ಸಮಸ್ಯೆಯ ಜಾಡನ್ನು ಹಿಡಿದು…..

Alexis de Tocqueville, ೧೯ ನೇ ಶತಮಾನದ ಫ್ರೆಂಚ್ ದಾರ್ಶನಿಕ ತನ್ನ Democracy in America ಪುಸ್ತಕದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆಯುತ್ತಾ The old regime and the revolution ಪುಸ್ತಕದಲ್ಲಿ ಫ್ರೆಂಚ್ ಕ್ರಾಂತಿ ವಾಸ್ತವ ಕ್ರಾಂತಿಗಿಂತ ಬಹು ಮೊದಲೇ ಶುರುವಾಗಿತ್ತು ಎಂದು ವಾದವನ್ನು ಮಂಡಿಸಿದ. ೧೮ ನೇ ಶತಮಾನದ ಕೊನೆಯಭಾಗದಲ್ಲಿ ನಡೆದ ಫ್ರೆಂಚ್ ಕ್ರಾಂತಿಗೆ ದಶಕಗಳ ಮೊದಲೇ ಭೂಗತ ಕಂಪನಗಳು ಶುರುವಾಗಿತ್ತು ಹಾಗೂ ಅಸಮಾನತೆ ಮತ್ತು ಅನ್ಯಾಯದ ಕಾರಣ ನಡೆದ ಈ ಕ್ರಾಂತಿಯ ಸುಳಿವನ್ನು ಜನ ಮೊದಲೇ ಅರಿತು ಜಾಣತನದಿಂದ ಪ್ರತಿಕ್ರಯಿಸಿದ್ದರೆ “ಭೀತಿಯ ಆಳ್ವಿಕೆ” (Reign of Terror) ಯನ್ನು ತಡೆಗಟ್ಟಬಹುದಿತ್ತು ಎಂದೂ ಹೇಳಿದ.

ಮೇಲಿನ ಹೇಳಿಕೆಯಲ್ಲಿ ನಮಗೆ ನಮ್ಮ ಮಧ್ಯೆಯೇ ಸಂಭವಿಸುತ್ತಿರುವ ಘಟನೆಗಳೊಂದಿಗೆ  ಸಾಮ್ಯತೆ ಕಾಣುತ್ತಿದೆಯೇ? ನಿನ್ನೆ ನಡೆದ ಬರ್ಬರ ಸಾಮೂಹಿಕ ಹತ್ಯೆಗೆ ಕಾರಣರಾದ ಮಾವೋ ಗಳು ನಮಗೆ ಈ ಸಾಮ್ಯತೆಯನ್ನು ಒದಗಿಸುತ್ತಿಲ್ಲವೇ? ಕಾಡಿನಿಂದ ಆರಂಭವಾದ ಸಾವಿನ ಛಾಯೆ ಈಗ ನಗರಗಳನ್ನೂ ಆವರಿಸತೊಡಗಿದೆ. ಎಲ್ಲರಿಗೂ ತಿಳಿದಂತೆ ಈ ನಕ್ಸಲ್, ಮಾವೋ ಮುಂತಾದ ಚಳುವಳಿಗಳು ಬಹು ಹಿಂದೆಯೇ ಶುರುವಾಗಿದ್ದವು. ಆದರೆ ಪ್ರಪಂಚದ ಎಲ್ಲಾ ಸರಕಾರಗಳಂತೆ ನಮ್ಮ ಸರಕಾರವೂ ಕಣ್ಣು ಬಿಟ್ಟಿದ್ದು ಹಿಂಸೆ ಕೈ ಮೀರಿದಾಗ, ರಕ್ತ ದ ಹೊಳೆ ಹರಿಯಲು ತೊಡಗಿದಾಗ. ಝರಿಯ ರೀತಿ ಆರಂಭವಾದ ಈ ಚಳುವಳಿ ರಕ್ತದ ಕಾಲುವೆಯನ್ನು ಹರಿಬಿಟ್ಟಾಗ ನಾವು ಕಂಗಾಲು. ನಿಜವಾಗಿ ಹೇಳಬೇಕೆಂದರೆ ಈ ಚಳುವಳಿಯನ್ನು ಹತ್ತಿಕ್ಕಲು ಬೇಕಾದ ಯಾವ ಪರಿಹಾರವೂ ನಮ್ಮಲ್ಲಿಲ್ಲ. ಇದ್ದಿದ್ದರೆ ನಮ್ಮ ಗಡಿ ಭದ್ರತಾ ಪಡೆಯ ಸೈನಿಕರು ದಂತೆವಾಡ ದಲ್ಲಿ ಜೀವ ತೆತ್ತಾಗಲೇ ಹೊರಬರುತ್ತಿತ್ತು ಪರಿಹಾರದ ಅಸ್ತ್ರ. ಈ ಸಾಮಾಜಿಕ ಸಮಸ್ಯೆಗೆ  ಸೈನಿಕ ಪರಿಹಾರವಾಗಲಿ, ಸಾಮಾಜಿಕ ಪರಿಹಾರವಾಗಲಿ ನಮಗೆ ಕಾಣುತ್ತಿಲ್ಲ. ನಕ್ಸಲ್ ಪೀಡೆಯನ್ನು ಬಲಿ ಹಾಕಲು ಸೈನ್ಯವನ್ನು ಕಾನನಕ್ಕೆ ಬಿಡಲು ಸಾಧ್ಯವಿಲ್ಲ ಎಂದು ನಾವು ಅರಿತಿದ್ದಾಯಿತು ಶ್ರೀಲಂಕೆಯಲ್ಲಿ. ತಮಿಳು ಭಯೋತ್ಪಾದಕರನ್ನು ಸದೆ ಬಡಿಯಲು ರಾಜೀವ್ ಗಾಂಧೀ ಆತುರ ತೋರಿಸಿ ಬೆರಳು ಕಚ್ಚಿ ಕೊಂಡಿದ್ದು ಮಾತ್ರವಲ್ಲ, ಶ್ರೀಲಂಕೆಯ ಅಂದಿನ ಅಧಕ್ಷ J.R. ಜಯವರ್ಧನೆ ಯವರ ರಾಜಕೀಯ ದಾಳಕ್ಕೆ ಬಲಿಯಾಗಿ, ಅಲ್ಲಿನ ಸೇನೆಯ ದ್ರೋಹದಿಂದಲೂ, ಕಾಡಿನಲ್ಲಿ ಹೋರಾಡಿದ ಅನುಭವದ ಕೊರತೆಯೂ ನಾವು ಮುಖ ಭಂಗ ಅನುಭವಿಸುವಂತೆ ಮಾಡಿತು. ಕಾಡಿನಲ್ಲಿ ಅವಿತು ಹೋರಾಡುವ ನಕ್ಸಲರು vietnam ನ “ವಿಎಟ್ ಕಾಂಗ್” ಥರದ ಹೋರಾಟಗಾರರು. ಸಾಮಾನ್ಯ ಜನ ಯಾರು, ನಕ್ಸಲರು ಯಾರು ಎಂದು ಹೇಳಲು ಸಾಧ್ಯವಿಲ್ಲ. vietnam ನಲ್ಲಿ ಅಮೇರಿಕಾ ಸೋತು ಸುಣ್ಣವಾಗಿದ್ದು ಈ ವ್ಯತ್ಯಾಸದ ಅರಿವಿಲ್ಲದೆ ಇದ್ದುದರಿಂದ. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ನಮ್ಮ ಸೈನ್ಯವನ್ನು ಕಾಡಿಗೆ ಕಳಿಸಬಾರದು. ದುಡುಕಿನ, ಮೂರ್ಖ ಸಾಹಸಕ್ಕೆ ನಮ್ಮ ಸೈನಿಕರು ಬಲಿಯಾಗುವುದು ಬೇಡ.  

ಶ್ರೀಮಂತ ಅತಿ ಶ್ರೀಮಂತನಾಗುತ್ತಿರುವುದು ಮತ್ತು ಬಡವ ದಿನೇ ದಿನೇ ಬಡತನದ ಪಾತಾಳಕ್ಕೆ ಇಳಿಯುತ್ತಿರುವುದು ನಮಗೆ ತಿಳಿದ ಸತ್ಯ. ಆದರೆ ಬಂಡವಾಳಶಾಹಿ ವ್ಯವಸ್ಥೆಯ ಮೊರೆ ಹೋದ ನಮಗೆ ಝಗ ಝಗಿಸುವ ನಿಯಾನ್ ಬೆಳಕುಗಳು, ಗಗನ ಚುಂಬಿ ಗೋಪುರಗಳು, ಕೆಲವು fly over ಗಳು ನಮ್ಮ ದೃಷ್ಟಿ ತಪ್ಪಿಸಿದವು. ನಮಗೆ ಟಾಟಾ, ಗೋದ್ರೆಜ್, ಅಂಬಾನಿಗಳಂಥವರ ಶ್ರೀಮಂತಿಕೆ,  ಬಾಲಿವುಡ್ ತಾರೆಯರ ಬದುಕುವ ರೀತಿ ಮೋಡಿ ಮಾಡಿದವು. ಇದೇ ನಿಜವಾದ ಭಾರತ ಎನ್ನುವ ಭ್ರಮೆ ಆವರಿಸಿತು. ಈ ಭ್ರಮೆಗೆ ಆಂಗ್ಲ ಮಾಧ್ಯಮಗಳು, ಕೃತಕ ಬದುಕನ್ನು ವೈಭವೀಕರಿಸುವ ಟಿವಿ ಧಾರಾವಾಹಿಗಳು ನೀರೆರೆದು ನಾವು ಪ್ರಗತಿಯಲ್ಲಿ  ಅಮೆರಿಕೆಯನ್ನು ಹಿಂದಕ್ಕೆ ಹಾಕಲು ಮೂರು ಗಜ ದೂರ ಮಾತ್ರ ಉಳಿದಿರುವುದು ಎಂದು ನಂಬುವಂತೆ ಮಾಡಿದವು. ಆದರೆ ವಾಸ್ತವವೋ? ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಪಾಲು ಒಪ್ಪೊತ್ತಿನ ಕೂಳಿಗಾಗಿ ಹರ ಸಾಹಸ ಮಾಡಬೇಕು. ದಿನೇ ದಿನೇ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿದವು. ಇಂಟರ್ನೆಟ್ ಯುಗ ಮತ್ತೊಂದು ರೀತಿಯ ಸಮಾಜವನ್ನೇ ಸೃಷ್ಟಿಸಿತು. ಎಂದೂ ಕಾಣದ ಕೇಳದ ದಶಸಾವಿರದಲ್ಲಿ ಎಷ್ಟು ಸೊನ್ನೆಗಳಿವೆ ಎಂದು ಗೊತ್ತಿಲ್ಲದ ಸಮುದಾಯ ಧಿಡೀರನೆ ದೊಡ್ಡ ಮೊತ್ತದ ಸಂಬಳ ಪಡೆದು ಮೆರೆಯಲು ತೊಡಗಿತು. ಚೌಕಾಶಿ ಎಂದರೆ ಒಂದು ಕೀಳು ಪರಿಪಾಠ ಎನ್ನುವ ಮಟ್ಟಿಗೆ ಹೇಳಿದ ಬೆಲೆಗೆ ಸಾಮಾನುಗಳನ್ನು ಕೊಂಡು ಬಡ ಜನರ ಬದುಕನ್ನು ಇನ್ನಷ್ಟು ದುಸ್ತರವಾಗಿಸಿತು. ಈ ರೀತಿಯ ಅಸಹಾಯಕ ಪರಿಸ್ಥಿತಿ ನಕ್ಸಲರಿಗೆ ವರದಾನವಾಗಿ ಪರಿಣಮಿಸಿತು.  ಥಳಕಿನ ಬದುಕು ಶೋಷಣೆ ಎಂದು ಜನರಿಗೆ ಮನವರಿಕೆ ಮಾಡಿಸಿ ಮುಗ್ಧ ಜನ ಶಸ್ತ್ರದ ಮೊರೆ ಹೋಗುವಂತೆ ಮಾಡಿತು.

