ಮಾಯಾ, ಮಾಯ

ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಮಾಯಾವತಿಯ ಸೊಕ್ಕಿದ ಆನೆಗೆ ಜನ ಖೆಡ್ಡಾ ತೋಡಿ ಉರುಳಿಸಿದರು ಏರಿದ ಮದ ಇಳಿಯಲಿ ಎಂದು. ಕಳೆದ ಚುನಾವಣೆಯಲ್ಲಿ ಮುಸ್ಲಿಮರು ಮತ್ತು ಬ್ರಾಹ್ಮಣ ರನ್ನು ಒಂದುಗೂಡಿಸಿ ಒಂದು ಹೊಸ ರೀತಿಯ “ಸೋಷಲ್ ಇಂಜಿನಿಯರಿಂಗ್” ಪ್ರಯೋಗದ ಮೂಲಕ ಅಧಿಕಾರ ಕ್ಕೆ ಏರಿದ್ದ ದಲಿತ ನಾಯಕಿ ಮಾಯಾವತಿಗೆ ಜನ ಏನು ಬಯಸುತ್ತಾರೆ ಎನ್ನುವುದು ಅರಿಯದೆ ಹೋಯಿತು. ಈ ಸಲ ಸೋಷಲ್ ಇಂಜಿನಿಯರಿಂಗ್” ಬದಲು ಸಿಂಪಲ್ ಇಂಜಿನಿಯರಿಂಗ್ ಕೆಲಸ ಮಾಡಿತು. ಖೆಡ್ಡಾ ಇಂಜಿನಿಯರಿಂಗ್. ಮಾಯಾವತಿಯ ಅರಿವುಗೇಡಿತನಕ್ಕೆ ಜನ ತಕ್ಕ ಶಿಕ್ಷೆ ದಯಪಾಲಿಸಿದರು. ಅಧಿಕಾರ ಎನ್ನುವುದು ತನ್ನ ಸ್ವಾರ್ಥ ಸಾಧಿಸಲು, ತನ್ನ ಪ್ರತಿಮೆಗಳನ್ನು ಎಲ್ಲೆಂದರಲ್ಲಿ ಪ್ರತಿಷ್ಠಾಪಿಸಲು ಎಂದು ತಪ್ಪಾಗಿ ತಿಳಿದ ಮಾಯಾವತಿ ಈಗ ಕನಿಷ್ಠ ಐದು ವರ್ಷಗಳ ಕಾಲ ಉ. ಪ್ರದೇಶದ ರಾಜಕೀಯದಿಂದ ಮಾಯ. ಮುಲಾಯಂ ಸಿಂಗ್ ಯಾದವ್ ರ ಸಮಾಜವಾದಿ ಪಕ್ಷ ತಮ್ಮ ಮಗ ಅಖಿಲೇಶ್ ನ energetic ಪ್ರಚಾರದ ಕಾರಣ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು.

crown prince ರಾಹುಲ್ ಗಾಂಧಿಯ ಚಮತ್ಕಾರ ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ ತಂದು ಕೊಡಲಿಲ್ಲ. ಭಾರತದ ರಾಜಕೀಯ ಕ್ಷಿತಿಜಕ್ಕೆ ಮತ್ತೊಂದು crown prince ನ ಆಗಮನ ಅಖಿಲೇಶ್ ಯಾದವ್ ನ ಯಶಸ್ವೀ ಪ್ರಚಾರದ ಕಾರಣ.

