ಬರಹವನ್ನು ನಿಲ್ಲಿಸಲು ಸಾಧ್ಯವೇ….?

ಬರೆಯದೇ ಬಹಳ ದಿನಗಳಾದವು. ತೀರಾ ಬರೆದೇ ಇಲ್ಲ ಎಂದಲ್ಲ, twitter ನಲ್ಲಿ ದಿನವೂ ಕುಟ್ಟುತ್ತಲೇ ಇರುತ್ತೇನೆ ಮರಕುಟುಕನ ಥರ. ಹೆಚ್ಚೂ ಕಡಿಮೆ ೧೪,೦೦೦ ಟ್ವೀಟುಗಳು ಮೊಳಗಿವೆ ಈವರೆಗೆ. ಸಾಕಲ್ವಾ? …. ಹೆ..ಹೇ ಎಲ್ಲಾದರೂ ಉಂಟೇ? man is a political animal ಎನ್ನೋ ಮಾತನ್ನ ಕೇಳಿಯೇ ಇರುತ್ತೀರಿ, ಅಲ್ವಾ? ನಾನಂತೂ ರಾಜಕಾರಣಕ್ಕೆ ತುಂಬಾ ಹಳಬ. ಪ್ರಾಚೀನ ಎನ್ನುವಷ್ಟು. ಕದ್ದು ಮುಚ್ಚಿ ಎಲ್ರೂ ಸಿನಿಮಾದ ಕಡೆ ದೌಡಾಯಿಸಿದರೆ, ನನ್ನ ದೌಡು ಕನಕ ಮಂಟಪದ ಕಡೆಗೆ.

ನನ್ನೂರು ಭದ್ರಾವತಿಯಲ್ಲಿ ಇರೋ ಈ ಕನಕ ಮಂಟಪಕ್ಕೆ ರಾಜಕೀಯ ನೇತಾರರು ಚುನಾವಣೆ ಸಮಯ ಭಾಷಣ ಮಾಡಲು ಬರುತ್ತಿದ್ದರು. ಅಲ್ಲಿಗೆ ಓಡುತ್ತಿದ್ದೆ ನಾನು. ಹೋಂ ವರ್ಕ್ ಮಾಡೋ ಬದಲು ಖಾದಿ ಸಂಭ್ರಮ ನೋಡೋ ಕೌತುಕ ನನಗೆ. ರಾಜಕಾರಣ ಬಿಟ್ಟರೆ, ಕ್ರಿಕೆಟ್ಟು, ಅದು ಬಿಟ್ಟರೆ ಸುರತಿ, ರತಿ ವಿಜ್ಞಾನ ದಂಥ ಪುಸ್ತಕಗಳ ಗೀಳು, ಇನ್ನೂ ಮುಂದುವರೆದು ಆಂಗ್ಲ ಭಾಷೆ , ಆ ಭಾಷೆಯ ಸೊಗಡು,ಅದರಲ್ಲಿನ ಕವಿತೆ, ಬರಹಗಳ ಮೋಡಿಗೆ ಮಾರು… ಹೀಗೆ ಸಾಗುವ ನನ್ನ ವಿದ್ವತ್ತು ಬರಹದಲ್ಲಿ ಬಂಧಿತವಾಗಲು ತವಕಿಸಿದಾಗ ಹಳೇ ಸೇತುವೆ (ನನ್ನ ಬ್ಲಾಗ್) ಯ ನಿರ್ಮಾಣ; ಸಿಮೆಂಟು ಕಬ್ಬಿಣ ಮರಳಿನ ಸಹವಾಸ ಇಲ್ಲದೆ. ಹೀಗಿರುವಾಗ, ಬರಹವನ್ನು ನಿಲ್ಲಿಸಲು ಸಾಧ್ಯವೇ? ಅದರಲ್ಲೂ ಅಷ್ಟೋ ಇಷ್ಟೋ ಬರೆದಿದ್ದನ್ನು ಓದಿ, ಮೆಚ್ಚಿ, ನನ್ನ ಯೋಗ್ಯತೆಗೂ ಮಿಕ್ಕು ಮುಕ್ತ ಕಂಠದಿಂದ ಕೊಂಡಾಡುವ ‘Kumar’ ರಂಥ ಸಹೃದಯಿಗಳು ಇರುವಾಗ ಬರೆಯೋಕೆ ಸ್ಫೂರ್ತಿ.

ನಾಳೆಯಿಂದ ಬರೀತೀನಿ…. ‘ನಾಳೆ ಬಾ’ ಎಂದು ಭೂತ ಪಿಶಾಚಿಗಳನ್ನು ಏಮಾರಿಸಲು ಮನೆ ಬಾಗಿಲ ಮೇಲೆ ಗೀಚಿದಂತಲ್ಲ…

ನಿಜ್ವಾಗ್ಲೂ !

3 thoughts on “ಬರಹವನ್ನು ನಿಲ್ಲಿಸಲು ಸಾಧ್ಯವೇ….?