ಹಿಂಸೆಯಿಂದ ಯಾರಿಗೂ ಲಾಭವಿಲ್ಲ ಎಂದು ಹೊಟ್ಟೆ ತುಂಬಿದವನಿಗೆ, ದೊಡ್ಡ ಕಾರನ್ನು ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿ ಟ್ಯಾಂಕ್ ತುಂಬುವವನಿಗೆ  ಗೊತ್ತು. ಆದರೆ ಹೊಟ್ಟೆಗಿಲ್ಲದೆ ಚೀರಾಡುವ, ತನ್ನ ಪುಟಾಣಿಗಳನ್ನು ವ್ಯರ್ಥವಾಗಿ ಸಮಾಧಾನ ಪಡಿಸಲು ಹೆಣಗಾಡುವವನಿಗೆ ಗೊತ್ತೇ ಈ ಸಾಮಾನ್ಯ ಲಾಜಿಕ್? ದಾರಿ ಕಾಣದೆ ಅಸಹಾಯಕರಾಗಿ ತನ್ನ ಹೊಟ್ಟೆಗಿಲ್ಲದಿದ್ದರೂ ಚಿಂತೆಯಿಲ್ಲ ನಮ್ಮನ್ನು ವಂಚಿಸಿದ ವ್ಯವಸ್ಥೆ ವಿರುದ್ಧ ಹೋರಾಡಿ ರಕ್ತ ಹರಿಸಬೇಕು ಎನ್ನುವುದು ಇವರ ಗುರಿಯಾಯಿತು. ಸಂಪತ್ತನ್ನು ದೋಚಿ ದುರಹಂಕಾರದಿಂದ ಮೆರೆಯುವವರಿಗೆ ತಿಳಿದಿರಲಿಲ್ಲವೇ ಇದೇ ಸಂಪತ್ತು ಅಸೂಯೆಯ ಹಾವಾಗಿ ಬಂದು ಕಚ್ಚೀತು ಎಂದು? ಪಾಪ ಅವರಿಗೆ ತಿಳಿಯುವ ಸಾಧ್ಯತೆ ತುಂಬಾ ಕಡಿಮೆ. surround sound ಮ್ಯೂಸಿಕ್ ಸಿಸ್ಟಂ, ಮತ್ತು ಹೋಂ ಥಿಯೇಟರ್ ನಲ್ಲಿ ಹಾಡು ಕೇಳುತ್ತಾ ಮೈಮರೆಯುವ ಮಂದಿಗೆ ಬಡವನ ಆಕ್ರಂದನ ಮುಟ್ಟದು, ಕೇಳದು. ಅಂದರೆ ಈ ರೀತಿಯ ತಾರತಮ್ಯದ ಬದುಕು ಗೂಳಿಯಾಗಿ ನಮ್ಮ ಮೇಲೆಯೇ ಎರಗದು ಎಂದು ನಮಗೆ ತಿಳಿದಿಲ್ಲ ಎಂದಲ್ಲ. ನಾವೆಷ್ಟೇ ಕೃತಕ ಮುಗ್ಧತೆ ಯನ್ನು ಪ್ರದರ್ಶಿಸಿದರೂ ನಮ್ಮೊಳಗೊಬ್ಬ ಇದ್ದೇ ಇರುತ್ತಾನಲ್ಲವೇ? ಮನಸ್ಸಾಕ್ಷಿ ಎಂಬ “ಗುರು” (inner teacher) ನಮಗೆ ತಿಳಿ ಹೇಳುತ್ತಲೇ ಇರುತ್ತಾನೆ. ಆದರೆ ಹಿತೋಪದೇಶ ಮಾಡುವ ತಂದೆಯನ್ನು, ಹಿರಿಯರನ್ನು ಅವಗಣನೆ ಮಾಡಿ ಬಾಯಿ ಮುಚ್ಚಿಸುವ ರೀತಿ ಈ ಗುರುವಿಗೂ ಇದೇ ಉಪಚಾರವನ್ನು ನಾವು ಕೊಟ್ಟೆವು. ಪರಿಣಾಮ ಈ ರಕ್ತದೋಕುಳಿ. ಏಕಾಏಕಿ ಮಕ್ಕಳು ತಬ್ಬಲಿಯಾಗುತ್ತಾರೆ, ಸುಮಂಗಲಿಯರು ವಿಧವೆಯರಾಗುತ್ತಾರೆ. ವೃದ್ಧ ಪಾಲಕರು ಪೋಷಿಸುವ ಮಕ್ಕಳನ್ನು ಕಳೆದುಕೊಂಡು ಪರಿತಪಿಸುತ್ತಾರೆ. ಭಯ, ಅಸಹಾಯಕತೆ ಎಲ್ಲೆಲ್ಲೂ ಆವರಿಸುತದೆ.

ನಿಸರ್ಗ calm before storm ರೀತಿ ನಮ್ಮ ನ್ನು ಅಚ್ಚರಿಗೊಳಿಸುತ್ತದೆ. ಆದರೆ ನಾವು ಕಾಣುತ್ತಿರುವ ನಕ್ಸಲ್ ಪ್ರತಿರೋಧಗಳು ಏಕಾಕಿ ಬಂದು ಬಿದ್ದಿದ್ದಲ್ಲ. ಚಿಕ್ಕ ಚಿಕ್ಕ ಕಂಪನಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಬಹುಶಃ ನಮಗದು ಸಂಗೀತದ drum ನ ಸದ್ದಿನಂತೆ ಕೇಳಿಸಿತು. ಮೇಲೆ ಹೇಳಿದಂತೆ ದೊಡ್ಡ ಮಟ್ಟದ ಹಿಂಸೆ ಆದಾಗಲೇ ಸರಕಾರ ತೂಕಡಿಕೆಯಿಂದ ತಲೆ ಎತ್ತುವಂತೆ ಮಾಡುವುದು. ತಲೆ ಎತ್ತಿದ ಮೇಲೋ? ತಲೆ, ಬಾಲ ಇಲ್ಲದ, ನಿಲ್ಲದ ಹರಟೆ. ಒಣ ಜಂಭ, ಒಣ ಬೆದರಿಕೆ. ಒಂದಿಷ್ಟು ಟಾಕ್ ಷೋ ಗಳು. ನಿವೃತ್ತ ಅಧಿಕಾರಿಗಳನ್ನು ಕರೆಸಿ ಒಂದಿಷ್ಟು ಚರ್ಚೆ, ನಂತರ ಮಹೋಗನಿ ಹಲಗೆಗಳಿಂದ ಆವೃತ್ತವಾದ, ಹವಾನಿ ಯಂತ್ರಿತ ಕಚೇರಿಗೆ ಹಿಂದಿರುಗಿ ಮತ್ತೊಂದು ತೂಕಡಿಕೆಗೆ ಸಿದ್ಧತೆ. ಇವರು ತೂಕಡಿಸುತ್ತಿರುವಾಗ ಅಮಾಯಕರು ರೈಲು ಹಳಿಗಳ ಮೇಲೆ ತಮ್ಮ ರಕ್ತ ಹರಿಬಿಟ್ಟು ಕೊಂಡು ಪ್ರಾಣ ಕಳೆದುಕೊಳ್ಳುವುದು. ಒಂದು ರೀತಿಯ vicious cycle.     

ಯಾವುದೇ ವಿವಾದ, ಸಮಸ್ಯೆ ಪರಿಹರಿಸಲು ಮಾತುಕತೆ ಬೇಕು. ಮಾತುಕತೆ ಎಂಥ ಸನ್ನಿವೇಶಗಳಿಗೂ ಒಂದು ದಿವ್ಯ ಮಂತ್ರ. ಜನ ಪರಸ್ಪರ ಮಾತನಾಡಬೇಕು. ಕಿವುಡತನ ಪ್ರದರ್ಶಿಸದೆ ಸವಾಧಾನವಾಗಿ ಒಬ್ಬರನ್ನೊಬ್ಬರು  ಅರಿಯಲು ಆರಂಭಿಸಬೇಕು. ಈ ಪ್ರಕ್ರಿಯೆ ಸಮಯ ತೆಗೆದು ಕೊಂಡರೂ ಆ ಸಮಯ ವ್ಯರ್ಥವಾಗಿ ಹೋಗುವುದಿಲ್ಲ.    

ಕ್ಷಿಪಣಿ ಉಡಾವಣೆಗಳು, ಚಂದ್ರಯಾನ, ಕಾಮನ್ ವೆಲ್ತ್ ಕ್ರೀಡೆಗಳು ಹಸಿದ ಜನರಿಗೆ ಒಪ್ಪೊತ್ತಿನ ಅನ್ನವನ್ನೋ, ಜೀವರಕ್ಷಕ ಔಷಧಿಗಳನ್ನೋ ಪೂರೈಸಲಾರವು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಮ್ ಸದಸ್ಯತ್ವ ದಿಂದ ದೊಡ್ಡ ಲಾಭವೇನೂ ಇಲ್ಲ. ನಮ್ಮ ego ವನ್ನು ಇನ್ನಷ್ಟು ಉಬ್ಬಿಸುತ್ತದೆ ಅಷ್ಟೇ. ಆಳುವವರು ಬಡವರ, ಅವಕಾಶ ವಂಚಿತರ ಹಿತದೃಷ್ಟಿಯ ಕಡೆ ತಮ್ಮ ದೃಷ್ಟಿ ನೆಡಬೇಕು. ಕೈಗಾರಿಕೋದ್ಯಮಿಗಳ, ಅಗರ್ಭ ಶ್ರೀಮಂತರ ಕೈಗಳಿಂದ “ಮದ್ಯ ತುಂಬಿದ ಪೆಗ್ಗು” ಗಳನ್ನು ಕಸಿದು ಒಂದು ಪರಿಹಾರಕ್ಕೆ ಅವರನ್ನೂ ಎಳೆದು ತರಬೇಕು. ತೆರಿಗೆ ವಂಚಿಸಿ ಮತ್ತು ತಮಗೆ ತೋಚಿದ ದಾರಿ ಹಿಡಿದು ಸಂಪತ್ತು ದೋಚುವವರಿಗೆ ಸಾಮಾಜಿಕ ಜವಾಬ್ದಾರಿ ಸಹ ಇರಬೇಕು. ಕ್ಷಿಪಣಿಗಳು ತಮ್ಮ ಘಳಿಗೆಗಾಗಿ ಇನ್ನಷ್ಟು ಸಮಯ ಕಾಯಲಿ. ಹಸಿದ ಉದರಕ್ಕೆ ಸಮಯ ಎನ್ನುವುದ ಜೀವನಾಡಿ. ಇನ್ನಷ್ಟು ಸಮಯ ವ್ಯರ್ಥಗೊಳಿಸದೆ ಎಲ್ಲಾ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ನಿರ್ದಿಷ್ಟ ಕಾರ್ಯ ಸೂಚಿಗೆ ಅಂತಿಟ್ಟುಕೊಂಡು ಬಡವರ, ನಿರ್ಗತಿಕರ ಆಕಾಂಕ್ಷೆ ಗಳನ್ನು ನೆರವೇರಿಸುವತ್ತ ಸರಕಾರ ಗಮನ ನೀಡಬೇಕು. ಅಲ್ಲಿಯವರೆಗೆ ನಕ್ಸಲರನ್ನು ಗಾಂಧೀವಾದಿಗಳು ಎಂದೆಲ್ಲಾ ಬಣ್ಣಿಸಿ ಯಾರಿಗೂ ಪ್ರಯೋಜನ ತಾರದ ಲೇಖನಗಳನ್ನ ಪ್ರಕಟಿಸಿ ಪರಿಸ್ಥಿತಿಯನ್ನು ಇನ್ನಷ್ಟು ಗೋಜಲುಗೊಳಿಸುವ ಬುದ್ಧಿವಂತರು ತಮ್ಮ ಲೇಖನಿಗೆ ಕಡಿವಾಣ ಹಾಕಲಿ.

ಪರೋಪಕಾರಿ ವೃಕ್ಷ

ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಕಳ್ಳ ಕಳ್ಳಿಯರಿಗೆ ಅನುಕೂಲವಾಗುವಂತೆ ಹಣ್ಣುಗಳನ್ನು ತನ್ನ ಮೈಮೇಲೆ ಬೆಳೆಸಿಕೊಂಡು ಮುಕ್ತ ಆಹ್ವಾನವೀಯುತ್ತದೆ ಲೂಟಿ ಮಾಡಿ ಕೊಳ್ಳಿ ಎಂದು. ಎಂಥ samaritan ಮರ ನೋಡಿ. ಎಲ್ಲಿದೆ ಆ ಮರ, ಎಂದು ಆಸೆ ಬುರುಕತನದಿಂದ ಕೇಳಬೇಡಿ. ಈ ಮರದ ತವರು ಸಾಗರದಾಚೆ. ಹಾಂ, ಸಾಗರದಾಚೆಯೋ? ಹಾಗಾದರೆ ಸಂಜೀವಿನಿಗಾಗಿ ಸಾಗರೋಲ್ಲಂಘನ ಮಾಡಿದ ಹನುಮಂತನ ಒಂದು ಟ್ರಿಕ್ ಪ್ರಯೋಗಿಸಿದರೆ ಹೇಗೆ? ಯಾವ ಉಲ್ಲಂಘನ ಬೇಕಾದರೂ ಮಾಡಿಕೊಳ್ಳಿ, ನನ್ನ ಕೈ ಕಾಲಿಗಲ್ಲವಲ್ಲಾ ಆಗೋದು ಬ್ಯಾನೆ.