rabble rouser ವರುಣ ಗಾಂಧೀ ಯಂಥವರು ಭಾಜಪಕ್ಕೆ liability ಎನ್ನುವುದನ್ನು ಭಾಜಪ ಶೀಘ್ರವೇ ಅರಿತು ಕೊಂಡರೆ ಮುಂದಿನ ಚುನಾವಣೆಗೆ ಒಳ್ಳೆಯದು. ಸಮಾಜವನ್ನು ಒಗ್ಗೂಡಿಸಿ ಕೊಂಡು ಹೋಗುವ ನಾಯಕರ ಅವಶ್ಯಕತೆ ಭಾಜಪಕ್ಕಿದೆ. rabble rouser ಗಳ ಅವಶ್ಯಕತೆ ಭಾರತೀಯ ರಾಜಕಾರಣಕ್ಕೆ ಇಲ್ಲ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ ಎಂದು ಕಾಂಗ್ರೆಸ್ಸನ್ನು ಹಳಿಯುವ ಭಾಜಪ ತಾನು ಮಾಡುತ್ತಿರುವುದು ಏನು ಎನ್ನುವುದರ ಕಡೆ ಸ್ವಲ್ಪ ನೋಟ ಹರಿಸಿದರೆ ಚೆನ್ನ. ತನಗೊಂದು ನ್ಯಾಯ, ಪರರಿಗೊಂದು ನ್ಯಾಯ ಎನ್ನುವ ನೀತಿ ಭಾರತೀಯ ಮತದಾರನೊಂದಿಗೆ ನಡೆಯುವುದಿಲ್ಲ. ಅದನ್ನು ಅರಿತುಕೊಳ್ಳಲಾಗಷ್ಟು ಮೂರ್ಖನಲ್ಲ ವೋಟರ್. ಒಟ್ಟಿನಲ್ಲಿ ಮುಂದಿನ ಮಹಾ ಚುನಾವಣೆಗೆ prelude ಆಗಿ ನಡೆದ ಈ ಚುನಾವಣೆ ಮುಂದಿನ ಸಲವೂ ಕಾಂಗ್ರೆಸ್ ಪಕ್ಷಕ್ಕೇ ಕೇಂದ್ರ ಸರಕಾರದ ಉಸ್ತುವಾರಿ ಎಂದು ನಿಚ್ಚಳವಾಗುತ್ತಿದೆ.

