ಅಪ್ಪನಿಗೂ ಒಂದು “ದಿನ”

 
ಇಂದು ಅಪ್ಪನ ದಿನ. ಎಲ್ಲರಿಗೂ ಇರುವಂತೆ ಬಡ ಅಪ್ಪನಿಗೂ ಒಂದು ದಿನ.

ಇಸ್ಲಾಮಿನ ಪವಿತ್ರ ಪ್ರವಾದಿಗಳ ಹತ್ತಿರ ಒಬ್ಬರು ಬಂದು ಕೇಳುತ್ತಾರೆ, ನಾವು ಅತಿ ಹೆಚ್ಚ್ಚು ಗೌರವಿಸಬೇಕಾದ, ಪ್ರೀತಿಸಬೇಕಾದ ವ್ಯಕ್ತಿ ಯಾರು ಎಂದು. ಸುಡು ಮರಳಾರಣ್ಯದಿಂದ ವಿಶ್ವಕ್ಕೆ ಶಾಂತಿ, ಸಮನ್ವತೆಯ ಸಂದೇಶ ತಂದ ಮಹರ್ಷಿ ಹೇಳಿದ್ದು, ನಿನ್ನ ತಾಯಿ ಎಂದು. ನಂತರ ಯಾರು ಎನ್ನುವ ಅವರ ಪ್ರಶ್ನೆಗೆ ಪ್ರವಾದಿ ಹೇಳಿದ್ದು ತಾಯಿ. ಮೂರನೆಯ ಸಲವೂ ಕೇಳಿದಾಗ ತಾಯಿಯೇ ಉತ್ತರ. ಪ್ರವಾದಿಗಳೇ ನಂತರದ ಸರತಿ ಯಾರದು ಎಂದು ಆತ ಹತಾಶೆಯಿಂದ ಕೇಳಿದಾಗ ನಿನ್ನ “ತಂದೆ” ಎಂದರು ಪ್ರವಾದಿ.

ಮತ್ತೊಂದು ಕಡೆ ತಾಯಿಯ ಮಹತ್ವವನ್ನು ವಿವರಿಸುತ್ತಾ ಪ್ರವಾದಿಗಳು ” ಮಾತೆಯ ಕಾಲಿನಡಿಯಲ್ಲಿದೆ  ಮಕ್ಕಳ ಸ್ವರ್ಗ” ಎಂದು ತಾಯ್ತನವನ್ನು ಕೊಂಡಾಡಿದರು.

ಅಮ್ಮ ನೀನು ನಕ್ಕರೇ ನಮ್ಮ ಬಾಳು ಸಕ್ಕರೆ,……
ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವಾ…

ಓಹ್, enough enough, where is dad, where is the father? ಅಪ್ಪನ ದಿನದಲ್ಲೂ ಎಂಥದ್ದು ತಾಯಿಯ ಗುಣಗಾನ ಎನ್ನುತ್ತೀರಾ? ನಿಲ್ಲಿ, ಅಗೋ ನೋಡಿ ಬರುತ್ತಿದ್ದಾನೆ ಅಪ್ಪ. ದಿನವಿಡೀ ಸೌದೆ ಕಡಿದು ಹೆಗಲ ಮೇಲೆ ಕೊಡಲಿಯನ್ನು ಹೊತ್ತು, ಕೈಯಲ್ಲಿ ತನ್ನ ಮಕ್ಕಳಿಗೆ ತಿಂಡಿ ಮತ್ತು ಹೆಂಡತಿಗೆ ಹೂವು ತರುತ್ತಿದ್ದಾನೆ. ರಕ್ತವನ್ನು ಬೆವರಾಗಿಸಿ dog eat dog world ನಲ್ಲಿ ಸೆಣಸಿ ತನ್ನ ಪರಿವಾರವನ್ನು ಸುಖಿಯಾಗಿಡಲು ಅವನು ಪಡುತ್ತಿರುವ ಪಾಡಿಗೆ ಚಿಕ್ಕಾಸಿನ ಬೆಲೆಯಿಲ್ಲ. ತಂದೆ ಎಂದರೆ ದುಡಿಯುವ ಒಂದು ಮೆಶಿನ್ ಅಷ್ಟೇ. ಪೂರ್ಣವಿರಾಮ. 

