ್ ಭಾರತ ಪ್ರವಾಸ ಆರಂಭಿಸಿತು. ಆರು ಟೆಸ್ಟು, ಐದು ಏಕ ದಿನ ಪಂದ್ಯಗಳ ಸರಣಿಯಲ್ಲಿ  ಭಾರತವನ್ನು ಮೂರು ಟೆಸ್ಟು ಗಳಲ್ಲೂ, ಎಲ್ಲಾ ಏಕ ದಿನ ಪಂದ್ಯಗಳಲ್ಲೂ ಸೋಲಿಸಿ ವಿಶ್ವ ಕಪ್ ಸೋತಿದ್ದು ನಮ್ಮ ತಿಮಿರಿನಿಂದ ಅಲ್ಲದೆ ಭಾರತದ ಕ್ರೀಡಾ ಕೌಶಲ್ಯದಿಂದ ಅಲ್ಲ ಎನ್ನುವುದನ್ನು ವಿಂಡೀಸ್ ವಿಶ್ವಕ್ಕೆ ತೋರಿಸಿ ಕೊಟ್ಟಿತು.  

ಆಗ ಪ್ರವಾಸಗೈದಿದ್ದ ವಿಂಡೀಸ್ ತಂಡದಲ್ಲಿ ಘಟಾನುಘಟಿ ಗಳೇ ತುಂಬಿದ್ದರು. ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಮಾಲ್ಕಂ ಮಾರ್ಷಲ್ ಹೀಗೆ ಅತಿರಥ ಮಹಾರಥರ ಧಾಳಿಗೆ ನಮ್ಮ ತಂಡ mediocre ತಂಡದಂತೆ ತೋರಿತು. ಮಾಲ್ಕಂ ಮಾರ್ಷಲ್ ಅಂತೂ ತನ್ನ ಮಾರಕ ಅತಿ ವೇಗದ ಬೌಲಿಂಗ್ ಧಾಳಿಯಿಂದ ನಮ್ಮ ಬ್ಯಾಟ್ಸ್ಮನ್ ಗಳಿಗೆ ಸಿಂಹ ಸ್ವಪ್ನವಾಗಿದ್ದ. ಈಗ ನೋಡಿ ಅವರ ಪಾಡನ್ನು. ಯಾವುದೇ ಮೊತ್ತದ ರನ್ನು ಚೇಸ್ ಮಾಡಲೂ ಪಡುವ ಪಾಡನ್ನು.    

ಯಥೇಚ್ಛ ಹಣ, ಮತ್ತು ಹಣದ ಅಭಾವ ಯಾವ ರೀತಿ ಒಂದು ಕ್ರೀಡೆಯನ್ನು ರೂಪಿಸಬಲ್ಲುದು ಮತ್ತು ನಿಸ್ತೇಜವಾಗಿಸಬಹುದು ಎನ್ನುವುದಕ್ಕೆ ಭಾರತ ವಿಂಡೀಸ್ ಕ್ರಿಕೆಟ್ ಕ್ರೀಡೆಯೇ ಸಾಕ್ಷಿ. ಕ್ರಿಕೆಟ್ ನಲ್ಲಿ ಹಣವಿದೆ ಮತ್ತು ಶ್ರೀಮಂತ ಪ್ರಾಯೋಜಕರ ಬೆಂಬಲ ಅದಕ್ಕಿದೆ ಎಂದರಿತ ಪೋಷಕರು ತಮ್ಮ ಮಕ್ಕಳು ಈ ಕ್ರೀಡೆಯನ್ನು ಪ್ರವೇಶಿಸಲು ಉತ್ತೇಜಿಸಿದರು. ಪರಿಣಾಮ ಹೊಸ ಪ್ರತಿಭೆಗಳು ದಂಡು ದಂಡಾಗಿ ಆಗಮಿಸಿದವು. ಈಗ ಭಾರತ ಕ್ರಿಕೆಟ್ ಸುದೃಢ. ಬಲಿಷ್ಠ. ಆದರೆ ಈ ಭಾಗ್ಯದ ಲಕ್ಷ್ಮಿ ವಿಂಡೀಸರಿಗೆ ಒಲಿಯದೆ ಹೋದಳು. ಪ್ರಾಯೋಜಕರ ಕೊರತೆ ಮಾತ್ರವಲ್ಲ ಅಲ್ಲಿನ ಕ್ರಿಕೆಟ್ ಮಂಡಳಿ ಕೊಡುವ ಹಣವೂ ಏನೇನೂ ಸಾಲದಾದಾಗ ಒಂದು ಕಾಲದಲ್ಲಿ fearsome  ಆಗಿದ್ದ ವಿಂಡೀಸ್ ಕ್ರಿಕೆಟ್ ನೆಲ ಕಚ್ಚಿತು.

ವಿಂಡೀಸ್ ತನ್ನ ಗತ ವೈಭವವನ್ನು ಯಾವಾಗ ಮರಳಿ ಪಡೆದೀತೋ ಕಾದು ನೋಡಬೇಕು.    

ವೇದ ಸುಳ್ಳಾದರೂ…

ವೇದ ಸುಳ್ಳಾದರೂ, ಗಾದೆ ಸುಳ್ಳಾಗದು. ಈ ಕೆಳಗಿನ ಗಾದೆ ಸ್ವಲ್ಪ ವಿಚಿತ್ರವಾಗಿದೆ, tread carefully.

“A man who likes a lot of salt in his food is very much in love with his wife.” – Albanian saying.  

ಮೇಲಿನದು ಅಲ್ಬೇನಿಯಾ ದೇಶದ ಗಾದೆ. ತನ್ನ ಆಹಾರದಲ್ಲಿ ಹೆಚ್ಚು ಉಪ್ಪನ್ನು ಬಯಸುವವನು ತನ್ನ ಹೆಂಡತಿಯಲ್ಲಿ ಹೆಚ್ಚು ಅನುರಕ್ತನಾಗಿರುವನು.

ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಗಾದೆ ನಮ್ಮಲ್ಲಿ ಪ್ರಚಲಿತವಿದ್ದರೆ ಅಲ್ಬೇನಿಯಾದ ಗಾದೆ ಅರ್ಧಾಂಗಿನಿಯ ಕಡೆ ವಾಲುವಂಥದ್ದು. ಅದರಲ್ಲೇನು ತಪ್ಪು ತಕ್ಕಳಿ, ನಮಗೆ ‘ಅಮ್ಮ’ ಪ್ರಯಾರಿಟಿ, ಅವರಿಗೆ ‘ಅಮ್ಮಾವ್ರು’ ಪ್ರಯಾರಿಟಿ ಅಷ್ಟೇ.

ವಿ. ಸೂ:  ಮಡದಿಯನ್ನು ಇಂಪ್ರೆಸ್ ಮಾಡಲೆಂದು ಉಪ್ಪು ಜಾಸ್ತಿ ಹಾಕಿಸಿಕೊಂಡು ಬಿ. ಪಿ. ಯನ್ನು ತಾರಕಕ್ಕೇರಿಸಿ ಕೊಂಡೆ ಎಂದು ಮಾತ್ರ ನನ್ನನ್ನು ಹಳಿಯಬೇಡಿ.