ಅಮೆರಿಕೆಯ ಮತ್ತೊಂದು ಹಸ್ತಕ್ಷೇಪ

ಅಮೆರಿಕೆಯ ಸಂಸತ್ತಿನಲ್ಲಿ ಒಂದು ನಿರ್ಣಯ ಮಂಡನೆ. ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಧಾರ್ಮಿಕ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಲು ಒತ್ತಾಯ. ಸಂಸತ್ ಸದಸ್ಯ ಕೀತ್ ಎಲ್ಲಿಸನ್ ರವರ ಈ ನಿರ್ಣಯ ಮಂಡನೆ ಅಚ್ಚರಿ ತರುತ್ತಿದೆ. ಗುಜರಾತಿನಲ್ಲಿ ೨೦೦೨ ರಲ್ಲಿ ನಡೆದ ಸಾಮೂಹಿಕ ನರಹತ್ಯೆ ನಂತರ, ಸಣ್ಣ ಪುಟ್ಟ ಘಟನೆ ಬಿಟ್ಟರೆ, ಯಾವುದೇ ದೊಡ್ಡ ರೀತಿಯ ಗಲಭೆಗಳು ನಡೆದಿಲ್ಲ. ಅಲ್ಲಿನ ಮುಸ್ಲಿಮರು ಸಾವಧಾನದಿಂದ ತಮ್ಮ ನುಚ್ಚು ನೂರಾದ ಬದುಕನ್ನು ಮರಳಿ ಕಟ್ಟಿ ಕೊಳ್ಳುವತ್ತ ಗಮನ ಕೇಂದ್ರೀಕರಿಸಿದ್ದಾರೆ. ಖ್ಯಾತ ಮುಸ್ಲಿಂ ವಿಧ್ವಾಂಸರಾದ ಮೌಲಾನಾ ವಾಸ್ತಾನ್ವಿ ಸಹ ಬದಲಾದ ಮೋದಿಯ ಮತ್ತು ಅಲ್ಲಿನ ಆಡಳಿತದ ಬಗ್ಗೆ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ. ಮೋದಿಯ ಆಡಳಿತದಡಿ ಮುಸ್ಲಿಮರು ಅಭಿವೃದ್ಧಿ ಸಾಧಿಸಿದ್ದಾರೆ ಎಂದು ಹೇಳಿದ MBA ಪದವೀಧರರೂ ಆದ ಮೌಲಾನ ವಾಸ್ತಾನ್ವಿ ಕೆಲವು ಮುಸ್ಲಿಂ ಪಂಡಿತರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.  ಪ್ರತಿಭಾವಂತ ಮತ್ತು ಆಧುನಿಕ ಮನೋಭಾವದ ವಾಸ್ತಾನ್ವಿ ಗುಜರಾತಿನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಲು ಯಾರೂ ಆಮಿಷ ಒಡ್ಡಿರಲಿಕ್ಕಿಲ್ಲ. ಹಳತನ್ನು ಮರೆತು ಮುಂದಿನ ದಾರಿಯ ಕಡೆ ಗಮನ ಕೊಡುವತ್ತ ಮುಸ್ಲಿಮ್ ಸಮುದಾಯ ಯಾವಾಗಲೂ ಉತ್ಸುಕತೆ ತೋರಿದೆ. ಗತಕಾಲದಲ್ಲಿ ಆಗಿ ಹೋದ ಪ್ರಮಾದಗಳ ಬಗ್ಗೆ ಹಲುಬುತ್ತಾ ಕೂತರೆ ಯಾವ ಪ್ರಯೋಜನವೂ ಇಲ್ಲ ಎಂದು ಮುಸ್ಲಿಮರಿಗೆ ತಿಳಿದಿದೆ. ಪರಿಸ್ಥಿತಿ ಹೀಗಿರುವಾಗ, ನೋವನ್ನು ಅನುಭವಿಸಿದವರು ಎಲ್ಲ ಮರೆತು ಮುನ್ನಡೆಯ ಹಾದಿ ಹಿಡಿದಿರುವಾಗ, ಬಂತು ದೊಡ್ಡಣ್ಣನ ಮೂಗು ತೂರಿಸುವಿಕೆ. ಧಾರ್ಮಿಕ ಸ್ವಾತಂತ್ರ್ಯ ಮರಳಿ ಸ್ಥಾಪಿಸಬೇಕಂತೆ. ಕೀತ್ ಎಲ್ಲಿಸನ್ ರಿಗೆ ಯಾರು ಐಡಿಯಾ ಕೊಟ್ಟರು ಗುಜರಾತಿನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ ಎಂದು? ಅಲ್ಲಿ ಮಸೀದಿ, ಇಗರ್ಜಿಗಳಿವೆ. ಅದಾನ್ (ಮುಸ್ಲಿಂ ಪ್ರಾರ್ಥನಾ ಕರೆ) ಕರೆಗಳು ಮೊಳಗುತ್ತಿವೆ. ಸಾತ್ವಿಕ, ನೈತಿಕ ಬದುಕು ಹೇಗೆ ನಡೆಸಬೇಕೆಂದು ಎಳೆಯರಿಗೆ ಹೇಳಿ ಕೊಡುವ ‘ಮದ್ರಸಾ’ ಗಳಿವೆ. ಇನ್ನೇನು ಬೇಕು, ಸ್ವಾತಂತ್ರ್ಯ ಮೆರೆಯಲು? ಆಫ್ಘಾನಿಸ್ತಾನದಲ್ಲಿ ಅಮೆರಿಕೆಯ ಸೇನೆ ಆ ದೇಶವನ್ನು ಆಕ್ರಮಿಸಿ ಕೊಂಡಿದ್ದು ಮಾತ್ರವಲ್ಲದೆ ಮುಸ್ಲಿಮರು ಗೌರವಿಸುವ, ಆದರಿಸುವ ಪವಿತ್ರ ಕುರ್ ಆನ್ ಗ್ರಂಥಗಳನ್ನು ಸುಡುವುದನ್ನು, ಶೌಚಕ್ಕೆ ಬಿಸುಡುವುದನ್ನು, ನಾವು ಕಂಡಿಲ್ಲವೇ? ಆ ತೆರನಾದ ಪುಂಡಾಟಿಕೆ ಗುಜರಾತಿನಲ್ಲಾಗಲೀ, ಭಾರತದ ಇತರೆ ಭಾಗಗಳಲ್ಲಾಗಲೀ ನಡೆದಿಲ್ಲವಲ್ಲ? ಕಾಂಗ್ರೆಸ್ ಮ್ಯಾನ್ ಕೀತ್ ಎಲ್ಲಿಸನ್ ಇಸ್ಲಾಂ ಧರ್ಮ ಸ್ವೀಕರಿಸಿದ ಅಮೆರಿಕೆಯ ಪ್ರಜೆ. ಮುಸ್ಲಿಮ್ ಆದ ಒಂದೇ ಕಾರಣಕ್ಕೆ ಅವರಿಗೆ ಅಮೆರಿಕೆಯ ಅಧ್ಯಕ್ಷನಾಗಲು ಸಾಧ್ಯವೇ ಎನ್ನುವುದನ್ನು ಮೊದಲು ಅವರು ಪ್ರಶ್ನಿಸಿಕೊಳ್ಳಲಿ. ಅದಕ್ಕೆ ಉತ್ತರ ದೊರೆತ ಕೂಡಲೇ ನಮ್ಮ ದಿಕ್ಕಿಗೆ ಮುಖ ಮಾಡಿ ಮೂಗು ತೂರಿಸಲಿ.

ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬದುಕುತ್ತಿರುವ ವಿಭಿನ್ನ ಸಂಸ್ಕೃತಿಗಳ ಜನ ಅಣ್ಣ ತಮ್ಮನ್ದಿರಂತೆ ಕಾದಾಡುತ್ತಾರೆ, ಕಾವಿಳಿದ ಕೂಡಲೇ ಒಂದಾಗುತ್ತಾರೆ. ನಮ್ಮ ದೇಶದಲ್ಲಿ ಇನ್ನೂ ಯಾವ ದೊಡ್ಡ ಉರಿಯೂ ಬಿದ್ದಿಲ್ಲ ಅಮೇರಿಕಾ ಇಲ್ಲಿ ಬಂದು ಚಳಿ ಕಾಯಿಸಿಕೊಳ್ಳಲು. ಮುಸ್ಲಿಂ, ಕ್ರೈಸ್ತ, ಬುದ್ಧ, ಸಿಖ್, ಯಹೂದ್ಯ ಧರ್ಮೀಯರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯಗಳಿವೆ. ಅವನ್ನು ವಿವೇಚನೆಯಿಂದ ಉಪಯೋಗಿಸಿಕೊಂಡು ತಮ್ಮ ಪಾಡಿಗೆ ತಾವು ನೆಮ್ಮದಿಯಿಂದ ಬದುಕುವ ಕಲೆಯೂ ನಮ್ಮ ಜನರಿಗೆ ಕರಗತವಾಗಿದೆ. ಪ್ರಪಂಚದ ಭದ್ರತೆ, ನೆಮ್ಮದಿ, ಸುರಕ್ಷೆಯ ಉಸ್ತುವಾರಿ ಯಾರೂ ಹೊರಿಸದೆಯೂ ಹೊತ್ತು ಕೊಂಡು ಬೇಸ್ತು ಬಿದ್ದಿರುವ ಅಮೇರಿಕೆಗೆ ತಲೆ ಕೆಡಿಸಿಕೊಳ್ಳಲು ಬಹಳಷ್ಟು ವಿಷಯಗಳಿವೆ. ಅವುಗಳನ್ನ ಹೇಗೆ ನಿಭಾಯಿಸಿಕೊಂಡು ಹೋಗಬೇಕು ಎನ್ನುವುದರ ಕಡೆ ಹೆಚ್ಚು ಗಮನ ಕೊಡಲಿ.

ಅಮೆರಿಕೆಗೆ ಯಾರೂ ಖಾಯಂ ಮಿತ್ರರಿಲ್ಲ ಎನ್ನುವುದು ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ಅರಿವಿದ್ದೇ ಇರುತ್ತದೆ. ಹಾಗೇನಾದರೂ ಇದ್ದರೆ ಅದು  ಗ್ರೇಟ್ ಬ್ರಿಟನ್ ಮಾತ್ರ. ಇವರಿಬ್ಬರೂ ವಿಶ್ವದ ರಾಷ್ಟ್ರಗಳನ್ನು ಸಾಕಷ್ಟು ಗೋಳು ಹೊಯ್ದು ಕೊಂಡವರು. “ಇಂಡಿಯಾ ಇಸ್ ಏ ವೆರಿ ಇಂಪಾರ್ಟೆಂಟ್ ಕಂಟ್ರಿ” ಎನ್ನುತ್ತಾ ಕಂತ್ರಿ ಬುದ್ಧಿ ತೋರಿಸೋದು ಇವರುಗಳ ಜಾಯಮಾನ. ನಾಯಿ ಬಾಲ ಸರಿ ಮಾಡಿ ವಿಜಯದ ನಗೆ ಬೀರಿದವರ ಕುರಿತು ಯಾರಲ್ಲೂ ವರದಿಯಿಲ್ಲ. ಭಾರತ ಇರಾಕ್ ದೇಶಕ್ಕೆ ಬಾಸ್ಮತಿ ಅಕ್ಕಿ ರಫ್ತು ಮಾಡಿದಾಗ ಭಾರತದ ಅಕ್ಕಿ ಕೊಳ್ಳಬೇಡಿ ಎಂದು ಅಮೆರಿಕೆಯ ತಾಕೀತು ಇರಾಕಿಗೆ. ತಂತ್ರಜ್ಞಾನದಲ್ಲಿ ಏಷಿಯಾದ ದೇಶಗಳು ಅಮೇರಿಕೆಯನ್ನು ಹಿಂದಕ್ಕೆ ಹಾಕಿದ್ದರಿಂದ ಈಗ ಅಮೆರಿಕೆಗೆ ಅಕ್ಕಿ ಮಾರಿ ಬದುಕುವ ಗತಿಗೇಡು. ಆದ್ದರಿಂದ ಇರಾಕಿಗೆ ತಾಕೀತು ಭಾರತದ ಅಕ್ಕಿ ಖರೀದಿಸಬೇಡಿ ಎಂದು.

