“ಜಗತ್ತಿನಲ್ಲಿನ ಜಿಹಾದ್ ಮೂಲಕ “ಕಾಷಿರ್”(ಸುಳ್ಳು ದೇವರ ಆರಾಧಕರು ಅಥವಾ false religion worshipers) ಜನರನ್ನು ಕೊಂದು ನಮ್ಮ ಸತ್ಯ ಮತ್ತು ಏಕೈಕ ದೇವರ ಸಾಮ್ರಾಜ್ಯವನ್ನು ಸ್ಥಾಪಿಸಬೇಕು ಎಂದು ನಂಬುತ್ತದೆ” ಎಂದು ಅಂತರ್ಜಾಲದ ಮಾಧ್ಯಮವೊಂದರಲ್ಲಿ ಒಬ್ಬರ ಅಭಿಪ್ರಾಯ. ಮೇಲಿನ ಹೇಳಿಕೆ ನನ್ನ ಪ್ರಕಾರ ಬಾಲಿಶ. ಭಯೋತ್ಪಾದನೆ ಇಸ್ಲಾಂ ಧರ್ಮ ವಿರೋಧಿ ಎಂದು ಭಾರತದ ಮಾತ್ರವಲ್ಲ ಜಗತ್ತಿನ ಎಲ್ಲಾ ಮುಸ್ಲಿಮ ಧರ್ಮಗುರುಗಳು (ಉಲೇಮ) ಹೇಳಿಕೆ ನೀಡಿದ್ದಾರೆ. “ಕಾಫಿರ್” ಅನ್ನುವ ಪದದ ಬಗ್ಗೆ ಬಹಳಷ್ಟು ವಿವಾದಗಳಿವೆ. ಮುಸ್ಲಿಮೇತರರನ್ನು ಕಾಫಿರರೆಂದು ತೆಗಳಬಾರದು ಮತ್ತು ಸಂಬೋಧಿಸಬಾರದೆಂದು ಮುಸ್ಲಿಂ ಪಂಡಿತರ ಅಭಿಪ್ರಾಯ. ಅಷ್ಟಕ್ಕೂ ಕಾಫಿರ್ ಅನ್ನುವ ಪದಕ್ಕೆ ಹಲವು ಅರ್ಥಗಳಿವೆ. ಕಾಫಿರ್ ಅಂದರೆ “ವಿರೋಧಿಸುವವ” ಮತ್ತು “ಮರೆಮಾಚುವವ” ಎಂದೂ ಅರ್ಥೈಸುತ್ತಾರೆ. ಹೊಲದಲ್ಲಿ ರೈತ ಬೀಜ ಬಿತ್ತುವುದಕ್ಕೆ “ಕುಫ್ರ್” (ಕಾಫಿರ್ ನ ಮೂಲ ಪದ “ಕುಫ್ರ್”) ಎನ್ನುತ್ತಾರೆ, ಅಂದರೆ ಆತ ಬೀಜವನ್ನು ಬಿತ್ತಿ ಮಣ್ಣಿನಿಂದ ಮುಚ್ಚುತ್ತಾನೆ ಎಂದು ಅರ್ಥ. ನಿತ್ಯ ಜೀವನದಲ್ಲಿ ಮುಸ್ಲಿಮರನ್ನು ಧ್ವೇಷದಿಂದ ನಾವು ಸಾಬ, ತುರ್ಕ, ಮುಸಲ, “ಹಲಾಲ್ ಖೋರ್” (ಸಂಪದದಲ್ಲಿ ಕೇಳಿದ್ದು) ಹೀಗೆ ವಿವಿಧ ನಾಮಾವಳಿಗಳಿಂದ ಕರೆದು ಹಿಗ್ಗುವುದು ಒಂದು ಪರಿಪಾಠವಾದಾಗ ಹಾಗೆ ಕರೆಯುವವರನ್ನು ಬಹುಶಃ ಮುಸ್ಲಿಮರು ಬೇಸರದಿಂದ ಕಾಫಿರರೆಂದು ಕರೆಯುತ್ತಾರೇನೋ. ಆದರೂ ಬಹುಪಾಲು ಮುಸ್ಲಿಮರು ಹಿಂದೂಗಳನ್ನು ಹಾಗೆ ಕರೆಯುವುದನ್ನು ನಾನು ಕೇಳಿಲ್ಲ. (personally, any amount of provocation will not entice or induce me to label people as kafirs) ಒಬ್ಬನ ಮನಸ್ಸನ್ನು ನೋಯಿಸುವುದು, ಘಾಸಿಗೊಳಿಸುವುದು ಒಂದು ಮಸೀದಿಯನ್ನು ಕೆಡವಿದಂತೆ ಎಂದು ಹಿರಿಯರು ಹೇಳುತ್ತಾರೆ. ಅಂಥ ಉನ್ನತ ಸಂಸ್ಕಾರದಲ್ಲಿ ಮಿಂದ ಒಬ್ಬ ವ್ಯಕ್ತಿ ಯಾರ ಮನಸ್ಸನ್ನೂ ನೋಯಿಸುವುದಿಲ್ಲ.