“ಪಂಚ ಕನ್ಯೆ” ಯರ ವಿದಾಯ

“ಪಂಚ ಕನ್ಯೆ” ಯರ ವಿದಾಯ ಪರಂಪರೆ ಮುಕ್ತಾಯ, ನೇಪಾಳದಲ್ಲಿ.  ಪಂಚ ಕನ್ಯೆಯರು ಎಂದ ಕೂಡಲೇ ಆರತಿ, ಭಾರತಿ, ಮಂಜುಳ, ಕಲ್ಪನ, ಚಂದ್ರಕಲಾ…. ಇವರೇ ನಮ್ಮ ಕನ್ನಡ ನಾಡಿನ ಪಂಚ ಕನ್ನೆಯರೂ……ಎನ್ನೋ ಹಾಡು ನೆನಪಿಗೆ ಬಂದಿರಬೇಕು ಆಲ್ವಾ? ಬಿಟ್ಹಾಕಿ, ಇದು ಆ ಗತಕಾಲದ ನಮ್ಮೆಲ್ಲರ ಮನ ರಂಜಿಸಿದ ಕನ್ನೆಯರ ಕಥೆಯಲ್ಲ, ನಮ್ಮ ದೇಶದ ಉತ್ತರದ ಗಡಿಯಾಚೆಗಿನ ನೇಪಾಳದ ಕನ್ನೆಯರ ವ್ಯಥೆಯ ಕಥೆಯಿದು.

ನೇಪಾಳದ ರಾಷ್ಟ್ರ ನಾಯಕ ಹೊರದೇಶದ ಪ್ರವಾಸ ಹೊರಟಾಗ ಅವರನ್ನು ಬೀಳ್ಕೊಡಲು ಐದು ಕನ್ಯೆಯರನ್ನು ಸಿದ್ಧ ಪಡಿಸಲಾಗುತ್ತಿತ್ತಂತೆ. ದುರ್ಗ, ಸರಸ್ವತಿ, ಲಕ್ಷ್ಮಿ, ರಾಧ, ಅನ್ನಪೂರ್ಣ ಎನ್ನುವ ಯಶಸ್ಸನ್ನು ತರುವ ಈ ದೇವತೆಗಳನ್ನು ಪ್ರತಿನಿಧಿಸುವ ಪಂಚ ಕನ್ಯೆಯರು ಪ್ರವಾಸ ಹೋಗುವ ನಾಯಕನಿಗೆ ಶುಭವಾಗಲು ಮತ್ತು ಸಂಪತ್ತು ಸಿಗಲೆಂದು ಹಾರೈಸಿ ಈ ವ್ಯವಸ್ಥೆ ಮಾಡುತ್ತಿದ್ದರಂತೆ. ಶಾಲೆಗೆ ಹೋಗುವ ಈ ಹೆಣ್ಣು ಮಕ್ಕಳು ಸುಡು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ನಿಂತು ಅವರಿಗೆ ಶುಭ ಕೋರುವುದನ್ನು ಕಂಡು ಮರುಗಿದ ಅಧ್ಯಕ್ಷರು ಈ ಪರಂಪರೆಗೆ ಮಂಗಳ ಹಾಡಲು ತೀರ್ಮಾನಿಸಿದರಂತೆ.

ಶತಮಾನಗಳಿಂದ ನಡೆದು ಕೊಂಡು ಬರುತ್ತಿದ್ದ ಈ five virgin farewell ಸಮಾರೋಹದ ಪರಂಪರೆಗೆ ನೇಪಾಳದ ಅಧ್ಯಕ್ಷರು ಕೊನೆಗೂ good bye, good riddance ಹೇಳಿ ಸುಡು ಬಿಸಿಲಿನ ಬೇಗೆಯಿಂದ ಕನ್ನೆಯರ ಬಿಡುಗಡೆಗೆ ನಾಂದಿ ಹಾಡಿದರು.

ನಾವಾಡುವ ನುಡಿ …

ನಾವಾಡುವ ನುಡಿ … ಕನ್ನಡ ನುಡಿಗೆ, ಭಾಷೆಗೆ ‘ಇಗೋ’ (ಅಹಂ) ಇಲ್ಲ ಎಂದು ‘ಇಗೋ ಕನ್ನಡ’ ದಂಥ ಪುಸ್ತಕ ಓದಿದ ಯಾರಿಗೂ ಅರಿವಾಗದೇ ಇರದು. ಏಕೆಂದರೆ ಅರಬ್ಬೀ, ಪಾರ್ಸಿ, ಮರಾಠಿ ಬಾಷೆಗಳ ಪದಗಳನ್ನು ಸರಾಗವಾಗಿ ತನ್ನೊಡಲಲ್ಲಿ ಇಟ್ಟುಕೊಂಡು, ಶ್ರೀಮಂತಗೊಂಡ ಭಾಷೆ ಕನ್ನಡ. ಅದರಲ್ಲೂ ಸಂಸ್ಕೃತದ ಪ್ರಭಾವ ಸ್ವಲ್ಪ ಅಪಾರವೇ ಎನ್ನಬೇಕು; ಶೇಕಡ ೬೦ ಕ್ಕೂ ಹೆಚ್ಚು ಪದಗಳು ಸಂಸ್ಕೃತದಿಂದ ಬಂದವಂತೆ.  ಇಗೋ ಕನ್ನಡ ಪುಸ್ತಕವನ್ನು ತಿರುವಿ ಹಾಕುವಾಗ ಸಿಕ್ಕಿದ ಕೆಲವು ಸ್ವಾರಸ್ಯಕರ ಅಂಶಗಳನ್ನ ನಿಮ್ಮ ಮುಂದೆ ಇಡುವ ಬಯಕೆ.  

ಹಿರಿಯ ಮಗನನ್ನು ಜ್ಯೇಷ್ಠ ಪುತ್ರ ಎಂದು ಕರೆಯುವರು. ಸರಿ, ಮೊದಲ ಮಗನೇನೋ ಜ್ಯೇಷ್ಠ ಆಗುತ್ತಾನೆ.  ಆದರೆ ಹಿರಿಯ ಮಗಳನ್ನು “ಜ್ಯೇಷ್ಠೆ” ಎಂದು ಕರೆಯರು, ಯಾಕೆ? ಲಕ್ಷ್ಮಿಯ ಹಿರಿಯ ಅಕ್ಕನಾದ  ಜ್ಯೇಷ್ಠೆಗೆ ದುರದೃಷ್ಟದ ದೇವತೆ ಎನ್ನುತ್ತಾರಂತೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಈ ಹೆಸರಿನಿಂದ ಕರೆಯುವುದಿಲ್ಲ, ದುರದೃಷ್ಟ ವಕ್ಕರಿಸೀತೆಂದು ಹೆದರಿ. ‘ಜ್ಯೇಷ್ಠಾ’ ಎಂದರೆ ಹಿರಿಯ ಹೆಂಡತಿ, ಪ್ರಿಯೆಯಾದ ಹೆಂಡತಿ ಎನ್ನುವ ಅರ್ಥಗಳೂ ಇವೆ. ನನಗೆ ತಿಳಿದಂತೆ,  ಸಾಮಾನ್ಯವಾಗಿ ಕಿರಿಯ ಹೆಂಡತಿ ಪ್ರಿಯಳಾದವಳು, ಹಿರಿಯ ಹೆಂಡತಿಯಲ್ಲ. ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಚಿಕ್ಕವಳು ಅಂತ ಕಿರಿಯ ಹೆಂಡತಿ  ಮೇಲೆ ಪ್ರೀತಿ ಸ್ವಲ್ಪ ಹೆಚ್ಚೇ ಇರುತ್ತದೆ.  