  1. SSNK's avatar SSNK ಹೇಳುತ್ತಾರೆ:

    ನೀವು ಬರೆದು ಬಹಳ ದಿನಗಳಾಗಿದ್ದುವು. ನಿಮ್ಮ ಬ್ಲಾಗಿಗೆ ನಾನು subscribe ಆಗಿದ್ದೀನಿ.
    ನಿಮ್ಮ ಲೇಖನ ಬರುತ್ತಿಲ್ಲವಲ್ಲಾ ಅಂತ ಒಂದೆರಡು ಸಲ “ಹಳೇ ಸೇತುವೆ”ಗೆ ಬಂದು ಇಣಿಕಿ ಹಾಕಿದ್ದೆ – ಏನಾದರೂ, ನನಗೆ ನಿಮ್ಮ ಬರಹ ಬರುವುದು ತಪ್ಪಿ ಹೋಯಿತೇನೋ ಎಂದುಕೊಂಡು!
    ನಾನು ನನಗನ್ನಿಸಿದ್ದನ್ನು ನೇರವಾಗಿ ಹೇಳುವವನು. ನನ್ನ ಪ್ರತಿಕ್ರಿಯೆಗಳು ನಿಮಗೆ ಅಷ್ಟು ರುಚಿಸುವುದಿಲ್ಲ ಎನ್ನುವುದು ನನಗೆ ತಿಳಿದಿದೆ – ನಾನು ಭಯೋತ್ಪಾದನೆ (ಅದರಲ್ಲೂ ಇಸ್ಲಾಮೀ ಮತೀಯ ಮೂಲಭೂತವಾದ)ದ ವಿರುದ್ಧ ಬರೆಯುವವನು. ಕೆಲವರು ಅದನ್ನು ಮುಸಲ್ಮಾನರ ವಿರುದ್ಧ ಎಂದು ತಿಳಿದು ಬಿಡುತ್ತಾರೆ. ಇದು ಬರಹಕ್ಕಿರುವ ಒಂದು ಮಿತಿ. ನನಗನ್ನಿಸಿದ್ದನ್ನು ನಾನು ಹೇಳಬಹುದು – ಆದರೆ, ಓದುಗನು ಅದನ್ನು ಹೇಗೆ ಅರ್ಥೈಸಿಕೊಳ್ಳುತ್ತಾನೆ ಎನ್ನುವುದೇ ಮುಖ್ಯ. ಹೀಗಾಗಿ, ನನ್ನ ಕುರಿತಾಗಿ ತಪ್ಪು ಅರ್ಥ ಮಾಡಿಕೊಂಡಿದ್ದರೆ, ಅದು ನನ್ನ ಬರಹದ ಶೈಲಿಯ ನ್ಯೂನತೆ ಎಂದೇ ನಾನು ತಿಳಿಯುತ್ತೇನೆ.
    ಆದರೆ, ಒಂದು ಮಾತು ನಾನು ಸ್ಪಷ್ಟ ಪಡಿಸಲು ಇಷ್ಟ ಪಡುತ್ತೇನೆ – ನಾನು ಮುಸಲ್ಮಾನರ ಅಥವಾ ಇನ್ಯಾವುದೇ ಜನರ ವಿರೋಧಿಯಲ್ಲ. ಭಾರತದಲ್ಲಿ ಮೊಘಲರನ್ನೋ, ಟಿಪ್ಪುವನ್ನೋ ಬೈದರೆ ಮುಸಲ್ಮಾನರಿಗೆ ಕೋಪ ಬಂದುಬಿಡುತ್ತದೆ ಎಂದು ತಿಳಿಯುತ್ತಾರೆ. ಆದರೆ, ಅದು ಸರಿಯಲ್ಲ ಎಂದೇ ನನ್ನ ಭಾವನೆ. ಟಿಪ್ಪು ಮಾಡಿದ್ದು ತಪ್ಪಿದ್ದರೆ, ಅದನ್ನು ಇಂದಿನ ಮುಸಲ್ಮಾನರು ಸಮರ್ಥಿಸಿಕೊಳ್ಳುವ ಅಗತ್ಯವೇನು? ಅದೇ ರೀತಿ ಹಿಂದು ರಾಜರು ಮಾಡಿದ ತಪ್ಪನ್ನೆಲ್ಲಾ ಇಂದಿನ ಹಿಂದುಗಳು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ರಾವಣನು ಬ್ರಾಹ್ಮಣನಾಗಿದ್ದರಿಂದ ಆತನನ್ನು ಬ್ರಾಹ್ಮಣರೇನೂ ಪೂಜಿಸುವುದಿಲ್ಲವಲ್ಲ, ಹಾಗೆ.
    ನನ್ನ ಈ ರೀತಿಯ ಟೀಕೆಗಳು ನಿಮ್ಮನ್ನು ಕಾಡಿರಬೇಕೆನಿಸುತ್ತದೆ. ಹಾಗಾಗಿ ನಿಮ್ಮ ಮೇಲಿನ ಲೇಖನದಲ್ಲಿ ನನ್ನ ಹೆಸರನ್ನೇ ಎತ್ತಿ ತಿಳಿಸಿದ್ದೀರಿ. ನನ್ನನ್ನು ನೆನಪಿಸಿಕೊಂಡದ್ದಕ್ಕೆ ಧನ್ಯವಾದಗಳು.
    ಆಗಾಗ, “ಹಳೇ ಸೇತುವೆ”ಗೆ ಬಂದು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರಿ. ನಾನೂ ಸಹ ನನ್ನ ಅನಿಸಿಕೆಗಳನ್ನು ಮುಕ್ತವಾಗಿಯೇ ಹಂಚಿಕೊಳ್ಳುವೆ. 😉

    1. bhadravathi's avatar bhadravathi ಹೇಳುತ್ತಾರೆ:

      ಪ್ರತಿಕ್ರಿಯೆಗೆ ಧನ್ಯವಾದಗಳು. ಟೀಕೆಗಳೇ ಲೇಖಕನನ್ನು ರೂಪಿಸುತ್ತವೆ ಎಂದು ನನ್ನ ನಂಬುಗೆ.
      ತುಂಬಾ ದಿನಗಳಿಂದ ಬರೆಯದೆ ಇದ್ದುದರಿಂದ breaking ice ಆಗಿ ಈ ಲೇಖನ ಬರೆದೆ. ಮತ್ತೊಮ್ಮೆ ಧನ್ಯವಾದಗಳು. -)

ನಿಮ್ಮ ಟಿಪ್ಪಣಿ ಬರೆಯಿರಿ