live in, three some, ನಮ್ಮ ದೇಶದಲ್ಲಿ?

ಅಹಮದಾಬಾದಿನಲ್ಲಿ ಬಾಳ ಗೆಳೆಯ /ತಿ ಯರನ್ನು ಕಂಡುಕೊಳ್ಳುವ ಒಂದು ಮೇಳವಂತೆ. ಬದುಕಿನ ಸಂಜೆಯಲ್ಲಿರುವವರು ಬದುಕಿನ ಒಂದಿಷ್ಟು ಪ್ರಕಾಶವನ್ನು ತಮ್ಮ ಬಾಳಿನೊಳಕ್ಕೆ ಬಿಟ್ಟು ಕೊಳ್ಳಲು ಸದವಕಾಶ. ಇದರಲ್ಲೇನು ವಿಶೇಷ? ವಿಶೇಷ ಇದೆ. ಇವರುಗಳು ಮದುವೆಯಾಗೋಲ್ಲವಂತೆ. “ಲಿವ್ ಇನ್” ಅಂತೆ. ಅಡುಗೆ ಚೆನ್ನಾಗಿದೆಯೋ ಇಲ್ಲವೋ ಎಂದು ನೋಡುವ tastiing ಥರ. ಅಮೇರಿಕನ್ ಅಥವಾ ಪಾಶ್ಚಾತ್ಯ ಸ್ಟೈಲ್ ಅಂತೆ. ಹೌದು. ಆಧುನಿಕ ಬದುಕಿಗೆ ಬರ್ಗರ್, ಬಾಸ್ಕಿನ್ ರಾಬಿನ್ಸ್, ಜೀನ್ಸ್ ಅನಿವಾರ್ಯ ಆಗೋದಾದರೆ ಹೆಣ್ಣು ಗಂಡಿನ ನಡುವಿನ ಬಂಧವೂ, ಬದುಕುವ ರೀತಿಯೂ ಅವರ ಹಾಗೇ ಯಾಕಾಗಕೂಡದು? ಎಲ್ಲಿಯವರೆಗೆ ನಾವು ಪಾಶ್ಚಾತ್ಯರನ್ನು ಅನುಕರಿಸ ಬಹುದು ಎನ್ನುವದು ಕಠಿಣ ಪ್ರಶ್ನೆ.  

ಅಸ್ಸಾಂ, ಕರ್ನಾಟಕ, ಗುಜರಾತ ರಾಜ್ಯಗಳಿಂದ ಬಂದಿದ್ದರಂತೆ ಜನ ಈ ಮೇಳದಲ್ಲಿ ಪಾಲುಗೊಳ್ಳಲು. ಒಂದು ರೀತಿಯ ಸಾಮೂಹಿಕ ಸ್ವಯಂವರ. ಈ ಅನಿಷ್ಠಕರ ಬೆಳವಣಿಗೆಯನ್ನು ಧಾರ್ಮಿಕ ನಾಯಕರುಗಳು ವಿರೋಧಿಸುವುದು ದೇಶದ, ಸಂಸ್ಕೃತಿಯ ಹಿತದೃಷ್ಟಿಯಿಂದ ಒಳ್ಳೆಯದು. ಇಂದು ಲಿವ್ ಇನ್, ನಾಳೆ three some ಮಟ್ಟಕೆ ಇಳಿಯಬಾರದು ಸಂಬಂಧಗಳು.     

ಮೇಲಿನ ಹೊಸ ಸಂಪ್ರದಾಯವನ್ನು ವಿರೋಧಿಸಿದ ವ್ಯಕ್ತಿಯೊಬ್ಬ ಹೇಳಿದ. ಹಿರಿಯರು ಈ ರೀತಿಯ ಸಂಬಂಧಗಳನ್ನು ಇಷ್ಟ ಪದುವುದಾದರೆ ನಾಳೆ ದಿನ ಕಿರಿಯರೂ ಅದನ್ನೇ ಬಯಸಬಹುದು. ಅವರೇಕೆ ತಾನೇ ಬಯಸಬಾರದು?  ತಮ್ಮ ಅಜ್ಜ  ಅಥವಾ ಅಜ್ಜಿ ಬಯಸಿದ್ದು ತನಗೂ ಇರಲಿ ಎಂದರೆ ತಡೆಯಲು ಸಾಧ್ಯವೇ ಅಥವಾ ತಡೆಯುವುದು ತರವೇ?

ಇಲ್ಲಿ ಹೀಗೆ, ನಮ್ಮಲ್ಲಿ ಹಾಗೆ, ಯಾಕೆ ಹೀಗೆ?

ವಿಜಯ್ ಮಲ್ಯರ ಕಿಂಗ್ ಫಿಶರ್ ವಿಮಾನ ಕಂಪೆನಿ ಆರ್ಥಿಕ ಸಂಕಟ ಕಾರಣ ತನ್ನ ರೆಕ್ಕೆಗಳನ್ನು ಮುದುಡಿ ಕೊಳ್ಳುವ ಸ್ಥಿತಿಯಲ್ಲಿದೆ. “ಕಿಂಗ್ ಆಫ್ ಗುಡ್ ಟೈಮ್ಸ್” ಮಲ್ಯ ಈಗ bad times ನಿಂದ ಹೊರಬರಲು ಸರಕಾರದ ಕಡೆ ನೋಟ ನೆಟ್ಟಿದ್ದಾರೆ. ಪ್ರಧಾನಿಗಳೂ ಮಲ್ಯರ ಸಂಕಷ್ಟವನ್ನು ಗಮನಿಸಿದ್ದಾರೆ. ಏನಾದರೂ ಮಾಡುವ ಭರವಸೆ ನೀಡಿದ್ದಾರೆ. ವಿಜಯ್ ಮಲ್ಯ ಚಾಣಾಕ್ಷ ಉದ್ಯಮಿಯಾದರೂ ತಮ್ಮ ಏರ್ ಲೈನ್ಸ್ ಅನ್ನು ನಷ್ಟದ ಮೋಡಗಳಿಂದ ಆಚೆ ತರಲು ಹೆಣಗುತ್ತಿರುವುದು ಖೇದಕರ.

ಇಂದು ನಮ್ಮ ಕಂಪೆನಿಯ ಜನರಲ್ ಮ್ಯಾನೇಜರ್ ರಿಯಾಧ್ ನಗರಕ್ಕೆ ಪ್ರಯಾಣಿಸಲು ವಿಮಾನದ ಟಿಕೆಟ್ ಗೆ ಹೋದಾಗ ಟಿಕೆಟ್ ಫ್ರೀ. ಫ್ರೀ………..? ಹೌದ್ರೀ, ಫ್ರೀ. ಉಚಿತ. ಪುಕ್ಕಟೆ. ಆದರೆ ತೆರಿಗೆ ಮಾತ್ರ ಪಾವತಿಸಬೇಕು. ಜೆಡ್ಡಾ ದಿಂದ ೧೨೦೦ ಕಿಲೋ ಮೀಟರ್ ದೂರ ರಾಜಧಾನಿ ರಿಯಾದ್. ಸಾಮಾನ್ಯವಾಗಿ ಟಿಕೆಟ್ ದರ ೬,೦೦೦ ರೂಪಾಯಿ. ತೆರಿಗೆ ಸೇರಿ. ಈಗ ತೆರಿಗೆ ಮಾತ್ರ ಪಾವತಿಸಿದರೆ ಸಾಕು, ರೆಕ್ಕೆಗಳು ಅರಳಿಕೊಳ್ಳುತ್ತವೆ. ತೆರಿಗೆ ೨,೦೦೦ ರೂಪಾಯಿ ಮಾತ್ರ. ಈ ಉಚಿತವಾಗಿ ಹಾರು ಎನ್ನುವ ಆಫರ್ ಕೊಡುತ್ತಿರುವ ಕಂಪೆನಿ “ನಾಸ್ ಏರ್”.  ಇದು low cost airline. ಇವರು ಸೌದಿ ಅರೇಬಿಯಾದ ಒಳಗೆ ಮಾತ್ರವಲ್ಲ ಮಧ್ಯ ಪ್ರಾಚ್ಯದ ಹಲವು ದೇಶಗಳಿಗೂ ತಮ್ಮ ಹಾರಾಟದ ಧಂಧೆ ಇಟ್ಟು ಕೊಂಡಿದ್ದಾರೆ. ಜೆಡ್ಡಾ ದಿಂದ ೧೬೦೦ ಕಿಲೋ ಮೀಟರು ಇರುವ ದಮ್ಮಾಂ ನಗರಕ್ಕೆ ಕೇವಲ ೧೨೦೦ ರೂಪಾಯಿ ಚಾರ್ಜ್ ಮಾಡುತ್ತಾರೆ ಆಫರ್ ಸಮಯದಲ್ಲಿ.  ಇಲ್ಲಿ ಹೀಗೆ, ನಮ್ಮಲ್ಲಿ ಹಾಗೆ, ಯಾಕೆ ಹೀಗೆ?   