ಶ್ರೀಮತಿ ಎಂದ ಕೂಡಲೇ ಮದುವೆಯಾದಾಕೆ ಎನ್ನುವ ಭಾವನೆ ನಮ್ಮಲ್ಲಿದೆ. ‘ಶ್ರೀಮಾನ್, ಶ್ರೀಮತಿ’ ಗಳನ್ನು ಆಂಗ್ಲ ಭಾಷೆಯ mr and mrs ನ ಸಮಾನ ರೂಪವಾಗಿ ಉಪಯೋಗಿಸುತ್ತಾರೆ.  ಶ್ರೀಮತಿ ವಿವಾಹಿತ ಮಹಿಳೆಗೆ ಅನ್ವಯ ಎನ್ನುವ ನಿಯಮವೇನೂ ಇಲ್ಲ. ಶ್ರೀಮತಿ ಎಂದರೆ, ಸಂಪತ್ತುಳ್ಳವಳು, ಬುದ್ಧಿ, ಶೋಭೆ, ಕಾಂತಿಯುಳ್ಳವಳು ಎಂದರ್ಥ. ಶ್ರೀಮತಿ ಅವಿವಾಹಿತೆ ಸಹ ಆಗಬಹುದು. ಗೌರವಾರ್ಹರಾದ ಎಲ್ಲಾ ಮಹಿಳೆಯರಿಗೂ ಇದು ಅನ್ವಯಿಸುವುದು.  ಹಾಗಾದರೆ ಆಂಗ್ಲ ಭಾಷೆಯ ‘ಮಿಸಸ್’ ಪದಕ್ಕೆ ಕನ್ನಡದ ರೂಪ ಏನು? 

ಊರು ತಲಪಿದ ಕೂಡಲೇ ಫೋನ್ ಮಾಡಿ ತಿಳಿಸು. ತಲಪು? ಅಥವಾ ‘ತಲು’ಪು? ಎರಡೂ ಸರಿಯಂತೆ, ಹಾಗಂತ ‘ಇಗೋ ಕನ್ನಡ’ ದ ಫರ್ಮಾನು. ಫರ್ಮಾನ್ ಎಂದರೆ ಆಜ್ಞೆ. ರಾಜನೊಬ್ಬ ಫರ್ಮಾನ್ ನೀಡಿದಾಗ ಅದು ರಾಜಾಜ್ಞೆ.   

‘ತಾಬಡತೋಬ’ – ಈ ಪದಕ್ಕೆ ಕನ್ನಡದ ಸಮಾನ ಪದ ತುರ್ತು. ಹೋಗೋ ಅವನಿಗೆ ತಾಬಡತೋಬ್ (ತುರ್ತಾಗಿ) ಬರೋಕ್ಕೆ ಹೇಳು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಉರ್ದು ಭಾಷಿಕರೂ, ಹುಬ್ಬಳ್ಳಿ ಧಾರವಾಡದ ಮಂದಿಯೂ ಹೀಗೆ ಹೇಳ್ತಾರಂತೆ. ನಾಲಗೆಯ ಮೇಲೆ ಅಂಕು ಡೊಂಕಾಗಿ ನಿಲ್ಲಲು ಪ್ರಯತ್ನಿಸುವ ಈ ಪದದ ಮೂಲ ‘ಮರಾಠಿ’.  

‘ತಾದಾತ್ಮ್ಯ’ ನನಗಿಷ್ಟವಾದ ಪದ. ಇದರ ಅರ್ಥ ತಲ್ಲೀನತೆ, ಮಗ್ನ. ಓದು, ಬರಹ ತಾದಾತ್ಮ್ಯ ತೆಯಿಂದ ಮಾಡಬಹುದೋ ಅಥವಾ ಈ ಪದವನ್ನು ಅರಾಧನೆಯಂಥ ಗಂಭೀರ ಕಾರ್ಯಗಳಿಗೆ ಮಾತ್ರ ಬಳಸಬೇಕೋ?

ಈ ಕ್ಷಣಕ್ಕೆ ಇಷ್ಟು ಸಾಕು….ಸಿರಿಗನ್ನಡಂ ಗೆಲ್ಗೆ.

ಒಂದು ಬಾಷ್ಪಾಂಜಲಿ, ಶಾಂತಿ ದೂತನಿಗೆ

ಬ್ರಿಟನ್ ಮೂಲದ ಶಾಂತಿ ದೂತ ಬ್ರಯಾನ್ ಹಾವ್ ಇನ್ನಿಲ್ಲ. ಎರಡು ವರ್ಷಗಳ ಹಿಂದೆ ಬ್ರಯನ್ ಹಾವ್ ನನ್ನು ‘ಬ್ರಿಟಿಷ್ ಏಕಲವ್ಯ’ ಎನ್ನುವ ಶೀರ್ಷಿಕೆಯಡಿ ಒಂದು ಲೇಖನ ಬರೆದು ನನ್ನ ‘ಹಳೇ ಸೆತುವೆ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ. ದುರ್ದೈವ, ಈಗ ಅವನಿಗೆ ಶ್ರದ್ಧಾಂಜಲಿ ಹೇಳುವ ಸಮಯ.

ಬ್ರಿಟಿಷ್ ಸಂಸತ್ ಭವನದ ಎದುರು ಚಳಿ ಮಳೆಗೆ ಮೈಯ್ಯೊಡ್ಡಿ ಡೇರೆ ಯೊಳಗೆ ಬದುಕುತ್ತಾ ಆಫ್ಘನ್ ಗುಡ್ಡ ಗಾಡಿನ ಲ್ಲಿ ಮತ್ತು ಇರಾಕ್ ನಲ್ಲಿ ನಡೆದ ಮಾರಣ ಹೋಮ ದ ಬಗ್ಗೆ ವಿಶ್ವದ ಗಮನ ಸೆಳೆಯಲು ಪ್ರಯತ್ನ ಪಡುತ್ತಿದ್ದ ಧ್ವನಿ ನಿಸ್ತೇಜ ಈತನ ಸಾವಿನೊಂದಿಗೆ. ರಾಜಕಾರಣಿಗಳ ಬೆದರಿಕೆಗೆ, ಪೊಲೀಸರ ದಬ್ಬಾಳಿಕೆಗೆ ಸಡ್ಡು ಹೊಡೆದು ನಿಂತಿದ್ದ ಹಾವ್ ಕೊನೆಗೆ ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಶರಣಾದ ಈ ತಿಂಗಳ ೧೮ ರಂದು. ಈತನ ಸಾವಿನೊಂದಿಗೆ ಬುಶ್ ಮತ್ತು ಬ್ಲೇರ್ ರಂಥ ಯುದ್ಧ ಕೋರರಿಗೆ ಒಸಾಮಾ ಸಾವಿನಿಂದಿಂದ ಸಿಕ್ಕ ‘closure’ ಭಾವ ಅಥವಾ ನಿರಾಳ ಭಾವ ಸಿಕ್ಕಿರಬಹುದು. ಲಂಚ ಸಮಾಜದ ಅವಿಭಾಜ್ಯ ಅಂಗ ಮಾತ್ರವಲ್ಲ ಅದೊಂದು ಮಾಮೂಲು ಧಂಧೆ ಎನ್ನುವ ಮಟ್ಟಕ್ಕೆ ಬಂದಾಗ ಅದರ ವಿರುದ್ಧ ಸೊಲ್ಲೆತ್ತಿದ ಸಿರಿವಂತ ಸಾಧು ರಾಮ್ ದೇವ್ ಮತ್ತು ಸಮಾಜ ಸೇವಕ ಅಣ್ಣಾ ಹಜಾರೆ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾದಂತೆಯೇ ಈತನೂ ಸಹ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಬ್ರಯನ್ ಕೆಚ್ಚೆದೆಯ ವ್ಯಕ್ತಿ. ನಾವೆಂದೂ ಮಾಡಲಾಗದ, ಕೆಲಸವನ್ನೂ ಆತ ಮಾಡಿ ತೋರಿಸಿದ. ಸರಕಾರದಿಂದ, ವ್ಯವಸ್ಥೆಯಿಂದ ಪ್ರತಿರೋಧ ಎದುರಾದಾಗ ವೇಷ ಬದಲಿಸಿಕೊಂಡು ಕಾಲಿಗೆ ಬುದ್ಧಿ ಹೇಳುವ ಯತ್ನ ಮಾಡಲಿಲ್ಲ.