ಹುಲು ಮನುಜರಿಗೆ ಒಂದು ತವರಾದರೆ ಈ ಪರೋಪಕಾರಿ ಮರಕ್ಕೆ ಹಲವು ತವರುಗಳು. ಪೆರಗ್ವೆ, ಅರ್ಜೆಂಟೀನ, ಬ್ರೆಜಿಲ್ ದೇಶಗಳಲ್ಲಿ ಕಾಣಸಿಗುವ ಈ ಮರ ಬರೀ ಪೋಕರಿಯರಿಗೆ ಮಾತ್ರ ಉಪಕಾರಿಯಲ್ಲ, ಔಷಧೀ ಗುಣಗಳನ್ನೂ ಸಹ ಹೊಂದಿದೆ. ಅಸ್ತಮಾ, ಆಮಶಂಕೆ ಮುಂತಾದ ರೋಗಗಳಿಗೆ ಇವು ರಾಮಬಾಣವಂತೆ. ಕ್ಯಾನ್ಸರ್ ರೋಗಕ್ಕೂ ಇದರ ಟೊಂಗೆಯಲ್ಲಿ ಉತ್ತರ ಇರಬಹುದು ಎಂದು ಲೆಕ್ಕಾಚಾರ. ಪುಕ್ಕಟೆ ಏನಾದರೂ ಸಿಗುತ್ತೆ ಎಂದರೆ ಜೋರಾಗಿಯೇ ಸಾಗುತ್ತದೆ ಲೆಕ್ಕಾಚಾರ, ಅಲ್ಲವೇ?

ಇನ್ನಷ್ಟು ಚಿತ್ರಗಳಿಗೆ ಕೆಳಗೆ ತೋರಿಸಿದ ತಾಣಕ್ಕೆ ಯಾತ್ರೆ ಬೆಳೆಸಿ:

http://www.kuriositas.com/2010/04/jabuticaba-tree-that-fruits-on-its.html

ಸ್ತ್ರೀಯರೇಕೆ ಚಂಡಮಾರುತಗಳು?

ಚಂಡಮಾರುತಗಳಿಗೂ, ಹೆಣ್ಣಿಗೂ ಇರುವ ಸಂಬಂಧವೇನು?

ಇದೀಗ ಆಂಧ್ರ, ತಮಿಳು ನಾಡಿನ ತೀರಗಳನ್ನು ಅಪ್ಪಳಿಸಲಿರುವ ಚಂಡಮಾರುತದ ಹೆಸರು “ಲೈಲಾ” ಲೈಲಾ, ಹೋ ಲೈಲಾ ಲೈಲಾ, ಕೈಸಿ ಹೋ ಲೈಲಾ, ಹರ್ ಕೊಯಿ ಚಾಹೇ ತುಜ್ಸೆ, ಮಿಲ್ನಾ ಅಕೇಲಾ” ಎಂದು ತೀರದ ಮೀನುಗಾರರಂತೂ ಖಂಡಿತ ಹಾಡಲಾರರು. WMO (World Meterological Organization ) ಅದ್ಯಾವ ಮಾನದಂಡವನ್ನು ಉಪಯೋಗಿಸುತ್ತಾರೋ ಹೆಸರನ್ನು ನಿರ್ಧರಿಸುವಲ್ಲಿ ಎನ್ನುವುದು ಗೊತ್ತಿಲ್ಲ. ಆದರೂ ಈ ಹೆಸರುಗಳು invariably female ಆದ್ದರಿಂದ ಇವರೇನಾದರೂ ಸ್ತ್ರೀ ಧ್ವೇಷಿಗಳೋ ಎನ್ನುವ ಅನುಮಾನವೂ ಕಾಡದಿರದು. ಕೆಲವು ಪುರುಷರಿಗಂತೂ ಈ ಹೆಸರುಗಳು ಪುಳಕ ತರುವುದಂತೂ ನಿಜ. ಆಗೊಮ್ಮೆ ಈಗೊಮ್ಮೆ ನಮ್ಮ ಮನೆಯ ಅಡುಗೆ ಮನೆಯಲ್ಲಿ ಚಂಡಮಾರುತ brew ಆಗೋ ಲಕ್ಷಣ ಕಂಡಾಗ ನಾನು ನೋಡು, WMO ಇಲಾಖೆಗೆ ಮುಂದಿನ ಚಂಡಮಾರುತಕ್ಕೆ ಎಂದು ನಿನ್ನ ಹೆಸರನ್ನು ಸೂಚಿಸಿ ಮನವಿಯನ್ನು ಸಲ್ಲಿಸುತ್ತೇನೆ ಎಂದು ಬೆದರಿಸಿದಾಗ ಚಂಡಮಾರುತ ಹಿತ ಮಾರುತವಾಗಿ ಪರಿವರ್ತಿತವಾಗುತ್ತದೆ. ಸ್ತ್ರೀರತ್ನಗಳ ಹೆಸರುಗಳನ್ನ ಚಂಡಮಾರುತಕ್ಕೆ ಇಟ್ಟು ಮನೋರಂಜನೆ ಪಡೆಯುವ WMO ಇಲಾಖೆಗೆ ನಾರೀ ಮಣಿಗಳು ಪ್ರತಿಭಟನೆ ಸಲ್ಲಿಸಿದ್ದರಿಂದ ಈಗ ಈ ಕೆಣಕುವ ಪರಿಪಾಠವನ್ನು ನಿಲ್ಲಿಸಲಾಗಿದೆಯಂತೆ. ಈಗ ಒಂದು ಹೆಸರು ಹೆಣ್ಣಿನದ್ದಾದರೆ ಮತ್ತೊಂದು ಹೆಸರು ಗಂಡಿನದು. ಈಗ ಇಲ್ಲೊಂದು ಅನ್ಯಾಯ BREW ಆಗ್ತಾ ಇದೆ ನೋಡಿ. ಹೆಣ್ಣು, ಗಂಡಿನ ದೇನೋ ಆಯಿತು ಚಂಡಮಾರುತಗಳಿಗೆ ನಾಮಕರಣ, ಆದರೆ ಇವೆರೆಡರ ನಡುವಿನವರ ಕತೆ ಏನು? shhhh ಪಾದ್ರಿ ಮುಲ್ಲಾಗಳು ಮುನಿಸಿಕೊಂಡಾರು.

ಅಮೆರಿಕೆಗೆ ಬೆಚ್ಚುವ ಅಪ್ಪುಗೆ ನೀಡಿದ ಚಂಡಮಾರುತ “ಕತ್ರೀನಾ”. ಆಹಾ ಎಂಥ ಹೆಸರು, ಆದರೆ ಆ ಹೆಸರೆಬ್ಬಿಸಿದ ರಾಡಿಯೋ? SHAKESPEARE ಹೇಳುತ್ತಾನೆ ರೋಮಿಯೋ – ಜೂಲಿಯೆಟ್ ನಲ್ಲಿ

” Whats in a name? that which we call a rose,

By any other name would smell as sweet.

ಆದರೆ ಲಲನೆಯರ ಹೆಸರಿಟ್ಟುಕೊಂಡ ಬಿಂಕದ ಚಂಡ ಮಾರುತಗಳಂತೂ ಜನರಿಗೆ ರೋಮಾಂಚನಕ್ಕೆ ಬದಲು ಭಯಗ್ರಸ್ಥರಾಗಿಸುತ್ತವೆ.

ಚಂಡ ಮಾರುತಗಳಿಗೆ ಮಹಿಳೆಯರ ಹೆಸರನ್ನಿಡುವ ಟ್ರೆಂಡ್ ಶುರು ಮಾಡಿದ್ದು ಆಸ್ಟ್ರೇಲಿಯಾದ Clement Wragge. ಈತ ಹವಾಮಾನ ಶಾಸ್ತ್ರಜ್ಞ.

ಬರದಿರಿ ನಮ್ಮ ದೇಶಕ್ಕೆ

ಒಂದು ಕಡೆ ವಿಶ್ವ ನಮ್ಮ ಪ್ರಗತಿಯ ಬಗ್ಗೆ ಮೆಚ್ಚುಗೆ ತೋರಿದರೆ ಮತ್ತೊಂದೆಡೆ ನಮ್ಮ ಅಧಿಕಾರಿ, ರಾಜ ಕಾರಣಿಗಳಿಗೆ ತಮ್ಮ ದೇಶಗಳಿಗೆ ಬರದಂತೆ ವಿಸಾ ನೀಡದೆ ಅಪಮಾನ ಮಾಡುತ್ತಿದೆ. ವಿಶ್ವ ರಾಜಕಾರಣದಲ್ಲಿ ನಮ್ಮದೇ ಆದ ಛಾಪು ಮೂಡಿಸಲು ಯತ್ನಿಸುತ್ತಿರುವ ನಮಗೆ ವಿವಿಧೆಡೆಗಳಿಂದ ಊಹಿಸಲಾಗದ ತೊಡಕುಗಳು ಎದುರಾಗುತ್ತಿವೆ. ನಮ್ಮ ಮೇಲೆ ಹಗೆ ಸಾಧಿಸುವುದೇ ತಮ್ಮ ಕಸುಬು ಎಂದುಕೊಂಡಿರುವ ನೆರೆಯ ದೇಶಕ್ಕೆ ಅದರ ಎಲ್ಲಾ ರೀತಿಯ ಹುನ್ನಾರಗಳ ಅರಿವಿದ್ದೂ ಪಾಶ್ಚಾತ್ಯ ರಾಷ್ಟ್ರಗಳು ತಮ್ಮದೃಷ್ಟಿಯನ್ನು ಮತ್ತೆಲ್ಲೋ ಬೀರಿ ಪರೋಕ್ಷ ಬೆಂಬಲವನ್ನು ನೀಡುತ್ತಿವೆ. ಅವರ ಪ್ರಕಾರ ಪಾಕ್ ನಿಜವಾಗಿಯೂ “ಪಾಕ್” (ಶುದ್ಧ). ನಮ್ಮ ವಿದೇಶಾಂಗ ಇಲಾಖೆಯನ್ನು ನಿರ್ವಹಿಸುತ್ತಿರುವವರಿಗೆ ತಮ್ಮ ಸೂಟು, ಗರಿಗರಿಯಾದ ರೇಷ್ಮೆ ಸೀರೆ ಪ್ರದರ್ಶಿಸುವುದೇ ತಮ್ಮ ಪ್ರತಿಭೆ ಎಂದು ಬಗೆದು ನಡೆಯುತ್ತಿರುವುದು ಖೇದಕರ.

ಉತ್ತರ ಅಮೇರಿಕಾ ಖಂಡದ ಕೆನಡಾ ದೇಶ ಅಂತರ ರಾಷ್ಟ್ರೀಯ ರಾಜಕಾರಣದಲ್ಲಿ ಅಷ್ಟೇನೂ ದೊಡ್ಡ ಪಾತ್ರ ವಹಿಸದ ದೇಶ. ಈ ದೇಶಕ್ಕೆ ಹೋಗಲು ಗಡಿ ಭದ್ರತಾ ಪಡೆಗೆ ಸೇರಿದ ನಿವೃತ್ತ ಪೇದೆ ವಿಸಾ ಕೇಳಿದಾಗ ಸಿಕ್ಕ ಉತ್ತರ  “ಕುಪ್ರಸಿದ್ಧ ಹಿಂಸಾತ್ಮಕ ಪಡೆ” (notoriously violent force) ಗೆ ಸೇರಿದವರಿಗೆ ಕೆನಡಾ ಒಂದು ಕನಸು ಎಂದು. ನಮ್ಮ ಅರೆ ಸೈನಿಕ ಪದೆಯನ್ನು “ಕುಪ್ರಸಿದ್ಧ” ಎನ್ನುವ ಮಟ್ಟಿಗೆ ಬೆಳೆಯಿತು ದಾರ್ಷ್ಟ್ಯತನ ಈ ಸದಾ ಮಗುಮ್ಮಾಗಿ ಇರುವ ದೇಶಕ್ಕೆ.  ಇನ್ನಿತರ ಸೈನಿಕ ಅಧಿಕಾರಿಗಳಿಗೂ ಇದೇ ರೀತಿ ಒಂದಲ್ಲ ಒಂದು ರೀತಿಯ “ನೀವು ನಮ್ಮ ದೇಶಕ್ಕೆ ಬರಲು ಅರ್ಹರಲ್ಲ” ಎಂದು ಹಣೆ ಪಟ್ಟಿ. ಈಗ ಒಂದು ಪ್ರಶ್ನೆ. ಪಕ್ಕದ ಪಾಕಿಸ್ತಾನದ ಅಧಿಕಾರಿಗಳಿಗೂ ಇದೇ ರೀತಿಯ ಉಪಚಾರ ಸಿಕ್ಕಿದೆಯೇ? ಸಿಕ್ಕಿರಲಿಕ್ಕಿಲ್ಲ. ಏಕೆಂದರೆ ಅಲ್ಲಿನ ಅಧಿಕಾರಿ, ರಾಜಕಾರಣಿಗಳು ಸಮಯ ಸಾಧಕರು, ಅವರಿಗೆ ರೊಟ್ಟಿಯ ಯಾವ ಮಗ್ಗುಲಿಗೆ ಬೆಣ್ಣೆ ತಗುಲಿದೆ ಎಂದು ಚೆನ್ನಾಗಿ ಗೊತ್ತು, ಅದರ ಪ್ರಕಾರವೇ ನಡೆದುಕೊಂಡು ತಮ್ಮ ಕಾರ್ಯ ಸಾಧಿಸಿ ಕೊಳ್ಳುತ್ತಾರೆ. ನಾವಾದರೋ, ಬೆಳ್ಳಗಿರುವುದೆಲ್ಲಾ ಹಾಲು ಎನ್ನುವ ಸಮೂಹ. ಅಷ್ಟು ಮಾತ್ರವಲ್ಲ, ಬಿಳಿಯರ ಯುದ್ಧವನ್ನು ಪಾಕಿ ಸೈನಿಕರು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೂ ಅವರ ತಂಟೆಗೆ ಯಾರೂ ಹೋಗುವುದಿಲ್ಲ.  