“ಸೆಮೆಟಿಕ್” ಧರ್ಮಗಳು ಎಂದರೆ ಪ್ರವಾದಿ ಅಬ್ರಹಾಮರ ಧರ್ಮವನ್ನು ನಂಬಿ ನಡೆಯುವವರು ಎಂದು ಸಾಮಾನ್ಯ ತಿಳಿವಳಿಕೆ. ಸೆಮೆಟಿಕ್ ಪದಕ್ಕೆ ಬಹು ದೊಡ್ಡ ವ್ಯಾಖ್ಯಾನವಿದೆ. ಯಹೂದ್ಯ, ಕ್ರೈಸ್ತ, ಇಸ್ಲಾಂ ಧರ್ಮಗಳು ಸೆಮೆಟಿಕ್. ಆದರೂ ಸಹ ಕ್ರೈಸ್ತರು ಮತ್ತು ಯಹೂದ್ಯರು ಇಸ್ಲಾಮ್ ಧರ್ಮವನ್ನ ಸೆಮೆಟಿಕ್ ಎಂದು ಭಾವಿಸುವುದಿಲ್ಲ. ಇಸ್ಲಾಂ ಯಹೂದ್ಯರ “ಮೋಸೆಸ್”, ಮತ್ತು ಕ್ರೈಸ್ತರ “ಏಸು” ಇವರುಗಳನ್ನು ದೇವನ ಸಂದೇಶವಾಹಕರು ಎಂದು ನಂಬಿ ಗೌರವಿಸುತ್ತಾರೆ. ಅವರುಗಳನ್ನು ಏಕ ವಚನದಲ್ಲೂ ಸಂಬೋಧಿಸುವುದಿಲ್ಲ. ಅವರ ಹೆಸರುಗಳನ್ನು ತಮ್ಮ ಮಕ್ಕಳಿಗೆ ನಾಮಕರಣವನ್ನೂ ಮಾಡುತ್ತಾರೆ.(ನನ್ನ ಮಗಳ ಹೆಸರು “ಇಸ್ರಾ ಮರ್ಯಮ್”. ಮರ್ಯಮ್, ಯೇಸು ಮಾತೆ) ಪ್ರವಾದಿಗಳು ಯಹೂದ್ಯರನ್ನು ಮತ್ತು ಕ್ರೈಸ್ತರನ್ನು “ಒಡಂಬಡಿಕೆಗಳ ಜನ” ಎಂದು ಅವರನ್ನು ಗೌರವದಿಂದ ನಡೆಸಿ ಕೊಂಡಿದ್ದು ಮಾತ್ರವಲ್ಲ ಅವರೊಂದಿಗೆ ವ್ಯವಹಾರವನ್ನೂ ನಡೆಸುತ್ತಿದ್ದರು. ಪವಿತ್ರ ಕುರಾನಿನಲ್ಲಿ ಯಹೂದ್ಯರನ್ನು, ಕ್ರೈಸ್ತರನ್ನೂ, ಸೇಬಿಯನ್ನರನ್ನೂ “ಗ್ರಂಥಗಳ ಸಮುದಾಯ” ಎಂದು ಸಂಬೋಧಿಸಿದ್ದರಿಂದ ಅವರ ಮೇಲೆ unprovoked ಆಕ್ರಮಣ ಮಾಡುವಂತಿಲ್ಲ. ಧರ್ಮ ಯುದ್ಧ ಗಳ ಸಮಯದಲ್ಲಿ ಯಾವುದೇ ಕಾರಣಕ್ಕೂ ಇಗರ್ಜಿ, ಮತ್ತು ಕ್ರೈಸ್ತ ಸಂತರು ವಾಸಿಸುವ ನಿವಾಸಗಳ ಮೇಲೆ ಆಕ್ರಮಣ ಕೂಡದು ಎಂದು ಸ್ಪಷ್ಟವಾಗಿ ಇಸ್ಲಾಮಿನ ಪ್ರಥಮ ಖಲೀಫಾ ಅಬೂ ಬಕ್ಕರ್ ನಿರ್ದೇಶಿಸಿದ್ದರು.