ಶಾಂತಿಯ ಪರಂಪರೆ ಹುಟ್ಟು ಹಾಕಿದ ಬ್ರಯನ್ ನಮಗೆಲ್ಲರಿಗೂ ಒಂದು ಪಾಠ. ಉರಿ ಬಿಸಿಲಿನಲ್ಲಿ ಒಂದು ಘಂಟೆ ನಿಂತು ವ್ಯವಸ್ಥೆಯ ವಿರುದ್ಧ ಪ್ರತಿಭಟಿಸದ ನಾವು ಬ್ರಯನ್ ರೀತಿ ಹಗಲು ರಾತ್ರಿ ಪೂರ್ತಿ ಹತ್ತು ವರ್ಷಗಳ ಕಾಲ ಒಂದು ಕಡೆ ಡೇರೆ ಬಿಗಿದು ಕೂರಲು ಸಾಧ್ಯವೇ? ಅದರ ಮೇಲೆ ರಾಜಕಾರಣಿಗಳ ಕಟು ಟೀಕೆ. ಪೊಲೀಸರ ನಿರಂತರ ಒತ್ತಡ, ಡೇರೆ ಖಾಲಿ ಮಾಡಲು. ಒಮ್ಮೆ ಪೊಲೀಸರು ಬಂದು ಅವನು ಡೇರೆ ಹೊರಗೆ ಅಂಟಿಸಿದ್ದ ಕೈಬರಹದ ಪೋಸ್ಟರ್ ಗಳನ್ನು ಕಿತ್ತು ಹಾಕಿದ್ದರು. ಮರು ದಿನ ಶ್ರದ್ಧೆಯಿಂದ ಮತ್ತೆ ತಾನು ಬರೆಯಬೇಕಾದುದನ್ನು ಬರೆದು ನೇತು ಹಾಕಿದ ತಾನೇ ಬೀಡು ಬಿಟ್ಟಿದ್ದ ಠಿಕಾಣಿ ಹೊರಗೆ. ಈತನನ್ನು ಕೆಲವರು, ಧೀಮಂತ, ಶಾಂತಿ ದೂತ ಎಂದು ಕೊಂಡಾಡಿದರೆ ರಾಜಕಾರಣಿಗಳಿಗೆ ಈತ ಒಂದು nuisance. ಸಂಸತ್ ಭವನದ ಘನತೆಯನ್ನು ಗೌರವವನ್ನೂ ತನ್ನ ಭಿತ್ತಿ ಪತ್ರಗಳಿಂದ, ಬಾವುಟ, banner, placard, poster, teddy bears ಗಳಿಂದ ಹಾಳುಗೆಡವುತ್ತಿದ್ದಾನೆ ಎಂದು ದೂರು. ಈತ ಹಾಕಿದ್ದ ಡೇರೆ ಮತ್ತು ಅದರ ಸುತ್ತ ಮುತ್ತ ಅಂಟಿಸಿದ್ದ ಮುಗ್ಧ ಮಕ್ಕಳ, ಸ್ತ್ರೀಯರ ರೋದನದ ಚಿತ್ರಗಳು, ಭಿತ್ತಿ ಪತ್ರಗಳು ಸಂಸತ್ ವಲಯವನ್ನು ಕೊಳೆ ಗೇರಿಯಾಗಿ ಪರಿವರ್ತಿಸಿವೆ ಎಂದು ದೂರಿದ ರಾಜಕಾರಣಿಗೆ ಈ ವಿಷಯ ಹೊಳೆಯದೆ ಹೋಯಿತು ಸುಳ್ಳುಗಳನ್ನು ಹೆಣೆದು, ದಾಖಲೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ, ಕಾಲು ಕೆರೆದು ಯುದ್ಧಕ್ಕೆ ಹೋಗೋದು ಕೊಳೆಗೇರಿ ಎಬ್ಬಿಸುವುದಕ್ಕಿಂತ ಗಬ್ಬು ಕೆಲಸ ಎಂದು.

ಬ್ರಯನ್ ಹೀಗೆ ಹಗಲು ರಾತ್ರಿ ಎನ್ನದೆ ತನ್ನ ಕೌಟುಂಬಿಕ ಬದುಕನ್ನು ಬಿಟ್ಟು ವಿಶ್ವದ ಯಾವ್ಯಾವುದೋ ಮೂಲೆಯಲ್ಲಿ ನೆಲೆಸುವ ಜನರ ಮೇಲೆ ಈತನಿಗಿರುವ ಮರುಕ, ಕಾಳಜಿಗೆ ಆಸಕ್ತರಾಗಿ ಈತನೊಂದಿಗೆ ಮಾತಿಗೆ ನಿಲ್ಲುವವರ ಮೇಲೂ ಕೆಲವು ಜನರು ಹರಿಹಾಯ್ದಿದ್ದಿದೆ. ಈ ಜನ ಎಂಥವರೆಂದರೆ ಸರಕಾರ ಮಾಡುವುದು ತಪ್ಪು ಎಂದು ತೋರಿದರೂ ಪ್ರತಿಭಟಿಸಲು ಅವರಲ್ಲಿ ಬೇಕಾದ ಕಸುವು ಇರುವುದಿಲ್ಲ, ಅಥವಾ ವೇಳೆ ಇರೋಲ್ಲ. ಬೇರೆಯವ ಈ ಕಾರ್ಯವನ್ನ ಕೈಗೆತ್ತಿಕೊಂಡಾಗ ಭೀತಿ ಆವರಿಸಿಕೊಳ್ಳುತ್ತದೆ. ಆಗ ಬೈಗುಳಗಳ ಸುರಿಮಳೆ. ಸರಕಾರದ ಪರ ವಕಾಲತ್ತು. ಇಂಥ ಜನರ ಅಲ್ಪತನದಿಂದ ಈತ ಇನ್ನಷ್ಟು ಎತ್ತರಕ್ಕೆ ಬೆಳೆದನೆ ಹೊರತು ಈತನ ಕೆಚ್ಚನ್ನು ಕುಗ್ಗಿಸಲಿಲ್ಲ. ಕಟು ಮಾತುಗಳು. ಲಂಡನ್ನಿಗೆ ಬರುವ ಪ್ರವಾಸಿಗರಿಗೆ ಈತನ ಡೇರೆ ಒಂದು ಪ್ರಮುಖ ಆಕರ್ಷಣೆಯಾಗಿತ್ತು.

ಹೀಗೆ ಹೊರಗಿನವರ, ಸಂಘಟನೆಗಳ ವಶೀಲಿ ಬಾಜೀ ಇಲ್ಲದೆ ತೆರನಾದ ಸವಾಲುಗಳಿಗೆ ಧೃತಿಗೆಡದೆ ಸ್ಥೈರ್ಯದಿಂದ ತಾವು ನಂಬಿದ ಮೌಲ್ಯಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಡುವ ಸಾಧಕರು ಅಲ್ಲಲ್ಲಿ ಕಾಣಲು ಸಿಗುತ್ತಾರೆ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಿದ ನಮ್ಮವರೇ ಆದ ವ್ಯಕ್ತಿಯೊಬ್ಬರ ಉದಾಹರಣೆ ಇದೆ. ಅವರೇ ‘ಹೊಟ್ಟೆ ಪಕ್ಷ’ ದ ರಂಗ ಸ್ವಾಮಿ.