ಇಂಥ ಕಸಿವಿಸಿಯುಂಟು ಮಾಡುವ ಘಟನೆಗಳಿಂದ ನಮಗೆ ಮುಕ್ತಿ ಕೊಡಿಸಲು ಚಾಣಕ್ಯ ಪುರಿಯ ಸಾಹೇಬರುಗಳಿಂದ (ಅಲ್ಲಿ ಈಗ ಮಹಿಳಾ ಸಾಹೇಬರೂ ಇದ್ದಾರೆ) ಸಾಧ್ಯವೇ? ಕೇವಲ ಕೋಪದಿಂದ ಒಂದು ಪತ್ರ ಬರೆದು ಸ್ಪಷ್ಟೀಕರಣ ಕೇಳಿ, ಸಂಜೆಯಾದ ಕೂಡಲೇ ಇದೇ ಬಿಳಿಯರ ಜೊತೆ ಸೇರಿಕೊಂಡು ಪಂಚತಾರಾ ಹೋಟೆಲುಗಳಲ್ಲಿ ಮಜಾ ಉಡಾಯಿಸುವವರಿಂದ ದೇಶ ತನಗೆ ಸಲ್ಲಬೇಕಾದ ಮಾನವನ್ನು ನಿರೀಕ್ಷಿಸ ಬಹುದೇ?

ಈ ತೆರನಾದ ಘಟನೆಗಳಿಗೆ ಬಿಳಿಯರ ದೃಷ್ಟಿದೋಷ ಕಾರಣವೋ ಅಥವಾ ನಮ್ಮಲ್ಲೇ ಏನಾದರೂ ನಮಗೇ ಕಾಣದ ಐಬಿದೆಯೋ ತಿಳಿಯದು. ಹೌದು ಕೆಲವೊಮ್ಮೆ ಪ್ರಮಾದಗಳು ಸಂಭವಿಸಿರಬಹುದು, ಅಂಥ ಘಟನೆಗಳನ್ನ ಆಧಾರವಾಗಿಟ್ಟು ಕೊಂಡು ನಮ್ಮನ್ನು ಈ ರೀತಿ ಹೀನಾಯವಾಗಿ ನಡೆಸಿಕೊಂಡರೆ ಅದಕ್ಕೆ ನಮ್ಮ ಉತ್ತರ ಹೇಗಿರಬೇಕು? ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಅಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ ಮಾಡಿದ್ದರಿಂದ ನಮ್ಮಲ್ಲಿನ ರೋಷ ಮಾಯವಾಗಿ ಎಲ್ಲವನ್ನೂ ಸೈರಿಸಿಕೊಂಡು ಸೋತ ನಗೆಯೊಂದಿಗೆ ನಮ್ಮ ದಾರಿ ನೋಡಿ ಕೊಳ್ಳುವ ನಮ್ಮ ಜಾಯಮಾನ ನಮಗೇ ಮುಳು ವಾಗುತ್ತಿದೆ. ವಿದೇಶಾಂಗ ಇಲಾಖೆಗೆ ಹೊಸರಕ್ತ ತುಂಬಿ, ಈ ಇಲಾಖೆ ನಡೆಸಲು ವಯಸ್ಸಾದವರ ಅಗತ್ಯವಿಲ್ಲ, ಯುವ ಅಧಿಕಾರಿಗಳಿಗೆ ಸಿಗಲಿ ಚುಕ್ಕಾಣಿ.

ಬಸವ ಜಯಂತಿ

ಬಸವಣ್ಣ ಜಯಂತಿ ನಿಮಿತ್ತ ಹಿರಿಯ ಸಾಹಿತಿ ಆನಂದರಾಮ ಶಾಸ್ತ್ರಿಗಳು ಕೆಲವೊಂದು ಅನರ್ಘ್ಯ ವಚನಗಳನ್ನು ಸಂಪದ ಓದುಗರಿಗೆ ಪರಿಚಯಿಸಿದ್ದಾರೆ. ನನಗಿಷ್ಟವಾದ ವಚನಗಳು…

ಸರಿಯಿದ್ದವರಮೇಲೂ ಕೆಲವೊಮ್ಮೆ ಸುಳ್ಳು ಅಪವಾದ ಬಂದೆರಗಬಹುದು. ಕೊಳಕು ರಾಜಕಾರಣದ ಈ ದಿನಗಳಲ್ಲಿ ಇಂಥ ಚೋದ್ಯ ಸಾಮಾನ್ಯ. ಸುಳ್ಳು ಆರೋಪವನ್ನು ಸತ್ಯಸಂಗತಿಯೆಂಬಂತೆ ಬಿಂಬಿಸುವಲ್ಲಿ ಇಂದಿನ ತಂತ್ರಜ್ಞಾನ ನೆರವಿಗೆ ಬರುತ್ತಿದೆ. ಸನ್ನಿವೇಶದ ಲಾಭ ಪಡೆದು ಮತ್ತು ತಂತ್ರಜ್ಞಾನದ ನೆರವಿನಿಂದ ಸುಳ್ಳನ್ನು ಸತ್ಯವೆಂದು ಸಾರಬಹುದಾದ ದಿನಗಳಿವು. ಇಂಥ ಚೋದ್ಯದ ಬಗ್ಗೆ ದನಿಯೆತ್ತಿದೆ ಈ ವಚನ.
  ತಾಳ ಮರದ ಕೆಳಗೆ
  ಒಂದು ಹಾಲ ಹರವಿಯಿದ್ದೊಡೆ
  ಅದ ಹಾಲ ಹರವಿಯೆನ್ನರು
  ಸುರೆಯ ಹರವಿಯೆಂಬರು
  ಈ ಭಾವನಿಂದೆಯ ಮಾಣಿಸಾ
  ಕೂಡಲಸಂಗಮದೇವಾ.
  (ಹರವಿ=ಗಡಿಗೆ; ಮಾಣಿಸು=ಇಲ್ಲವಾಗಿಸು)

ಒಂದೆ ಮನ ಮಾತ್ರವಲ್ಲ, ಮನದ ಶುದ್ಧಿಯೂ ಮನುಜನಿಗೆ ಅವಶ್ಯ. ಕಾಣುವವರ ಕಣ್ಣಿಗಷ್ಟೇ ಆತ ಶುದ್ಧನಾದರೆ ಸಾಲದು. ಶುದ್ಧಿಯೆಂಬುದು ಅಂತರಂಗದಲ್ಲೂ ಇರಬೇಕು. ಆತನ ಭಾವವು ಪರಿಶುದ್ಧವಾದುದಾಗಿರಬೇಕು.
  ಕೆಲಕ್ಕೆ ಶುದ್ಧನಾದೆನಲ್ಲದೆ
  ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ?
  ಕೈಮುಟ್ಟಿ ಪೂಜಿಸುವೊಡೆ
  ಎನ್ನ ಮನಶುದ್ಧವಲ್ಲವಯ್ಯಾ
  ಭಾವ ಶುದ್ಧವಾದೊಡೆ ಕೂಡಲ ಸಂಗಯ್ಯನು
  ಇತ್ತ ಬಾಯೆಂದೆತ್ತಿಕೊಳ್ಳನೇಕಯ್ಯಾ!
  (ಕೆಲಕ್ಕೆ=ನೆರೆಹೊರೆಯವರ ಕಣ್ಣಿಗೆ)

(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ.

ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ್ನು ಎಲ್ಲಿಂದ ಆರಂಭಿಸಬೇಕು ಎಂದು ತಿಳಿಯದೆ ಭಾವನೆಗಳನ್ನು ತಮ್ಮಲ್ಲೇ ಇಟ್ಟು ಕೊಂಡಿರುತ್ತಾರೆ. ತಾವು ಬರೆದದ್ದನ್ನೆಲ್ಲಾ ಪತ್ರಿಕೆಗಳು ಪ್ರಕಟಿಸಬೇಕೆಂದೇನೂ ಇಲ್ಲವಲ್ಲ. ಆದರೆ ಅಂತರ್ಜಾಲದ ಉಗಮದೊಂದಿಗೆ ಬರೆಯುವವರಿಗೆ ಒಂದು ವೇದಿಕೆಯಾಗಿ, ವರವಾಗಿ ಬಂದವು ಬ್ಲಾಗ್ ಗಳು. ಚಿಕ್ಕಾಸಿನ ಖರ್ಚಿಲ್ಲದೆ ತಮಗೆ ಇಷ್ಟವಾದ ಹೆಸರಿನಲ್ಲಿ ಬ್ಲಾಗೊಂದನ್ನು ಆರಂಭಿಸಿಕೊಂಡು ನಮಗೆ ತೋಚಿದ್ದನ್ನು ಬರೆಯಬಹುದು. ಅಥವಾ ತಾವು ಬರೆದದ್ದು ಸಾರ್ವಜನಿಕರಿಗೆ ಕಾಣಿಸಬಾರದು ಎಂದೇನಾದರೂ ಆಸೆಯಿದ್ದರೆ ಅದಕ್ಕೂ ಹಾಕಬಹುದು ಕಡಿವಾಣವ ಸೆಟ್ಟಿಂಗ್ಸ್ ಮೂಲಕ.

ಸರಿ ಬ್ಲಾಗ್ ಏನೋ ತೆರೆದಾಯಿತು. ಬರೆಯಲು ಈಗ ಲಾಂಚಿಂಗ್ ಪ್ಯಾಡ್ ಆಗಿ ಬ್ಲಾಗ್ ಒಂದನ್ನು ತೆರೆದಾಯಿತು. ಜಿಗಿಯೋದು ಹೇಗೆ?

ಈಜಲು ಕಲಿಯಬೇಕೆಂದರೆ ಧುಮುಕಬೇಕು ನೀರಿಗೆ. ಬರೆಯಬೇಕು ಎಂದೆನ್ನಿಸಿದರೆ ಕೂಡಲೇ ಒಂದು ಪ್ರಶಸ್ತವಾದ ಸ್ಥಳವನ್ನ ಆರಿಸಿಕೊಂಡು ತೊಡಗಬೇಕು ಪೋಣಿಸಲು ಅಕ್ಷರಗಳನ್ನು. ಆದರೆ ಈ ಕೆಲಸ ಹೇಳಿದಷ್ಟು ಸುಲಭವಲ್ಲದಿದ್ದರೂ ಬರೆಯುವ ಹಂಬಲವಿದ್ದರೆ ಬರೆಯಲೇಬೇಕು. we do not write because we want to; we write because we have to ಸುಪ್ರಸಿದ್ಧ ಸಾಹಿತಿ “ಸಾಮರ್ಸೆಟ್ ಮಾಹಂ” (somerset maugham) ಅವರ ಮಾತುಗಳಿವು.  

ಇನ್ನು ಬರೆಯಲು ನಮ್ಮನ್ನು ನಾವು ತೊಡಗಿಸಿಕೊಂಡರೆ ಬೇಕಾಗುವ ಅವಶ್ಯಕತೆಗಳಲ್ಲಿ “ಓದು” ಮೊಟ್ಟ ಮೊದಲನೆಯದು. ನಮಗಿಷ್ಟವಾದ ಲೇಖಕರ ಲೇಖನ, ಬರಹಗಳನ್ನ ಓದಿ ಅವರು ಬರೆಯುವ ಶೈಲಿ, ಪದ ಪ್ರಯೋಗ ಮುಂತಾದುವುಗಳನ್ನು ಗಮನಿಸಿ ನಮ್ಮ ಬರಹಗಳಲ್ಲಿ ಅವನ್ನು ಅಳವಡಿಸಿಕೊಂಡರೆ ನಮ್ಮ ಬರಹದ ಕಡೆಗಿನ ಪ್ರಯಾಣ ಸುಖಕರ. ಆಂಗ್ಲ ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು ಮೇಲೆ ಹೇಳಿದ Somerset  Maugham ಅವರ ಕಥೆಗಳನ್ನ ಓದಿದರೆ ಬಹಳಷ್ಟನ್ನು ಕಲಿಯಬಹುದು. ಮಾಹಂ ಅವರ of human bondage ನನ್ನನ್ನು ಕಾಡಿದ, ಮನ ಕರಗಿಸಿದ ಪುಸ್ತಕಗಳಲ್ಲೊಂದು. ಮತ್ತೊಂದು Wilkie Collins ಅವರ woman in white.  