ನಮ್ಮ ಪಾಡು ಮತ್ತೊಂದು ತೆರನಾದುದು. ಅಮೆರಿಕೆಯ ಈ ಹಸ್ತಕ್ಷೇಪಕ್ಕೆ ಚಾಟಿ ಏಟಿನ ಉತ್ತರ ಕೊಟ್ಟು ನಿಮ್ಮ ಕೆಲಸ ನೀವು ನೋಡಿ ಕೊಳ್ಳಿ ಎಂದು ಹೇಳುವ ಬೆನ್ನೆಲುಬು ನಾವಿನ್ನೂ ಬೆಳೆಸಿ ಕೊಂಡಿಲ್ಲ. ಅಲ್ಲಿಯವರೆಗೆ ಬಡವನ ಕೋಪ ದವಡೆಗೆ ಮೂಲ ಎಂದು ಹಲುಬುತ್ತಾ ಕೂರಬೇಕು ನಾವು.

.

ರಾಜಕಾರಣದಲ್ಲಿ ಧರ್ಮ ಎಷ್ಟಿರಲಿ?

“ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಪಡಬೇಕಿಲ್ಲ ” – ಈ ಮಾತನ್ನು ಕ್ರೈಸ್ತ ಮೂಲಭೂತವಾದಿ ಇವಾನ್ಜೆಲಿಸ್ಟ್ (ಧರ್ಮಪ್ರಚಾರಕ) ಜೆರ್ರಿ ಫಾಲ್ವೆಲ್, ಅಥವಾ ಟೆರ್ರಿ ಜೋನ್ಸ್ ರಂಥವರು ಹೇಳಿದ್ದರೆ ಚಿಂತೆ ಇರಲಿಲ್ಲ, ಏಕೆಂದರೆ ಇವರುಗಳು ಹೀಗೆ ಮಾತನಾಡಿದಾಗಲೇ ಚೆನ್ನ. ಅಸಹನೆಯೇ ಅವರ ಉಸಿರು, ಹಾಗಾಗಿ ಅವರ ಬಾಯಲ್ಲಿ ನೀಟ್ ಆಗಿ ಫಿಟ್ ಅಗೋ ಮಾತುಗಳು ಅವು. ಆದರೆ ಈ ಮಾತನ್ನು ಸೆಕ್ಯುಲರ್ ದೇಶ ಎಂದು ಹೆಮ್ಮೆ ಪಡುವ ಬ್ರಿಟನ್ ದೇಶದ ಪ್ರಧಾನಿ ಹೇಳಿದ್ದು ಎಂದಾದ ಮೇಲೆ ಈ ಮಾತಿನ ಕಡೆ ಸ್ವಲ್ಪ ಗಮನ ಅತ್ಯಗತ್ಯ.

