ನಾಳೆಯ valentines ದಿನದಂದು ನಿಮ್ಮ ತಾಯಿಯನ್ನು ಪ್ರೀತಿಸಿ.

ಫೆಬ್ರವರಿ ೧೪ ಬಂತೆಂದರೆ ಕೆಲವರಲ್ಲಿ ಅದೇನೋ ಒಂದು ರೀತಿಯ ರೋಮಾಂಚನ ಮಿಶ್ರಿತ ನಡುಕವಾದರೆ ಮತ್ತೆ ಕೆಲವರಿಗೆ ಭೀತಿಯ ನಡುಕ. ಪ್ರೇಮಿಗಳಿಗೆ ತನ್ನನ್ನು ಪ್ರೀತಿಸುವ ವ್ಯಕ್ತಿ ಏನು ತರಬಹುದು, ಯಾವ ರೆಸ್ಟುರಾಂಟ್ ಗೆ ಕರೆದುಕೊಂಡು ಹೋಗಬಹುದು ಎನ್ನುವ ನವಿರೇಳುವ ನಡುಕವಾದರೆ, ಜೋಡಿಗಳನ್ನು ಆಮಂತ್ರಿಸಿದ್ದಕ್ಕೆ, ಹುರಿದುಂಬಿಸಿದ್ದಕ್ಕೆ  ತನ್ನ ಅಂಗಡಿ ಅಥವಾ ರೆಸ್ಟುರಾಂಟ್ ನ ಗಾಜುಗಳು ಎಲ್ಲಿ ವಿರೋಧಿಸುವವರ ಕಲ್ಲಿಗೆ ಚಲ್ಲಾಪಿಲ್ಲಿ ಆಗಬಹುದೋ ಎನ್ನುವ ಭೀತಿಯ ನಡುಕ ಇನ್ನು ಕೆಲವರಿಗೆ.   

ಮಕ್ಕಳ ದಿನಾಚರಣೆಯಿಂದ ಹಿಡಿದು ಊರುಗೋಲು ಹಿಡಿದು ನಡೆಯುವವರ ದಿನದವರೆಗೂ ವೈವಿಧ್ಯಗಳಿವೆ ದಿನಾಚರಣೆಗಳಿಗೆ. ಪ್ರೇಮಿಗಳಿಗೂ ಒಂದು ದಿನ. ಅದೇ valentine’s day. ಆದರೆ ಪ್ರೀತಿ ಎನ್ನುವುದು  ಬರೀ ಗಂಡು ಹೆಣ್ಣಿನ ನಡುವಿನ ಸಾಂಗತ್ಯ ಅಥವಾ ಸರಸವೇ ಆಗಬೇಕಿಲ್ಲ. ಪ್ರೀತಿಯನ್ನು platonic love ಆಗಿ ಪರಿವರ್ತಿಸಿದಾಗ ನಮ್ಮ ಸಹೋದ್ಯೋಗಿ, ನೆರೆಯವರು, ಸ್ನೇಹಿತರು, ಉದ್ರಿ ಕೊಡುವ ದಿನಸಿ ಅಂಗಡಿಯವ, ದಿನಪತ್ರಿಕೆ ಹಾಕುವ ವ್ಯಕ್ತಿ ಹೀಗೆ ಎಲ್ಲರೂ ಅರ್ಹರಾಗಬಹುದು ನಮ್ಮ ಪ್ರೀತಿಗೆ. ಈ ಕೆಳಗೆ ಕಾಣಿಸಿದ ಸಲಹೆಗಳು valentines ದಿನಕ್ಕೆ ಒಂದು ಹೊಸ ರೀತಿಯ ಹುರುಪು, ಭರವಸೆ ಮೂಡಿಸಬಹುದು.

ಬೆಳ್ಳಂಬೆಳಗ್ಗೆ ನಮ್ಮ ಗೇಟಿಗೆ ನ್ಯೂಸ್ ಪೇಪರ್ ಸಿಕ್ಕಿಸುವ ಹುಡುಗನನ್ನು ಹುಬ್ಬು ಗಂಟಿಕ್ಕಿ ಸ್ವಾಗತಿಸುವುದಕ್ಕಿಂತ ಅವನು ನಮ್ಮ ಹಾಗೆಯೇ ಒಬ್ಬ ಮನುಷ್ಯ ಎಂದು ಬಗೆದು ಮುಗುಳ್ನಕ್ಕು, ಒಂದು ಲಕೋಟೆಯಲ್ಲಿ ೧೦ ರೂಪಾಯಿ ಇಟ್ಟು ಕೊಟ್ಟರೆ ಹೇಗಿರಬಹುದು? ಅವನು ಆಸೆ ಪಡುತ್ತಿದ್ದ ಯಾವುದಾದರೂ ವಸ್ತು ಕೊಳ್ಳಲು ನಿಮ್ಮ ಆ ಕಾಣಿಕೆ ಅವನಿಗೆ ನೆರವಾಗಬಹುದು.

ಮನೆಯ ಮುಂದೆ ನಿಂತು ಈರುಳ್ಳಿ, ಟೊಮೇಟೋ ಎಂದು ಕೂಗುತ್ತಾ ತರಕಾರಿ ಮಾರುವವನಿಗೆ ಒಂದು ದಿನವಾದರೂ ಚೌಕಾಶಿಯಿಂದ ಮುಕ್ತಿ ಕೊಡಿಸಿ. ಈ ಒಂದು ದಿನವಾದರೂ ಅವನು ಹೇಳಿದ ಬೆಲೆ ಕೊಟ್ಟು ಬೆಳ್ಳುಳ್ಳಿ ಕೊಂಡು ಕೊಳ್ಳಿ. ಅಯ್ಯೋ ಇನ್ನೊಂದು ಬೆಳ್ಳುಳ್ಳಿ ಹಾಕು, ನಿನ್ ಗಂಟು ಹೋಗಲ್ಲ ಎಂದು ಗದರಿಸಿ greedy ಆಗಬೇಡಿ.

ನಿಮ್ಮ ತಾಯಿಯನ್ನು ಪ್ರೀತಿಸಿ. ಹಾಂ, ನಾವು ಯಾವಾಗಲೂ ಪ್ರೀತಿಸುತ್ತೇವೆ, ಅಷ್ಟು ಮಾತ್ರವಲ್ಲ mother’s day ಇದ್ದೇ ಇದೆಯಲ್ಲ ಎಂದು ಹೇಳಬೇಡಿ. ತಾಯಿ ಅಂದರೆ ನಮ್ಮ ಹೆತ್ತಬ್ಬೆ ಅಲ್ಲ, ಕೋಟ್ಯಂತರ ಹೆತ್ತಬ್ಬೆಯರನ್ನೂ, ನಮ್ಮನ್ನೂ ಹೊತ್ತೂ ಹೊತ್ತೂ ಬಳಲಿದ “ಭೂತಾಯಿ” ಯನ್ನು ಪ್ರೀತಿಸಿ. ಈ ಒಂದು ದಿನವಾದರೂ disposable ಗಳ ಸಹವಾಸ ಬಿಡಿ. ಅವು ಕಳಿಸುವ CFC (chloro fluoro carbon)  ನಮ್ಮ ತಾಯಿಯನ್ನು ಇನ್ನಷ್ಟು ಕ್ಷೀಣಗೊಳಿಸುತ್ತಿದೆ. ಸಾಧ್ಯವಾದರೆ ಕಳೆದ ಆರು ತಿಂಗಳಿನಿಂದ ಸೋರುತ್ತಿರುವ ನಲ್ಲಿಗೆ ಏನಾದರೂ ರಿಪೇರಿ ಮಾಡಿ, ಅಮೂಲ್ಯವಾದ ನೀರಿನ ಹನಿಗಳನ್ನು ಉಳಿಸಿ.

ಬೆಳಿಗ್ಗೆ ಸ್ನಾನ ಮಾಡಿ ಬಟ್ಟೆ ತೊಡುವಾಗ ಡಿಸ್ಕೌಂಟ್ ಆಸೆಗೆ ಬಿದ್ದು ಖರೀಸಿದ ಆದರೆ ಎಂದೂ ತೊಡದ ಆ ಟೀ ಶರ್ಟ್ ಅಥವಾ “ಮ್ಯಾಕ್ಸಿ” ಯನ್ನು ಯಾರಿಗಾದರೂ ದಾನ ಮಾಡಿ. ಹಾಗೆಯೆ ಯಾವುದಾದರೂ ಉಪಯೋಗಿಸದ ವಸ್ತು ಅಟ್ಟದ ಮೇಲಿದ್ದರೆ ಅದಕ್ಕೂ ಮೋಕ್ಷ ಕಾಣಿಸಿ. ದಾನ ನೀಡುವವನು “ದಾನವ” ನಾಗೋಲ್ಲ ಬದಲಿಗೆ ನಿಜವಾದ ಮನುಷ್ಯನಾಗುತ್ತಾನೆ, ದೇವರ ಮುಖದ ಮೇಲೆ ಮಂದಹಾಸ ತರುತ್ತಾನೆ. ಹಿಂಸೆ ಕಂಡೂ ಕಂಡೂ ರೋಸಿದ ಪರಮಾತ್ಮನಿಗೂ ಒಂದು smile ದಾನ ಮಾಡಿದಂತೆ ಈ ಸುದಿನದಂದು.

