ವಿದ್ಯೆಗಿಲ್ಲ ದಿಕ್ಕು ದಿಶೆ

ವಿದ್ಯೆ ಯಾವ ಕಡೆಯಿಂದ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ವಿದ್ಯಾರ್ಥಿಗಳಾಗಿದ್ದಾಗ  ಶಿಕ್ಷಕ, ಲೆಕ್ಚರರ್  ಪ್ರೊಫೆಸರ್ ಗಳಿಂದ ನಮಗೆ ಶಿಕ್ಷಣ ದೊರೆತರೆ ಬದುಕಿನ ಉದ್ದಕ್ಕೂ ಓರ್ವ ಯಾಚಕ ನಿಂದ ಹಿಡಿದು ಯಾರಿಂದಲೂ ನಮಗೆ ಕಲಿಯಲು ಸಿಗುತ್ತದೆ. ಜೆಡ್ಡಾ ದಲ್ಲಿ ಸಮುದ್ರ ತೀರದಲ್ಲಿ ಮಕ್ಕಳಿಗೆ  ಬೈಕ್ ಗಳ ಸೌಕರ್ಯವಿದೆ. ನಾಲ್ಕು ಗಾಲಿಗಳೂ ಚಲಾಯಿಸಲ್ಪಡುವ ಬೈಕ್ ಇದು. ಮರಳಿನಲ್ಲಿ ಹೂತು ಕೊಳ್ಳುವುದಿಲ್ಲ. ಆ ಬೈಕ್ ನೋಡಿದಾಗಲೆಲ್ಲಾ ನನ್ನ ೯ ವರ್ಷದ ಮಗನಿಗೆ ಅದನ್ನು ಸವಾರಿ ಮಾಡಲೇಬೇಕು. ಕ್ವಾಡ್ ಬೈಕ್ ಕ್ವಾಡ್ ಬೈಕ್ ಎಂದು ಓಡುತ್ತಾನೆ. ನನಗೆ ಈ ಪದದ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಬೈಕ್ ಏನೋ ಸರಿ, ಈ ‘ಕ್ವಾಡ್’ ಏನಪ್ಪಾ ಎಂದು. ಆದರೆ ಇದರ ಕುರಿತು ನನ್ನ ಮಗನಲ್ಲಿ ಎಂದೂ ಕೇಳಿರಲಿಲ್ಲ. ಎಲ್ಲೋ ಯಾರೋ ಹೇಳಿದ್ದನ್ನು ಕೇಳಿದ್ದಾನೆ, ಸರಿಯಾಗಿ ಉಚ್ಚರಿಸಲು ಬಾರದೆ ಕ್ವಾಡ್ ಎನ್ನುತ್ತ್ದ್ದಾನೋ, ಅದರ ಬಗ್ಗೆ ಅವನಿಗೆ ಗೊತ್ತಿದೆಯೋ ಇಲ್ಲವೋ ಎಂದು ನಾನು ಸುಮ್ಮನಿದ್ದೆ. ಮೊನ್ನೆಯ ಬಕ್ರೀದ್ ರಜೆಗೆ ಜೆಡ್ಡಾ ದಿಂದ ೧೨೦೦ ಕಿ, ಮೀ ದೂರವಿರುವ ರಿಯಾದ್ಹ್ ನಗರಕ್ಕೆ ಬಂದೆವು. ನಗರದಿಂದ ಸುಮಾರು ೮೦  ಕಿ ಮೀ ದೂರ ಇರುವ ತುಮಾಮಾ ಹೆಸರಿನ ಮರುಭೂಮಿ ಇದೆ. ಕೆಂಪಾದ, ನುಣ್ಣಗಿನ ಅಗಾಧ ಮರಳ ರಾಶಿ. ಕಣ್ಣು ಹಾಯಿಸಿದಷ್ಟೂ ಮರಳೋ  ಮರಳು. ಇಲ್ಲಿ four wheel drive ನ ಕಾರುಗಳು, ಬೈಕುಗಳು ಮಾತ್ರ ಚಲಿಸುತ್ತವೆ. ಅಲ್ಲೂ ಬಾಡಿಗೆಗೆ ಈ ಬೈಕ್ ಗಳು ಇದ್ದವು, ಸರಿ ಮಗ ನ ಒತ್ತಡಕ್ಕೆ ಮಣಿದು ಒಂದನ್ನು ಬಾಡಿಗೆಗೆ ಪಡೆದು ಕೆಮ್ಮರಳಿನಲ್ಲಿ ಚಲಾಯಿಸಿದ ದೆವು. ಮರಳಿನ ಗುಡ್ಡಗಳ ಮೇಲೆ ಸರಾಗವಾಗಿ ಓಡುವ ಬೈಕ್ ಚಲಾಯಿಸಲು ಖುಷಿಯಾಗುತ್ತದೆ. ಮನೆಗೆ ಮರಳಿ ಬಂದು ಯಾವುದೋ ವೆಬ್ ತಾಣ ತೆರೆದಾಗ ಕ್ವಾಡ್ ಬೈಕ್ ಪ್ರಸ್ತಾಪ ಎದುರಾಯಿತು. quad bike ನೋಡಿದ ಕೂಡಲೇ ಮಗನನ್ನು ಕರೆದು ‘ಕ್ವಾಡ್’ ನ ಸ್ಪೆಲ್ಲಿಂಗ್ ಏನು ಎಂದಾಗ q-u-a-d ಸರಿಯಾಗೇ ಉಚ್ಚರಿಸಿದ ಮಗರಾಯ. ಈಗ ನನಗೂ ಅರ್ಥವಾಯಿತು ಈ ಕ್ವಾಡ್ ಬಾಯಿ ಎಂದರೇನು ಎಂದು.

ನೋಡಿದಿರಾ ಶಿಕ್ಷಣ ಸಿಕ್ಕಿತಲ್ಲಾ ೯ ರ ಹರೆಯದ ಪೋರನಿಂದ.

“ತುಮಾಮಾ” ಬಗ್ಗೆ ಒಂದು ಮಾತು.

ಸಂಜೆ ನಾಲ್ಕೂವರೆ ಗೆ ತುಮಾಮಾ ತಲುಪಿದ್ದ ನಾವು ತಂದಿದ್ದ ಬುತ್ತಿಯನ್ನು ಮರಳು ಗಾಡಿನಲ್ಲಿ ಸುಮಾರು ೨೦೦ ಮೀಟರು ದೂರ ಹೋಗಿ ಎತ್ತರದ ಸ್ಯಾಂಡ್ ಡ್ಯೂನ್ಸ್ (ಮರಳ ರಾಶಿ) ನ ಮೇಲೆ ಕೂತು ಸುತ್ತಲಿನ ಪ್ರಕೃತಿ ವೀಕ್ಷಿಸುತ್ತಿದ್ದ್ದೆವು. ನಮ್ಮ ದೇಶದ ಥರ ಸುಂದರ ಗುಡ್ಡ ಗಾಡುಗಳೋ, ಗಿಡ ಮರಗಳೋ, ನದೀ ಹಳ್ಳ ಕೊಳ್ಳ ಗಳೋ ಕಾಣಲು ಸಿಗುವುದಿಲ್ಲ ಇಲ್ಲಿ. ಕಣ್ಣು ಹಾಯ್ಸಿದಷ್ಟೂ ಮರಳು. ಸುಮಾರು ನೂರು ಕಿ. ಮೀ. ವರೆಗೆ ದೃಷ್ಟಿ ನೆಡಬಹುದು. ಬಟಾಬಯಲು, ಮರಳು ತುಂಬಿದ ಬಯಲು. ಊಟ ಆದ ಕೂಡಲೇ ಸ್ವಲ್ಪ ಹೊತ್ತು ಹರಟುತ್ತಾ ಕೂರುತ್ತಿದ್ದಂತೆ ಆಗಸದಲ್ಲಿ ಮಿಂಚು ಕಾಣಿಸಿ ಕೊಳ್ಳಲು ತೊಡಗಿತು.  ಸ್ವಲ್ಪ ಗಾಭರಿಯಾದ ನಾನು ಮಳೆ ಗಿಳೆ ಬಂದೀತೆಂದು ಕೂಡಲೇ ಗಂಟು ಮೂಟೆ ಕಟ್ಟಿ ಎಲ್ಲರನ್ನೂ ಹೊರಡಿಸಿದೆ. ಮರಳಿನ ದಿನ್ನೆಯ ಮೇಲೆ ಇನ್ನೂ ಇಳಿದಿಲ್ಲ ದೂರದಲ್ಲಿ ಮರಳ ಬಿರುಗಾಳಿ ಆಗಮಿಸುವುದನ್ನು ಕಂಡ ಕೂಡಲೇ ನನ್ನ ಹೃದಯ ಬಾಯಿಗೆ ಬಂತು. ಪುಟಾಣಿ ಮಕ್ಕಳು, ನಾವು, ಮರಳು ಗಾಡಿನಲ್ಲಿ ಓಡಲು ಸಾಧ್ಯವೂ ಅಲ್ಲ. ನನ್ನ ಮಗಳನ್ನ ಎತ್ತಿಕೊಂಡು ಹೇಗಾದರೂ ಕಾರ್ ಪಾರ್ಕ್ ಕಡೆ ಹೋಗಿ ಮುಟ್ಟುವಾ ಎನ್ನುವಷ್ಟರಲ್ಲಿ ನಮ್ಮ ಕಡೆ ತಲುಪಿಯೇ ಬಿಟ್ಟಿತು ಬಿರುಗಾಳಿ. ಎಲ್ಲ ಕಡೆ ಕತ್ತಲು ಆವರಿಸಿಕೊಂಡಿತು. ಜನ ಚೆಲ್ಲಾ ಪಿಲ್ಲಿಯಾಗಿ ಓಡತೊಡಗಿದರು. ಮರಳಿನ ಆರ್ಭಟ ಜೋರಾಗುತ್ತಿತ್ತು. ಇಂಥ ಸ್ಯಾಂಡ್ storm ನಲ್ಲಿ ಸಿಕ್ಕು ಜನ ಸತ್ತ ಬಗ್ಗೆಯೂ ಸಾಕಷ್ಟು ಓದಿದ್ದೆ. ಈಗ ನನ್ನ ಸರತಿ ಬಂದು ಬಿಟ್ಟಿತೋ ಎನ್ನುವ ಅನುಮಾನ, ಭಯದಿಂದ, ನಾನು ಕಂಪಿಸುತ್ತಿದ್ದೆ. ಇಂಥ ಸನ್ನಿವೇಶದಲ್ಲಿ ಫೋರ್ ವೀಲ್ ಡ್ರೈವ್ ಮಾಡುತ್ತಿದ್ದವರಿಗೆ ತೊಂದರೆಯಿಲ್ಲ. ಮರಳಿನಲ್ಲಿ ಗಾಡಿ ಸಿಲುಕಿ ಕೊಳ್ಳುವುದಿಲ್ಲ. ಅಲ್ಲೇ ಹತ್ತಿರವಿದ್ದ ಬೆಂಗಳೂರಿನ ಶಿವಾಜಿ ನಗರದ ಕಡೆಯವರ ಫೋರ್ ವೀಲ್ ಗಾಡಿಯಲ್ಲಿ ರಸ್ತೆ ಬದಿಗೆ ಬಂದು ನನ್ನ ಕಾರನ್ನು ತಲುಪಿದಾಗ ಜೀವ ಮರಳಿ ಬಂತು. ಗಾಡಿಯಲ್ಲಿ ಎಲ್ಲರನ್ನೂ ತುಂಬಿಸಿ ಕೊಂಡು ಮುಂದೆ ಹೋಗುತ್ತಿದ್ದಂತೆ ನೂರಾರು ಕಾರುಗಳು ಬಂದ ದಾರಿಗೆ ಸುಂಕವಿಲ್ಲ ಎಂದು ರಸ್ತೆ ಆಕ್ರಮಿಸಿಕೊಂಡವು.