ಅತ್ಯಧಿಕ ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಉಂಡದ್ದು ಸೋಲನ್ನೇ ಆದರೂ ಬಡವರಿಗೆ ಕಿಲೋ ಗ್ರಾಂ ಗೆ ಒಂದು ರೂಪಾಯಿ ಅಕ್ಕಿ ಕೊಡುವ ವಾಗ್ದಾನ ದ ಮೂಲಕ ಚುನಾವಣೆಗಳನ್ನು ಸೆಣಸುತ್ತಿದ್ದರು ಹೊಟ್ಟೆ ಪಕ್ಷದ ರಂಗ ಸ್ವಾಮಿ. ಚಿಕ್ಕಮಗಳೂರಿನಲ್ಲಿ ಇಂದಿರಾ ವಿರುದ್ಧವೂ ಸ್ಪರ್ದಿಸಿದ್ದ ರಂಗ ಸ್ವಾಮೀ ಬಹುಶಃ ತಾವು ಗೆಲ್ಲುವುದಿಲ್ಲ ಎನ್ನುವ ಸ್ಪಷ್ಟ ಅರಿವಿದ್ದೂ ಚುನಾವಣೆಯಲ್ಲಿ ಸ್ಪರ್ದೆಗೆ ಮುಂದಾಗುತ್ತಿದ್ದದ್ದು ಒಪ್ಪೊತ್ತಿನ ಅನ್ನಕ್ಕಾಗಿ ಬಡವರು ಪಡುವ ಬವಣೆ ಬಗ್ಗೆ ರಾಜಕಾರಣಿಗಳ ಮನ ಸೆಳೆಯುವ ಉದ್ದೇಶವೂ ಆಗಿರಬಹುದು. ಚುನಾವಣೆ ಪ್ರಚಾರಕ್ಕೆ ಇವರು ಬಂದಾಗ ಸೋಲುವುದು ಗ್ಯಾರಂಟಿಯಾದರೂ ಯಾಕಾದರೂ ಈತ ನಿಲ್ಲುತ್ತಾರೋ ಎಂದು ಜನ ಕನಿಕರ ಮತ್ತು ಅಪಹಾಸ್ಯದಿಂದ ಮಾತಾಡಿದರೆ ಇವರಿಗೆ ಅದರ ಪರಿವೆಯಿಲ್ಲ. ರಂಗ ಸ್ವಾಮೀ ನಿಧನರಾಗಿ ನಾಲ್ಕು ವರ್ಷಗಳಾ ದುವಂತೆ. ಆದರೆ ನನಗೆ ತಿಳಿದಿದ್ದು ಬ್ರಯನ್ ಹಾವ್ ತೀರಿ ಹೋದ ದಿನ.

ಒಂದು ಕಡೆ ಬುಶ್ ಮತ್ತು ಬ್ಲೇರ್ ರ ಸುಳ್ಳಿನಿಂದ ಪ್ರೇರಿತವಾದ ಸೈನ್ಯಗಳು ದಿನದ ೨೪ ಘಂಟೆಗಳ ಕಾಲ ನಿರಂತರ ಇರಾಕ್ ಆಫ್ಘಾನಿಸ್ತಾನ, ಮುಂತಾದ ದೇಶಗಳ ಮೇಲೆ ಬಾಂಬುಗಳ ಮಳೆಗರೆಯುತ್ತಿದ್ದರೆ ಈ ಕೃತ್ಯಗಳ ವಿರುದ್ಧ ಈತ ಪ್ರತಿರೋಧ ನಡೆಸಿದ ೧೦ ವರ್ಷ ಪೂರ್ತಿ. ಕ್ಯಾನ್ಸರ್ ರೋಗದ ಚಿಕಿತ್ಸೆಗೆಂದು ಜರ್ಮನಿ ದೇಶಕ್ಕೆ ಹೋದ ಬ್ರಯನ್ ಮರಳಿ ಬರದೆ ಡೇರೆ ಖಾಲಿಯಾಯಿತೆ ವಿನಃ ಅವನನ್ನು ಹೊರಹಾಕಲು ಬ್ರಿಟಿಶ್ ಸರಕಾರ ನಡೆಸಿದ ಎಲ್ಲ ಪ್ರಯತ್ನಗಳೂ (ನಮ್ಮ ದೇಶದ UPA ಸರಕಾರಕ್ಕೆ ಈತನ ಡೇರೆ ಖಾಲಿ ಮಾಡಿಸುವ ಕೆಲಸದ ಗುತ್ತಿಗೆ ನೀಡಿದ್ದರೆ ಏನಾಗುತ್ತಿತ್ತೋ ಊಹಿಸಿ) ವಿಫಲವಾದವು. ಪ್ರಶಸ್ತಿ ಪುರಸ್ಕಾರಗಳ ಅಪೇಕ್ಷಿಯಿಲ್ಲದೆ ‘ಮೆಗಾ ಫೋನ್’ ಹಿಡಿದು ತನ್ನ ಕಸುಬನ್ನು ಅತೀ ಶ್ರದ್ಧೆಯಿಂದ ಮಾಡುತ್ತಿದ್ದ ಈ ‘ಬಡಗಿ’ ಗೆ ೨೦೦೭ ರಲ್ಲಿ ‘ಚಾನಲ್ ೪’ ಟೀವೀ ಸಂಸ್ಥೆ ‘ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿ’ ಎಂದು ಅವನನ್ನು ಆಯ್ಕೆ ಮಾಡಿದಾಗ ಹಿಗ್ಗಿದ ಬ್ರಯನ್ ತನಗೆ ಟೋನಿ ಬ್ಲೇರ್ ಮತ್ತು ಡೇವಿಡ್ ಕೆಮರೂನ್ ರಿಗಿಂತ ಹೆಚ್ಚು ಮತ ನೀಡಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಹರ್ಷದಿಂದ ಅಭಿನಂದನೆ ಸಲ್ಲಿಸಿದ. ಯುದ್ಧ ಕೋರ ನಾಯಕರ ಕೃತ್ಯಗಳ ಕಾರಣ ನೋವನ್ನನುಭವಿಸುವ ಜನರಿಗಾಗಿ ಏಕಾಂಗಿಯಾಗಿ ಹೋರಾಡಿದ ಬ್ರಯನ್ ವೈಯಕ್ತಿಕ ಜೀವನದಲ್ಲಿ ನೋವನ್ನೂ, ಹಿನ್ನಡೆಯನ್ನೂ ಕಂಡ. ೨೦೦೧ ರಲ್ಲಿ ಈ ಅಪರೂಪದ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಆರಂಬಿಸಿದ ಒಂದು ವರ್ಷದ ಒಳಗೆ ಈತನ ಪತ್ನಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದಳು. ವಿಚಲಿತನಾಗದ ಬ್ರಯನ್ ಹೇಳಿದ್ದು ನಾನು ನನ್ನ ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ, ಅವರು ದೂರವಾಗುವಂತೆ ಮಾಡಿದ್ದೂ ದುರುಳ ನಾಯಕರೆ ಎಂದು ಹಲುಬುತ್ತಾನೆ.

ಬ್ರಯನ್ ಗೆ ಏಳು ಜನ ಮಕ್ಕಳಿದ್ದರು.