ಮೈಸೂರು ಹುಲಿ, ಟಿಪ್ಪೂ ಸುಲ್ತಾನರ ಖಡ್ಗ ವನ್ನು ಹಣ ಕೊಟ್ಟು ಬ್ರಿಟಿಶ್ ಸಂಗ್ರಹಾಲಯದಿಂದ ಭಾರತಕ್ಕೆ ಮರಳಿ ತಂದು ಹೆಸರು ಮಾಡಿದ ಶ್ರೀಯುತ ವಿಜಯ್ ಮಲ್ಯ ಆರ್ಥಿಕ ಸಂಕಷ್ಟದಿಂದ ಹೊರ ಬಂದು ತಮ್ಮ ಕಿಂಗ್ ಫಿಶರ್ ಮತ್ತೊಮ್ಮೆ ಆಗಸವನ್ನು ಆಳುವಂತೆ ಮಾಡಲಿ ಎಂದು ಹಾರೈಸೋಣ.

ಹೀಗೊಂದು ಕಾನೂನಿನ ಲೈಂಗಿ’ಕಥೆ’

ಜೂಲಿಯಾನ್ ಅಸಾಂಜ್ ಹೆಸರು ಸಾಮಾನ್ಯ ವಿದ್ಯಾವಂತರು ಕೇಳಿರಲೇ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಹಿತಿ ಹಕ್ಕು ಮುಂತಾದ ಹಕ್ಕುಗಳ ಪ್ರತಿಪಾದಕ ಅಸಾಂಜ್. ಈತ ವಿಶ್ವದ ಸರಕಾರಗಳು ತೆರೆಮರೆಯಲ್ಲಿ ನಡೆಸಿ ಮಗುಮ್ಮಾಗಿ ಇದ್ದು ಬಿಡುವ ವಿಷಯಗಳ ಬಗ್ಗೆ ವಿಶ್ವಕ್ಕೆ ಡಂಗುರ ಬಾರಿಸಿ ಹೇಳುತ್ತಿದ್ದ ತನ್ನದೇ ಆದ ವೆಬ್ ತಾಣ “ವಿಕಿಲೀಕ್” ಮೂಲಕ. ಈ ವಿಕಿಲೀಕ್ ಎನ್ನುವ ನಲ್ಲಿ ತೊಟ ತೊಟ ತೊಟ ತೊಟ ಎಂದು ಉದುರಿಸ ಬೇಕಾದ್ದನ್ನೂ, ಉದುರಿಸಬಾರದ್ದನ್ನೂ ಉದುರಿಸಿ ಸರಕಾರಗಳ ಕೆಂಗಣ್ಣಿಗೆ ಕಾರಣವಾಯಿತು. ಈ ನಲ್ಲಿಯ ಬಾಯಿ ಮುಚ್ಚಿಸಲು ಸರಕಾರಗಳು ಎಲ್ಲಾ ಕಸರತ್ತುಗಳನ್ನೂ ಮಾಡಿದವು. ಅದರಲ್ಲಿನ ಒಂದು ಕಸರತ್ತು ಲೈಂಗಿಕ ದೌರ್ಜನ್ಯದ ಅಥವಾ ಅತ್ಯಾಚಾರದ ಆರೋಪ ಜೂಲಿಯಾನ್ ಅಸಾಂಜ್ ವಿರುದ್ಧ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಜೂಲಿಯಾನ್ ಅಸಾಂಜ್ ನಿಗೆ ಇಬ್ಬರು ಮಹಿಳೆಯರ ಪರಿಚಯ ವಾಯಿತು; ಆನ್ನಾ ಆರ್ಡಿನ್ ಮತ್ತು ಸೋಫಿಯಾ ವಿಲೆನ್ ಇವರೇ ಆ ಮಹಿಳೆಯರು.

ಈ ಮಹಿಳೆಯರು ಯಾರು, ಅವರು ಹೇಗೆ ಜೂಲಿಯಾನ್ ಅಸಾಂಜ್ ನಿಗೆ ಹತ್ತಿರವಾದರು ಎನ್ನುವುದು ದೊಡ್ಡ ಕತೆ. ಆನ್ನಾ ಆರ್ಡಿನ್ ಜೂಲಿಯಾನ್ ಒಂದಿಗೆ ಲೈಂಗಿಕ ಚಟುವಟಿಕೆ ನಡೆಸುವಾಗ ಅರ್ಧ ದಾರಿಯಲ್ಲಿ ಕಾಂಡೋಂ ಹರಿದು ಹೋಯಿತು. ಈಗ ಆನ್ನಾ ಗೆ ಶಂಕೆ ತನಗೆ ಲೈಂಗಿಕ ರೋಗ ತಗುಲಿರಬಹುದೋ ಅಥವಾ ಗರ್ಭಧಾರಣೆಯಾಗಿರಬಹುದೋ ಎಂದು. ಆದರೆ ಆಕೆ ಪೊಲೀಸರಿಗೆ ದೂರು ನೀಡಿದ್ದು ಅಸಾಂಜ್ ಉದ್ದೇಶಪೂರ್ವಕ ಕಾಂಡೋಂ ಹರಿದ ಎಂದು.

ಈಗ ಎರಡನೇ ಪಾತ್ರದ ಆಗಮನ, ಸೋಫಿಯಾ ವಿಲೆನ್. ಈಕೆ ಸಹ ಒಂದೆರಡು ದಿನಗಳ ನಂತರ ಅಸಾಂಜ್ ನೊಂದಿಗೆ ಕೂಡಿದಳು. ಮೊದಲ ಸಲ ಕೂಡುವಾಗ ಅಸಾಂಜ್ ಕಾಂಡೋಂ ಧರಿಸಿದ್ದ, ಮರುದಿನ ಬೆಳಿಗ್ಗೆ ಮತ್ತೊಮ್ಮೆ ಕೂಡುವಾಗ ಅಸಾಂಜ್ ಕಾಂಡೋಂ ಅನ್ನು ಧರಿಸಿರಲಿಲ್ಲ ಎಂದು ಸೋಫಿಯಾ ಪೊಲೀಸ್ ಠಾಣೆ ಗೆ ಹೋದಳು ದೂರಲು. ಇಬ್ಬರೂ ಸಮ್ಮತಿಯುಕ್ತ ಸಂಭೋಗಕ್ಕೆ ಒಪ್ಪಿಗೆ ನೀಡಿದ್ದರು ಎಂದು ಅಸಾಂಜ್ ಹೇಳಿದರೆ ಈ ಮಹಿಳೆಯರ ದೂರು ಬೇರೆಯೇ. ಸಮ್ಮತಿ ನೀಡಿದ್ದು ಕಾಂಡೋಂ ರಹಿತ ಸೆಕ್ಸ್ ಗಾಗಿ ಅಲ್ಲ ಎಂದು. ಈಗ ಆಗಮನ ಸೆಕ ನಷ್ಟೇ ರೋಮಾಂಚನ ಕೊಡುವ ಸ್ವಿಸ್ ಕಾನೂನಿಗೆ.

ಸುಸ್ವಾಗತ ಸ್ವಿಟ್ಸರ್ಲೆಂಡ್. ಈ ದೇಶದಲ್ಲಿ ಕಾನೂನು ಸ್ವಿಸ್ ವಾಚಿನಷ್ಟೇ ಸಂಕೀರ್ಣ. ಸುಲಭವಾಗಿ ಅರ್ಥವಾಗೋಲ್ಲ. ಇಲ್ಲಿನ ಕಾನೂನಿನಲ್ಲಿ “ಸರ್ಪ್ರೈಸ್ ಸೆಕ್ಸ್” ಎನ್ನುವ ಕಾಯಿದೆ ಇದೆ. ಈ ನಿಯಮದಡಿ ಲೈಂಗಿಕ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಮಹಿಳೆ ಸಾಕು ಎಂದರೂ ಕೇಳದೆ ಮುಂದುವರಿದರೆ ಅದು ಅತ್ಯಾಚಾರ. ಸಂಭೋಗ ನಿರತರಾಗಿರುವಾಗಲೇ ಮಹಿಳೆ ಸಮ್ಮತಿಯನ್ನು ಹಿಂದಕ್ಕೆ ಪಡೆಯಬಹುದಂತೆ. ಸಮ್ಮಿಶ್ರ ಸರಕಾರ ಉರುಳಿಸಲು ಪಕ್ಷವೊಂದು ಸರಕಾರಕ್ಕೆ ಬೆಂಬಲ ಹಿಂದಕ್ಕೆ ಪಡೆಯುವ ಹಾಗೆ. ಹಾಗೇನಾದರೂ ಸಮ್ಮತಿಯನ್ನು ಹಿಂದಕ್ಕೆ ಪಡೆದೂ ಗಂಡು ಮುಂದುವರಿದರೆ ಅದು ಅತ್ಯಾಚಾರ. (ಒಂದು ಸಂಶಯ; ಸಂಭೋಗ ನಿರತ ಗಂಡು ಕಿವುಡನಾದರೆ?) ಕಿವುಡನಾದರೆ ಸಂವಿಧಾನಕ್ಕೆ ತರುವ ತಿದ್ದುಪಡಿ ಯಂತೆ ಈ ಹಾಸ್ಯಾಸ್ಪದ ಸ್ವಿಸ್ law (lessness) ಗೂ ತರಬೇಕು ತಿದ್ದು ಪಡಿಯೊಂದ. ಮಹಿಳೆ ಉಪಯೋಗಿಸುವ withdrawal method ಇದು. withdrawal method ಏನು ಎಂದು ವಿವರಿಸಲು ಇದು ಸೆಕ್ಸ್ ಲೇಖನ ಅಲ್ಲ.