ದೊಡ್ಡ ಮನಸ್ಸು ಮಾಡಿ ಒಂದು ಪುಸ್ತಕ ಖರೀದಿಸಿ. ರಕ್ತದೊತ್ತಡ ಹೆಚ್ಚು ಮಾಡುವ ಪುಸ್ತಕವೋ, ಪತ್ರಿಕೆಯೋ ಅಲ್ಲ. ಏಗ್ದಾಗೆಲ್ಲಾ ಐತೆ ತೆರನಾದ, ಅಥವಾ ಅಕ್ಕ ಮಹಾದೇವಿ, ಶಿಶುನಾಳ ಶರೀಫರ ಬದುಕಿನ ನಿಜವಾದ ಅರ್ಥ ಹೇಳುವ ಪುಸ್ತಕವನ್ನು ಕೊಳ್ಳಿ.

ರಸ್ತೆಯಲ್ಲಿ ಹಾದುಹೋಗುವಾಗ ಯಾವುದಾದರೂ ಆಸ್ಪತ್ರೆ ಕಂಡರೆ ಜಗುಲಿಯ ಮೇಲೆ ಅಸಹಾಯಕನಾಗಿ ಕೂತ ವನಿಗೆ ಹಣ್ಣು ಹಂಪಲು ಕೊಡಿಸಿ ಅಥವಾ ಏನಾದರೂ ಧನ ಸಹಾಯ ಮಾಡಿ. ಅವನ ಮುಖದ ಮೇಲೆ ನೀವು ಕಾಣುವ ಹರ್ಷ ನಿಮ್ಮ valentine ದಿನಕ್ಕೆ ಒಂದು ಹೊಸ, ಅವರ್ಣನೀಯ ಅರ್ಥವನ್ನು ತಂದು ಕೊಡುತ್ತದೆ.

ಮೊಬೈಲ್ ಉಪಕರಣದ ರಿಂಗ್ ಟೋನ್ ವಾಲ್ಯೂಮ್ ಇನ್ನಷ್ಟು ಕಡಿಮೆ ಮಾಡಿ. ನೀವು ಹಾಕಿರುವ ಆ ಕರ್ಕಶ ಹಾಡನ್ನು ಇಡೀ ವಿಶ್ವ ಈಗಾಗಲೇ ಕೇಳಿಯಾಗಿದೆ. ಮೊಬೈಲ್ ರಿಂಗ್ ಆದ ಕೂಡಲೇ ಅಲ್ಲೇ ಪಕ್ಕದಲ್ಲೇ ಇರುವ “silence” ಗುಂಡಿಯನ್ನು ಒತ್ತಿ ಶಬ್ದ ಮಾಲಿನ್ಯ ಕಡಿಮೆ ಮಾಡಿ.           

ಸೂಟು ಬೂಟು ತೊಟ್ಟು ಅಥವಾ ಆಕರ್ಷಕವಾಗಿ ಬಟ್ಟೆ ಧರಿಸಿಯೂ ಕನ್ನಡ ಮಾತನಾಡಬಹುದು ಎಂದು ಸುತ್ತಲಿನವರಿಗೆ ತೋರಿಸಿ. ಆಂಗ್ಲ ಭಾಷೆಯೂ ಇರಲಿ, ಆದರೆ ಕನ್ನಡ ಹೆಚ್ಚು ಆಕರ್ಷಕ ಎಂದು ಮನವರಿಕೆ ಮಾಡಿಸಿ.    

ಟ್ರಾಫಿಕ್ ಸಿಗ್ನಲ್ ಬಳಿಯೋ, ಪಾರ್ಕಿಂಗ್ ಲಾಟ್ ಹತ್ತಿರವೋ ಸಿಗುವ ಸಪ್ಪೆ ಮುಖದ ಅಪರಿಚಿತನ ಕಡೆ ಮುಗುಳ್ನಗೆ ಬೀರಿ. ಪ್ರಪಂಚ ನಾವೆಣಿಸಿದಷ್ಟು ಕೆಟ್ಟಿಲ್ಲ ಎನ್ನುವ ಭಾವನೆ ಅವನಲ್ಲಿ ಮೂಡಿಸಿ.   

ಬೆಳಗ್ಗಿನಿಂದ ರಾತ್ರಿವರೆಗೂ ಕರಿದಿದ್ದು, ಹುರಿದಿದ್ದು ತಿಂದೂ ತಿಂದೂ ಏರಿಸಿಕೊಂಡ BP ಎನ್ನುವ “ಮೌನ ಹಂತಕ” (SILENT KILLER) ನ ಕಡೆ ಕಣ್ಣು ಹಾಯಿಸಿ. ಉದಾಸೀನ ಮಾಡದೆ bp ಪರೀಕ್ಷಿಸಿ. ಉಪ್ಪಿಗಿಂತ ರುಚಿಯಿಲ್ಲ ಎನ್ನೋ ಮಾತು ಗಾದೆಗೆ ಸೀಮಿತವಾಗಲಿ, ಟೇಬಲ್ ಸಾಲ್ಟ್ ಅನ್ನು ಸಂಪೂರ್ಣ ಉಪೇಕ್ಷಿಸಿ. ಒಂದರ್ಧ ಘಂಟೆ ನಡೆಯಿರಿ. ಇಂದೂ, ದಿನವೂ.  ನಿಮ್ಮ ದೀರ್ಘಾಯಸ್ಸು ನಿಮಗಲ್ಲದಿದ್ದರೂ ನಿಮ್ಮನ್ನು ಪ್ರೀತಿಸುವವರಿಗಾಗಿರಲಿ.     

ಕೊನೆಯದಾಗಿ, ತನಗಿರುವ ಎರಡು ಕೈ, ಎರಡು ಕಾಲುಗಳನ್ನು ದ್ವಿಗುಣ, ತ್ರಿಗುಣಗೊಳಿಸಿ ಹೆಣಗುತ್ತಾ ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಆಫೀಸಿಗೆ ಮತ್ತು ಶಾಲೆಗೆ ಹೊರಡಿಸುವ ತಂಗಾಳಿ ರೀತಿಯ thankless ಜೀವಕ್ಕೊಂದು ಕೆಂಪು ಗುಲಾಬಿ ಕೊಟ್ಟು ನೀನಿಲ್ಲದ ದಿನ ದಿನವೇ ಅಲ್ಲ ಎನ್ನುವ ಭಾವನೆ ವ್ಯಕ್ತಪಡಿಸಿ.  

ನಲ್ಮೆಯ ಸಂಪದದ ಬಂಧು ಭಗಿನಿಯರಿಗೆ ಪ್ರೀತಿಯ ದಿನದ ಅತ್ಯಂತ ಪ್ರೀತಿಯ ಹಾರೈಕೆಗಳು. 

ಮೇಲಿನ ಲೇಖನಕ್ಕೆ ಸ್ಫೂರ್ತಿ ಈ ವೆಬ್ ತಾಣ: http://philanthropywriting.com/2011/02/09/16-charitable-ways-to-celebrate-valentines-day/