“ಕಿಂಗ್ ಜೇಮ್ಸ್” ಬೈಬಲ್ ನ ೪೦೦ ವಾರ್ಷಿಕೋತ್ಸವದ ವೇಳೆ ‘ಚರ್ಚ್ ಆಫ್ ಇಂಗ್ಲೆಂಡ್’ ಗೆ ಸೇರಿದ ಪಾದ್ರಿಗಳನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು ಡೇವಿಡ್ ಕೆಮರೂನ್. ಇದೇ ಮಾತನ್ನು ನಮ್ಮ ದೇಶದ ಪ್ರಧಾನಿ ಹೇಳಿದ್ದಿದ್ದರೆ ಆಗುತ್ತಿದ್ದ ವೈಚಾರಿಕ ಅನಾಹುತ ಏನು ಎಂದು ಊಹಿಸಲು ಅಸಾಧ್ಯ. ಆದರೆ ಇಷ್ಟು ಮಾತ್ರ ಹೇಳಿ ಸುಮ್ಮನಾಗಲಿಲ್ಲ ಪ್ರಧಾನಿ. “ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಬೀಳಬೇಕಿಲ್ಲ… ನನ್ನನ್ನು ಅರ್ಥ ಮಾಡಿಕೊಳ್ಳಿ… ಮತ್ತೊಂದು ಧರ್ಮ ಅಥವಾ ಧರ್ಮವಿಲ್ಲದಿರುವಿಕೆಯ ವ್ಯವಸ್ಥೆ ಇರುವುದು ತಪ್ಪು ಎಂದು ನಾನು ಖಂಡಿತಾ ಹೇಳುತ್ತಿಲ್ಲ” ಇದು ಪ್ರಧಾನಿಗಳ ಪೂರ್ತಿ ಮಾತುಗಳು. ಈಗ ಸ್ವಲ್ಪ ಸಮಾಧಾನ. ಏಕೆಂದರೆ ಬ್ರಿಟನ್ ಬರೀ ಕ್ರೈಸ್ತರ ದೇಶವಲ್ಲ, ಅಲ್ಲಿ, ಹಿಂದೂಗಳೂ, ಮುಸ್ಲಿಮರೂ, ಯಹೂದಿಗಳೂ ಇನ್ನಿತರ ಹಲವು ಧರ್ಮೀಯರೂ, ಧರ್ಮವಿಲ್ಲದವರೂ ಸಾಮರಸ್ಯದಿಂದ ಬದುಕುವ ದೇಶ. ಹಾಗಾಗಿ ಎಲ್ಲರೂ, ಧರ್ಮವಿಲ್ಲದವರೂ, ತಾರತಮ್ಯವಿಲ್ಲದೆ ಸಮಾನಾವಕಾಶಗಳೊಂದಿಗೆ ಬದುಕಬಹುದು ಎನ್ನುವ ಆಶಯ ಪ್ರಧಾನಿಯದು. ಅದೇ ಅವರ ನಿರೀಕ್ಷೆಯೂ ಕೂಡಾ. ಆದರೆ ರಾಜಕಾರಣದಲ್ಲಿ ಧರ್ಮದ ಪಾತ್ರ ಎಷ್ಟಿರಬೇಕು ಎನ್ನುವುದು ಮುಗಿಯದ ಚರ್ಚೆ. “ರಾಜಕಾರಣ ಧರ್ಮವಲ್ಲ, ಅಥವಾ ಹಾಗೇನಾದರೂ ಆಗುವುದಾದರೆ ಅದು inquisition ಅಲ್ಲದೇ ಮತ್ತೇನೂ ಅಲ್ಲ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ದಾರ್ಶನಿಕ ಅಲ್ಬರ್ಟ್ ಕ್ಯಾಮು ಹೇಳುತ್ತಾರೆ ( Politics is not religion, or if it is, then it is nothing but the Inquisition – albert camus, french philosopher).