ಮೇಲಿನ ಈ ಕಾನೂನಿನ ಅಡಿ ಅಸಾಂಜ್ ನನ್ನು ಕಟಕಟೆಯಲ್ಲಿ ನಿಲ್ಲಿಸುವ, ತದನಂತರ ಜೈಲಿಗೆ ಅಟ್ಟುವ ಪ್ರಯತ್ನ ಸ್ವಿಸ್ ಸರಕಾರದ್ದು.

ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?

ನಾಳೆ ಸೋಮವಾರ ಹುಟ್ಟಲಿರುವ ಮಗು ಪ್ರಪಂಚದ ೭೦೦ ನೇ ಕೋಟಿಯದಂತೆ. ೧೨ ವರ್ಷಗಳ ಹಿಂದೆ ೬೦೦ ಕೋಟಿಯಿದ್ದದ್ದು ಈಗ ೭೦೦ ಕೋಟಿಗೆ ಭಡ್ತಿ. ಈ ವರ್ಷ ಹುಟ್ಟಲಿದ್ದ ಏಳು ಕೋಟಿ ಎಂಭತ್ತು ಲಕ್ಷ ಮಕ್ಕಳಲ್ಲಿ ಸೋಮವಾರದಂದು ಹುಟ್ಟಲಿರುವ ಮಗು ೭೦೦ ಕೋಟಿಯದು. ಭರ್ತಿ ಏಳು ಬಿಲ್ಲಿಯನ್. ವಿರಾಮ ಖುರ್ಚಿ ಪಂಡಿತರಿಗೆ ಈ ಸುದ್ದಿ ಒಂದು ಸುಗ್ಗಿ. ತಮಟೆ ಬಾರಿಸಲು ಆರಂಭಿಸುತ್ತಾರೆ ಜನಸಂಖ್ಯೆಯ ವಿಪರೀತ ವೃದ್ಧಿ ಮತ್ತು ಅದು ತರಬಹುದಾದ ಆಪತ್ತುಗಳ, ಅನಾಹುತಗಳ ವರ್ಣನೆಯೊಂದಿಗೆ.     

ಜನಸಂಖ್ಯೆ ತಡೆಯಲು ಇರುವ ನೂರ ಒಂದು ಅಥವಾ ಸಾವಿರದ ಒಂದು ಉಪಾಯಗಳ ಜೊತೆ ಮತ್ತೊಂದು ಉಪಾಯ ಈಗ ಸೇರಿಕೊಂಡಿದೆ. ಮಹಿಳೆಯರಿಗೆ ಸಂತಾನೋತ್ಪತ್ತಿ ಫ್ಯಾಕ್ಟರಿಯ ಉಸ್ತುವಾರಿ ವಹಿಸಿದರೆ ಜನಸಂಖ್ಯೆ ತಗ್ಗ ಬಹುದಂತೆ. ದೇವರೇ ಬಲ್ಲ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಧ್ವನಿ ಜೋರಾದಾಗ ಸಂತಾನೋತ್ಪತ್ತಿ ತಂತಾನೇ ನಿಧಾನ ಆಗಬಹುದು ಅನ್ನೋ ಆಶಯ. ಜನಸಂಖ್ಯೆ ಏರಿಕೆ ಈಗ ಇರುವ ಸಂಪನ್ಮೂಲಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಂಡಿತರ ಒಂದು ಗುಂಪು ಹೇಳುತ್ತಿದ್ದರೆ ಮತ್ತೊಂದು ಗುಂಪಿಗೆ ಈ ಥಿಯರಿ ನಥಿಂಗ್ ಬಟ್ ಟ್ರಾಶ್. ಯಾರನ್ನು ನಂಬುವುದು?

 ಕ್ಷಿಪ್ರ ಗತಿಯಲ್ಲಿ ಮುಪ್ಪಾಗುತ್ತಿರುವ ಜಪಾನ್

ಒಂದು ಕಡೆ ಏರುತ್ತಿರುವ ಜನಸಂಖ್ಯೆ ವಿಶೇಷಜ್ಞರ ಆತಂಕವನ್ನು ಹೆಚ್ಚಿಸುತ್ತಿದ್ದರೆ ಮತ್ತೊಂದು ಕಡೆ ತಮ್ಮ ದೇಶದ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಡಿಸ್ಕೌಂಟು, ಅದರ ಜೊತೆ ಟೈಮ್ ಆಫು ಮುಂತಾದುವುಗಳನ್ನು ಯುವಜನರ ಮುಂದೆ ಇಡುತ್ತಿರುವ ಬೆಳವಣಿಗೆ. ಈ ಬೆಳವಣಿಗೆ ಎರಡನೇ ವಿಶ್ವ ಮಹಾಯುದ್ಧದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾದರೂ ಪವಾಡಸದೃಶವಾಗಿ ಶ್ರೀಮಂತಿಕೆಯಿಂದ ಕಂಗೊಳಿಸಿದ ಜಪಾನ್ ದೇಶದ್ದು. time off ಏಕೆಂದರೆ ಮಕ್ಕಳನ್ನು ಹುಟ್ಟಿಸಲು, ದೊಡ್ಡ ಪರಿವಾರಕ್ಕಾಗಿ ಅಂಗಡಿ ಮುಂಗಟ್ಟು ಗಳು ರಿಯಾಯಿತಿಯನ್ನು ಘೋಷಿಸುತ್ತಿವೆ ಜಪಾನ್ ದೇಶದಲ್ಲಿ. ಹುಟ್ಟುವ ಪ್ರತೀ ಮಗುವಿನ ಮೇಲೂ ಹಣಕಾಸಿನ ಸಹಾಯ ಕೊಡ ಮಾಡುತ್ತಿದೆ ಅಲ್ಲಿನ ಸರಕಾರ. ಈ ಕ್ರಮಗಳ ಮೂಲಕ ಏನಾದರೂ ಮಾಡಿ, ಹೇಗಾದರೂ ಮಾಡಿ, ಜನಸಂಖ್ಯೆ ಹೆಚ್ಚಿಸಿರಯ್ಯ ಎಂದು ಅಲ್ಲಿನ ಸರಕಾರದ ವಿಜ್ಞಾಪನೆ. ನಮ್ಮ ದೇಶ one is fun ಎಂದು ಊಳಿಡುತ್ತಿದ್ದರೆ, ಜಪನೀಯರ ಆಕ್ರಂದನ more please ಎಂದು.  ಪ್ರಪಂಚ ವೈರುಧ್ಯಗಳ ಸಂತೆ, ಅಲ್ಲವೇ?

ಬಹುಪಾಲು ಜಪನೀಯರಿಗೆ ಸಂತಾನ ವೃದ್ಧಿ ಅನ್ನೋದು ‘to do list’ ನ ಕಟ್ಟಕಡೆಯ ಎಂಟ್ರಿ. ಇದನ್ನು ಟಾಪ್ ಪ್ರಯಾರಿಟಿ ಮಾಡಲು ಸರಕಾರದ ಸರ್ಕಸ್ಸು. ಯುವಜನರ ಒತ್ತು ಪ್ರೋಗ್ರೆಸ್ ಕಡೆ, ಪ್ರೊಕ್ರಿಯೇಶನ್ ಕಡೆ ಅಲ್ಲ. ಏಕೆಂದರೆ ಅಲ್ಲಿ ವಿವಾಹ ದುಬಾರಿ. ಪ್ರತೀ ವಿವಾಹಕ್ಕೆ ಸುಮಾರು ೨೦ ಲಕ್ಷ ರೂಪಾಯಿ ಖರ್ಚು. ಮದುವೆಯಾದ ಮೇಲೆ ಮಗು ಹುಟ್ಟಿದರೆ ಮಗುವಿನ ತಾಯಿಗೆ ಒಳ್ಳೆಯ ವರಮಾನ ಕೊಡುವ ಕೆಲಸ ಸಿಗೋದು ಕಷ್ಟ. ಅಮೇರಿಕಾ ಅಥವಾ ಅಇರೋಪ್ಯ ದೇಶಗಳ ಹಾಗೆ  ಮದುವೆಯಾಗದೆ ಸಂತಾನೋತ್ಪತ್ತಿ ಜಪಾನಿನಲ್ಲಿ ವಿರಳ.  ಅಷ್ಟು ಮಾತ್ರವಲ್ಲ ಜಪಾನಿನಲ್ಲಿ ದೀರ್ಘಾಯುಷಿಗಳು ಹೆಚ್ಚು. ಮೇಲಿನ ಕಾರಣಗಳನ್ನು ಕೂಡಿಸಿ ನೋಡಿದಾಗ ಜಪಾನಿನಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ಅತಿ ಕಡಿಮೆ.     