ಮರುಭೂಮಿಯ ಬಿರುಗಾಳಿ ಭಯಾನಕ ಎಂದು ಓದಿದ್ದೆ, ಕೇಳಿದ್ದೆ ಆದರೆ ಅನುಭವಿಸಿದ್ದು ಇದೇ ಮೊದಲು. ಕಾರು ಹೈ ವೇ ಗೆ ಬರುತ್ತಿದ್ದಂತೆ ಮಳೆ ಆರಂಭವಾಯಿತು. ಈ ಸ್ಯಾಂಡ್ ಸ್ಟಾರ್ಮ್ ಮತ್ತು ಬಿರುಗಾಳಿಯನ್ನು ಶಮನಗೊಳಿಸುವ ಮಳೆ ಎರಡೂ ಒಟ್ಟಿಗೆ ಬಂದಾಗ ವಾತಾವರಣ ಬದಲಾಗುತ್ತದೆ. ಸುಡುಬಿಸಿಲ ರಿಯಾದ್ಹ್ ಗೆ ಚಳಿಗಾಲದ ಪ್ರವೇಶ. ಈ ನಗರದ ಚಳಿ ಕೂಡಾ ಕುಖ್ಯಾತ. ಊಟಿ, ಕೆಮ್ಮಣ್ಣು ಗುಂಡಿಗಳು ಹಿಂದೆ ನಿಲ್ಲಬೇಕು, ಅಂಥಾ ಚಳಿ. ಒಟ್ಟಿನಲ್ಲಿ ಜೀವ ಅಡವಿಗೆ ಇಡಬೇಕಾಗಿ ಬಂದಿದ್ದ  ಒಂದು ಡೆಸರ್ಟ್ ಔಟಿಂಗ್ ಈ ರೀತಿ ಸುಖಾಂತವಾಗಿ ಮುಕ್ತಾಯವಾಯಿತು.

 

ಪ್ರಣಯಿಗಳ ಚಿತ್ರ. ಇದ್ಯಾವ ರೀತಿಯ ಪಿರೀತಿ ಕಾಣಮ್ಮೋ?

lonliest planet passionate couple ಇವರು. backpacking ಅಡ್ವೆಂಚರ್ ಬಗೆಗಿನ ಈ ‘lonliest planet ಚಿತ್ರದಲ್ಲಿ ನಿಗೂಢತೆ ಮನೆ ಮಾಡಿದೆಯಂತೆ. ರಷ್ಯಾದ ಕಾಕಸ್ ಬೆಟ್ಟಗಳ ಶ್ರೇಣಿಯ ತಪ್ಪಲಿನಲ್ಲಿ ನಡೆಸಿದ ಚಿತ್ರೀಕರಣ ಬದುಕಿನ ಡ್ರಾಮಾ ವನ್ನು ಸೊಗಸಾಗಿ ಪ್ರದರ್ಶಿಸುತ್ತದಂತೆ. ಈ ಚಿತ್ರದ ಬಗ್ಗೆ ಮತ್ತಷ್ಟು ಡೀಟೇಲ್ www.npr.org ವೆಬ್ ತಾಣದಲ್ಲಿ ಕಾಣಬಹುದು. ಹಾಗೆಯೇ ಈ ಮೇಲಿನ ಕುದುರೆ ತೆರನಾದ ಪಿರೀತಿಯ ಚಿತ್ರದ ಕ್ರೆಡಿಟ್ಸ್ ಸಹ ಮೇಲಿನ ತಾಣಕ್ಕೆ. ಈ ಪಿರೀತಿಯಲ್ಲಿ kinky ಸುಖ ಕಾಣೋದಾದರೆ why not give it a try?

ಮಾಧ್ಯಮಗಳು ನಂಬಲನರ್ಹ

ಚಾರ್ಲ್ಸ್ ಶೋಭರಾಜ್ ಅಂತಾರಾಷ್ಟ್ರೀಯ ಕುಖ್ಯಾತಿಯ ಕ್ರಿಮಿನಲ್. ಸರಣಿ ಕೊಲೆಗಾರ, serial killer. ಹಲವಾರು ಹೆಣ್ಣು ಮಕ್ಕಳನ್ನು ಕೊಲೆಗೈದಿದ್ದ ಈತನನ್ನು ಬಿಕಿನಿ ಕಿಲ್ಲರ್ ಎಂದೂ ಕರೆಯುತ್ತಾರೆ. ಈತ ಪೂಲೀಸರಿಗೆ ಲಂಚ್ ಕೊಟ್ಟೋ ಚಳ್ಳೆ ಹಣ್ಣು ತಿನ್ನಿಸಿಯೋ ತಪ್ಪಿಸಿಕೊಳ್ಳುತ್ತಿದ್ದ. ಒಮ್ಮೆ ಯಾರೋ ಒಬ್ಬ ಭಾರತೀಯ ಪೊಲೀಸರು ಇವನ ಹಿಂದೆ ಬಿದ್ದಿದ್ದಾರೆ ಎಂದು  ಪ್ರಸ್ತಾಪಿಸಿದಾಗ ಶೋಭ ರಾಜ್, ಓಹ್, ಭಾರತೀಯ ಪೊಲೀಸರು ೫ ರೂಪಾಯಿ ಪೊಲೀಸರು, ಐದು ರೂಪಾಯಿಯ ನೋಟನ್ನು ಕೊಟ್ಟರೆ ಬಿಟ್ಟು ಬಿಡುತ್ತಾರೆ ಎಂದು ಗಹ ಗಹಿಸಿ ನಕ್ಕಿದ್ದ. ಕೊನೆಗೆ ಇವನಿಗೆ ಮುಳುವಾಗಿದ್ದು ಒಬ್ಬ ಒಬ್ಬ ದಕ್ಷ ಭಾರತೀಯ ಪೊಲೀಸ್ ಅಧಿಕಾರಿ. ಚಾಣಕ್ಷ  ಪೊಲೀಸ್ ಅಧಿಕಾರಿ  “ಮಧುಕರ್ ಜೆನ್ಡೇ” ೧೯೯೬ ರಲ್ಲಿ ಅತ್ಯದ್ಭುತವಾದ ಕಾರ್ಯಾಚರಣೆ ಯೊಂದರಲ್ಲಿ ಚಾರ್ಲ್ಸ್ ನನ್ನು ಅರೆಸ್ಟ್ ಮಾಡಿದ್ದರು.

ಇವನ ದಸ್ತಗಿರಿಯೊಂದಿಗೆ ಭಾರತೀಯ ಪೊಲೀಸರು ಐದು ರೂಪಾಯಿ ಪೊಲೀಸರಲ್ಲ ಎಂದು ಸುಂದರವಾಗಿ ಸಾಬೀತಾಯಿತು. ಪೊಲೀಸ್ ಇಲಾಖೆಯ ವೃತ್ತಿಪರತೆ ವಿಜ್ರಂಭಿಸಿತು.

ವಿಜಯ್ ಮಲ್ಯ ರವರ ಕಿಂಗ್ ಫಿಶರ್ ಆರ್ಥಿಕ ಸಂಕಟ ದಲ್ಲಿರುವ ವೈಮಾನಿಕ  ಸಂಸ್ಥೆ. ಉತ್ತರ ಭಾರತದ ಮೋಸಗಾರ, ವಂಚಕ ಉದ್ಯಮಿಗಳಲ್ಲಿ ರಕ್ತಗತವಾಗಿರುವ ಕಪಟತನ, ಸರಕಾರೀ  ವ್ಯವಸ್ಥೆಯನ್ನ ಸಲೀಸಾಗಿ ಜೇಬಿಗಿಳಿಸಿ ಕೊಳ್ಳುವ ಕಂತ್ರಿ ಗುಣ ಈ ಕನ್ನಡಿಗ ಉದ್ಯಮಿಯಲ್ಲಿ ಇಲ್ಲ. ಇವರ ಹಣಕಾಸು ತೊಂದರೆಗಳಿಗೆ ರೆಕ್ಕೆ ಪುಕ್ಕ ಕೊಟ್ಟಿದ್ದು ಮಾತ್ರವಲ್ಲದೆ ವರ್ಣರಂಜಿತವಾಗಿ ಪ್ರಕಟಿಸಿ ತೀಟೆ ತೀರಿಸಿ ಕೊಂಡವು ಪತ್ರಿಕೆಗಳು. ಬಹುಶಃ ಕೆಲವು ಉದ್ಯಮಿಗಳ ಹಾಗೆ ದಕ್ಷಿಣೆ ಬಿಸಾಕುವ ಗುಣ ಮಲ್ಯರಲ್ಲಿಲ್ಲದ್ದರಿಂದಲೋ ಏನೋ ಇವರ ಬೆನ್ನು ಹತ್ತಿದವು. ತಮ್ಮನ್ನು ಗುರಿಯಾಗಿಸಿ ನಡೆಯುತ್ತಿರವ witch hunting ಗೆ ಬೇಸತ್ತ ಮಲ್ಯ ಕೊನೆಗೆ ಉದುರಿಸಿದರು ನನಗೂ ನಿಮಗೂ ತಿಳಿದಿದ್ದ ನುಡಿ ಮುತ್ತುಗಳನ್ನು; indian media has no credibility. ಭಾರತೀಯ ಮಾಧ್ಯಮಗಳು “ನಂಬಲರ್ಹ ಎಂದು.  ನಂಬಲನರ್ಹ ಅಥವಾ ಯೋಗ್ಯತೆಗೆಟ್ಟ  ಮಾಧ್ಯಮಗಳು ಎಂದರೂ ಸರಿಯೇ.

ಪತ್ರಕರ್ತರ ಮೇಲಿನ ವಿಶ್ವಾಸ ಕ್ರಮೇಣ ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ೧೯೮೦ ರ ಕ್ಕಿಂತ ಮೊದಲಿದ್ದ  ಪತ್ರಕರ್ತರ ಮೇಲಿನ ವಿಶ್ವಾಸ ಈಗ ಇಲ್ಲ. ಈಗ ಮಾಧ್ಯಮಗಳು ಸರಕಾರೀ ಯಂತ್ರಗಳ, ರಾಜಕಾರಣಿಗಳ ‘ಸ್ಟೆನೋ ಗ್ರಾಫರ್’ ಗಳಾಗಿ ಮಾರ್ಪಟ್ಟಿದ್ದಾರೆ. ರಾಜಕಾರಣಿ ಅಥವಾ ಅಧಿಕಾರಿಗಳು ಹೇಳಿದ್ದು ಸರಿಯೇ ಎಂದು ತನಿಖೆ ನಡೆಸಿ ವರದಿ ಮಾಡುವ ವ್ಯವಧಾನ, ವೃತ್ತಿಪರತೆ  ಇವರಿಗಿಲ್ಲ. ಯಾವ ಆಮಿಷಕ್ಕಾಗಿ ಪತ್ರಕರ್ತನಿಗಿರಬೇಕಾದ ಗುಣಗಳನ್ನ ಇವರು ಬಲಿ ಕೊಟ್ಟಿದ್ದಾರೆ ಎನ್ನುವುದು ಜನರಿಗೆ ಗೊತ್ತಿಲ್ಲ. ಕೆಲವು ಪತ್ರಕರ್ತರು ತಮ್ಮ ರಾಜಕೀಯ ಅಜೆಂಡಾ ಗಳಿಗೆ ಹೊಂದುವ ವರದಿ ಪ್ರಕಟಿಸಿ ಪತ್ರಕರ್ತ ಹುದ್ದೆಗೆ ಕಳಂಕ ತರುವ, ಆ ಹುದ್ದೆಯ ಘನತೆ ಕುಗ್ಗಿಸುವ ಕೆಲಸ ಮಾಡುತ್ತಿರುವುದೂ ಸಹ ಜನ ಗಮನಿಸುತ್ತಿದ್ದಾರೆ.      ಒಂದು ಪತ್ರಿಕೆ ಬರೆದ ವರದಿಗಳ ಕಾರಣ ಕರ್ನಾಟಕದ ಒಂದು ಪಟ್ಟಣ  ಸಂಪೂರ್ಣ ಬಂದ್ ಅನ್ನೂ ಆಚರಿಸಿತಂತೆ. ಹಿಂದೆಂದೂ  ಇದನ್ನು ಹೋಲುವ ಘಟನೆ ಕರ್ನಾಟಕದಲ್ಲಿ ನಡೆದ ಬಗ್ಗೆ ನನಗೆ ನೆನಪಿಲ್ಲ. unprecedented ಎನ್ನಬಹುದುನಮ್ಮ ನಾಡಿನಲ್ಲಿ ಪತ್ರಿಕೋದ್ಯಮ ಈ ಮಟ್ಟಕ್ಕೆ ಬಂದು ನಿಂತಿದೆ ಇಂದು.

ಒಬ್ಬ ಪತ್ರಕರ್ತ ಎನ್ನಿಸಿ ಕೊಳ್ಳಲು ನಾಲ್ಕು ವಾಕ್ಯಗಳನ್ನು ಹೆಣೆಯುವ ಕಲೆ ರೂಢಿಸಿ ಕೊಂಡರೆ ಸಾಲದು, ಕನಿಷ್ಠ ಓದು ಬರಹದ ವಿದ್ಯೆ ಮಾತ್ರ ಸಾಲದು. ಪಕ್ಷ ಅಥವಾ ಸಿದ್ಧಾಂತ ನಿಷ್ಠೆ ತೋರಿಸುವ ‘ಪಟ್ಟೆ’ಗಳು ಸಹ ಇರಕೂಡದು   ಪತ್ರಕರ್ತನಲ್ಲಿ. ಬದಲಿಗೆ   ವೃತ್ತಿ ಪರತೆಯ ಗುಣಗಳು ಇರಬೇಕು, libel and libel law ಇವುಗಳ ಜ್ಞಾನವೂ ಇರಬೇಕು. ಓಹ್, ಇದು ಒಂದು ಬಹು ದೊಡ್ಡ ಬೇಡಿಕೆಯಾಗಿ ತೋರಬಹುದೇನೋ ಪತ್ರಕರ್ತರ ವೇಷ ತೊಟ್ಟ ಜನರಿಗೆ.