ಈಜಿಪ್ಟ್ ಕ್ರಾಂತಿ

ಕಳೆದ ತಿಂಗಳ ಟುನೀಸಿಯಾ ಕ್ರಾಂತಿ ಅಲ್ಲಿನ ಅಧ್ಯಕ್ಷ ಪದವಿ ತೊರೆದು ಸೌದಿ ಸೇರುವುದರೊಂದಿಗೆ ಮುಕ್ತಾಯಗೊಂಡು ಅದರ ಪರಿಣಾಮ ಮಧ್ಯ ಪ್ರಾಚ್ಯ ದೇಶಗಳ ಇತರೆ ಸರ್ವಾಧಿಕಾರಿಗಳ ಮೇಲೂ ಬೀಳಲು ಆರಂಭಿಸಿತು. ಹೊಸ್ನಿ ಮುಬಾರಕ್ ಈಜಿಪ್ಟ್ ನ ಮಾಜಿ ಅಧ್ಯಕ್ಷ ಅನ್ವರ್ ಸಾದಾತ್ ರ ವಧೆಯ ನಂತರ ಗದ್ದುಗೆಗೆ ಏರಿದ ಕೂಡಲೇ ಇಳಿದು ಹೋಗುವ ದಾರಿ ಮರೆತು ಬಿಟ್ಟ. ತನ್ನ ದೀರ್ಘಾವಧಿ ಆಡಳಿತದ ಅವಧಿಯಲ್ಲಿ ತನ್ನ ದೇಶದ ವಿದ್ಯಾವಂತ ಸಮುದಾಯವನ್ನು ಒಂದು ಒಳ್ಳೆಯ ಗುಣಮಟ್ಟದ ಬದುಕಿನ ಕಡೆಗೆ ನಡೆಸುವ ಪ್ರಯತ್ನ ಮಾಡಲಿಲ್ಲ ಮುಬಾರಕ್. ಅವನ ದೂರದೃಷ್ಟಿತ್ವ ಕೇವಲ ತನ್ನ ಮಗ “ಗಮಾಲ್” ನನ್ನು ಪಟ್ಟಕ್ಕೆ ಏರಿಸುವುದೇ ಆಗಿತ್ತು. ಇದನ್ನು ಕಂಡು ರೋಸಿದ ಜನ ಒಳಗೊಳಗೇ ಕುದಿಯುತ್ತಿದ್ದರು. ಸಹನೆಯ ಕಟ್ಟೆ ಕೊನೆಗೂ ಒಡೆದು ಮುಬಾರಕ್ ನನ್ನು ಪದಚ್ಯುತಿಗೊಳಿಸಲು ತೀರ್ಮಾನಿಸಿದರು. ಮೊದ ಮೊದಲು “ಟ್ವಿಟ್ಟರ್” ಮತ್ತು “ಫೇಸ್ ಬುಕ್” ಸಹಾಯದಿಂದ ಜನರನ್ನು ಕಲೆ ಹಾಕಿ ನಂತರ ಬೀದಿಗೆ ಇಳಿದ ಜನ ಪೊಲೀಸರ ದಬ್ಬಾಳಿಕೆಗೆ ಜಪ್ಪಯ್ಯ ಅನ್ನದೆ ಬೀದಿ ಹೋರಾಟಕ್ಕೆ ನಿಂತರು. ಈ ಹೋರಾಟದಲ್ಲಿ ಜನರ ಕೈ ಮೇಲಾಗಿ ಪೊಲೀಸರು ಕಾಲು ಕಿತ್ತರು. ಈಗ ಸೈನ್ಯದ ಸರತಿ. ಆದರೆ ಸೈನ್ಯ ಜನರ ವಿರುದ್ಧ ಗುಂಡು ಹಾರಿಸಲಿಲ್ಲ. ಚೀನಾದ ತಿಯಾನನ್ಮೆನ್ ಚೌಕದಲ್ಲಿ ನಡೆದ ರಕ್ತದೋಕುಳಿ ಇಲ್ಲ ಮರುಕಳಿಸಲಿಲ್ಲ. ೩೦ ವರ್ಷಗಳ ಕಾಲ ಅಧಿಕಾರದಲ್ಲಿರುವ ಮುಬಾರಕ್ ಗೆ ಈ ಜನ ವಿರೋಧವನ್ನೂ ಯಾವ ರೀತಿಯಲ್ಲಿ ಹತ್ತಿಕ್ಕಬೇಕು ಎಂದು ಯಾರೂ ಪಾಠ ಹೇಳಬೇಕಿರಲಿಲ್ಲ. ರಾತ್ರಿ ಹೊತ್ತು ಜೈಲಿನಲ್ಲಿದ್ದ ಕೈದಿಗಳನ್ನು ಬಿಡುಗಡೆ ಮಾಡಿ ಜನರನ್ನು ಲೂಟಿ ಮಾಡಲು ಪರೋಕ್ಷವಾಗಿ ಪ್ರೇರೇಪಿಸಿದ. ಇದನ್ನು ನೋಡಿದವರು ತಿಳಿಯಬೇಕು ಲೂಟಿಕೋರರ, ದಂಗೆಕೋರರ ಗಲಭೆ ಎಂದು. ಹೇಗಿದೆ ಟ್ರಿಕ್ಕು? ಸೌದಿ ಅರೇಬಿಯಾದ ದೊರೆ ಸಹ ಈ ಕ್ರಾಂತಿಯನ್ನು ಟೀಕಿಸಿ ಇದು ಅಲ್ಲಿನ ಪುಂಡರ ಕೃತ್ಯ ಎಂದು ತನ್ನ ಆಪ್ತ ಮಿತ್ರ ಮುಬಾರಕ್ ನ ಪರವಾಗಿ ಹೇಳಿಕೆ ನೀಡಿದರು. ಅದಕ್ಕೆ ಅಲ್ಲಿನ ಜನ ಕೊಟ್ಟ ಉತ್ತರ, ದೊರೆಗಳೇ, ತಾವು ಒಂದು ದಿನಕ್ಕೆ ೨ ಡಾಲರ್ ದುಡಿಮೆಯಲ್ಲಿ ದಿನ ಕಳೆಯಿರಿ ಆಗ ತಿಳಿಯುತ್ತದೆ ನಮ್ಮ ಕಷ್ಟ ಎಂದು. ಈಜಿಪ್ಟ್ ನ ಶೇಕಡಾ ೪೦ ರಶ್ಟು ಜನ ೨ ಡಾಲರ್ ಗಿಂತ ಕಡಿಮೆ ದುಡಿಯುತ್ತಾರಂತೆ. ನಿರೋದ್ಯೋಗ ಮುಗಿಲು ಮುಟ್ಟಿದ್ದು ಜನ ಹೇಗೂ ಬೀದಿ ಪಾಲಾಗಿದ್ದರು, ಅದರೊಂದಿಗೆ ಒಂದಿಷ್ಟು ಘೋಷಣೆಗಳನ್ನು ಕೂಗಿ, ಇಟ್ಟಿಗೆ ತುಂಡುಗಳನ್ನು ಪೊಲೀಸರ ಕಡೆ ಬೀಸಿ ಒಗೆದಾಗ ಹುಟ್ಟಿಕೊಂಡಿತು ಜನ ಕ್ರಾಂತಿ. ದಿನವೂ ಜನರು ಈಜಿಪ್ಟ್ ನ ರಾಜಧಾನಿ ಕೈರೋ ನಗರದ “ತೆಹ್ರೀರ್” ಚೌಕದಲ್ಲಿ ಸೇರಲು ತೊಅಗಿದರು. ಕೆಲವರಂತೂ ಟೆಂಟು ಗಳನ್ನು ಹಾಕಿ ಕೊಂಡು ಅಲ್ಲೇ ವಾಸಿಸುತ್ತಿದ್ದರು. ತಾತ್ಕಾಲಿಕ ಆಸ್ಪತ್ರೆಗಳೂ, ಔಷಧದಂಗಡಿ ಗಳೂ ತೆರೆದು ಕೊಂಡವು ಪ್ರತಿಭಟನಾಕಾರರ ಅವಶ್ಯಕತೆ ಪೂರೈಸಲು. ಇದನ್ನೆಲ್ಲಾ ನೋಡುತ್ತಿದ್ದ ಮುಬಾರಕ್ ಸಮಯ ತನ್ನ ಸಹಾಯಕ್ಕೆ ಬರಬಹುದು ಎಂದು ಲೆಕ್ಕ ಹಾಕುತ್ತಿದ್ದ. ಮುಬಾರಕ್ ಠಕ್ಕ ಮಾತ್ರವಲ್ಲ ಜಾಣ ನರಿಯೂ ಕೂಡಾ. ಎಷ್ಟಿದ್ದರೂ ರಾಜಕಾರಣಿಯಲ್ಲವೇ. ರಾಜಕಾರಣದ ಜೊತೆಗೇ ತಾನು ಸೇವೆ ಸಲ್ಲಿಸುತ್ತಿದ್ದ ಸೈನ್ಯದ ಕಾಠಿಣ್ಯ ಸಹ ಅವನಿಗೆ ಬಳುವಳಿಯಾಗಿ ಬಂದಿತ್ತು. ವಾಯುಸೇನೆಯ ನಿವೃತ್ತ ಫೈಟರ್ ಪೈಲಟ್ ಮುಬಾರಕ್. ವಿವಿಧ ಕ್ಷೇತ್ರಗಳಲ್ಲಿ ತಾನು ಕಲಿತ ವಿದ್ಯೆಯನ್ನು ದುಡಿಸಿ ಕೊಳ್ಳಲು ನೋಡಿದ. ಊಹೂಂ. ಜನ ಮೊಂಡು. ಕ್ರಾಂತಿಯ ಮೊದಲ ದಿನಗಳಲ್ಲಿ ಅವರ ಬೇಡಿಕೆ ಸರಳವಾಗಿತ್ತು. ನೀನು ತೊಲಗಿದರೆ ಸಾಕು, ಬೇರೇನೂ ಬೇಡ ಎಂದು. ದಿನ ಗಳೆದಂತೆ, ಹೊಸ ಹೊಸ ಸೂರ್ಯನ ಕಿರಣಗಳು ಚೌಕದ ಮೇಲೆ ಬೀಳುತ್ತಿದ್ದಂತೆ ತಲೆಯಲ್ಲಿ ಹೊಸ ಹೊಸ ವಿಚಾರಗಳು ಹುಟ್ಟಿಕೊಂಡವು. ಸಂವಿಧಾನ ಬದಲಿಸಬೇಕು, ನಿನ್ನ ಸಂಗಾತಿಗಳು ಉತ್ತರಾಧಿಕಾರಿ ಆಗಬಾರದು, ನೀನು ತೊಲಗಿದರೆ ಮಾತ್ರ ಸಾಲದು, ಕಟಕಟೆಯ ಹಿಂದೆ ನಿಂತು ಆಡಳಿತ ದುರುಪಯೋಗದ ಮತ್ತು ಖಜಾನೆ ಲೂಟಿಯ ಬಗ್ಗೆ ಉತ್ತರ ಕೊಡಬೇಕು ಎಂದು ದೊಡ್ಡ ಪಟ್ಟಿ ಮಾಡಿದರು. ಯಾವುದೇ ಪರಿಣಾಮ ಕಾಣದಾದಾಗ ಆಡಳಿತಾರೂಢ ಪಕ್ಷದ ಕೇಂದ್ರ ಕಛೇರಿಯನ್ನು ಜನ ಅಗ್ನಿಗೆ ಅರ್ಪಿಸಿದಾಗ ಭಯಬಿದ್ದ ಮುಬಾರಕ್ ಜನರನ್ನುದ್ದೇಶಿಸಿ ಮಾತನಾಡಿ ಎಲ್ಲ ರೀತಿಯ ಆಶ್ವಾಸನೆಗಳನ್ನು ಜನರಿಗೆ ನೀಡಲು ತೊಡಗಿದ. ಅವನ ಬತ್ತಳಿಕೆಯಲ್ಲಿನ ಬಾಣಗಳು ಖಾಲಿಯಾದವೇ ಹೊರತು ಜನರ ಬೇಡಿಕೆ ಮಾತ್ರ ಸ್ಪಷ್ಟವಾಗಿತ್ತು. Mubarak, we hate you.

