ಪೌಷ್ಠಿಕಾಂಶ ಮತ್ತು ಸೌಂದರ್ಯ ಪ್ರಜ್ಞೆ

ಗುಜರಾತ್ ದೇಶದ ಅತ್ಯಂತ ಮುಂದುವರಿದ ರಾಜ್ಯ, ಇತರೆ ರಾಜ್ಯಗಳಿಗೆ ಮಾದರಿ ರಾಜ್ಯ, ಗುಜರಾತ್ ನ ಅಮೋಘ ಸಾಧನೆಗೆ ನರೇಂದ್ರ ಮೋದಿಯ ನಾಯಕತ್ವ ಕಾರಣ, ಹಾಗೆ, ಹೀಗೆ ಎಂದು ಪುಂಖಾನು ಪುಂಖವಾಗಿ ಪ್ರಶಂಸೆಗಳು ಮೊಳಗಿದವು. ಈ ಪ್ರಶಂಸೆಯ ಹಿಂದೆ ಯಾವುದೇ ನಿಷ್ಪಕ್ಷಪಾತೀ ಸಂಸ್ಥೆಗಳಿರಲಿಲ್ಲ, ಬದಲಿಗೆ ಮೋದಿಯ ಗುಣಗಾನ ಮಾಡಲು ಸನ್ನದ್ಧ ವಾದ ಸೇನೆ ಮೋದಿಯನ್ನು ಹೇಗಾದರೂ ಮಾಡಿ ಗುಜರಾತ್ ನ ಭೀಕರ, ಭೀಭತ್ಸ ಗುಜರಾತ್ ಹತ್ಯಾಕಾಂಡದ ಮಸಿಯನ್ನು ತೊಳೆದು ಆತನನ್ನು ಒಬ್ಬ ಒಳ್ಳೆಯ, ದಕ್ಷ, ಸಮರ್ಥ ರಾಜಕಾರಣಿ ಎಂದು ಪ್ರಪಂಚಕ್ಕೆ ಬಿಂಬಿಸುವುದೇ ಆಗಿತ್ತು. ಆದರೆ, ಗುಜರಾತ್ ಗಿಂತ ನೀತೀಶ್ ಕುಮಾರ್ ಮುನ್ನಡೆಸುವ ಬಿಹಾರ್ ಅಭಿವೃದ್ಧಿಯಲ್ಲಿ ಮುಂದೆ ಎಂದು ಎಲ್ಲರಿಗೂ ತಿಳಿಯಲು ಬಹಳ ಕಾಲ ಬೇಕಾಗಲಿಲ್ಲ. ಗುಜರಾತ್ ಹತ್ಯಾಕಾಂಡದ ಕಾರಣ ನರೇಂದ್ರ ಮೋದಿ ಬರೀ ದೇಶದಲ್ಲಿ  ಮಾತ್ರವಲ್ಲ ಅಂತಾರಾಷ್ಟ್ರೀಯವಾಗಿಯೂ ಚಿರಪರಿಚಿತ. ಬಹುಶಃ ಮಹಾತ್ಮ ಗಾಂಧಿಯ ನಂತರ ನರೇಂದ್ರ ಮೋದಿಯದು ಹೆಚ್ಚು ಪರಿಚಿತ ಹೆಸರು ಎಂದರೂ ಉತ್ಪ್ರೇಕ್ಷೆ ಯಾಗಲಾರದು. ಕಾಕತಾಳೀಯವೆಂಬಂತೆ ಈ ಈರ್ವರೂ ಗುಜರಾತ್ ಮೂಲದವರು. ಬೇರೆ, ಬೇರೆ ಕಾರಣಗಳಿಗಾಗಿ ಹೆಸರು ಮಾಡಿದವರು.