ತಮ್ಮ ಬಗೆಗಿನ ವಿಜಯ್ ಮಲ್ಯರವರ ಲೆಕ್ಕಾಚಾರ ತಪ್ಪು ಎಂದು ಜನರಿಗೆ ಮನವರಿಕೆ ಮಾಡುವ ಕೆಲಸ ಈ ಪತ್ರಕರ್ತ ಸಮೂಹ ಮಾಡೀತೆ?

 

5,300 ಕಿಲೋ ಮೀಟರು ಬರಿಗಾಲಿನಲ್ಲಿ ನಡೆದ ಈತ


ತನ್ನ ಹುಟ್ಟೂರು ಬೋಸ್ನಿಯಾ ಹೆರ್ಜೆಗೊವೀನಾ ದೇಶದ ‘ಬಾನೋವಿಚಿ’ ಪಟ್ಟಣದಿಂದ ಬರಿಗಾಲಿನಲ್ಲಿ ಹೊರಟ ೪೭ ರ ಹರೆಯದ ‘ಸೆನದ್’ ಸಾಧಿಸಲು ಹೊರಟಿದ್ದಾದರೂ ಏನನ್ನು? ಈತನ ಹಂಬಲ ಗಿನ್ನೆಸ್ ದಾಖಲೆಯೋ ಅಥವಾ ಮತ್ತಾವುದಾದರೂ ಕೀರ್ತಿಯ ಪತಾಕೆಯೋ ಅಲ್ಲ. ೧೪೦೦ ವರ್ಷಗಳ ಹಿಂದೆ ಮರಳುಗಾಡಿನ ನಿರಕ್ಷರಕುಕ್ಷಿ ತನಗೆ ಒದಗಿದ ದೇವವಾಣಿಯ ಅಪ್ಪಣೆ ಯನ್ನು ಸಾಕಾರ ಗೊಳಿಸಲು ಮಾಡಿದ ಮನಸ್ಸು ಅವನನ್ನು ನಡೆಯುವಂತೆ ಪ್ರೇರೇಪಿಸಿತು. ತಿಂಗಳುಗಟ್ಟಲೆ, ಅತ್ಯಂತ ಅಪಾಯಕಾರೀ ಪ್ರದೇಶಗಳನ್ನು ದಾಟಿ ಕೊನೆಗೂ ತನ್ನ ಗುರಿ ಮುಟ್ಟಿದ  ೪೭ ರ ಪ್ರಾಯದ  ಬೋಸ್ನಿಯಾದ ಪ್ರಜೆ ಸೆನೆದ್. ಪ್ರತೀ ವರ್ಷ ಹಜ್ ಬರುವ ಯಾತ್ರಿಕರಲ್ಲಿ ಕೆಲವರ ಅನುಭವ ಜನರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ.

ಉತ್ತರ ಪ್ರದೇಶದ ವೃದ್ಧ ಮಹಿಳೆಯೊಬ್ಬಳು ಪ್ರತೀ ದಿನ ಒಂದು ರೂಪಾಯಿ ರೀತಿ ಹತ್ತಾರು ವರ್ಷಗಳಿಂದ ಕೂಡಿಸಿಟ್ಟು ಹಜ್ ಗೆ ಬಂದಳು. ಹಜ್ ಗಾಗಿ ಪ್ರತೀ ದಿನ ಒಂದು ರೂಪಾಯಿ ಜೋಡಿಸುವ ಈ ಮಹಿಳೆಯನ್ನು ನೋಡಿ ಈಕೆಯ ಗಂಡನೂ ಸೇರಿ ಗೇಲಿ ಮಾಡಿದರೂ ಕಿವಿಗೊಡದೆ ತನ್ನ ಆಸೆಯನ್ನ ಪೂರ್ತಿ ಗೊಳಿಸಿಕೊಂಡಳು. ಗೇಲಿ ಮಾಡಿ ನಕ್ಕವರು ತಮ್ಮ ಗ್ರಾಮದ ಗಡಿ ದಾಟಲಿಲ್ಲ, ಗೇಲಿಗೆ ಕಿವಿಗೊಡದ ಈ ಮಹಿಳೆ ತನ್ನ ಬದುಕಿನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಳು ಪ್ರತೀ ದಿನ ಒಂದು ರೂಪಾಯಿ ಮೂಲಕ.

ನೂರಾರು ವರ್ಷಗಳಿಂದ ‘ಹಜ್’ ಎಂದು ಕರೆಯಲ್ಪಡುವ ಪವಿತ್ರ ಯಾತ್ರೆಗೆ ವಿಶ್ವದ ಮೂಲೆ ಮೂಲೆಗಳಿಂದ ಜನ ಬಂದು ಹೋಗಿದ್ದಾರೆ. ಒಂಟೆಯ ಸವಾರಿ ಮಾಡಿಯೂ, ದೋಣಿಯಲ್ಲೂ, ಕಾಲ್ನಡಿಗೆ ಯಲ್ಲೂ, ವಿಮಾನಗಳಲ್ಲೂ ಆಗಮಿಸಿ ಮಕ್ಕ ನಗರದಲ್ಲಿ ನೆರೆದಿದ್ದಾರೆ. ತಮ್ಮ ಕುಟುಂಬದವರನ್ನು, ಪ್ರೀತಿ ಪಾತ್ರರನ್ನು, ತಮ್ಮ ಹುಟ್ಟೂರನ್ನು ಬಿಟ್ಟು ಎರಡು ತುಂಡು ಬಟ್ಟೆ, ಅಗಾಧ ಭಕ್ತಿ ಇಟ್ಟುಕೊಂಡು ಹಜ್ ಗೆ ಬರುವ ಜನರಿಗೆ ತಾವು ಹಿಂದಿರುಗಿ ಹೋಗುತ್ತೇವೆ ಎನ್ನುವ ಭರವಸೆಯೂ ಇರುವುದಿಲ್ಲ. ತಮಗೆ ಅರ್ಥವಾಗದ, ಸುಡು ಬಿಸಿಲ ನಾಡಿಗೆ ದೇವನನ್ನು ಸಂಪ್ರೀತಿಗೊಳಿಸುವ ಏಕೈಕ ಉದ್ದೇಶ ಇಟ್ಟು ಕೊಂಡು ಈ ಹಜ್ ಯಾತ್ರೆಯನ್ನು ಮುಸ್ಲಿಮರು ಕೈಗೊಳ್ಳುತ್ತಾರೆ. ಮಕ್ಕಾ ನಗರದ ಪವಿತ್ರ ಕಾಬಾ ಮತ್ತು  ಅದರ ಸುತ್ತ ಮುತ್ತಲಿನ ಪವಿತ್ರ ಕ್ಷೇತ್ರಗಳ ಭೇಟಿ ಅವರ ಮೈ ಮನಕ್ಕೆ ಉಲ್ಲಾಸವನ್ನೀಯುತ್ತದೆ. ಬಡವ ಬಲ್ಲಿದ, ರಾಜ ಗುಲಾಮ, ಕರಿಯ ಬಿಳಿಯ ಎನ್ನುವ ಬೇಧ ಭಾವವಿಲ್ಲದೆ ಮನುಕುಲದ ಸಮಾನತೆಯ ಸಂದೇಶ ವನ್ನು ಸಾರುತ್ತಾರೆ. ಈ ಹಜ್ ಗೆ ಬರುವ ಯಾತ್ರಿಕರೆಲ್ಲರೂ ತಾವು ಯಾವ ಹಿನ್ನೆಲೆಯಿಂದ ಲಾದರೂ ಬಂದಿರಲಿ ಎಲ್ಲರ ವಸ್ತ್ರ, ಬಿಳಿ ಉಡುಗೆ, ಒಂದೇ ರೀತಿಯದ್ದಾಗಿರುತ್ತದೆ. ಎಲ್ಲರ ನಾಲಗೆಯ ಮೇಲೂ ಒಂದೇ ಮಂತ್ರ. ಓ, ಪ್ರಭುವೇ, ಇದೋ ನಾನು ಆಗಮಿಸಿದ್ದೇನೆ, ನಿನ್ನ ಸೇವೆಗೆ ಎಂದು. ನಿನ್ನ ಪ್ರಭುತ್ವವೇ ಮೇಲು, ನೀನು ಸರ್ವ ಶ್ರೇಷ್ಠ ಎನ್ನುವ ಅರ್ಹತಾ ಬರುವ “ತಲ್ಬಿಯಾ” ಮಂತ್ರವನ್ನು ಉಚ್ಚರಿಸುತ್ತಾರೆ. ಹಜ್ ಬಗ್ಗೆ ಬರೆದ ಓರ್ವ ಲೇಖಕಿಯ ಪ್ರಕಾರ ಒಂದೇ ತೆರನಾಗಿ ಉಟ್ಟು, ಒಂದೇ ಮಂತ್ರ ಪಠಿಸುತ್ತಾ ಒಂದೇ ಕಾಲಕ್ಕೆ ಕುಬ್ಜರೂ, ಶ್ರೇಷ್ಠರೂ ಆಗುತ್ತಾರಂತೆ. ಲಕ್ಷಗಟ್ಟಲೆ ಸೇರಿದ ಮನುಷ್ಯ ಸಮೂಹ ದೆದುರು ತಾನೆಷ್ಟು ಕುಬ್ಜ ಎಂದೂ, ಹಾಗೆಯೇ ತನ್ನ ಸುತ್ತ ನೆರೆದ ಆ ಜನರಾಶಿ ತನ್ನ ಕುಟುಂಬದ ಭಾಗ  ಎನ್ನುವ ಶ್ರೇಷ್ಟತೆಯ ಭಾವನೆಯ ಮಿಳಿತವೇ ಹಜ್ ಯಾತ್ರೆ ಎಂದು ಬರೆಯುತ್ತಾರೆ ಲೇಖಕಿ.

ನಿನ್ನೆ ಗುರುವಾರದಂದು ಹಜ್ ಯಾತ್ರೆಯ ಪ್ರಕ್ರಿಯೆಗಳಲ್ಲಿ ಶ್ರೇಷ್ಠ ಮತ್ತು ಮಹತ್ವದ ಭಾಗವಾದ “ಅರಫಾತ್”  ಮೈದಾನದಲ್ಲಿ ನಿಂತು ಮಾಡುವ ಪ್ರಾರ್ಥನೆ, ಸೂರ್ಯಸ್ತದ ನಂತರ ‘ಮುಜ್ದಲಿಫಾ’ ಎನ್ನುವ ವಿಶಾಲವಾದ ಬಯಲಿನಲ್ಲಿ ರಾತ್ರಿ ಕಳೆದು ‘ಮೀನಾ’ ಕಣಿವೆಗೆ ಬಂದು ಮನುಷ್ಯರನ್ನು ಚಂಚರನ್ನಾಗಿಸುವ, ದಿಕ್ಕು ತಪ್ಪಿಸುವ ಸೈತಾನನಿಗೆ ಕಲ್ಲು ಬೀಸಿ, ಪ್ರಾಣಿ ಬಲಿ ಕೊಟ್ಟು ಕೇಶ ಮುಂಡನೆ (ಪುರುಷರಿಗೆ ಮಾತ್ರ) ಮೂಲಕ ಹಜ್ ಯಾತ್ರೆಯ ಎಲ್ಲಾ ನಿಯಮಗಳನ್ನ ಪಾಲಿಸಿದಂತಾಗುತ್ತದೆ.

ಇಂದು “ಬಕ್ರೀದ್” ಹಬ್ಬ. ಈ ಶುಭ ಸಂದರ್ಭದಲ್ಲಿ ‘ಹಳೇ ಸೇತುವೆ’ ಯ ಮೇಲೆ ಹಾದು ಹೋಗುವ ಸನ್ಮಿತ್ರ ವೃಂದಕ್ಕೆ ನನ್ನ ಅಂತಾನಂತ ಶುಭಾಶಯಗಳು.