Inquisition ಎಂದ ಕೂಡಲೇ ಕಣ್ಣ ಮುಂದೆ ಬರೋದು ವ್ಯಾಟಿಕನ್ ಬೆಂಬಲಿತ ಸಾಮೂಹಿಕ ಹಿಂಸೆ, ಬರ್ಬರ ಶಿಕ್ಷೆ. ಕ್ರೈಸ್ತರಲ್ಲದವರೂ, ಕ್ಯಾಥೊಲಿಕ್ ಧರ್ಮದ ಚೌಕಟ್ಟಿಗೆ ಬರದ ಕ್ರೈಸ್ತರೂ inquisition ನ ಬರ್ಬರತೆ ಅನುಭವಿಸಿದರು. ಹಾಗಾಗಿ ರಾಜಕಾರಣದಲ್ಲಿ ಧರ್ಮ ಕೂಡದು ಎಂದು ಪಾಶ್ಚಾತ್ಯ ರಾಷ್ಟ್ರಗಳ ನಿಲುವು. ಇದು ಬರೀ ನಿಲುವು ಮಾತ್ರ, ಯಥಾಸ್ಥಿತಿ ಬೇರೆಯೇ ಎಂದು ದಿನನಿತ್ಯದ ವಿದ್ಯಮಾನಗಳು ನಮಗೆ ಹೇಳುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಬಲ ಪಂಥೀಯ ಇವಾನ್ಜೆಲಿಸ್ಟ್ ಗಳು ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಈಗ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದಲ್ಲಿರುವ ಅಮೆರಿಕೆಯಲ್ಲಿ ಇವರ ಅಬ್ಬರ ತುಸು ಹೆಚ್ಚು. ರಾಜಕಾರಣಿಗಳ ಕೈಗೆ ಧರ್ಮ ಸಿಕ್ಕಾಗ ಅದು ಚಿನ್ನದ ಸೌಂದರ್ಯ ಕಳೆದು ಕೊಂಡು ಕಳಪೆ ಉಕ್ಕಿನ ರೂಪ ಪಡೆದು ಕೊಳ್ಳುತ್ತದೆ ಎನ್ನುತ್ತಾರೆ ಲೇಖಕಿ ಯಾಸ್ಮೀನ್ ಅಲಿ ಭಾಯಿ. ಈಕೆ ಬ್ರಿಟನ್ ದೇಶದ ಪ್ರಸಿದ್ಧ ಲೇಖಕಿ. ಆಕರ್ಷಕ ಹೆಸರುಗಳೊಂದಿಗೆ ರಾಜಕಾರಣದಲ್ಲಿ ಧರ್ಮವನ್ನು ನುಸುಳಿಸಲು ಹವಣಿಸುವವರಿಗೆ ಈ ಮಾತುಗಳು ಬಹುಶಃ ಪಥ್ಯವಾಗಲಾರದು.

ಧರ್ಮದ ಸಾರವನ್ನು, ಸತ್ವವನ್ನು ಸಂಪೂರ್ಣವಾಗಿ ಅರಿತ ಹಿಂದೂ, ಮುಸ್ಲಿಂ, ಕ್ರೈಸ್ತ ಇನ್ನಿತರ ಧಮೀಯರಿಂದ ಯಾವುದೇ ತೊಂದರೆಯಿಲ್ಲ, ಆದರೆ ಅರೆಬರೆ ಕಲಿತು ‘ಪಾರ್ಟ್ ಟೈಂ’ ಧರ್ಮಾನುಯಾಯಿಗಳಿಂದ ಗಂಡಾಂತರ ಹೆಚ್ಚು ಎಂದು ಚಾರಿತ್ರಿಕ ಘಟನೆಗಳು ಸಾಕ್ಷಿಯಾಗಿವೆ. ಧರ್ಮವನ್ನು ‘ಆಫೀಮ್’ ಎಂದು ಕಡೆಗಣಿಸುವುದಾಗಲೀ, ತನ್ನ ಧರ್ಮವೇ ಶ್ರೇಷ್ಠ ಎಂದು ಇತರರ ಬದುಕನ್ನು ದುರ್ಭರಗೊಳಿಸುವುದಾಗಲೀ ಕೂಡದು ಎನ್ನುವ ವಿವೇಚನೆಯಿದ್ದರೆ ಸಾತ್ವಿಕ ಬದುಕು ಸರಾಗ, ವೈಯಕ್ತಿಕ ಬದುಕಿನಲ್ಲೂ, ರಾಜಕೀಯ ಕ್ಷೇತ್ರದಲ್ಲೂ.