ಪರಿವೃತ್ತಪಾರ್ಶ್ವಕೋನಾಸನ

 

ನಮ್ಮ ದೇಶದಲ್ಲಿ ಈಗ ಭ್ರಷ್ಟಾಚಾರದ ಕೋಲಾಹಲ. ದೇಶವನ್ನು ಹಗಲು ದರೋಡೆ ಮಾಡುತ್ತಿರುವ ರಾಜಕಾರಣಿ-ಉದ್ಯಮಿ ‘ನೆಕ್ಸಸ್’ ಜನರ ಸಹನೆ ಕೆಡಿಸಿದೆ. ಒಮ್ಮೆ ಶ್ರೀಲಂಕಾ ಮೂಲದ ನನ್ನ ಸಹೋದ್ಯೋಗಿ ತನ್ನ ದೇಶದ ಅಧ್ಯಕ್ಷ ಮಹೇಂದ್ರ ರಾಜಪಕ್ಸ ಮತ್ತು ಆತನ ಪರಿವಾದವರ ಮುಗಿಲು ಮುಟ್ಟಿದ ಭ್ರಷ್ಟಾಚಾರ ಯಾವ ರೀತಿ ದೇಶ ಮುಂದವರಿಯಲು ಅನುವು ಮಾಡಿ ಕೊಡುತ್ತಿಲ್ಲ ಮತ್ತು ಅವರುಗಳ ಕಪಿ ಮುಷ್ಠಿಯಲ್ಲಿ ದೇಶ ಯಾವ ರೀತಿ ಸಿಲುಕಿದೆ ಎಂದು ಹೇಳುವಾಗ ನಾನು ಸಂಭ್ರಮದಿಂದ ನಮ್ಮ ದೇಶದಲ್ಲಿ ಈ ರೀತಿಯ ಲಂಚಗುಳಿತನ ಸಾಧ್ಯವಿಲ್ಲ. ಕೆಳಸ್ತರದಲ್ಲಿ ಮಾತ್ರ ಒಂದಿಷ್ಟು ಭ್ರಷ್ಟಾಚಾರ ಇದೆ, ವ್ಯವಸ್ಥೆಯ ಮೇಲ್ಪದರದಲ್ಲಿ ಅದರ ಹಾವಳಿ ಇಲ್ಲ, ನಮ್ಮ ಮಾಧ್ಯಮ, ನ್ಯಾಯಾಲಯಗಳು, ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅವನನ್ನು ಬಿಡುವುದಿಲ್ಲ, ನಮ್ಮದು ಏಷ್ಯಾ ಉಪಖಂಡದ freest, transparent democracy ಎಂದೆಲ್ಲಾ ಬೀಗುತ್ತಾ ಹೇಳುವಾಗ ಆತನ ಕಣ್ಣುಗಳಲ್ಲಿ ಅಸೂಯೆ ಮಿಶ್ರಿತ ಮೆಚ್ಚುಗೆ ಕಾಣಬಹುದಿತ್ತು. ಆದರೆ ಇತ್ತೀಚೆಗೆ ಒಂದೇ ಸಮನೆ ಹಗರಣಗಳ ಮೇಲೆ ಹಗರಣಗಳು ನಮ್ಮ ಕೊರಳಿಗೆ ಮಾಲೆಯಾಗಿ ನಮ್ಮ ಉಸಿರುಗಟ್ಟಿಸಲು ಶುರುಮಾಡಿದಾಗ ನನಗನ್ನಿಸಿತು ನಾನೆಂಥಾ novice ಎಂದು.

ಶ್ರೀಲಂಕಾ ರಾಜಪಕ್ಸ ಪರಿವಾರದ ಕಪಿ ಮುಷ್ಠಿಯಲ್ಲಿ ಮಾತ್ರ ಇರೋದು, ಅದೇ ನಮ್ಮ ದೇಶ ಯಾರ್ಯಾರಿಗೆ ಬಲವಾದ, ಬಿಗಿಯಾದ, ಮುಷ್ಠಿಯಿದೆಯೋ ಅವರುಗಳೆಲ್ಲರ ಕೈಯ್ಯಲ್ಲಿ ಸಿಕ್ಕು ನರಳುತ್ತಿದೆ. ಚಾರ್ಲ್ಸ್ ಡಾರ್ವಿನ್ ನ survival of fittest ಸಿದ್ಧಾಂತ ಕ್ಕೆ ಜ್ವಲಂತ ನಿದರ್ಶನ ನಮ್ಮ ಲಂಚಗುಳಿ ರಾಜಕಾರಣಿಗಳು ಮತ್ತು ಅವರ ಆಶ್ರಯದಲ್ಲಿ ಮೆರೆಯುತ್ತಿರುವ ಉದ್ಯಮಿಗಳು. ತಾಕತ್ತಿರುವವರೆಲ್ಲಾ ಲೂಟಿಗೆ ಅರ್ಹರು.

ರಾಜಕಾರಣಿಗಳು ನಮ್ಮ ಕನಸುಗಳನ್ನು, ಆಶಯಗಳನ್ನು ಅಮೇರಿಕನ್ ಡಾಲರ್ ಗಳ ರೂಪಕ್ಕೆ ಪರಿವರ್ತಿಸಿ ಸ್ವಿಸ್ ಬ್ಯಾಂಕುಗಳಲ್ಲೂ, ಕಪ್ಪು ಹಣದ ರೂಪದಲ್ಲೂ ಜಮಾವಣೆ ಮಾಡಲು ಆರಂಬಿಸಿದ್ದರಿಂದ ಈ ಬೇಡಿಕೆಗೆ ಒತ್ತಾಸೆ ಜನರಿಂದ. ಶುಭ್ರ ಖಾದಿಗಳು ತಮ್ಮ ಕೊಳಕು antics ಗಳಿಂದ ನಮ್ಮನ್ನು ನಿರಾಶೆ ಗೊಳಿಸಿದಾಗ ಸಹಜವಾಗಿಯೇ ಜನ unconventional ಪರಿಹಾರದ ಕಡೆ ನೋಟ ಹರಿಸಲು ಆರಂಭಿಸಿದರು. ದೇಹವನ್ನ ದಂಡಿಸಿ ಸರಕಾರದ ಮನವೊಲಿಸಲು ಯತ್ನಿಸಿದರು. ಯೋಗ ಖ್ಯಾತಿಯ ಬಾಬಾ ರಾಮ್ ದೇವ್ ಸರಕಾರದ ಲಂಚ ಕುರಿತ ಸರಕಾರದ ನಿರ್ಲಿಪ್ತ ನೀತಿಗೆ ಸೆಡ್ಡು ಹೊಡೆದರು. ಅದರಲ್ಲೇನು ತಪ್ಪು? ಯೋಗ ಗುರು ರಾಮ್ ದೇವ್ ಜನರ ನಾಡಿ ಮಿಡಿತಕ್ಕೆ ಪ್ರತಿಸ್ಪಂದಿಸಿ ಸಮಾನಾಸಕ್ತರನ್ನು ಕಲೆ ಹಾಕಿ ರಾಮ ಲೀಲಾ ಮೈದಾನಕ್ಕೆ ಕರೆತಂದರು. ರಾಮಲೀಲಾ ಮೈದಾನ ಬದಲಾವಣೆಯ ‘ತಹ್ರೀರ್’ ಚೌಕ (ಈಜಿಪ್ಟ್) ಆಗಬಹುದು ಎಂದು ನಿರೀಕ್ಷಿಸಿದ್ದ ಜನರಿಗೆ ಕಾಣಲು ಸಿಕ್ಕಿದ್ದು miniature ತಿಯಾನನ್ಮೆನ್ ಚೌಕ. ಬೀಜಿಂಗ್ ನ ಚೌಕದಲ್ಲಿ ಟ್ಯಾಂಕುಗಳು ರಾರಾಜಿಸಿದರೆ ದಿಲ್ಲಿಯ ಮೈದಾನದಲ್ಲಿ lathi ಗಳು ರಾರಾಜಿಸಿದವು.