ಇತ್ತೀಚೆಗೆ ನರೇಂದ್ರ ಮೋದಿಯ ಸಂದರ್ಶನ ಅಮೆರಿಕೆಯ ಸುಪ್ರಸಿದ್ಧ ಪತ್ರಿಕೆಯಾದ “ವಾಲ್ ಸ್ಟ್ರೀಟ್ ಜರ್ನಲ್” ನಲ್ಲಿ ಪ್ರಕಟವಾಯಿತು. ಸಂದರ್ಶನದಲ್ಲಿ ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಗುಜರಾತೀ ಮಕ್ಕಳ ಬಗ್ಗೆ ಕೇಳಿದಾಗ ನರೇಂದ್ರ ಮೋದಿ ಕೊಟ್ಟ ಉತ್ತರ ವಾಲ್ ಸ್ಟ್ರೀಟ್ ಜರ್ನಲ್ ಮಾತ್ರವಲ್ಲ ವಿಶ್ವವನ್ನೇ ದಂಗು ಬಡಿಸಿತು. “ಗುಜರಾತ್ ಒಂದು ಮಧ್ಯಮ ದರ್ಜೆಯ ಜನ ಇರುವ ರಾಜ್ಯ. ಈ ಜನರಿಗೆ ತಮ್ಮ ಶರೀರ ಸೌಂದರ್ಯದ ಕಾಳಜಿ ಹೆಚ್ಚು ಇದ್ದು, ಆಧುನಿಕತೆ ಬಯಸುವಂತೆ ಅವರು ಯಾವಾಗಲೂ ಕೃಶರಾಗಿಯೇ ಇರಲು ಇಷ್ಟ ಪಡುತ್ತಾರೆ” ಎಂದು ಮೋದಿ ಉತ್ತರಿಸಿದಾಗ ಸಂದರ್ಶನ ನಡೆಸುತ್ತಿದ್ದ ವ್ಯಕ್ತಿಯ ಮುಖವನ್ನ ನಾವು ಊಹಿಸಿಕೊಳ್ಳಬಹುದು. ಬಿದ್ದರೂ ಮೀಸೆ ಮಣ್ಣಾಗಲಿಲ್ಲ. ಈ ಮಾತಿಗೆ ನಿಷ್ಠವಾಗಿ ನಡೆದುಕೊಂಡ ಗುಜರಾತಿನ ಮು. ಮಂತ್ರಿ ಇನ್ನೂ ಎಷ್ಟು ಕಾಲ ನಮ್ಮ ದೇಶವನ್ನು ಮತ್ತು ಪ್ರಪಂಚವನ್ನು ಬ್ಲಫ್ ಮಾಡುತ್ತಾ ಕಳೆಯಬಹುದು ಎಂದು ಯಾರಿಗೂ ತಿಳಿಯದು. ಪೌಷ್ಟಿಕಾಂಶದ ಕೊರತೆ ಮತ್ತು ಸೌಂದರ್ಯ ಪ್ರಜ್ಞೆಯ ವಿತಂಡವಾದದ ಸಹಾಯದಿಂದ, ‘ಮೋದಿ ಫಾರ್ಮುಲಾ’ ವನ್ನು ಬಳಸಿಕೊಂಡು