ಜನಸಂಖ್ಯೆ ವೃದ್ಧಿಗೆ ಒತ್ತು ಕೊಡುತ್ತಿರುವ ಮತ್ತೊಂದು ದೇಶ ಸ್ಪೇನ್. ಸ್ಪೇನ್ ದೇಶದಲ್ಲಿ ಹುಟ್ಟುವ ಪ್ರತೀ ಮಗುವಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಸರಕಾರ ನೀಡುತ್ತದೆ.      

ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು

ತಟ್ಟು ಚಪ್ಪಾಳೆ ಪುಟ್ಟ ಮಗು, ಇಕೋ ಕೈ, ತಕೋ ಕೈ, ತಟ್ಟು ಚಪ್ಪಾಳೆ ಪುಟ್ಟ ಮಗು… ಈ ಕವಿತೆಯನ್ನು ೭೦೦ ನೇ ಕೋಟಿ ಮಗುವಿಗೆ ಹಾಡಿ ಕೇಳಿಸಲು ಸಲ್ಮಾನ್ ರುಶ್ಡಿ ತಯಾರಲ್ಲ. ೭೦೦ ನೇ ಕೋಟಿ ಮಗುವಿಗೆ ನೀವು ಕೊಡುವ ಸಂದೇಶವೇನು ಎಂದು ಕೇಳಿದಾಗ ಬುಕರ್ ಪ್ರಶಸ್ತಿ ವಿಜೇತ, ವಿವಾದಾಸ್ಪದ ಲೇಖಕ ಹೇಳಿದ್ದು “(ಧರೆಯ ಮೇಲೆ) ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು” ಎಂದು. imagine no heaven.

ಸಂಪನ್ಮೂಲಗಳನ್ನು ನುಂಗಲೆಂದೇ ಹುಟ್ಟುತ್ತವೆ ಮಕ್ಕಳು ಎಂದು ನಂಬುವವರು ಇದಕ್ಕಿಂತ ಒಳ್ಳೆಯ ಮಾತನ್ನು ಆಡಲಾರರು. ಸುಮಾರು ಐದು ದಶಕಗಳಿಂದಲೂ ನಾವು ಕೇಳುತ್ತಾ ಬಂದಿದ್ದು, ಜನಸಂಖ್ಯೆ ಏರುತ್ತಿದೆ, ವಾತಾವರಣ ಬದಲಾಗುತ್ತದೆ, ತಿನ್ನಲು ಏನೂ ಇರುವುದಿಲ್ಲ, ಹಸಿವಿನಿಂದ ಜನ ಸಾಯಲಿದ್ದಾರೆ, ಬರ ಬಂದೆರಗಲಿದೆ. ಏರುತ್ತಿರುವ ಜನಸಂಖ್ಯೆ ಕಾರಣ ನಮ್ಮ ಗ್ರಹ ಇಕ್ಕಟ್ಟಾಗುತ್ತಿದೆ, ಹಾಗೇ ಹೀಗೆ…ಆದರೆ ಅಂಥ ಎಚ್ಚರಿಕೆಗಳು, ‘caveat emptor’ ಗಳು  ಪ್ರಕಟವಾದ ಕಾಗದಗಳ ಜೊತೆ ರದ್ದಿ ಸೇರಿದವೆ ವಿನಃ ಯಾವುದೇ ಕೇಡುಗಾಲ ಬಂದೆರಗಲಿಲ್ಲ.   

ಈ ಲೇಖನದ ಕರ್ತೃವಿನ ಸಂದೇಶ

ಕಂದಾ ಸುಸ್ವಾಗತ, ನಮ್ಮ ಭವ್ಯ ಧರೆಗೆ. ಶತಮಾನಗಳಿಂದ ಪೂರ್ವದಿಂದ ಹುಟ್ಟುತ್ತಿರುವ ಸೂರ್ಯ ಮತ್ತು ಪಶ್ಚಿಮದಲ್ಲಿ ಮುಳುಗುವ ಸೂರ್ಯನ ನಡಿಗೆಯ ನಿಯಮವನ್ನು ನಾವು ಬದಲಿಸಲಿಲ್ಲ. ಉಸಿರಾಡುವ ಗಾಳಿ ಎಂದಿನ ಹಾಗೇ ಈಗಲೂ ತೆರಿಗೆಯಿಂದ ಮುಕ್ತ. ಹೌದು ನಿನ್ನಿಂದ ಎರವಲು ಪಡೆದಿದ್ದ ಭೂಮಿಯ ಮೇಲೆ ನಮ್ಮ ಅಹಂ ಮತ್ತು ಸ್ವಾರ್ಥದ ಕಾರಣ ಸಾಕಷ್ಟು ಅನಾಚಾರ ಎಸಗಿದ್ದೇವೆ. ನಮ್ಮ ಮಣ್ಣನ್ನು ಮೊನ್ಸಾಂಟೊ ಕಂಪೆನಿಗೆ ಗುತ್ತಿಗೆ ಕೊಟ್ಟು ಉಸಿರುಗಟ್ಟಿಸಿದ್ದೇವೆ. ಕಾಯಿ ಹಣ್ಣಾಗಲು ನಿಸರ್ಗ ನಿಯಮ ತೆಗೆದುಕೂಳ್ಳುವ ಸಮಯಕ್ಕೆ ಕಾಯುವ ವ್ಯವಧಾನ ನಮ್ಮಲ್ಲಿಲ್ಲ, ಅದಕ್ಕೆ. ಆದರೂ, ಇವೆಲ್ಲದರ ನಡುವೆಯೂ, ಕೆಲವೊಂದು ಒಳ್ಳೆಯ ಅವಿಷ್ಕಾರಗಳನ್ನೂ ನಿನಗಾಗಿ ತಯಾರಿಸಿ ಇಟ್ಟಿದ್ದೇವೆ. ನೀನು ಜನರೊಂದಿಗೆ ಬೇರೆಯದೇ, ಯಾವುದೇ ಸಭೆ ಸಮಾರಂಭ ಗಳಿಗೂ ಹೋಗುವ ತಾಪತ್ರಯವಿಲ್ಲದೆ ಮನೆಯಲ್ಲೇ ಕೂತು ಜೇಡನ ಬಲೆಯೊಳಕ್ಕೆ ಅವಿತುಕೊಂಡು ಮೊಬೈಲ್, ಫೇಸ್ ಬುಕ್, ಟ್ವಿಟ್ಟರ್, ಎಸ್ಸೆಮ್ಮೆಸ್, ಐ-ಪ್ಯಾಡ್, ಐ-ಪಾಡ್, ಇ-ಮೇಲ್ ಮುಂತಾದ ಸಾಮಾಜಿಕ ತಾಣ, ಅನುಕೂಲಗಳ ಮೂಲಕ ಜನರೊಂದಿಗೆ ನೇರವಾಗಿ ಬೆರೆಯದೆ ವ್ಯವಹರಿಸಲು ಅನುಕೂಲ ಮಾಡಿದ್ದೇವೆ. ಜನರೊಂದಿಗೆ ಬೆರೆತಾಗ ತಾನೇ ತಾಪತ್ರಯ? ಇಂಥ ಸುಂದರ ಪ್ರಪಂಚಕ್ಕೆ ನಿನಗಿದೋ ನನ್ನ ಸ್ವಾಗತ. ನೆನಪಿರಲಿ, ವಿಶ್ವ ಸಮಾನ ಅವಕಾಶ ನೀಡುವ fair ground ಅಂತೂ ಅಲ್ಲ, ಇದು ದಗಲಬಾಜಿಗಳ, ಸುಳ್ಳರ, ಕಪಟ ಜನರ, ಪ್ರತೀ ಕಾರ್ಯಕ್ಕೂ ಕಮಿಷನ್ ವಾಸನೆಯ ಬೆನ್ನು ಹತ್ತಿ ಹೋಗುವ ಅತಿ ದೊಡ್ಡ fair (ಜಾತ್ರೆ). ಲಂಚಗುಳಿತನದ ಒಂದು ಸುಂದರ eco system ಅನ್ನು  ಹುಟ್ಟುಹಾಕಿದ್ದೇವೆ.  ಲಕ್ಷಾಂತರ ವರ್ಷಗಳ ಕಾಲ ನಿರಂತರ ಪ್ರಯಾಣ ಮಾಡಿದ ವೀರ್ಯದ ಫಲ ನೀನಾಗಿರೋದರಿಂದ ಈ ಪ್ರಪಂಚದಲ್ಲಿ ಬಾಳಿಬದುಕಲು ನಿನಗೆ ಕಷ್ಟವೇನೂ ಆಗಲಿಕ್ಕಿಲ್ಲ, you will effortlessly adapt.     