ಇಸ್ಲಾಮಿನ ಎರಡನೇ ಖಲೀಫಾ ಉಮರ್ ಮುಸ್ಲಿಂ ಸೇನೆ ವಶಪಡಿಸಿಕೊಂಡ ಜೆರುಸಲೆಂ ನಗರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಇಗರ್ಜಿಗೆ ಹೋಗಿ ಧರ್ಮಗುರುಗಳನ್ನು ಭೇಟಿಯಾಗುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಪ್ರಾರ್ಥನೆಯ ಕರೆ ಕೇಳಿಬರುತ್ತದೆ. ಕೂಡಲೇ ಪಾದ್ರಿ ಉಮರ್ ರವರಿಗೆ ಪ್ರಾರ್ಥಿಸಲೆಂದು ಕಂಬಳಿಯನ್ನು ಇಗರ್ಜಿಯಲ್ಲೇ ಹಾಸುತ್ತಾರೆ. ಸೌಮ್ಯವಾಗಿ ನಿರಾಕರಿಸಿದ ಉಮರ್ ಇಗರ್ಜಿಯಿಂದ ಹೊರಕ್ಕೆ ಸ್ವಲ್ಪ ದೂರ ಹೋಗಿ ನಮಾಜ್ ನಿರ್ವಹಿಸುತ್ತಾರೆ. ಆಗ ಪಾದ್ರಿ ಕೇಳುತ್ತಾರೆ, ಖಲೀಫಾ ಉಮರ್, ಏಕೆ ಇಗರ್ಜಿಯಲ್ಲಿ ನಮಾಜ್ ಮಾಡಕೂಡದು ಎಂದೇನಾದರೂ ಇಸ್ಲಾಮಿನಲ್ಲಿ ಇದೆಯಾ ಎಂದು. ಆಗ ಉಮರ್ ಹೇಳುತ್ತಾರೆ, ಹಾಗೇನಿಲ್ಲ, ಆದರೆ ನಾನು ಇಗರ್ಜಿಯಲ್ಲಿ ನಮಾಜ್ ಮಾಡಿದ ಕಾರಣಕ್ಕೆ ಭವಿಷ್ಯದಲ್ಲಿ ಧರ್ಮದ ತಿರುಳರಿಯದ ಮುಸ್ಲಿಂ ಮತಾಂಧರು ಈ ಇಗರ್ಜಿಯನ್ನೇ ಕೆಡವಿ ಮಸೀದಿ ನಿರ್ಮಿಸಬಹುದು ಎನ್ನುವ ಆತಂಕದಿಂದ ನಾನು ಬಯಲಿನಲ್ಲಿ ನಮಾಜ್ ಮಾಡಿದೆ ಎಂದು ಹೇಳುತ್ತಾರೆ. ಈ ಮಹಾನ್ ಚೇತನ ಆಡಿದ ಇಂಥ ಮಾತಿಗೆ ಸರಿಸಾಟಿಯಾದ ಒಂದೇ ಒಂದು ಮಾತನ್ನು ಚರಿತ್ರೆಯಿಂದ ಹೆಕ್ಕಿ ತೋರಿಸಲು ನಮಗೆ ಸಾಧ್ಯವಾಗದು.
ಸೆಮೆಟಿಕ್ ಧರ್ಮಗಳು ಹಿಂಸೆ ಯನ್ನು ಪ್ರೋತ್ಸಾಹಿಸುತ್ತವೆ ಎಂದು ಹೇಳುವುದು ಅಜ್ಞಾನದ ಕುರುಹು. ಮೇಲಿನ ಪರಧರ್ಮ ಸಹಿಷ್ಣುತೆಯ ಒಂದಲ್ಲ, ಲೆಕ್ಕವಿಲ್ಲದ ಉದಾಹರಣೆಗಳು ಇಸ್ಲಾಮೀ ಚರಿತ್ರೆಯಲ್ಲಿ ನಮಗೆ ಕಾಣಲು ಸಿಗುತ್ತವೆ. ಮುಸ್ಲಿಮರಿಗೆ ಆದರ್ಶ ವ್ಯಕ್ತಿಗಳು ಪ್ರವಾದಿಗಳು, ನಂತರ ಬಂದ ನಾಲ್ಕು ಖಲೀಫಾ ನಾಯಕರುಗಳು, ಪಾಶ್ಚಿಮಾತ್ಯರು ಈಗಲೂ ಕೊಂಡಾಡುವ ಸುಲ್ತಾನ್ ಸಲಾಹುದ್ದೀನ್ ಅಯ್ಯೂಬಿಯಂಥ ಮಹಾ ವ್ಯಕ್ತಿಗಳು. ಇವರಾರೂ ಧರ್ಮ ಬೇರೆ ಎಂದು ಹೇಳಿ ಪರಧರ್ಮೀಯರನ್ನು ನಿಕೃಷ್ಟವಾಗಿ ನಡೆಸಿಕೊಂಡಿಲ್ಲ. ಚರಿತ್ರೆಯಲ್ಲಿ ತಮ್ಮ ಸ್ವಾರ್ಥ, ಅಧಿಕಾರ ಮತ್ತು ಸಾಮ್ರಾಜ್ಯ ವಿಸ್ತರಣೆಗೆ ಬಂದ ದಂಡು ಕೋರರೋ, ಲೂಟಿಕೋರರೋ ಮುಸ್ಲಿಮರಿಗೆ ಆದರ್ಶ ಅಲ್ಲ ಹಾಗೂ ಧರ್ಮ ಸಮ್ಮತವಲ್ಲದ ಕೆಲಸ ಮಾಡಿದ ರಾಜರ ಬಗ್ಗೆ ಮುಸ್ಲಿಮರಿಗೆ ಹೆಮ್ಮೆಯೂ ಇಲ್ಲ.