೧೧.೨.೨೦೧೧ ಶುಕ್ರವಾರ. ಶುಭ ಶುಕ್ರವಾರ ಈಜಿಪ್ಷ್ಯನ್ನರಿಗೆ. ಗುರುವಾರ ರಾತ್ರಿಯಷ್ಟೇ ನಾನು ರಾಜೀನಾಮೆ ನೀಡಲಾರೆ ಎಂದು ಹಠ ಹಿಡಿದಿದ್ದ ಮುಬಾರಕ್ ಕೊನೆಗೂ ಶರಣಾದ ಜನರ ಬೇಡಿಕೆಗಳಿಗೆ, ಭಾವನೆಗಳಿಗೆ.

೨೫.೧.೨೦೧೧ ಕ್ಕೆ ಆರಂಭವಾದ ಈಜಿಪ್ಟ್ ಕ್ರಾಂತಿ ಪರ್ವಯವಸಾನ ಕಂಡಿದ್ದು ಹೀಗೆ. ಜನರ ಆಸೆಗಳಿಗೆ, ಆಕಾಂಕ್ಷೆಗಳಿಗೆ ಸ್ಪಂದಿಸದ ಎಂಥದ್ದೇ ದೊಡ್ಡ ಸರ್ವಾಧಿಕಾರಿಯೂ ಹೆಚ್ಚು ದಿನ ಆಳಲಾರ. ದೀರ್ಘಾವಧಿ ಅಧಿಕಾರದ ಗದ್ದುಗೆ ಮೇಲೆ ಕೂತ ವ್ಯಕ್ತಿ ಶುದ್ಧ ಸೋಮಾರಿಯಾಗಿ ಬಿಡುತ್ತಾನೆ. ಕಿವುಡೂ ತನ್ನನ್ನು ಸುತ್ತುವರೆದುಕೊಳ್ಳುತ್ತದೆ. ಮಧ್ಯ ಪ್ರಾಚ್ಯದಲ್ಲಿ ಇಂಥ ಸೋಮಾರಿಗಳ ದೊಡ್ಡ ದಂಡೇ ಇದೆ. ಬಹುಶಃ ತುನೀಸಿಯಾದ ಮತ್ತು ಈಜಿಪ್ಟ್ ನ ಬೀದಿಗಳು ಅವರಿಗೆ ಪಾಠಗಳಾಗ ಬಹುದು. ಈ ಕ್ರಾಂತಿಗಳಿಂದ ಮೈಮುರಿಯುತ್ತಾ ಏಳುತ್ತಿರುವ ಸಿರಿಯಾ, ಜೋರ್ಡನ್, ಯೆಮನ್ ದೇಶಗಳು ಈಗಾಗಲೇ ಜನರಿಗೆ ರಿಯಾಯಿತಿ ನೀಡಲು ಆರಂಭಿಸಿವೆ. ಈ ಕ್ರಾಂತಿಯ ವೇಳೆ ಸೌದಿ ದೊರೆ ಬೆನ್ನು ನೋವಿನಿಂದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದು ಮೊರೋಕ್ಕೋ ದೇಶದ ತನ್ನ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆತಂಕದಿಂದ ದೊರೆ ಮರಳಿ ತನ್ನ ದೇಶಕ್ಕೆ ಧಾವಿಸಿ ಬರಬಹುದು ಎಂದು ಇಲ್ಲಿ ಜನ ತಿಳಿದಿದ್ದರು. ಆದರೆ ಇಲ್ಲಿನ ದೊರೆಯ ಕಾರ್ಯಶೈಲಿ ಸ್ವಲ್ಪ ಭಿನ್ನ, ಮುಬಾರಕ್ ನಂಥವರಿಗಿಂತ. ದೇಶದ ಸಂಪತ್ತನ್ನು ದೋಚಿಕೊಂಡು ಜನರಿಗೆ ಏನನ್ನೂ ಮಾಡದೆ ಕೂತು ಬಿಡುವುದಿಲ್ಲ. ತನ್ನ ಜನರಿಗೂ ಒಂದಿಷ್ಟು ಒಳಿತನ್ನೇ ಮಾಡುತ್ತಾರೆ. ಈ ಕ್ರಾಂತಿಗಳ ನಂತರ ಸೌದಿಯಲ್ಲಿಯೂ ಸಹ ಜನರ ಮನೆ ಸಾಲವನ್ನು ಸರಕಾರ ಮನ್ನಾ ಮಾಡಿದೆ. ಇನ್ನೂ ಕೆಲವು sop ಗಳು ಬರಲಿವೆ ಎಂದು ಜನ ಜೊಳ್ಳು ಸುರಿಸುತ್ತಾ ಕಾಯುತ್ತಿದ್ದಾರೆ. ಇದ್ಯಾವುದೂ ಸಾಲದು ಎಂದೇನಾದರೂ ಜನ ಗೊಣಗುವ ಯತ್ನ ನಡೆಸಿದರೆ ಸದೆ ಬಡಿಯಲು ಧಾರ್ಮಿಕ ಗುರುಗಳನ್ನು ಬಳಸಿಕೊಳ್ಳುತ್ತಾರೆ. ಶ್ರದ್ಧಾವಂತ ಸೌದಿ ಜನತೆ ಇಲ್ಲಿನ ಪುರೋಹಿತ ಶಾಹಿಗಳಿಗೆ ಹೆದರುತ್ತಾರೆ, ಪುರೋಹಿತಶಾಹಿಗಳು ಸರಕಾರೀ ಆಶ್ರಯದಲ್ಲಿ ತಮಗೆ ಬೇಕಾದನ್ನು ಪಡೆದು ನಿಷ್ಠೆಯ ಬಾಡಿಗೆ ವಸೂಲು ಮಾಡುತ್ತಾರೆ. demand and supply policy.

ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಶೀತವಾದರೆ ಮೊದಲು ಸೀನುವುದು ಅಮೆರಿಕ ಎನ್ನುವ ವಿಚಾರ ಎಲ್ಲರಿಗೂ ತಿಳಿದದ್ದೇ. ಕ್ರಾಂತಿಯ ಮೊದ ಮೊದಲ ದಿನಗಳಲ್ಲಿ ದೊಡ್ಡ ರೀತಿಯ ಸುದ್ದಿ ಮಾಡದೆ ಮೌನವಾಗಿ ನೋಡಿದ ಅಮೇರಿಕಾ ಕೆಮ್ಮಲು ಆರಂಭಿಸಿತು. ಕೆಮ್ಮು ಜನರ ಪರವಾಗಿರಲಿಲ್ಲ. ಮುಬಾರಾಕ್ ಪರವಾಗಿತ್ತು. ಪ್ರತಿಭಟನೆ ಜೋರಾದಾಗ ವಿಚಲಿತವಾದ ಅಮೇರಿಕಾ ಹೇಳಿದ್ದು ನಮಗೆ ಈಜಿಪ್ಟ್ ಶಾಂತವಾಗಿರುವುದು ಬಹು ಮುಖ್ಯ, ಅಲ್ಲಿನ ಸರಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು. ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ನೀಡಿದ ಅರ್ಧ ಡಜನ್ ಗೂ ಹೆಚ್ಚು ಪತ್ರಿಕಾ ಹೇಳಿಕೆಗಳಲ್ಲಿ ಎಲ್ಲಿಯೂ ಮುಬಾರಕ್ ನ ರಾಜೀನಾಮೆ ಕೇಳಲಿಲ್ಲ. ಅಮೆರಿಕೆಗೆ ಮುಬಾರಕ್ ಬೇಕು. ಇಲ್ಲದಿದ್ದರೆ ಅಮೇರಿಕಾ ಮತ್ತು ಇತರೆ ದೇಶಗಳು ಹೆದರುವ muslim brotherhood ಎನ್ನುವ ಸಂಘಟನೆ ಅಧಿಕಾರಕ್ಕೆ ಬರುವ ಅಪಾಯ ವಿದ್ದು ಈ ಸಂಘಟನೆಯನ್ನು ಮುಬಾರಕ್ ಹದ್ದುಬಸ್ತಿನಲ್ಲಿ ಇಟ್ಟಿದ್ದ. ಪ್ರತಿಭಟನಾಕಾರರಲ್ಲಿ ಗಡ್ಡ ಬಿಟ್ಟವರ ಸಂಖ್ಯೆ ಹೆಚ್ಚಿತ್ತೋ ಎಂದು ಅಮೆರಿಕೆಯ ಮಾಧ್ಯಮಗಳು ದುರ್ಬೀನಿಟ್ಟು ನೋಡಿದವು ತಹ್ರೀರ್ ಚೌಕದ ಸುತ್ತ. ಶಕ್ತಿಶಾಲಿ ಅಮೇರಿಕಾ ಶತ್ರುವಿನ ಅತ್ಯಾಧುನಿಕ ಕ್ಷಿಪಣಿಗಳನ್ನೂ, ಯುದ್ಧ ನೌಕೆಗಳನ್ನೂ, ಸಮರ ಟ್ಯಾಂಕುಗಳನ್ನೂ ಬಹು ಸಲೀಸಾಗಿ ನಿಭಾಯಿಸಬಲ್ಲುದು. ಆದರೆ ಗಡ್ಡವನ್ನು ಕಂಡರೆ ಮಾತ್ರ ಕರುಳಿಗೆ ಚಳಿ ಹಿಡಿಯುತ್ತದೆ. muslim brotherhood ತನಗೆ ರಾಜಕೀಯದಲ್ಲಿ ವಿಶೇಷವಾದ ಆಸಕ್ತಿಯಿಲ್ಲ ಎನ್ನುವ ಹೇಳಿಕೆ ನೀಡಿದರೂ “hidden agenda” ಇಟ್ಟುಕೊಂಡು ಕೆಲಸ ಮಾಡುವ ಸಂಘಟನೆಗಳನ್ನು ನಂಬುವುದು ಕಷ್ಟದ ಮಾತೇ.