ಬೀಳ್ಕೊಡುವ ಮೊದಲು ಒಂದು ಮಾತು ನೆನಪಿರಲಿ…..ಯಾರು ತಾವು ಕಾಣುವ ಸುಂದರ ಕನಸನ್ನು ನಂಬುವರೋ ಅವರಿಗೆ ಮಾತ್ರ ಭವಿಷ್ಯ ಸೇರಿದ್ದು; “ಸ್ವರ್ಗ ಕಲ್ಪಿಸಿಕೊಳ್ಳದಿರು” ಎಂದು ಹೇಳುವ ಮತಿಹೀನರಿಗಂತೂ ಖಂಡಿತಾ ಅಲ್ಲ. ಧುಮುಕು ಧರೆಗೆ ಧೈರ್ಯವಾಗಿ.   

 ಚಿತ್ರ ಸೌಜನ್ಯ: ಇಂಗ್ಲೆಂಡಿನ “ಗಾರ್ಡಿಯನ್” ದಿನಪತ್ರಿಕೆ.

‘ಆಪಲ್’ ನ ಸೇಬು ಕಳಾಹೀನ

ಆಪಲ್ ಖ್ಯಾತಿಯ ಸ್ಟೀವ್ ಜಾಬ್ಸ್ ಇನ್ನಿಲ್ಲ. ಆಪಲ್ ಮ್ಯಾಕಿಂತೋಷ್ ಕಂಪೆನಿಯ ಮೂವರು ಮಾಲಿಕರಲ್ಲಿ ಸ್ಟೀವ್ ಒಬ್ಬ. ಆದರೆ ಮೂವರಲ್ಲಿ ಈತನ ಹೆಸರು ಮಾತ್ರ ಹೆಚ್ಚು ಜನಜನಿತ. ಕಪ್ಪು ಬಣ್ಣದ ‘ಟರ್ಟಲ್ ನೆಕ್’ ಟೀ ಶರ್ಟ್, ತಿಳಿ ನೀಲಿ ಜೀನ್ಸ್ ಪ್ಯಾಂಟು ಧರಿಸಿ ಮಂದಹಾಸದೊಂದಿಗೆ ಆಗಾಗ ಹೊಸ ಹೊಸ ಯಂತ್ರಗಳನ್ನು ಖುದ್ದಾಗಿ ವಿಶ್ವಕ್ಕೆ ಪರಿಚಯಿಸುತ್ತಿದ್ದ ಈ ಕನ್ನಡಕಧಾರಿ ಮಾಂತ್ರಿಕ ಗಣಕಯಂತ್ರವನ್ನು “ಸ್ಟುಪಿಡ್ ಬಾಕ್ಸ್” ಎನ್ನುವ ಹಣೆಪಟ್ಟಿಯಿಂದ ಹೊರತಂದು ಹೊಸ ರೂಪ, ಕಾರ್ಯಕ್ಷಮತೆ ಕೊಡುವ ಮೂಲಕ ಜನ ಆತುರ ಕಾತುರದಿಂದ ಕೊಳ್ಳಲು ಪ್ರೇರೇಪಿಸುವಂತೆ ಮಾಡಿದ. ತಾನು ಉದ್ಯಮಿ, ಸಂಶೋಧಕ ಮಾತವಲ್ಲ, ಕಲಾಕಾರ ಕೂಡಾ ಎಂದು ಜನರಿಗೆ ತೋರಿಸಿದ ವೈಶಿಷ್ಟ್ಯ ತುಂಬಿದ ಮೆಶೀನುಗಳ ನ್ನು ತಯಾರಿಸುವುದರ ಮೂಲಕ.

ಅಮೆರಿಕೆಯ “ಎನ್ರಾನ್” ತೈಲ ಕಂಪೆನಿ ಬಿಟ್ಟರೆ ಜಾಬ್ಸ್ ಶುರು ಮಾಡಿದ mac ಅಮೆರಿಕೆಯಲ್ಲಿ most valued company ಯಾಗಿ ಮೂಡಿ ಬಂತು. ತನ್ನ ಮಲ ಪೋಷಕರ ಮನೆಯ garage ನಿಂದ ಆರಂಭ ಗೊಂಡ mac ಉದ್ದಿಮೆ ಶೇರು ಹೂಡಿಕೆದಾರರ ಕಣ್ಮಣಿಯಾಗಿ ಹೊಮ್ಮಿತು. ಸೇಬಿನ ಹಣ್ಣಿನ trade mark ಹೊಂದಿದ್ದ ಈ mac ಕಂಪೆನಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. ಸಾವಿರ ಹಾಡುಗಳನ್ನು ಜೇಬಿನಲ್ಲಿರಿಸ ಬಹುದಾದ i pod ಅನ್ನು ಜಗತ್ತಿಗೆ ಪರಿಚಯಿಸಿದ ಈ ಸಂಸ್ಥೆ ಸಂಗೀತ ಉದ್ದಿಮೆ ನೆಲಕಚ್ಚಲು ಕಾರಣವಾಯಿತು ಎನ್ನುವ ದೂರು ಕೂಡಾ ಇದೆ. ಮ್ಯಾಕ್ ಪ್ರೊ, ಮ್ಯಾಕ್ ಏರ್ ಗಳಂಥ ಕಂಪ್ಯೂಟರ್ಗಳ ಉತ್ಪಾದನೆ ಮೂಲಕ ಅಮೇರಿಕಾ ಮತ್ತು ಅಇರೋಪ್ಯ ದೇಶಗಳಲ್ಲಿ ಪ್ರಸಿದ್ದಿ ಗಳಿಸಿದ್ದ ಆಪಲ್ ಕಂಪೆನಿ ಏಷ್ಯಾದಲ್ಲಿ ಹೆಚ್ಚು ಗಮನಕ್ಕೆ ಬಂದಿದ್ದು i phone, i phone ಗಳ ಜನಪ್ರಿಯತೆಯಿಂದ.

ಅಮೆರಿಕೆಯವರಿಗೆ ಬಹು ಪ್ರಿಯವಾದ ಕಾರು ಉದ್ಯಮಿ ‘ಫೋರ್ಡ್’ ಮತ್ತು ‘ಕ್ರೈಸ್ಲರ್’ ನಂಥ ಬಹು ಕೋಟಿ ಡಾಲರ್ ನಿಗಮಗಳ ಸಾಲಿನಲ್ಲಿ mac ನಿಲ್ಲಲು ಹೆಚ್ಚು ಸಮಯ ತೆಗೆದು ಕೊಳಲಿಲ್ಲ. ಗಣಕ ಯಂತ್ರದ ಉದ್ಯಮದಲ್ಲಿ ಮೈಕ್ರೋಸಾಫ್ಟ್ ಕಂಪೆನಿಯ ಮುಂದೆ ಆಪಲ್ ನ ಪಾಲು ಕಡಿಮೆಯದಾದರೂ ಜನಪ್ರಿಯತೆ ಮತ್ತು ಪ್ರತಿಷ್ಠೆ ಯಲ್ಲಿ ಮಾತ್ರ ಬಹು ಮುಂದು. ಮ್ಯಾಕಿಂತೋಷ್ ಗಣಕಯಂತ್ರವನ್ನು ಕೊಳ್ಳುವುದೂ, ಉಪಯೋಗಿಸುವುದೂ ಒಂದು fashion statement. ಬೇರೆ ಕಂಪ್ಯೂಟರ್ ಗಳಿಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಬೆಲೆಯಿದ್ದರೂ ಜನ ಕೊಳ್ಳುವುದನ್ನು ಬಿಡಲಿಲ್ಲ, ಆಕರ್ಷಣೆಯೂ ತಗ್ಗಲಿಲ್ಲ. mac ಅನ್ನು ಕೊಂಡವರು ಅದರ ಖಾಯಂ ಗಿರಾಕಿಯಾಗುವುದು ಮಾತ್ರವಲ್ಲದೆ brand ambassador ಸಹ ಆಗುತ್ತಾರಂತೆ. mac ಮೇಲಿನ ಸೆಳೆತ ಮೋಹ ಅಂಥದ್ದು. ಜನರ ಈ ಸೆಳೆತ ಮತ್ತು ಮೋಹಕ್ಕೆ ಸರಿಯಾದ ನ್ಯಾಯವನ್ನೇ ಒದಗಿಸುತ್ತಿತ್ತು ಈ ಯಂತ್ರ ತನ್ನ ಕಾರ್ಯಕ್ಷಮತೆಯಲ್ಲಿ. ಅಮೆರಿಕೆಯ ಹೆಮ್ಮೆಯ ಅಚ್ಚುಮೆಚ್ಚಿನ ನಿಗಮವಾಗಿ mac ರಾರಾಜಿಸಿತು.    