ಮೊನ್ನೆ ದುಬೈ ನಗರದ ಕಂಪೆನಿಯೊಂದು ಜೆಡ್ಡಾದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿತ್ತು. ಅಲ್ಲಿ ಪುಸ್ತಕವೊಂದನ್ನು ಕೊಂಡೆ. “chicken soup for writer’s soul”. ಈ ಪುಸ್ತಕ ನೂರಾರು ಉದಾಹರಣೆಗಳ ಸಮೇತ ಹಲವು ಬರಹಗಾರರ ಅನುಭವಗಳನ್ನ ಕೊಟ್ಟು ಎಂಥ ನಕಾರಾತ್ಮಕ ಪ್ರತಿಕ್ರಿಯೆಗಳಿಗೂ ಸೊಪ್ಪು ಹಾಕದೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನನ್ನ ಪ್ರಕಾರ ನವ ಬರಹಗಾರರಿಗೆ ಇದಕ್ಕಿಂತ ಉತ್ತಮ ಪುಸ್ತಕ ಬೇರೊಂದಿಲ್ಲ. ಆ ಪುಸ್ತಕದಲ್ಲಿ ನ ಸ್ವಾರಸ್ಯಕರವಾದ ತುಣುಕುಗಳನ್ನು ವೈಯಕ್ತಿಕ ಬ್ಲಾಗ್ ನಲ್ಲಿ ಬರೆಯುತ್ತೇನೆ.   

ಒಹ್, ಈ ಪುರಾಣ ಎಲ್ಲಾ ಬಿಟ್ಟು ಆ ಮಾಂತ್ರಿಕ “ಸೂತ್ರ” ಗಳ ಬಗ್ಗೆ ಹೇಳಬಾರದೇ  ಎಂದು ಹಲ್ಲನ್ನು ಕಟ ಕಟಾಯಿಸಬೇಡಿ. ಬರುತ್ತೇನೆ, ಸೂತ್ರಕ್ಕೆ ಶೀಘ್ರದಲ್ಲೇ.     

ಹಾಂ, ನೋಡಿ. ಸೂತ್ರಗಳು ಎಂದಾಗ ಮತ್ತೊಂದು ಮಾತು ನೆನಪಾಯಿತು. ಸುಖ ಸಂಸಾರಕ್ಕೆ ಹತ್ತು ಸೂತ್ರಗಳು. ಅವುಗಳಲ್ಲಿ ಒಂದು, ಯಾವುದೇ ಕಾರಣಕ್ಕೂ ರಾತ್ರಿ ತರಗತಿಗಳಿಗೆ ಹೋಗಬಾರದು. (ಈ ರಾತ್ರಿ ತರಗತಿ ಬಗ್ಗೆ ಬ್ಲಾಗ್ ಬರೆದಿದ್ದೇನೆ ಸಂಪದದಲ್ಲಿ). ಮೂಗಿಗೆ ತುಪ್ಪ ಸವರೋದನ್ನು ನಿಲ್ಲಿಸಿ ಸೂತ್ರ ಅನಾವರಣ ಮಾಡ್ತೀಯೋ ಇಲ್ವೋ ಎಂದು ಧಮಕಿ ಕೊಡಬೇಡಿ. ತಾಳಿದವನು ಬಾಳಿಯಾನು. ಬರಹಕ್ಕೆ ಈ attitude ಅತ್ಯವಶ್ಯಕ. ಸುಖೀ ಸಂಸಾರಕ್ಕೂ ಅಷ್ಟೇ. ಸಂಯಮ ಬೆಳೆಸಿಕೊಳ್ಳಬೇಕು. ಲೇಖನ ವಾಪಸು ಮಾಡಿದ ಸಂಪಾದಕನ ಮೇಲೆ ಹರಿಹಾಯ್ದರೆ ಕೆಲಸ ನಡೆಯೋಲ್ಲ. chicken soup for soul ಎನ್ನುವ ಮತ್ತೊಂದು ಪುಸ್ತಕ ಡಜನ್ಗಟ್ಟಲೆ ಒಂದು ಪ್ರಕಾಶಕರಿಂದ ಮತ್ತೊಂದು ಪ್ರಕಾಶಕರವರೆಗೆ ಗಡಿಯಾರದ pendulum ನಂತೆ ಲಾಳಿ ಹೊಡೆದ ನಂತರವೇ ಕ್ಲಿಕ್ ಆಗಿದ್ದು. ಹಾಗಾಗಿ ತಾಳ್ಮೆ ಇರಲಿ. perseverance and patience. ಇವೆರಡು ಬರೀ ಬರಹಕ್ಕೆ ಮಾತ್ರವಲ್ಲ ಬದುಕಿನ ಎಲ್ಲಾ ಮಜಲುಗಳಿಗೂ  ಹರಡಲಿ ಈ ಕಂಪು. perseverance and patience ನ ಕಂಪು.

ಮತ್ತೊಂದು ವಿಷಯ. ಬರೆಯಿರಿ, ಆದರೆ ಯಾರನ್ನೂ ಇಂಪ್ರೆಸ್ ಮಾಡಲು ಬೇಡ. ಏನಿಲ್ಲವೆಂದರೂ ನಿಮ್ಮ  ತುಡಿತ, ತುರಿಕೆ ತೀರಿಸಿಕೊಳ್ಳಲಾದರೂ ಬರೆಯಿರಿ. ಅಬ್ದುಲ್, ಆ ಮೂರು ಸೂತ್ರ ಗಳು ಎಲ್ಲಯ್ಯ….. ಇಗೋ ಬಂದೆ ಮೂರು ಸೂತ್ರಗಳೊಂದಿಗೆ.

ಸಾಮರ್ಸೆಟ್ ಮಾಹಂ ಹೇಳುತ್ತಾರೆ, “ಬರೆಯಲು ಮೂರು ಸೂತ್ರಗಳು. ಆದರೆ ಅವು ಯಾವುವು ಎಂದು ದುರದೃಷ್ಟವಶಾತ್ ಯಾರಿಗೂ ಗೊತ್ತಿಲ್ಲ”.

ಹೌದು, ಮಾಹಂ ಹೇಳಿದ್ದು ಸರಿ. ಮಂತ್ರಕ್ಕೆ ಮಾವಿನ ಕಾಯಿ ಉದುರಿದ್ದನ್ನು ಕಂಡಿದ್ದೀರಾ?

ನನ್ನ ತಲೆ ಚಚ್ಚಲು ಇಟ್ಟಿಗೆ ಚೂರನ್ನು ಯಾಕೆ ಹುಡುಕುತ್ತಿದ್ದೀರಾ, ಅಲ್ಲೇ ಪಕ್ಕದಲ್ಲೇ ಇರುವ ಕೀ ಬೋರ್ಡಿನಿಂದ ಟ್ವೀಕಿಸಬಾರದೇ ನಿಮ್ಮ ಮನದೊಳಗಿನ ಮಾತುಗಳನ್ನು, ಮೌನಗಳನ್ನು?   

ಚಿತ್ರ: ನನ್ನ “ನಡೆಯುಲಿ”ಯಿಂದ

ನೆತ್ತರಾದ ಸಮುದ್ರ

 

ಯೂರೋಪ್ ಅಥವಾ ಅಮೇರಿಕಾ ಬಹಳ ಮುಂದುವರಿದ ಮಾನವ ಹಕ್ಕುಗಳ ಬಗ್ಗೆ, ಪ್ರಾಣಿ ದಯೆಯ ಬಗ್ಗೆ ಅತೀವ ಕಾಳಜಿ ನೋವುಳ್ಳ ಸಮಾಜ ಎಂದು ನಾವು ಭಾವಿಸಿ ಅವರಂತೆಯೇ ಆಗಲು ಶ್ರಮ ಪಡಲು ನಮ್ಮ ದಾರ್ಶನಿಕರು, ಬರಹಗಾರರಿಂದ ಕಿವಿ ಮಾತನ್ನು ಹೇಳಿಸಿಕೊಳ್ಳುತ್ತೇವೆ. ಆದರೆ ಈ ಉಚ್ಚ ಮಟ್ಟದ ನಾಗರೀಕತೆಯ ಹಿಂದೆ ನೀಚ ಮಟ್ಟದ ಪ್ರವೃತ್ತಿಗಳೂ ಇವೆ ಎಂದು ನಮಗೆ ಯಾರಾದರೂ ಬೆಟ್ಟು ಮಾಡಿ ತೋರಿಸಿದಾಗ ಒಂದು ಕ್ಷಣ ತಬ್ಬಿಬ್ಬಾಗುವ ನಾವು ಸತ್ಯ ದರ್ಶನದೊಂದಿಗೆ ಆ ದೇಶಗಳ ಬಗೆಗಿನ ನಮ್ಮ ಅಭಿಪ್ರಾಯ, ಭಾವನೆಗಳನ್ನು ಪುನರಾವಲೋಕನ ಮಾಡುತ್ತೇವೆ.ಅಂಥದ್ದೇ ಆದ ಒಂದು ನೆತ್ತರು ತುಂಬಿದ ಕಥೆ ಡೆನ್ಮಾರ್ಕಿನಿಂದ. ಡೆನ್ಮಾರ್ಕ್. ಎಂಥ ಸುಂದರ ದೇಶ. ಬಡ ದೇಶಗಳ ಉನ್ನತಿಗಾಗಿ ಶ್ರಮಿಸುವ, ಧನ ಸಹಾಯ ಮಾಡುವ ಈ ಪುಟ್ಟ ದೇಶ ಬೃಹತ್ ಭಾರತ ದೇಶಕ್ಕೂ ದೇಣಿಗೆ ನೀಡುತ್ತದೆ ನಮ್ಮ ಕೃಷಿ ಕಾರ್ಯಕ್ರಮಗಳಿಗೆ. ಡೆನ್ಮಾರ್ಕ್ ದೇಶ ಡೈರಿ ಉದ್ಯಮಕ್ಕೂ ಹೆಸರಾದ ದೇಶ. ಇಲ್ಲಿಯ ಉತ್ಪಾದಿಸುವುವ ಹಾಲು, ಕೆನೆ ಪದಾರ್ಥಗಳು ವಿಶ್ವ ದರ್ಜೆಯವು. ಇದರ ಖ್ಯಾತಿ ಹೆಚ್ಚು ಕಡಿಮೆ ಇಲ್ಲಿಗೆ ನಿಲ್ಲುತ್ತದೆ. ಈಗ ನಮ್ಮ ಗಮನ ಈ ದೇಶದ ಮತ್ತೊಂದು ಮುಖದ ಅನಾವರಣ. ಈಗ ನಾನು ಹೇಳಲು ಹೊರಟಿರುವುದು ಡೇನರ ಕ್ರೌರ್ಯದ ಕುರಿತು. ಹರೆಯಕ್ಕೆ ಹುಡುಗ ಬಂದನೆ ಎಂದು ತಿಳಿಯಲು ಅಥವಾ ಅವನನ್ನು ಪುರುಷರ ಗುಂಪಿಗೆ ಸೇರಿಸಲು ಅವನಲ್ಲಿರುವ ಪೌರುಷವನ್ನು ಮೆರೆಸಲು ಒಂದು ಮೋಜಿನ ರಕ್ತಸಿಕ್ತ ಕ್ರೀಡೆ. ಇಲ್ಲಿ ವಿಕೃತ ಆನಂದಕ್ಕಾಗಿ ಬಲಿಯಾಗುವುವು ಮೂಕ ಪ್ರಾಣಿಗಳು. ಮೂಕ, ಮುಗ್ಧ, ಮನುಷ್ಯನ ಒಡನಾಟವನ್ನು ಬಯಸುವ, ಆಸ್ವಾದಿಸುವ ಡಾಲ್ಫಿನ್ ಮೀನುಗಳು. ಇವರ ಕ್ರೌರ್ಯಕ್ಕೆ ಸಮುದ್ರವೇ ನೆತ್ತರಾಗುತ್ತದೆ ಡಾಲ್ಫಿನ್ ಗಳ ರಕ್ತದಿಂದ, ನಿಸರ್ಗದ ವೈಚಿತ್ರ್ಯದಿಂದಲ್ಲ. ಬದಲಿಗೆ ಡಾಲ್ಫಿನ್ಗಳ ಕಗ್ಗೊಲೆಯಿಂದ. ಡೆನ್ಮಾರ್ಕಿನ ಫೆರೋ ದ್ವೀಪ ನೆತ್ತರಾಗುವುದನ್ನು ಸಮುದ್ರ, ಮತ್ತು ಸಮುದ್ರ ಜೀವಿಗಳು ಮೂಕಪ್ರೇಕ್ಷಕನಾಗಿ ನೋಡುತ್ತವೆ. ಕೋಳಿ ಅಂಕಣ ಆಟದಲ್ಲಿ ಹುಂಜದ ಕಾಲಿನಿಂದ ಒಂದು ಹನಿ ರಕ್ತ ತೊಟ್ಟಿಕ್ಕಿದರೆ ಬಿಳಿಯ ನಮ್ಮ ಕ್ರೌರ್ಯವನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುತ್ತಾನೆ, ಅರಬರು ಮಕ್ಕಳನ್ನು ಒಂಟೆ ಸವಾರಿಗೆ ಬಳಸಿದರೆ savage culture ಎಂದು ಜರೆಯುತ್ತಾನೆ. ಆದರೆ ಹುಡುಗರನ್ನು ಹರೆಯಕ್ಕೆ ಸ್ವಾಗತಿಸಲು ಹುಟ್ಟಿಸಿಕೊಂಡ ವಿದ್ಯೆಯನ್ನು ಸಮರ್ಥಿಸಲು ಮಾಧ್ಯಮಗಳ ದೊಡ್ಡ ದಂಡೇ ಇರುತ್ತದೆ. ಯಾಂತ್ರೀಕೃತ ದೋಣಿಗಳಲ್ಲಿ ೨೦೦೦ ದಿಂದ ೩೫೦೦ ಡಾಲ್ಫಿನ್ ಗಳನ್ನು ಅಟ್ಟಿಸಿಕೊಂಡು ಸಮುದ್ರದ ತೀರದ ಸಮೀಪ ಮೀನುಗಳನ್ನು ಅಡ್ಡಗಟ್ಟಿ ಅವುಗಳ ಮೇಲೆ ಶೂಲ, ಕತ್ತಿಗಳಿಂದ ಆಕ್ರಮಣ ಮಾಡುತ್ತಾರೆ. ದೊಡ್ಡವರು ನಡೆಸುವ ಈ ನೆತ್ತರ ಕ್ರೀಡೆಯನ್ನು ಎಳೆ ಪ್ರಾಯದ ಮಕ್ಕಳು ಬೆರಗುಗಣ್ಣುಗಳಿಂದ ನೋಡುತ್ತಾರೆ. ಆ ದ್ವೀಪದವರ ಪ್ರಕಾರ ದೇವರು ಈ ಡಾಲ್ಫಿನ್ ಗಳನ್ನು ಕೊಲ್ಲಲೆಂದೇ ಸೃಷ್ಟಿಸಿದ್ದಂತೆ.