ಎಲ್ಲಿ ಓದಬೇಕು, ಎಲ್ಲಿ ಓದಬಾರದು

ಪತ್ರಿಕೆ, ಪುಸ್ತಕ ಓದದವರ, ಓದಿದರೂ ಖರೀದಿ ಮಾಡದೆ ಉದ್ರಿ ಓದುವವರ ಬಗ್ಗೆ ಬಹಳಷ್ಟು ಓದಿದ್ದೇವೆ, ಕೇಳಿದ್ದೇವೆ. ಆದರೆ ಓದುವವರ ಚಟ ಎಂಥದ್ದು ಎಂದು ಸ್ವಲ್ಪ ನೋಡೋಣ. ನಿಂತಲ್ಲಿ, ಕೂತಲ್ಲಿ, ಸರತಿಯಲ್ಲಿ, ಊಟಕ್ಕೆ ಕೂತಲ್ಲಿ ಎಲ್ಲೆಂದರಲ್ಲಿ ಅಕ್ಷರ ಪುಂಜಗಳು ಕಣ್ಣಿಗೆ ಬಿದ್ದರೆ ಸಾಕು ಅದನ್ನು ಓದಲೇ ಬೇಕು. ಪ್ರಯಾಣದಲ್ಲಿ ಯಾರಾದರೂ ಓದುತ್ತಿದ್ದರೆ ಅವರೊಂದಿಗೆ ತಾವೂ ಕತ್ತು, ಉದ್ದ ಗಿಡ್ಡ ಮಾಡಿ ಹೆಣಗಿ ಓದುವುದನ್ನೂ ನೋಡಿದ್ದೇವೆ. ಎಲ್ಲಾದರೂ ಒಂದು ಸಮಾರಂಭದಲ್ಲಿ ಜನರೊಂದಿಗೆ ಬೇರೆಯದೇ ತಮ್ಮ ಪಾಡಿಗೆ ಪುಸ್ತಕ ಲೋಕದಲ್ಲಿ ಕಳೆದು ಹೋಗುವ ಜನರೂ ಇದ್ದಾರೆ. ಮೊನ್ನೆ ನನ್ನ ಮಗನ ಜನ್ಮ ದಿನಕ್ಕೆ ಮನೆಗೆ ಬಂದ ನನ್ನ ತಂಗಿಯ ೧೦ ವರ್ಷದ ಮತ್ತು ೧೩ ವರ್ಷದ ಪೋರರು ಪುಸ್ತಕ ಹಿಡಿದು ಕೊಂಡು ಕೂತಿದ್ದು ನೋಡಿ ill manners ಎಂದು ಗದರಿಸಿದ್ದೆ. ನನ್ನ ಅಳಿಯಂದಿರು voracious readers . ಹಾಗಂತ ಓದುವುದಕ್ಕೆ ಸಂಪೂರ್ಣ ಸ್ವೇಚ್ಛೆ ಇರಬಾರದು ಎಂದು ನಂಬುವವನು ನಾನು. ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೋದಾಗ ಸರತಿಯಲ್ಲಿ ಕಾಯುವ ಸಮಯ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಂಡ ಲೇಖನಗಳನ್ನು ಓದಿ ಕೊಳ್ಳುತ್ತೇನೆ. ಕಳೆದ ವಾರ ಇಲ್ಲಿನ ಜರೀರ್ ಪುಸ್ತಕ ಮಳಿಗೆಗೆ ಹೋದಾಗ ನನ್ನ ನಾಲ್ಕು ವರ್ಷದ ಮಗಳನ್ನೂ ಕರೆದು ಕೊಂಡು ಹೋಗಿದ್ದೆ. ಅಲ್ಲಿ ತನ್ನ ಕಣ್ಣಿಗೆ ಕಂಡ ಪುಸ್ತಕ ವೊಂದನ್ನು ಶೆಲ್ಫ್ ನಿಂದ ತೆಗೆದು ಅಲ್ಲೇ ನೆಲದ ಮೇಲೆ ಕೂತು ಪುಸ್ತಕ ನೋಡುವುದರಲ್ಲಿ ಮಗ್ನಳಾದಳು ನನ್ನ ಮಗಳು. ಓದಲಿಕ್ಕೆ ಬರುವುದಿಲ್ಲ ಆದರೂ ಪುಸ್ತಕದ ಮೇಲೆ ಅತೀವಾಸಕ್ತಿ ಅವಳಿಗೆ. ಅಂತರ್ಜಾಲದಲ್ಲಿ ಒಂದು ಚಿತ್ರ ಕಣ್ಣಿಗೆ ಬಿತ್ತು. ಸೈಕಲ್ ಸವಾರಿ ವ್ಯಕ್ತಿಯೊಬ್ಬ ಸವಾರಿ ನಿರತನಾಗಿರುವಾಗಲೇ ಪುಸ್ತಕವನ್ನು ಓದುತ್ತಿದ್ದಾನೆ. ಇವನ ಓದುವ ಚಟ ಎಲ್ಲರಿಗಿಂತ one step ahead , ಏನಂತೀರಾ?

ಪುಸ್ತಕದ ಮಳಿಗೆಯಲ್ಲಿ ಪುಸ್ತಕದಲ್ಲಿ ಮಗ್ನಳಾದ ಮಗಳ ಚಿತ್ರವನ್ನೂ, ಸೈಕಲ್ ಸವಾರನ ಚಿತ್ರವನ್ನೂ ಹಾಕಿದ್ದೇನೆ, ಓದಲು ಸ್ಫೂರ್ತಿ ಸಿಗಬಹುದೇ ಎಂದು ನೋಡಿ.