ಈಜಿಪ್ಟ್ ಶನಿವಾರದಿಂದ ಒಂದು ಹೊಸ ಸೂರ್ಯನನ್ನು ಸ್ವಾಗತಿಸಲಿದೆ. ಹೊಸ ಸ್ವಾತಂತ್ರ್ಯ, ಹೊಸ ಸಂಭ್ರಮ. ಎರಡು ವಾರಗಳ ಬೀದಿ ಹೋರಾಟ ಒಂದು ಹೊಸ ಅಧಾಯವನ್ನು ಆರಂಭಿಸಲು ಸಹಾಯ ಮಾಡಿದೆ. ಸಾಮಾಜಿಕ ವೆಬ್ ತಾಣಗಳ (twitter, facebook) ಮೂಲಕ ಯುವಜನ ಆರಂಭಿಸಿದ ನವಯುಗದ ಹೋರಾಟ ಫಲ ನೀಡಿದೆ. ಈ ಹೋರಾಟದಲ್ಲಿ ಯಾರ್ಯಾರು ಪಾಠ ಕಲಿಯಲಿದ್ದಾರೆ ಎಂದು ಕಾಲವೇ ಉತ್ತರ ಹೇಳಲಿದೆ.

ಚಿತ್ರ: ಅಲ್-ಜಜೀರ

ಈ ವೆಬ್ ತಾಣ ನಿಷಿದ್ಧ

عزيزي المستخدم، 

Dear User,

عفواً، الموقع المطلوب غير متاح.

Sorry, the requested page is unavailable.



إن كنت ترى أن هذه الصفحة ينبغي أن لا تُحجب تفضل بالضغط هنا. 

If you believe the requested page should not be blocked please click here.

ಬೇಡದ ವೆಬ್ ತಾಣಕ್ಕೆ ಭೆಟ್ಟಿ ನೀಡುವ ದಾರ್ಷ್ಟ್ಯತನ ತೋರಿದರೆ ಸೌದಿ ಯಲ್ಲಿರುವ ಇಂಟರ್ನೆಟ್ ಇಲಾಖೆ ಈ ಸಂದೇಶವನ್ನು ರವಾನಿಸುತ್ತದೆ. ಧರ್ಮಬಾಹಿರ, ಲೈಂಗಿಕ, ಹಿಂಸಾತ್ಮಕ contents ಇರುವ ತಾಣಗಳನ್ನು ತಡೆ ಹಿಡಿಯುತ್ತಾರೆ. ಹಾಗೇನಾದರೂ ನಿಮಗೆ ಅವರ ತೀರ್ಪಿನ ಬಗ್ಗೆ ತಕರಾರಿದ್ದರೆ ಈ ಮೇಲ್ ಮೂಲಕ  ಸಂಪರ್ಕಿಸ ಬಹುದು. world sex ತಾನವನ್ನು ನನಗಾಗಿ ಬಿಚ್ಚಿ ಕೊಡಪ್ಪ ಎಂದು ಯಾರಾದರೂ “ಮೇಲ್” ಮನವಿ ಸಲ್ಲಿಸಿಯಾರೆ? 
ಒಮ್ಮೆ times of india ತಾಣವನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಿದ್ದರು. ಆದರೆ ಅಚ್ಚರಿದಾಯಕವಾಗಿ ಸೌದಿಯ ಇಂಟರ್ನೆಟ್ ನಿರ್ಬಂಧ  ನಮ್ಮ ನೆರೆಯ ಚೀನಾದಷ್ಟು ಇಲ್ಲ. ಹಾಗೆಯೇ ಈಗ ನಡೆಯುತ್ತಿರುವ ಈಜಿಪ್ಟ್ ಸರ್ವಾಧಿಕಾರದ ವಿರುದ್ಧದ ಸಮಯ ಅಲ್ಲಿನ ಸರಕಾರ ಅಂತರ್ಜಾಲವನ್ನು ನಿಷೆಧಿಸಿದರೂ ಸೌದಿ ಆ ನಿಲುವನ್ನು ತಾಳಲಿಲ್ಲ. ಅಷ್ಟೊಂದು supremely confident ಇಲ್ಲಿನ ರೂಲರ್ ಗಳು.    

Switzerland. ಭೂಮಿಯ ಮೇಲಿನ ಸ್ವರ್ಗ

Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿ, swiss army knife, ವಿಶ್ವ ಪ್ರಸಿದ್ಧ Lindt chocolate, ಬೆಲೆಬಾಳುವ ವಾಚುಗಳ ಉತ್ಪಾದನೆ, ಮತ್ತು ವಿಶ್ವ ರಾಜಕಾರಣದಲ್ಲಿ ಯಾರ ಗೊಡವೆಗೂ ಹೋಗದೆ ತಟಸ್ಥ ನೀತಿ ಅನುಸರಿಸುವ ಒಂದು ಪುಟ್ಟ, ಅತಿ ಶ್ರೀಮಂತ ದೇಶ ಸ್ವಿಟ್ಜರ್ ಲ್ಯಾಂಡ್. ಇದು ನಮ್ಮ ಮುಗ್ಧ  ತಿಳಿವಳಿಕೆ ಈ ಪುಟ್ಟ ದೇಶದ ಬಗ್ಗೆ. 

ಆದರೆ ತನ್ನ ಸುತ್ತಲೂ ಶುಭ್ರ, ಮಂಜಿನ ಪರ್ವತವನ್ನೇ ಇಟ್ಟುಕೊಂಡ ಈ ಪುಟ್ಟ ದೇಶ ತನ್ನ ಒಡಲೊಳಗೆ ಇಟ್ಟುಕೊಂಡಿರುವುದು, ಶ್ರೀಮಂತವಾಗಿರುವುದು ಪಾಪದ ಹಣದ ಸಹಾಯದಿಂದ ಎಂದು ಹೇಳಿದರೆ ಹೌಹಾರುವಿರಾ?  

ವಿಶ್ವದ ಎಲ್ಲಾ ಭ್ರಷ್ಟ ರಾಜಕಾರಣಿ, ಅಧಿಕಾರಿ, ಕೈಗಾರಿಕೋದ್ಯಮಿ, ಕಳ್ಳ ಸಾಗಣೆದಾರ, ಮಾದಕ ದ್ರವ್ಯದ ವ್ಯಾಪಾರಿ ಹೀಗೆ ಹತ್ತು ಹಲವು ವರ್ಣರಂಜಿತ ವ್ಯಕ್ತಿತ್ವಗಳು ಲೂಟಿಗೈದ ಹಣವನ್ನು ಬಚ್ಚಿಡಲು ಆರಿಸಿಕೊಂಡ ತಾಣವೇ ಸ್ವಿಟ್ಜರ್ ಲ್ಯಾಂಡ್. ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ಇಟಲಿ ದೇಶಗಳಿಂದ ಸುತ್ತುವರೆದ ಸ್ವಿಸ್ಸ್, ಒಳ್ಳೆ ಬೆಚ್ಚಿಗಿನ ದೇಶ ಲೂಟಿ ಕೋರರಿಗೆ, ಪುಂಡರಿಗೆ. ಇದಕ್ಕಿಂತ ಬೆಚ್ಚಗಿನ, ರಹಸ್ಯ ಸ್ಥಳ ಬೇರೆಲ್ಲಿ ಸಿಗಲು ಸಾಧ್ಯ ಕಳ್ಳ ಧನವನ್ನು ಬಚ್ಚಿಡಲು, ಅಲ್ಲವೇ?   