ನಾವೇಕೆ ಸೋಲಬೇಕು?

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು. ಕ್ರಿಕೆಟ್ ನ ಜ್ವರ ನನ್ನನ್ನು ಬಿಟ್ಟು ಹಲವು ವರ್ಷಗಳೇ ಕಳೆದವು. ಆದರೆ ಭಾರತದಲ್ಲಿ ಇದರ ಹುಚ್ಚನ್ನು ಅರಿತ ನನಗೆ ಗೊತ್ತು ಯಾವ ರೀತಿಯ ಯಾತನೆಯನ್ನು ಕ್ರೀಡಾ, ಕ್ಷಮಿಸಿ ಕ್ರಿಕೆಟ್ ಪ್ರೇಮಿಗಳು ಅನುಭವಿಸುತ್ತಿದ್ದಾರೆಂದು. ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತಾ ನನ್ನ ಭಾವನಿಗೆ ಫೋನಾಯಿಸಿದೆ. ಅವರ ಅರ್ಧ ಸತ್ತ ಸ್ವರ ಕೇಳಿ ಯಾರಾದರೂ ಬೇಕಾದವರು ಗೊಟಕ್ ಅಂದು ಬಿಟ್ಟರಾ ಎಂದು ಗಾಭರಿಯಾದೆ. ನೋಡಿದರೆ ಭಾರತ ಸೋತದ್ದಕ್ಕೆ ಆಕಾಶ ತಲೆ ಮೇಲೆ ಬಿದ್ದವರಂತೆ ಮಾತನಾಡುತ್ತಿದ್ದರು ನನ್ನ ಭಾವ. ಆಗಲೇ ನನಗೆ ಗೊತ್ತಾಗಿದ್ದು ಭಾರತ ಸೋತ ವಿಷಯ. ಸುದೈವವಶಾತ್ ನನ್ನ ತಲೆ ಮೇಲೆ ಆಗಸ ಬಂದು ಬೀಳಲಿಲ್ಲ, ಬದಲಿಗೆ ಆದದ್ದು ಒಂದು ರೀತಿಯ ಸಂತೋಷವೇ. ನಾವು ಸೋಲಬೇಕು. ಹೌದು ನಾವು ಸೋಲಬೇಕು. I am not mincing my words. ಬರೀ ಈ ಪಂದ್ಯಾವಳಿಯಲ್ಲಿ ಮಾತ್ರವಲ್ಲ, ಇನ್ನು ಬರಲಿರುವ  ಹತ್ತು ಹಲವು ಪಂದ್ಯಾವಳಿ ಗಳಲ್ಲಿ ನಮಗೆ ಸೋಲನ್ನುಣಿಸಿ ನಮ್ಮ ಕ್ರಿಕೆಟಿಗರು ನಮಗೆ ಮತ್ತು ನಮ್ಮ ದೇಶಕ್ಕೆ ಒಂದು ಮಹದುಪಕಾರವನ್ನು ಮಾಡಬೇಕು. ಸತ್ತು ಹೋದ, ಸಾವಿನಂಚಿನಲ್ಲಿರುವ ನಮ್ಮ ದೇಸೀ ಕ್ರೀಡೆಗಳಿಗೆ ಒಂದು ಮರುಜನ್ಮ ಬರಬೇಕಾದರೆ ಕ್ರಿಕೆಟ್ನ ಸಾವು ಅತ್ಯವಶ್ಯಕ. ಹೀಗೆ ಮೇಲಿಂದ ಮೇಲೆ ಈ ರೀತಿಯ ಸೋಲುಗಳನ್ನು ನಮ್ಮ ಕ್ರಿಕೆಟ್ ಕಲಿಗಳು ನಮ್ಮ ಹೊಸ್ತಿಲಿನ ಮುಂದೆ ತಂದು ಸುರಿದಾಗ ಗತಿಯಿಲ್ಲದೆ ನಾವು ಮನೋರಂಜನೆಗೆ ಇನ್ಯಾವುದಾದರೂ ಕ್ರೀಡೆಗಳನ್ನು ಆರಿಸಿಕೊಳ್ಳುತ್ತೇವೆ, ಪೋಷಿಸುತ್ತೇವೆ. ಕಂಗಾಲಾಗಿ, ಕರುಬುತ್ತಾ ಸಿರಿವಂತ ಕ್ರಿಕೆಟಿಗರನ್ನು ನೋಡುವ ನಮ್ಮ ಹಾಕಿ ಪಟುಗಳು, ಮತ್ತು ಇತರೆ ಕ್ರೀಡಾ ಪಟುಗಳು ಹೊಸ ಎತ್ತರ ಏರಲು ಸಹಾಯ ಮಾಡುತ್ತೇವೆ. ಅವರಲ್ಲಿ ಹುರುಪನ್ನು ತುಂಬುತ್ತೇವೆ.          

ಈಗ ನನ್ನೀ ಬರಹವನ್ನ ಕಂಡು ಆಕ್ರೋಶ ತೋರುವ ಜನರಿಗೆ ನಾವು ಇತರೆ ಕ್ರೀಡೆಗಳ ಜನರನ್ನು ನಡೆಸಿಕೊಂಡ ಪರಿಯನ್ನು ಕೊಂಚ ಪರಿಚಯ ಮಾಡಿಸೋಣ. 

ನಮ್ಮ ಕ್ರಿಕೆಟ್ ಪಟುಗಳು ಹೋಗುವೆಡೆಯೆಲ್ಲಾ ಬಿಗಿಯಾದ ಬಂದೋಬಸ್ತ್ ಏನು, ಸ್ವಯಂಚಾಲಿತ ಬಂದೂಕುಧಾರಿಗಳೇನು, ಅವರ ಹಸ್ತಾಕ್ಷರಕ್ಕಾಗಿ ಮುಗಿ ಬೀಳುವ ಯುವಕ ಯುವತಿಯರೆನು, ಯಾವ ಜನ್ಮದಲ್ಲಿ ಇಷ್ಟೊಂದು ಪುಣ್ಯ ಮಾಡಿದ್ದರೋ ನಮ್ಮ ಕ್ರಿಕೆಟ್ ಪಟುಗಳು. ಹೋಲಿಸಿ ನೋಡಿ ಈ ಸಿಕ್ಸರ್ ಬಾರಿಸುವ, ದೇಶ ಸೋತರೂ ಸೆಂಚುರಿ ಖಾತ್ರಿಯಾಗಿಸುವ ತಾರೆಯರನ್ನು ಮತ್ತು ಬೆವರು ಸುರಿಸಿ ಇತರೆ ಕ್ರೀಡೆಗಳನ್ನಾಡುವ ತಿರುಕರನ್ನು. ಭಾರತೀಯ ಹಾಕಿ ಆಟಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾದ ದಯನೀಯ ಪರಿಸ್ಥಿತಿ. what? hunger strike? ಹೌದು, ಉಪವಾಸ ಬಿದ್ದು ಪ್ರತಿಭಟನೆ. ರಾಷ್ಟ್ರೀಯ ಕ್ರೀಡೆ ಹಾಕಿ ಆಟಗಾರರ ದುಃಸ್ಥಿತಿ. ಹಾಕಿ ಕೋಚ್ ಜೋಕಿಂ ಕರ್ವಾಲೋ ಹಾಕಿ ಆಟಗಾರರನ್ನು ನಡೆಸಿ ಕೊಳ್ಳುವ ರೀತಿ ಕಂಡು ಉರಿದು ಬಿದ್ದು ಏಕೆ ಹಾಕಿ ಆಟಗಾರರನ್ನು ಅನಾಥರಂತೆ ನೋಡುತ್ತೀರಾ ಮತ್ತು ರಾಜಕಾರಣಿಗಳೇಕೆ ಹಾಕಿ ಬಗ್ಗೆ ಅಸಡ್ಡೆ ತೋರುತ್ತಾರೆ ಎಂದು ಗುಡುಗಿದ್ದರು. ಆದರೆ ಅವರ ಹತಾಶ ಗುಡುಗನ್ನು ನಮ್ಮ ತೆಂಡುಲ್ಕರ ನ ಅಮೋಘ ಸಿಕ್ಸರ್ ಮೈದಾನದ ಹೊರಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತೇ ವಿನಃ ಬೇರೇನೂ ಪ್ರಯೋಜನವಾಗಲಿಲ್ಲ.  