ಅಪ್ಪ ಎಷ್ಟು ಚಿಕ್ಕ ಚೊಕ್ಕ ಪದ? ಆದರೆ ಅದರ ಹಿಂದಿರುವ ತ್ಯಾಗ, ಕಷ್ಟ ಕಾರ್ಪಣ್ಯ? ಮಕ್ಕಳಾದರೆ ತಾಯಿಗೆ ಕ್ರೆಡಿಟ್. ಹೊತ್ತು ಹೆತ್ತು ಹೊತ್ತು ಸಾಕುತ್ತಾಳಂತೆ. ಅದರ ನಂತರದ ಎಲ್ಲ ಜಂಜಾಟಗಳಿಗೂ ತಂದೆಯೇ ಅಲ್ಲವೇ ಮುಂಚೂಣಿಯಲ್ಲಿ ನಿಂತು ನಿಭಾಯಿಸಬೇಕಾದ್ದು?

ಅಪ್ಪನ ಪಾತ್ರ ಬಹಳಷ್ಟು ಚೈತನ್ಯ, ( takes oodles of energy ), ಬಹಳಷ್ಟು ಬಾಧ್ಯತೆ (takes lots of commitment) ಗಳನ್ನೂ ಬೇಡುತ್ತದೆ. ದಿನವಿಡೀ ದುಡಿದು, ಮೇಲಿನವರಿಂದ, ಯಜಮಾನರಿಂದ ತೆಗಳಿಸಿಕೊಂಡು ಸಪ್ಪೆ ಮುಖದಿಂದ ಕೆಲಸದ ಸ್ಥಳ ಬಿಟ್ಟು ಮನೆಗೆ ಬಂದಾಗ ಆತ ಚೈತನ್ಯದ ಚಿಲುಮೆ ಆಗಬೇಕು ಮಡದಿಗೆ, ಮಕ್ಕಳಿಗೆ.
ನನ್ನ ತಂದೆ world’s best dad. ಮಕ್ಕಳು ಏನನ್ನುತ್ತಾರೋ ಅದು ಸರಿ, ಅವರಿಗೆ ಬೇಕಿದ್ದನ್ನಲ್ಲವನ್ನೂ ಕೊಡಿಸುವ ಯತ್ನ. ದಾರಿ ತಪ್ಪಂದಂತೆ ಅತ್ಯಂತ ಕಟ್ಟುನಿಟ್ಟಾಗಿ ಪ್ರೀತಿಯಿಂದ ಸಾಕಿದ ನನ್ನ ಅಪ್ಪ ಹೊರಗೆ ಎಷ್ಟೇ ಕಷ್ಟವಿದ್ದರೂ ಮಕ್ಕಳೆದುರು ತೋರಿಸುತ್ತಿರಲಿಲ್ಲ. ಒಮ್ಮೆ ಸನಾದಿ ಅಪ್ಪಣ್ಣ ಚಿತ್ರ ನೋಡಿ ಬಂದ ತಂದೆ ಅಮ್ಮನಲ್ಲಿ ಇಷ್ಟೊಂದು ಪ್ರೀತಿಯಿಂದ ಸಾಕಿದ ನಮ್ಮ ಮಗನೂ ಹೀಗೆ ಆಗಿ ಬಿಟ್ಟರೆ ಹೇಗೆ ಎಂದು ಅನುಮಾನಿಸಿದ್ದರು.

ಆದರೆ ಅಪ್ಪನಿಗೆ ದೊಡ್ಡ ನಿರಾಶೆಯನ್ನೇ ಬಡಿಸಿದೆ ನಾನು.

ಈಗ ಎರಡು ಪುಟ್ಟ ಮಕ್ಕಳ ತಂದೆಯಾಗಿರುವ ನಾನು ನನ್ನ ಶ್ರಮ ಮೀರಿ ಪ್ರಯತ್ನಿಸುತ್ತೇನೆ ಒಳ್ಳೆ, ಪ್ರೀತಿಯ, ಮಮತೆಯ ತಂದೆಯಾಗಲು. ನಾನು ಪಡುವ ಪಾಡಿಗೆ ನನಗೆ ನನ್ನ ಮಕ್ಕಳ ಟೈ ಕೊಡುಗೆಯಾಗಲಿ, ಕೈ ಗಡಿಯಾರದ ಉಡುಗೊರೆಯಾಗಲಿ ಬೇಕಿಲ್ಲ. ನನಗೆ ಬೇಕಿರುವುದು ಇಷ್ಟೇ; ಸ್ವಾಭಿಮಾನಿಗಳಾಗಿ ದೇಶಕ್ಕೂ ತಾವು ನಂಬಿದ ಸಂಸ್ಕೃತಿಗೂ ಅಂಟಿಕೊಂಡು ಇವೆರಡಕ್ಕೂ ಕೀರ್ತಿ ತರುವ, ಬೆಳಗುವ ರತ್ನಗಳಾಗಿ ಬಾಳಲಿ ನನ್ನ ಮಕ್ಕಳು ಎಂದು.

ನಿಮ್ಮ ಟಿಪ್ಪಣಿ ಬರೆಯಿರಿ