ಭಾರತೀಯರು ಕೋಟಿಗಟ್ಟಲೆ ತೆರಿಗೆ ವಂಚಿಸಿದ, ನಮ್ಮ ಸಂಪನ್ಮೂಲ ಕದ್ದ, ಲಂಚದ ಮೂಲಕ ಗಳಿಸಿದ ಪಾಪದ ಹಣವನ್ನೂ ಸ್ವಿಸ್ ರೀತಿಯದೇ ಆದ Liechtenstein (ಲೀಚ್ಟೆನ್ ಸ್ಟೈನ್, ಯೂರೋಪ್ ನ ಮತ್ತೊಂದು ಮೈಕ್ರೋ ಸ್ಕೋಪಿಕ್ ದೇಶ )  ಬ್ಯಾಂಕ್ ನಲ್ಲಿ ಹೂತು ಹಾಕಿರುವುದನ್ನು ತೆಹೆಲ್ಕಾ ಬಯಲಿಗೆ ಹಾಕಿದೆ. ಸುಮಾರು ಹದಿನೈದು ಜನರ ಹೆಸರನ್ನು ಬಹಿರಂಗ ಗೊಳಿಸಿರುವ ತೆಹೆಲ್ಕಾ ಬರುವ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಹೊರಗೆಡವಲಿದೆ.  

ಸ್ವಿಸ್ ದೇಶದಲ್ಲಿ ಅಕ್ರಮವಾಗಿ ಧನ ಗುಡ್ಡೆ ಹಾಕಿರುವ ಜನರ ಹೆಸರುಗಳನ್ನು ಅಲ್ಲಿನ ಬ್ಯಾಂಕುಗಳು ಬಹಿರಂಗ ಪಡಿಸಬೇಕು. ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದೂ ಅಲ್ಲದೆ ಲೂಟಿಗೈದ ಸಂಪತ್ತಿಗೆ ತೆರಿಗೆಯನ್ನೂ ಕಟ್ಟದೆ ದುರಹಂಕಾರದಿಂದ ಮೆರೆಯುವ, ಶ್ರೀಮಂತರು ತಾವು ತಿಂದಿದ್ದನ್ನು ಕಕ್ಕಬೇಕು. ದೇಶದಲ್ಲಿ ಆಗಾಗ ಹೊರಬೀಳುತ್ತಿರುವ ಪ್ರತೀ ಹಗರಣದ ಹಿಂದೆಯೂ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿಯ ಮಾಹಿತಿ ಇದ್ದೂ ನಾವು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.  ಅದರ ಮೇಲೆ ಭಾರತ ಬಡ ದೇಶ ಎನ್ನುವ ಪಟ್ಟ ಬೇರೆ.  ಹೆಚ್ಚು ಎಂದರೆ ಅವನು ರಾಜಕಾರಣಿಯಾದರೆ ರಾಜೀನಾಮೆ ನೀಡಬಹುದು ಅಷ್ಟೇ. ರಾಜೀನಾಮೆ ನಂತರ ತಾನು ಕಬಳಿಸಿದ ಸಂಪತ್ತನ್ನು ಜೀವನ ಪೂರ್ತಿ ತಾನು ತನ್ನ ಮಕ್ಕಳು ತಿನ್ನಬಹುದು. ಜನರ ಮನ್ನಣೆಯನ್ನೂ ಗಳಿಸಿಕೊಳ್ಳಬಹುದು. ಇಂಥ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಒಳಗೊಂಡ ಹಗರಣಗಳನ್ನು ನೋಡಿದಾಗ ನಮಗನ್ನಿಸದೆ ಇರುತ್ತದೆಯೇ ನಮ್ಮ ದೇಶ ನಾವೆಣಿಸಿದಂತೆ ಬಡ ದೇಶವಲ್ಲ ಎಂದು?  

ತನ್ನ ಸ್ವ- ರಕ್ಷಣೆಗಾಗಿ ಅಥವಾ ಇಂಧನದ ಅವಶ್ಯಕತೆಗಾಗಿ ಅಣು ಸ್ಥಾವರಗಳನ್ನು ನಿರ್ಮಿಸಿದ್ದಕ್ಕೆ ಇರಾನಿನ ಮೇಲೆ ಹರಿ ಹಾಯುವ ಪಾಶ್ಚಾತ್ಯ ದೇಶಗಳು ಸ್ವಿಸ್ ತೆರನಾದ ಮೋಸದ ಜಾಲದ ಬಗ್ಗೆ ಮಾತ್ರ ಮೌನ ತಾಳಿರುವುದು  ಆಷಾಢ ಭೂತಿತನದ ಪರಮಾವಧಿ. ಕೊಳಕು ಹಣವನ್ನು ಒಡಲಲ್ಲಿಟ್ಟುಕೊಂಡು ವಿಶ್ವಕ್ಕೆ ತಾನು ಸಭ್ಯಸ್ಥ ಎಂದು ತೋರಿಸುವ ಸ್ವಿಸ್ ಪರಿಪಾಠ ಹೇಸಿಗೆ ಹುಟ್ಟಿಸುವಂಥದ್ದು. ಮೋಸದ, ಲಂಚದ ಹಣವನ್ನು ರಹಸ್ಯವಾಗಿ,  ಜೋಪಾನವಾಗಿರಿಸಿ ಬಡ ದೇಶಗಳಲ್ಲಿರುವ ಲಂಚಗುಳಿತನದ ಬಗ್ಗೆ ಮರುಕ ತೋರುತ್ತಾ ತಾನು ವಿಶ್ವದಲ್ಲಿ ಲಂಚ ರಹಿತ ದೇಶ ಎಂದು ತೋರಿಸಿಕೊಳ್ಳುವ ದೇಶದ ಬಗ್ಗೆ ಏನೆನ್ನಬೇಕೋ ತಿಳಿಯದು. ಬ್ಯಾಂಕಿಂಗ್ ಗೌಪ್ಯವನ್ನು ಕಾಪಾಡಲು ಸ್ವಿಟ್ಜರ್ ಲ್ಯಾಂಡ್ ನ ೭೩ % ಜನ ರ ಬೆಂಬಲವಿದೆಯಂತೆ. ಇಲ್ಲದೆ ಏನು, ಈ ಕಳ್ಳ ಹಣದ ನೆರವಿನಿಂದಲೇ ಅಲ್ಲವೇ ಅವರ ಬಾಳು ಬೆಳಗುತ್ತಿರುವುದು.

ಭಯೋತ್ಪಾದಕರು ಯಾವುದಾದರೂ ದೇಶದಲ್ಲಿ ಅಡಗಿ ಕೂತರೆ ಅವರನ್ನು ಹೊಗೆ ಹಾಕಿ ಹೊರಕ್ಕೆಳೆಯುವ ಅಮೆರಿಕೆಯಾಗಲಿ, ಅಥವಾ ಇನ್ಯಾವುದೇ ದೇಶವಾಗಲೀ ಸ್ವಿಸ್ ಬ್ಯಾಂಕುಗಳಲ್ಲಿ ಬಡ ದೇಶಗಳ ಧನ ಲೂಟಿ ಮಾಡಿ ಕಲೆಹಾಕಿದ್ದಕ್ಕೆ ಸ್ವಿಸ್ ದೇಶವನ್ನು ದಂಡಿಸಲು ಸಾಧ್ಯವೇ? ಭಯೋತ್ಪಾದಕ ಕೃತ್ಯದಲ್ಲಿ ಒಬ್ಬ ಭಾಗಿಯಾಗಿಲ್ಲದಿದ್ದರೂ ಓರ್ವ  ಭಯೋತ್ಪಾದಕನಿಗೆ ಆಶ್ರಯ ನೀಡುವುದೂ ಭಯೋತ್ಪಾದನೆಗೆ ಸಹಕರಿಸಿದ್ದಂತೆ. ಈ ಮಾನದಂಡವನ್ನು ಸ್ವಿಸ್ ನಂಥ ದೇಶಗಳ ಮೇಲೆ ಏಕೆ ಉಪಯೋಗಿಸಬಾರದು?  ಲೂಟಿ ಮಾಡಿದವ ಮಾತ್ರ ಕಳ್ಳನಲ್ಲ, ಅವನ ಲೂಟಿಯನ್ನು ಜಾಗರೂಕತೆಯಿಂದ ಕಾಯುವುದೂ ಠಕ್ಕತನವೇ.  

ಸ್ವಿಸ್ ದೇಶದ ಗಿರಾಕಿಗಳಲ್ಲಿ ಬರೀ ಲಂಚ ತಿನ್ನುವ ರಾಜಕಾರಣಿಗಳು ಮಾತ್ರವಲ್ಲ. ಮೆಕ್ಸಿಕೋ ದೇಶದ ಮಾದಕ ದ್ರವ್ಯ ಮಾರುವ ದೊರೆಗಳು ಸಹ ಇಲ್ಲಿ ಹಣ ಅಡಗಿಸಿಡುತ್ತಾರೆ. ಅಂದರೆ ಪ್ರಪಂಚವನ್ನು ಕಾಡುತ್ತಿರುವ ಎಲ್ಲ ರೀತಿಯ ಪೀಡೆಗಳಿಗೆ ಸ್ವಿಸ್ ನೇರ ಹೊಣೆ ಎಂದರೆ ತಪ್ಪಾಗಬಹುದೇ?