ಭ್ರಷ್ಟಾಚಾರದ ಬಗ್ಗೆ ಸರಕಾರದ ಅಸಡ್ಡೆ, ಉದಾಸೀನ ನೀತಿಗೆ ಬೇಸತ್ತ ಸಮಾಜ ಸೇವಕ ಅಣ್ಣಾ ಹಜಾರೆ ಅಮರಣಾಂತ ಉಪವಾಸಕ್ಕೆ ಹೊರಟಾಗ ಸರಕಾರ ಗಾಭರಿಯಾಗಿ ಲೋಕ ಪಾಲ್ ಮಸೂದೆ ಮಂಡಿಸಿ ಲಂಚ ರಿಶ್ವತ್ತನ್ನು ಪರಲೋಕ ಪಾಲ್ ಮಾಡ್ತೀವಿ ಎಂದು ನಂಬಿಸಿ ನಾಮ ಎಳೆದ ಸರಕಾರಕ್ಕೆ ಬಿಸಿ ಮುಟ್ಟಿಸಲು ರಾಮ್ ದೇವ್ ತಯಾರಾದಾಗ ಸರಕಾರ ಬೆದರಿತು. ಯೋಗ ಗುರುವಿನ ನೇತೃತ್ವದಲ್ಲಿ ಜಮಾಯಿಸಿದ್ದ ಹತ್ತಾರು ಸಾವಿರ ಜನ ಬಯಸಿದ್ದು ಸರಕಾರದಿಂದ ಒಂದು ಸಿಂಪಲ್ ಆಸನವನ್ನು. ಅದೇ ‘ಬದಲಾವಣೆ’ ಯ ಆಸನ. change. “Change we can believe in” ಇಷ್ಟೇ ಆಗಿತ್ತು ಜನರ ಬೇಡಿಕೆ. ಲೂಟಿ ಮಾಡಿ ದೇಶಾಂತರ ಹೋದ ಗಂಟು ಮರಳಿ ದೇಶಕ್ಕೆ ಬರಲಿ, ಇನ್ನು ಮುಂದೆ ಹೀಗಾಗದಂತೆ ಬೇಲಿ ಕಟ್ಟಿ ಎನ್ನುವ ಸಿಂಪಲ್ ಬೇಡಿಕೆ. ಲಂಚ ಮುಗಿಲು ಮುಟ್ಟಿದೆ, ನೈತಿಕತೆ ಪಾತಾಳ ಅಪ್ಪಿದೆ ಸ್ವಲ್ಪ ಬದಲಾಗಿ ಎಂದಷ್ಟೇ ಆಗಿತ್ತು ಜನರ ಬಯಕೆ. ಸರಕಾರ ಜಪ್ಪಯ್ಯ ಅನ್ನದಿದ್ದಾಗ ಬೇಸತ್ತ ಜನ ತಮಗೆ ತಿಳಿದ ಶಾಂತಿಯುತ ಪ್ರತಿಭಟನೆಯ ಮಾರ್ಗ ಅನುಸರಿಸಿದರು. ಬದಲಾವಣೆ ಎನ್ನುವ ಅತಿ ಸುಲಭದ ಆಸನಕ್ಕೆ ಒಪ್ಪದ ಸರಕಾರ ಜನರ ಮೇಲೆ ಪ್ರಯೋಗಿಸಿದ್ದು ಸ್ವಲ್ಪ ಕ್ಲಿಷ್ಟಕರವಾದ “ಪರಿವೃತ್ತ ಪಾರ್ಶ್ವಕೋನಾಸನ”. ಮೊದಲು cajoling, ನಂತರ ಬೆದರಿಕೆ, ಸ್ವಲ್ಪ ನಂತರ ಅಪವಾದ, ಕೊನೆಗೆ ಬಲಪ್ರಯೋಗ. revolving lateral angle position ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಈ ಆಸನ ಬಹು ಸಲೀಸಾಗಿ ಕೆಲಸಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲೂ ಈ ಆಸನ ಉಪಯೋಗಕ್ಕೆ ಬಂದಿತ್ತು. ಅದರ ನಂತರ ಹಲವು ರಾಜ್ಯಗಳಲ್ಲಿ ಹಲವು ಉದ್ದೇಶಗಳಿಗಾಗಿಯೂ ಈ ಆಸನ handy ಆಗಿ ಬಂತು ಸರಕಾರಗಳಿಗೆ.

ಯಾರಿಗೇ ಆದರೂ ಈ “ಬದಲಾಗು” ಎನ್ನುವ ಆಸನ ಬಹು ಕಷ್ಟಕರ. ಹೊಸ ವರ್ಷದ ಆರಂಭದಲ್ಲೂ, ಹಿರಿಯರಿಂದ ತಿವಿಸಿ ಕೊಂಡಾಗಲೂ ಪಾಲಕರಿಂದ ಉಗಿಸಿ ಕೊಂಡಾಗಲೂ ಈ ಆಸನದ ಮೇಲೆ ಆಸಕ್ತಿ ತೋರಿದರೂ ಅದು ತಾತ್ಕಾಲಿಕ. ಸುಲಭವಾಗಿ ಬಲೆಗೆ ಬೀಳಲೊಲ್ಲದು.

ಇನ್ನೊಂದು ಬೆಳವಣಿಗೆ ಗಮನಿಸಿದಿರಾ? ಭ್ರಷ್ಟ ರಾಜಕಾರಣಿಗಳ ಪಾಪ ತೊಳೆಯಲು ಯೋಗಿಗಳು, ಸಮಾಜ ಸೇವಕರು ಮುಂದೆ ಬರಬೇಕು. ಏಕೆ, ಭ್ರಷ್ಟಾಚಾರಿಗಳಲ್ಲದ ರಾಜಕಾರಣಿಗಳು extinct ಆಗಿ ಹೋದರೆ ‘ಡೋಡೋ’ ಪಕ್ಷಿ ಥರ? ಈ ಬಾಬಾ ಮತ್ತು ಸಮಾಜ ಸೇವಕರನ್ನು ಬೆಂಬಲಿಸುತ್ತಿರುವ, ಅವರ ಪರವಾಗಿ ಅರಚುತ್ತಿರುವ ರಾಜಕಾರಣಿಗಳೇಕೆ ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸರು?

ಒಂದು digression: ಈ ಉಪವಾಸದ ಗಲಾಟೆ ಮಧ್ಯೆ ಯಾವುದೇ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನಿರುವ ಕಂಪ್ಯೂಟರ್ ತಂತ್ರಾಂಶವೊಂದು ವಿವಾದಕ್ಕೆ ಎಳೆಯಲ್ಪಟ್ಟಿದ್ದು RSS ಹಿನ್ನೆಲೆ ಬಾಬಾರಿಗೆ ಇದೆ ಎನ್ನುವ ಅಪವಾದ ನನ್ನಂಥವರನ್ನು ತಬ್ಬಿಬ್ಬುಗೊಳಿಸಿದೆ. ಹೌದು rss ಗೂ ಬಾಬಾ ಗೂ ಇರೋ ಸಂಬಂಧ ಒಂದು ರೀತಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಗೂ ಇಮಾಂ ಸಾಹೇಬರಿಗೂ ಇರುವ ವ್ಯಾತ್ಯಾಸದ ರೀತಿ ಅಲ್ಲವೇ? RSS ಎಂದರೆ Really Simple Syndication ಎನ್ನುವ ಒಂದು ಚೊಕ್ಕ ಉಪಯೋಗಿ ತಂತ್ರಾಂಶ. ನಮಗೆ ಇಷ್ಟವಾದ ತಾಣಗಳ LIVE FEED ಗಳನ್ನು ಸುಲಭವಾಗಿ ನೀಡುವ ಈ ತಂತ್ರಾಂಶಕ್ಕೂ ಬಾಬಾ ರಿಗೂ ಇರಬಹುದಾದ ಸಂಬಂಧದ ಬಗ್ಗೆ ಯೋಚಿಸುತ್ತಾ ನನ್ನೀ ಲೇಖನ ಮುಕ್ತಾಯ.

ಚಿತ್ರ ಕೃಪೆ: http://janetyogahut.blogspot.com

ಪ್ರೆಸೆನ್ಸ್ ಆಫ್ ಮೈಂಡ್ ಎಂದರೇನು?