ನಮ್ಮನ್ನು ಕಾಡುತ್ತಿರುವ ಇನ್ನಷ್ಟು ಸಾಮಾಜಿಕ ಸಮಸ್ಯೆಗಳಿಗೆ ಸುಂದರವಾದ ಸಮಜಾಯಿಷಿ ಕೊಟ್ಟು ಜನರಿಗೆ ಚಳ್ಳೆ ಹಣ್ಣು ತಿನ್ನಿಸಬಹುದು. ಭಾರತದ ಬಹುಪಾಲು ಜನ ಏಕೆ ಬಟಾ ಬಯಲಿನಲ್ಲಿ, ರೈಲು ಹಳಿಗಳ ಹತ್ತಿರ ಶೌಚಕ್ಕೆ ಹೋಗುತ್ತಾರೆ ಎಂದು ಯಾರಾದರೂ ಕೇಳಿದರೆ, ನಮ್ಮ ಉತ್ತರ, ಶೌಚದ ಕೊರತೆ ಕಾರಣ ಅಲ್ಲ, ನಮ್ಮ ಜನ ನಿಸರ್ಗದ ಮಧ್ಯೆ, ತಂಗಾಳಿಯೊಂದಿಗೆ ಆಡುತ್ತಾ, ಸೊಳ್ಳೆ ಗಳಿಂದ ಕಚ್ಚಿಸಿಕೊಳ್ಳುತ್ತಾ ಶೌಚ ಮಾಡಲು ಇಷ್ಟ ಪಡುತ್ತಾರೆ ಎಂದು ಹೇಳಿ ವಿಜಯದ ನಗೆ ಬೀರಬಹುದು. ವ್ಯಾಪಕವಾಗಿ ಹರಡುತ್ತಿರುವ ಲಂಚ-ರಿಷುವತ್ತಿನ ಬಗ್ಗೆ ಕೇಳಿದರೆ ಅದನ್ನು ಲಂಚ ಎಂದು ಕರೆಯಬಾರದು, ನಮ್ಮ ಸಮಾಜ ಉಡುಗೊರೆ ಕೊಡುವ ವಿಚಾರದಲ್ಲಿ ಬಹಳ ಉದಾರೀ, ಹಾಗಾಗೀ ಉಡುಗೊರೆಯನ್ನು ಸ್ವಲ್ಪ ಸಲುಗೆಯಿಂದ, ಸ್ವಲ್ಪ ಬಲವಂತವಾಗಿ ಜನರಿಂದ ವಸೂಲು ಮಾಡುತ್ತದೆ ಅಧಿಕಾರೀಶಾಹೀ ಅಷ್ಟೇಯ ಎಂದು ಕಳ್ಳ ನಗೆ ನಗಬಹುದು. ವಾಲ್ ಸ್ಟ್ರೀಟ್ ಜರ್ನಲ್ ವಿಶ್ವದ ಪ್ರಮುಖ ವ್ಯಕ್ತಿಗಳು, ಆಡಳಿತಗಾರರು, ಉದ್ಯಮಿಗಳು ಓದುವ ಪತ್ರಿಕೆ. ಈಗ ಊಹಿಸಿ, ಭಾರತದ ನೆತಾರನೊಬ್ಬ ಈ ತೆರನಾದ ಉತ್ತರ ಕೊಡುತ್ತಾ ಹೋದರೆ ಆಗುವ ಪರಿಣಾಮ.