ಚಿತ್ರ ಕೃಪೆ: www.independent.co.uk

 

ಅತ್ಯಾಚಾರದ ಗರ್ಭಧಾರಣೆಗೆ “ದೈವೇಚ್ಚೆ” ಕಾರಣ

ಶೀಲಭಂಗದಿಂದ ಅಥವಾ ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಅಮೆರಿಕೆಯ ರಿಪಬ್ಲಿಕನ್ ಪಕ್ಷದ ನಾಯಕನೊಬ್ಬ. ಈಗ ಈ ಮಾತು ಅಮೆರಿಕೆಯ ರಾಜಕೀಯ ವಲಯದಲ್ಲಿ ಕಂಪನ ತರುತ್ತಿದೆ. ಡೆಮೊಕ್ರಾಟ್ ಪಕ್ಷದವರು ಈ ಮಾತನ್ನು ಹಿಡಿದು ಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾತುರರಾಗಿದ್ದಾರೆ. ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಬಲಪಂಥೀಯ ಎಂದು ರಿಪಬ್ಲಿಕನ್ ಪಕ್ಷ ಪರಿಗಣಿಸಲ್ಪಟ್ಟಿದೆ ಅಮೆರಿಕೆಯಲ್ಲಿ. ತಲೆಕೆಟ್ಟ ಕೆಲವು ಕ್ರೈಸ್ತ ಪಾದ್ರಿಗಳೂ ಈ ಪಕ್ಷವನ್ನ ಬೆಂಬಲಿಸುತ್ತಾರೆ. ಬಲಪಂಥವೋ, ಎಡ ಪಂಥವೋ, ನಡು ಪಂಥವೋ, ಪಂಥ ಯಾವುದೇ ಇರಲಿ ಮಾನವೀಯ ಮೌಲ್ಯಗಳ ವಿಷಯ ಬಂದಾಗ ಸರಿಯಾದ ವಿವೇಚನೆ, ತೋರದ ಪಂಥ ತಿಪ್ಪೆ ಸೇರುವುದಕ್ಕೆ ಮಾತ್ರ ಲಾಯಕ್ಕು.

Let us get back to rape-induced pregnancy. ಮತ್ತೊಮ್ಮೆ ಗರ್ಭ ಧಾರಣೆಗೆ ಬರೋಣ. ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಈತನ ಹೆಸರು ರಿಚರ್ಡ್ ಮುರ್ಡೋಕ್. ಇಂಡಿಯಾನ ರಾಜ್ಯದಿಂದ ಸೆನೆಟ್ ಗಾಗಿ ಸ್ಪರ್ದೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ. ತಾನಾಡಿದ  ಮಾತಿನಿಂದ ಎದ್ದ ವಿವಾದ ಈತನನ್ನು ವಿಚಲಿತನನ್ನಾಗಿಸಿದೆ.  ಈಗ ಈತ ಹೇಳುವುದು, “ನಾನು ಹೇಳಿದ ಅರ್ಥವೇ ಬೇರೆ. ನನ್ನ ಪಾಯಿಂಟ್ ಏನೆಂದರೆ ದೇವರು ಜೀವದ ಸೃಷ್ಟಿಗೆ ಕಾರಣ, ದೇವರಿಗ ಅತ್ಯಾಚಾರ ಇಷ್ಟವಿಲ್ಲ, ಅತ್ಯಾಚಾರ ಒಂದು horrible thing” ಈ ಸಮಜಾಯಿಷಿ ಈತನದು.

ಗರ್ಭಧಾರಣೆ ದೈವೇಚ್ಚೆ ಎಂದಾಗ ಒಂದು ಮಾತು ನೆನಪಿಗೆ ಬರುತ್ತದೆ. ಅದೆಂದರೆ “ತೇನ ವಿನಾ ತೃಣಮಪಿ ನ ಚಲತಿ”. ಈ ಮಾತಿನ ಅರ್ಥ ಒಂದು ಹುಲುಕಡ್ಡಿ ಅಲುಗಾಡಲೂ ಪರಮಾತ್ಮನ ಅಪ್ಪಣೆ ಬೇಕು. ಪವಿತ್ರ ಕುರ್’ಆನ್ ನ ಆರನೇ ಅಧ್ಯಾಯ, ೫೯ ನೇ ಸೂಕ್ತದಲ್ಲೂ ಇದೇ ಅರ್ಥ ಬರುವ ಮಾತಿದೆ. “Not a leaf fall but with His Knowledge”. ಈಗ ಈ ಮೇಲಿನ ಸೂಕ್ತಗಳನ್ನು ಉದ್ಧರಿಸಿ ಜಗತ್ತಿನಲ್ಲಿ ನಡೆಯುವ ಪ್ರತೀ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ಮೋಸ ದಗಾ, ವಂಚನೆ… ಎಲ್ಲವಕ್ಕೂ ತಂದು ನಿಲ್ಲಿಸಲಿ ಪರಮಾತ್ಮನನ್ನು ಸಾಕ್ಷಿಯಾಗಿ.

 

ಅವರು ಮತ್ತು ನಾವು

ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಡೆಮಾಕ್ರಟ್ ಪಕ್ಷದ ಒಬಾಮಾ  ಮತ್ತು ರಿಪಬ್ಲಿಕನ್ ಪಕ್ಷದ ಮಿಟ್ ರಾಮ್ನಿ ನಡುವೆ ಹಣಾಹಣಿ. ಒಬಾಮಾ ಎರಡನೇ ಬಾರಿ ಶ್ವೇತ ಭವನದಲ್ಲಿ ಸಮಯ ಕಳೆಯಲು ಬಯಸಿದರೆ ಮಿಟ್ ರಾಮ್ನಿ ಆ ಆಸೆಗೆ ತಣ್ಣೀರೆರೆಚಲು ಏನೆಲ್ಲಾ ಮಾಡಬೇಕೋ ಅವನ್ನು  ಮಾಡಲು ತಯಾರಿ ನಡೆಸುತ್ತಿದ್ದಾರೆ. ಅಮೆರಿಕೆಯಲ್ಲಿ ಇವರಿಬ್ಬರ ಗೆಲ್ಲುವ ಸಾಧ್ಯತೆ ಬಗ್ಗೆ punditry, ಹಾಗೆಯೇ ದಿನವೂ ಇವರಿಬ್ಬರಲ್ಲಿ ಯಾರು ಗೆಲ್ಲಬಹುದು ಎಂದು ಅಂಕಿ ಅಂಶಗಳ ಮಹಾಪೂರ. ತೈಲ ಅಥವಾ ಚಿನ್ನದ ಬೆಲೆ ಏರಿಳಿತದಂತೆ ದಿನವೂ ಅಂಕಿ ಅಂಶಗಳು ಏರು ಪೇರು. ಒಂದು ದಿನ ಒಬಾಮ ಮುಂದಿದ್ದರೆ, ಮತ್ತೊಂದು ದಿನ ರಾಮ್ನಿ. ರಾಜಕೀಯ ಪಂಡಿತರ ಲೆಕ್ಕಾಚಾರ ಮತ್ತು ಅಂಕಿ ಅಂಶಗಳ ಜೊತೆ ಇವರಿಬ್ಬರೂ ನಡೆಸಿದ ಬಹಿರಂಗ ಚರ್ಚೆಗಳು ಯಾರು ಅಧ್ಯಕ್ಷ ಪದವಿಗೆ ಹೆಚ್ಚು ಅರ್ಹ ಎಂದು ನಿರ್ಣಯಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಇದುವರೆಗೆ ಒಬಾಮಾ ಮತ್ತು ರಾಮ್ನಿ ನಡುವೆ ಮೂರು ಚರ್ಚೆಗಳು ನಡೆದಿವೆ. ಮೊದಲ ಚರ್ಚೆಯಲ್ಲಿ ಆಚ್ಚರಿದಾಯಕವಾಗಿ ಒಬಾಮಾ killer instinct ಪ್ರದರ್ಶಿಸದೆ ಸುಲಭವಾಗಿ ರಾಮ್ನಿಗೆ ಶರಣಾಗಿ ತಮ್ಮ ಪಕ್ಷದ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದರೆ, ಎರಡನೇ ಚರ್ಚೆಯಲ್ಲಿ ಚೇತರಿಸಿಕೊಂಡ ಒಬಾಮಾ, ಅಸಾಧಾರಣ ವಾಕ್ಪಟುತ್ವ ಮೆರೆಯದೆ ಇದ್ದರೂ ಮೇಲುಗೈಯಂತೂ ಸಾಧಿಸಿ ತಮ್ಮ ಅಭಿಮಾನಿಗಳಲ್ಲಿ ಆವೇಶ ತುಂಬಿದರು. ಮೊನ್ನೆ ನಡೆದ  ಮೂರನೇ ಚರ್ಚೆಯಲ್ಲಿ ಒಬಾಮ ತನ್ನ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸಿ ರಾಮ್ನಿಗೆ ಚಳ್ಳೆ ಹಣ್ಣು ತಿನ್ನಿಸಿದರು. ‘ಬೋಕಾ ರೇಟೋನ್’ ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಚರ್ಚೆಯಲ್ಲಿ ಒಬಾಮ ವಿಜಯೀ ಎಂದು ಮಾಧ್ಯಮಗಳ ವರದಿ.

ಆದರೆ ಮೊದಲ ಇಂಪ್ರೆಷನ್ ಬೆಸ್ಟ್ ಇಂಪ್ರೆಷನ್ ಅಂತೆ. ರಾಮ್ನಿ ವಿಜಯಿ ಯಾಗಬಹುದು ಎಂದು ಈಗ ಹೆಚ್ಚಿನವರ ಊಹೆ. ಈ ಚರ್ಚೆಗಳು ಯಾವ ರೀತಿ ಮತದಾರನ ಮೇಲೆ ಪ್ರಭಾವ ಬೀರುತ್ತವೆ, ಮತ್ತು ಈ  ಪ್ರಭಾವ ಮತಗಟ್ಟೆ ಯವರೆಗೂ ಪ್ರಯಾಣಿಸ ಬಹುದೇ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.   ದೇಶವನ್ನು ಕಾಡುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕೆಯ ಪ್ರಭಾವ ಮುಂತಾದ ಹತ್ತು ಹಲವು ವಿಷಯಗಳ ಬಗ್ಗೆ ಇವರೀರ್ವರ ನಿಲುವುಗಳನ್ನು ಅಮೇರಿಕಾ ಮಾತ್ರವಲ್ಲ ವಿಶ್ವವೇ ಬಹು ಆಸ್ಥೆಯಿಂದ ಆಲಿಸಿತು.  ಅಂತಾರಾಷ್ಟ್ರೀಯವಾಗಿ ಅಮೆರಿಕೆಯ ಪ್ರಭಾವದ ಬಗ್ಗೆ ಬಹು ಜೋರಾದ ಧಾಳಿ, ಪ್ರತಿ ಧಾಳಿಗಳು ನಡೆದವು ಒಬಾಮಾ ರಾಮ್ನಿ ನಡುವೆ. ಬಾಗ್ದಾದ್ ಬೀದಿಗಳಲ್ಲಿ, ಕಂದಹಾರದ ಗುಡ್ಡಗಾಡು ಗಳಲ್ಲಿ ನಡೆಯುವ ಗುಂಡಿನ ಚಕಮಕಿಗಿಂತ ಬಿರುಸೇ ಎನ್ನಬಹುದಾದ sniping. ಸೌದಿ ಅರೇಬಿಯಾ, ಇರಾಕ್ ಇರಾನ್, ಲಿಬ್ಯ, ಇಸ್ರೇಲ್ ಹೀಗೆ ಹಲವು ದೇಶಗಳ ಬಗ್ಗೆ ಚರ್ಚೆ ನಂತರ ಏಷ್ಯಾದ ಕಡೆಗೂ ಹರಿಯಿತು ಗಮನ. ಚೀನಾದ ಪ್ರಭಾವದ ಬಗ್ಗೆ ಕೂಡಾ ಹರಿಯಿತು ಒಬಾಮಾ, ರಾಮ್ನಿ ಯವರ ಗಮನ. ಏಷ್ಯಾ ಎಂದರೆ ಚೀನಾ ಎನ್ನುವಷ್ಟರ ಮಟ್ಟಿಗೆ ಚೀನಾ ಬೆಳೆದು ಬಿಟ್ಟಿದೆ. ಸರಿ, ಸರಿ, ಈ ಚರ್ಚೆಗಳಲ್ಲಿ ನಾವು ಎಲ್ಲಿದ್ದೇವೆ? ನಮ್ಮ ಸ್ಟೇಟಸ್ ಏನು?………ನಮ್ಮ ಸ್ಟೇಟಸ್ಸೋ? ಅದೇ ಹಳೆಯ ಸ್ಟೇಟಸ್ಸು, ಆರಕ್ಕೆ ಯೇರ್ಲಿಲ್ಲ, ಮೂರಕ್ಕೆ ಇಳೀಲಿಲ್ಲ ಎನ್ನುವ ಸ್ಟೇಟಸ್.  ವೆಬ್ ತಾಣಗಳಲ್ಲಿ ಉತ್ಸಾಹದಿಂದ ಸೇರಿಕೊಂಡು ಸ್ಟೇಟಸ್ ಅಪ್ಡೇಟ್ ಮಾಡದೆ ಸೋಮಾರಿತನ, ಜಡತ್ವ ಪ್ರದರ್ಶಿಸುವವರ ರೀತಿ ಅಮೇರಿಕಾ ನಮ್ಮ ಬಗ್ಗೆ ಅಸಾಧಾರಣ, ಆದರೂ ನಿರೀಕ್ಷಿತ, ಅಸಡ್ಡೆ ತೋರಿಸಿ ನಾವು ಗ್ಲೋಬಲ್ ಪ್ಲೇಯರ್ ಅಲ್ಲ ಎಂದು ಕೇಳದೆಯೇ ಪ್ರಮಾಣ ಪತ್ರ ದಯಪಾಲಿಸಿತು. ಅಮೆರಿಕೆಯ  ಈ ಅಸಡ್ಡೆ, ಉಡಾಫೆಯ ಬಗ್ಗೆ ಹೆಚ್ಚು ಹೇಳಿದರೆ anti american ಪಟ್ಟ ಗ್ಯಾರಂಟಿ ನನಗೆ. ಆದರೂ  ಒಂದನ್ನಂತೂ ಹೇಳಲೇಬೇಕು. ಅಮೆರಿಕೆಗೆ ನಾವು ಒಂದು invoice ಥರ. ಬರೀ ಒಬ್ಬ ಗಿರಾಕಿ. ವಾಲ್ ಮಾರ್ಟ್ ಮಳಿಗೆ ಮುಂದೆ ಡಿಸ್ಕೌಂಟ್ ಸೇಲ್ ಗಾಗಿ ಹಲ್ಲು ಕಿರಿಯುತ್ತಾ,  ಕತ್ತು ಉದ್ದ ಮಾಡಿ ನಿಲ್ಲುವ ಗಿರಾಕಿ.        