ಕ್ರಿಕೆಟಿಗರನ್ನು ಸನ್ಮಾನಿಸಲು ರಾಜ್ಯ ಸರಕಾರಗಳ ಮಧ್ಯೆ ಪೈಪೋಟಿ ನೋಡಿದರೆ ಹೊಟ್ಟೆ ತೊಳೆಸುತದೆ. ಎಲ್ಲಾ ಕ್ರೀಡಾಪಟುಗಳೂ ನಮ್ಮ ಮಕ್ಕಳೇ ಅಲ್ಲವೇ? ಇದ್ಯಾವ ತಾರತಮ್ಯವೋ ನಾ ಕಾಣೆ. ಕ್ರಿಕೆಟಿಗರಲ್ಲದ ಕ್ರೀಡಾಪಟುಗಳಿಗೆ ಈ ರೀತಿಯ ಯಾತನಾಮಯ ಉಪಚಾರವನ್ನು ಕಂಡ ಯಾವ ತಾಯಿ ತನ್ನ ಮಗ ಧ್ಯಾನ್ ಚಂದ್ ಅಥವಾ ಮೊಹಮ್ಮದ್ ಶಾಹಿದ್ ರಂತೆ ಹಾಕಿ ಸ್ಟಿಕ್ ಹಿಡಿದು ಡ್ರಿಬ್ಲ್ ಮಾಡಿ ಎದುರಾಳಿ ಗೆ ಚಳ್ಳೆ ಹಣ್ಣು ತಿನ್ನಿಸಲು ಉತ್ತೇಜಿಸುವಳು? ಅಥವಾ ಹಾರುವ ಸಿಖ್ ಎಂದೇ ಪ್ರಖ್ಯಾತನಾದ ಜೀವ್ ಮಿಲ್ಖಾ ಸಿಂಗರಂತೆ ಚಿಗರೆಯಂತೆ ಓಡಿ ಪದಕ ತರುವ ಕಾತುರತೆಯನ್ನು ಯಾವ ಪಿತಾಮಹ ತೋರಿಸಿಯಾನು? ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆ ಆರಿಸಿಕೊಂಡು ಹೊಟ್ಟೆಗೂ ಇಲ್ಲದೆ ಬವಣೆ ಪಡುವ ಮಕ್ಕಳ ಕಂಡು ಯಾವ ಪೋಷಕರಿಗೆ ತಾನೇ ಸಹಿಸಲು ಸಾಧ್ಯ? ಕ್ರಿಕೆಟ್ ನಮ್ಮ ಸಮಾಜವನ್ನೇ ಕೆಡಿಸುತ್ತದೆ ಎಂದರೂ ತಪ್ಪಿಲ್ಲ. ಜನರ ಹುಚ್ಚು ಪ್ರೋತ್ಸಾಹ, ಸರಕಾರಗಳ ಅತೀವ ಬೆಂಬಲ ಕ್ರಿಕೆಟಿಗರು ಕ್ರೀಡಾ ಮನೋಭಾವವನ್ನೇ ಮರೆತು ಹೇಗಾದರೂ ಗೆಲ್ಲಲು ಪ್ರಯತ್ನಿಸುತ್ತಾರೆ. ಬೌಲರ್ ನ ಅಪ್ಪೀಲ್ ಗೆ ಅಂಪೈರ್ ಸೊಪ್ಪು ಹಾಕದೆ ಇದ್ದಾಗ ಅವನು ಉದುರಿಸುವ ಬೈಗಳನ್ನು ಅವನ ತುಟಿಗಳ ಚಲನದಿಂದಲೇ ಅರಿಯಬಹುದು. ಇದನ್ನು ನೋಡಿದ ನಮ್ಮ ಕಿಣ್ಣರು ಅದೇನಪ್ಪಾ XYZ ಹೇಳುತ್ತಿರುವುದು ಎಂದು ಕೇಳಿದರೆ ಆಂಗ್ಲ ಭಾಷೆಯ f**k ಪದ ಕಣಪ್ಪಾ ನಿನ್ನ ಆರಾಧ್ಯ ದೈವ ಉಲಿದಿದ್ದು  ಎಂದು ಹೇಳಲು ನಮಗೆ ಸಾಧ್ಯವೇ?

ಕಾಳಧಂಧೆ ಮಾಡುವವರ ಸ್ವರ್ಗವಾಗಿ ಹೋಗಿದೆ ಕ್ರಿಕೆಟ್ ಮೈದಾನ. ಮೋದಿ ಹಗರಣ ಏನೇನೆಲ್ಲಾ ಬಯಲು ಮಾಡಿತು ನೋಡಿ. ಇದೇಕೆ ಸಂಭವಿಸಿತು? ದುರುಳರಿಗೆ ತೋರಿತು ಕ್ರಿಕೆಟ್ ತಮ್ಮ ಕಾಳ ಧನವನ್ನು ಶ್ವೇತ ವಾಗಿಸಲು ಸಿಕ್ಕ ಮಾಂತ್ರಿಕ ಕ್ರೀಡೆ ಎಂದು. ಚೆನ್ನಾಗಿಯೇ ಪೋಷಿಸಿದರು ನಮ್ಮ ಮಾಜೀ ಒಡೆಯರ ಕ್ರೀಡೆಯನ್ನು. ಈಗ ಒಡೆಯಿತು ಮಡಿಕೆ ನೋಡಿ.  ಕ್ರಿಕೆಟ್ ಎಂದರೆ ಜಾಹೀರಾತುಗಳು ಮುಂಗಾರು ಮಳೆಯಂತೆ. ಬೇರೆ ಕ್ರೀಡೆಗಳಿಗೆ endorsement ಇಲ್ಲ. ಅಪ್ಪಿ ತಪ್ಪಿ ಸಹಾಯ ಕೇಳಿದಿರೋ,  ಕ್ಷಮಿಸಿ ನಮ್ಮ ಈ ಬಾರಿಯ ಬಜೆಟ್ ನಲ್ಲಿ ಇಲ್ಲ, ಭಿಕ್ಷೆ ಬೇಡುವವನಿಗೆ ಮುಂದೆ ಹೋಗಪ್ಪಾ ಎಂದು ತಾತ್ಸಾರದಿಂದ ಹೇಳುವಂತೆ ಸಾಗ ಹಾಕುತ್ತಾರೆ.

ಆಧುನಿಕ ಬದುಕಿನ ಹಲವು ವೈಫಲ್ಯಗಳನ್ನು ಮರೆಸಲು ನಾವು ಕ್ರಿಕೆಟ್ಟಿನ ಮೊರೆ ಹೋದದ್ದು ಸಾಕು. ಕ್ರಿಕೆಟ್ ನಮಗೆ ಒಂದು ರೀತಿಯ “ಮಾರಿಹ್ವಾನಾ” (marijuana). ಇದುವರೆಗೆ ಈ ಕ್ರೀಡೆ ನಮ್ಮ ego ಕಾಪಾಡಿಕೊಂಡು ಬರಲು, ಮತ್ತು ಒಂದು ರೀತಿಯ ದುರಹಂಕಾರ ಮನೆ ಮಾಡುವಂತೆ ಮಾಡಿತಲ್ಲ. ಅದಕ್ಕೆ ಒಂದು ದೊಡ್ಡ ಧನ್ಯವಾದ. ಈಗ ಅದಕ್ಕೊಂದು epitaph ಬರೆಯೋಣ. ಕ್ರಿಕೆಟ್ಟಿಗೊಂದು ಚೆಂದದ ಗೋರಿ ಬರಹ; “ಇಗೋ ಇಲ್ಲಿ ಮಲಗಿದ್ದಾನೆ, ಆವೇಶದ ಆಟದ ಮಧ್ಯೆಯೂ ಪಾನೀಯ, ಊಟ, ಚಹಾ ಸೇವಿಸುತ್ತಾ, ನಮ್ಮ ಮಹನೀಯರ ಕಳ್ಳ ಧಂಧೆಗೆ ಮಾನ್ಯತೆ ತಂದು, ನಮ್ಮ ಇತರೆ ಕ್ರೀಡೆಗಳನ್ನು ಕೊಂದು ಹಾಕಿದ ಕ್ರಿಕೆಟ್ ಎಂಬ ಬಿಳಿ ಭೂತ”    

ಕ್ರಿಕೆಟ್ ನಮ್ಮನ್ನು ಇದುವರೆಗೂ ಕುಣಿಸಿದ್ದು ಸಾಕು. ಇನ್ನಾದರೂ ಕಬಡ್ಡಿ, ಖೋ ಖೋ ರಾರಾಜಿಸಲಿ, ಬುಗುರಿ, ಗಾಳಿ ಪಟ ಮತ್ತೊಮ್ಮೆ ನಮ್ಮೆಡೆ ಬಾಳಲು ಬರಲಿ. ಇನ್ನೂ ಇಂಥ ನೂರಾರು ಕ್ರೀಡೆಗಳಿವೆ ಎಂದು ನಮ್ಮ ಮಕ್ಕಳಿಗೆ ತಿಳಿಯಲಿ. ಕ್ರೀಡೆಯೊಂದಿಗೆ ಸಂಸ್ಕಾರವನ್ನೂ ನಮ್ಮ ಮಕ್ಕಳು ಮರಳಿ ಕಂಡುಕೊಳ್ಳಲಿ.

“ಮೊಣಕೈ” ಸಮಾಜ ಮತ್ತು ಕಳಚಿಕೊಂಡ ಕಾಲುಂಗುರ

“elbow society” ಅಂದರೆ ಮೊಣಕೈ ಸಮಾಜ. ಮೊಣ ಕಯ್ಯಿಲ್ಲದ ಸಮಾಜ ಎಲ್ಲಿದೆ ಎಂದು ಊಹಾಲೋಕಕ್ಕೆ ಓಡದಿರಿ. ಈ ತೆರನಾದ ಸಮಾಜ ಜಬರದಸ್ತಿಯ ಸಮಾಜ ಅಂತ. ಒಂಥರಾ ರೌಡಿಸಂ ವರ್ತನೆ. ಅಂದರೆ ನೂಕುನುಗ್ಗಲಿನಲ್ಲಿ ತನ್ನ ಮೊಣ ಕೈ ಎಷ್ಟು ಬಲ ಶಾಲಿ ಮತ್ತು ಪರಿಣಾಮಕಾರಿ ಎಂದು ಪರೀಕ್ಷಿಸಿ ಅದರಲ್ಲಿ ಗೆಲ್ಲವುದು, ರೈಲಿನ ಅಥವಾ ಬಸ್ಸಿನ ಸೀಟು ಹಿಡಿಯುವ ಮೂಲಕ. ಕೆಲವರು ಮೊಣಕೈಗಿಂತಲೂ ಟವಲನ್ನೋ, ಬೀಡಿ ಪಾಕೀಟನ್ನೋ ಸೀಟಿನ ಮೇಲೆ ಎಸೆದು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ ಆಸ್ತಿಯನ್ನು, ತಾವು ಕೂರಲು ಹೊರಟ ಸೀಟನ್ನು. ಹೌದಲ್ವಾ? ನಾವೆಷ್ಟು ಅನಾಗರೀಕರು ಎಂದು ಮನದೊಳಗೆ ಮರುಗಬೇಡಿ. ನಮ್ಮನ್ನು ಮೀರಿಸುವವರಿಲ್ಲದಿದ್ದರೂ ನಮ್ಮಷ್ಟೇ ಯಶಸ್ವಿಯಾಗಿ ಮೊಣ ಕಯ್ಯನ್ನು ಉಪಯೋಗಿಸುವ ಇತರರೂ ಇದ್ದಾರೆ. ಆ ಇತರರ ಸಾಲಿಗೆ ಜಪಾನೀಯರೂ ಸೇರಿ ಕೊಂಡರು ಎಂದರೆ ಆಹ್, ನಮ್ಮ ಜನ್ಮ ಅಥವಾ ಮೊಣ ಕೈ ಸಾರ್ಥಕ. ಇಷ್ಟು ಶಿಸ್ತು ಬದ್ದ ಬದುಕನ್ನು ನಡೆಸುವ ಚಪ್ಪಟೆ ಮೂಗಿನ ಜಪಾನೀಯರು ನೂಕು ನುಗ್ಗಲಿನ ಸ್ಪರ್ದೆಯಲ್ಲಿ ಮುಂದು ಎಂದರೆ ನಾವು ಮಾಡುತ್ತಿರುವುದು ಸರಿಯೇ ಇರಬೇಕು ಎಂದು self congratulating mode ಗೆ ಬಂದು ಹಿಗ್ಗೋಣ ಮೊಣಕೈಯ್ಯನ್ನು ಇನ್ನಷ್ಟು ಉತ್ಸಾಹದಿಂದ ಹಾರಿಸುತ್ತಾ.