ಸ್ಟೀವ್ ಜಾಬ್ಸ್ ಎಂದರೆ ಆಪಲ್, ಆಪಲ್ ಎಂದರೆ ಸ್ಟೀವ್ ಜಾಬ್ಸ್. ಮನುಷ್ಯ ಮತ್ತು ಯಂತ್ರದ ನಡುವಿನ ಎಂಥ ಮಧುರ, ಮುರಿಯಲಾಗದ ಸಂಬಂಧ. ಬಹುಶಃ ಪ್ರಪಂಚದ ಯಾವುದೇ ಉತ್ಪನ್ನವೂ ತನ್ನ ಒಡೆಯನೊಂದಿಗೆ ಇಷ್ಟು ಸೊಗಸಾಗಿ ಗುರುತಿಸಿ ಕೊಂಡಿರಲಿಕ್ಕಿಲ್ಲ. ನಾನು ನೀವು ಎಷ್ಟೊಂದು ಉಪಕರಣ ಗಳನ್ನು ಬಳಸುತ್ತೇವೆ, ಆದರೆ ಅವುಗಳ ಒಡೆಯರ ಹೆಸರನ್ನು ಗಮನಿಸಿದ್ದೇವೆಯೇ, ನೆನಪಿಟ್ಟುಕೊಂಡಿದ್ದೇವೆಯೇ? ತನ್ನನ್ನು ಎದುರು ಗೊಳ್ಳುವ ಸಾವಿನ ಬಗ್ಗೆ ಐದು ವರ್ಷಗಳ ಹಿಂದೆಯೇ ತಿಳಿದಿದ್ದ ಸ್ಟೀವ್ ವೇದಾಂತಿಯಂತೆ ಹೇಳಿದ್ದು “Remembering that you are going to die is the best way I know to avoid the trap of thinking you have something to lose”. ಬದುಕಿನ ಸವಾಲನ್ನು ಸಾಹಸದಿಂದ ಎದುರಿಸಿದ ಸ್ಟೀವ್ ಸಾವಿನೊಂದಿಗೂ ಅದೇ ನಿಲುವನ್ನು ಪ್ರದರ್ಶಿಸಿದ. ತನ್ನ ಜೀವಿತದ ಕೊನೇ ವರ್ಷವನ್ನು ಕೊರಿಯಾದ ಎಲೆಕ್ಟ್ರಾನಿಕ್ ದೈತ್ಯ ಸ್ಯಾಮ್ಸಂಗ್ ಯೊಂದಿಗೆ ರಚನಾ patent ವಿಷಯದಲ್ಲಿ ತಗಾದೆಯಲ್ಲಿ ಕಳೆದ ಸ್ಟೀವ್ ಜಾಬ್ಸ್ ಜನರ ನೆನಪಿನಿಂದ ಮಾಸಲಾರದ ಹೆಸರು ಎಂದರೂ ತಪ್ಪಾಗಲಾರದು. ಯಕೃತ್ತಿನ ಕ್ಯಾನ್ಸರ್ ರೋಗಕ್ಕೆ ತುತ್ತಾದ ಸ್ಟೀವ್ ತಾನು ಕೊನೆಯುಸಿರೆಳೆಯುವಾಗ ವಯಸ್ಸು ಕೇವಲ ಐವತ್ತಾರು.   

ಸ್ಟೀವ್ ಜಾಬ್ಸ್ ನಿಧನದ ಸುದ್ದಿ ಕೇಳುತ್ತಲೇ ಕಂಪ್ಯೂಟರ್ ಬಳಕೆದಾರರು ದುಃಖಭರಿತರಾಗಿ ಶೋಕ ವ್ಯಕ್ತ ಪಡಿಸಲು ಸಾಮಾಜಿಕ ತಾಣಗಳನ್ನು ಬಳಸಿಕೊಂಡರು. ಟ್ವಿಟ್ಟರ್ ನಲ್ಲಿ ಸಂದೇಶಗಳ ಮಹಾಪೂರ. ಅಂಥ ಒಂದು ಸಂದೇಶದಲ್ಲಿ ಈ ಅನಿಸಿಕೆ ಕಾಣಲು ಸಿಕ್ಕಿತು.
ಪ್ರಪಂಚದಲ್ಲಿ ಮೂರು ಸೇಬಿನ ಹಣ್ಣುಗಳು ಚರಿತ್ರೆ ಬದಲಿಸಿದುವಂತೆ. ಈಡನ್ ಉದ್ಯಾವನದಲ್ಲಿ ಈ ಸೇಬಿನ ಹಣ್ಣನ್ನು ತಿನ್ನಬಾರದು ಎಂದು ತಾಕೀತು ಮಾಡಿದ ದೇವರ ಆಜ್ಞೆಯನ್ನು ಉಲ್ಲಂಘಿಸಿ ಪ್ರಥಮ ವನಿತೆ “ಈವ್” ತಾನು ತಿಂದಿದ್ದು ಮಾತ್ರವಲ್ಲದೆ ಪ್ರಥಮ ಮಾನವ “ಆಡಂ” ಸಹ ತಿನ್ನುವಂತೆ ಮಾಡಿ ಸ್ವರ್ಗ ಲೋಕದಿಂದ ಹೊರಗಟ್ಟಲ್ಪಟ್ಟರು…

ಮಧ್ಯಾಹ್ನದ ಊಟದ ನಂತರ ಹಾಯಾಗಿ ಸೇಬಿನ ಮರದ ಕೆಳಗೆ ಬಿದ್ದು ಕೊಂಡಿದ್ದ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ತಲೆಯ ಮೇಲೆ ಸೇಬಿನ ಹಣ್ಣೊಂದು  ಬಿದ್ದು ಗುರುತ್ವಾಕರ್ಷಣೆಯ ನಿಯಮವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸಹಕಾರಿಯಾಯಿತು…   

ಅಂತಿಮವಾಗಿ, ಆರೋಗ್ಯವರ್ಧಕ ಹಣ್ಣಾಗಿ ಮತ್ತು ಸುಂದರ ಹೆಣ್ಣಿನ ಗಲ್ಲದೊಂದಿಗೆ ಮಾತ್ರ ಗುರುತಿಸಿಕೊಂಡಿದ್ದ ಈ humble “ಸೇಬು” ಕ್ಯಾಲಿಫೋರ್ನಿಯಾದ “ಕ್ಯುಪರ್ಟೀನೋ” ನಗರದ ತಂತ್ರಜ್ಞಾನ ಕಂಪೆನಿಯೊಂದರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿತು…

ಸ್ಟೀವ್ ಜಾಬ್ ನಿಧನದೊಂದಿಗೆ apple ನ ಸೇಬು ಕಳಾಹೀನವಾಯಿತು.                   

ಸ್ಟೀವ್ ಜಾಬ್ಸ್, ‘ಆಪಲ್’ ನಿಗಮದ ಒಡೆಯ. ಜನನ: ೧೨.೨.೧೯೫೫, ನಿಧನ: ೦೬.೯.೨೦೧೧ 

ಚಿತ್ರ ಕೃಪೆ: “ಸ್ಟೆಫನೀ” ಯವರ ಟ್ವಿಟರ್ ಖಾತೆಯಿಂದ.