ನಮ್ಮನ್ನು ಇತರರು ಗೌರವದಿಂದ ಕಾಣಬೇಕು ಅನ್ನುವ ಬಯಕೆ ಆಕಾಂಕ್ಷೆ ನಮಗೆ ಇದ್ದರೆ ಮೊದಲು ನಾವು ನಮ್ಮನ್ನು ಗೌರವಿಸಿಕೊಳ್ಳಬೇಕು. ಇದು ನಿಯಮ. ಸದ್ಯಕ್ಕೆ ಆ ಆಸೆ ಈಡೇರಿಸುವ ಸರದಾರ ಅಥವಾ ಸರಾದರಿಣಿ ಇನ್ನೂ ಜನ್ಮ ಎತ್ತಿಲ್ಲ ನಮ್ಮ ದೇಶದಲ್ಲಿ. ಅಲ್ಲಿಯವರೆಗೂ ಏಷ್ಯಾ ಎಂದರೆ ಚೀನಾ, ಜಪಾನ್, ಮಲೇಷ್ಯಾ ಕೊನೆಗೆ ಬಾಂಗ್ಲಾದೇಶ. ನಾವು ಗೈರು ಹಾಜರು.

ಈಗ ಎಂಟರ್ ಅವರ್ ಮಹಾನ್ ಭಾರತ. ಋಷಿ ಪುಂಗವರು, ಸಾಧು ಸಂತರು, ಪೀರ್, ಸೂಫಿಗಳು, ನೆಮ್ಮದಿ ಕಂಡ, ಮುಕ್ತ ಕಂಠದಿಂದ  ಕೊಂಡಾಡಿದ ಈ ಸೊಗಸಾದ ದೇಶಕ್ಕೆ ದೇವರು ಒಳ್ಳೆಯ, ದಕ್ಷ, ಪ್ರಾಮಾಣಿಕ ಆಡಳಿತಗಾರರನ್ನು ದಯಪಾಲಿಸದೆ ಸ್ಪಷ್ಟ ರಾಜಕಾರಣ ತೋರಿಸಿದ್ದಾನೆ ಎಂದು ಯಾರಾದರೂ ದೂರಿದರೆ ಅವರ ದೂರು “ಕಂಪ್ಲೀಟ್ಲಿ ವ್ಯಾಲಿಡ್”. ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶೀ ಧಾಳಿಕೋರರು ನಮ್ಮನ್ನು  ಆಳಿದರೆ, ಸ್ವಾತಂತ್ರ್ಯಾ ನಂತರ ಸ್ವದೇಶೀ ಧಾಳಿಕೋರರ ಸರತಿ. ಯಾರು ಹಿತವರು ಇವರೀರ್ವರಲ್ಲಿ? ನಿಮ್ಮ ದೃಷ್ಟಿ  ಸಾಗರದಾಚೆ ಓಡಿದರೆ ಅದು ಕ್ಷಮಾರ್ಹವಾದ ದೃಷ್ಟಿಯೇ. ಭಿಕ್ಷುಕನ ತಟ್ಟೆಗೂ ಕನ್ನ ಹಾಕುವವರನ್ನು ನಾವಿಂದು ಆರಿಸಿ ಕಳಿಸುತ್ತಿದ್ದೇವೆ.    ನಮ್ಮ ದೇಶ ಎಷ್ಟು ಭ್ರಷ್ಟ ಎಂದು ನಮಗೆ ತಿಳಿಹೇಳಲು ಯಾವುದೇ ಅಂಕಿ ಅಂಶಗಳು ಬೇಕಿಲ್ಲ. ಗಡ್ಕಾರೀ ತನ್ನ ಕಂಪೆನಿಗಳ ಮೂಲಕ ಎಷ್ಟು ಸಂಪತ್ತು ದೋಚಿ ಗಡದ್ದಾಗಿದ್ದಾರೆ ಎಂದು  ಕಾಂಗ್ರೆಸ್ ಹಿಂದೆ ಬಿದ್ದಿದ್ದರೆ, ಕೇಜರಿವಾಲ ನಲ್ಲಿ ಎಷ್ಟು ಕೇಸರಿ ತುಂಬಿಕೊಂಡಿದೆ ಎಂದು ಸೆಕ್ಯುಲರ್ ವಾದಿಗಳು ದುರ್ಬೀನು ಹಿಡಿಯುತ್ತಿದ್ದಾರೆ. ಅಣ್ಣಾ ಹಜಾರೆಯ ನಿಯ್ಯತ್ತಿನ ಬಗ್ಗೆ ಕೆಲವರು ಅಪಸ್ವರ ಎತ್ತಿದರೆ ಮತ್ತೊಬ್ಬ ಸೋನಿಯಾರ ಸೆರಗು ಜಗ್ಗುತ್ತಾನೆ ತಮ್ಮ ಅಳಿಯಂದಿರ ವಹಿವಾಟುಗಳ ಕರ್ಮಕಾಂಡದ ತನಿಖೆಗಾಗಿ. ಕೆಸರೋ ಕೆಸರು. ಅಲ್ಲಿ ಅಮೆರಿಕೆಯಲ್ಲಿ ಚರ್ಚೆಯೋ ಚರ್ಚೆ. ಇಲ್ಲಿ ಕೆಸರೋ ಕೆಸರು.  ಅಮೆರಿಕೆಯಲ್ಲಿ ಆರೋಗ್ಯ ವಿಮಾ ಪದ್ಧತಿಯ ಬಗ್ಗೆ ವಿವಾದ, ನಿರುದ್ಯೋಗದ ಬಗ್ಗೆ ಚರ್ಚೆ, ಸಲಿಂಗಿಗಳ ಹಕ್ಕುಗಳ ಬಗ್ಗೆ ವಾಗ್ಯುದ್ಧ, ಕಾಲೇಜಿಗೆ ಹೋಗುವ ತರುಣ ತರುಣಿಯರಿಗೆ ಕಾಂಡೋಮ್ ನ ಖರ್ಚು ಸರಕಾರ ಭರಿಸಬೇಕೆ ಎನ್ನುವ ಜಿಜ್ಞಾಸೆ, ಕಂಪೆನಿಗಳನ್ನು ಸಾಲ ಮುಕ್ತ ರನ್ನಾಗಿಸಬೇಕೋ ಬೇಡವೋ ಎನ್ನುವುದರ ಡಿಬೇಟ್, ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಎಷ್ಟು ಆಳ ಮೂಗು ತೋರಿಸಬೇಕು ಎನ್ನುವುದರ ಮೇಲೆ ವಾಗ್ಯುದ್ಧ…ಆದರೆ ನಮ್ಮಲ್ಲಿ? ಬಡವರ ಹತಾಶೆ ಯಾವ ಮಟ್ಟಕೆ ಮುಟ್ಟಿದೆ ಎಂದು ಹೇಳಿ ತೀರದು. ರಾಜಸ್ಥಾನದಲ್ಲಿ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಹಸುಳೆಯನ್ನು ಬಟ್ಟೆಯಲ್ಲಿ  ಸುತ್ತಿ ತನ್ನ ಕೊರಳಿಗೆ ಕಟ್ಟಿ ಕೊಂಡು ಸೈಕಲ್ ರಿಕ್ಷಾ ಚಲಾಯಿಸುತ್ತಾನೆ ಬಡ ತಂದೆ. ಈ ವರದಿ ಬಿ.ಬಿ.ಸೀ ಯಲ್ಲಿ ಬಂದ ನಂತರವೇ ರಾಜಸ್ಥಾನದ ಸರಕಾರ ಸಹಾಯ ಹಸ್ತ ನೀಡಿದ್ದು. ಒಂದು ಕಡೆ ಈ ತೆರನಾದ ಅಸಹಾಯಕತೆ ನಮಗೆ ನೋಡಲು ಸಿಕ್ಕಿದರೆ ಮತ್ತೊಂದು ಕಡೆ ನಮ್ಮನ್ನು ನಿರ್ದಾಕ್ಷಿಣ್ಯವಾಗಿ  ದೋಚಿದವರ ತೀರದ ಅಟ್ಟಹಾಸ. ದೋಚಿದ ಸಂಪತ್ತಿನಲ್ಲಿ ಬಂಗಲೆ ಕಟ್ಟಿ ಕೊಂಡು, ದೊಡ್ಡ ದೊಡ್ಡ ಕಾರುಗಳಲ್ಲಿ ಹಸಿದವನ, ನಿರ್ಗತಿಕನ ಮುಂದೆಯೇ ಓಡಾಡುತ್ತಾರೆ ಯಾವ ಸಂಕೋಚವೂ ಇಲ್ಲದೆ. ಹಗಲೂ ರಾತ್ರಿಯೆನ್ನದೆ, ಪಕ್ಷ ಬೇಧವಿಲ್ಲದೆ ದೋಚಿದ ನಂತರ ನಾವು ಹಿಂದುಳಿದ ದೇಶ, ಮುಂದಕ್ಕೆ ತರಲು ನನ್ನು ಆರಿಸಿ ಎಂದು ನಿರ್ಭಿಡೆಯಿಂದ ನಮ್ಮ ಮತ ಸಹ ಕೇಳುತ್ತಾನೆ ರಾಜಕಾರಣಿ.

ಅಮೆರಿಕೆಯಲ್ಲಿ ಅಭ್ಯರ್ಥಿಗಳ ನಡುವೆ ನಡೆಯುತ್ತಿರುವ ಚರ್ಚೆ ರೀತಿ ನಮ್ಮ ದೇಶದಲ್ಲೂ ಯಾಕೆ ಮುಖಾ ಮುಖಿ ರಾಜಕಾರಣಿ ಗಳು ಕೂರೋಲ್ಲ? ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕ ಅಥವಾ ನಾಯಕಿ ಏಕೆ ಚರ್ಚೆಯಲ್ಲಿ ಎದುರು ಬದುರಾಗೋಲ್ಲ? ಏಕೆಂದರೆ ಇಬ್ಬರೂ ಅದೇ ವರ್ಗಕ್ಕೆ ಸೇರಿದವರು. ದೋಚುವ ವರ್ಗಕ್ಕೆ ಸೇರಿದವರು. ಉರ್ದು ಭಾಷೆಯಲ್ಲಿ ಮಾತೊಂದಿದೆ, “ಏಕ್ ಹಮ್ಮಾಮ್ ಕೆ ದೋ ನ್ಹಂಗೆ” ಅಂತ. ಅಂದರೆ ‘ಒಂದೇ ಬಚ್ಚಲಿನ ಇಬ್ಬರು ನಗ್ನರು’. ಈ ಪರಿಸ್ಥಿತಿ ಎದುರಾಗಬಹುದು ಎನ್ನುವ ಭೀತಿ. ಮುಚ್ಚಲು ಏನೂ ಇರುವುದಿಲ್ಲ, ನಾಚಿಕೆ ಪಡಬೇಕಾದ ತಾಪತ್ರಯವೂ ಇಲ್ಲ. ಇದೇ ಪರಿಸ್ಥಿತಿ ಎದುರಾಗುತ್ತದೆ ಆಳುವವ ಮತ್ತು ವಿರೋಧ ಪಕ್ಷದವ ಮುಖಾ ಮುಖಿಯಾದಾಗ. ನೂರಾರು ಪಕ್ಷಗಳಿವೆ ನಮ್ಮ ದೇಶದಲ್ಲಿ, ಒಂದೇ ಒಂದು ಪಕ್ಷಕ್ಕಾದರೂ ತಾನು ಸಾಚಾ ಎಂದು ಎಡೆ ತಟ್ಟಿ ಹೇಳುವ ವಿಶ್ವಾಸ, ಸ್ಥೈರ್ಯ ಇದೆಯೇ? ಆ ಸ್ಥೈರ್ಯ, ವಿಶ್ವಾಸ ಮೊದಲೂ ಮೂಡಲಿ ನಮ್ಮ ಪಕ್ಷಗಳಲ್ಲಿ, ಆಗ ಉದಯವಾಗಲಿ ಸಶಕ್ತ, ಅಭಿಮಾನೀ ಭಾರತ.