ಜಪಾನಿನ ರೈಲು ವ್ಯವಸ್ಥೆ ವಿಶ್ವ ದರ್ಜೆ. ಕೇವಲ ಸೌಲಭ್ಯಗಳು ಮಾತ್ರವಲ್ಲ ಸರಿಯಾದ ಸಮಯಕ್ಕೆ ಬಂದು ಕಾದು ನಿಂತ ಎಲ್ಲರನ್ನೂ ಕರೆದುಕೊಂಡು ಹೋಗುವ ವ್ಯವಸ್ಥೆ ಜಪಾನೀಯರ ಹೆಮ್ಮೆ. ಆದರೆ ರೈಲಿಗಾಗಿ ಕಾಯುತ್ತಾ ನಿಂತು ತಮಗೆ ಬೋಗಿಯೊಳಕ್ಕೆ ಸೇರಲು ಸಾಧ್ಯವಾಗದಿದ್ದರೆ? ಆಗಲೇ ನೋಡಿ, ರೈಲಿನ ಆಗಮನದೊಂದಿಗೆ ಎಲ್ಲಾ ಶಿಷ್ಟಾಚಾರಗಳ ಮೌನ ನಿರ್ಗಮನ. ರೈಲಿನ ಮೂತಿ ಕಂಡಿದ್ದೇ ತಡ ನೆರೆದ ಜನಸ್ತೋಮಕ್ಕೆ ಮರು ಜೀವ ಬಂದಂತೆ. ಅದುವರೆಗೂ excuse me, sorry, may i beg your pardon, please, ಗ್ಲೀಸ್ ಎಂದೆಲ್ಲಾ ಉಲಿಯುತ್ತಾ ತಮ್ಮ ನಡತೆ, ವಿದ್ಯೆಯ ಮಟ್ಟ ತೋರಿಸುತ್ತಾ ನಡೆದ ಜನ ಸಮೂಹ ರೈಲು ಕಂಡ ಕೂಡಲೇ ತನ್ನ ಶಿಷ್ಟಾಚಾರವನ್ನೆಲ್ಲಾ ತನ್ನ ಮೊಣ ಕೈಯ್ಯಿಗೆ ಬದಲಾಯಿಸಿ ಶುರು ಮಾಡುತ್ತದೆ ರೌಡಿತನದ ನಗ್ನ ನೃತ್ಯವನ್ನು. social grace ಎಲ್ಲಾ ರೈಲಿನ ಹಳಿಗಳಿಗೆ ಒಪ್ಪಿಸಿ ನಾ ಮೊದಲು, ತಾ ಮೊದಲು ಎಂದು ನುಗ್ಗುತ್ತಾರೆ. ವೃದ್ಧರು, ಮಕ್ಕಳು, ಮಹಿಳೆಯರು ಎಂಬುದಿಲ್ಲ, ಅಂಡಿಗಲ್ಲದಿದ್ದರೂ ತನ್ನ ಕಾಲಿಗೆ ಒಂದು ನೆಲೆ ಸಿಕ್ಕರೆ ಸಾಕು ಎಂದು ಎಲ್ಲರನ್ನೂ ನೂಕಿ, ಕೆಡವಿ ಹೋಗುತ್ತಾರೆ. ಇಂಥ ಮೊಣ ಕೈಗಳ ಜಬರದಸ್ತಿ ನಡುವೆಯೇ ಈ ನೂಕು ನುಗ್ಗಲಿನಲ್ಲಿ ಮಹಿಳೆಯರ ಬೇಡದ ಸ್ಥಳಕ್ಕೆಲ್ಲಾ ಹಸ್ತಗಳನ್ನು ಕಳಿಸಿ ಅಲ್ಲೂ ಒಂದು ರೀತಿಯ sexual harassment ನಡೆಸಿ ಖುಷಿ ಪಡೆಯುವವರು ಕೆಲವರು. ಸರ್ವಾಂತರ್ಯಾಮಿ ಕೈಗಳು. ಇವರೆಲ್ಲಾ ಸೂಟು ಬೂಟಿನಲ್ಲಿ ಬೋರ್ಡ್ ರೂಮಿಗೋ, ಸಭೆಗೋ ಹೋಗುವ ಮಾನ್ಯ ವ್ಯಕ್ತಿಗಳು. ಸ್ವಲ್ಪ ಹೊತ್ತಿಗಾದರೂ ಮಾನ್ಯತೆಯನ್ನ “ತಿಪ್ಪೆ ರೌಂಡ್ಸ್” ಗೆ ಕಳಿಸದಿದ್ದರೆ ಏನು ಮಜಾ ಆಲ್ವಾ? ತಮ್ಮ ಕೈಗಳನ್ನೂ, ಹಸ್ತಗಳನ್ನು ಈ ರೀತಿ ಬೇಡದ ಟ್ರಿಪ್ ಮೇಲೆ ಕಳಿಸುವ ಮಹೋದಯರ ಗೊಡವೆಯೇ ಬೇಡ ಎಂದು ನಾರೀ ಮಣಿಗಳು ತಮಗೆಂದೇ ಮೀಸಲಾದ ಪ್ರತ್ಯೇಕ ಬೋಗಿ ಗಳಲ್ಲೊ ಅಥವಾ ರೈಲುಗಳಲ್ಲೋ ಪ್ರಯಾಣಿಸುತ್ತಾರೆ. ಧೂಮಪಾನದಷ್ಟೇ ubiquitous ಹಸ್ತ ಪ್ರಯಾಣ.

ಕೆಲವೊಮ್ಮೆ ನನಗನ್ನಿಸುವುದು ಈ ಶೋಕಿ ಗಂಡಿಗೆ ಮಾತ್ರ ಏಕೆ? ರೋಗ, ಬ್ಯಾನೆಗಳು, ಚಟಗಳು ಇವೆಲ್ಲಾ ಎರಡೂ ಲಿಂಗಗಳಿಗೆ ಇರುವಂಥವು. ಆದರೆ ಲೈಂಗಿಕ ಕಿರುಕುಳ ಅಥವಾ ಕಚಗುಳಿ ಕೊಡುವ ಈ ವಿದ್ಯೆ ಗಂಡಿಗೆ ಮಾತ್ರ ಒಲಿದಿದ್ದು ಏಕೆ? for a pleasant change ಹೆಣ್ಣಿಗೇಕೆ ಕರಗತವಾಗಲಿಲ್ಲ ಈ ವಿದ್ಯೆ? ಬಸ್ಸಿನಲ್ಲೇ ನೋಡಿ. ಮುಂದುಗಡೆ ಯಿಂದ ಹೆಣ್ಣು ಹತ್ತಬೇಕು, ಹಿಂದಿನಿಂದ ಗಂಡು ಹತ್ತಬೇಕು. ಹಿಂದೆ ಹತ್ತಿದ ಗಂಡು ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಒಳಗಾಗಿ ನಿಧಾನ ಮುಂದಿನ ಬಾಗಿಲಿನ ಕಡೆ ತಲುಪಿರುತ್ತಾನೆ. ಈ ಚಟುವಟಿಕೆ ಕಾಲೇಜು ಬಿಡುವ ವೇಳೆ ಕೊಂಚ ಅಧಿಕ. ಈ ಲೈಂಗಿಕ ಕಿರುಕುಳ ಅಥವಾ ಮೇಲೆ ಹೇಳಿದ ಕಚಗುಳಿ ಗಂಡು ಮಾತ್ರ ಸವಿಯುತ್ತಾನೆ ಎಂದರೂ ತಪ್ಪೇ.

ತುಂಬಾ ವರ್ಷಗಳ ಹಿಂದೆ ನಡೆದ ಘಟನೆ. ಬಸ್ಸಿನಲ್ಲಿ ಒಬ್ಬ ರೋಮಿಯೋ ಕೂತಿದ್ದ. ಅವನ ಹಿಂದಿನ ಸೀಟಿನಲ್ಲಿ ಗಂಡ ಹೆಂಡಿರ ಜೋಡಿ ಕುಳಿತಿತ್ತು. ಹಿಂದೆ ಕೂತ ಮಹಿಳೆಯನ್ನು ನೋಡಿ ಮಿಸುಕಾಡುತ್ತಿದ್ದ ರೋಮಿಯೋ ಕೂತಾಕೆಗೆ ಇಷ್ಟವಾದ. ಅವನ ಸೀಟಿನ ಮೂಲೆಯಿಂದ ಆಕೆ ತನ್ನ ಕಾಲನ್ನು ತೂರಿಸಿದಳು. ಸ್ವಲ್ಪ ಹೊತ್ತಿನ ನಂತರ ಕಚಗುಳಿ ಜಾಸ್ತಿಯಾದಾಗ ಆಕೆ ಕಾಲನ್ನು ಹಿಂದಕ್ಕೆ ಎಳೆದುಕೊಂಡಳು. ಕಾಲೇನೋ ಹಿಂದಕ್ಕೆ ಬಂತು ಆದರೆ ಆಕೆ ತೊಟ್ಟಿದ್ದ ಕಾಲುಂಗುರ ಅವನ ಕೈಯ್ಯಲ್ಲೇ ಉಳಿಯಿತು.ಈಗ reverse acting. ಕಚಗುಳಿ ಇಡುವ ಸರತಿ ಈಕೆಯದು. ಉಂಗುರ ಮರಳಿಸು ಎಂದು ತಿವಿದೂ ತಿವಿದೂ ಕೇಳಿದಳು. ಇವನಿಗೆ ಒಂಥರಾ ಖುಷಿ. ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ. ಕಣ್ಣಿನಲ್ಲೇ ಗೋಗರೆದಳು ಉಂಗುರ ಕೊಡು ಎಂದು. ಕಾಲುಂಗುರ ಉದುರಿ ಹೋಯಿತು ಎಂದರೆ ಯಾರದಾರೂ ನಂಬುವರೇ?ಯಾರು ನಂಬಿದರೂ ಸದಾ ಸಂಶಯಿ ಅತ್ತೆಮ್ಮ ನಂಬುವಳೇ? ಕೈಯ್ಯುನ್ಗುರ, ವಾಲೆ, ಜುಮ್ಕಿ, ಸರ, ಉದುರೋದಿದೆ, ಆದರೆ ಕಾಲುಂಗುರ? ಸಾಕಷ್ಟು ಮನೋರಂಜನೆ ಪಡೆದ ರೋಮಿಯೋ ಉಂಗುರ ಮರಳಿಸಿದ ಅನ್ನಿ.

ಹೀಗೆ ನಿಮಗೂ ಒಂದಲ್ಲ ಒಂದು ರೀತಿಯ ಅನುಭವವಾಗಿರಲೇಬೇಕು ಪ್ರಯಾಣದ ವೇಳೆ, ರೇಶನ್, ಸೀಮೆಣ್ಣೆಗಾಗಿ, ಸರತಿಯಲ್ಲಿ ನಿಂತಾಗ.

ರಾತ್ರಿ ತರಗತಿ

ರಾಮನ್ ಮತ್ತು ನಾರಾಯಣ್ ಆಫೀಸಿನಲ್ಲಿ ಹರಟುತ್ತಿದ್ದರು.

ರಾಮನ್:  ನಾರಾಯಣ, ನಾನು ಕಳೆದ ಐದು ತಿಂಗಳುಗಳಿಂದ ರಾತ್ರಿ ತರಗತಿಗಳಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನ್ನ ಪರೀಕ್ಷೆ ಇದೆ.

ನಾರಯಣ್: ಓಹ್

ರಾಮನ್: ಉದಾಹರಣೆಗೆ ಗ್ರಹಾಮ್ ಬೆಲ್ ಯಾರೆಂದು ನಿನಗೆ ಗೊತ್ತಾ?

ನಾರಾಯಣ್: ಇಲ್ಲ.

ರಾಮನ್: ಗ್ರಹಾಮ ಬೆಲ್ ಅಲ್ಲವೇ ೧೮೭೬ ರಲ್ಲಿ ಟೆಲಿ ಫೋನ್ ಕಂಡುಹಿಡಿದವನು? ನೀನು ರಾತ್ರಿ ತರಗತಿಗೆ ಹೋದರೆ ಇವೆಲ್ಲಾ ತಿಳಿಯುತ್ತವೆ.

ಮಾರನೆ ದಿನ…

ರಾಮನ್: ಹೋಗಲಿ ನಿನಗೆ ಅಲೆಕ್ಸಾಂಡರ್ ಡೂಮ ಯಾರೂಂತ ಗೊತ್ತಾ?

ನಾರಾಯಣ್: ಇಲ್ಲ

ರಾಮನ್: ಅವನು ಸುಪ್ರಸಿದ್ಧ ಕಾದಂಬರಿಕಾರ. ಅವನೇ three musketeers ಪುಸ್ತಕ ಬರೆದದ್ದು.

ಹೀಗೆ ಪ್ರತೀ ದಿನ ರಾಮನ್ ತನ್ನ ಜ್ಞಾನದ ಬಗ್ಗೆ ನಾರಾಯಣನಲ್ಲಿ ಕೊಚ್ಚುತ್ತಿದ್ದ. ಬೇಸತ್ತಿದ ನಾರಾಯಣ್ ಕೇಳ್ದ, ರಾಮನ್, ನಿನಗೆ ಬಾಲಕೃಷ್ಣನ್ ಕುಪ್ಪುಸ್ವಾಮಿ ಯಾರೂಂತ ಗೊತ್ತಾ?

ರಾಮನ್: ಇಲ್ಲ, ಗೊತ್ತಿಲ್ಲ.

ನಾರಾಯಣ್: ಅಯ್ಯೋ, ಅವನೇ ಇಲ್ಲವೇ ನಿನ್ನ ಹೆಂಡತಿಯ ಜೊತೆ ರಾತ್ರಿಯಲ್ಲಿ ತಿರುಗುತ್ತಾ ಇರೋದು. ನೀನು ಈ ರಾತ್ರಿ ತರಗತಿಗಳನ್ನು ನಿಲ್ಲಿಸಿದರೆ ಇದು ನಿನಗೆ ತಿಳಿಯಬಹುದು” ಎಂದು ಹೇಳಿದ.

moral of the story:

ಜೀವನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅರಿಯಬೇಕಾದ ಬೇರೆ ಸಂಗತಿಗಳೂ ಇವೆ