ಗರ್ಭ ಧರಿಸಬೇಕೇ? ಚೆನ್ನಾಗಿ ಹಲ್ಲುಜ್ಜಿ

ಗರ್ಭ ಧರಿಸಬೇಕೇ? ಚೆನ್ನಾಗಿ ಹಲ್ಲುಜ್ಜಿ ಪಾಶ್ಚಾತ್ಯರಲ್ಲದ ಸಂಸ್ಕೃತಿಯ ವಿವಾಹಿತ ಮಹಿಳೆಯರೆಲ್ಲರ ಬಯಕೆ ಏನೆಂದರೆ ಒಂದು ಸುಂದರ ತಮ್ಮಂತೆ ಅಥವಾ ತಮ್ಮ ಗಂಡಂದಿರನ್ನು ಹೋಲುವ ಒಂದು ಮಗುವಿಗೆ ಜನ್ಮ ಕೊಡುವುದು. ಮದುವೆಯಾಗಿ ಒಂದು ವರ್ಷದ ಒಳಗೆ ಮಗು ಆಗದಿದ್ದರೆ ಗಾಭರಿ ಆತಂಕ ಶುರುವಾಗುತ್ತೆ. ಎರಡು ವರ್ಷಗಳ ಮೇಲೂ ಮಗುವಾಗದಿದ್ದರೆ ಗುಸು ಗುಸು ಶುರು. ಗಂಡ ಹೆಂಡಿರಿಗಿಂತಲೂ, ಅವರಿಬ್ಬರ ಮನೆಯವರಿಗಿಂತಲೂ ಹೆಚ್ಚಿನ ಚಿಂತೆ ನೆರೆಹೊರೆಯವರಿಗೆ, ಹೊಟ್ಟೆ ಉಬ್ಬದಾದಾಗ. ವ್ರತ, ಹರಕೆ, ಸ್ವಾಮಿಗಳ ಭಸ್ಮ ಅದೂ ಇದೂ ಎಂದು ಓಡಾಟ. ಪರಿಚಯದ ದಂಪತಿಗಳು ‘ಆಸನ’ ಬದಲಿಸಲೂ ಸಲಹೆ ನೀಡುತ್ತಾರೆ. ಒಟ್ಟಿನಲ್ಲಿ ಒಂದು ರೀತಿಯ emergency situation ನಿರ್ಮಾಣ ಆಗುತ್ತೆ. ಆದರೆ ಇಷ್ಟೆಲ್ಲಾ ಸರ್ಕಸ್ ಏಕೆ? ಇರುವ, time tested ಆಸನವೇ ಫೈನ್, ಜಸ್ಟ್ ಬ್ರಶ್ ಎವ್ವೆರಿ ಡೇ.. ಹಾಂ? ಬ್ರಶ್? ಚೆನ್ನಾಗಿ ಹಲ್ಲುಜ್ಜಿದರೆ ಮಗು ಆಗುತ್ತಾ?

 ಹೌದು ಎನ್ನುತ್ತಾರೆ ಆಸ್ಟ್ರೇಲಿಯಾದ ಸಂಶೋಧಕರು. ಹಾಗೇ ಸುಮ್ಮನೆ ಈ ನಿರ್ಣಯಕ್ಕೆ ಬರಲಿಲ್ಲ ಈ ಮಹಾಶಯರುಗಳು. ೩೭೩೭ ಗರ್ಭಿಣಿ ಮಹಿಳೆಯರ ಮೇಲೆ ಅಧ್ಯಯನ ನಡೆಸಿ ಕಂಡು ಕೊಂಡ ಸತ್ಯ. ಬಾಯೋ ಶುಚಿತ್ವ ಇಲ್ಲದ, ಒಸಡಿನ ರೋಗ ಇರುವ, ಸರಿಯಾಗಿ ಹಲ್ಲುಜ್ಜದ ಮಹಿಳೆಯರು ಗರ್ಭ ಧರಿಸುವುದು ಕಷ್ಟ ಅಥವಾ ನಿಧಾನ ಎನ್ನುತ್ತಾರೆ ಈ ಸಂಶೋಧಕರು.

ಈಗ ಪಕ್ಕದ ಮನೆಯ ಪ್ರೀತಿ ಅಥವಾ ಪಿಂಕಿ ಒಂದೆರಡು ವರ್ಷಗಳಾದರೂ ನನಗೆ ಮಗು ಆಯಿತು ಎಂದು ಸಿಹಿ ತೆಗೆದು ಕೊಂಡು ಬರದೆ ಹೋದಾಗ ‘ಆಸನ’ ಬದಲಿಸು ಎಂದು ಕಸಿವಿಸಿ ಮಾಡೋ ಬದಲು, ಹೋಗಮ್ಮಾ ಸರಿಯಾಗಿ ಹಲ್ಲುಜ್ಜ ಬಾರದಾ ಎಂದು ಗದರಿಸಿ ಬಾತ್ ರೂಂ ಗೆ ಅಟ್ಟಿ.

ಎಲ್ಲದಕ್ಕೂ ಧೋನಿಯೇ ಕಾರಣ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟಿನಲ್ಲಿ ಭಾರತ ಮತ್ತೊಮ್ಮೆ ಸೋತಿತು. ಮೊದಲ ಟೆಸ್ಟಿನ ಪಂಗ ನಾಮದ ನಂತರ ಒಂದು ಒಳ್ಳೆಯ ಪ್ರದರ್ಶನ ನೀಡಿ ತಿರುಗೇಟು ನೀಡಬಹುದು ಎಂದು ಕಾತುರದಿಂದ ನಿರೀಕ್ಷಿಸಿದ್ದ ನಮಗೆ ದಕ್ಕಿದ್ದು ಮತ್ತೊಂದು ಲಾತಾ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಪಂದ್ಯದ ಉಳಿದೆಲ್ಲಾ ಸೆಷನ್ಸ್ ಗಳಲ್ಲೂ ಮಿಂಚಿದ್ದು ಬಿಳಿಯರೇ. ಇಂಗ್ಲೆಂಡ್ ತಂಡ ಒಂದು ಪರಿಪೂರ್ಣ ತಂಡವಾಗಿ, ಪರಿಪಕ್ವತೆ ಯಿಂದ ಕ್ರಿಕೆಟ್ ಆಡುತ್ತಿದೆ ಎಂದರೆ ಯಾರೂ ಅಲ್ಲಗಳೆಯಲಾರರು. ಸರಿ ಸೋತಿದ್ದು ಒಂದು ಒಳ್ಳೆಯ ತಂಡದೆದುರು. ಅದರಲ್ಲೇನು ಅವಮಾನ? ಮುಜುಗುರ? ಹಾಗಂತ ನಾನೂ, ನೀವೂ ಹೇಳಬಹುದು,TRP ಸಲುವಾಗೇ ಬದುಕುವ, TRP ಏರಲು ಯಾವ ಪಾತಾಳಕ್ಕೂ ಇಳಿಯಲು ಹೇಸದ ಮಾಧ್ಯಮಕ್ಕೆ ಆಟದ ಗಮ್ಮತ್ತು, ಅದರ ಕೌಶಲ್ಯ, ವೃತ್ತಿ ಪರಿಣತೆ ಎಲ್ಲಾ ಅರ್ಥವಾಗಲು ಸಾಧ್ಯವೇ? ಸೋತು ತಂಡ ಪೆವಿಲಿಯನ್ ಸೇರಿಕೊಳ್ಳುವ ಮುನ್ನವೇ ಶುರುವಾಯಿತು ಧೋನಿಯ ಮತ್ತು ತಂಡದ ಅಂತ್ಯ ಸಂಸ್ಕಾರ. ಸತ್ತ ಹೆಣದ ಮುಂದೆ ಲಬೋ ಲಬೋ ಎಂದು ಎದೆ ಬಡಿದು ಕೊಳ್ಳುವ ರೀತಿಯಲ್ಲಿ ಆಡಿದವು ಮಾಧ್ಯಮಗಳು. ಸ್ಟಾರ್ ಟೀವಿ ಕತೆ ಹೇಳಬೇಕಿಲ್ಲ. ‘ಧೋನಿ ಕಾರಣ ಈ ಸೋಲಿಗೆ’, ‘ಧೋನಿ ನಾಯಕತ್ವದಲ್ಲಿ ಸೋಲು’, ‘ಧೋನಿ ನಾಯಕತ್ವದಲ್ಲಿ ಮೊಟ್ಟ ಮೊದಲ, ಅತಿದೊಡ್ಡ ಸೋಲು’, ಧೋನಿ… ಧೋನಿ… ಧೋನಿ… ಎಂದು ಅರಚಲು ಶುರು ಮಾಡಿತು. ಯಾಕೆ ತಂಡದಲ್ಲಿ ಒಂದೇ ಧೋನಿಯೇ ಇರೋದು? ಇನ್ನೂ ದೊಡ್ಡ ದೊಡ್ಡ ‘ದೋಣಿ’ ಗಳಿದ್ದವಲ್ಲ? ಅವಕ್ಕೆಲ್ಲಾ ಏನಾಗಿ ಬಿಟ್ಟಿತು? ಹನ್ನೊಂದು ದೋಣಿ ಗಳಲ್ಲಿ ಒಂದು ಕೆಟ್ಟಿತು, ಬಾಕಿ ಹತ್ತು?