ಅಲ್ಲಿಯವರೆಗೆ ನಾನು ನೀವು ಒಂದು ಚಾತಕ ಪಕ್ಷಿ.

ಮೋದಿಗೆ ಸಿಕ್ಕಿತು ಟ್ರಾವಲ್ ಪರ್ಮಿಟ್

ಗುಜರಾತ್ ನಲ್ಲಿ ನಡೆದ ನರಮೇಧಕ್ಕೆ ನರೇಂದ್ರ ಮೋದಿ ಕಾರಣ ಎಂದು ಭಾರತೀಯರೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ಭಾವನೆಗೆ ಪೂರಕವಾಗಿ ಅಮೇರಿಕಾ ಮತ್ತು ಇಂಗ್ಲೆಂಡ್ ದೇಶಗಳು ಮೋದಿ ತಮ್ಮ ದೇಶಕ್ಕೆ ಕಾಲಿಡಲು ಅನುಮತಿ ನಿರಾಕರಿಸಿದ್ದವು. ಭಾರತದ ಒಳಗೂ ಈ ನಿಲುವಿಗೆ ಸಹಮತ ಸಹ ವ್ಯಕ್ತವಾಗಿತ್ತು. ಕಳೆದ ಬಿಹಾರದ ಚುನಾವಣೆಯ ಸಮಯ ಭಾಜಪದ ಪರವಾಗಿ ನರೇಂದ್ರ ಮೋದಿ ಬಿಹಾರಕ್ಕೆ ಬರುವ ವಿಷಯ ತಿಳಿದ ಅಲ್ಲಿನ ಮುಖ್ಯಮಂತ್ರಿ ನೀತೀಶ್ ಕುಮಾರ್ ತಮ್ಮ ರಾಜ್ಯಕ್ಕೆ ಆತ ಕಾಲಿಡ ಕೂಡದು ಎಂದು ತಾಕೀತು ಮಾಡಿ ವಿವಾದಕ್ಕೆ ಒಳಗಾಗಿದ್ದರು. ಮೋದಿ ಇಲ್ಲದೆಯೇ ಅಲ್ಲಿನ ಚುನಾವಣೆಯನ್ನ ಭಾಜಪ – ನಿತೀಶ್ ಪಕ್ಷದ ಒಕ್ಕೂಟ ಜಯಿಸಿತ್ತು. ಹೊರದೇಶಗಳಲ್ಲೂ, ಸ್ವದೇಶದಲ್ಲೂ ಈ ತೆರನಾದ ಅಭಿಪ್ರಾಯ ನರೇಂದ್ರ ಮೋದಿ  ಬಗ್ಗೆ ಇರುವಾಗ ಮೋದಿಯಾಗಲೀ ಭಾಜಪ ವಾಗಲೀ ಆತ್ಮಾವಲೋಕನ ಏಕೆ ಮಾಡಿಕೊಳ್ಳುತ್ತಿಲ್ಲ ಎನ್ನುವುದೇ ಒಂದು ಒಗಟು.  ಸುಖಾಸುಮ್ಮನೆ ಯಾರನ್ನೂ ನಮ್ಮ ಮನೆ ಕಡೆ ತಲೆ ಹಾಕಬೇಡ ಎಂದು ಯಾರೂ  ತಾಕೀತು ಮಾಡೋಲ್ಲ. ನಮ್ಮ ದೇಶದ ಚರಿತ್ರೆಯಲ್ಲಿ ಈ ರೀತಿಯ ಸನ್ನಿವೇಶವನ್ನು ಎದುರಿಸುವಂಥ ಪರಿಸ್ಥಿತಿಗೆ ಒಳಗಾದ ಒಬ್ಬನೇ ಒಬ್ಬ  ರಾಜಕಾರಣಿಯ ಹೆಸರು ನಮ್ಮ ನೆನಪಿಗೆ ಬರುವುದೇ?

ಗುಜರಾತ್ ರಾಜ್ಯದ ಹೆಸರು ಕೇಳಿದ ಕೂಡಲೇ ನಮ್ಮ ಕಣ್ಣಿಗೆ ಎದುರಾಗೋದು ಮುಗ್ಧರ ಹತ್ಯೆ ಮತ್ತು ಆಕ್ರಂದನ. ಗುಜರಾತ್ ನ ಮೇಲಿನ ಈ ಕಳಂಕ ವನ್ನು ತೊಡೆದು ಹಾಕಲು ಮೋದಿಯ ಅಂತರ್ಜಾಲ ಅಭಿಮಾನೀ ಸಮುದಾಯ ಹಗಲೂ ರಾತ್ರಿ ಶ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿದ್ದೇ. ಗುಜರಾತ್ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ, ಅಂಥ ರಾಜ್ಯ ಈ ದೇಶದಲ್ಲೆಂದೂ ಉದಯಿಸಿಲ್ಲ ಎಂದು ಟಾಮ್ ಟಾಮ್ ಮಾಡಿದ್ದೆ ಮಾಡಿದ್ದು. ಇದು ಪೊಳ್ಳು ಮತ್ತು ಸುಳ್ಳುಗಳ propaganda ಎಂದು ಭಾರತೀಯರಿಗೆ ಮನವರಿಕೆ ಆಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಗುಜರಾತ್ ನ ಅಭಿವೃದ್ಧಿ ಒಂದು myth ಎಂದು ಈಗ ವೇದ್ಯವಾಯಿತು. ಗುಜರಾತ್ ಗಿಂತ ಅಭಿವೃದ್ಧಿಯ ಪಥದಲ್ಲಿ ಬಿಹಾರ ದಾಪುಗಾಲು ಹಾಕುತ್ತಿದೆ. 

ನರೇಂದ್ರ ಮೋದಿ ಯನ್ನು ಯಾವ ಕಾರಣಕ್ಕೆ ಮತ್ತು ಉದ್ದೇಶಕ್ಕೆ  ಹೊಗಳಲಾಗುತ್ತಿದೆ, ಪ್ರಧಾನಿ ಹುದ್ದೆಗೆ ನಾಮಕರಣ ಮಾಡಲು ಉತ್ಸುಕತೆ, ಉತ್ಸಾಹ ತೋರಿ ಬರುತ್ತಿದೆ ಎಂದು ತಿಳಿಯದಷ್ಟು ಮೂಢ ನಲ್ಲ ಭಾರತೀಯ. ಗುಜರಾತ್ ಮು. ಮಂತ್ರಿಯ ಮೇಲಿನ ಪ್ರಯಾಣದ ನಿರ್ಬಂಧವನ್ನು ತೆಗೆದ ಇಂಗ್ಲೆಂಡ್ ದೇಶದ ಈ ಕ್ರಮ ಎಷ್ಟು ವಿವೇಚನಾಪೂರ್ಣ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ ವ್ಯಾಪಾರದ ಹಿತದೃಷ್ಟಿಯ ಮುಂದೆ ಮಾನವೀಯ ಮೌಲ್ಯಗಳು ಗೌಣ ಎಂದು ಇಂಗ್ಲೆಂಡ್ ದೇಶಕ್ಕೆ ಅನ್ನಿಸಿದರೆ ಅದು ಅವರಿಗೆ ಬಿಟ್ಟ ಆಯ್ಕೆ. ಅವರ ಹಿತ್ತಲಿನಲ್ಲೇ ನಡೆದ ಯಹೂದ್ಯರ ವಿರುದ್ಧ ನಡೆದ ಸಾಮೂಹಿಕ ನರಸಂಹಾರದ ಅನುಭವ ಇರುವ ದೇಶ ಇಂಗ್ಲೆಂಡ್. ಅವರಿಗೆ ನಾವು ಪಾಠ ಹೇಳುವ ಅಗತ್ಯ ಇಲ್ಲ. ನರೇಂದ್ರ ಮೋದಿಯನ್ನು ಗುಜರಾತ್ ನ ಮುಸ್ಲಿಮರು ಕ್ಷಮಿಸಿದ್ದಾರೆ. ಉತ್ತರ ಪ್ರದೇಶದ ‘ದೇವೋ ಬಂದ್’ ಇಸ್ಲಾಮೀ ಸಂಸ್ಥೆಯ ‘ಮೌಲಾನ ವಾಸ್ತಾನ್ವಿ’ ಕೂಡಾ ಹಳತನ್ನು ಮರೆತು ಮುನ್ನಡೆಯುವ ಮಾತನ್ನಾಡಿದ್ದಾರೆ. ಆದರೂ ಮನುಷ್ಯ ನಿರ್ದೋಷಿ ಯಾಗಿದ್ದರೆ ತನ್ನ ಹೆಸರಿಗೆ ಅಂಟಿದ ಕಳಂಕವನ್ನು ತೊಡೆಯುವ ಶತಾಯ ಗತಾಯ ಪ್ರಯತ್ನಿಸ ಬೇಕು, ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕು. ಈ ನಿಟ್ಟಿನಲ್ಲಿ ಗುಜರಾತಿನ ಮುಖ್ಯಮಂತ್ರಿ ತೊಡಗಿಸಿಕೊಂಡರೆ ‘feeling of closure’ ನ ಅವಕಾಶ ಭಾರತೀಯರಿಗೆ ಆತ ಕೊಟ್ಟಂತಾಗುತ್ತದೆ. ಆ ಕಾಲ ನಿಜಕ್ಕೂ ಬರಬಹುದೇ?            

ತಾಲಿಬಾನಿಗಳ ಅಟ್ಟಹಾಸಕ್ಕೆ ಕೊನೆ ಎಂದು?

ಮಲಾಲಾ. ನಾನು, ನೀವು ದಿನವೂ ನೋಡುವ, ಪುಸ್ತಕಗಳ ಹೊರೆಯೊಂದಿಗೆ ಕಣ್ಣುಗಳಲ್ಲಿ  ಕನಸನ್ನು ಹೊತ್ತು ಶಾಲೆಯ ಕಡೆ ದೃಢ ಹೆಜ್ಜೆ ಇಡುವ ಬಾಲಕಿಯರ ಹಾಗೆ ೧೫ ವರ್ಷದ ಓರ್ವ ಹೆಣ್ಣು ಮಗಳು.