ನೈಜೀರಿಯಾದ ಸಾನಿ ಅಬಾಚ, ಕೀನ್ಯಾದ ಡೇನಿಯಲ್ ಅರಪ್ ಮೊಯ್, ಫಿಲಿಪ್ಪಿನ್ಸ್ ದೇಶದ ಮಾರ್ಕೋಸ್, ನೆರೆಯ ಪಾಕಿಸ್ತಾನದ ಭುಟ್ಟೋ ಪರಿವಾರ, ಇಂಥ ಸರ್ವಾಧಿಕಾರಿಗಳು ಮತ್ತು ಭ್ರಷ್ಟರು ಸ್ವಿಸ್ ದೇಶದ ಮಿತ್ರರುಗಳು. ಆಂಗ್ಲ ಭಾಷೆಯಲ್ಲಿನ ಗಾದೆ; A person is known by the company he keeps.   

ವಿಶ್ವ ಸಮುದಾಯದಲ್ಲಿ ಸ್ವಿಸ್ ತಟಸ್ಥ ದೇಶವಾದರೆ ಮಾತ್ರ ಸಾಲದು, ಒಂದು ಜವಾಬ್ದಾರಿಯುತ ದೇಶವಾಗಿ ವಿಶ್ವದ ಬಡಜನರ, ಹತಾಶೆಗೂ ಸಹ ಸ್ಪಂದಿಸಬೇಕಾದ್ದು ಅತ್ಯಗತ್ಯ. ಬಡದೇಶಗಳ ಸಂಪತ್ತನ್ನು ಲೂಟಿ ಮಾಡಿದ ನಾಯಕರುಗಳ ಬ್ಯಾಂಕ್ ಖಾತೆಯನ್ನು ರಹಸ್ಯವಾಗಿರಿಸಿ ತನ್ಮೂಲಕ ಹಗಲು ದರೋಡೆಗೆ ಪರೋಕ್ಷ ಸಹಾಯ ನೀಡುತ್ತಿರುವ ಸ್ವಿಸ್ ಒಂದು ಪರಾವಲಂಬಿ ದೇಶ ಎನ್ನುವ ಬಿರುದು ಕಟ್ಟಿಕೊಂಡು ಬದುಕುವುದು ಬೇಡ. ಶೀತಲ ವಾತಾವರಣದ ಜನರ ಭಾವನೆಗಳು ಶೀತಲವಾಗಿಬಿಟ್ಟರೆ ಆಗುವ ಅನಾಹುತಕ್ಕೆ ಸ್ವಿಸ್ಸ್ ದೇಶವೇ ಸಾಕ್ಷಿಯೇನೋ? ಹಸಿವು, ರೋಗ, ಕುಡಿಯುವ ಸ್ವಚ್ಚ ನೀರಿನ ಅಭಾವ, ರಸ್ತೆ, ಆಸ್ಪತ್ರೆ, ಶಾಲೆಗಳ ತೀವ್ರ ಕೊರತೆ ಮುಂತಾದ ನೂರೊಂದು ಸಾಮಾಜಿಕ ಸಮಸ್ಯೆಗಳಿಂದ ಬಡ ದೇಶಗಳ ಜನ ಬಳಲುತ್ತಿದ್ದರೆ ತನ್ನ ತಿಜೋರಿಯನ್ನು ಪಾಪದ ಹಣದಿಂದ ಅಲಂಕರಿಸುವುದು ಬೇಡ. 

 ಬಡ ರಾಷ್ಟ್ರಗಳು ತಮ್ಮ ದೇಶದಿಂದ ಹೊರ ಹೋದ ಹಣಕ್ಕಾಗಿ ಸ್ವಿಸ್ ದೇಶವನ್ನು ಸಂಪರ್ಕಿಸಿದಾಗ ಕಾನೂನು ತೊಡಕುಗಳನ್ನು ಕಾರಣವಾಗಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ಕೊಡದೆ ವರ್ಷಗಟ್ಟಲೆ ಕಾಯಿಸಿದರು. ಈ ಅವಧಿಯಲ್ಲಿ ಈ ಬಡ ರಾಷ್ಟ್ರಗಳಲ್ಲಿ ಹೊಟ್ಟೆಗಿಲ್ಲದೆ, ಔಷಧಿ ಇಲ್ಲದೆ ಸತ್ತ ಜನರ ಸಂಖ್ಯೆ ಅದೆಷ್ಟೋ ದೇವರೇ ಬಲ್ಲ. ತನ್ನ ಪ್ರಜೆಗಳು ಕೊಬ್ಬು ತುಂಬಿದ ಸ್ಟೇಕ್ ತಿನ್ನುತ್ತಾ ವೈನು, ಬೀರು ಸವಿಯುತ್ತಿದ್ದರೆ ಬಡ ದೇಶಗಳ ಬಹುಸಂಖ್ಯಾತ ಜನ ಒಪ್ಪೊತ್ತಿನ ಅನ್ನವಿಲ್ಲದೆ ನರಳುವ ದೃಶ್ಯ ವಿಶ್ವದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ನಮ್ಮ ದೇಶದಿಂದ ಸ್ವಿಸ್ ದೇಶಕ್ಕೆ ವಲಸೆ ಹೋದ ಅಗಾಧ ಸಂಪತ್ತು ಮರಳಿ ಬಂದರೆ ಕೆಳಗೆ ತೋರಿಸಿದ ಮಕ್ಕಳ ಅಸಹಾಯಕ ಪರಿಸ್ಥಿತಿ ಸುಧಾರಿಸಲು ನೆರವಾಗಬಹುದು.

ಆರು ವರ್ಷ ಪ್ರಾಯದ ವಿಶಾಲ್ ಒಂದು ಕಪ್ ಚಹಾ ಮತ್ತು ಎರಡು ತುಂಡು ಬಿಸ್ಕಿಟ್ ಒಂದಿಗೆ ತನ್ನ ದಿನವನ್ನು ಆರಂಭಿಸುತ್ತಾನೆ. ಬಡ ಮಕ್ಕಳಿಗೆ ಪುಕ್ಕಟೆಯಾಗಿ ಹಂಚುವ ಚಿತ್ರಾನ್ನ ಅವನ ಮಧ್ಯಾಹ್ನದ ಊಟ. ಅದರಲ್ಲಿ ಅರ್ಧ ತಿಂದು ಮತ್ತೊಂದಿಷ್ಟನ್ನು ತೆಗೆದಿಡುತ್ತಾನೆ ಹಸಿದಾಗ ತಿನ್ನಲು. ರಾತ್ರಿ ಹಸಿದಾಗ ಐದು ರೂಪಾಯಿಯ ಕುರ್ಕುರೆ ಕೊಡಿಸುತ್ತಾಳೆ ಅವನ ತಾಯಿ. ಈ ತಿನಿಸುಗಳೇ ಅವನ ಒಂದು ದಿನದ ಆಹಾರ. ಇಷ್ಟು ತಿಂದಾಗ ವಿಶಾಲನಿಗೆ ಸಿಗುವ ಕ್ಯಾಲೋರಿಗಳು ೮೫೬.

ಎರಡು ವರ್ಷದ ಸುರ್ಜ ಕೊಲ್ಕತ್ತಾದ ಕಲ್ಯಾಣಿ ರೈಲ್ವೆ ಸ್ಟೇಶನ್ ನ ಪ್ಲಾಟ್ಫಾರ್ಮ್ ನಾಲ್ಕರಲ್ಲಿ ಮನೆ ಮಾಡಿ ಕೊಂಡಿದ್ದಾನೆ. ಬೆಳಗ್ಗಿನ ತಿಂಡಿಗೆ ಅರ್ಧ ಪೂರಿ. ಮಧ್ಯಾಹ್ನ, ಎರಡು ಹಿಡಿ ಅನ್ನ ಮತ್ತು ಬೇಳೆ ಸಾರು. ರಾತ್ರಿ ಮತ್ತೆರಡು ಹಿಡಿ ಅನ್ನ, ಸಾರು ಅಥವಾ ಒಂದು ರೊಟ್ಟಿ. ಸುರ್ಜ, ಐದು ವರ್ಷಗಳ ತನ್ನ ಅಕ್ಕ, ಮತ್ತು ಕುಷ್ಠ ರೋಗಿ ತಂದೆಯೊಂದಿಗೆ ವಾಸಿಸುತ್ತಾನೆ. ಬೇಡಿ ತಿನ್ನುವುದು ಅವರ ಬದುಕು. ದಿನಕ್ಕೆ ೨೦ – ೨೫ ರೂಪಾಯಿ ದುಡಿಯುತ್ತಾರೆ. ರೈಲು ಪ್ರಯಾಣಿಕರು ತಿಂದು ಉಳಿದುದನ್ನು ಇವರು ತಿಂದು ಬದುಕುತ್ತಾರೆ. ಇವರಿಗೆ ದೊರಕುವ ಕ್ಯಾಲೋರಿ ಹೆಚ್ಚು ಕಡಿಮೆ ವಿಶಾಲನಷ್ಟೇ. ನಮ್ಮ ಹೊಟ್ಟೆ ಬಡಿದ ಪಾಶ್ಚಾತ್ಯ ದೇಶಗಳ ಮಕ್ಕಳು ತಿನ್ನುವ ತಿನಿಸು ಮತ್ತು ಅವರಿಗೆ ಲಭ್ಯವಾಗುವ ಕ್ಯಾಲೋರಿ ಬಗ್ಗೆ ಬರೆಯಬೇಕೆ? ಬೇಡ ಬಿಡಿ, ಅವರಾದರೂ ತಿಂದುಂಡು ಚೆನ್ನಾಗಿರಲಿ.