ಇಂಗ್ಲೆಂಡ್ ನ ಬೌಲಿಂಗ್ ಪ್ರಾವೀಣ್ಯತೆ ನೋಡಿದವರಿಗೆ ಅರ್ಥವಾಗುತ್ತೆ. ಬಾಕಿ ಉಳಿದ ಎರಡು ಟೆಸ್ಟ್ ಗಳಲ್ಲಿ ಸೋಲದೆ ಡ್ರಾ ಮಾಡಿ ಕೊಂಡು ಬಂದರೂ ಅದು ದೊಡ್ಡ ಸಾಹಸವೇ ನಮ್ಮ ಪಾಲಿಗೆ. ಅಷ್ಟು ಚೊಕ್ಕ ಬೌಲಿಂಗ್ ಪ್ರದರ್ಶನ. ಇಂಗ್ಲೆಂಡ್ ಎಸೆದ ಶಾರ್ಟ್ ಪಿಚ್ ಬಾಲ್ ಗಳನ್ನು ನಾವು ಆಡಿದ ರೀತಿ ನೋಡಿದವರಿಗೆ ತಿಳಿಯುತ್ತೆ ನಮ್ಮ ತಯಾರಿ ಬಗ್ಗೆ, ನಮ್ಮ ಟೆಕ್ನಿಕ್ ಬಗ್ಗೆ. ಎರಡನೇ ಇನ್ನಿಂಗ್ಸ್ ನಲ್ಲಿ ಶಾರ್ಟ್ ಪಿಚ್ ಬಾಲ್ ಒಂದನ್ನು ಆಡಲು ಹೋಗಿ ಎಲ್ಲಿಗೋ ಬ್ಯಾಟ್ ಬೀಸಿದ ಯುವರಾಜ್ ಸಿಂಗ್, ತಾನು ಹೊಡೆದ ಬಾಲ್ ಎಲ್ಲಿಗೋ ಹೋಗಿ ಫೀಲ್ಡರ್ ಕೈ ಸೇರಿದ್ದು ಬೆಪ್ಪನಂತೆ ನೋಡಿದ ದೃಶ್ಯ ಅವಿಸ್ಮರಣೀಯ. ಔಟ್ ಆಗಿ ಆತ ಕ್ರೀಸ್ ಬಿಟ್ಟು ಹೋಗುವಾಗ ಮಾಡಿದ ಮುಸುಡಿಯ ದೃಶ್ಯ (ತರಡು ಬೀಜ ಕಳಕೊಂಡಾಗ ಆಗುವ ರೀತಿ) ಬಹಳ ಕಾಲ ನಮ್ಮ ಮನದಲ್ಲಿ ನಿಲ್ಲುತ್ತದೆ.           

ವೆಸ್ಟ್ ಇಂಡೀಸ್ ಪದ್ಯವೊಂದರಲ್ಲಿ ಗೆದ್ದ ನಂತರ ಅಂಪೈರಿಂಗ್ ಚೆನ್ನಾಗಿದ್ದಿದ್ದರೆ ಇನ್ನೂ ಬೇಗೆ ಗೆದ್ದು ಪೆವಿಲಿಯನ್ ಗೆ ತೆರಳಿ ವಿಶ್ರಮಿಸಬಹುದಿತ್ತು ಎಂದು ಕೊರಗಿದ್ದ ಧೋನಿಗೆ ಎರಡನೇ ಟೆಸ್ಟನ್ನು ಕೇವಲ ಮೂರೂವರೆ ದಿನಗಳಲ್ಲಿ ಮುಗಿಸಿ ಸುದೀರ್ಘ ವಿಶ್ರಮ ಇಂಗ್ಲೆಂಡ್ ಕೊಟ್ಟಿದ್ದು ಈ ಪಂದ್ಯದ ವೈಶಿಷ್ಟ್ಯ. ಈ ವಿಶ್ರಮ ಧೋನಿ ಪಾಲಿಗೆ ಸ್ವಯಂ ನಿವೃತ್ತಿ ತೆರನಾದ ವಿಶ್ರಾಮವಾಗದಿರಲಿ ಎಂದು ಹಾರೈಸುತ್ತಾ..

ಇನ್ನೂರು ರೂಪಾಯಿಗೆ ಒಂದು ವರ್ಷ

ಇನ್ನೂರು ರೂಪಾಯಿ ಕದ್ದ ಆರೋಪಕ್ಕೆ ಹದಿ ಹರೆಯದ ಹುಡುಗನಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆ ಒಂದು ವರ್ಷದ ಕಾರಾಗೃಹ ವಾಸ. ಸಾವಿರಾರು ಕೋಟಿ ನುಂಗಿದ, ತೆರಿಗೆ ಪಾವತಿಸದೆ ಮೆರ್ಸಿ ಡೀಸ್, BMW ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುವ ಕಳ್ಳರಿಗೆ ಹೋದಲ್ಲೆಲ್ಲಾ ಮಣೆ, ಆದರ, ಅಭಿಮಾನ, ಸನ್ಮಾನ. ಭಾರತ ಕೇವಲ ಶ್ರೀಮಂತರ, ಲೂಟಿಕೋರರ, ಬಾಲಿವುಡ್, ಕ್ರಿಕೆಟ್ ತಾರೆಯರ, ಅಧಿಕಾರವಿರುವವರ ಉಲ್ಲಾಸಕ್ಕಾಗಿ ಇರುವ  ನಾಡೇ? ಹುಡುಗ ಜೈಲಿನಿಂದ ಹೊರ ಹೋಗುವಾಗ ಇಂಥಾ ಕೆಲಸ ಇನ್ನೊಮ್ಮೆ ಮಾಡಬೇಡ ಎಂದು ಪೋಲೀಸಪ್ಪನೊಬ್ಬ ಹೇಳುತ್ತಾನಂತೆ. ಈ ಮಾತನ್ನು ಕಿನ್ನಿಮೋಳಿಗೋ, ಕಲ್ಮಾಡಿಗೋ, ರಾಜಾಗೋ ಹೇಳಲು ಪೇದೆಯೊಬ್ಬನಿಂದ  ಸಾಧ್ಯವೇ?

ಸಮಾಜದ ಗಣ್ಯ ವ್ಯಕ್ತಿಗಳು ಮಾಡಿದ ಪಾಪಗಳು ಸೆಷನ್ಸ್ ಕೋರ್ಟು, ಹೈ ಕೋರ್ಟು, ಸುಪ್ರೀಂ ಕೋರ್ಟು, ಸುಳ್ಳು ಸುಳ್ಳೇ ಮಾತನಾಡುವ ಕರಿ ಕೋಟುಗಳನ್ನೆಲ್ಲಾ ಸುತ್ತಿ ಸುತ್ತಿ ಬಸವಳಿದು ಕೊನೆಗೆ ಮರೆಯಾಗಿ ಹೋಗುತ್ತವೆಯೇ ವಿನಃ ಮಹನೀಯರುಗಳು ಅನುಭವಿಸಿದ ಜೈಲು ಶಿಕ್ಷೆ ಬಗ್ಗೆ ಓದಿದ ನೆನಪಿದೆಯೇ?      

 

ಆರು ಸಾರ್ವತ್ರಿಕ ಸೂತ್ರಗಳು

ಮನುಷ್ಯನಾಗಲು ಬೇಕಾದ ಆರು ಸಾರ್ವತ್ರಿಕ ಸೂತ್ರಗಳು

೧. ನಿಮಗೊಂದು ಶರೀರವನ್ನು ಕೊಡಲಾಗುತ್ತದೆ.

೨. ನಿಮಗೆ ಪಾಠ ಗಳನ್ನು ಹೇಳಿ ಕೊಡಲಾಗುತ್ತದೆ.

೩. ಬದುಕಿನಲ್ಲಿ ತಪ್ಪುಗಳಿರುವುದಿಲ್ಲ, ಬರೀ ಪಾಠ ಗಳು ಮಾತ್ರ.

೪. ಪಾಠ ಕಲಿಯದಾದಾಗ ಅವು ಮರುಕಳಿಸುತ್ತವೆ.

೫. ಮರುಕಳಿಸಿದಷ್ಟೂ ಪಾಠ ಹೆಚ್ಚು ಕಠಿಣವಾಗುತ್ತದೆ.

೬. ನೀವು ಪಾಠ ಕಲಿತಿರಿ ಎಂದು ಅರಿವಾಗುವುದು ನಿಮ್ಮ ಗುರಿ ಬದಲಿಸಿದಾಗ.

ಹೇಗನ್ನಿಸಿದವು ಮೇಲಿನ ಸೂತ್ರಗಳು? ಸುಖೀ ಸಂಸಾರಕ್ಕೆ ಹತ್ತು ಸೂತ್ರಗಳು, ಸುಖೀ ದಾಂಪತ್ಯಕ್ಕೆ ವಾತ್ಸ್ಯಾಯನನ ೬೪ ಸೂತ್ರಗಳು,

ಮನುಷ್ಯನಾಗೋಕ್ಕೆ ಕೇವಲ ಆರೇ ಆರು ಸೂತ್ರಗಳು.

ಚಿತ್ರ ಕೃಪೆ: http://media.photobucket.com/image/life%20lessons/Obiwan456/cute-puppy-pictures-life-lessons.jpg?o=27

Ramadan

This picture is of an old man reciting Holy Qur’an in Srinagar, kashmir, India.

It is Ramadan now and during this month the Holy Qur’an was revealed to prophet Muhammad, peace be upon him. I am on my nephew’s computer which doesnt have kannada font. I will turn this text and add some more in kannada when I get on my laptop. Till then, enjoy this pic and ponder -))

pic courtesy: http://www.washingtonpost.com/blogs/blogpost/post/koran-recitation-being-done-on-twitter-for-ramadan-verse-by-verse/2011/08/02/gIQAVxBTpI_blog.html