ಪಾಕಿಸ್ತಾನದ ರಮಣೀಯ ನಿಸರ್ಗ ಪ್ರಾಂತ್ಯ ‘ಸ್ವಾತ್’ ಕಣಿವೆ ಪ್ರದೇಶವನ್ನು ವಶಪಡಿಸಿ ಕೊಂಡಿದ್ದ ತಾಲಿಬಾನ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ನಾಲ್ಕು ನೂರು ಮೈಲು ಗಳ ವರೆಗೆ ತಲುಪಿದ್ದರು. ಭಾರೀ ಹೋರಾಟದ ನಂತರ ಪಾಕಿ ಸೈನ್ಯ ತಾಲಿಬಾನಿಗಳನ್ನು ಹಿಮ್ಮೆಟ್ಟಿ ಕಣಿವೆಯನ್ನು ವಶ ಪಡಿಸಿಕೊಂಡಿದ್ದರು. ಆದರೂ ತಾಲಿಬಾನಿಗಳ ಪ್ರಭಾವ ಕಡಿಮೆಯಾಗಲಿಲ್ಲ. ಕಾದಾಟ ತಾಲಿಬಾನಿಗಳ ಕಸುಬು, ಅಸ್ತ್ರ ಶಸ್ತ್ರಗಳು ಇವರ ಆಹಾರ, ಮಾನವ ಸಂಸ್ಕಾರಕ್ಕೆ ವಿರುದ್ಧವಾದ ನಡವಳಿಕೆ ಇವರ ಉಸಿರು. ಇವೆಲ್ಲವೂ ಮಿಳಿತವಾದಾಗ ವಿಶ್ವಕ್ಕೆ ಲಭ್ಯ ಅರಾಜಕತೆ, ಕ್ರೌರ್ಯ, ಅಟ್ಟಹಾಸ. ಇವರನ್ನು ಬಲಿ ಹಾಕಲು ಪಾಕಿಸ್ತಾನದಿಂದ ಹಿಡಿದು ಅಂತಾರಾಷ್ಟ್ರೀಯ ಸಮುದಾಯದರೆಗೆ ಯಾರಿಗೂ ಇಚ್ಛೆಯಿಲ್ಲ. ಇದೂ ಒಂದು ರೀತಿಯ ರಾಜಕಾರಣ. ತಾನೇ ಪೋಷಿಸಿದ ಶಿಶು ರಾಕ್ಷಸನಾಗಿ ವರ್ತಿಸಲು ತೊಡಗಿದಾಗ ಅಮೇರಿಕಾ ಎಚ್ಚೆತ್ತು ಅವರನ್ನು ಹದ್ದು ಬಸ್ತಿಗೆ ತರಲು ಯತ್ನಿಸಿತು. ಇದರ ನಡುವೆ ತಾಲಿಬಾನಿಗಳೊಂದಿಗೆ ಚರ್ಚೆ ಕೂಡಾ. ಏಕೆಂದರೆ ಇವರನ್ನು ಸಂಪೂರ್ಣ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕೆಗೆ ಇತಿಹಾಸದ ಪಾಠಗಳು ನೆನಪು ಮಾಡುತ್ತವೆ. ಈ ದ್ವಂದ್ವಗಳ ನಡುವೆ ತಾಲಿಬಾನ್ ತನಗೆ ತೋಚಿದ ರೀತಿಯಲ್ಲಿ ವರ್ತಿಸುತ್ತದೆ. ಇವರಿಗೆ ಹೆಣ್ಣುಮಗಳು ಎಂದರೆ ಮನೆಯ ನಾಲ್ಕು ಗೋಡೆಗಳ ಮಧ್ಯೆ, ಶಿಕ್ಷಣ ಪಡೆಯದೇ ಬದುಕಬೇಕಾದ ಹೆರುವ ಯಂತ್ರಗಳು. ಯಾರಾದರೂ ಧೈರ್ಯ  ಮಾಡಿ ಶಾಲೆಗೆ ಹೋಗುತ್ತೇವೆ ಎಂದರೆ ಮೊದಲು ಬೆದರಿಕೆ, ನಂತರ ಬಂದೂಕು. ಮಲಾಲಾ ಎನ್ನುವ ಪೋರಿಗೆ ಸಿಕ್ಕಿದ್ದು ಇವೆರಡು. ಬೆದರಿಕೆಗೆ ಸೊಪ್ಪು ಹಾಕದೆ ಶಾಲೆಯ ಕಡೆ ನಡೆಯುತ್ತಿದ್ದ ಈಕೆ ತಾಲಿಬಾನಿಗಳಿಗೆ ಕಣ್ಣುರಿ ತರುತ್ತಿದ್ದಳು. ಇಷ್ಟೊಂದು ಚಿಕ್ಕ ಹುಡುಗಿ ತಮ್ಮಂಥ ರಾಕ್ಷಸರನ್ನು ಎದುರಿಸುತ್ತಿದ್ದಾಳಲ್ಲ ಎಂದು. ಬೆದರಿಕೆ ಫಲಿಸದಾದಾಗ ಬಂದೂಕು ಚಲಾಯಿಸಿದರು. ತಲೆಯನ್ನ  ಹೊಕ್ಕು ಹೊರಬಂದ ಗುಂಡು ಸಹ ಮಲಾಲಾ ಳನ್ನು ಕೊಲ್ಲಲು ನಿರಾಕರಿಸಿತು. ಅದ್ಭುತವಾಗಿ ಸಾವಿನಿಂದ ಪಾರಾದ ಮಲಾಲಾ ಹೆಚ್ಚುವರಿ ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲು ಅರಬ್ ಸಂಯುಕ್ತ ಸಂಸ್ಥಾನಗಳ ಆಳುವ ಕುಟುಂಬದ ಕಡೆಯಿಂದ ‘ಏರ್ ಅಂಬುಲೆನ್ಸ್’ ನ ನೆರವು ಸಿಕ್ಕಿತು. ಈಕೆಯ ಚಿಕತ್ಸೆ ಫಲಕಾರಿಯಾಗಲು ಇಡೀ ವಿಶ್ವ ದೇವರನ್ನು ಬೇಡುತ್ತಿದೆ.

ಮಲಾಲಳ ಮೇಲಿನ ಹಲ್ಲೆಯನ್ನು ಖಂಡಿಸುತ್ತಾ ಪಾಕಿಸ್ತಾನದ ರಾಜಕಾರಣಿ ಹೇಳಿದ್ದು, ತಾಲಿಬಾನ್ ಕರಾಳ ಶಕ್ತಿಗಳ ಗುಂಪಾಗಿದ್ದು, ಧರ್ಮ ಸಂಸ್ಕಾರ ವಿಹೀನರು ಎಂದು ಕಟುವಾಗಿ ಟೀಕಿಸಿದರು. ಮಲಾಲಾಳ ಮೇಲಿನ ಹಲ್ಲೆಕೋರರನ್ನು ಹಿಡಿದು ಕೊಟ್ಟವರಿಗೆ ಒಂದು ಕೋಟಿ ರೂಪಾಯಿಯ ಬಹುಮನವನ್ನು ಪಾಕ್ ಘೋಷಿಸಿದೆ.

ಮಹಿಳೆಯರಿಗೆ ಶಿಕ್ಷಣ ಕೂಡದು ಎನ್ನುವ ಐಡಿಯಾ ತಾಲಿಬಾನ್ ಗೆ ಕೊಟ್ಟವರಾರು ಎನ್ನುವುದು ತಿಳಿಯುತ್ತಿಲ್ಲ. ವೇಷದ ಸಹಾಯದಿಂದ ಮುಸ್ಲಿಮರ ಥರ ಕಾಣುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸುವ ದುಷ್ಟ ಶಕ್ತಿಗಳ ಸಂಗಮ ‘ತಾಲಿಬಾನ್’ ವರ್ತನೆಗೂ ಇಸ್ಲಾಂ ನ ಜನ್ಮ ಸ್ಥಳ ಸೌದಿ ಅರೇಬಿಯಾದ ನೀತಿಗೂ ಇರುವ ವ್ಯತ್ಯಾಸ ನೋಡಿ. ಇಸ್ಲಾಂ ನ  ತವರೂರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ  ರಾಜಕುಮಾರಿ ‘ನೂರಾ ಬಿಂತ್ ಅಬ್ದುಲ್ ರಹಮಾನ್’ ಮಹಿಳಾ ವಿಶ್ವವಿದ್ಯಾಲಯ ವಿಶ್ವದಲ್ಲೇ ಅತಿ ದೊಡ್ಡದು. 30 ಲಕ್ಷ ಚದರ ಮೀಟರುಗಳ ವಿಸ್ತೀರ್ಣದ ಈ ವಿಶ್ವ ವಿದ್ಯಾಲಯದಲ್ಲಿ ೨೬,೦೦೦ ವಿದ್ಯಾರ್ಥಿನಿಯರು ಕಲಿಯಬಹುದು. ವಿಶ್ವದ ಪ್ರತಿಭಾವಂತ ಪ್ರೊಫೆಸರ್ ಗಳನ್ನ ಆಕರ್ಷಿಸಲು ಸೌದಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತಿದೆ. ಈಗಿನ ರಾಜ ಅಬ್ದುಲ್ಲಾ ರ ಕನಸಿನ ಪ್ರಾಜೆಕ್ಟ್ ಈ ವಿಶ್ವವಿದ್ಯಾಲಯ.

ಹಲವು ಮುಸ್ಲಿಂ ದೇಶಗಳ ಪ್ರಧಾನಿಗಳಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮುಸ್ಲಿಂ ಮಹಿಳೆಯರಿಗೆ ತಮ್ಮ ದೇಶಗಳಲ್ಲಿ ಧಾರ್ಮಿಕ ಪಂಡಿತರಿಂದ ಯಾವುದೇ ತೊಡಕಾಗಲೀ, ಫತ್ವಾ ಗಳಾಗಲೀ ಎದುರಾಗಲಿಲ್ಲ. ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಈಜಿಪ್ಟ್ ದೇಶದ ಆಡಳಿತಗಾರ್ತಿಯಾಗಿ  ರಾಣಿ ‘ಶಜರ್ ಅಲ್-ದುರ್’ ಯಶಸ್ವಿಯಾಗಿದ್ದಳು. ವಿಧವೆಯಾಗಿದ್ದ ಈಕೆ ಕ್ರೈಸ್ತರ ಏಳನೆ ಧರ್ಮಯುದ್ಧ (ಕ್ರುಸೇಡ್) ದ ಮೇಲೆ ವಿಜಯ ಸಾಧಿಸಿದ್ದಳು.

ಪ್ರವಾದಿ ಮುಹಮ್ಮದರ ಪತ್ನಿ ‘ಆಯಿಷಾ’ ರಿಂದ ಪ್ರವಾದಿ ಅನುಚರರು ಅತೀ ಹೆಚ್ಚಿನ ಪ್ರವಾದಿ ವಚನಗಳನ್ನು ಸಂಗ್ರಹಿಸಿದ್ದರು. ಧರ್ಮದ ಅಥವಾ ರಾಜಕಾರಣದ ಯಾವುದೇ ವಿಷಯದಲ್ಲೂ ಅನುಮಾನ ಗಳು ತಲೆದೋರಿದಾಗ ಪ್ರವಾದೀ ಅನುವರ್ತಿಗಳು ಆಯಿಷಾ ರ ಗುಡಿಸಿಲಿನ ಕಡೆ ಧಾವಿಸುತ್ತಿದ್ದರು. ತನ್ನ ಮನೆಯ ಅಂಗಳದಲ್ಲಿ ಧರ್ಮ ಬೋಧನೆ ನಡೆಸುತ್ತಿದ್ದ ಆಯಿಷಾ ರಿಗೆ ವಿಶ್ವದ ಮೊಟ್ಟ ಮೊದಲ ‘ಮದ್ರಸಾ’ ದ ಸ್ಥಾಪಕರು ಎನ್ನುವ ಖ್ಯಾತಿ.

ಪ್ರವಾದಿಗಳ ನಿಧನಾ ನಂತರ ‘ಖಲೀಫಾ ಉಸ್ಮಾನ್’ ಪವಿತ್ರ ಕುರ್’ಆನ್ ಗ್ರಂಥವನ್ನು ಬರಹದ ರೂಪದಲ್ಲಿ ತರಲು ತೀರ್ಮಾನಿಸಿ ಪ್ರಥಮ ಆವೃತ್ತಿಯನ್ನು ದಿವಂಗತ ಖಲೀಫಾ ಉಮರ್ ರವರ ಪುತ್ರಿಗೆ ಗ್ರಂಥವನ್ನು ಸುರಕ್ಷಿತವಾಗಿ ಇಡುವ ಜವಾಬ್ದಾರೀ ನೀಡಿದ್ದರು. ಮಹಿಳೆಯರಿಗೆ ಈ ಜವಾಬ್ದಾರೀ ನೀಡಬಾರದು ಎನ್ನುವ ಪರಿಕಲ್ಪನೆ ಅವರಲ್ಲಿರಲಿಲ್ಲ. ಮಹಿಳೆಯ ‘ವಧುದಕ್ಷಿಣೆ’ ವಿಷಯದಲ್ಲಿ ಖಲೀಫಾ ಉಮರ್ ತಪ್ಪಾದ ನಿರ್ಣಯ ನೀಡುವುದನ್ನು ಗಮನಿಸಿದ ಮಹಿಳೆಯೊಬ್ಬಾಕೆ ಕುರ್’ಆನ್ ಗ್ರಂಥದ ಆಧಾರದಲ್ಲಿ ಆ ತಪ್ಪನ್ನು ತಿದ್ದಿದಾಗ ಒಪ್ಪಿಕೊಂಡ ಖಲೀಫಾ ಉಮರ್ ಹೇಳಿದ್ದು, ಈ ಮಹಿಳೆ ಖಲೀಫಾನ ಮೇಲೆ ಗೆಲುವು ಸಾಧಿಸಿದಳು ಎಂದು.