child, Relief and You (CRY) ನಡೆಸಿದ ಸಮೀಕ್ಷೆಯ ವೇಳೆ ಸಿಕ್ಕಿದ ಚಿತ್ರಣ ಮೇಲಿನದು. CRY ಸಂಸ್ಥೆಗೆ ಸ್ವಿಸ್ ಸೇರಿ ಬಿಳಿಯ ದೇಶಗಳು ಧಾರಾಳವಾಗಿ ದಾನ ಕೊಡುತ್ತಿರಬಹುದು. ನಮ್ಮ ನಾಯಕರುಗಳು ಪೇರಿಸಿಟ್ಟ ಧನದ ಮೇಲೆ ಅವರಿಗೆ ಸಿಗುವ ಬಡ್ಡಿಯ ಒಂದಿಷ್ಟು ಅಂಶ. LET POOR KIDS FROM THIRD WORLD COUNTRIES SURVIVE ಅಂತ ಕನಿಕರದಿಂದ ದಾನ ಮಾಡುತ್ತಾರೆ ಬಿಳಿಯರು.   

“ವಿಶ್ವ ಹಸಿವಿನ ಸೂಚಿ” (world hunger index)  ಪ್ರಕಾರ ವಿಶ್ವದ ಪೌಷ್ಟಿಕಾಂಶ ಕೊರತೆಯಿರುವ ಶೇಕಡಾ ೪೨ ರಷ್ಟಿರುವ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳು ಭಾರತದಲ್ಲಿ ಇದ್ದಾರಂತೆ. India shining? ಕ್ಷಮಿಸಿ india starving ಎಂದಿರಬೇಕಿತ್ತು. india shining ಎಂದು ಹೇಳಿ ನಮಗೆ ಗರಿ ಗರಿಯಾದ ಟೋಪಿ ತೊಡಿಸಲು ಬಂದ ನಮ್ಮ ನಾಯಕರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದು ಹೇಳಿದವರಾರು?

ನನ್ನ ಮನವಿ ಇಷ್ಟೇ. ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯಲು ಹಾಕಿರುವ ಹಣ ನಮ್ಮ ದೇಶಕ್ಕೆ ಹಿಂತಿರುಗಲಿ. ಲೂಟಿ ಮಾಡಿದವರ ಮೇಲೆ ಸೇಡು ಬೇಡ. ಅವು ಆಗುವ ಹೋಗುವ ಕೆಲಸಗಳಲ್ಲ. ಅವರನ್ನು ಕ್ಷಮಿಸೋಣ ಆದರೆ ನಮ್ಮ ಸಂಪತ್ತು ಮಾತ್ರ ರವಾನೆಯಾಗಲಿ ಭಾರತಕ್ಕೆ.

ಸಂದರ್ಶನದಲ್ಲಿ ಕೇಳಿದ ಪ್ರಶ್ನೆ, ನಿನ್ನ ಸ್ತನಗಳು ಎಷ್ಟು ದಪ್ಪ?

ಮನೆಗೆಲಸಕ್ಕೆಂದು ಕೆಲಸಕ್ಕಿಟ್ಟರೆ ಆ ಮನೆಯ ರಹಸ್ಯವನ್ನು ಟಾಮ್ ಟಾಮ್ ಹೊಡೆದು ಹೇಳಬಾರದು. ಆದರೆ ಮನಸ್ಸು ಕೆಟ್ಟಾಗ, ಯಜಮಾನರು ತನ್ನನ್ನು ಮನುಷ್ಯರಂತೆ ಕಾಣಲು ವಿಫಲರಾದಾಗ ಅಂಥ ಜನರ ಮೇಲೆ ಹೇಸಿಗೆ ಹುಟ್ಟಿ ತಮ್ಮ ಅನುಭವವನ್ನು ಹೇಳಿ ಎದೆ ಹಗುರ ಮಾಡಿಕೊಳ್ಳುತ್ತಾರೆ ಕೆಲವರು. ಜರ್ಮನಿಯಲ್ಲಿ ಪೋಲಂಡ್ ದೇಶದ ಆಯಾಗಳು ಹೆಚ್ಚು. ಬರ್ಲಿನ್ ಗೋಡೆ ಬಿದ್ದ ನಂತರ ಪೋಲಂಡಿ ನಿಂದ ೫ ಲಕ್ಷಕ್ಕೂ ಹೆಚ್ಚು ಆಯಾಗಳು ಕೆಲಸಕ್ಕಾಗಿ ಜರ್ಮನಿಗೆ ಬಂದರು. ಜರ್ಮನಿ ಯೂರೋಪಿನ ಮಾತ್ರವಲ್ಲ ಜಗತ್ತಿನ ಶ್ರೀಮಂತ ದೇಶಗಳಲ್ಲೊಂದು. ಜರ್ಮನಿ ಸುಶಿಕ್ಷಿತ ದೇಶವಾದ್ದರಿಂದ ಎಲ್ಲರೂ ತಿಳಿದದ್ದು ಬಹಳ ಸಂಭಾವಿತರು, ಅತ್ಯಂತ ಶುಚಿತ್ವವಿರುವುವರು, ಶಿಸ್ತಿನ ಜನ ಎಂದು. ಆದರೆ ಈ ಆಯಾ ಅದೆಲ್ಲಾ ಸುಳ್ಳಿನ ಸರಮಾಲೆ, ಸತ್ಯ ನೋಡಿ ಇಲ್ಲಿದೆ ಎಂದು ಸುರುಳಿ ಬಿಚ್ಚಿಟ್ಟಳು ತಾನು ಬರೆದ ಪುಸ್ತಕ Under German Beds ರಲ್ಲಿ.

ಕೆಲಸಕ್ಕೆ ಸೇರುವ ಮುಂಚಿನ ಫೋನ್ ಸಂದರ್ಶನದಲ್ಲಿ ಮನೆ ಯಜಮಾನ ಕೇಳುವ ಪ್ರಶ್ನೆ “ ನಿನ್ನ ಮೊಲೆಗಳು ದಪ್ಪ ಇವೆಯೇ?” ಕೆಮ್ಪ್ಪು ಬಣ್ಣದ ಚಡ್ಡಿ ಧರಿಸುತ್ತೀಯಾ…. ಹೇಗಿದೆ ಪ್ರಶ್ನಾವಳಿ. ನೀನು ಬೆಳಿಗ್ಗೆ ಎಷ್ಟು ಘಂಟೆಗೆ ಏಳುತ್ತೀಯಾ, ಎದ್ದ ಕೂಡಲೇ ಏನು ಮಾಡುತ್ತೀಯ ಎಂದು ಕೇಳೋ ಬದಲು ಸ್ತನಗಳ ಗಾತ್ರದ ಬಗ್ಗೆ ಚಿಂತೆ.

ಒಬ್ಬ ಯಜಮಾನನಂತೂ ಅವಳ ಮುಂದೆ ಸಂಪೂರ್ಣ ವಿವಸ್ತ್ರನಾಗಿ ನಿಂತು ಬಿಡುತ್ತಿದ್ದನಂತೆ. ಇದ್ಯಾವ ಪರೀಕ್ಷೆಯೋ?

ಜರ್ಮನ್ನರು ಕೊಳಕು ಅಂತ ಈಕೆಯ ಅಭಿಪ್ರಾಯ. ಅವರ ಬೆಡ್ ಕೆಳಗೆ ಆಗ ತಾನೇ ಕೀಳಿಸಿಕೊಂಡ ಹಲ್ಲು, ಕೋಳಿ ಮಾಂಸದ ತುಂಡು ಹೀಗೇ ಬೇಡದ ವಸ್ತುಗಳು ಬಿದ್ದಿರುತ್ತವಂತೆ. ಕೆಲವೊಮ್ಮೆ ಹಣವನ್ನೂ ಸಹ ಬೇಕಾ ಬಿಟ್ಟಿ ಎಸೆದಿರುತ್ತಾರಂತೆ ಈಕೆಯ ಪ್ರಾಮಾಣಿಕತೆಯನ್ನು ಪರೀಕ್ಷಿಸಲೆಂದು. ಇದನ್ನು ಓದಿದ ನಂತರ ತಲೆ ಹರಟೆ ಪ್ರಶ್ನೆ ಕೇಳದೆ ಕೆಲಸಕ್ಕೆ ಬೇಕಾದ ಪ್ರಶ್ನೆ ಮಾತ್ರ ಕೇಳಿ, ಇಲ್ಲದಿದ್ದರೆ ನಿಮ್ಮನ್ನು ಉದಾಹರಣೆಯಾಗಿಸಿ ಪುಸ್ತಕವೊಂದು ಬಂದೀತು ಮಾರುಕಟ್ಟೆಗೆ.