ಮಾತನಾಡುವ ಅಪರೂಪದ ಗುಣವನ್ನ ದೇವರು ಮನುಷ್ಯನಿಗೆ ದಯಪಾಲಿಸಿದ್ದು ಬಹುಶಃ ಇದೇ ಕಾರಣಕ್ಕಾಗಿ ಇರಬಹುದು. ತಾನಾಡುವ ಮಾತಿನ ಮೂಲಕ ಮನುಷ್ಯ ತನ್ನ ಅಳತೆ, ಯೋಗ್ಯತೆ ಎಷ್ಟರ ಮಟ್ಟಿನದು ಎಂದು ವಿಶ್ವಕ್ಕೆ ಸಾರಲಿ ಎಂದಿರಬಹುದು ಅವನ ಉದ್ದೇಶ. ದೇವರ ಆಟ ನಿಗೂಢ, ಅಲ್ಲವೇ?

ಲೋಕಸಭೆಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ನರೇಂದ್ರ ಮೋದಿಯನ್ನು ಭಾವೀ ಪ್ರಧಾನಿಯನ್ನಾಗಿ ಬಿಂಬಿಸಲಾಗುತ್ತಿದೆ. ಮಿತ್ರಪಕ್ಷಗಳ ವಿರೋಧದ ನಡುವೆಯೂ ಹಿಂದುತ್ವ ರಾಷ್ಟ್ರ ವಾದೀ ಭಾ.ಜ.ಪ. ಕ್ಕೆ ನರೇಂದ್ರ ಮೋದಿಯ ವ್ಯಕ್ತಿತ್ವ ಟ್ರಂಪ್ ಕಾರ್ಡ್ ಆಗಿ ಕಾಣುತ್ತಿದೆ. ಬಿಹಾರದ ಶ್ರೀಯುತ ನಿತೀಶ್ ಕುಮಾರ್ ಅವರಂತೂ ನಮ್ಮ ದೇಶಕ್ಕೆ ಪ್ರಧಾನಿಯಾಗುವ ವ್ಯಕ್ತಿ ‘ಮತಾಂಧ ಚಹರೆ’ (fanatic face) ಯುಳ್ಳವನಾಗಿರುವುದು ಬೇಡ ಎಂದು ಸಾರಿ NDA ವಲಯದಲ್ಲಿ ಒಂದು ಕಂಪನವನ್ನೇ ಎಬ್ಬಿಸಿದರು. ಮಹಾ ಚುನಾವಣೆ ಸನ್ನಿಹಿತವಾಗುತ್ತಿದೆ. ಪ್ರಧಾನಿ ಹುದ್ದೆಗೆ ಯಾವ ಅಭ್ಯರ್ಥಿ ಸೂಕ್ತ ಎನ್ನುವುದು ಭಾಜಪ ದ ಆಂತರಿಕ ವಿಷಯ. ಆದರೆ ದೇಶದ ಭಾವೀ ಪ್ರಧಾನಿ ವಿದೇಶೀ ಪತ್ರಿಕೆಯೊಂದರ ಸಂದರ್ಶನದ ವೇಳೆ ಲಘುವಾಗಿ, ಉಡಾಫೆಯಾಗಿ ಮಾತನಾಡಿದರೆ ವಿಶ್ವ ಮಟ್ಟದಲ್ಲಿ ನಮಗಾಗುವ ಅವಮಾನ, ಮುಜುಗುರ ಅಳೆಯಲು ರಾಜಕೀಯ ಪಂಡಿತರ ಅಗತ್ಯ ಬೀಳಲಿಕ್ಕಿಲ್ಲ. ಪ್ರಧಾನಿಯ ಆಯ್ಕೆಯಲ್ಲಿ ಅಲ್ಪಕಾಲೀನ ಲಾಭ, ಭಾವೋದ್ವೇಗ ನಿರ್ಣಾಯಕವಾಗುವುದು ಬೇಡ. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವ್ಯಕ್ತಿ ಅಲಂಕರಿಸಲಿ ಪ್ರಧಾನಿ ಗದ್ದುಗೆಯನ್ನು. ಅದರೊಂದಿಗೆ ನಮ್ಮ ಭವಿಷ್ಯದ ಪ್ರಧಾನಿ ವಿದೇಶಗಳಲ್ಲೂ ಸ್ವಾಗತಾರ್ಹ ವ್ಯಕ್ತಿಯಾಗುವುದು ಅತ್ಯವಶ್ಯ.

2 thoughts on “ಪೌಷ್ಠಿಕಾಂಶ ಮತ್ತು ಸೌಂದರ್ಯ ಪ್ರಜ್ಞೆ

  1. SSNK's avatar Kumar ಹೇಳುತ್ತಾರೆ:

    http://blogs.wsj.com/indiarealtime/2012/08/30/everything-modi-said-on-malnutrition/

    I don’t know what is wrong in Narendra Modi’s statement?
    He has stated a fact. How does it humiliate anybody?

    And you are taking this statement to say that he is not a good fit for PM.
    But, there are hundreds of positive points for NM.
    And today he is considered to be the best candidate for PM and India will progress like Gujarat.

    There is not even a single communal riot in Gujarat in last 10 years.
    There is not a single terrorist activity in Gujarat in last 10 years.
    It is No.1 state for last many years.
    There is not a single case of corruption in Gujarat.
    Every investor wants to invest in Gujarat.
    80% of Muslim voters voted for BJP during last municipal elections.
    When whole of north India plunged into darkness, Gujarat was ready to share power with other states.
    NM has used Solar energy effectively and this has reduced the power requirements.
    And he has achieve all this inspite of 0 help from center and anti-propaganda by mainstream media.

    If you don’t like NM, that is fine. But, make opinions based on facts and truth. Don’t make opinions based on others influence.

ನಿಮ್ಮ ಟಿಪ್ಪಣಿ ಬರೆಯಿರಿ