ಈ ಮೇಲಿನ ಉದಾಹರಣೆಗಳೊಂದಿಗೆ ಇಸ್ಲಾಂ ಮಹಿಳೆಗೆ ಕೊಡಮಾಡಿದ ಹಕ್ಕುಗಳನ್ನು ನೋಡಿದಾಗ ತಾಲಿಬಾನ್ ಯಾವುದೇ ರೀತಿಯಲ್ಲಿ ಇಸ್ಲಾಂ ನ ಆದರ್ಶಗಳಿಗೆ ಪ್ರತಿ ಸ್ಪಂದಿಸದೆ ಕೇವಲ ಸ್ತ್ರೀ ಧ್ವೇಷಿ ಮತ್ತು ನರಸಂಹಾರಕ ಸ್ಯಾಡಿಸ್ಟ್ ಗಳ ಒಂದು ರಾಕ್ಷಸೀ ಸಂಘಟನೆ ಎಂದು ಹೇಳಬಹುದು. ಆಫ್ಘಾನಿಸ್ಥಾನ ದ ರಷ್ಯನ್ ಸೈನ್ಯವನ್ನು, ಕಮ್ಯುನಿಸ್ಟ್ ಪ್ರಭಾವವನ್ನು ಮಟ್ಟ ಹಾಕಲು, ತಾಲಿಬಾನ್ ನ ಸಹಾಯ ಪಡೆದ ಅಮೇರಿಕಾ ತಾಲಿಬಾನ್ ನ ಶಕ್ತಿಗೆ ಬೆನ್ನೆಲುಬಾಗಿ ನಿಂತಿದ್ದೆ ಒಂದು ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು. ಕಮ್ಯುನಿಷ್ಟ್ ನ ನಿರ್ನಾಮದೊಂದಿಗೆ ‘ಇಸ್ಲಾಮಿಸ್ಟ್’ ಎನ್ನುವ ಭಸ್ಮಾಸುರ ನ ಸೃಷ್ಟಿಗೂ ಅಮೇರಿಕಾ ಕಾರಣಕರ್ತವಾಯಿತು. ತಾಲಿಬಾನ್ ಶಕ್ತಿಗಳ ನಿಗ್ರಹ ಮತ್ತು ಸಂಪೂರ್ಣ ನಿರ್ಮೂಲನೆ ನಾಗರೀಕ ಸಮಾಜದ ಆದ್ಯ ಕರ್ತವ್ಯ ವಾಗಬೇಕು. ಮಲಾಲಾ ಳ ಮೇಲೆ ನಡೆದ ವಿವೇಚನಾ ರಹಿತ ಕ್ರೂರ ಹಲ್ಲೆ ವಿಶ್ವದಾದ್ಯಂತ ನಾಗರೀಕ ಸಮಾಜವನ್ನು ಭೀತ ಗೊಳಿಸಿದರೂ ಸ್ವಾತ್ ಕಣಿವೆಯ ಹೆಣ್ಣು ಮಕ್ಕಳು ಮಾತ್ರ ತಾವು ತಾಲಿಬಾನ್ ಸೈತಾನಕ್ಕೆ ಬೆದರುವ ಹೆಣ್ಣುಮಕ್ಕಳಲ್ಲ ಎಂದು ಈ ಹೇಳಿಕೆಯೊಂದಿಗೆ ಸಾರಿದರು – “ಸ್ವಾತ್” ಕಣಿವೆಯ ಪ್ರತಿಯೊಬ್ಬ ಹೆಣ್ಣು ಮಗಳೂ ಓರ್ವ ಮಲಾಲಾ, ನಾವು ವಿದ್ಯೆ ಪಡೆದೇ ಸಿದ್ಧ, ಅವರು ನಮ್ಮನ್ನು ಸೋಲಿಸಲಾರರು” – ದಿಟ್ಟ ಮಾತುಗಳು ಮಲಾಲಾ ಳ ಗೆಳತಿಯರಿಂದ.

ಮಲಾಲಾ ಹೆಸರಿನ ಆರ್ಥ ಶೌರ್ಯ, ಧೈರ್ಯ, ‘ಪುಷ್ತು’ ಭಾಷೆಯಲ್ಲಿ. ರಾಕ್ಷಸರಿಗೆ ಹೆದರದೆ ಹೆಸರಿಗೆ ತಕ್ಕಂತೆ ನಡೆದುಕೊಂಡ ಮಾಲಾಲಾಳಿಗೆ ಅವಳ ದಿಟ್ಟ ಹೋರಾಟಕ್ಕೆ ಶುಭ ಹಾರೈಸೋಣ.

 

 

ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ

ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ, ಕಂತೆಗೆ ತಕ್ಕ ಬೊಂತೆ. ಈ ಗಾದೆಗಳನ್ನು ಕೇಳಿಯೇ ಇರುತ್ತೀರಿ. ನೀವೆಷ್ಟು ಪೀಕಲು  ತಯಾರೋ ಅಷ್ಟು ಮಜಬೂತಾದ ಫಲ ನಿಮಗೆ ಸಿಗುತ್ತದೆ.

ನನ್ನೂರು ಭದ್ರಾವತಿಗೆ ಹೋಗಿದ್ದಾಗ ನಡೆದ ಘಟನೆ. ಹರಟುತ್ತಾ ಇರುವಾಗ ಮನೆಯ ಹತ್ತಿರ ಇರುವ ಮಸ್ಜಿದ್ ನ ಬಗ್ಗೆ ಮಾತು ಬಂತು. ನಮಾಜ್ ನ ಸಮಯ ಕೊಡುವ ‘ಅದಾನ್’ (ಪ್ರಾರ್ಥನಾ ಕರೆ) ಅಲ್ಲಿದ್ದ ನಮ್ಮ ಪರಿಚಯದ ವ್ಯಕ್ತಿಯೊಬ್ಬರು ಕೊಡುತ್ತಿದ್ದರು. ಒಂದು ದಿನ “ಕರೆ” ಮುಗಿದ ಕೂಡಲೇ ಮಸ್ಜಿದ್ ನ ಪದಾಧಿಕಾರಿಯೊಬ್ಬರು ಕೇಳಿದರು, “ನೀವು ಕೊಡುವ ಅದಾನ್ ಸ್ವಲ್ಪ ಬೇಗನೆ ಮುಗಿದು ಬಿಡುತ್ತದೆ, ಇನ್ನಷ್ಟು ರಾಗವಾಗಿ ಕೊಡಬಾರದೇ” ಎಂದು ನಯವಾಗಿ ಆಕ್ಷೇಪಿಸಿದರು. ತನ್ನ ಮೇಲೆ ಎರಗಿ ಬಂದ ಆಕ್ಷೇಪದಷ್ಟೇ ನಯವಾಗಿ ಅದಾನ್ ಕೊಡುವ ವ್ಯಕ್ತಿ ‘ನೀವು ಕೊಡುವ ಸಂಬಳಕ್ಕೆನಾನು ಕೊಡುತ್ತಿರುವ “ಆದಾನ್” ನ್ಯಾಯವಾಗೇ ಇದೆ, ಹೆಚ್ಚು ಕೊಟ್ಟರೆ ಇನ್ನಷ್ಟು ದೀರ್ಘವಾಗಿ, ರಾಗವಾಗಿ ಕೊಡುವೆ’ ಎಂದು ಉತ್ತರಿಸಿದರು. ಇದನ್ನು ಕೇಳಿ ನನಗೆ ತಬ್ಬಿಬ್ಬು, ದೇವರ ಕಾರ್ಯಕ್ಕೂ ಕಾಂಚಾಣದ ನಂಟು ಬೇಕೇ ಎಂದು.

ಮಸ್ಜಿದ್ ನ ಸಧ್ಯದ ಹಣಕಾಸು ಪರಿಸ್ಥಿತಿ ನೋಡಿದಾಗ ಸುದೀರ್ಘ, ಸುಶ್ರಾವ್ಯ ಅದಾನ್ ಕೇಳುವ ಭಾಗ್ಯ ಆಕ್ಷೇಪಿಸಿದ ವ್ಯಕ್ತಿಗೆ ಲಭಿಸುವ ಯೋಗ ಇಲ್ಲ.

ಜಪಾನ್ ದೇಶದ ಜನಸಂಖ್ಯೆ ವರ್ಷ ಕಳೆದಂತೆ ಇಳಿಮುಖ

ಜಪಾನ್ ದೇಶದ ಜನಸಂಖ್ಯೆ ವರ್ಷ ಕಳೆದಂತೆ ಇಳಿಮುಖ ವಾಗುತ್ತಿದ್ದು ಕಂಪೆನಿಗಳು, ಸರಕಾರಗಳು, ಮಾರುಕಟ್ಟೆಗಳು ಜನರನ್ನು ಹುರಿದುಂಬಿಸುತ್ತಿವೆ ಮಕ್ಕಳನ್ನು ಹೆರಲು. ತಮ್ಮ ಜೋಡಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಕಂಪೆನಿಗಳ ಉತ್ತೇಜನದಿಂದ ಹಿಡಿದು ದೊಡ್ಡ ಕುಟುಂಬಕ್ಕೆ ಶಾಪಿಂಗ್ ವೌಚರ್ ಪ್ರದಾನ ಮಾಡುವವರೆಗೆ ಆಮಿಷಗಳು galore ಈ ದೇಶದಲ್ಲಿ.

ಜಪಾನೀಯರು ನೀರಸ ಸಂಭೋಗಿಗಳು. ತಮ್ಮ ಅಜೆಂಡಾ ದಲ್ಲಿ ಸಂಭೋಗಕ್ಕೆ ಕೊನೆಯ ಸ್ಥಾನ. ಜಪಾನೀ ಜೋಡಿ ಲೈಂಗಿಕವಾಗಿ ವರ್ಷದಲ್ಲಿ ೪೫ ಸಲ ಮಾತ್ರ ಕೂಡುತ್ತಾರಂತೆ. ಅದೇ ಸಮಯ ಜಾಗತಿಕ ಸರಾಸರಿ ವರ್ಷಕ್ಕೆ ೧೦೩ ಸಂಭೋಗ ಗಳು (ಅಷ್ಟೇನಾ.., ಏನಾಗಿದೆ ಹೈಕ್ಳುಗಳಿಗೆ? ).  ಸರಾಸರಿಗಿಂತ ಅರ್ಧಕ್ಕೂ ಕಡಿಮೆ. ಈ ನಿರಾಸಕ್ತಿಗೆ ಸೋಮಾರಿತನವೋ, ಸಮಯದ ಅಭಾವವೋ (ಮೂರೂವರೆ ನಿಮಿಷಕ್ಕೂ ‘ಬರ’ ವೋ?) ಅಥವಾ ಮತ್ಯಾವುದಾದರೂ ಜೈವಿಕ ಕಾರಣವೋ ಅಲ್ಲ. ಶಯ್ಯಾ ಗೃಹದ ಚಟುವಟಿಕೆ ಚಾತುರ್ಯಕ್ಕಿಂತ ಬೋರ್ಡ್ ರೂಂ, ಕ್ಯೂಬಿಕಲ್ ಗಳಲ್ಲಿ ಹೆಚ್ಚು ಸಾಮರ್ಥ್ಯ ತೋರಿಸುವ “ಕೆರಿಯರ್ ಡ್ರಿವನ್” ಗುರಿ. ಅಷ್ಟು ಮಾತ್ರವಲ್ಲ, ಜಪಾನೀಯರು ತಡವಾಗಿ ಮದುವೆಯಾಗುತ್ತಾರೆ. ಮದುವೆಯಾಗಲು  ತಡವಾದಾಗ ಎಲ್ಲವೂ ತಡವೇ. ಅಲ್ವಾ?

ಜಪಾನ್ ನ ಈಗಿನ ಜನಸಂಖ್ಯೆ ಸುಮಾರು ೧೩ ಕೋಟಿ. ಬೆಡ್ ರೂಂ ನ ಬಹಿಷ್ಕಾರ ಹೀಗೇ ಮುಂದುವರೆದರೆ 2105 ರ ಹೊತ್ತಿಗೆ ಜಪಾನ್ ಜನಸಂಖ್ಯೆ ಕೇವಲ ನಾಲ್ಕೂವರೆ ಕೋಟಿಯಾಗುತ್ತಂತೆ. ಹಾಗಾಗಿ ಸರಕಾರ, ಮತ್ತು ವ್ಯವಸ್ಥೆ ಹೇಗಾದರೂ ಜೋಡಿಗಳನ್ನು “ಚಂದ್ರ ಮಂಚ” ಕೆ  ನೂಕಲು ಉತ್ಸುಕತೆ ತೋರಿಸುತ್ತಿರುವುದು.

ಕಾರ್ಮಿಕರ  ಕೊರತೆ ನೀಗಿಸಲು “ರೋಬೋಟ್” ಕಂಡು ಹಿಡಿದ ಜಪಾನ್ ಜನಸಂಖ್ಯೆಯ ಇಳಿತವನ್ನು ತಡೆಯಲು ಯಾವ ಯಂತ್ರ ಕಂಡು ಹಿಡಿಯಬಹುದೇನೋ?