ಪ್ರೆಸೆನ್ಸ್ ಆಫ್ ಮೈಂಡ್ ಹಲವು ರೀತಿಗಳಲ್ಲಿ ನಮಗೆ ಕಾಣಲು ಸಿಗುತ್ತದೆ. ಚಾಲಕನೊಬ್ಬ ಡಿಕ್ಕಿ ಹೊಡೆದು hit and run ಆಗಿ ತಪ್ಪಿಸಿ ಕೊಂಡಾಗ ಯಾರಾದರೂ ಆ ವಾಹನದ ನಂಬರ್ ನೋಟ್ ಮಾಡಿಕೊಂಡರೆ ಅದು ಪ್ರೆಸೆನ್ಸ್ ಆಫ್ ಮೈಂಡ್, ಅಲ್ಲವೇ? ಕೆಳಗಿದೆ ನೋಡಿ ಮತ್ತೊಂದು ರೀತಿ.

ನನ್ನ ತಂಗಿಯ ನಾದಿನಿ ಮನೆಗೆ ಬಂದು ಮಗ academics ನಲ್ಲಿ ಹಿಂದೆ ಬಿದ್ದಿದ್ದಾನೆ, ಯಾರಾದರೂ ಟ್ಯೂಶನ್ ಕೊಡುವವರು ಸಿಕ್ಕಿದ್ದರೆ ಚೆನ್ನಾಗಿತ್ತು ಎಂದು ಹೇಳಿ ಮಾತು, ಕತೆ ಮುಗಿದ ನಂತರ ತಮ್ಮ ಮನೆ ಕಡೆ ಹೊರಟರು. ದಾರಿಯಲ್ಲಿ ಹೋಗುವಾಗ ಒಂದು ಕಟ್ಟಡದ  ಮುಂದೆ ಹುಡುಗನೊಬ್ಬ ಆಡುತ್ತಿದ್ದ. ಆ ಹುಡುಗ indian embassy school ನ ಸಮವಸ್ತ್ರ ಧರಿಸಿದ್ದ. ಅದನ್ನು ಕಂಡ ಕೂಡಲೇ ಆಕೆ ತನ್ನ ಗಂಡನಿಗೆ ಕಾರನ್ನು ನಿಲ್ಲಿಸಲು ಹೇಳಿ, ನೋಡಿ, ಈ ಹುಡುಗ ಹೋಗೋದು embassy ಶಾಲೆಗೆ ಅಂತ ಕಾಣುತ್ತೆ, ಅವನ ತಾಯಿಗೆ ಖಂಡಿತ ಟ್ಯೂಶನ್ ಕೊಡುವವರ ಬಗ್ಗೆ ತಿಳಿದೇ ಇರಬಹುದು, ಟ್ರೈ ಮಾಡೋಣ  ಎಂದು ಹೇಳಿ ತನ್ನ ಗಂಡನ business card ಆ ಹುಡುಗನಿಗೆ ಕೊಟ್ಟು ಈ ನಂಬರ್ ಗೆ ಅಮ್ಮನಿಗೆ ಫೋನ್ ಮಾಡಲು ಹೇಳಪ್ಪಾ ಎಂದು ಕಾರ್ಡ್ ಕೊಟ್ಟು ಹೋದರು. ಸಂಜೆಯ ಹೊತ್ತಿಗೆ ಆ ಹುಡಗನ ತಾಯಿ ಫೋನ್ ಮಾಡಿ ವಿಷಯ ಏನೆಂದು ವಿಚಾರಿಸಿದರು. ಆ ಹುಡುಗನ ತಾಯಿ ಶಾಲೆಯ ಶಿಕ್ಷಕಿ ಯಾಗಿದ್ದು ಟ್ಯೂಶನ್ ಸಹ ಕೊಡುತ್ತಾರಂತೆ. ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಎನ್ನುವಂತೆ ಟ್ಯೂಶನ್ ಸಮಸ್ಯೆಗೆ ಪರಿಹಾರ ಸುಲಭವಾಗಿ ಸಿಕ್ಕಿತು.   ಮಾತುಕತೆಯ ನಂತರ  ವ್ಯವಹಾರ ಕುದುರಿತು.

ಇಲ್ಲೊಂದು ಪ್ರಶ್ನೆ. ಆ ಹುಡುಗನ ತಾಯಿ ಒಳ್ಳೆಯ (professional) ಶಿಕ್ಷಕಿಯೋ? ಸಾಮಾನ್ಯವಾಗಿ ಶಾಲೆಯಿಂದ ಮನೆಗೆ ಮಕ್ಕಳು ಬಂದ ಕೂಡಲೇ “change, refresh, hit outdoors for play” ನಿಯಮ ಪಾಲನೆ ಆಗಬೇಕು ಅಲ್ಲವೇ? ತನ್ನ ಮಗನ ಸಮವಸ್ತ್ರ change ಮಾಡಿಸದೆ ಆಡಲು ಬಿಟ್ಟಿದ್ದು ತಪ್ಪಲ್ಲವೇ? ಬಹುಶಃ ಆಕೆಯನ್ನು ಈ ಬಗ್ಗೆ ಕೇಳಿದರೆ ಆಕೆಯ ಉತ್ತರ ಹೀಗಿರಬಹುದು,  “ನನ್ನ ಮಗ ಸಮವಸ್ತ್ರ ಧರಿಸದೆ ಹೊರಗೆ ಆಟ ಆಡಿದ್ದರೆ ನನಗೆ ಗಿರಾಕಿ ಸಿಗುತ್ತಿತ್ತೇ?”    

ಇನ್ನೊಂಚೂರು: ಬಹಳ ವರ್ಷಗಳ, ದಶಕಗಳ, ಹಿಂದಿನ ಮಾತು. ಸದಾನಂದ್ ವಿಶ್ವನಾಥ್ ವಿಕೆಟ್ ಕೀಪರ್ ಆಗಿದ್ದ ಸಮಯ. ಪಂದ್ಯವೊಂದರಲ್ಲಿ ದಾಂಡಿಗ ರನ್ನಿಗಾಗಿ ಓಡಿದಾಗ ಆತನನ್ನು ರನ್ನೌಟ್ ಮಾಡಲು ಫೀಲ್ಡರ್ ಚೆಂಡನ್ನು ವಿಕೆಟ್ಟಿಗೆ ಎಸೆದಾಗ ವಿಕೆಟ್ ಚದುರಿ ಹೋಗುತ್ತದೆ, ಆದರೆ ಅಷ್ಟರಲ್ಲಿ ದಾಂಡಿಗ ‘ಮನೆ’ ತಲುಪಿರುತ್ತಾನೆ. ಈ ಸನ್ನಿವೇಶದಲ್ಲಿ ಆತ ರನ್ ಕದಿಯಲು ಮತ್ತೊಮ್ಮೆ ಓಡಿದಾಗ ಮಿಂಚಿನಂತೆ ಚೆಂಡನ್ನು ಸಂಗ್ರಹಿಸಿದ ಸದಾನಂದ್ ಚದುರಿದ್ದ ವಿಕೆಟ್ಟನ್ನು ಕೈಯ್ಯಿಂದ ಕಿತ್ತು ಮೇಲೆಕ್ಕೆತ್ತಿ ಅಪ್ಪೀಲ್ ಮಾಡಿದಾಗ ಅಂಪೈರ್ ಔಟ್ ಕೊಡುತ್ತಾನೆ. ಟೆಕ್ನಿಕಲ್ ಆಗಿ ಸದಾನಂದ್ ಹೀಗೆ ಮಾಡದೆ ಸಾಧಾರಣವಾಗಿ ವಿಕೆಟ್ ಕೀಪರ್ ಗಳು ಮಾಡುವ ರೀತಿ ಚೆಂಡನ್ನು ಈಗಾಗಲೇ ಚದುರಿದ್ದ ವಿಕೆಟ್ಟಿಗೆ  ತಗುಲಿಸಿದ್ದಿದ್ದರೆ ದಾಂಡಿಗ ನಾಟ್ ಔಟ್ ಆಗುತಿದ್ದ. ಇದೂ ಸಹ ಪ್ರೆಸೆನ್ಸ್ ಆಫ್ ಮೈಂಡ್.