ಮೂರು ತಿಂಗಳುಗಳ ಮೇಲೆ ಈ ಪೋಸ್ಟು. ಗುಡ್ಡ ಕಡಿಯುವಂಥ ಪೋಸ್ಟ್ ಏನೂ ಅಲ್ಲ, ತುಂಬಾ ದಿನಗಳಾದ್ದರಿಂದ ಮೈ ಮುರಿದು ಏಳುವ ರೀತಿಯ ಒಂದು ಪ್ರಯತ್ನ. ಬರಹವೇ ಆಗಲೇ. ಪಿಯಾನೋ ನುಡಿಸುವುದೇ ಆಗಲೇ, ಪ್ರಾವೀಣ್ಯತೆಗೆ ಬೇಕಿರುವುದು ನಿರಂತರ ಅಭ್ಯಾಸ. ಇಲ್ಲದಿದ್ದರೆ ನಾವು ಅಪ್ಯಾಯಮಾನತೆಯಿಂದ ತೊಡಗಿಸಿ ಕೊಂಡ ಪ್ರತಿಯೊಂದರಲ್ಲೂ ಅಭಾಸ ಗ್ಯಾರಂಟಿ. ಸುಮಾರು ನಾಲ್ಕು ವರ್ಷಗಳಿಂದ ಬರೆಯುತ್ತಿರುವ ನಾನು ಈಗಲೂ ಪದಗಳಿಗಾಗಿ, ವಿಷಯಗಳಿಗಾಗಿ ತಡಕಾಡುತ್ತಿದ್ದರೆ ಅದಕ್ಕೆ ಕಾರಣ ನಿತ್ಯ ಅಭ್ಯಾಸದ ಕೊರತೆ. ಸೋಮಾರಿತನ ಅದಕ್ಕಿಂತ ದೊಡ್ಡ ಶತ್ರು.
ಫೇಸ್ ಬುಕ್ಕಿನಲ್ಲಿ ಭದ್ರಾವತಿಯ ನನ್ನ ಮಿತ್ರರೊಬ್ಬರ ಮಗನೊಂದಿಗೆ ಲಘು ಹರಟೆ. ಧಂಧೆನೇ ಇಲ್ಲ ಅಂಕಲ್, ಉಕ್ಕಿನ ಕಾರ್ಖಾನೆ ಮಗುಚಿಕೊಂಡಿತು, ಕಾಗದ ಕಾರ್ಖಾನೆ ಗತಿಯೂ ಅದೇ ಎಂದು ಅಲವತ್ತುಕೊಂಡ. ಈ ಎರಡೂ ಕಾರ್ಖಾನೆಗಳು ಭದ್ರಾವತಿಯ ಜೀವಾಳ. ಇವು ಮುಚ್ಚಿ ಕೊಂಡರೆ ಭದ್ರಾವತಿಯ ಸೊಗಸು ಸೊರಗಿದಂತೆ. ಭದ್ರವಾತಿಯ ಕಾರ್ಖಾನೆಯ ದುಃಸ್ಥಿತಿ ಬಗ್ಗೆ ಒಮ್ಮೆ ಆಗಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಡೆ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸಿ ಈ ಕಾರ್ಖಾನೆಯ ಅವನತಿಗೆ ಕಾರಣರಾದ ತಿಮಿಂಗಿಲಗಳನ್ನ (ಅಧಿಕಾರಿಗಳನ್ನು) ಹಿಡಿದು ಹಾಕುತ್ತೇನೆ ಎಂದು ಅಬ್ಬರಿಸಿ ಅಬ್ಬರದ ಚಪ್ಪಾಳೆ ಜೊತೆಗೆ ವೋಟನ್ನೂ ಗಿಟ್ಟಿಸಿ ಕೊಂಡು ಹೋಗಿದ್ದರು. ರಾಜಕಾರಣಿಯ ಭಾಷಣ, ಅವನ ಅಬ್ಬರ ಎಲ್ಲವೂ ಕೆಲಸಕ್ಕೆ ಬಾರದವು.
ರಾಜಕಾರಣಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂದಿನಿಂದ ಭಾಷಣ ಮಾಡಿ ನಮ್ಮನ್ನು ಮತ್ತೊಂದು ತೆರನಾದ ಗುಲಾಮಗಿರಿಗೆ ತುತ್ತಾಗಿಸಿದನೇ ಹೊರತು ಬೇರೇನನ್ನೂ ಮಾಡಲಿಲ್ಲ. ಹೈ ಸ್ಕೂಲಿನ ಹಿಸ್ಟರಿ ಮೇಡಂ ಹೇಳಿದ ಹಾಗೆ ನಮ್ಮದು ಈಗಲೂ ‘ಬಡಾ’ ಮತ್ತು ಬಡ ಭಾರತವೇ ತಿಮಿಂಗಿಲ – ರಾಜಕಾ ರಣಿ nexus ಕಾರಣ. ಭದ್ರಾವತಿಗೆ ಒಳ್ಳೆಯ ದಿನಗಳು ಬರಬಹುದು ಎನ್ನುವ ಆಶಾಭಾವನೆ ನನ್ನದು.